ಸದಾಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ.
ಗುಲಾಬಿ ಮಿಶ್ರಿತ ಕೆಂಪು, ಬಿಳಿ ಮುಂತಾದ ಬಣ್ಣಗಳಲ್ಲಿ ಈ ಸಸ್ಯವು ಕಾಣಸಿಗುತ್ತದೆ. ಎಲ್ಲಾ ಋತುವಿನಲ್ಲಿಯೂ ಹೂಬಿಡುವ ಕಾರಣ ಇದನ್ನು ಸದಾಪುಷ್ಪ ಅಥವಾ ನಿತ್ಯಪುಷ್ಪ ಎಂದು ಕರೆಯುತ್ತಾರೆ. ಈ ಗಿಡಮೂಲಿಕೆ ನಮ್ಮ ದೇಶದ್ದಲ್ಲ. ಮೆಡಗಾಸ್ಕರ್ ಇದರ ತವರೂರು ಉದ್ಯಾನವನಗಳಲ್ಲಿ ಅಲಂಕಾರ ಪುಷ್ಪವಾಗಿ ಬೆಳೆಸಲು ತಂದ ಈ ಪುಟ್ಟಗಿಡ, ಇಡೀ ಭಾರತವನ್ನೇ ವ್ಯಾಪಿಸಿದೆ. ಎಲೆಗಳು ಹಸಿರು ಮತ್ತು ಎದುರು ಬದಿರಾಗಿರುತ್ತವೆ. ಗುಲಾಬಿ ಅಥವಾ ಬಿಳಿ ಬಣ್ಣದ ಹೂ ಬಿಡುತ್ತವೆ. ಮತ್ತೊಂದು ಬಗೆಯಲ್ಲಿ ಬಿಳಿ ಹೂಗಳ ಮಧ್ಯೆ ಗುಲಾಬಿ ಬಣ್ಣವಿರುತ್ತದೆ. ಆದರೆ ಗುಣದಲ್ಲಿ ಎಲ್ಲವೂ ಒಂದೇ ಆಗಿರುತ್ತದೆ. ಇಡೀ ವರ್ಷವೂ ಹೂ ಬಿಡುತ್ತದೆ.
ಸದಾಪುಷ್ಪವು ೬೬ ಬಗೆಯ ಕ್ಷಾರಪದಾರ್ಥಗಳನ್ನು ಹೊಂದಿದೆ. ಸದಾಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಎಲೆಗಳಲ್ಲಿ ದೊರಕುವ ವಿನ್ಕ್ರಿಸ್ಟಿನ್ ಮತ್ತು ವಿನ್ಬ್ಲಾಸ್ಟಿನ್ನನ್ನು ರಕ್ತದ ಕ್ಯಾನ್ಸರ್ನ ನಿವಾರಣೆಯಲ್ಲಿ ಬಳಸುತ್ತಾರೆ. ಮಧುಮೇಹ ರೋಗದ ನಿಯಂತ್ರಕವಾಗಿ ಬಳಸುತ್ತಾರೆ. ಎಳೆ ಮಗುವಿನ ಹೊಟ್ಟೆನೋವು ನಿವಾರಣೆಗೆ ಎಲೆಗಳ ರಸವನ್ನು ಉಪಯೋಗಿಸುತ್ತಾರೆ. ರಕ್ತದ ಒತ್ತಡದ ಸಮಸ್ಯೆಯಲ್ಲೂ ಸದಪುಷ್ಪದ ಕ್ಷಾರವನ್ನು ಬಳಸುತ್ತಾರೆ.
ರಕ್ತದ ಕ್ಯಾನ್ಸರ್ ವ್ಯಾಧಿಯಲ್ಲಿ
ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೆಂಬು ನೀರಿಗೆ ಹಾಕಿ ಕಾಯಿಸಿ ಆರಿಸಿ ಕುಡಿಯುವುದು. 3ಟೀ ಚಮಚ ದಿವಸಕ್ಕೆ 2ವೇಳೆ ಬೆಳಿಗ್ಗೆ ಮತ್ತು ಸಾಯಂಕಾಲ. ಇಡೀ ಮಾನವಕೋಟಿಯನ್ನು ರಕ್ತದ ಕ್ಯಾನ್ಸರ್ನಿಂದ ಉಳಿಸುವ ಸಾಮರ್ಥ್ಯ ಈ ಗಿಡಕ್ಕೆ ಇದೆ ಅಂದರೆ ಅತಿಶಯೋಕ್ತಿಯಾಗಲಾರದು.
ಸಕ್ಕರೆ ಕಾಯಿಲೆಯಲ್ಲಿ
ಈ ಗಿಡದ ನಾಲ್ಕೈದು ಹಸಿರೆಲೆಗಳನ್ನು ತಂದು ಚೆನ್ನಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ತಿನ್ನುವುದು. ಅಥವಾ ಬರಿಹೊಟ್ಟೆಯಲ್ಲಿ ನಿತ್ಯ ಪುಷ್ಟಿ ಹೂಗಳನ್ನು ಅಗೆದು ತಿನ್ನುವುದು. ನಾಲ್ಕು ಬಿಳೀ ಪುಷ್ಪವನ್ನು ಅರ್ಧ ಬಟ್ಟಲು ನೀರಿಗೆ ಹಾಕಿ ಕಾಯಿಸಿ ಕಾಲು ಬಟ್ಟಲು ಕಷಾಯವನ್ನು ತಣ್ಣಗೆ ಮಾಡಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸುವುದು.
ಅಧಿಕ ರಕ್ತ ಒತ್ತಡದಲ್ಲಿ
ನಿತ್ಯಪುಷ್ಟಿ ಎಲೆಗಳನ್ನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಳ್ಳುವುದು. ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ 1/8 ಬಟ್ಟಲು ಕಷಾಯವನ್ನು ಸೇವಿಸುವುದು.
ಸುಟ್ಟ ಗಾಯ ಮತ್ತು ಬೊಬ್ಬಗಳಿಗೆ
ನಿತ್ಯಪುಷ್ಟಿಯ ಒಂದು ಹಿಡಿ ಹಸಿ ಎಲೆಗಳನ್ನು ತಂದು ಚೆನ್ನಾಗಿ ರಸ ತೆಗೆಯುವುದು. ಈ ರಸದಲ್ಲಿ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಗಾಯದ ಮೇಲೆ ಮಂದವಾಗಿ ಲೇಪಿಸುವುದು.
ಬೇಧಿ ಮತ್ತು ರಕ್ತ ಭೇಧಿಯಲ್ಲಿ
10ಗ್ರಾಂ ನಿತ್ಯಪುಷ್ಟಿಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು .ತಣ್ಣಗಾದ ಮೇಲೆ ಈ ಕಷಾಯವನ್ನು ಎರಡು ಭಾಗ ಮಾಡಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಹೀಗೆ 5 ರಿಂದ 7 ದಿವಸ ಉಪಚಾರವನ್ನು ಮುಂದುವರೆಸುವುದು. ಮಲಬದ್ದತೆಯನ್ನು ಸಹ ನಿವಾರಿಸಬಲ್ಲ ಗುಣ ಈ ಮೂಲಿಕೆಗೆ ಇದೆ ಎಂದು ತಿಳಿದು ಬಂದಿದೆ.
ಗಾಯಗಳಿಂದ ರಕ್ತಸ್ರಾವ
ಗಾಯ ವಾಸಿಯಾಗಲು ಒಣಗಿದ ನಿತ್ಯಪುಷ್ಟಿ ಎಲೆಯನ್ನು ಗಾಯಗಳ ಮೇಲೆ ಹಾಕುವುದರಿಂದ ಗಾಯಗಳು ವಾಸಿಯಾಗುವವು.
ಸದಾಪುಷ್ಪದ ವೈಜ್ಞಾನಿಕ ಹೆಸರು ಕ್ಯಾಥೆರ್ಯಂತಸ್ ರೋಸಿಯಸ್. ಇದು ಎಪೋಸೈನೇಸಿ ಎಂಬ ಕುಲಕ್ಕೆ ಸೇರಿದ ಸಸ್ಯವಾಗಿದೆ. ಇದು ಒಂದು ಬಹುವಾರ್ಷಿಕ ಸಸ್ಯವಾಗಿದೆ.
ಸದಾಪುಷ್ಪದ ಕಾಂಡವು ಮೆದುವಾಗಿರುತ್ತದೆ. ಒಂದು ಮೀಟರ್ನಷ್ಟು ಉದ್ದ ಬೆಳೆಯುತ್ತದೆ. ಈ ಸಸ್ಯದ ಹೂವುಗಳು ಐದು ದಳಗಳನ್ನು ಹೊಂದಿರುತ್ತದೆ. ಎಲೆಗಳು ಲಂಬ ಗೋಲಾಕಾರದಲ್ಲಿ ಇದ್ದು ಚೂಪಾದ ತುದಿಯನ್ನು ಹೂಂದಿದೆ.
ಬೀಜವು ಸಣ್ಣ ಕೋಡಿನಿಂದ ಆವರ್ತಿತಗೊಂಡಿರುತ್ತದೆ. ಈ ಕೋಡು ೨ ರಿಂದ ೪ ಸೆಂ.ಮೀ.ನಷ್ಟು ಉದ್ದವಾಗಿರುತ್ತದೆ. ಈ ಕೋಡಿನ ಕಾಯಿಯು ಕಪ್ಪು ಬೀಜಗಳನ್ನು ಹೊಂದಿರುತ್ತದೆ. .
ಇದರ ಬೀಜವನ್ನು ಬಿತ್ತಿ ಸಸ್ಯವನ್ನು ಬೆಳೆಸಬಹುದು. ಮತ್ತು ಬೇರು ಹಾಗೂ ಕಾಂಡಗಳಿಂದ ಕೂಡಾ ಗಿಡವನ್ನು ಪಡೆಯಬಹುದು.
ಮರಳು ಮಿಶ್ರಿತ ಮೆತ್ತನೆ ಮಣ್ಣು ಹಾಗೂ ನೀರಿನ ಅಭಾವವಿರುವ ಪ್ರದೇಶದಲ್ಲೂ ಈ ಸಸ್ಯವನ್ನು ಬೆಳೆಸಬಹುದು.
This article uses material from the Wikipedia ಕನ್ನಡ article ಸದಾಪುಷ್ಪ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.