ಪ್ರಯಗ್ರಾಜ್ ಜಿಲ್ಲೆ ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ.
ಪ್ರಯಗ್ರಾಜ್ ಪಟ್ಟಣವು ಈ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. ಇದು ಗಂಗಾ ಮತ್ತು ಯಮುನಾ ನದಿಗಳ ನಾಡಾಗಿದ್ದು, ಅತ್ಯಂತ ಫಲವತ್ತಾದ ಬಯಲು ಪ್ರದೇಶವನ್ನು ಹೊಂದಿದೆ.
ಈ ಪ್ರದೇಶವು ಪುರಾಣ ಕಾಲದಿಂದಲೂ ಪ್ರಸಿದ್ಧವಾಗಿದೆ. ಮಹಾಭಾರತದಲ್ಲಿ ಪಾಂಡವರು ತಮ್ಮ ಆಜ್ಞಾತವಾಸದ ಕಾಲವನ್ನು ಕಳೆದ ವಾರಣಾವತ ಪ್ರದೇಶ ಇದುವೇ ಎಂದು ನಂಬಲಾಗಿದೆ.ರಾಮಾಯಣದಲ್ಲಿಯೂ ರಾಮ ಮತ್ತು ಸೀತೆ ವನವಾಸಕ್ಕೆ ಈ ಪ್ರದೇಶವನ್ನು ಹಾದು ಹೋದರು ಎಂದು ಪ್ರತೀತಿ.ಮಹಾಭಾರತ ಮತ್ತು ಇತರ ಪುರಾಣಗಳಲ್ಲಿ ಬರುವ ಕೌಶಾಂಬಿ ಎಂಬ ಊರಿನ ಉಲ್ಲೇಖ ಈ ಜಿಲ್ಲೆಯ ಪಕ್ಕದಲ್ಲಿರುವ ಕೋಶಮ್ ಎಂಬ ಊರಿನದ್ದೇ ಎಂಬ ನಂಬಲಾಗಿತ್ತು. ಉಲ್ಲೇಖಕ್ಕೆ ಸಿಗುವ ಚರಿತ್ರೆಯಲ್ಲಿ ಈ ಪ್ರದೇಶವು ನಾಲ್ಕು ಮತ್ತು ಐದನೆಯ ಶತಮಾನದಲ್ಲಿ ಮಗಧದ ಗುಪ್ತರ ಆಡಳಿತಕ್ಕೆ ಒಳಪಟ್ಟಿತ್ತು. ಏಳನೆಯ ಶತಮಾನದಲ್ಲಿ ಈ ಪ್ರದೇಶವು ಹರ್ಷವರ್ಧನ ಚಕ್ರವರ್ತಿಯ ಆಡಳಿತದಲ್ಲಿತ್ತು ಎಂದು ಚೀನೀ ಯಾತ್ರಿಕ ಹ್ಯು-ಎನ್-ತ್ಸಾಂಗ್ ಉಲ್ಲೇಖಿಸಿದ್ದಾನೆ. ಮುಂದೆ ೧೧೯೪ರಲ್ಲಿ ಶಹಬುದ್ದೀನ್ ಘೋರಿಯ ಆಕ್ರಮಣದ ನಂತರ ಮುಸಲ್ಮಾನರ ಆಡಳಿತದಲ್ಲಿ ನೂರಾರು ವರ್ಷಗಳ ಕಾಲ ಅನೇಕ ಕದನಗಳು,ಅಂತರ್ಯುದ್ಧಗಳಿಗೆ ಸಾಕ್ಷಿಯಾಯಿತು.೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಪ್ರಯಗ್ರಾಜಿನ ಸಿಪಾಯಿಗಳು ದಂಗೆಯೆದ್ದು ಕೊಲ್ಲಲ್ಪಟ್ಟರು.ಮುಂದೆ ಭಾರತ ಸ್ವತಂತ್ರವಾಗುವವರೆಗೆ ಬ್ರಿಟಿಷ್ ಆಡಳಿತದಲ್ಲಿತ್ತು.
ಇದು ಉತ್ತರ ಪ್ರದೇಶ ರಾಜ್ಯದ ಅತ್ಯಂತ ಜನ ಬಾಹುಳ್ಯದ ಪ್ರದೇಶವಾಗಿದೆ. ಚದರ ಕಿ.ಮೀ,ಗೆ ೧೦೮೭ ರಂತೆ ಜನರಿದ್ದು ದೇಶದ ೧೩ನೆಯ ಅತ್ಯಂತ ಹೆಚ್ಚು ಜನವಾಸದ ಜಿಲ್ಲೆಯಾಗಿದೆ.೨೦೧೧ರ ಜನಗಣತಿಯಂತೆ ಒಟ್ಟು ಜನಸಂಖ್ಯೆ ೫೯,೫೯,೭೯೮ ಆಗಿದ್ದು ಲಿಂಗಾನುಪಾತ ೯೦೨ ಮತ್ತು ಸಾಕ್ಷರತೆ ಪ್ರಮಾಣ ೭೪.೪೧ ಆಗಿದೆ. ಇಲ್ಲಿಯ ಜನರ ಮುಖ್ಯ ಭಾಷೆ ಅವಧಿ ಮತ್ತು ಬಘೇಲಿ.
ಪ್ರಯಗ್ರಾಜ್ ಪಟ್ಟಣವುಪ್ರಯಾಗ ಎಂದೂ ಪ್ರಸಿದ್ಧವಾಗಿದ್ದು,ಇಲ್ಲಿ ಗಂಗಾ,ಯಮುನಾ ಮತ್ತು ಗುಪ್ತಗಾಮಿನಿಯಾದ ಸರಸ್ವತಿ ನದಿ ಗಳ ತ್ರಿವೇಣಿ ಸಂಗಮವಾದ ಸ್ಥಳವಾಗಿದ್ದು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಆದುದರಿಂದ ಲಕ್ಷಾಂತರ ಹಿಂದೂಗಳು ಪ್ರತಿ ವರ್ಷ ಇಲ್ಲಿಗೆ ಯಾತ್ರೆ ಕೈಗೊಳ್ಳುತ್ತಾರೆ.
This article uses material from the Wikipedia ಕನ್ನಡ article ಪ್ರಯಗ್ರಾಜ್ ಜಿಲ್ಲೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.