ಪ್ರಧಾನ ಖಿನ್ನತೆಯ ಅಸ್ವಸ್ಥತೆ

society depend more on women

Major Depressive Disorder
Classification and external resources
ಪ್ರಧಾನ ಖಿನ್ನತೆಯ ಅಸ್ವಸ್ಥತೆ
Vincent van Gogh's 1890 painting At Eternity's Gate
ICD-10F32, F33
ICD-9296
OMIM608516
DiseasesDB3589
MedlinePlus003213
eMedicinemed/532
MeSHD003865

ಟೆಂಪ್ಲೇಟು:Depression video

ಪ್ರಧಾನ ಖಿನ್ನತೆಯ ಅಸ್ವಸ್ಥತೆ (ಮರುಕಳಿಸುವ ಖಿನ್ನತೆಯ ಅಸ್ವಸ್ಥತೆ , ವೈದ್ಯಕೀಯ ಮಧ್ಯಸ್ಥಿಕೆಯ ಖಿನ್ನತೆ , ಪ್ರಧಾನ ಖಿನ್ನತೆ , ಏಕಧ್ರುವೀಯ ಖಿನ್ನತೆ , ಅಥವಾ ಏಕಧ್ರುವೀಯ ಅಸ್ವಸ್ಥತೆ ಎಂದು ಕೂಡ ಕರೆಯಲಾಗುತ್ತದೆ) ಎಂಬುದು ಮಾನಸಿಕ ಅಸ್ವಸ್ಥತೆಯಾಗಿದ್ದು, ಇದು ಕಡಿಮೆಆತ್ಮಾಭಿಮಾನದ ಜತೆ ಮಂದ ಚಿತ್ತಸ್ಥಿತಿ ಹಾಗು ಸಹಜವಾಗಿ ಸಂತೋಷಪಡುವಂತಹ ಚಟುವಟಿಕೆಗಳಲ್ಲಿ ಆಸಕ್ತಿ ಅಥವಾ ಸಂತೋಷ ಕಳೆದುಕೊಳ್ಳುವಲಕ್ಷಣಗಳಿಂದ ಕೂಡಿದೆ. "ಖಿನ್ನತೆಯ ಪ್ರಧಾನ ಅಸ್ವಸ್ಥತೆ"(ಮೇಜರ್ ಡಿಪ್ರೆಸಿವ್ ಡಿಸಾರ್ಡರ್) ಎಂಬ ಪದವನ್ನು ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ಆಯ್ಕೆಮಾಡಿತು. ಇದನ್ನು ಡೈಗ್ನಾಸ್ಟಿಕ್ ಅಂಡ್ ಸ್ಟ್ಯಾಟಿಸ್ಟಿಕಲ್ ಮ್ಯಾನ್ಯೂವಲ್ ಆಫ್ ಮೆಂಟಲ್ ಡಿಸ್ ಆರ್ಡರ್ (DSM-III) ನ 1980 ರ ಆವೃತ್ತಿಯಲ್ಲಿ ಚಿತ್ತಸ್ಥಿತಿ ಅಸ್ವಸ್ಥತೆಎಂದು ಈ ರೋಗಲಕ್ಷಣದ ಗುಂಪಿಗೆ ಹೆಸರಿಟ್ಟಿತು ಮತ್ತು ಅದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಸಾಮಾನ್ಯ ಪದವಾದ ಖಿನ್ನತೆ ಯನ್ನು ಅಸ್ವಸ್ಥತೆ ಸೂಚಿಸಲು ಹೆಚ್ಚಾಗಿ ಬಳಸಲಾಗುತ್ತದೆ; ಇದನ್ನು ಮಾನಸಿಕ ಖಿನ್ನತೆಯ ಇತರ ವಿಧಗಳನ್ನು ಸೂಚಿಸಲು ಕೂಡ ಬಳಸಬಹುದಾಗಿದ್ದರಿಂದ ವೈದ್ಯಕೀಯ ಮತ್ತು ಸಂಶೋಧನೆಯ ಬಳಕೆಯಲ್ಲಿ ಅಸ್ವಸ್ಥತೆಗಾಗಿ ನಿರ್ದಿಷ್ಟ ಪರಿಭಾಷೆಯ ಅಗತ್ಯವಿರುವುದರಿಂದ ಇದನ್ನು ಬಳಸುತ್ತಿಲ್ಲ. ಪ್ರಧಾನ ಖಿನ್ನತೆಯೆಂಬುದು ದುರ್ಬಲ ಸ್ಥಿತಿಯಾಗಿದ್ದು, ಇದು ವ್ಯಕ್ತಿಯ ಕುಟುಂಬ, ಕೆಲಸ ಅಥವಾ ಶಾಲಾ ಜೀವನ, ನಿದ್ರಿಸುವ ಮತ್ತು ಆಹಾರ ಸೇವಿಸುವ ಅಭ್ಯಾಸಗಳು ಮತ್ತು ಸಾಮಾನ್ಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ, ಸುಮಾರು 3.4 ಪ್ರತಿಶತದಷ್ಟು ಜನರು ಪ್ರಧಾನ ಖಿನ್ನತೆಯಿಂದಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಅಲ್ಲದೇ ಆತ್ಯಹತ್ಯೆ ಮಾಡಿಕೊಳ್ಳುವ 60 ಪ್ರತಿಶತದಷ್ಟು ಜನರು ಖಿನ್ನತೆಯನ್ನು ಅಥವಾ ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುತ್ತಾರೆ.

ರೋಗಿಯು ತನ್ನ ಅನುಭವಗಳ ಸ್ವಯಂ ವರದಿ, ರೋಗಿಯ ಸಂಬಂಧಿಕರು ಅಥವಾ ಸ್ನೇಹಿತರು ನೀಡಿದ ನಡವಳಿಕೆಯ ವರದಿ ಹಾಗು ಮಾನಸಿಕ ಸ್ಥಿತಿಯ ಪರೀಕ್ಷೆಯ ಆಧಾರದ ಮೇಲೆ ಪ್ರಧಾನ ಖಿನ್ನತೆ ಅಸ್ವಸ್ಥತೆಯ ರೋಗ ನಿರ್ಣಯ ಮಾಡಲಾಗುತ್ತದೆ. ಪ್ರಧಾನ ಖಿನ್ನತೆಯನ್ನು ಪರೀಕ್ಷಿಸಲು ಯಾವುದೇ ಪ್ರಯೋಗಾಲಯ ಪರೀಕ್ಷೆಯಿಲ್ಲ. ಆದರೂ ವೈದ್ಯರು ಇದೇ ರೀತಿಯ ಲಕ್ಷಣಗಳನ್ನು ಉಂಟುಮಾಡುವ ದೈಹಿಕ ಸ್ಥಿತಿಯ ಪರೀಕ್ಷೆಗೆ ಕೂಡ ಸಾಮಾನ್ಯವಾಗಿ ಸೂಚಿಸಬಹುದು. ಗೆಲ್ಡರ್, ಮೇಯಾನ್ ಮತ್ತು ಗೆಡೇಸ್ (2005)

ಕೆಳಕಂಡಂತೆ ಹೇಳಿದ್ದಾರೆ: ಖಿನ್ನತೆಯ ಅಸ್ವಸ್ಥತೆಯನ್ನು ಪ್ರಾಥಮಿಕ ಹಂತದಲ್ಲೆ ಪತ್ತೆ ಹಚ್ಚದಿದ್ದರೆ, ಇದನ್ನು ಗುಣಪಡಿಸುವುದು ನಿಧಾನವಾಗಬಹುದು ಹಾಗು ಇದು ವ್ಯಕ್ತಿಯ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಅಥವಾ ಆರೋಗ್ಯವನ್ನು ಇನ್ನಷ್ಟು ಹಾಳುಮಾಡಬಹುದು. ಇದು 20 ರಿಂದ 30 ವರ್ಷಗಳ ವಯೋಮಾನದವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದ್ದಲ್ಲದೆ, ಅನಂತರ 30 ರಿಂದ 40 ವರ್ಷಗಳ ಮಧ್ಯಾವಧಿಯಲ್ಲೂ ತುತ್ತತುದಿ ಮುಟ್ಟಬಹುದು.

ರೋಗಿಗಳಿಗೆ ವಿಶೇಷವಾಗಿ ಖಿನ್ನತೆ-ಶಮನಕಾರಿ ಔಷಧಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ಅನೇಕ ಪ್ರಸಂಗಗಳಲ್ಲಿ ಮಾನಸಿಕ ಚಿಕಿತ್ಸೆ ಅಥವಾ ಮನೋವೈಜ್ಞಾನಿಕ ಸಲಹೆಯನ್ನು ಕೂಡ ನೀಡಲಾಗುತ್ತದೆ. ಸ್ವಯಂ-ನಿರ್ಲಕ್ಷ್ಯದಂತಹ ಅಥವಾ ಸ್ವಯಂ ಅಥವಾ ಇತರರಿಗೆ ಹಾನಿಮಾಡುವ ಅಪಾಯಕಾರಿ ಪ್ರಸಂಗಗಳಲ್ಲಿ ಆಸ್ಪತ್ರೆಗೆ ಸೇರಿಸುವ ಅಗತ್ಯವಿರುತ್ತದೆ. ಕಡಿಮೆ ಜನರಿಗೆ ಎಲೆಕ್ಟ್ರೋ ಕನ್‌ವಲ್ಸಿವ್ ಥೆರಪಿ(ವಿದ್ಯುತ್ಕಂಪನದ ಚಿಕಿತ್ಸೆ)ಯ (ECT) ಮೂಲಕ ಚಿಕಿತ್ಸೆ ನೀಡಲಾಗುತ್ತದೆ.ಇದನ್ನು ಅಲ್ಪಕಾಲ ಕ್ರಿಯಾಶೀಲವಾಗಿರುವ ಸಾಮಾನ್ಯ ಅರಿವಳಿಕೆಯ ನಂತರ ನಿರ್ವಹಿಸಲಾಗುತ್ತದೆ. ಅಸ್ವಸ್ಥತೆಯ ಗತಿಯು ವ್ಯಾಪಕವಾಗಿ ವ್ಯತ್ಯಾಸದಿಂದ ಕೂಡಿರುತ್ತದೆ. ವಾರಗಳ ಕಾಲ ಸಂಭವಿಸುವ ಒಂದು ಪ್ರಸಂಗದಿಂದ ಹಿಡಿದು ಮರುಕಳಿಸುವ ಪ್ರಧಾನ ಖಿನ್ನತೆ ಪ್ರಸಂಗಗಳವರೆಗೆ ಜೀವನಪೂರ್ತಿ ಅಸ್ವಸ್ಥತೆ ಉಂಟಾಗಬಹುದು. ಖಿನ್ನತೆಗೆ ಒಳಪಟ್ಟ ವ್ಯಕ್ತಿಗಳು ಖಿನ್ನತೆಯಿಲ್ಲದ ವ್ಯಕ್ತಿಗಳಿಗಿಂತ ಕಡಿಮೆ ಆಯುರ್ನಿರೀಕ್ಷೆ ಹೊಂದಿರುತ್ತಾರೆ. ಆಂಶಿಕವಾಗಿ ವೈದ್ಯಕೀಯ ಅಸ್ವಸ್ಥತೆಗಳಿಗೆ ಮತ್ತು ಆತ್ಮಹತ್ಯೆಗೆ ಗುರಿಯಾಗುವ ಸಾಧ್ಯತೆಗಳಿರುತ್ತವೆ. ಔಷಧಿಗಳು ಆತ್ಮಹತ್ಯೆಯ ಅಪಾಯದ ಮೇಲೆ ಪ್ರಭಾವ ಬೀರುತ್ತವೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಸ್ತುತದ ಮತ್ತು ಹಿಂದಿನ ರೋಗಿಗಳು ಇದರಿಂದ ಕಳಂಕಿತರಾಗಿರಬಹುದು.

ಖಿನ್ನತೆಯ ಗುಣಲಕ್ಷಣ ಮತ್ತು ಕಾರಣಗಳ ಬಗ್ಗೆ ಗ್ರಹಿಕೆಯು ಶತಮಾನಗಳ ಕಾಲ ವಿಕಸನಗೊಂಡಿದೆ.ಈ ಗ್ರಹಿಕೆ ಅಪೂರ್ಣವಾದರೂ ಖಿನ್ನತೆಯ ಅನೇಕ ಅಂಶಗಳನ್ನು ಚರ್ಚೆ ಮತ್ತು ಸಂಶೋಧನೆಯ ವಿಷಯವಾಗಿ ಇರಿಸಿದೆ. ಪ್ರಸ್ತಾಪಿಸಲಾದ ಕಾರಣಗಳು ಈ ಕೆಳಕಂಡಂತಿವೆ: ಮಾನಸಿಕ, ಮನೋ-ಸಾಮಾಜಿಕ, ಆನುವಂಶಿಕ, ವಿಕಸನೀಯಮತ್ತು ಜೈವಿಕ ಅಂಶಗಳು. ಕೆಲವೊಂದು ರೀತಿಯ ಔಷಧಿಗಳನ್ನು ದೀರ್ಘಕಾಲದವರೆಗೆ ಬಳಸುವುದು ಖಿನ್ನತೆಯ ರೋಗಲಕ್ಷಣಗಳಿಗೆ ಕಾರಣವಾಗಬಹುದು ಮತ್ತು ಇದನ್ನು ಇನ್ನಷ್ಟು ಹೆಚ್ಚಿಸಬಹುದು. ಮನೋವೈಜ್ಞಾನಿಕ ಚಿಕಿತ್ಸೆಗಳು ವ್ಯಕ್ತಿತ್ವ, ಸಾಮಾಜಿಕ ಸಂಪರ್ಕ, ಮತ್ತು ಕಲಿಕೆಯ ಸಿದ್ಧಾಂತಗಳ ಮೇಲೆ ಆಧರಿಸಿವೆ. ಬಹುಪಾಲು ಜೈವಿಕ ಸಿದ್ಧಾಂತಗಳು ಮೊನೊಮೈನ್ ರಾಸಾಯನಿಕಗಳು, ಸಿರೊಟೋನಿನ್, ನೊರೆಪೈನ್‌ಫ್ರೈನ್ ಮತ್ತು ಡೊಪಮೆನ್ ಗಳ ಮೇಲೆ ಗಮನಹರಿಸುತ್ತವೆ. ಇವುಗಳು ಮಿದುಳಿನಲ್ಲಿ ಸಹಜವಾಗಿ ಉಪಸ್ಥಿತವಿದ್ದು ನರಕೋಶಗಳ ನಡುವೆ ಸಂಪರ್ಕಕ್ಕೆ ಸಹಾಯ ಮಾಡುತ್ತವೆ.

ರೋಗಲಕ್ಷಣಗಳು ಮತ್ತು ಚಿಹ್ನೆಗಳು

ಪ್ರಧಾನ ಖಿನ್ನತೆಯು, ವ್ಯಕ್ತಿಯ ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳು, ಕೆಲಸ ಅಥವಾ ಶಾಲಾ ಜೀವನ, ನಿದ್ರೆ ಮತ್ತು ಆಹಾರ ಸೇವಿಸುವ ಅಭ್ಯಾಸಗಳು, ಹಾಗು ಸಾಮಾನ್ಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ವ್ಯಕ್ತಿಯ ಕೆಲಸ ಕಾರ್ಯಗಳ ಮೇಲೆ ಮತ್ತು ಯೋಗಕ್ಷೇಮದ ಮೇಲೆ ಇದರ ಪ್ರಭಾವವು, ಮಧುಮೇಹಗಳಂತಹ ಸುದೀರ್ಘಕಾಲದ ವೈದ್ಯಕೀಯ ಪರಿಸ್ಥಿತಿಗಳಿಗೆ ಸಮನಾಗಿದೆ.

ಪ್ರಧಾನ ಖಿನ್ನತೆಯ ಪ್ರಸಂಗವನ್ನು ಹೊಂದಿರುವಂತಹ ವ್ಯಕ್ತಿಯು ಸಾಮಾನ್ಯವಾಗಿ ಅತ್ಯಂತ ಮಂದ ಚಿತ್ತಸ್ಥಿತಿಯನ್ನು ಪ್ರದರ್ಶಿಸುತ್ತಾನೆ. ಇದು ಜೀವನದ ಎಲ್ಲಾ ಅಂಶಗಳನ್ನು ಆವರಿಸಿಕೊಳ್ಳುತ್ತದೆ. ಅಲ್ಲದೇ ಸಾಮಾನ್ಯವಾಗಿ ಸಂತೋಷಪಡುವಂತಹ ಚಟುವಟಿಕೆಗಳಲ್ಲಿ ಸಂತೋಷ ಅನುಭವಿಸಲು ಅಸಮರ್ಥನಾಗುತ್ತಾನೆ. ಖಿನ್ನತೆಗೆ ಒಳಗಾದ ಜನರು ಅನ್ಯಮನಸ್ಕರಾಗಿರುತ್ತಾರೆ ಅಥವಾ ನಿಷ್ಪ್ರಯೋಜಕ ಭಾವನೆಗಳು ಮತ್ತು ಆಲೋಚನೆಗಳನ್ನು ಮೆಲುಕುಹಾಕುತ್ತಿರುತ್ತಾರೆ. ಉದಾಹರಣೆಗೆ , ಅನುಚಿತ ಅಪರಾಧ ಮನೋಭಾವ ಅಥವಾ ವಿಷಾದ ಮನೋಭಾವ, ಅಸಹಾಯಕತೆ, ಹತಾಶೆ, ಮತ್ತು ಆತ್ಮದ್ವೇಷ. ಅನೇಕ ಪ್ರಸಂಗಗಳಲ್ಲಿ, ಖಿನ್ನತೆಗೆ ಒಳಗಾದ ಜನರು ಮನೋವಿಕಾರದ ರೋಗಲಕ್ಷಣಗಳನ್ನು ಹೊಂದಿರಬಹುದು. ಈ ರೋಗಲಕ್ಷಣವು ಅಹಿತಕರವಾದ ಭ್ರಮೆಗಳನ್ನು ಅಥವಾ ಅಸಹಜವಾಗಿ, ಭ್ರಾಂತಿಗಳನ್ನು ಒಳಗೊಂಡಿರುತ್ತದೆ. ಖಿನ್ನತೆಯ ಇತರ ಲಕ್ಷಣಗಳು ಕೆಳಕಂಡವುಗಳನ್ನು ಒಳಗೊಂಡಿವೆ: ಕಡಿಮೆ ಚಿತ್ತೈಕಾಗ್ರತೆ ಮತ್ತು ಜ್ಞಾಪಕ ಶಕ್ತಿ (ವಿಶೇಷವಾಗಿ ವಿಷಣ್ಣತೆ ಅಥವಾ ಮನೋವಿಕೃತಿಗೆ ಒಳಗಾಗುವ ಲಕ್ಷಣವಿರುವವರಲ್ಲಿ), ಸಾಮಾಜಿಕ ಪರಿಸ್ಥಿತಿಗಳು ಮತ್ತು ಚಟುವಟಿಕೆಗಳಿಂದ ಹಿಂದೆಸರಿಯುವುದು, ತಗ್ಗಿದ ಲೈಂಗಿಕ ಆಸಕ್ತಿ ಹಾಗು ಸಾವಿನ ಅಥವಾ ಆತ್ಮಹತ್ಯೆಯ ಆಲೋಚನೆಗಳನ್ನು ಮಾಡುವುದು.

ನಿದ್ರಾಹೀನತೆಯು ಖಿನ್ನತೆಗೆ ಒಳಗಾದವರಲ್ಲಿ ಸಾಮಾನ್ಯವಾಗಿರುತ್ತದೆ. ವಿಶೇಷ ಉದಾಹರಣೆಯಲ್ಲಿ ವ್ಯಕ್ತಿಯು ಬೇಗ ಎಚ್ಚರಗೊಳ್ಳುತ್ತಾನೆ ಹಾಗು ಮತ್ತೆ ನಿದ್ರೆಗೆ ಹಿಂತಿರುಗಲಾರ, ಆದರೆ ನಿದ್ರಾಹೀನತೆಯು ನಿದ್ರಿಸಲು ತೊಂದರೆಯಾಗುವುದನ್ನು ಕೂಡ ಒಳಗೊಂಡಿದೆ. ನಿದ್ರಾಹೀನತೆಯು ಖಿನ್ನತೆಗೆ ಒಳಗಾದ ಕನಿಷ್ಠ 80 ಪ್ರತಿಶತದಷ್ಟು ಜನರ ಮೇಲಾದರೂ ಪರಿಣಾಮ ಬೀರುತ್ತದೆ. ಹೈಪರ್ ಸೊಮ್ನಿಯ, ಅಥವಾ ಅತಿಯಾದ ನಿದ್ರೆಯು ಖಿನ್ನತೆಗೆ ಒಳಗಾದ 15ಪ್ರತಿಶತದಷ್ಟು ಜನರ ಮೇಲೆ ಪ್ರಭಾವ ಬೀರುತ್ತದೆ. ಖಿನ್ನತೆ-ಶಮನಕಾರಿಗಳು ಕೂಡ ಅವುಗಳ ಉತ್ತೇಜಕ ಪರಿಣಾಮಗಳಿಂದಾಗಿ ನಿದ್ರಾಹೀನತೆಯನ್ನು ಉಂಟು ಮಾಡಬಹುದು.

ಖಿನ್ನತೆಗೆ ಒಳಗಾದ ವ್ಯಕ್ತಿಯು ಬಳಲಿಕೆ, ತಲೆನೋವುಗಳು ಅಥವಾ ಅಜೀರ್ಣ ಸಮಸ್ಯೆಗಳಂತಹ ಬಹು ದೈಹಿಕ ರೋಗಲಕ್ಷಣಗಳನ್ನು ಹೇಳಬಹುದು; ವಿಶ್ವ ಆರೋಗ್ಯ ಸಂಸ್ಥೆಯ ಖಿನ್ನತೆಯ ಮಾನದಂಡದ ಪ್ರಕಾರ ದೈಹಿಕ ಸಮಸ್ಯೆಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡುಬರುತ್ತಿರುವಂತಹ ಅತ್ಯಂತ ಸಾಮಾನ್ಯ ಸಮಸ್ಯೆಗಳಾಗಿವೆ. ಹಸಿವು ಕಡಿಮೆಯಾಗುತ್ತಾ ಬರುತ್ತದೆ. ಇದರಿಂದಾಗಿ ತೂಕ ಕಡಿಮೆಯಾಗುತ್ತದೆ. ಆದರೂ ಕೆಲವೊಮ್ಮೆ ಹಸಿವು ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ. ಕುಟುಂಬ ಮತ್ತು ಸ್ನೇಹಿತರು ಖಿನ್ನತೆಗೆ ಒಳಗಾದ ವ್ಯಕ್ತಿಯ ನಡವಳಿಕೆ ಕ್ಷೋಬೆ ಅಥವಾ ನಿರಾಸಕ್ತಿಯಿಂದಿರುವುದನ್ನು ಗಮನಿಸಬಹುದು.

ಮಕ್ಕಳನ್ನು ಕುರಿತಂತೆ ಖಿನ್ನತೆಯ ಪರಿಕಲ್ಪನೆಯು ಹೆಚ್ಚು ವಿವಾದಾತ್ಮಕವಾಗಿದೆ. ಅಲ್ಲದೇ ಇದು ಅವರಲ್ಲಿ ಭಾವನೆ ಬೆಳೆದು ಪೂರ್ಣವಾಗಿ ಪ್ರಕಟವಾದಾಗ ತೆಗೆದುಕೊಳ್ಳುವ ಅಭಿಪ್ರಾಯದ ಮೇಲೆ ಅವಲಂಬಿತವಾಗಿದೆ. ಖಿನ್ನತೆಗೆ ಒಳಗಾದ ಮಕ್ಕಳು ಖಿನ್ನತೆಯ ಚಿತ್ತಸ್ಥಿತಿಗಿಂತ ಹೆಚ್ಚು ಸಿಡುಕಿನ ಸ್ವಭಾವವನ್ನು ತೋರಿಸುತ್ತವೆ. ಅಲ್ಲದೇ ಅವರು ವಯಸ್ಸಿಗೆ ಮತ್ತು ಪರಿಸ್ಥಿತಿಗೆ ಅವಲಂಬಿಸಿ ವಿಭಿನ್ನ ಲಕ್ಷಣಗಳನ್ನು ತೋರಿಸುತ್ತಾರೆ. ಬಹುಪಾಲು ಮಕ್ಕಳು ಶಾಲೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತವೆ ಹಾಗು ಶೈಕ್ಷಣಿಕ ಸಾಧನೆ ಇಳಿಮುಖವಾಗುತ್ತದೆ. ಅವರನ್ನು ಅಂಟಿಕೊಳ್ಳುವ, ವಿಶೇಷ ಗಮನ ಅಪೇಕ್ಷಿಸುವ, ಅವಲಂಬಿತ, ಅಥವಾ ಅಭದ್ರತೆಯ ಭಾವನೆ ಉಳ್ಳವರೆಂದು ವಿವರಿಸಬಹುದುದಾಗಿದೆ. ಇದರ ಲಕ್ಷಣಗಳಿಗೆ ಸಹಜವಾದ ಚಿತ್ತಸ್ಥಿತಿಗಳೆಂದು ಅರ್ಥಕಲ್ಪಿಸಿದಾಗ ಖಿನ್ನತೆಯನ್ನು ರೋಗನಿರ್ಣಯ ಮಾಡುವುದು ನಿಧಾನವಾಗಬಹುದು ಅಥವಾ ವಿಫಲವಾಗಬಹುದು. ಖಿನ್ನತೆಯು ಅಟೆನ್ಷನ್-ಡಿಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ADHD)(ಗಮನದ ಕೊರತೆ ಮತ್ತು ಅತಿಯಾದ ಚಟುವಟಿಕೆಯ ಅಸ್ವಸ್ಥತೆ) ಸಮಯದಲ್ಲೆ ಉಂಟಾಗಬಹುದು. ಅಲ್ಲದೇ ಎರಡರ ರೋಗಲಕ್ಷಣವನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಲು ಕಷ್ಟವಾಗುವಂತೆ ಮಾಡುತ್ತದೆ.

ಖಿನ್ನತೆಗೆ ಒಳಗಾದ ಹಿರಿಯ ವ್ಯಕ್ತಿಗಳು ಇತ್ತೀಚಿನ ಪ್ರಾರಂಭವಾದ ಮರೆವು ಮುಂತಾದ ಚಿಂತನೆ ಪ್ರಕ್ರಿಯೆಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಹೊಂದಿರಬಹುದು. ಅಲ್ಲದೇ ಚಲನೆಗಳು ನಿಧಾನವಾಗುವುದನ್ನು ಹೆಚ್ಚಾಗಿ ಗುರುತಿಸಲಾಗಿದೆ. ಖಿನ್ನತೆಯು ಹಿರಿಯವಯಸ್ಕರಲ್ಲಿ ದೈಹಿಕ ಅಸ್ವಸ್ಥತೆಗಳೊಂದಿಗೆ ಹೆಚ್ಚಾಗಿ ಇರುತ್ತದೆ. ಹಿರಿಯರಲ್ಲಿ ಸಾಮಾನ್ಯವಾಗಿ ಕಾಣುವ ದೈಹಿಕ ಅಸ್ವಸ್ಥತೆಗಳಾದ ಪಾರ್ಶ್ವವಾಯು, ಇತರ ಹೃದಯ ಸಂಬಂಧಿ ರೋಗಗಳು, ಪಾರ್ಕಿನ್‌ಸನ್ಸ್ ರೋಗ, ಮತ್ತು ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶದ ರೋಗ ದಂತಹ ರೋಗಗಳನ್ನು ಹೊಂದಿರುವ ಹಿರಿಯರಲ್ಲಿ ಸಾಮಾನ್ಯವಾಗಿರುತ್ತದೆ.

ಕಾರಣಗಳು

ಜೈವಿಕಮನೋಸಾಮಾಜಿಕ ಮಾದರಿಯು, ಜೈವಿಕ, ಮಾನಸಿಕ,ಸಾಮಾಜಿಕ ಅಂಶಗಳು ಖಿನ್ನತೆಯನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ಸೂಚಿಸುತ್ತದೆ. ದೇಹಪ್ರಕೃತಿ–ಒತ್ತಡ ಮಾದರಿ ಮುಂಚಿತವಾಗಿ ಸುಲಭವಾಗಿ ಪಕ್ಕಾಗುವ ಅಥವಾ ದೇಹ ಪ್ರಕೃತಿಯು ಒತ್ತಡಭರಿತ ಜೀವನದ ಘಟನೆಗಳಿಂದ ಕ್ರಿಯಾಶೀಲವಾದಲ್ಲಿ ಖಿನ್ನತೆ ಕಾಣಿಸಿಕೊಳ್ಳುತ್ತದೆಂದು ಸೂಚಿಸುತ್ತದೆ. ಮುಂಚಿತವಾಗಿಯೇ ಇದ್ದ ಸುಲಭವಾಗಿ ಒಡ್ಡಿಕೊಳ್ಳುವ ಗುಣವು ಆನುವಂಶಿಕವಾಗಿ ಬರಬಹುದು, ಪ್ರಕೃತಿ ಮತ್ತು ಪಾಲನೆ(ವೈಯಕ್ತಿಕ ಅನುಭವಗಳು) ಮಧ್ಯೆ ಪರಸ್ಪರ ಕ್ರಿಯೆ ಸೂಚಿಸುತ್ತದೆ ಅಥವಾ ಸಂಗ್ರಹರೂಪ, ಬಾಲ್ಯದಲ್ಲಿ ಕಲಿತ ಪ್ರಪಂಚದ ದೃಷ್ಟಿಕೋನಗಳ ಫಲವಾಗಿಯೂ ಬರಬಹುದು.

ಈ ಪರಸ್ಪರ ಕಾರ್ಯನಡೆಸುವ ಮಾದರಿಗಳು ಪ್ರಾಯೋಗಿಕ ಬೆಂಬಲವನ್ನು ಕೂಡ ಪಡೆದಿವೆ . ಉದಾಹರಣೆಗೆ,ನ್ಯೂಜಿಲೆಂಡ್ ನಲ್ಲಿ ಸಂಶೋಧಕರು ಖಿನ್ನತೆಯ ಬಗ್ಗೆ ಅಧ್ಯಯನ ಮಾಡಲುಭವಿಷ್ಯಾನ್ವಯದ ಮಾರ್ಗವನ್ನು ಬಳಸಿದರು. ಈ ಅಧ್ಯಯನವನ್ನು ಆರಂಭದಲ್ಲಿ ಸಹಜವಾಗಿರುವ ಜನರ ಸಮಾನವಯಸ್ಕರ ಗುಂಪಿನಲ್ಲಿ ಖಿನ್ನತೆಯು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ದೀರ್ಘಕಾಲಾವಧಿ ದಾಖಲಿಸಿಕೊಳ್ಳುವ ಮೂಲಕ ಮಾಡಿದರು. ಸಂಶೋಧಕರು, ಸಿರೊಟೋನಿನ್ ಟ್ರಾನ್ಸ್ ಪೋರ್ಟರ್(5-HTT) ಜೀನ್‌ನ ವ್ಯತ್ಯಾಸ ಜೀವನದ ಒತ್ತಡಭರಿತ ಕಾರ್ಯಚಟುವಟಿಕೆಗಳೊಂದಿಗೆ ವ್ಯವಹರಿಸುವಂತಹ ಜನರಿಗೆ ಖಿನ್ನತೆಯನ್ನು ಉಂಟುಮಾಡುವ ಅವಕಾಶಗಳ ಮೇಲೆ ಪರಿಣಾಮಗಳನ್ನು ಬೀರುತ್ತದೆ ಎಂದು ತೀರ್ಮಾನಿಸಿದರು. ನಿರ್ದಿಷ್ಟವಾಗಿ, ಖಿನ್ನತೆಯು ಇಂತಹ ಸಂಗತಿಗಳನ್ನು ಅನುಸರಿಸಬಹುದು, ಆದರೆ ಇದು 5-HTT ಜೀನ್ ನ ಒಂದು ಅಥವಾ ಎರಡು ಸಣ್ಣಆಲೀಲ್ ಗಳಿರುವಂತಹ ಜನರಲ್ಲಿ ಹೆಚ್ಚಾಗಿ ಕಂಡುಬರುವಂತೆ ತೋರುತ್ತದೆ. ಇದರ ಜೊತೆಯಲ್ಲಿ, ಸ್ವೀಡಿಷ್ ಅಧ್ಯಯನವು ಖಿನ್ನತೆಯ ಆನುವಂಶಿಕತೆಯನ್ನು ಅಂದಾಜುಮಾಡಿದೆ- ಖಿನ್ನತೆಯ ವೈಯಕ್ತಿಕ ವ್ಯತ್ಯಾಸಗಳು ಆನುವಂಶಿಕ ವ್ಯತ್ಯಾಸಗಳೊಂದಿಗೆ ಸಂಬಂಧಿಸಿರುವ ಪ್ರಮಾಣವು ಮಹಿಳೆಯರಿಗೆ ಸುಮಾರು 40 ಪ್ರತಿಶತದಷ್ಟಿರುತ್ತದೆ ಮತ್ತು ಪುರುಷರಿಗೆ 30 ಪ್ರತಿಶತದಷ್ಟಿರುತ್ತದೆ. ಅಲ್ಲದೇ ವಿಕಸನೀಯ ಮನಶಾಸ್ತ್ರಜ್ಞರು, ಖಿನ್ನತೆಯ ಆನುವಂಶಿಕ ಆಧಾರವು ನೈಸರ್ಗಿಕ ಆಯ್ಕೆಯ ಹೊಂದಾಣಿಕೆಗಳಲ್ಲಿ ಅಡಗಿದೆ ಎಂಬುದನ್ನು ಸೂಚಿಸಿದರು. ಮಾದಕವಸ್ತು ಸೇವನೆಯಿಂದ ಉಂಟಾಗುವ ಚಿತ್ತ ಸ್ಥಿತಿಯ ಅಸ್ವಸ್ಥತೆಯು ಪ್ರಧಾನ ಖಿನ್ನತೆಯನ್ನು ಹೋಲುತ್ತದೆ. ಇದು ಸಾಮಾನ್ಯವಾಗಿ ದೀರ್ಘಕಾಲದ ಮಾದಕವಸ್ತುವಿನ ಬಳಕೆ ಅಥವಾ ಮಾದಕವಸ್ತುವಿನ ದುರ್ಬಳಕೆ, ಅಥವಾ ಕೆಲವೊಂದು ನೋವು ಶಮನಕಾರಿ ಮತ್ತು ನಿದ್ರಾಜನಕ ಔಷಧಿಗಳ ಬಳಕೆಯನ್ನು ನಿಲ್ಲಿಸುವುದಕ್ಕೆ ಸಂಬಂಧಿಸಿರುತ್ತದೆ.

ಜೀವವೈಜ್ಞಾನಿಕ

ಮೊನೊಅಮೈನ್ ಹೈಪೊಥಿಸಿಸ್ (ಏಕ ಅಮೈನ್ ಕಲ್ಪನೆ)

ಬಹುಪಾಲು ಖಿನ್ನತೆ-ಶಮನಕಾರಿ ಔಷಧಿಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ಏಕಅಮೈನ್‌ಗಳ ಮಟ್ಟಗಳನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಮಿದುಳಿ ನಲ್ಲಿ ನರಕೋಶಗಳ ನಡುವೆ ನರಕೋಶ ಸಂಗಮದಲ್ಲಿರುವಂತಹ ನರಪ್ರೇಕ್ಷಕಗಳಾದ ಸಿರೊಟೋನಿನ್, ನೊರೆಪೈನ್ ಫ್ರೈನ್ ಮತ್ತು ಡೊಪಮೆನ್. ಕೆಲವು ಔಷಧಿಗಳು ಏಕ ಅಮೈನ್ ಗ್ರಾಹಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.

ಪ್ರಧಾನ ಖಿನ್ನತೆಯ ಅಸ್ವಸ್ಥತೆ 
ಒಂದು ನರಕೋಶದ ನರತಂತು ಹಾಗು ಮತ್ತೊಂದರ ಒಂದು ಡೆನ್ಡ್ರೈಟ್(ನರ ಸಂಬಂಧವಾದ ಪ್ರಚೋದನೆಯನ್ನು ಜೀವಕೋಶಕ್ಕೆ ತಲುಪಿಸುವ ಜೀವಕೋಶದ ಕವಲುಚಾಚಿಕೆಗಳು) ನಡುವಿನ ನರಕೋಶ ಸಂಗಮದ ಸ್ಥೂಲಚಿತ್ರ.ನರಕೋಶ ಸಂಗಮಗಳು ನರಕೋಶಗಳ ನಡುವಿನ ವಿಶಿಷ್ಟವಾದ ಅಂತರವಾಗಿದೆ.ನರತಂತುವಿನ ತುದಿಯನ್ನು ತಲುಪುವ ವಿದ್ಯುತ್ ಪ್ರಚೋದನೆಗಳು ರಾಸಾಯನಿಕ ವಾಹಕಗಳ ಗುಂಪುಗಳನ್ನು (ನರಪ್ರೇಕ್ಷಕಗಳು)ಬಿಡುಗಡೆ ಮಾಡುತ್ತದೆ, ಇವುಗಳು ನರಕೋಶ ಸಂಗಮದ ಸಂದಿನಿಂದ ಗ್ರಾಹಿಗಳವರೆಗೆ ಪಕ್ಕದ ಡೆನ್ಡ್ರೈಟ್ ನ ಮೇಲೆ ಪ್ರಸರಿಸುತ್ತವೆ. ನಂತರದ ನರಕೋಶದ ಮೇಲೆ ಇದು ವಿದ್ಯುತ್ ಪ್ರಚೋದನೆಯನ್ನು ತಾತ್ಕಾಲಿಕವಾಗಿ ಉಂಟುಮಾಡುವ ಸಂಭಾವ್ಯತೆ ಇರುತ್ತದೆ.ಒಂದೊಮ್ಮೆ ಬಿಡುಗಡೆಯಾದ ನರಪ್ರೇಕ್ಷಕವು ಶೀಘ್ರವೇ ಉಪಾಪಚಯಕ್ಕೆ ಒಳಪಡುತ್ತದೆ ಅಥವಾ ಒಂದು ನರಕೋಶಕ್ಕೆ ಮತ್ತೆ ಪಂಪ್ ಮಾಡುತ್ತದೆ.ಖಿನ್ನತೆ-ಶಮನಕಾರಿಗಳು ಈ ಪ್ರಕ್ರಿಯೆಗಳ ಒಟ್ಟಾರೆ ಸಮತೋಲನದ ಮೇಲೆ ಪ್ರಭಾವವನ್ನು ಬೀರುತ್ತದೆ.

ಇತರ ನರಪ್ರೇಕ್ಷಕ ವ್ಯವಸ್ಥೆಗಳನ್ನು ನಿಯಂತ್ರಿಸಲು ಸಿರೊಟೋನಿನ್ ನನ್ನು ಆಧಾರಕಲ್ಪನೆಯಾಗಿ ಪರಿಗ್ರಹಿಸಲಾಗಿದೆ; ಸಿರೊಟೋನಿನ್ ಚಟುವಟಿಕೆಯನ್ನು ಕಡಿಮೆ ಮಾಡುವುದರಿಂದ ಬಹುಶಃ ಈ ವ್ಯವಸ್ಥೆಗಳಿಗೆ ಅಸಾಮಾನ್ಯವಾಗಿ ಮತ್ತು ವ್ಯವಸ್ಥಿತವಲ್ಲದ ರೀತಿಯಲ್ಲಿ ವರ್ತಿಸಲು ಅವಕಾಶ ನೀಡಿದಂತಾಗಬಹುದು. ಈ "ಅನಿರ್ಬಂಧಿತ ಕಲ್ಪನೆಯ" ಪ್ರಕಾರ, ಸಿರೊಟೋನಿನ್ ನ ಕಡಿಮೆ ಮಟ್ಟಗಳಿಂದ, ಕಡಿಮೆ ಮಟ್ಟದ ನೊರ್‌ಪೈನ್‌ಫ್ರಿನ್ ನನ್ನು ಉತ್ತೇಜಿಸಿದಾಗ ಖಿನ್ನತೆಯು ಉಂಟಾಗುತ್ತದೆ. ನೊರ್‌ಪೈನ್‌ಫ್ರಿನ್ ಮತ್ತೊಂದು ಏಕ ಅಮೈನ್ ನರಪ್ರೇಕ್ಷಕವಾಗಿದೆ. ಕೆಲವು ಖಿನ್ನತೆ-ಶಮನಕಾರಿಗಳು ನೇರವಾಗಿ ನೊರೆಪೈನ್ ಫ್ರಿನ್ ನ ಮಟ್ಟಗಳನ್ನು ಹೆಚ್ಚಿಸಿದರೆ, ಇತರ ಶಮನಕಾರಿಗಳು ಡೊಪಮೈನ್ ನ ಮಟ್ಟಗಳನ್ನು ಹೆಚ್ಚಿಸುತ್ತವೆ. ಇದು ಮೂರನೆಯ ಏಕ ಅಮೈನ್ ನರಪ್ರೇಕ್ಷಕವಾಗಿದೆ. ಈ ಅವಲೋಕನಗಳು ಖಿನ್ನತೆಯ ಏಕ ಅಮೈನ್ ಕಲ್ಪನೆಗೆ ಒತ್ತುನೀಡುತ್ತವೆ. ಇದರ ಸಮಕಾಲೀನ ಸೂತ್ರೀಕರಣದಲ್ಲಿ, ಏಕಅಮೈನ್ ಊಹೆಯು, ಕೆಲವೊಂದು ನರಪ್ರೇಕ್ಷಕಗಳ ಕೊರತೆ ಖಿನ್ನತೆಯ ಸದೃಶವಾದ ಗುಣಲಕ್ಷಣಗಳಿಗೆ ಕಾರಣವಾಗಿದೆ ಎಂಬುದನ್ನು ಸಮರ್ಥಿಸುತ್ತದೆ: "ನೊರ್‌ಪೈನ್ ಫ್ರಿನ್ ಜಾಗರೂಕತೆ, ಶಕ್ತಿ ಜತೆಗೆ ಆತಂಕ, ಗಮನ ಮತ್ತು ಜೀವನದಲ್ಲಿ ಆಸಕ್ತಿಗೆ ಸಂಬಂಧಿಸಿರಬಹುದು; ಸಿರೊಟೋನಿನ್ ಕೊರತೆಯು ಆತಂಕ, ಗೀಳು ಮತ್ತು ಪ್ರಚೋದಿಸುವ ಮನೋವೃತ್ತಿಗೆ ಸಂಬಂಧಿಸಿರಬಹುದು; ಅಲ್ಲದೇ ಡೊಪಮೈನ್ ಗಮನ, ಪ್ರೇರಣೆ, ಸಂತೋಷ, ಸಂತೋಷದ ಪರಿಣಾಮಗಳು ಮತ್ತು ಜೀವನದಲ್ಲಿ ಆಸಕ್ತಿಗೆ ಸಂಬಂಧಿಸಿರಬಹುದು." ಈ ಸಿದ್ಧಾಂತದ ಪ್ರತಿಪಾದಕರು ಅತ್ಯಂತ ಪ್ರಮುಖ ರೋಗ ಲಕ್ಷಣದ ಮೇಲೆ ಪ್ರಭಾವ ಬೀರುವಂತಹ ಕ್ರಿಯಾ ವಿಧಾನದ ಖಿನ್ನತೆ-ಶಮನಕಾರಿಯ ಆಯ್ಕೆಯನ್ನು ಸೂಚಿಸುತ್ತಾರೆ. ಆತಂಕಗೊಂಡ ಮತ್ತು ಕೆರಳುವ ರೋಗಿಗಳಿಗೆ SSRI ಅಥವಾ ನೊರ್‌ಪೈನ್‌ಫ್ರಿನ್ ರಿಅಪ್ಟೇಕ್ ಇನ್ ಹೆಬಿಟರ್ಸ್‌ನೊಂದಿಗೆ ಚಿಕಿತ್ಸೆ ನೀಡಬೇಕು. ಅಲ್ಲದೇ ಶಕ್ತಿಯ ಕೊರತೆಯನ್ನು ಮತ್ತು ಜೀವನದಲ್ಲಿ ಸಂತೋಷದ ಕೊರತೆಯನ್ನು ಅನುಭವಿಸುತ್ತಿರುವವರಿಗೆ ನೊರೆಪೈನ್ ಫ್ರಿನ್ ಮತ್ತು ಡೊಪಮೈನ್ ಅನ್ನು ವೃದ್ಧಿಸುವ ಔಷಧಿಗಳ ಮೂಲಕ ಚಿಕಿತ್ಸೆ ನೀಡಬೇಕು.

ಲಭ್ಯವಿರುವ ಏಕ ಅಮೈನ್ ಗಳ ಸಂಖ್ಯೆಯನ್ನು ಹೆಚ್ಚಿಸುವ ಔಷಧಿಗಳು ಪರಿಣಾಮಕಾರಿ ಖಿನ್ನತೆ-ಶಮನಕಾರಿಗಳಾಗಿವೆ ಎಂಬ ಪ್ರಾಯೋಗಿಕ ಅವಲೋಕನಗಳಲ್ಲದೇ ಮನೋವೈದ್ಯಕೀಯ ಆನುವಂಶಿಕತೆಗಳಲ್ಲಿ ನಡೆದ ಇತ್ತೀಚಿನ ಪ್ರಗತಿಗಳು, ಪ್ರಧಾನ ಏಕಅಮೈನ್ ನ ಕಾರ್ಯದಲ್ಲಿ ಪ್ರಕಟಲಕ್ಷಣದ ಬದಲಾವಣೆಯು,  ಅಂತಿಮವಾಗಿ ಖಿನ್ನತೆಗೆ ಸುಲಭವಾಗಿ ಒಳಪಡುವುದಕ್ಕೆ ಸಂಬಂಧಿಸಿರುತ್ತದೆ ಎಂಬುದನ್ನು ಸೂಚಿಸಿವೆ. ಈ ಆವಿಷ್ಕಾರಗಳ ಹೊರತಾಗಿಯು, ಏಕಅಮೈನ್ ಕೊರತೆ ಮಾತ್ರ ಖಿನ್ನತೆಗೆ ಕಾರಣವಾಗಿಲ್ಲ.  ಹಿಂದಿನ ಎರಡು ದಶಕಗಳಲ್ಲಿ ನಡೆದಂತಹ ಸಂಶೋಧನೆಯು,  ಏಕಅಮೈನ್ ಕಲ್ಪನೆಯ ಬಹುಪರಿಮಿತಿಗಳನ್ನು ಬಹಿರಂಗಪಡಿಸಿತು. ಅಲ್ಲದೇ ಇದರ ವಿವರಣಾತ್ಮಕ ಕೊರತೆಯನ್ನು  ಮನೋವೈದ್ಯಕೀಯ ಸಮುದಾಯದಲ್ಲಿ ಎತ್ತಿ ತೋರಿಸಲಾಯಿತು. ಚಿತ್ತ ಸ್ಥಿತಿಯನ್ನು ವರ್ಧಿಸುವಂತಹ MAO ಪ್ರತಿರೋಧಕಗಳು ಮತ್ತು SSRI ಗಳ ಪರಿಣಾಮಗಳ ವೃದ್ಧಿಗೆ ವಾರಗಳ ಕಾಲದ ಚಿಕಿತ್ಸೆ ಅಗತ್ಯವಿರುತ್ತದೆ. ಆದರೂ ಲಭ್ಯ ಏಕಅಮೈನ್‌ಗಳಲ್ಲಿ ಉತ್ತೇಜನವು ಕೆಲವೇ ಗಂಟೆಗಳಲ್ಲಿ ಉಂಟಾಗುತ್ತದೆ. ಮತ್ತೊಂದು ಪ್ರತಿವಾದವು, ಏಕ ಅಮೈನ್ ಗಳನ್ನು ಬರಿದುಮಾಡುವ ಔಷಧ ಕಾರಕಗಳ ಪ್ರಯೋಗಳನ್ನು ಆಧರಿಸಿದೆ; ಪ್ರಧಾನವಾಗಿ ಲಭ್ಯವಿರುವ ಏಕ ಅಮೈನ್ ಗಳ ಸಾಂದ್ರತೆಯಲ್ಲಿ ಉದ್ದೇಶಪೂರ್ವಕ ಇಳಿಕೆಯಿಂದ, ಅದು ಔಷಧೋಪಚಾರಕ್ಕೆ ಒಳಗಾಗದ ಖಿನ್ನತೆಗೆ ಒಳಪಟ್ಟ ರೋಗಿಗಳ ಚಿತ್ತ ಸ್ಥಿತಿಯನ್ನು ಸ್ವಲ್ಪಮಟ್ಟಿಗೆ ಕಡಿಮೆಮಾಡುತ್ತದೆ. ಈ ಇಳಿಕೆಯು ಆರೋಗ್ಯಕರ ವ್ಯಕ್ತಿಗಳ ಚಿತ್ತ ಸ್ಥಿತಿಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಒಂದು ಸ್ಥಿರ [clarification needed] ಏಕಅಮೈನ್ ವ್ಯವಸ್ಥೆಯು, ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿಸಲು ಖಿನ್ನತೆ-ಶಮನಕಾರಿಗಳಿಗೆ ಅವಶ್ಯಕವಾಗಿದೆ, ಆದರೆ ಟೈನೆಪ್ಟಿನ್ ಮತ್ತು ಒಪಿಪ್ರಮಾಲ್ ನಂತಹ ಕೆಲವು ಔಷಧಿಗಳಲ್ಲಿ 

ಟೈನೆಪ್ಟಿನ್ ಸಿರೊಟೋನಿನ್ ಮರುಬಳಕೆ ವರ್ಧಕವಾಗಿದ್ದು, ಓಪಿಪ್ರಮೋಲ್ ಏಕಅಮೈನ್ ವ್ಯವಸ್ಥೆಯ ಮೇಲೆ ಯಾವ ಪರಿಣಾಮವನ್ನು ಹೊಂದಿರದಿದ್ದರೂ ಕೂಡ ಖಿನ್ನತೆ-ಶಮನಕಾರಿ ಗುಣಗಳನ್ನು ಹೊಂದಿವೆ.[ಸಾಕ್ಷ್ಯಾಧಾರ ಬೇಕಾಗಿದೆ] ಆಗಲೇ ಸೀಮಿತಗೊಂಡ ಏಕಅಮೈನ್ ಕಲ್ಪನೆಯನ್ನು ಸಾಮೂಹಿಕ ಮಾರಾಟ ಸಾಧನವಾಗಿ ಸಾರ್ವಜನಿಕರಿಗೆ ನೀಡುವ ಸಂದರ್ಭದಲ್ಲಿ ಮತ್ತಷ್ಟು ಸರಳಗೊಳಿಸಲಾಯಿತು. ಇದನ್ನು ಸಾಮಾನ್ಯವಾಗಿ "ರಾಸಾಯನಿಕ ಅಸಮತೋಲನ" ಎಂದು ಕರೆಯಲಾಯಿತು.

2003ರಲ್ಲಿ ಜೀನ್ ಮತ್ತು ಪರಿಸರದ ಸಂಪರ್ಕ (GxE) ವನ್ನು ಆಧಾರಕಲ್ಪನೆಯಾಗಿ ತೆಗೆದುಕೊಳ್ಳಲಾಯಿತು. ಇದನ್ನು ಜೀವನದ ಒತ್ತಡಗಳು ಉಳಿದವರನ್ನು ಹೊರತುಪಡಿಸಿ, ಕೆಲವು ವ್ಯಕ್ತಿಗಳಲ್ಲಿ ಮಾತ್ರವೇಕೆ ಖಿನ್ನತೆಯ ಪ್ರಸಂಗಗಳಿಗೆ ಮುನ್ಸೂಚಕಗಳಾಗಿವೆ ಎಂಬುದನ್ನು ವಿವರಿಸಲು ಬಳಸಲಾಯಿತು.ಸಿರೊಟೋನಿನ್-ಸಾಗಣೆಗೆ ಕೊಂಡಿಯಾದ ಉತ್ತೇಜಕ ಪ್ರದೇಶ (5-HTTLPR)ದ ಆಲೀಲ್ ವ್ಯತ್ಯಾಸಗಳ ಮೇಲೆ ಇದು ಅವಲಂಬಿಸಿದೆ. 2009 ಸಮೂಹ ವಿಶ್ಲೇಷಣೆಯು, ಜೀವನದ ಒತ್ತಡಭರಿತ ವಿದ್ಯಮಾನಗಳು ಖಿನ್ನತೆಗೆ ಸಂಬಂಧಿಸಿವೆ ಎಂಬುದನ್ನು ತೋರಿಸಿತು, ಆದರೆ 5-HTTLPR ಜೀನ್ ನಮೂನೆಯೊಂದಿಗೆ ಸಂಬಂಧಿಸಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಕಂಡುಬರಲಿಲ್ಲ. 2009 ರ ಮತ್ತೊಂದು ಸಮೂಹ-ವಿಶ್ಲೇಷಣೆಯು ಅನಂತರದ ಆವಿಷ್ಕಾರವನ್ನು ಒಪ್ಪಿಕೊಂಡಿದೆ. ಈ ಕ್ಷೇತ್ರದಲ್ಲಿ ನಡೆಸಲಾದ ಅಧ್ಯಯನಗಳ 2010ರ ವಿಮರ್ಶೆಯು, ಪರಿಸರದ ಪ್ರತಿಕೂಲ ಸ್ಥಿತಿಯನ್ನು ಅಂದಾಜು ಮಾಡಲು ಬಳಸುವ ವಿಧಾನ ಮತ್ತು ಅಧ್ಯಯನಗಳ ಫಲಿತಾಂಶಗಳ ನಡುವಿನ ಕ್ರಮಬದ್ಧ ಸಂಬಂಧವನ್ನು ಕಂಡುಕೊಂಡಿತು. ಈ ವಿಮರ್ಶೆ 2009 ರ ಎರಡೂ ಸಮೂಹ-ವಿಶ್ಲೇಷಣೆಗಳು ಅಂತಿಮವಾಗಿ ನಕಾರಾತ್ಮಕ ಅಧ್ಯಯನಗಳ ಕಡೆಗೆ ಪೂರ್ವಗ್ರಹ ಹೊಂದಿದೆ ಎಂಬುದನ್ನು ಕೂಡ ಕಂಡುಕೊಂಡಿತು. ಈ ವಿಶ್ಲೇಷಣೆಗಳು ಪ್ರತಿಕೂಲ ಸ್ಥಿತಿಯ ಸ್ವಯಂ ವರದಿ ಕ್ರಮಗಳನ್ನು ಬಳಸಿತ್ತು.

ಇತರ ಸಿದ್ಧಾಂತಗಳು

ಖಿನ್ನತೆಗೆ ಒಳಪಟ್ಟ ರೋಗಿಗಳ MRIಸ್ಕ್ಯಾನ್ ಗಳು, ಮಿದುಳಿ ನ ರಚನೆಯಲ್ಲಿ ಖಿನ್ನತೆಗೆ ಒಳಪಡದವರಿಗಿಂತ ಅನೇಕ ವ್ಯತ್ಯಾಸಗಳನ್ನು ತೋರಿಸಿವೆ. ಫಲಿತಾಂಶದಲ್ಲಿ ಕೆಲವೊಂದು ಅಸಂಗತತೆಗಳು ಇದ್ದರೂ ಕೂಡ, ಸಮೂಹ ವಿಶ್ಲೇಷಣೆಯು, ಚಿಕ್ಕ ಹಿಪೊಕ್ಯಾಂಪಸ್ ನ ಗಾತ್ರಕ್ಕೆ ಮತ್ತು ಅತೀ ತೀವ್ರತೆಯ ಚುಕ್ಕೆಗಳ ಹೆಚ್ಚಾದ ಸಂಖ್ಯೆಯನ್ನು ತೋರಿಸುತ್ತದೆ. ಅತೀ ತೀವ್ರತೆಯ ಚುಕ್ಕೆಗಳು , ರೋಗಿಗೆ ಹೆಚ್ಚು ವಯಸ್ಸಾದ ನಂತರ ಕಾಣಿಸಿಕೊಳ್ಳುತ್ತದೆ. ಅಲ್ಲದೇ ನಾಳೀಯ ಖಿನ್ನತೆ ಸಿದ್ಧಾಂತದ ವಿಕಾಸಕ್ಕೆ ಕಾರಣವಾಗುತ್ತದೆ.

ಖಿನ್ನತೆ ಮತ್ತು ಹಿಪೊಕ್ಯಾಂಪಸ್ ನ ನರಜನನದ ನಡುವೆ ಸಂಬಂಧವಿರಬಹುದು. ಇದು ಚಿತ್ತ ಸ್ಥಿತಿ ಮತ್ತು ಸ್ಮರಣೆಯ ಮಧ್ಯಭಾಗವಾಗಿದೆ. ಹಿಪೊಕ್ಯಾಂಪಸ್ ನರಕೋಶಗಳ ಕೊರತೆಯು ಖಿನ್ನತೆಗೆ ಒಳಪಟ್ಟ ಕೆಲವು ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಅಲ್ಲದೇ ದುರ್ಬಲ ಜ್ಞಾಪಕಶಕ್ತಿ ಮತ್ತು ದೀರ್ಘಕಾಲದ ಚಿತ್ತಸ್ಥಿತಿಯೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿರುತ್ತದೆ. ಔಷಧಗಳು ನರಜನನವನ್ನು ಉತ್ತೇಜಿಸುವ ಮೂಲಕ ಬಹುಶಃ ಮಿದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಬಹುದು. ಹೀಗೆ ಹಿಪೊಕ್ಯಾಂಪಸ್ ಒಟ್ಟು ಗಾತ್ರವು ಹೆಚ್ಚುತ್ತದೆ. ಈ ಹೆಚ್ಚಳವು ಚಿತ್ತ ಸ್ಥಿತಿ ಮತ್ತು ಜ್ಞಾಪಕಶಕ್ತಿಯನ್ನು ಪುನರ್ಸ್ಥಾಪಿಸಲು ಸಹಾಯಮಾಡಬಹುದು. ಖಿನ್ನತೆ ಮತ್ತು ಮೆದುಳಿನ ಮುಂಭಾಗದ ಸುತ್ತಲಿನ ಹೊದಿಕೆ ಭಾಗದ ನಡುವೆ ಸದೃಶ್ಯವಾದ ಸಂಬಂಧವನ್ನು ನೋಡಲಾಗಿದೆ. ಭಾವನಾತ್ಮಕ ವರ್ತನೆಯನ್ನು ಸರಿಹೊಂದಿಸುವುದಕ್ಕೆ ಇದನ್ನು ಸೂಚಿಸಲಾಗಿದೆ. ನರಜನನಕ್ಕೆ ಕಾರಣವಾದ ನ್ಯೂರೊಟ್ರೋಫಿನ್ ಗಳಲ್ಲಿ ಒಂದು ಮೆದುಳಿನಿಂದ ಹುಟ್ಟಿದ ನ್ಯೂರೊಟ್ರೋಫಿಕ್ ಅಂಶ(BDNF) ವಾಗಿದೆ. ಖಿನ್ನತೆಗೆ ಒಳಗಾದ ವ್ಯಕ್ತಿಯ ರಕ್ತದ ಪ್ಲಾಸ್ಮಾದಲ್ಲಿ BDNF ನ ಮಟ್ಟವನ್ನು ಸಹಜವಾದ ವ್ಯಕ್ತಿಯೊಂದಿಗೆ ಹೋಲಿಸಿದಾಗ ತೀವ್ರವಾಗಿ ಕಡಿಮೆಯಿರುತ್ತದೆ(ಮೂರುಪಟ್ಟಿಗಿಂತ ಹೆಚ್ಚು). ಖಿನ್ನತೆ-ಶಮನಕಾರಿ ಚಿಕಿತ್ಸೆಯು BDNF ನ ರಕ್ತದ ಮಟ್ಟವನ್ನು ಹೆಚ್ಚಿಸುತ್ತದೆ. ಅನೇಕ ಇತರ ಅಸ್ವಸ್ಥತೆಗಳಲ್ಲಿ ಪ್ಲಾಸ್ಮಾ BDNF ನ ಮಟ್ಟವು ಕಡಿಮೆ ಮಟ್ಟದಲ್ಲಿ ಕಂಡುಬಂದರೂ ಕೂಡ, BDNF ಖಿನ್ನತೆಗೆ ಕಾರಣವಾಗಿದೆ ಎಂಬುದಕ್ಕೆ ಹಾಗು ಖಿನ್ನತೆ-ಶಮನಕಾರಿಗಳ ಕಾರ್ಯವಿಧಾನದಲ್ಲಿ ಪಾತ್ರವಹಿಸುತ್ತದೆ ಎಂಬುದಕ್ಕೆ ಕೆಲವು ಸಾಕ್ಷಿಗಳಿವೆ.

ಪ್ರಧಾನ ಖಿನ್ನತೆಯು ಅತಿಚಟುವಟಿಕೆಯ ಕೆಳಮಿದುಳುಕುಳಿಯ-ಪಿಟ್ಯುಟರಿ-ಅಡ್ರೀನಲ್ ಆಕ್ಸಿಸ್ (HPA ಆಕ್ಸಿಸ್) ನಿಂದಲೂ ಉಂಟಾಗುತ್ತದೆ ಎಂಬುದಕ್ಕೆ ಕೆಲವೊಂದು ಸಾಕ್ಷ್ಯಾಧಾರಗಳಿವೆ. ಇದರಿಂದಾಗಿ ನರ-ಅಂತಃಸ್ರಾವಕವು ಒತ್ತಡಕ್ಕೆ ನೀಡುವಂತಹ ಪ್ರತಿಕ್ರಿಯೆಗೆ ಸದೃಶವಾಗಿರುವಂತಹ ಪರಿಣಾಮ ಉಂಟಾಗುತ್ತದೆ. ಸಂಶೋಧನೆಗಳು, ಕಾರ್ಟಿಸಾಲ್ ಹಾರ್ಮೋನ್ ನ ಮಟ್ಟ ಹೆಚ್ಚಿರುವುದು ಹಾಗು ಬೆಳೆದ ಪಿಟ್ಯುಟರಿ ಮತ್ತು ಅಡ್ರೀನಲ್ ಗ್ರಂಥಿಗಳನ್ನು ಬಹಿರಂಗಪಡಿಸುತ್ತದೆ. ಅಂತಃಸ್ರಾವಕ ವ್ಯವಸ್ಥೆಯ ಅಸ್ಥಿರತೆಗಳು ಪ್ರಧಾನ ಖಿನ್ನತೆಯನ್ನು ಒಳಗೊಂಡಂತೆ ಕೆಲವೊಂದು ಮನೋವೈದ್ಯಕೀಯ ಅಸ್ವಸ್ಥತೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಸೂಚಿಸಿವೆ. ಕೆಲಮಿದುಳುಕುಳಿ ಯಿಂದ ಕಾರ್ಟಿಕೋಟ್ರಾಫಿನ್-ಬಿಡುಗಡೆ ಮಾಡುವ ಹಾರ್ಮೋನ್ನ ಅತಿಯಾದ ಸ್ರವಿಸುವಿಕೆಯು ಇದನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ. ಅಲ್ಲದೇ ಇದು ಸಂವೇದನೆ ಮತ್ತು ಜಾಗೃತ ಸ್ಥಿತಿಯ ಲಕ್ಷಣಗಳಲ್ಲಿ ಒಳಗೊಂಡಿದೆ.

ಎಸ್ಟ್ರೋಜನ್ ಎಂಬ ಹಾರ್ಮೋನ್ ಖಿನ್ನತೆಯ ಅಸ್ವಸ್ಥತೆಗಳಿಗೆ ಸಂಬಂಧಿಸಿದೆ.ಪ್ರೌಢಾವಸ್ಥೆಯ ನಂತರ, ಪ್ರಸವ ಪೂರ್ವ ಕಾಲದಲ್ಲಿ, ಮತ್ತು ಮುಟ್ಟುನಿಲ್ಲುವಕಾಲದ ನಂತರ ಅದರ ಮಟ್ಟಗಳು ಕಡಿಮೆಯಾದ ಕಾಲದಲ್ಲಿ ಖಿನ್ನತೆಯ ಪ್ರಸಂಗಗಳು ಸಂಭವಿಸುವ ಅಪಾಯ ಹೆಚ್ಚಿವೆ. ಪ್ರತಿಯಾಗಿ, ಎಸ್ಟ್ರೋಜನ್ ಮಟ್ಟಗಳು ಕಡಿಮೆಯಿರುವಂತಹ ರಜಸ್ರವಪೂರ್ವದ ಮತ್ತು ಪ್ರಸವಾನಂತರದ ಅವಧಿಯು ಖಿನ್ನತೆ ಉಂಟಾಗಬಹುದಾದ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿವೆ. ಇದ್ದಕ್ಕಿದ್ದಂತೆ ಹಿಂದೆಸರಿಯುವುದು, ಏರಿಳಿತ ಅಥವಾ ಎಸ್ಟ್ರೋಜನ್ ನ ಮಟ್ಟ ಕಡಿಮೆಯಿರುವ ಅವಧಿಗಳು, ಗಮನಾರ್ಹ ಚಿತ್ತಸ್ಥಿತಿಯ ಕುಸಿತಕ್ಕೆ ಸಂಬಂಧಿಸಿದೆ. ಪ್ರಸವಾನಂತರದ, ಮುಟ್ಟುನಿಲ್ಲುವಕಾಲದ ಮೊದಲು, ಮತ್ತು ಮುಟ್ಟುನಿಲ್ಲುವಕಾಲದ ನಂತರದ ಖಿನ್ನತೆಯಲ್ಲಿ ವೈದ್ಯಕೀಯ ಚೇತರಿಕೆಯು ಎಸ್ಟ್ರೋಜನ್ ನ ಮಟ್ಟವನ್ನು ಸ್ಥಿರಗೊಳಿಸಿದ ನಂತರ ಅಥವಾ ಮರುಸ್ಥಾಪಿಸಿದ ನಂತರ ಪರಿಣಾಮಕಾರಿಯಾಗಿದೆ ಎಂಬುದನ್ನು ತೋರಿಸಲಾಗಿದೆ.

ಇತರ ಸಂಶೋಧನೆಗಳು, ಒಟ್ಟು ಎಲ್ಲಾ ಕೋಶಗಳ ಕಾರ್ಯಾಚರಣೆಗೆ ಅಗತ್ಯವಾಗಿರುವಂತಹ ಅಣುಗಳ ಪ್ರಮುಖ ಪಾತ್ರವನ್ನು ಶೋಧಿಸಿದೆ: ಉದಾ- ಸೈಟೊಕಿನ್ ಗಳು. ಪ್ರಧಾನ ಖಿನ್ನತೆಯ ಅಸ್ವಸ್ಥತೆಗೆ ಸಂಬಂಧಿಸಿದ ಲಕ್ಷಣಗಳು ರೋಗಗ್ರಸ್ಥ ನಡವಳಿಕೆಯನ್ನು ಹೊಂದಿರುವವರ ಲಕ್ಷಣಗಳಿಗೆ ಸದೃಶವಾಗಿರುತ್ತದೆ. ಈ ನಡವಳಿಕೆಯು ಪ್ರತಿರಕ್ಷಕ ವ್ಯವಸ್ಥೆಯು ಸೋಂಕಿನೊಂದಿಗೆ ಹೋರಾಡುತ್ತಿರುವಾಗ ದೇಹದ ಪ್ರತಿಕ್ರಿಯೆಯಾಗಿರುತ್ತದೆ. ಸೈಟೊಕಿನ್ ಗಳ ಪರಿಚಲನೆಯಲ್ಲಿನ ವೈಪರೀತ್ಯದ ಫಲವಾಗಿ ಉಂಟಾಗುವ ರೋಗಿಷ್ಠ ವರ್ತನೆಯ ಸಾಮರಸ್ಯವಿಲ್ಲದ ಲಕ್ಷಣದಿಂದ ಖಿನ್ನತೆ ಸಂಭವಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಉರಿಯೂತವನ್ನು ಉಂಟುಮಾಡುವ ಸೈಟೊಕಿನ್ ಗಳು ಖಿನ್ನತೆಯಲ್ಲಿ ಒಳಗೊಂಡಿವೆ ಎಂಬುದನ್ನು ವೈದ್ಯಕೀಯ ಸಾಹಿತ್ಯದ ಸಮೂಹ- ವಿಶ್ಲೇಷಣೆ ಪ್ರಬಲವಾಗಿ ಸೂಚಿಸಿದೆ. ಇದು ಖಿನ್ನತೆಗೆ ಒಳಪಟ್ಟ ವ್ಯಕ್ತಿಗಳಲ್ಲಿ ಪ್ರಯೋಗಕ್ಕೆ ಒಳಪಡದ ವ್ಯಕ್ತಿಗಳಿಗಿಂತIL-6 ಮತ್ತು TNF-α ನ ಅಧಿಕ ರಕ್ತದ ಪ್ರಮಾಣಗಳನ್ನು ತೋರಿಸಿತು.

ಮನೋವೈಜ್ಞಾನಿಕ

ವ್ಯಕ್ತಿತ್ವದ ಮತ್ತು ಅದರ ವಿಕಸನದ ಅನೇಕ ಅಂಶಗಳು ಖಿನ್ನತೆಯ ಸಂಭವ ಮತ್ತು ಅದರ ಮುಂದುವರೆಯುವಿಕೆಗೆ ಕಾರಣವಾಗಿವೆ ಇದರ ಜೊತೆಯಲ್ಲಿ ಸಾಮಾನ್ಯ ಮುನ್ಸೂಚಕವು ನಕಾರಾತ್ಮಕ ಭಾವುಕತೆಯ ಸ್ಥಿತಿ. ಖಿನ್ನತೆಯ ಪ್ರಸಂಗಗಳು ಪ್ರತಿಕೂಲ ಘಟನೆಗಳೊಂದಿಗೆ ಪ್ರಬಲವಾಗಿ ಸಂಬಂಧಿಸಿದ್ದರೂ ಕೂಡ, ವ್ಯಕ್ತಿಯು ಅದನ್ನು ನಿಭಾಯಿಸುವಂತಹ ವಿಶಿಷ್ಠ ಶೈಲಿಯು ಅವರ ಚೇತರಿಸಿಕೊಳ್ಳುವಿಕೆಯೊಂದಿಗೆ ಪರಸ್ಪರ ಸಂಬಂಧಿಸಿದೆ. ಇದರ ಜೊತೆಯಲ್ಲಿ, ಆತ್ಮಾಭಿಮಾನದ ಬಗೆಗಿನ ಕೀಳರಿಮೆ ಮತ್ತು ಸ್ವಯಂ ಸೋಲಿನ ಮನಸ್ಥಿತಿ ಅಥವಾ ವಿಕೃತ ಆಲೋಚನೆಗಳು ಕೂಡ ಖಿನ್ನತೆಗೆ ಸಂಬಂಧಿಸಿವೆ. ಧರ್ಮಶ್ರದ್ಧೆಯುಳ್ಳವರಲ್ಲಿ ಖಿನ್ನತೆ ಹೆಚ್ಚಾಗಿ ಕಂಡುಬರುವುದಿಲ್ಲ. ಅಲ್ಲದೇ ಅಂತಹವರಲ್ಲಿ ಖಿನ್ನತೆಯು ಬೇಗ ಗುಣವಾಗುತ್ತದೆ. ಯಾವ ವಿಷಯಗಳು ಖಿನ್ನತೆಗೆ ಕಾರಣವಾಗಿವೆ ಅಥವಾ ಯಾವುದು ಖಿನ್ನತೆಯ ಪರಿಣಾಮಗಳು ಎಂಬುದು ಯಾವಾಗಲು ಸ್ಪಷ್ಟವಾಗಿಲ್ಲ. ಆದರೂ, ತಮ್ಮ ಆಲೋಚನ ಕ್ರಮವನ್ನು ಬದಲಾಯಿಸಿಕೊಳ್ಳುವಂತಹ ಮತ್ತು ಅದರ ಬಗ್ಗೆ ಪರಿಶೀಲಿಸುವಂತಹ ಸಾಮರ್ಥ್ಯವುಳ್ಳ ಖಿನ್ನತೆಗೆ ಒಳಪಟ್ಟ ವ್ಯಕ್ತಿಗಳು ಸುಧಾರಿತ ಚಿತ್ತ ಸ್ಥಿತಿಯನ್ನು ಮತ್ತು ಆತ್ಮಾಭಿಮಾನವನ್ನು ತೋರಿಸುತ್ತಾರೆ.

ಅಮೇರಿಕದ ಮನೋವೈದ್ಯ ಆರನ್ T. ಬೆಕ್ ಎಂಬುವವರು ಜಾರ್ಜ್ ಕೆಲ್ಲಿ ಮತ್ತು ಆಲ್ಬರ್ಟ್ ಎಲ್ಲಿಸ್ ರವರ ಹಿಂದಿನ ಮಾದರಿಗಳನ್ನು ಅನುಸರಿಸಿ, 1960 ರ ಪೂರ್ವಾರ್ಧದಲ್ಲಿ ಈಗ ಹೆಸರಾಗಿರುವ ಖಿನ್ನತೆಯ ಅರಿವಿನ ಮಾದರಿಯನ್ನು ಬೆಳೆಸಿದರು. ಮೂರು ಪರಿಕಲ್ಪನೆಗಳು ಖಿನ್ನತೆಗೆ ಆಧಾರವಾಗಿವೆ ಎಂಬುದನ್ನು ಅವರು ಸೂಚಿಸಿದರು. ಒಬ್ಬರ ಬಗ್ಗೆ, ಪ್ರಪಂಚದ ಬಗ್ಗೆ ಮತ್ತು ಒಬ್ಬರ ಭವಿಷ್ಯದ ಬಗ್ಗೆ ತಪ್ಪಾಗಿ ಯೋಜಿಸುವಂತೆ ಮಾಡುವ ಅರಿವಿನ ತಪ್ಪುಗಳಿಂದ ಕೂಡಿದ ನಕಾರಾತ್ಮಕ ಆಲೋಚನೆಗಳ ತ್ರಿತ್ರಯಗಳಾಗಿವೆ. ಕೀಳರಿಮೆಯಂತಹ ಖಿನ್ನತೆಯ ಆಲೋಚನೆಯ ಮರುಕಳಿಸುವ ನಮೂನೆಗಳು , ಅಥವಾ ಸ್ಥೂಲಚಿತ್ರ ; ಮತ್ತು ವಿಕೃತ ಮಾಹಿತಿ ಸಂಸ್ಕರಣೆ. ಈ ತತ್ವಗಳ ಮೂಲಕ, ಅವರು ಅರಿವಿನ ವರ್ತನ ಚಿಕಿತ್ಸೆ(CBT)ಯ ರಚನಾ ವಿಧಾನವನ್ನು ಅಭಿವೃದ್ಧಿಪಡಿಸಿದರು.. ಅಮೇರಿಕದ ಮನಶ್ಶಾಸ್ತ್ರಜ್ಞ ಮಾರ್ಟಿನ್ ಸೆಲಿಗ್ಮನ್ ನ ಪ್ರಕಾರ, ಮಾನವರಲ್ಲಿರುವ ಖಿನ್ನತೆಯು ಪ್ರಯೋಗಾಲಯದಲ್ಲಿರುವ ಪ್ರಾಣಿಗಳ ಕಲಿತ ನಿಸ್ಸಹಾಯಕತೆಗೆ ಸದೃಶವಾಗಿದೆ. ಪ್ರಾಣಿಗಳು ತಪ್ಪಿಸಿಕೊಳ್ಳುವ ಸಾಮರ್ಥ್ಯವಿದ್ದರು ಕೂಡ ಪ್ರಯತ್ನಿಸದೆ ಅಹಿತಕರ ಪರಿಸ್ಥಿತಿಯಲ್ಲೇ ಉಳಿದು ಕೊಂಡಿರುತ್ತವೆ. ಏಕೆಂದರೆ ಅವುಗಳಿಗೆ ನಿಯಂತ್ರಣವಿಲ್ಲವೆಂಬುದನ್ನು ಅವು ಆರಂಭದಲ್ಲಿ ಕಲಿತಿರುತ್ತವೆ.

ಅನುಬಂಧ ಸಿದ್ಧಾಂತ, ಇದನ್ನು ಇಂಗ್ಲೀಷ್ ಮನೋವೈದ್ಯರಾದ ಜಾನ್ ಬೌಲ್ಬಿ 1960ರಲ್ಲಿ ಅಭಿವೃದ್ಧಿಪಡಿಸಿದರು. ಈ ಸಿದ್ಧಾಂತವು ಪ್ರೌಢಾವಸ್ಥೆಯಲ್ಲಿ ಖಿನ್ನತೆಯ ಅಸ್ವಸ್ಥತೆಗಳು ಮತ್ತು ಎಳೆಮಗುವಾಗಿದ್ದಾಗ ಅದರ ಪಾಲಕರೊಂದಿಗೆ ಹೊಂದಿದ್ದ ನಂಟಿನ ಗುಣಮಟ್ಟದ ಬಗ್ಗೆ ಸಂಬಂಧವನ್ನು ಮುಂಗಾಣುತ್ತಾರೆ. "ಮುಂಚಿನ ನಷ್ಟ, ಪಾಲಕರು ಅಥವಾ ಪೋಷಕರರಿಂದ ದೂರವಾದ ಮತ್ತು ಅವರ ತಿರಸ್ಕಾರಕ್ಕೆ ಒಳಗಾದ ಅನುಭವಗಳು(ಇಲ್ಲಿ ಪ್ರೀತಿಯಿಂದ ವಂಚಿತವಾದ ಮಗು ಎಂಬ ಸಂದೇಶವನ್ನು ನೀಡುತ್ತದೆ) ಅಭದ್ರತೆಯ ಆಂತರಿಕ ದೃಷ್ಟಿಕೋನಗಳ ಮಾದರಿಗಳಿಗೆ(ಇಂಟರ್‌ನಲ್ ವರ್ಕಿಂಗ್ ಮಾಡಲ್) ದಾರಿ ಕಲ್ಪಿಸಬಹುದು. ಪ್ರೀತಿವಂಚಿತ ಮತ್ತು ಪ್ರೀತಿಯಿಲ್ಲದ ಅಥವಾ ನಂಬಿಕೆಗೆ ಅರ್ಹವಲ್ಲದ ಅನುಬಂಧದ ಸ್ವಯಂ ಆಂತರಿಕ ಅರಿವಿನ ಚಿತ್ರಣಗಳು ಬೆಕ್‌ನ ಅರಿವಿನ ತ್ರಿತ್ರಯದ ಭಾಗಗಳಿಗೆ ಸುಸಂಗತವಾಗಿದೆ. ಬಹು ವಿಧದ ಅಧ್ಯಯನಗಳು ಅನುಬಂಧ ಸಿದ್ಧಾಂತದ ಮೂಲ ತತ್ತ್ವಗಳನ್ನು ಎತ್ತಿಹಿಡಿದರೆ, ಸ್ವಯಂ ವರದಿಯ ಪೂರ್ವ ಅನುಬಂಧ ಮತ್ತು ಅನಂತರದ ಖಿನ್ನತೆ ಸಾಬೀತುಪಡಿಸುವ ರೀತಿಯಲ್ಲಿ ಸಂಬಂಧಿಸಿದೆಯೇ ಎಂಬ ಬಗ್ಗೆ ಸಂಶೋಧನೆ ಅಪೂರ್ಣವಾಗಿವೆ.

ಖಿನ್ನತೆಗೆ ಒಳಗಾದ ವ್ಯಕ್ತಿಗಳು ನಕಾರಾತ್ಮಕ ಸಂಗತಿಗಳಿಗಾಗಿ ಸ್ವಯಂ ತೆಗಳಿಕೊಳ್ಳುತ್ತಾರೆ, ಅಲ್ಲದೇ , ಸ್ವಯಂವರದಿಯ ಖಿನ್ನತೆಯೊಂದಿಗೆ ಆಸ್ಪತ್ರೆಗೆ ದಾಖಲಾದ ಹರೆಯ ವಯಸ್ಕ ವ್ಯಕ್ತಿಗಳ 1993 ರ ಅಧ್ಯಯನವು, ನಕಾರಾತ್ಮಕ ಸಂಗತಿಗಳಿಗೆ ತಮ್ಮನ್ನು ದೂಷಿಸಿಕೊಳ್ಳುವಂತಹ ವ್ಯಕ್ತಿಗಳು ಸಕಾರಾತ್ಮಕ ಫಲಿತಾಂಶಗಳಿಗೆ ತಾವು ಕಾರಣವೆಂದುಕೊಳ್ಳುವುದಿಲ್ಲ ಎಂಬುದನ್ನು ತೋರಿಸಿದೆ. ಈ ಪ್ರವೃತ್ತಿಯು ಖಿನ್ನತೆಯ ಆರೋಪಣೆ ,ಅಥವಾ ನಿರಾಶಾಜನಕ ವಿವರಣಾತ್ಮಕ ಶೈಲಿಯ ಗುಣಲಕ್ಷಣವಾಗಿದೆ. ಅಲ್ಬರ್ಟ್ ಬ್ಯಾಂಡ್ಯುರರವರು ಕೆನಡಾದ ಸಾಮಾಜಿಕ ಮನಶ್ಶಾಸ್ತ್ರಜ್ಞರಾಗಿದ್ದು, ಸಾಮಾಜಿಕ ಅರಿವು ಸಿದ್ಧಾಂತಕ್ಕೆ ಸಂಬಂಧಿಸಿದ್ದಾರೆ. ಇವರ ಪ್ರಕಾರ ಖಿನ್ನತೆಗೆ ಒಳಗಾದ ವ್ಯಕ್ತಿಗಳು ತಮ್ಮ ಬಗ್ಗೆ ನಕಾರಾತ್ಮಕ ನಂಬಿಕೆಗಳನ್ನು ಹೊಂದಿರುತ್ತಾರೆ. ಈ ನಕಾರಾತ್ಮಕ ನಂಬಿಕೆಗಳು ಸೋಲಿನ ಅನುಭವದ ಮೇಲೆ, ಸಾಮಾಜಿಕ ಮಾದರಿಗಳ ವೈಫಲ್ಯದ ವೀಕ್ಷಣೆಯ ಮೇಲೆ ಹಾಗು ಅವರು ಯಶಸ್ವಿಯಾಗಬಹುದೆಂಬ ಸಾಮಾಜಿಕ ಪ್ರೇರಣೆಯ ಕೊರತೆಯ ಮೇಲೆ ಅವಲಂಬಿಸಿರುತ್ತವೆ. ಅಲ್ಲದೇ ಉದ್ವೇಗ ಮತ್ತು ಒತ್ತಡವನ್ನು ಒಳಗೊಂಡಂತೆ ಅವರದ್ದೇ ಆದಂತಹ ದೈಹಿಕ ಮತ್ತು ಮಾನಸಿಕ ಸ್ಥಿತಿಗಳ ಮೇಲೆ ಆಧರಿಸಿರುತ್ತದೆ. ಈ ಪ್ರಭಾವಗಳಿಂದಾಗಿ ನಕಾರಾತ್ಮಕ ಸ್ವ-ಪರಿಕಲ್ಪನೆ ಮತ್ತು ಸ್ವಸಾಮರ್ಥ್ಯದಲ್ಲಿ ನಂಬಿಕೆಯ ಕೊರತೆ ಉಂಟಾಗುತ್ತದೆ; ಇದರ ಅರ್ಥ ಸಂಗತಿಗಳ ಮೇಲೆ ಪ್ರಭಾವಬೀರುವ ಅಥವಾ ಅಥವಾ ವೈಯಕ್ತಿಕ ಗುರಿಗಳನ್ನು ಸಾಧಿಸಬಲ್ಲೆವೆಂಬ ನಂಬಿಕೆ ಕಳೆದುಕೊಳ್ಳುತ್ತಾರೆ.

ಮಹಿಳೆಯರಲ್ಲಿ ಖಿನ್ನತೆಯ ಪರಿಶೀಲನೆಯು ಅಂತಹ ಒಳಗಾಗಬಹುದಾದ ಅಂಶಗಳನ್ನು ಸೂಚಿಸುತ್ತದೆ—ಉದಾಹರಣೆಗೆ ಎಳೆಯ ವಯಸ್ಸಿನಲ್ಲೆ ತಾಯ್ತನವನ್ನು ಕಳೆದುಕೊಳ್ಳುವುದು, ವಿಶ್ವಾಸದ ಸಂಬಂಧದ ಕೊರತೆ, ಮನೆಯಲ್ಲಿ ಅನೇಕ ಎಳೆಯ ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಮತ್ತು ನಿರುದ್ಯೋಗ— ಖಿನ್ನತೆಯ ಅಪಾಯವನ್ನು ಹೆಚ್ಚಿಸಲು ಜೀವನದ ಒತ್ತಡಗಳೊಂದಿಗೆ ಪರಸ್ಪರ ಕಾರ್ಯನಡೆಸಬಹುದು. ಹಿರಿಯ ವಯಸ್ಕರಲ್ಲಿ ನೋಡಬಹುದಾದ ಅಂಶಗಳೆಂದರೆ: ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು,ಕಾಳಜಿವಹಿಸುವ(ಪಾಲಕ) ಅಥವಾ ಕಾಳಜಿಬಯಸುವ ಪಾತ್ರಕ್ಕೆ ಪರಿವರ್ತನೆಯಿಂದಾಗಿ ಹೆಂಡತಿ ಅಥವಾ ಗಂಡ ಅಥವಾ ಪ್ರೌಢಾವಸ್ಥೆಯ ಮಕ್ಕಳೊಂದಿಗೆ ಸಂಬಂಧದಲ್ಲಿ ಉಂಟಾಗುವಂತಹ ಬದಲಾವಣೆಗಳು, ಅತ್ಯಂತ ಪ್ರಮುಖರಾದವರ ಸಾವು, ಅಥವಾ ಹಳೆಯ ಸ್ನೇಹಿತರ ಲಭ್ಯತೆಯಲ್ಲಿ ಅಥವಾ ಸಾಮಾಜಿಕ ಸಂಬಂಧಗಳ ಗುಣಮಟ್ಟದಲ್ಲಿ ಅವರದ್ದೇ ಆದಂತಹ ಆರೋಗ್ಯಕ್ಕೆ ಸಂಬಂಧಿಸಿದ ಜೀವನದ ಬದಲಾವಣೆಗಳಿಂದ ಉಂಟಾಗುವ ಮಾರ್ಪಾಡುಗಳು.

ಖಿನ್ನತೆಯನ್ನು ಅರ್ಥಮಾಡಿಕೊಳ್ಳುವಿಕೆಯು, ಮನೋವಿಜ್ಞಾನದ ಮನೋವಿಶ್ಲೇಷಣ ಪದ್ಧತಿ ಮತ್ತು ಮಾನವತಾವಾದ ವಿಭಾಗಗಳಿಂದಲೂ ಕೂಡ ಸಹಾಯವನ್ನು ಪಡೆದಿದೆ. ಆಸ್ಟ್ರೇಲಿಯಾದ ಮನೋವೈದ್ಯ ಸಿಗ್ಮಂಡ್ ಫ್ರಾಯ್ಡ್ ನ ಸಾಂಪ್ರದಾಯಿಕ ಮನೋವಿಶ್ಲೇಷಣ ದೃಷಿಕೋನದಿಂದ, ಖಿನ್ನತೆ, ಅಥವಾ ವಿಷಣ್ಣತೆ ಯು, ಬಹುಶಃ ವ್ಯಕ್ತಿಗಳ ನಡುವೆ ಇರುವಂತಹ ಪರಸ್ಪರ ಸಂಬಂಧದ ನಷ್ಟ ಮತ್ತು ಬಾಲ್ಯದ ಅನುಭವಗಳಿಗೆ ಸಂಬಂಧಿಸಿದೆ. ಅಸ್ಥಿತ್ವಕ್ಕೆ ಸಂಬಂಧಿಸಿದ ಚಿಕಿತ್ಸಕರು, ಖಿನ್ನತೆಯನ್ನು ಪ್ರಸಕ್ತದ ಜೀವನದ ಅರ್ಥ ಮತ್ತು ಭವಿಷ್ಯದ ಮುನ್ನೋಟದ ಕೊರತೆಗೆ ಸಂಬಂಧಿಸಿದೆ ಎಂದಿದ್ದಾರೆ. ಮಾನವಿಕ ಮನೋವಿಜ್ಞಾನದ ಸಂಸ್ಥಾಪಕರಾದ ಅಮೆರಿಕದ ಮನಶ್ಶಾಸ್ತ್ರಜ್ಞ ಅಬ್ರಾಹ್ಯಾಮ್ ಮ್ಯಾಸ್ಲೊ ರವರು, ಜನರು ತಮ್ಮ ಅಗತ್ಯಗಳನ್ನು ಪೂರೈಸಿಗೊಳ್ಳಲು ಅಥವಾ ಸ್ವಯಂ ವಾಸ್ತವೀಕರಣ(ಅವರ ಸಂಪೂರ್ಣ ಶಕ್ತಿಯನ್ನು ಅರ್ಥಮಾಡಿಕೊಳ್ಳಲು)ವೈಫಲ್ಯದಿಂದ ಖಿನ್ನತೆ ಉಂಟಾಗಬಹುದು ಎಂದು ತಿಳಿಸಿದ್ದಾರೆ.

ಸಾಮಾಜಿಕ

ಬಡತನ ಮತ್ತು ಸಾಮಾಜಿಕ ಪ್ರತ್ಯೇಕತೆಯು ಸಾರ್ವತ್ರಿಕವಾಗಿ ಮಾನಸಿಕ ಸಮಸ್ಯೆಗಳ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿವೆ. ಮಕ್ಕಳ ಮೇಲಿನ ದೌರ್ಜನ್ಯವು (ದೈಹಿಕವಾಗಿ, ಭಾವನಾತ್ಮಕವಾಗಿ, ಲೈಂಗಿಕವಾಗಿ, ಅಥವಾ ತಿರಸ್ಕರಿಸುವ ಮೂಲಕ) ಕೂಡ ನಂತರದ ಜೀವನದಲ್ಲಿ ಖಿನ್ನತೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದಾದ ಅಪಾಯದೊಂದಿಗೆ ಸಂಬಂಧಿಸಿದೆ. ಮಗುವು ಬೆಳೆಯುತ್ತಿರುವಂತಹ ಅವಧಿಯಲ್ಲಿ ಹೇಗೆ ಸಮಾಜ ಜೀವಿಯಾಗಬೇಕೆಂಬುದನ್ನು ಕಲಿತು ಕೊಳ್ಳುವುದರಿಂದ ಇಂತಹ ಒಂದು ಸಂಬಂಧವು ತರ್ಕಸಮ್ಮತವಾಗಿರುತ್ತದೆ. ಪಾಲಕನಿಂದ ಶಿಶುವಿನ ಮೇಲೆ ದೌರ್ಜನ್ಯವು ವಿಕಸನಗೊಳ್ಳುತ್ತಿರುವ ಮಗುವಿನ ವ್ಯಕ್ತಿತ್ವವನ್ನು ವಿಕಾರಗೊಳಿಸುತ್ತದೆ. ಅಲ್ಲದೇ ಮಾನಸಿಕ ಮತ್ತು ಭಾವಾನಾತ್ಮಕ ಸ್ಥಿತಿಗಳನ್ನು ದುರ್ಬಲಗೊಳಿಸುವ ಖಿನ್ನತೆಯ ಹೆಚ್ಚಿನ ಅಪಾಯವನ್ನು ಸೃಷ್ಟಿಸುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ತೊಂದರೆಗಳು , ಉದಾಹರಣೆಗೆ ತಂದೆ ತಾಯಿಯ (ವಿಶೇಷವಾಗಿ ತಾಯಿಯ) ಖಿನ್ನತೆ, ವೈವಾಹಿಕ ವೈವಾಹಿಕ ಸಂಘರ್ಷ ಅಥವಾ ವಿವಾಹವಿಚ್ಛೇದನ, ತಂದೆ ಅಥವಾ ತಾಯಿಯ ಸಾವು, ಅಥವಾ ಮಕ್ಕಳ ಪೋಷಣೆಯಲ್ಲಿ ಇತರೆ ತೊಂದರೆಗಳು ಖಿನ್ನತೆಯನ್ನು ಉಂಟುಮಾಡಬಹುದಾದ ಹೆಚ್ಚುವರಿ ಅಂಶಗಳಾಗಿವೆ. ಪ್ರೌಢಾವಸ್ಥೆಯಲ್ಲಿ ಜೀವನದ ಒತ್ತಡಭರಿತ ಘಟನೆಗಳು ಪ್ರಧಾನ ಖಿನ್ನತೆಯ ಪ್ರಸಂಗಗಳ ಆಗಮನಕ್ಕೆ ಪ್ರಬಲವಾಗಿ ಸಂಬಂಧಿಸಿವೆ. ಇಂತಹ ಪ್ರಕರಣದಲ್ಲಿ, ಸಾಮಾಜಿಕ ನಿರಾಕರಣಕ್ಕೆ ಸಂಬಂಧಿಸಿದಂತಹ ಜೀವನದ ಸಂಗತಿಗಳು ವಿಶೇಷವಾಗಿ ಖಿನ್ನತೆಗೆ ಸಂಬಂಧಿಸಿದಂತೆ ತೋರುತ್ತವೆ. ಒತ್ತಡಭರಿತ ಜೀವನದ ಘಟನೆಗಳಿಗೆ ಖಿನ್ನತೆಯ ಪ್ರಥಮ ಪ್ರಸಂಗವು ಪುನರಾವರ್ತಿತ ಪ್ರಸಂಗಗಳಿಗಿಂತ ಮುಂಚಿತವಾಗಿ ತಕ್ಷಣವೇ ಕಾಣಿಸಿಕೊಳ್ಳುತ್ತದೆ. ಈ ಸಾಕ್ಷ್ಯಯು ಖಿನ್ನತೆಯು ಮರುಕಳಿಸುವುದರಿಂದ ಜನರು ಜೀವನದ ಒತ್ತಡಕ್ಕೆ ವ್ಯಕ್ತಿಯ ಸಂವೇದನತ್ವವನ್ನು ತೀವ್ರಗೊಳಿಸುತ್ತದೆ ಎಂಬ ಊಹೆಗೆ ಹೊಂದಿಕೆಯಾಗುತ್ತದೆ.

ಜೀವನದ ಒತ್ತಡಭರಿತ ಸಂಗತಿಗಳು ಮತ್ತು ಸಾಮಾಜಿಕ ಬೆಂಬಲದ(ಕೌಟುಂಬಿಕ ಬೆಂಬಲ) ನಡುವೆ ಇರುವ ಸಂಬಂಧವು ಚರ್ಚಾಸ್ಪದ ವಿಷಯವಾಗಿದೆ. ಸಾಮಾಜಿಕ ಬೆಂಬಲದ ಕೊರತೆಯಿಂದ ಜೀವನದ ಒತ್ತಡವು ಖಿನ್ನತೆಗೆ ದಾರಿ ಕಲ್ಪಿಸಬಹುದು, ಅಥವಾ ಕೌಟುಂಬಿಕ ಬೆಂಬಲದ ಕೊರತೆಯು ನೇರವಾಗಿ ಖಿನ್ನತೆಯೆಡೆಗೆ ಒಯ್ಯುವ ಒಂದು ವಿಧದ ಪ್ರಯಾಸವನ್ನು ಉಂಟುಮಾಡಬಹುದು. ನೆರೆಯ ಸಾಮಾಜಿಕ ಅವ್ಯವಸ್ಥೆ, ಉದಾಹರಣೆಗೆ, ಅಪರಾಧ ಅಥವಾ ನ್ಯಾಯಬಾಹಿರ ಮಾದಕವಸ್ತುಗಳ ಕಾರಣದಿಂದ ಅವ್ಯವಸ್ಥೆಯು ಖಿನ್ನತೆಗೆ ಅಪಾಯಕಾರಿ ಅಂಶವೆನ್ನುವುದಕ್ಕೆ ಸಾಕ್ಷ್ಯಾಧಾರವಿದೆ. ಅಲ್ಲದೇ ಉತ್ತಮ ಸೌಕರ್ಯಗಳೊಂದಿಗೆ ನೆರೆಯ ಸಮಾಜಾರ್ಥಿಕ ಉನ್ನತ ಸ್ಥಾನಮಾನವು ರಕ್ಷಕ ಅಂಶವಾಗಿದೆ. ಕಾರ್ಯನಿರ್ವಹಿಸುವ ಸ್ಥಳದಲ್ಲಿ ಪ್ರತಿಕೂಲ ಪರಿಸ್ಥಿತಿಗಳು, ಅದರಲ್ಲೂ ವಿಶೇಷವಾಗಿ, ನಿರ್ಧಾರ ತೆಗೆದುಕೊಳ್ಳಲು ಕಡಿಮೆ ಅವಕಾಶವಿರುವ ಬೇಡಿಕೆಯಿರುವ ಕೆಲಸಗಳು ಖಿನ್ನತೆಯೊಂದಿಗೆ ಸಂಬಂಧಿಸಿರುತ್ತವೆ. ಆದರೂ, ವಿವಿಧತೆ ಮತ್ತು ಗೊಂದಲಕಾರಿ ಅಂಶಗಳು ಇವುಗಳ ನಡುವಿನ ಸಂಬಂಧವು ಕಾರಣಾತ್ಮಕವಾದದ್ದು ಎಂಬುದನ್ನು ದೃಢಪಡಿಸಲು ಕಷ್ಟವಾಗುವಂತೆ ಮಾಡಿವೆ.

ವಿಕಸನೀಯ

ವಿಕಸನೀಯ ಸಿದ್ಧಾಂತದ ದೃಷ್ಟಿಕೋನದಿಂದ, ವ್ಯಕ್ತಿಯ ಪುನರುತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನ ಖಿನ್ನತೆಯನ್ನು ಕೆಲವೊಂದು ಉದಾಹರಣೆಗಳಲ್ಲಿ ಊಹಿಸಲಾಗಿದೆ. ಖಿನ್ನತೆಗೆ ವಿಕಸನೀಯ ಮಾರ್ಗಗಳು ಮತ್ತು ವಿಕಸನೀಯ ಮನೋವಿಜ್ಞಾನವು, ನಿರ್ದಿಷ್ಟ ಕಾರ್ಯವಿಧಾನಗಳಿಗೆ ಆಧಾರವಾಗಿದೆ. ಈ ಮೂಲಕ ಖಿನ್ನತೆಯು ಆನುವಂಶಿಕವಾಗಿ ಮಾನವರ ಜೀನ್ ರಾಶಿಗಳಲ್ಲಿ ಸೇರಿಕೊಂಡಿರಬಹುದು. ಅಲ್ಲದೇ ಖಿನ್ನತೆಯ ಕೆಲವೊಂದು ಭಾಗಗಳು ಅನುವರ್ತನಗಳು(ಹೊಂದಿಕೊಳ್ಳುವಿಕೆ) ಎಂದು ಸೂಚಿಸುವ ಮೂಲಕ ಖಿನ್ನತೆಯ ಅಧಿಕ ಆನುವಂಶಿಕತೆ ಮತ್ತು ವ್ಯಾಪನೆಗೆ ಕಾರಣ ನೀಡಬಹುದು. ಉದಾಹರಣೆಗೆ ಅನುಬಂಧಕ್ಕೆ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಸಂಬಂಧಿಸಿದ ವರ್ತನೆಗಳು. ಸಂಬಂಧಗಳನ್ನು ಅಥವಾ ಸಂಪನ್ಮೂಲಗಳನ್ನು ನಿಯಂತ್ರಿಸಲು ಪ್ರಸಕ್ತ ವರ್ತನೆಗಳನ್ನು ಅನುವರ್ತನಗಳ ರೂಪದಲ್ಲಿ ವಿವರಿಸಲಾಗಿದ್ದರೂ ಕೂಡ, ಆಧುನಿಕ ಪರಿಸರಗಳಲ್ಲಿ ಫಲಿತಾಂಶವು ಹೊಂದಿಕೊಳ್ಳದಿರಬಹುದು.

ಮತ್ತೊಂದು ದೃಷ್ಟಿಕೋನದಿಂದ, ಸಲಹೆ ನೀಡುವ ಚಿಕಿತ್ಸಕ ಖಿನ್ನತೆಯನ್ನು ಬಹುಶಃ ಜೀವ ರಾಸಾಯನಿಕ ಕಾಯಿಲೆಯಂತೆ ಅಥವಾ ಅಸ್ವಸ್ಥತೆಯಂತೆ ನೋಡದಿರಬಹುದು. ಆದರೆ ಖಿನ್ನತೆಯನ್ನು "ಜಾತಿ- ವ್ಯಾಪಿ ವಿಕಸಿಸಿದ ಭಾವನಾತ್ಮಕ ಕಾರ್ಯಕ್ರಮಗಳ ಗುಂಪಿನಂತೆ ನೋಡಬಹುದು. ಈ ಕಾರ್ಯಕ್ರಮಗಳು ಹೆಚ್ಚಾಗಿ ಗ್ರಹಿಕೆಯಿಂದ,ಬಹುಮಟ್ಟಿಗೆ ಯಾವಾಗಲು ಅತಿಯಾದ ನಕಾರಾತ್ಮಕ ಆಲೋಚನೆಗಳಿಂದ, ವೈಯಕ್ತಿಕ ಉಪಯುಕ್ತತೆಯಲ್ಲಿ ಉಂಟಾದ ಪ್ರಮುಖ ಕುಸಿತದಿಂದ ಸಕ್ರಿಯವಾಗುತ್ತವೆ. ಇದು ಕೆಲವೊಮ್ಮೆ ತಪ್ಪಿತಸ್ಥ ಮನೋಭಾವ, ಅವಮಾನ ಅಥವಾ ಗ್ರಹಿಸುವ ತಿರಸ್ಕಾರಕ್ಕೆ ಸಂಬಂಧಿಸಿರಬಹುದು". ಈ ಗುಂಪು ಹಿಂದೆ ಮಾನವರು ಆಹಾರಕ್ಕಾಗಿ ಬೇಟೆಯಾಡುತ್ತಿದ್ದ ಕಾಲದಲ್ಲಿ ವಯಸ್ಸಾದ ಬೇಟೆಗಾರರಲ್ಲಿ ಬಿಂಬಿತವಾಗಿವೆ. ವಯಸ್ಸಾದ ನಂತರ ಕುಂದುತ್ತಿರುವ ಅವರ ಶಕ್ತಿಕೌಶಲಗಳಿಂದಾಗಿ ಸಮಾಜದಲ್ಲಿ ಕಡೆಗಣಿತರಾದರು. ಅದನ್ನು ಇಂದಿನ ಸಮಾಜದ ಅಪ್ರಧಾನ ಸದಸ್ಯವರ್ಗದಲ್ಲಿ ಕಾಣಬಹುದು. ಇಂತಹ ಅಪ್ರಧಾನತೆಯಿಂದಾಗಿ ಉಂಟಾಗುವಂತಹ ನಿಷ್ಪ್ರಯೋಜಕತೆಯ ಭಾವನೆಗಳಿಗೆ ಸ್ನೇಹಿತರಿಂದ ಮತ್ತು ಬಂಧುಗಳಿಂದ ಬೆಂಬಲ ಸಿಗಬಹುದು. ಮತ್ತಷ್ಟು ನೋವನ್ನು ಉಂಟುಮಾಡುವ ಕ್ರಮಗಳನ್ನು ತಪ್ಪಿಸಲು ದೈಹಿಕ ನೋವು ಹುಟ್ಟಿಕೊಂಡ ರೀತಿಗೆ ಸದೃಶವಾಗಿ, ಸಂಕಷ್ಟದ ಪರಿಸ್ಥಿತಿಗಳಿಗೆ ಆತುರದ ಮತ್ತು ಹೊಂದಿಕೆಯಾಗದ ಪ್ರತಿಕ್ರಿಯೆಗಳನ್ನು ತಪ್ಪಿಸಲು ಮಾನಸಿಕ ದುಃಖ ಹುಟ್ಟಿಕೊಂಡಿರಬಹುದು.

ಔಷಧಿ ಮತ್ತು ಆಲ್ಕೋಹಾಲ್ ಬಳಕೆ

DSM-IV ಯ ಪ್ರಕಾರ, "ವ್ಯಕ್ತಿಯ ಚಿತ್ತಸ್ಥಿತಿಯ ಅಸ್ವಸ್ಥತೆಗೆ ಮಾದಕವಸ್ತು ಸೇವನೆಯ ಶಾರೀರಿಕ ಪರಿಣಾಮಗಳು ನೇರ ಕಾರಣ" ಎಂಬ ನಂಬಿಕೆಯಿದ್ದಲ್ಲಿ ಚಿತ್ತಸ್ಥಿತಿಯ ಅಸ್ವಸ್ಥತೆಯನ್ನು ನಿರ್ಣಯಿಸಲು ಸಾಧ್ಯವಾಗುವುದಿಲ್ಲ; ಪ್ರಧಾನ ಖಿನ್ನತೆಯನ್ನು ಹೋಲುವ ಲಕ್ಷಣವು ಮಾದಕವಸ್ತು ಸೇವನೆ ಅಥವಾ ಮಾದಕವಸ್ತು ಸೇವನೆಯಿಂದ ಉಂಟಾದ ಪ್ರತಿಕೂಲ ಪರಿಣಾಮದಿಂದ ಉಂಟಾಗಿದೆ ಎಂದು ನಂಬಿದ್ದರೆ, ಇದನ್ನು "ಮಾದಕವಸ್ತು ಪ್ರೇರಿತ ಚಿತ್ತಸ್ಥಿತಿಯ ಅಸ್ವಸ್ಥತೆ" ಯೆಂದು ಉಲ್ಲೇಖಿಸಲಾಗುತ್ತದೆ. ಮದ್ಯಸೇವನೆ ಚಟ ಅಥವಾ ಅತಿಯಾದ ಆಲ್ಕೋಹಾಲ್ ಸೇವನೆ ಪ್ರಧಾನ ಖಿನ್ನತೆಯನ್ನು ಉಂಟುಮಾಡಬಹುದಾದ ಸಾಧ್ಯತೆ ಹೆಚ್ಚಿಸುತ್ತದೆ. ಆಲ್ಕೊಹಾಲ್ ನಂತೆ, ಬೆನ್ಜೋಡಿಯಜೆಪೈನ್ ಗಳು ಕೂಡ ಕೇಂದ್ರೀಯ ನರಮಂಡಲದ ಉಪಶಾಮಕಗಳಾಗಿವೆ; ಈ ವರ್ಗದ ಔಷಧಿಯನ್ನು ಸಾಮಾನ್ಯವಾಗಿ ನಿದ್ರಾಹೀನತೆ, ಆತಂಕ, ಮತ್ತು ಸ್ನಾಯುಗಳ ಸೆಳೆತದ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಆಲ್ಕೊಹಾಲ್ ನಂತೆಯೇ ಬೆನ್ಜೋಡಿಯಾಜೆಪೈನ್‌ಗಳು ಪ್ರಧಾನ ಖಿನ್ನತೆಯನ್ನು ಹೆಚ್ಚಿಸಿಬಹುದಾದ ಸಾಧ್ಯತೆ ಹೊಂದಿವೆ. ನರ ರಾಸಾಯನಿಕಗಳ ಮೇಲೆ ಔಷಧಿಗಳು ಬೀರುವಂತಹ ಪರಿಣಾಮದಿಂದಾಗಿ ಖಿನ್ನತೆಯ ಸಾಧ್ಯತೆಗಳು ಹೆಚ್ಚಾಗುತ್ತದೆ. ಉದಾಹರಣೆಗೆ , ಸಿರೊಟೋನಿನ್ ಮತ್ತು ನೊರೆಪೈನ್‌ಫ್ರಿನ್ ನ ಕಡಿಮೆ ಮಟ್ಟಗಳು ಬೆನ್ಜೋಡಿಯಜೆಪೈನ್‌ಗಳ ದೀರ್ಘಕಾಲದ ಬಳಕೆ ಖಿನ್ನತೆಯನ್ನು ಉಂಟುಮಾಡಬಹುದು ಅಥವಾ ಇನ್ನಷ್ಟು ಹೆಚ್ಚಿಸಬಹುದು, ಅಥವಾ ಖಿನ್ನತೆಯು ಸುದೀರ್ಘ ತ್ಯಜಿಸುವ ಲಕ್ಷಣದ (ಮಾದಕವಸ್ತು,ಆಲ್ಕೋಹಾಲ್ ಸೇವನೆ ನಿಲ್ಲಿಸುವುದು) ಭಾಗವಾಗಬಹುದು.

ರೋಗನಿರ್ಣಯ

ಪ್ರಾಯೋಗಿಕ ಅಂದಾಜು

ರೋಗನಿರ್ಣಯದ ಅಂದಾಜನ್ನು ಬಹುಶಃ ತರಬೇತಿ ನೀಡಲಾದ ಸಾಮಾನ್ಯ ವೈದ್ಯ, ಅಥವಾ ಮನೋವೈದ್ಯ ಅಥವಾ ಮನಶ್ಶಾಸ್ತ್ರಜ್ಞ ಕೈಗೊಳ್ಳಬಹುದು,. ಇವರು ವ್ಯಕ್ತಿಯ ಪ್ರಸಕ್ತ ಪರಿಸ್ಥಿತಿಗಳು, ಆತನ ಜೀವನಚರಿತ್ರೆ, ಕೌಟುಂಬಿಕ ಹಿನ್ನೆಲೆ ಮತ್ತು ಪ್ರಸಕ್ತ ಲಕ್ಷಣಗಳನ್ನು ದಾಖಲುಮಾಡುತ್ತಾರೆ. ವ್ಯಕ್ತಿಯ ಚಿತ್ತ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾದ ಪ್ರಸ್ತುತ ಜೈವಿಕ, ಮಾನಸಿಕ ಮತ್ತು ಸಾಮಾಜಿಕ ಅಂಶಗಳನ್ನು ರೂಪಿಸುವುದು ರೋಗನಿರ್ಧಾರದ ಮುಖ್ಯ ಗುರಿಯಾಗಿದೆ. ರೋಗನಿರ್ಣಯ ಮಾಡುವವರು ವ್ಯಕ್ತಿಯು ಪ್ರಸ್ತುತ ಚಿತ್ತ ಸ್ಥಿತಿಯನ್ನು ನಿಯಂತ್ರಿಸುವ ಮಾರ್ಗಗಳನ್ನು ಕೂಡ ಚರ್ಚಿಸಬಹುದು (ಆರೋಗ್ಯಕಾರಕ ಅಥವಾ ಬೇರೆರೀತಿಯಲ್ಲಿ )ಉದಾಹರಣೆಗೆ ಆಲ್ಕೋಹಾಲ್ ಮತ್ತು ಮಾದಕ ವಸ್ತುವಿನ ಬಳಕೆ. ರೋಗ ನಿರ್ಣಯವು, ಮಾನಸಿಕ ಸ್ಥಿತಿಯ ಪರೀಕ್ಷೆಯನ್ನು ಕೂಡ ಒಳಗೊಂಡಿದೆ. ಇದು ವ್ಯಕ್ತಿಯ ಪ್ರಸ್ತುತ ಚಿತ್ತ ಸ್ಥಿತಿ ಮತ್ತು ಚಿಂತನೆಯ ವಿಷಯದ ನಿರ್ಣಯವಾಗಿದೆ. ವಿಶೇಷವಾಗಿ ಅಸಹಾಯಕತೆ ಅಥವಾ ಹತಾಶೆ, ಸ್ವಹಾನಿ ಅಥವಾ ಆತ್ಮಹತ್ಯೆ ವಿಷಯಗಳ ಉಪಸ್ಥಿತಿ, ಸಕಾರಾತ್ಮಕ ಆಲೋಚನೆಗಳು ಮತ್ತು ಯೋಜನೆಗಳ ಕೊರತೆ. ಪರಿಣಿತ ಮಾನಸಿಕ ಆರೋಗ್ಯ ಸೇವೆಗಳು ಗ್ರಾಮ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಅಲ್ಲದೇ ನಿರ್ಣಯ ಮತ್ತು ನಿರ್ವಹಣೆಯು ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಚಿಕಿತ್ಸಕರ ಹೊಣೆಯಾಗಿರುತ್ತದೆ. ಈ ವಿಷಯವನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಾಗಿ ಗುರುತಿಸಲಾಗಿದೆ. ಕೇವಲ ರೇಟಿಂಗ್ ಸ್ಕೇಲ್(ಮೌಲ್ಯ ನಿರ್ಧರಿಸುವ ಮಾಪಕ) ಮೇಲೆ ಪಡೆದಂತಹ ಅಂಕದಿಂದ ಖಿನ್ನತೆಯನ್ನು ನಿರ್ಣಯಿಸಲು ಸಾಧ್ಯವಾಗುವುದಿಲ್ಲ [according to whom?], ಅದರೆ ಇದು ಒಂದು ಕಾಲಾವಧಿಯವರೆಗೆ ಲಕ್ಷಣಗಳ ತೀವ್ರತೆಗೆ ಸೂಚನೆಯನ್ನು ಒದಗಿಸುತ್ತದೆ. ಆದ್ದರಿಂದ ರೇಟಿಂಗ್ ಸ್ಕೇಲ್ ನಲ್ಲಿ ಕೊಡಲಾದ ಗೊತ್ತಾದ ಅಂತಿಮ ಪಾಯಿಂಟ್ ಗಿಂತ ಹೆಚ್ಚು ಅಂಕ ಪಡೆದ ವ್ಯಕ್ತಿಯನ್ನು ಖಿನ್ನತೆಯ ಅಸ್ವಸ್ಥತೆ ನಿರ್ಧಾರಕ್ಕಾಗಿ ಆಮೂಲಾಗ್ರ ಪರಿಶೀಲನೆ ಮಾಡಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ಅನೇಕ ರೇಟಿಂಗ್ ಸ್ಕೇಲ್ ಗಳನ್ನು ಬಳಸಲಾಗುತ್ತದೆ. ಖಿನ್ನತೆಯನ್ನು ಗುರುತಿಸುವುದರಲ್ಲಿ ಸುಧಾರಣೆಗೆ ರೋಗಪರೀಕ್ಷೆಯ ಕಾರ್ಯಕ್ರಮಗಳನ್ನು ಸೂಚಿಸಲಾಗಿದೆ. ಆದರೆ ಅವು ಖಿನ್ನತೆ ಗುರುತಿಸುವ ದರಗಳನ್ನು, ಚಿಕಿತ್ಸೆಯನ್ನು ಮತ್ತು ಫಲಿತಾಂಶವನ್ನು ಸುಧಾರಿಸುವುದಿಲ್ಲ ಎನ್ನುವುದಕ್ಕೆ ಸಾಕ್ಷ್ಯಾಧಾರವಿದೆ.

ಪ್ರಾಥಮಿಕ ಚಿಕಿತ್ಸಾ ವೈದ್ಯರು ಮತ್ತು ಮನೋವೈದ್ಯರಲ್ಲದಂತಹ ಇತರ ವೈದ್ಯರಿಗೆ ಖಿನ್ನತೆಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಏಕೆಂದರೆ ಅವರಿಗೆ ದೈಹಿಕ ರೋಗಲಕ್ಷಣಗಳನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ತರಬೇತಿ ನೀಡಲಾಗಿರುತ್ತದೆ.ಅಲ್ಲದೇ ಖಿನ್ನತೆಯು ಅಸಂಖ್ಯಾತ ದೈಹಿಕ (ಮನೋದೈಹಿಕ) ರೋಗಲಕ್ಷಣಗಳನ್ನು ಉಂಟುಮಾಡಬಹುದು. ಮನೋವೈದ್ಯರಲ್ಲದವರು ಮೂರನೆ ಎರಡು ಭಾಗ ಪ್ರಕರಣಗಳನ್ನು ಕಳೆದುಕೊಳ್ಳುತ್ತಾರೆ. ಅಲ್ಲದೇ ಇತರ ರೋಗಿಗಳಿಗೆ ಅನಾವಶ್ಯಕವಾಗಿ ಚಿಕಿತ್ಸೆ ನೀಡುತ್ತಾರೆ.

ಪ್ರಧಾನ ಖಿನ್ನತೆಯ ಅಸ್ವಸ್ಥತೆಯನ್ನು ಗುರುತಿಸುವ ಮೊದಲು, ರೋಗಲಕ್ಷಣದ ಇತರ ಕಾರಣಗಳನ್ನು ತಳ್ಳಿಹಾಕಲು ವೈದ್ಯರು ಸಾಮಾನ್ಯವಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮತ್ತು ಆಯ್ದ ಪರೀಕ್ಷೆಗಳನ್ನು ಮಾಡುತ್ತಾರೆ. ಈ ಪರೀಕ್ಷೆಯು ಕೆಳಕಂಡವುಗಳನ್ನು ಒಳಗೊಂಡಿದೆ: ಹೈಪೊಥೈರಾಡಿಸಮ್(ಥೈರಾಡ್ ಹಾರ್ಮೋನ್ ಕೊರತೆ ) ಹೊರತುಪಡಿಸಲು TSH ಮತ್ತು ಥೈರಾಕ್ಸಿನ್‌ನ ಪ್ರಮಾಣವನ್ನು ಅಳೆಯುವ ರಕ್ತಪರೀಕ್ಷೆ; ಚಯಾಪಚಯ ಸಮಸ್ಯೆಗಳನ್ನು ತಳ್ಳಿಹಾಕಲು ಮೂಲ ವಿದ್ಯುದ್ವಿಚ್ಛೇದನ ಮತ್ತು ಸೀರಮ್ ಕ್ಯಾಲ್ಶಿಯಂ; ಮತ್ತು ದೇಹದ ಸೋಂಕು ಅಥವಾ ದೀರ್ಘಕಾಲದ ಕಾಯಿಲೆಯನ್ನು ತಳ್ಳಿಹಾಕಲು ESR ಅನ್ನು ಒಳಗೊಂಡಂತೆ ಸಂಪೂರ್ಣ ರಕ್ತ ಕಣಗಳ ಸಂಖ್ಯೆಯನ್ನು ಅಳೆಯುತ್ತಾರೆ. ಔಷಧಿಗಳು ಅಥವಾ ಆಲ್ಕೋಹಾಲ್ ನ ದುರ್ಬಳಕೆಯಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಸಾಮಾನ್ಯವಾಗಿ ತಳ್ಳಿಹಾಕಲಾಗುತ್ತದೆ. ಹೈಪೊಗೊನಾಡಿಸಮ್(ಜನನಗ್ರಂಥಿಗಳ ಚಟುವಟಿಕೆ ಕುಂಠಿತ) ಅನ್ನು ಗುರುತಿಸಲು ಟೆಸ್ಟೊಸ್ಟೆರೋನ್ (ವೃಷಣಗಳು ಸ್ರವಿಸುವ ಲೈಂಗಿಕ್ ಹಾರ್ಮೋನು)ಮಟ್ಟವನ್ನು ಕೂಡ ಅಳೆಯಲಾಗುತ್ತದೆ. ಇದು ಪುರುಷರಲ್ಲಿ ಉಂಟಾಗುವ ಖಿನ್ನತೆಗೆ ಕಾರಣವಾಗಿದೆ.

ವೈಯಕ್ತಿಕ ಅರಿವಿನ ದೂರುಗಳು ಖಿನ್ನತೆಗೆ ಒಳಗಾದ ಹಿರಿಯ ವ್ಯಕ್ತಿಗಳಲ್ಲಿ ಕಂಡುಬರುತ್ತದೆ, ಆದರೆ ಅವು ಬುದ್ಧಿಮಾಂದ್ಯತೆ ಅಸ್ವಸ್ಥತೆಯ ಸೂಚನೆಯನ್ನು ನೀಡುತ್ತಿರಬಹುದು, ಉದಾಹರಣೆಗೆ ಅಲ್ಜಮೈರ್ ಕಾಯಿಲೆ. ಅರಿವಿನ ಪರೀಕ್ಷೆ ಮತ್ತು ಮೆದುಳಿನ ಚಿತ್ರ ತೆಗೆಯುವುದು ಖಿನ್ನತೆಯನ್ನು ಬುದ್ಧಿಮಾಂದ್ಯತೆಯಿಂದ ವ್ಯತ್ಯಾಸ ಗುರುತಿಸಲು ಸಹಾಯ ಮಾಡುತ್ತವೆ. CT ಸ್ಕಾನ್ ಮನೋವಿಕೃತ, ಶೀಘ್ರದಲ್ಲೇ ಕಾಲಿಡುವ ಅಥವಾ ಅಸಾಮಾನ್ಯ ಲಕ್ಷಣಗಳುಳ್ಳವರ ಮೆದುಳಿನ ರೋಗಶಾಸ್ತ್ರದಿಂದ ಹೊರಗಿಡಬಹುದು. ಯಾವುದೇ ಜೀವವಿಜ್ಞಾನದ ಪರೀಕ್ಷೆಗಳು ಪ್ರಧಾನ ಖಿನ್ನತೆಯನ್ನು ದೃಢಪಡಿಸಲಾರವು. ವೈದ್ಯಕೀಯ ಸೂಚನೆಯ ಹೊರತಾಗಿ ತರುವಾಯದ ಪ್ರಸಂಗಕ್ಕೆ ಪರೀಕ್ಷೆಗಳನ್ನು ಪುನರಾವರ್ತಿಸಲಾಗುವುದಿಲ್ಲ.

DSM-IV-TR ಮತ್ತು ICD-10 ನ ಮಾನದಂಡ

ಖಿನ್ನತೆಯ ಸ್ಥಿತಿಯನ್ನು ಗುರುತಿಸಲು ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಮಾನದಂಡವು ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ನ , ಪರಿಷ್ಕರಿಸಲಾದ ನಾಲ್ಕನೇ ಆವೃತ್ತಿ ಡಯಾಗ್ನಾಸ್ಟಿಕ್ ಅಂಡ್ ಸ್ಟ್ಯಾಟಿಸ್ಟಿಕಲ್ ಮ್ಯಾನುವಲ್ ಆಫ್ ಮೆಂಡಲ್ ಡಿಸ್ ಆರ್ಡರ್ಸ್ (DSM-IV-TR) ನಲ್ಲಿ, ಹಾಗು ವಿಶ್ವ ಆರೋಗ್ಯ ಸಂಸ್ಥೆಇಂಟರ್ ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಕ್ಲಾಸಿಫಿಕೇಷನ್ ಆಫ್ ಡಿಸಿಸಸ್ ಅಂಡ್ ರಿಲೇಟೆಡ್ ಹೆಲ್ತ್ ಪ್ರೋಗ್ರಾಮ್ಸ್ (ICD-10) ನಲ್ಲಿ ಕಂಡುಬಂದಿವೆ. ಇದು ಮರುಕಳಿಸುವ ಖಿನ್ನತೆ ಅಸ್ವಸ್ಥತೆ ಎಂಬ ಹೆಸರನ್ನು ಬಳಸುತ್ತದೆ. ಅನಂತರದ ವ್ಯವಸ್ಥೆಯನ್ನು ವಿಶೇಷವಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ ಬಳಸಿದರೆ, ಮುಂಚಿನ ವ್ಯವಸ್ಥೆಯನ್ನು US ಮತ್ತು ಯುರೋಪಿಯನೇತರ ಇತರ ಅನೇಕ ರಾಷ್ಟ್ರಗಳಲ್ಲಿ ಬಳಸಲಾಗುತ್ತದೆ, ಅಲ್ಲದೇ ಇವೆರಡರ ಲೇಖಕರು ಕೂಡ ಒಂದರೊಂದಿಗೆ ಮತ್ತೊಂದನ್ನು ಸರಿಹೊಂದಿಸುವ ಪ್ರಯತ್ನ ಮಾಡಿದ್ದಾರೆ.

ಪ್ರಧಾನ ಖಿನ್ನತೆಯ ಅಸ್ವಸ್ಥತೆಯನ್ನು DSM-IV-TR ನಲ್ಲಿ ಚಿತ್ತ ಸ್ಥಿತಿಯ ಅಸ್ವಸ್ಥತೆ ಎಂದು ವರ್ಗೀಕರಿಸಲಾಗಿದೆ. ರೋಗನಿರ್ಣಯವು ಏಕ ಅಥವಾ ಮರುಕಳಿಸುವ ಪ್ರಧಾನ ಖಿನ್ನತೆಯ ಪ್ರಸಂಗಗಳನ್ನು ಅವಲಂಬಿಸಿರುತ್ತದೆ. ಮುಂದಿನ ವಿಶೇಷಕಗಳನ್ನು ಎರಡೂ ಪ್ರಸಂಗಗಳನ್ನು ಮತ್ತು ಅಸ್ವಸ್ಥತೆ ಸಮಯವನ್ನು ವಿಂಗಡಿಸಲು ಬಳಸಲಾಗುತ್ತದೆ. ಖಿನ್ನತೆಯ ಪ್ರಸಂಗಗಳ ಲಕ್ಷಣಗಳು ಪ್ರಧಾನ ಖಿನ್ನತೆಯ ಪ್ರಸಂಗದ ಮಾನದಂಡಗಳನ್ನು ಪೂರೈಸದಿದ್ದ ಪಕ್ಷದಲ್ಲಿ ನಿರ್ದಿಷ್ಟ ಅಸ್ವಸ್ಥತೆಯ ಮಾನದಂಡ ಪೂರೈಸದ ಖಿನ್ನತೆ ಅಸ್ವಸ್ಥತೆ ಎಂಬ ವರ್ಗವನ್ನು ನಿರ್ಣಯಿಸಲಾಗುತ್ತದೆ. ICD-10 ವ್ಯವಸ್ಥೆಯು ಮೇಜರ್ ಡಿಪ್ರೆಸಿವ್ ಡಿಸ್ ಆರ್ಡರ್ ಎಂಬ ಪದವನ್ನು ಬಳಸುವುದಿಲ್ಲ. ಆದರೆ ಖಿನ್ನತೆಯ ಪ್ರಸಂಗದ ನಿರ್ಣಯಕ್ಕಾಗಿ ಅದೇ ರೀತಿ ಮಾನದಂಡವನ್ನು ಪಟ್ಟಿಮಾಡುತ್ತದೆ(ಸೌಮ್ಯ, ಸಾಧಾರಣ ಅಥವಾ ತೀವ್ರ);ಉನ್ಮಾದವಿಲ್ಲದ ಬಹು ಪ್ರಸಂಗಗಳಿದ್ದಲ್ಲಿ ರಿಕರೆಂಟ್ ಎಂಬ ಪದವನ್ನು ಸೇರಿಸಲಾಗುತ್ತದೆ.

ಪ್ರಧಾನ ಖಿನ್ನತೆಯ ಪ್ರಸಂಗ

ಪ್ರಧಾನ ಖಿನ್ನತೆಯ ಪ್ರಸಂಗವು ಎರಡು ವಾರಗಳ ವರೆಗೆ ತೀವ್ರವಾಗಿ ಖಿನ್ನತೆಗೆ ಒಳಪಟ್ಟಂತಹ ಚಿತ್ತ ಸ್ಥಿತಿಯ ಲಕ್ಷಣದಿಂದ ಕೂಡಿದೆ. ಪ್ರಸಂಗಗಳು ಪ್ರತ್ಯೇಕವಾಗಿರಬಹುದು ಅಥವಾ ಪುನರಾವರ್ತಕವಾಗಿರಬಹುದು. ಅಲ್ಲದೇ ಅವುಗಳನ್ನು ಸೌಮ್ಯವಾದ (ಕನಿಷ್ಟ ಮಾನದಂಡಕ್ಕಿಂತ ಹೆಚ್ಚಿನ ಕೆಲವು ಲಕ್ಷಣಗಳು), ಸಾಧಾರಣ ಅಥವಾ ತೀವ್ರವಾದ (ಸಾಮಾಜಿಕ ಮತ್ತು ಔದ್ಯೋಗಿಕ ನಿರ್ವಹಣೆ ಮೇಲೆ ಗುರುತಿಸಲಾದ ಪರಿಣಾಮ) ಎಂದು ವಿಂಗಡಿಸಲಾಗುತ್ತದೆ. ಮನೋವಿಕೃತ ಗುಣಲಕ್ಷಣಗಳೊಂದಿಗೆ ಪ್ರಸಂಗಗಳನ್ನು ಸಾಮಾನ್ಯವಾಗಿ ಮನೋವಿಕೃತ ಖಿನ್ನತೆ ಎಂದು ಸೂಚಿಸಲಾಗುತ್ತದೆ— ಇದನ್ನು ತಾನೇತಾನಾಗಿ ತೀವ್ರಸ್ಥಿತಿಯೆಂದು ಪರಿಗಣಿಸಲಾಗುತ್ತದೆ ರೋಗಿಯು ಉನ್ಮಾದದ ಪ್ರಸಂಗ ಅಥವಾ ಗುರುತಿಸಬಹುದಾದ ಕೆರಳುವ ಚಿತ್ತಸ್ಥಿತಿಯನ್ನು ಹೊಂದಿದ್ದಲ್ಲಿ, ಇವುಗಳ ಬದಲಿಗೆ ದ್ವಿಧ್ರುವಿ ಅಸ್ವಸ್ಥತೆಯ ರೋಗನಿರ್ಣಯವನ್ನು ಮಾಡಲಾಗುತ್ತದೆ. ಉನ್ಮಾದದವಿಲ್ಲದಂತಹ ಖಿನ್ನತೆಯನ್ನು ಕೆಲವೊಮ್ಮೆ ಏಕಧ್ರುವೀಯ ಅಸ್ವಸ್ಥತೆ ಎಂದು ಸೂಚಿಸಲಾಗುತ್ತದೆ. ಏಕೆಂದರೆ ಚಿತ್ತ ಸ್ಥಿತಿಯು ಒಂದು ಭಾವನಾತ್ಮಕ ಸ್ಥಿತಿಯಲ್ಲಿ ಅಥವಾ "ಧ್ರುವ"ದಲ್ಲಿ ಉಳಿದುಕೊಂಡಿರುತ್ತದೆ.

DSM-IV-TR , ವಿಯೋಗದಿಂದ ಖಿನ್ನತೆಗೆ ಒಳಪಟ್ಟ ಪ್ರಕರಣಗಳನ್ನು ಹೊರತುಪಡಿಸುತ್ತದೆ. ವಿಯೋಗವು ಮುಂದುವರಿದರೆ ಮತ್ತು ಪ್ರಧಾನ ಖಿನ್ನತೆಯ ಗುಣಲಕ್ಷಣಗಳು ಬೆಳೆದರೆ, ಸಹಜವಾದ ವಿಯೋಗವು ಖಿನ್ನತೆಯ ಪ್ರಸಂಗವಾಗಿ ವಿಕಾಸಗೊಳ್ಳುವ ಸಾಧ್ಯತೆ ಇರುತ್ತದೆ. ಈ ಮಾನದಂಡವು ಖಿನ್ನತೆಯು ಸಂಭವಿಸಬಹುದಾದ ಸಾಮಾಜಿಕ ಮತ್ತು ವೈಯಕ್ತಿಕ ಸಂದರ್ಭದ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಇದನ್ನು ಟೀಕಿಸಲಾಗಿದೆ. ಇದರಜೊತೆಗೆ, ಕೆಲವು ಅಧ್ಯಯನಗಳು DSM-IV ಗರಿಷ್ಠ ಮಿತಿಯ ಮಾನದಂಡಕ್ಕೆ ಸ್ವಲ್ಪ ಪ್ರಮಾಣದಲ್ಲಿ ಪ್ರಾಯೋಗಿಕ ಬೆಂಬಲವಿರುವುದನ್ನು ಕಂಡುಕೊಂಡಿದೆ. ಅವುಗಳು ವಿಭಿನ್ನ ತೀವ್ರತೆ ಮತ್ತು ಕಾಲಾವಧಿಗೆ ಸಂಬಂಧಿಸಿದ ಖಿನ್ನತೆಯ ರೋಗ ಲಕ್ಷಣದ ಮುಂದುವರಿಕೆ ಮೇಲೆ ವಿಧಿಸಲಾದ ರೋಗನಿರ್ಣಯದ ಸಂಪ್ರದಾಯವಾಗಿದೆ ಎಂಬುದನ್ನು ಸೂಚಿಸಿದೆ: ಡಿಸ್ತಿಮಿಯ ವನ್ನು ಒಳಗೊಂಡಂತೆ ಸಂಬಂಧಿತ ರೋಗನಿರ್ಣಯಗಳ ವ್ಯಾಪ್ತಿಯನ್ನು ಹೊರತುಪಡಿಸಲಾಗಿದೆ. ಡಿಸ್ತೀಮಿಯ ತೀವ್ರ ಅಥವಾ ಸೌಮ್ಯ ಚಿತ್ತಸ್ಥಿತಿ ಅಸ್ವಸ್ಥತೆಯನ್ನು ಒಳಗೊಂಡಿದೆ; ರಿಕರೆಂಟ್ ಬ್ರೀಫ್ ಡಿಪ್ರೆಷನ್(ಮರುಕಳಿಸುವ ಅಲ್ಪಕಾಲೀನ ಖಿನ್ನತೆ)ಇದು ಅಲ್ಪಕಾಲಾವಧಿಗೆ ಸಂಬಂಧಿಸಿದ ಖಿನ್ನತೆಯ ಪ್ರಸಂಗಗಳನ್ನು ಒಳಗೊಂಡಿದೆ; ಮೈನರ್ ಡಿಪ್ರೆಸಿವ್ ಡಿಸಾರ್ಡರ್, ಇದರಲ್ಲಿ ಕೇವಲ ಪ್ರಧಾನ ಖಿನ್ನತೆಯ ಕೆಲವೊಂದು ರೋಗಲಕ್ಷಣಗಳು ಮಾತ್ರ ಕಂಡುಬರುತ್ತವೆ; ಮತ್ತು ಖಿನ್ನತೆ ಚಿತ್ತಸ್ಥಿತಿಯ ಹೊಂದಾಣಿಕೆ ಅಸ್ವಸ್ಥತೆ, ಇದು ಗುರುತಿಸಬಹುದಾದ ಸಂಗತಿ ಅಥವಾ ಒತ್ತಡಕ್ಕೆ ಮಾನಸಿಕ ಪ್ರತಿಕ್ರಿಯೆಯಿಂದ ಉಂಟಾಗುವಂತಹ ದುರ್ಬಲ ಚಿತ್ತ ಸ್ಥಿತಿಯನ್ನು ಸೂಚಿಸುತ್ತದೆ.

ಉಪವಿಧಗಳು

DSM-IV-TR, MDD ಯ ಮುಂದಿನ ಐದು ಉಪವಿಧಗಳನ್ನು ಗುರುತಿಸಿ ಸ್ಪೆಸಿಫೈಯರ್ಸ್ ಎಂದು ಕರೆದಿದೆ. ಅಲ್ಲದೇ ಇದನ್ನು ವ್ಯಾಪ್ತಿ, ತೀವ್ರತೆ ಮತ್ತು ಮನೋವಿಕೃತ ಗುಣಲಕ್ಷಣಗಳನ್ನು ಗುರುತಿಸುವುದನ್ನು ಇದರಲ್ಲಿ ಸೇರಿಸಲಾಗಿದೆ.

  • ವಿಷಣ್ಣತೆಗೆ ಒಳಗಾಗುವ ಖಿನ್ನತೆ ಯನ್ನು ಬಹುಪಾಲು ಅಥವಾ ಎಲ್ಲಾ ಚಟುವಟಿಕೆಗಳಲ್ಲಿ ಇರುವಂತಹ ಸಂತೋಷದ ಕೊರತೆ ಎಂದು ವಿವರಿಸಲಾಗಿದೆ. ಅಲ್ಲದೇ ಯಾವುದೇ ಸಂತೋಷಕರ ಚಟುವಟಿಕೆಗೆ ತೋರಿಸಬೇಕಾದ ಪ್ರತಿಕ್ರಿಯೆ ವಿಫಲತೆ ಎಂದು ವಿವರಿಸಲಾಗಿದೆ. ಖಿನ್ನತೆಗೆ ಒಳಗಾದ ಚಿತ್ತ ಸ್ಥಿತಿಯ ಗುಣಮಟ್ಟವು ವ್ಯಥೆ ಅಥವಾ ದುಖಃದಿಂದ ಕೂಡಿದ ಚಿತ್ತಸ್ಥಿತಿಯ ಗುಣಮಟ್ಟಕ್ಕಿಂತ ಹೆಚ್ಚು ಎದ್ದುಕಾಣುತ್ತದೆ. ಬೆಳಗಿನ ಹೊತ್ತಿನಲ್ಲಿ ರೋಗಲಕ್ಷಣವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೆಳಗ್ಗೆ ಬೇಗ ಎಚ್ಚರವಾಗುವುದು, ಮಾನಸ ಚಾಲನೆಯ ಕುಂಠಿತ, ಅತಿಯಾಗಿ ತೂಕ ಕಳೆದುಕೊಳ್ಳುವುದು (ಅನೋರೆಕ್ಸಿಯಾ ನರ್ವೋಸಾವೆಂದು ತಪ್ಪು ತಿಳಿದುಕೊಳ್ಳಬೇಡಿ), ಅಥವಾ ಅತಿಯಾದ ಅಪರಾಧಿ ಮನೋಭಾವ.
  • ಅಸಾಮಾನ್ಯವಾದ ಖಿನ್ನತೆ ಯನ್ನು, ಚಿತ್ತ ಸ್ಥಿತಿಯ ಪ್ರತಿಕ್ರಿಯಾಶೀಲತೆ (ವಿರೋಧಾಭಾಸದ ಅನ್ ಹೆಡೊನಿಯ(ಸಂತೋಷವನ್ನು ಅನುಭವಿಸಲಾಗದ ಅಸಮರ್ಥತೆ) ಮತ್ತು ನಿಸ್ಸಂದಿಗ್ಧತೆ, ಗಮನಾರ್ಹ ಮಟ್ಟದಲ್ಲಿ ತೂಕ ಹೆಚ್ಚಾಗುವುದು ಅಥವಾ ಹೆಚ್ಚಾದ ಹಸಿವು (ತಿನ್ನುವ ಮೂಲಕ ಸಮಧಾನಪಡುವುದು), ಅತಿಯಾದ ನಿದ್ದೆ ಅಥವಾ ಮಂಪರು (ಹೈಪರ್ ಸೊಮ್ನಿಯ) , ಅಲ್ಲದೇ ಕೈ ಕಾಲುಗಳಲ್ಲಿ ಭಾರವಾದ ಸಂವೇದನೆ, ಇದನ್ನು ಭಾರವಾದ(ಜಡ) ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ ಹಾಗು ಸಾಮಾಜಿಕ ನಿರಾಕರಣಕ್ಕೆ ಅತಿಸೂಕ್ಷ್ಮ ಪ್ರತಿಕ್ರಿಯೆಯ ಪರಿಣಾಮವಾಗಿ ಗಮನಾರ್ಹವಾಗಿ ಸಾಮಾಜಿಕ ಕೌಶಲ್ಯಗಳ ಕೊರತೆಯ ಲಕ್ಷಣಗಳಿಂದ ಕೂಡಿದೆ.
  • ಕ್ಯಾಟಟೋನಿಕ್ ಖಿನ್ನತೆ ಎಂಬುದು ಅತ್ಯಂತ ವಿರಳವಾದ ಮತ್ತು ಪ್ರಧಾನ ಖಿನ್ನತೆಯ ಅತ್ಯಂತ ತೀಕ್ಷ್ಣವಾದ ರೂಪವಾಗಿದೆ. ಇದು ಸ್ನಾಯು ಚಲನಾ ವರ್ತನೆಗೆ ಸಂಬಂಧಿಸಿದ ಅಸ್ವಸ್ಥತೆಯನ್ನು ಮತ್ತು ಇತರ ರೋಗಲಕ್ಷಣಗಳನ್ನು ಒಳಗೊಂಡಿದೆ. ಇಲ್ಲಿ ವ್ಯಕ್ತಿಯು ಮೂಕನಂತೆ ಬಹುಮಟ್ಟಿಗೆ ಮಂಕುಬಡಿದಂತಿರುತ್ತಾನೆ. ಅಲ್ಲದೇ ನಿಶ್ಚಲವಾಗಿರುತ್ತಾನೆ ಅಥವಾ ನಿಷ್ಪ್ರಯೋಜಕನಂತೆ ಅಥವಾ ವಿಲಕ್ಷಣ ಮನಃ ಪ್ರವೃತ್ತಿ ಇರುವವನಂತೆ ತೋರಿಸಿಕೊಳ್ಳುತ್ತಾನೆ. ಕ್ಯಾಟಟೋನಿಕ್ ರೋಗಲಕ್ಷಣಗಳು ಛಿದ್ರಮನಸ್ಕತೆ ಅಥವಾ ಉನ್ಮಾದದ ಪ್ರಸಂಗಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತವೆ. ಅಥವಾ ಇವು ಉಪಶಮನಕಾರಿ ಔಷಧದ ಮಾರಕ ಲಕ್ಷಣದಿಂದಲೂ ಕಾಣಿಸಿಕೊಳ್ಳಬಹುದು.
  • ಪ್ರಸವದ ತಕ್ಷಣದ ಖಿನ್ನತೆ , ಅಥವಾ ಪ್ಯುರ್ ಪೆರಿಯಂ(ಪ್ರಸವದ ನಂತರದ ಅಸ್ವಸ್ಥತೆ)ಗೆ ಸಂಬಂಧಿಸಿದ ಮಾನಸಿಕ ಮತ್ತು ವರ್ತನೆಯ ಅಸ್ವಸ್ಥತೆಗಳನ್ನು ಬೇರೆಲ್ಲೂ ವರ್ಗೀಕರಿಸಲಾಗಿಲ್ಲ , ಇದು ತೀವ್ರವಾದ, ಸ್ಥಿರವಾದ ಮತ್ತು ಕೆಲವೊಮ್ಮೆ ದುರ್ಬಲಗೊಂಡ ಖಿನ್ನತೆಯನ್ನು ಸೂಚಿಸುತ್ತದೆ. ಮಹಿಳೆಯರು ಹೆರಿಗೆಯಾದ ನಂತರ ಇದನ್ನು ಅನುಭವಿಸುತ್ತಾರೆ. ಪ್ರಸವಾನಂತರದ ಖಿನ್ನತೆಯು 10–15 ಪ್ರತಿಶತದಷ್ಟು ಹೊಸದಾಗಿ ತಾಯಿಯಾದವರಲ್ಲಿ ಕಂಡುಬರುತ್ತದೆ. DSM-IV,ಇದನ್ನು ಪ್ರಸವಾನಂತರದ ಖಿನ್ನತೆಯೆಂದು ಗುರುತಿಸಬೇಕಾದರೆ, ಇದು ಪ್ರಸವವಾಗಿ ಒಂದು ತಿಂಗಳೊಳಗೆ ಕಾಣಿಸಿಕೊಳ್ಳಬೇಕು ಎಂದು ಸೂಚಿಸಿದೆ. ಅಲ್ಲದೇ ಪ್ರಸವಾನಂತರದ ಖಿನ್ನತೆಯು ಮೂರುತಿಂಗಳ ಕಾಲ ಉಳಿಯಬಹುದು ಎಂಬುದನ್ನು ಕೂಡ ಹೇಳಿದೆ.
  • ಋತುಮಾನ ಪರಿಣಾಮದ ಅಸ್ವಸ್ಥತೆ (SAD) ಎಂಬುದು ಖಿನ್ನತೆಯ ಒಂದು ರೂಪವಾಗಿದ್ದು, ಇಲ್ಲಿ ಖಿನ್ನತೆಯ ಪ್ರಸಂಗಗಳು ಶರತ್ಕಾಲ ಅಥವಾ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತವೆ ಹಾಗು ವಸಂತಕಾಲದಲ್ಲಿ ಹೊರಟುಹೋಗುತ್ತದೆ. ಖಿನ್ನತೆಯ ಪ್ರಸಂಗಗಳು ಚಳಿಗಾಲದ ತಿಂಗಳಲ್ಲಿ ಕೊನೆಯ ಪಕ್ಷ ಎರಡು ಬಾರಿಯಾದರು ಸಂಭವಿಸಿ ಬೇರೆ ಸಮಯದಲ್ಲಿ, ಸುಮಾರು ಎರಡು ವರ್ಷಗಳ ಕಾಲ ಅಥವಾ ದೀರ್ಘಕಾಲದವರೆಗೆ ಕಾಣಿಸಿಕೊಳ್ಳದಿದ್ದಾಗ ರೋಗನಿರ್ಣಯವನ್ನು ಮಾಡಲಾಗುತ್ತದೆ.

ವ್ಯತ್ಯಾಸದ ರೋಗ ನಿರ್ಣಯಗಳು

ಪ್ರಧಾನ ಖಿನ್ನತೆಯ ಅಸ್ವಸ್ಥತೆಯನ್ನು ಅತ್ಯಂತ ಸಂಭವನೀಯ ರೋಗನಿರ್ಣಯವೆಂದು ತಿಳಿಸಬೇಕಾದರೆ ಡಿಸ್ತಿಮಿಯ(ಪ್ರಧಾನ ಖಿನ್ನತೆಗಿಂತ ಕಡಿಮೆ ತೀವ್ರತೆ) ಖಿನ್ನತೆ ಚಿತ್ತಸ್ಥಿತಿಯೊಂದಿಗೆ ಹೊಂದಾಣಿಕೆ ಅಸ್ವಸ್ಥತೆ ಅಥವಾ ದ್ವಿಧ್ರುವಿ ಅಸ್ವಸ್ಥತೆ ಸೇರಿದಂತೆಇತರ ಸಂಭಾವ್ಯ ರೋಗನಿರ್ಣಯಗಳನ್ನು ಕೂಡ ಪರಿಗಣಿಸಬೇಕು. ಡಿಸ್ತಿಮಿಯ ಎಂಬುದು, ದೀರ್ಘಕಾಲದ, ತೀವ್ರವಲ್ಲದ ಚಿತ್ತ ಸ್ಥಿತಿಯ ಅಸ್ವಸ್ಥತೆಯಾಗಿದೆ. ಈ ಸ್ಥಿತಿಯಲ್ಲಿ ವ್ಯಕ್ತಿಯು ಬಹುಮಟ್ಟಿಗೆ ಪ್ರತಿದಿನವು ಸುಮಾರು ಎರಡು ವರ್ಷಗಳ ವರೆಗೆ ದುರ್ಬಲ ಚಿತ್ತಸ್ಥಿತಿಯ ಬಗ್ಗೆ ತಿಳಿಸುತ್ತಾನೆ. ಇದರ ರೋಗಲಕ್ಷಣಗಳು ಪ್ರಧಾನ ಖಿನ್ನತೆಯ ರೋಗಲಕ್ಷಣಗಳಷ್ಟು ತೀವ್ರವಾಗಿರುವುದಿಲ್ಲ. ಆದರು ಕೂಡ ಡಿಸ್ತಿಮಿಯಕ್ಕೆ ತುತ್ತಾದ ಜನರು ಪ್ರಧಾನ ಖಿನ್ನತೆಯ ಎರಡನೆಯ ಪ್ರಸಂಗಗಳಿಗೆ ಒಳಗಾಗಬಹುದು(ಕೆಲವೊಮ್ಮೆ ಡಬಲ್ ಡಿಪ್ರೆಷನ್ ಎಂದು ಸೂಚಿಸಲಾಗುತ್ತದೆ). ಖಿನ್ನತೆಗೆ ಒಳಗಾದ ಚಿತ್ತಸ್ಥಿತಿಯೊಂದಿಗೆ ಹೊಂದಾಣಿಕೆಯ ಅಸ್ವಸ್ಥತೆ(ಅಡ್ಜಸ್ಟ್ ಮೆಂಟ್ ಡಿಸಾರ್ಡರ್) ಎಂಬುದು ಚಿತ್ತ ಸ್ಥಿತಿಯ ಗೊಂದಲವಾಗಿದ್ದು, ಗುರುತಿಸಬಹುದಾದ ಸಂಗತಿ ಅಥವಾ ಒತ್ತಡಕ್ಕೆ ಮಾನಸಿಕ ಪ್ರತಿಕ್ರಿಯೆಯಂತೆ ಕಂಡುಬರುತ್ತದೆ. ಇಲ್ಲಿ ವ್ಯಕ್ತವಾಗುವ ಭಾವನಾತ್ಮಕ ಅಥವಾ ವರ್ತನೆಯ ಲಕ್ಷಣಗಳು ಗಮನಾರ್ಹವಾಗಿವೆ. ಆದರೆ ಈ ರೋಗಲಕ್ಷಣಗಳು ಪ್ರಧಾನ ಖಿನ್ನತೆಯ ಪ್ರಸಂಗದ ಮಾನದಂಡವನ್ನು ಮುಟ್ಟುವುದಿಲ್ಲ. ದ್ವಿಧ್ರುವಿ ಅಸ್ವಸ್ಥತೆ, ಇದನ್ನು ಉನ್ಮಾದ–ಖಿನ್ನತೆಯ ಅಸ್ವಸ್ಥತೆ ಎಂದು ಕೂಡ ಕರೆಯಲಾಗುತ್ತದೆ. ಇದು ಖಿನ್ನತೆಯ ಹಂತಗಳು ಉನ್ಮಾದದ ಅಥವಾ ಲಘು ಉನ್ಮಾದದ ಕಾಲದೊಂದಿಗೆ ಬದಲಾಗುವ ಸ್ಥಿತಿಯಾಗಿದೆ. ಖಿನ್ನತೆಯನ್ನು ಪ್ರಸ್ತುತ ಪ್ರತ್ಯೇಕವಾದ ಅಸ್ವಸ್ಥತೆ ಎಂದು ವಿಂಗಡಿಸಿದರೂ ಕೂಡ, ಇದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಏಕೆಂದರೆ ಪ್ರಧಾನ ಖಿನ್ನತೆಗೆ ಒಳಾಗದವರೆಂದು ಗುರುತಿಸಲಾದ ವ್ಯಕ್ತಿಗಳು ಚಿತ್ತ ಸ್ಥಿತಿ ಅಸ್ವಸ್ಥತೆಯ ಮುಂದುವರಿಕೆಯನ್ನು ಸೂಚಿಸುವ ಲಘುಉನ್ಮಾದಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ.

ಪ್ರಧಾನ ಖಿನ್ನತೆಯ ಅಸ್ವಸ್ಥತೆಯನ್ನು ನಿರ್ಧರಿಸುವ ಮೊದಲು ಇತರ ಅಸ್ವಸ್ಥತೆಗಳನ್ನು ತಳ್ಳಿಹಾಕಬೇಕಾದ ಅಗತ್ಯವಿದೆ. ಇತರ ಅಸ್ವಸ್ಥತೆಗಳು ದೈಹಿಕ ಅನಾರೋಗ್ಯ, ಔಷಧಿಗಳು, ಮತ್ತು ಮಾದಕವಸ್ತು ಬಳಕೆಯಿಂದಾದ ಖಿನ್ನತೆಗಳನ್ನು ಒಳಗೊಳ್ಳುತ್ತವೆ. ದೈಹಿಕ ಅನಾರೋಗ್ಯದಿಂದ ಸಂಭವಿಸುವಂತಹ ಖಿನ್ನತೆಯನ್ನು, ಸಾಮಾನ್ಯ ವೈದ್ಯಕೀಯ ಸ್ಥಿತಿಯಿಂದಾಗಿ ಚಿತ್ತ ಸ್ಥಿತಿಯ ಅಸ್ವಸ್ಥತೆ ಎಂದು ನಿರ್ಣಯಿಸಲಾಗುತ್ತದೆ. ಈ ಪರಿಸ್ಥಿತಿಯನ್ನು ವ್ಯಕ್ತಿಯ ಹಿನ್ನಲೆ, ಪ್ರಯೋಗಾಲಯದ ಫಲಿತಾಂಶಗಳು, ಅಥವಾ ದೈಹಿಕ ಪರೀಕ್ಷೆಯ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಔಷಧಿಯ ದುರ್ಬಳಕೆ ಸೇರಿದಂತೆ ಮಾದಕವಸ್ತು ದುರ್ಬಳಕೆಯ ಖಿನ್ನತೆ, ಅಥವಾ ವಿಷಕಾರಿ ವಸ್ತುವಿನಿಂದ ಖಿನ್ನತೆ ಉಂಟಾಗಿದ್ದರೆ ಆಗ ಇದನ್ನು ವಸ್ತುವಿನಿಂದ ಪ್ರೇರಿತವಾದ ಚಿತ್ತ ಸ್ಥಿತಿಯ ಅಸ್ವಸ್ಥತೆ ಎಂದು ನಿರ್ಣಯಿಸಲಾಗುತ್ತದೆ. ಇಂತಹ ಪ್ರಸಂಗಗಳಲ್ಲಿ,ವಸ್ತುವನ್ನು ಕಾರಣ ನಿರ್ದೇಶದ ರೀತಿಯಲ್ಲಿ ಚಿತ್ತ ಸ್ಥಿತಿಯ ಗೊಂದಲಕ್ಕೆ ಸಂಬಂಧಿಸಿದೆಯೇ ಎಂದು ತೀರ್ಮಾನಿಸಲಾಗುತ್ತದೆ.

ಸ್ಕಿಜೊಎಫೆಕ್ಟಿವ್ ಅಸ್ವಸ್ಥತೆಯು ಮನೋವಿಕೃತ ಗುಣಲಕ್ಷಣಗಳೊಂದಿಗೆ ಪ್ರಧಾನ ಖಿನ್ನತೆಯ ಅಸ್ವಸ್ಥತೆಗಿಂತ ಭಿನ್ನವಾಗಿದೆ. ಏಕೆಂದರೆ ಸ್ಕಿಜೊಎಫೆಕ್ಟಿವ್ ಅಸ್ವಸ್ಥತೆಯಲ್ಲಿ, ಪ್ರಧಾನ ಚಿತ್ತಸ್ಥಿತಿ ಲಕ್ಷಣಗಳ ಅನುಪಸ್ಥಿತಿಯಲ್ಲಿ ಕೊನೆಯ ಪಕ್ಷ ಎರಡು ವಾರಗಳ ಭ್ರಮೆ ಅಥವಾ ಭ್ರಾಂತಿ ಕಾಣಿಸಿಕೊಳ್ಳುತ್ತದೆ.

ಖಿನ್ನತೆಯ ಲಕ್ಷಣಗಳನ್ನು ಛಿದ್ರಮನಸ್ಕತೆ, ಭ್ರಮೆ ಅಸ್ವಸ್ಥತೆ, ಮತ್ತು ನಿರ್ದಿಷ್ಟವಾಗಿ ನಮೂದಿಸಿರದ ಮನೋವಿಕೃತ ಅಸ್ವಸ್ಥತೆಯ ಸಂದರ್ಭದಲ್ಲಿ ಗುರುತಿಸಬಹುದಾಗಿದೆ. ಇಂತಹ ಪ್ರಸಂಗದಲ್ಲಿ ರೋಗಲಕ್ಷಣಗಳನ್ನು ಈ ಅಸ್ವಸ್ಥತೆಗಳಿಗೆ ಸಂಬಂಧಿಸಿರುವ ಗುಣಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ರತ್ಯೇಕ ರೋಗನಿರ್ಣಯದ ಅವಶ್ಯಕತೆಯು ಕಂಡುಬರುವುದಿಲ್ಲ. ಆದರೆ ಖಿನ್ನತೆಯ ಲಕ್ಷಣಗಳು ಪ್ರಧಾನ ಖಿನ್ನತೆ ಪ್ರಸಂಗದ ಸಂಪೂರ್ಣ ಮಾನದಂಡವನ್ನು ಮುಟ್ಟಿದರೆ ಆಗ ಪ್ರತ್ಯೇಕ ರೋಗನಿರ್ಣಯದ ಅಗತ್ಯವಿರುತ್ತದೆ. ಅಂತಹ ಪ್ರಸಂಗದಲ್ಲಿ, ಸ್ಪಷ್ಟವಾಗಿ ನಮೂದಿಸಿರದ ಖಿನ್ನತೆಯ ಅಸ್ವಸ್ಥತೆಯ ನಿರ್ಣಯ ಹಾಗು ಛಿದ್ರಮನಸ್ಕತೆಯ ರೋಗನಿರ್ಣಯ ಮಾಡಲಾಗುತ್ತದೆ.

ಡಿಮೆನ್ಷಿಯ(ಸ್ಮರಣೆ ನಷ್ಟ) ಮುಂತಾದ ಅರಿವಿನ ರೋಗಲಕ್ಷಣಗಳು ಉದಾಹರಣೆಗೆ, ದಿಗ್ಭ್ರಮೆ, ನಿರುತ್ಸಾಹ, ಏಕಾಗ್ರತೆಗೆ ತೊಂದರೆ ಮತ್ತು ನೆನಪಿನ ಶಕ್ತಿ ನಷ್ಟವಾಗುವುದುಮುಂತಾದುವನ್ನು ಪ್ರಧಾನ ಖಿನ್ನತೆಯ ಅಸ್ವಸ್ಥತೆಯೆಂದು ತಪ್ಪಾಗಿ ಭಾವಿಸಬಹುದು. ಹಿರಿಯ ರೋಗಿಗಳಲ್ಲಿ ಇವುಗಳನ್ನು ನಿರ್ಧರಿಸಲು ಬಹಳ ಕಷ್ಟವಾಗುತ್ತದೆ. ಇಂತಹ ಪ್ರಸಂಗಗಳಲ್ಲಿ, ರೋಗಿಯ ರೋಗ ಪೂರ್ವದ ಸ್ಥಿತಿಯು ಎರಡು ಅಸ್ವಸ್ಥತೆಗಳನ್ನು ವಿಂಗಡಿಸಲು ಸಹಾಯ ಮಾಡುತ್ತದೆ. ಡಿಮೆನ್ಷಿಯ ವಿಷಯದಲ್ಲಿ, ಅರಿವಿನ ಕ್ರಿಯೆ ಕುಸಿಯುವ ರೋಗಪೂರ್ವದ ಇತಿಹಾಸವಿರುತ್ತದೆ. ಪ್ರಧಾನ ಖಿನ್ನತೆ ಅಸ್ವಸ್ಥತೆಯ ರೋಗಿಗಳ ವಿಷಯದಲ್ಲಿ, ರೋಗಿಗಳು ರೋಗದ ಪೂರ್ವ ಸ್ಥಿತಿಗೆ ಹೋಲುವಂತಹ ವರ್ತನೆಯನ್ನೆ ತೋರಿಸುತ್ತಾರೆ ಹಾಗು ಖಿನ್ನತೆಯೊಂದಿಗೆ ಸಂಬಂಧಿಸಿರುವಂತಹ ಅಸಂಗತ ಸಂವೇದನಾತ್ಮಕ ಕುಸಿತವನ್ನು ತೋರಿಸುತ್ತಾರೆ.

ತಡೆಗಟ್ಟುವಿಕೆ

2008 ರ ಸಮೂಹ ವಿಶ್ಲೇಷಣೆಯು, ಹಲವಾರು ವ್ಯಕ್ತಿಗಳನ್ನು ಒಳಗೊಂಡ ಚಿಕಿತ್ಸೆಯಂತಹ ವರ್ತನೆಯ ಮಧ್ಯಪ್ರವೇಶಗಳು ಹೊಸದಾಗಿ ಆರಂಭವಾಗುವ ಖಿನ್ನತೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಎಂಬುದನ್ನು ಕಂಡುಕೊಂಡಿತು. ಏಕೆಂದರೆ ಇಂತಹ ಮಧ್ಯಸ್ಥಿಕೆಗಳನ್ನು ವ್ಯಕ್ತಿಗಳಿಗೆ ಅಥವಾ ಒಂದು ಸಣ್ಣ ಗುಂಪಿಗೆ ತಲುಪಿಸಿದಾಗ ಇವು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬರುತ್ತವೆ. ಅವರು ಗುರಿಯಾಗಿಸಿಕೊಂಡ ಬೃಹತ್ ಪ್ರಮಾಣದ ಪ್ರೇಕ್ಷಕರನ್ನುಅಂತರ್ಜಾಲದ ಮೂಲಕ ತಲುಪಬಲ್ಲರು ಎಂದು ಸೂಚಿಸಲಾಗಿದೆ. ಮುಂಚಿನ ಸಮೂಹ ವಿಶ್ಲೇಷಣೆಯು ಖಿನ್ನತೆ ತಡೆಗಟ್ಟುವ ಕಾರ್ಯಕ್ರಮಗಳಲ್ಲಿ ಸಾಮರ್ಥ್ಯ ವೃದ್ಧಿಸುವ ಭಾಗವು ಒಟ್ಟಾರೆಯಾಗಿ ವರ್ತನೆ ಆಧಾರಿತ ಕಾರ್ಯಕ್ರಮಗಳಿಗಿಂತ ಮೇಲ್ಮಟ್ಟದಲ್ಲಿದೆ ಎನ್ನುವುದನ್ನು ತೋರಿಸಿತು.

ಅಲ್ಲದೇ ವರ್ತನೆಗೆ ಸಂಬಂಧಿಸಿದ ಕಾರ್ಯಕ್ರಮಗಳು ವಿಶೇಷವಾಗಿ ಹಿರಿಯ ವಯಸ್ಸಿನ ಜನರಿಗೆ ಸಹಾಯಕವಾಗುವುದಿಲ್ಲ, ಅವರಿಗೆ ಸಾಮಾಜಿಕ ಬೆಂಬಲದ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂಬುದನ್ನು ಕಂಡುಕೊಂಡಿತು.   ಇದರ ಜೊತೆಯಲ್ಲಿ, ಅತ್ಯುತ್ತಮವಾಗಿ ಖಿನ್ನತೆಯನ್ನು ತಡೆಗಟ್ಟಿದಂತಹ ಕಾರ್ಯಕ್ರಮಗಳು ಎಂಟಕ್ಕಿಂತ ಹೆಚ್ಚು  ಅವಧಿಗಳನ್ನು ಒಳಗೊಂಡಿದ್ದು, ಪ್ರತಿಯೊಂದು 60 ರಿಂದ 90 ನಿಮಿಷಗಳವರೆಗೆ ಒಳಗೊಂಡಿತ್ತು; ಈ ಕಾರ್ಯಕ್ರಮಗಳಿಗೆ ವೃತ್ತಿಪರ ಮತ್ತು ವೃತ್ತಿಪರರಲ್ಲದ ಕೆಲಸಗಾರರನ್ನು ಒದಗಿಸಲಾಗಿತ್ತು; ಈ ಕಾರ್ಯಕ್ರಮಗಳು ಉತ್ತಮ ಮಟ್ಟದ ಸಂಶೋಧನ ವಿನ್ಯಾಸವನ್ನು ಹೊಂದಿದ್ದವು; ಕಾರ್ಯಕ್ರಮ ತ್ಯಜಿಸುವ ದರಗಳನ್ನು ವರದಿಮಾಡಿದ್ದವು; ಅಲ್ಲದೇ ಅತ್ಯುತ್ತಮ ಮಧ್ಯಸ್ಥಿಕೆಯನ್ನು ಹೊಂದಿತ್ತು. "ಕೋಪಿಂಗ್ ವಿತ್ ಡಿಪ್ರೆಷನ್ " ಕೋರ್ಸ್ (CWD) ಅನ್ನು, ಖಿನ್ನತೆಯ ಚಿಕಿತ್ಸೆಗೆ ಮತ್ತು ತಡೆಗಟ್ಟುವುದಕ್ಕೆ ಅತ್ಯಂತ ಯಶಸ್ವಿಯಾದ ಮನೋಶೈಕ್ಷಣಿಕ ಮಧ್ಯಸ್ಥಿಕೆಯಾಗಿದೆ ಎಂದು ಹೇಳಲಾಯಿತು (ವಿವಿಧ ಜನಸಂಖ್ಯೆಗಳಿಗೆ ಇದರ ಹೊಂದಾಣಿಕೆ ಮತ್ತು  ಮತ್ತು ಫಲಿತಾಂಶ ಎರಡಕ್ಕೂ). ಅಲ್ಲದೇ ಪ್ರಧಾನ ಖಿನ್ನತೆಯಲ್ಲಿ 38 ಪ್ರತಿಶತದಷ್ಟು ಅಪಾಯವನ್ನು ತಗ್ಗಿಸುತ್ತದೆ ಹಾಗು ಇತರ ಮನೋಚಿಕಿತ್ಸೆಗಳಿಗೆ ಹೋಲಿಸಿದರೆ ಇದು ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ. 

ನಿರ್ವಹಣೆ

ಮನೋಚಿಕಿತ್ಸೆ, ಔಷಧಿ ಮತ್ತು ವಿದ್ಯುತ್ಕಂಪನದ ಚಿಕಿತ್ಸೆಯು ಖಿನ್ನತೆಗೆ ಇರುವಂತಹ ಅತ್ಯಂತ ಸಾಮಾನ್ಯ ಚಿಕಿತ್ಸೆಗಳಾಗಿವೆ. ಮನೋಚಿಕಿತ್ಸೆ 18 ವರ್ಷಗಳ ಒಳಗಿನ ಜನರಿಗೆ ಬಳಸಬಹುದಾದ ಆಯ್ಕೆಯ ಚಿಕಿತ್ಸೆಯಾಗಿದೆ. ವಿದ್ಯುತ್ಕಂಪನದ ಚಿಕಿತ್ಸೆಯನ್ನು ಕೇವಲ ಅಂತಿಮ ಮಾರ್ಗವಾಗಿ ಬಳಸಲಾಗುತ್ತದೆ. ಚಿಕಿತ್ಸೆಯನ್ನು ಹೊರರೋಗಿಯ ಆಧಾರ ಮೇಲೆ ನೀಡಲಾಗುತ್ತದೆ. ಒಳರೋಗಿ ಘಟಕದ ಚಿಕಿತ್ಸೆಯಲ್ಲಿ ಸ್ವಯಂ ಅಥವಾ ಇತರರಿಗೆ ಗಮನಾರ್ಹ ಅಪಾಯವಿದ್ದಲ್ಲಿ ಪರಿಗಣಿಸಲಾಗುತ್ತದೆ.

ಅಭಿವೃದ್ಧೀಶೀಲ ರಾಷ್ಟ್ರಗಳಲ್ಲಿ ಚಿಕಿತ್ಸೆಯ ಆಯ್ಕೆಯು ಅತ್ಯಂತ ಸೀಮಿತವಾಗಿರುತ್ತದೆ. ಇಂತಹ ರಾಷ್ಟ್ರಗಳಲ್ಲಿ, ಮಾನಸಿಕ ಆರೋಗ್ಯ ಸಿಬ್ಬಂದಿ, ಔಷಧಿ ಮತ್ತು ಮನೋಚಿಕಿತ್ಸೆಗೆ ಅವಕಾಶ ಕಷ್ಟಕರವಾಗಿರುತ್ತದೆ. ಅನೇಕ ರಾಷ್ಟ್ರಗಳಲ್ಲಿ ಮಾನಸಿಕ ಆರೋಗ್ಯ ಸೇವೆಯ ಅಭಿವೃದ್ಧಿಯು ಕನಿಷ್ಠ ಮಟ್ಟದಲ್ಲಿದೆ; ಖಿನ್ನತೆಯನ್ನು ವಿರುದ್ಧವಾದ ಸಾಕ್ಷ್ಯವಿದ್ದರೂ, ಆಧುನಿಕ ಪ್ರಪಂಚದ ವಿದ್ಯಮಾನವೆಂಬಂತೆ ನೋಡಲಾಗುತ್ತದೆ. ಮತ್ತು ಅಂತರ್ಗತವಾಗಿ ಜೀವಬೆದರಿಕೆ ಉಂಟುಮಾಡುವ ಸ್ಥಿತಿಯಾಗಿ ಕಾಣಲಾಗುವುದಿಲ್ಲ..

ಮನಶ್ಚಿಕಿತ್ಸೆ

ಮನಶ್ಚಿಕಿತ್ಸೆ (ಮಾನಸಿಕ ಚಿಕಿತ್ಸೆ)ಯನ್ನು ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ, ಮನೋಚಿಕಿತ್ಸಕರು, ಮನೋವೈದ್ಯ ಮನಶ್ಶಾಸ್ತ್ರಜ್ಞರು, ವೈದ್ಯಕೀಯ ಸಮಾಜ ಸೇವಕರು, ಸಲಹೆಗಾರರು, ಮತ್ತು ಸೂಕ್ತ ತರಬೇತಿ ಪಡೆದ ಮನೋವೈದ್ಯಕೀಯ ದಾದಿಯರನ್ನು ಒಳಗೊಂಡಂತೆ ಮಾನಸಿಕ ಆರೋಗ್ಯ ವೃತ್ತಿಪರರು ನೀಡಬಹುದಾಗಿದೆ. ಖಿನ್ನತೆಯ ಅತ್ಯಂತ ಸಂಕೀರ್ಣವಾದ ಮತ್ತು ದೀರ್ಘಕಾಲದ ರೂಪಗಳಿಗೆ ಔಷಧ ಮತ್ತು ಮನಶ್ಚಿಕಿತ್ಸೆ ಎರಡನ್ನು ಸೇರಿಸಿ ಬಳಸಬಹುದಾಗಿದೆ. ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕ್ಲಿನಿಕಲ್ ಎಕ್ಸಲೆನ್ಸ್ ನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಔಷಧಿಯನ್ನು ಕೇವಲ ಮನೋವೈಜ್ಞಾನಿಕ ಚಿಕಿತ್ಸೆಯೊಂದಿಗೆ ಸೇರಿಸಿ ಮಾತ್ರ ಬಳಸಬೇಕಾಗುತ್ತದೆ . ಉದಾಹರಣೆಗೆ CBT, ಅನೇಕ ವ್ಯಕ್ತಿಗಳಿಗೆ ಚಿಕಿತ್ಸೆ, ಅಥವಾ ಕೌಟುಂಬಿಕ ಚಿಕಿತ್ಸೆ. ಮನಶ್ಚಿಕಿತ್ಸೆಯನ್ನು ಹಿರಿಯವಯಸ್ಸಿನ ಜನರಲ್ಲಿ ಪರಿಣಾಮಕಾರಿಯಾಗಿದೆ ಎಂದು ತೋರಿಸಲಾಗಿದೆ. ಯಶಸ್ವಿಯಾದ ಮನಶ್ಚಿಕಿತ್ಸೆಯನ್ನು ನಿಲ್ಲಿಸಿದ ನಂತರ ಅಥವಾ ಸಾಂದರ್ಭಿಕ ಬೂಸ್ಟರ್(ಉತ್ತೇಜಕ)ಅವಧಿಗಳಿಗೆ ಬದಲಾಯಿಸಿದ ನಂತರ ಖಿನ್ನತೆ ಮರುಕಳಿಸುವುದನ್ನು ತಗ್ಗಿಸುವಂತೆ ಕಂಡುಬರುತ್ತದೆ.

ಖಿನ್ನತೆಗಾಗಿ ಅತ್ಯಂತ ಹೆಚ್ಚು ಅಧ್ಯಯನ ಮಾಡಲಾದ ಮನಶ್ಚಿಕಿತ್ಸೆಯ ರೂಪ CBT ಆಗಿದೆ. ಇದು ಅದರ ರೋಗಿಗಳಿಗೆ ಸ್ವವೈಫಲ್ಯತೆಗೆ ಸವಾಲು ಹಾಕುವಂತೆ ಬೋಧಿಸುತ್ತದೆ, ಆದರೆ ಆಲೋಚನ ರೀತಿಗಳಿಗೆ ಒಳಗಾಗುವುದು (ಅರಿವುಗಳು) ಮತ್ತು ಪ್ರತ್ಯುತ್ಪಾದಕ ನಡವಳಿಕೆಗಳನ್ನು ಬದಲಾಯಿಸಲು ಸೂಚಿಸುತ್ತದೆ. 1990ರ ದಶಕದ ಮಧ್ಯಾವಧಿಯಲ್ಲಿ ಆರಂಭವಾದ ಸಂಶೋಧನೆಯು CBT ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲದು ಅಥವಾ ಖಿನ್ನತೆಯ ತೀವ್ರತೆಯನ್ನು ತಗ್ಗಿಸುವಲ್ಲಿ ರೋಗಿಗಳಿಗೆ ನೀಡಲಾಗುವ ಖಿನ್ನತೆ-ಶಮನಕಾರಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು ಎಂಬುದನ್ನು ಸೂಚಿಸಿವೆ. CBT ಯು ಖಿನ್ನತೆಗೆ ಒಳಗಾದ ಹರೆಯದವರಲ್ಲಿ ಅತ್ಯಂತ ಪರಿಣಾಮಕಾರಿಯಾಗಿರಬಹುದು, ಆದರೂ ತೀವ್ರವಾದ ಪ್ರಸಂಗಗಳ ಮೇಲೆ ಇದರ ಪರಿಣಾಮ ಎಷ್ಟರ ಮಟ್ಟಿಗಿರಬಹುದು ಎಂಬುದು ಖಂಡಿತವಾಗಿ ತಿಳಿದಿಲ್ಲ. CBT ಯೊಂದಿಗೆ ಫ್ಲೋಕ್ಸೊಟೈನ್ ಅನ್ನು ಸೇರಿಸಿ ಚಿಕಿತ್ಸೆ ನೀಡುವುದರಿಂದ ಯಾವುದೇ ರೀತಿಯ ಅಧಿಕ ಲಾಭವಾಗುವಂತೆ ತೋರುವುದಿಲ್ಲ, ಅಥವಾ , ಕೇವಲ ಕನಿಷ್ಠ ಮಟ್ಟದ ಲಾಭವನ್ನು ಮಾತ್ರ ನೋಡಬಹುದಾಗಿದೆ. ಹರೆಯದವರಲ್ಲಿ ಅರಿವಿನ ವರ್ತನೆಯ ಚಿಕಿತ್ಸೆಯು ಯಶಸ್ವಿಯಾಗಬಹುದೆಂದು ಅನೇಕರು ಮುಂಗಾಣುತ್ತಾರೆ: ಉತ್ತಮ ಮಟ್ಟದ ವಿವೇಕಯುಕ್ತ ಆಲೋಚನೆಗಳು ಹಾಗೂ ನಿರಾಶೆ, ನಕಾರಾತ್ಮಕ ಆಲೋಚನೆಗಳು ಮತ್ತು ಸಂವೇದನಾತ್ಮಕ ವಿಕಾರಗಳನ್ನು ಕಡಿಮೆ ಮಾಡುತ್ತದೆ. CBT ಯು ವಿಶೇಷವಾಗಿ ಖಿನ್ನತೆ ಮರುಕಳಿಸದಂತೆ ತಡೆಗಟ್ಟುವಲ್ಲಿ ಲಾಭದಾಯಕವಾಗಿದೆ. ಸಂವೇದನಾತ್ಮಕ ವರ್ತನೆಯ ಚಿಕಿತ್ಸೆಯಲ್ಲಿರುವ ಅನೇಕ ವಿಭಿನ್ನ ರೂಪಗಳನ್ನು ಖಿನ್ನತೆಗೆ ಒಳಗಾದ ರೋಗಿಗಳಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ವಿವೇಕಯುಕ್ತ ಭಾವೋತ್ತೇಜಕ ವರ್ತನೆಯ ಚಿಕಿತ್ಸೆ, ಹಾಗು ಇತ್ತೀಚೆಗೆ ಸಾವಧಾನತೆ-ಆಧಾರಿತ ಸಂವೇದನಾತ್ಮಕ ಚಿಕಿತ್ಸೆ.

ಮನೋವಿಶ್ಲೇಷಣೆ ಎಂಬುದು ಚಿಂತನೆಯ ಶಾಲೆಯಾಗಿದ್ದು, ಸಿಗ್ಮಂಡ್ ಫ್ರಾಯ್ಡ್ ಸ್ಥಾಪಿಸಿದರು. ಇದು ಅಪ್ರಜ್ಞಾತ ಸ್ಥಿತಿಯ ಮಾನಸಿಕ ಸಂಘರ್ಷಗಳ ನಿರ್ಣಯಕ್ಕೆ ಹೆಚ್ಚು ಒತ್ತುನೀಡಿತು. ಮನೋವಿಶ್ಲೇಷಣ ಪದ್ಧತಿಯ ವಿಧಾನಗಳನ್ನು ಕೆಲವು ಚಿಕಿತ್ಸಕರು ಪ್ರಧಾನ ಖಿನ್ನತೆಗೆ ಒಳಗಾದಂತಹ ರೋಗಿಗೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಮನೋಬಲವೈಜ್ಞಾನಿಕ ಮನಶ್ಚಿಕಿತ್ಸೆ ಎಂದು ಕರೆಯಲಾಗುವಂತಹ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಸಾರಸಂಗ್ರಹ ಪದ್ಧತಿಯು, ಬಹುಸಡಿಲವಾಗಿ ಮನೋವಿಶ್ಲೇಷಣೆಯನ್ನು ಆಧರಿಸಿದೆ ಹಾಗು ಸಾಮಾಜಿಕ ಮತ್ತು ವ್ಯಕ್ತಿಗಳ ನಡುವಣ ಸಂಬಂಧದ ಮೇಲೆ ಗಮನಹರಿಸುತ್ತದೆ. ಮನೋಬಲವೈಜ್ಞಾನಿಕ ಪದ್ಧತಿಯ ಆಧಾರದ ಮೇಲೆ ಮಾಡಲಾದಂತಹ, ಮಾನಸಿಕ ಚಿಕಿತ್ಸೆಯ ಮೂರು ನಿಯಂತ್ರಿತ ಪರೀಕ್ಷೆಗಳ ಸಮೂಹ ವಿಶ್ಲೇಷಣೆಯಲ್ಲಿ, ಈ ಮಾರ್ಪಾಡು ಸ್ವಲ್ಪ ಮತ್ತು ಸಾಧಾರಣ ಖಿನ್ನತೆಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ಲೋಗೋತೆರಪಿ, ಎಂಬುದು ಅಸ್ಥಿತ್ವದಲ್ಲಿರುವಂತಹ ಮನಶ್ಚಿಕಿತ್ಸೆಯ ಒಂದು ರೂಪವಾಗಿದೆ. ಆಸ್ಟ್ರೇಲಿಯಾದ ಮನೋವೈದ್ಯರಾದ ವಿಕ್ಟರ್ ಫ್ರಾಂಕಲ್ ಎಂಬುವವರು ಇದನ್ನು ಬೆಳೆಸಿದರು. ಇದು ಅರ್ಥಹೀನತೆ ಮತ್ತು ನಿರರ್ಥಕತೆ ಭಾವನೆಗಳಿಗೆ ಸಂಬಂಧಿಸಿದ "ಶೂನ್ಯಸ್ಥಿತಿ" ತುಂಬುವುದನ್ನು ಸೂಚಿಸುತ್ತದೆ. ಈ ರೀತಿಯ ಮನಶ್ಚಿಕಿತ್ಸೆಯು ಖಿನ್ನತೆಗೆ ಒಳಗಾದಂತಹ ಹಿರಿಯ ಹರೆಯದವರಿಗೆ ಸಹಾಯಕವಾಗಿದೆ ಎಂದು ತಿಳಿಸುತ್ತದೆ.

ಖಿನ್ನತೆ ಶಮನಕಾರಿಗಳು

ಲಿಖಿತ ಸೂಚಿ ಖಿನ್ನತೆ-ಶಮನಕಾರಿಗಳ ಪರಿಣಾಮವು ಮನಶ್ಚಿಕಿತ್ಸೆಯ ಶಮನಕಾರಿಗಳಿಗಿಂತ ಸ್ವಲ್ಪಮಟ್ಟಿಗೆ ವಿಶೇಷವಾಗಿ ದೀರ್ಘಕಾಲದ ಪ್ರಧಾನ ಖಿನ್ನತೆಯ ಪ್ರಸಂಗಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಆದರೂ ಅಲ್ಪಾವಧಿಯ ಪರೀಕ್ಷೆಗಳಲ್ಲಿ ಹೆಚ್ಚು ರೋಗಿಗಳು— ವಿಶೇಷವಾಗಿ ಅಷ್ಟೇನೂ ತೀವ್ರವಲ್ಲದ ಖಿನ್ನತೆಯ ರೂಪಗಳಿಂದ ಬಳಲುತ್ತಿರುವವರು— ಮನಶ್ಚಿಕಿತ್ಸೆಗಿಂತ ಹೆಚ್ಚಾಗಿ ಔಷಧಿಯನ್ನು ನಿಲ್ಲಿಸುತ್ತಾರೆ, ಏಕೆಂದರೆ ಔಷಧಿಗಳಿಂದ ಉಂಟಾಗುವಂತಹ ಪ್ರತಿಕೂಲ ಪರಿಣಾಮಗಳು ಹಾಗು ಔಷಧವಿಜ್ಞಾನ ಚಿಕಿತ್ಸೆಗಳಿಗಿಂತ ಮನೋವೈಜ್ಞಾನಿಕ ಚಿಕಿತ್ಸೆಗಳ ಕಡೆಗೆ ರೋಗಿಗಳು ಹೆಚ್ಚು ಒಲವು ತೋರಿಸುವುದರಿಂದ ಔಷಧಿಯ ಬಳಕೆಯನ್ನು ನಿಲ್ಲಿಸುತ್ತಾರೆ.

ಕನಿಷ್ಠ ಪ್ರತಿಕೂಲ ಪರಿಣಾಮ ಬೀರುವಂತಹ ಪರಿಣಾಮಕಾರಿ ಖಿನ್ನತೆಯ-ಶಮನಕಾರಿ ಔಷಧಿಯನ್ನು ಪತ್ತೆಮಾಡಲು ಔಷಧಿಯ ಪ್ರಮಾಣಗಳಲ್ಲಿ ಹೊಂದಾಣಿಕೆ ಮಾಡಬಹುದು. ಅಲ್ಲದೇ ಅಗತ್ಯವಿದ್ದಲ್ಲಿ ಖಿನ್ನತೆ-ಶಮನಕಾರಿಗಳ ವಿವಿಧ ವರ್ಗಗಳ ಮಿಶ್ರಣವನ್ನು ಪ್ರಯತ್ನಿಸಬಹುದು. ಮೊದಲನೆ ಖಿನ್ನತೆ-ಶಮನಕಾರಿ 50–75 ಪ್ರತಿಶತದಷ್ಟು ದರಗಳಲ್ಲಿ ಪ್ರತಿಕ್ರಿಯಿಸುತ್ತವೆ. ಅಲ್ಲದೇ ಇದು ಚಿಕಿತ್ಸೆ ಪ್ರಾರಂಭವಾದ ಮೇಲೆ ಖಿನ್ನತೆಯನ್ನು ತಗ್ಗಿಸಲು ಸುಮಾರು ಆರರಿಂದ ಎಂಟು ವಾರಗಳು ತೆಗೆದುಕೊಳ್ಳುತ್ತದೆ. ಈ ಚಿಕಿತ್ಸೆ ನಂತರ ರೋಗಿಯು ಗುಣಮುಖನಾಗಿ ಸಹಜಸ್ಥಿತಿಗೆ ಮರಳುತ್ತಾನೆ. ಖಿನ್ನತೆ-ಶಮನಕಾರಿ ಔಷಧಿಗಳ ಚಿಕಿತ್ಸೆಯನ್ನು ಸಾಮಾನ್ಯವಾಗಿ ಉಪಶಮನದ ನಂತರ ಅದು ಮತ್ತೆ ಮರಳದಂತೆ ತಡೆಯಲು16 ರಿಂದ 20 ವಾರಗಳ ವರೆಗೆ ಮುಂದುವರೆಸಲಾಗುತ್ತದೆ, ಒಂದು ವರ್ಷದವರೆಗೆ ಕೂಡ ಇದನ್ನು ಮುಂದುವರೆಸಲು ಶಿಫಾರಸು ಮಾಡಲಾಗುತ್ತದೆ. ದೀರ್ಘಕಾಲದ ಖಿನ್ನತೆಗೆ ಒಳಗಾದ ಜನರು ಖಿನ್ನತೆ ಮತ್ತೆ ಮರುಕಳಿಸದಂತೆ ತಡೆಗಟ್ಟಲು ಅನಿರ್ದಿಷ್ಟಾವಧಿ ಔಷಧಿಯನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ.

ಸೆರ್ಟ್ರಲೈನ್, ಎಸಿಟಲೊಪ್ರಮ್, ಫ್ಲಕ್ಸೊಟೈನ್, ಪ್ಯಾರಾಕ್ಸಟೈನ್ ಮತ್ತು ಸಿಟಲೊಪ್ರಾಮ್ ನಂತಹ ಸೆಲೆಕ್ಟಿವ್ ಸಿರೊಟೋನಿನ್ ರಿಅಪ್‌ಟೇಕ್ ಇನ್ ಹೆಬಿಟರ್ ಗಳು (SSRIs) ಅವುಗಳ ಪರಿಣಾಮಕಾರಿತ್ವದಿಂದ ಮುಖ್ಯ ಔಷಧಿಗಳಾಗಿವೆ. ಇವು ತುಲನಾತ್ಮಕವಾಗಿ ಅತ್ಯಂತ ಕಡಿಮೆ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಇತರೆ ಶಮನಕಾರಿಗಳಿಂತ ಕಡಿಮೆ ವಿಷಕಾರಿ ಆಗಿರುತ್ತದೆ. ಒಂದು SSRI ಗೆ ಪ್ರತಿಕ್ರಿಯಿಸದಂತಹ ರೋಗಿಗಳಿಗೆ ಮತ್ತೊಂದು ಖಿನ್ನತೆ-ಶಮನಕಾರಿಗೆ ಬದಲಾಯಿಸಬಹುದು. ಇದರಿಂದಾಗಿ ಬಹುಪಾಲು 50ಪ್ರತಿಶತದಷ್ಟು ಖಿನ್ನತೆಯ ಪ್ರಸಂಗಗಳಲ್ಲಿ ಸುಧಾರಣೆ ಕಾಣಿಸಿದೆ. ಅಸಾಮಾನ್ಯವಾದ ಖಿನ್ನತೆ-ಶಮನಕಾರಿ ಬುಪ್ರೊಪಿನ್ಬದಲಾಯಿಸುವುದು ಮತ್ತೊಂದು ಆಯ್ಕೆಯಾಗಿದೆ. ವೆನ್ಲಾಫಾಕ್ಸಿನ್ ಎಂಬುದು ವಿಭಿನ್ನ ಕಾರ್ಯವಿಧಾನವನ್ನು ಹೊಂದಿರುವ ಖಿನ್ನತೆ-ಶಮನಕಾರಿಯಾಗಿದೆ. ಅಲ್ಲದೇ ಸಾಧಾರಣವಾಗಿ SSRIಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಆದರೂ, UK ಯಲ್ಲಿ ವೆನ್ಲಾಫಾಕ್ಸಿನ್ ಅನ್ನು ಮೊದಲನೆಯ ಹಂತದ ಚಿಕಿತ್ಸೆಯಾಗಿ ಬಳಸಲಾಗುವುದಿಲ್ಲ. ಏಕೆಂದರೆ ದಾಖಲೆಗಳು ಇದರ ಲಾಭಕ್ಕಿಂತ ಅಪಾಯಗಳೆ ಹೆಚ್ಚಿವೆ ಎಂಬುದನ್ನು ಸೂಚಿಸುತ್ತವೆ, ಅಲ್ಲದೇ ಇದನ್ನು ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ನಿರ್ದಿಷ್ಟವಾಗಿ ವಿರೋಧಿಸಲಾಗಿದೆ. ಹದಿಹರೆಯದವರ ಖಿನ್ನತೆಗಾಗಿ ಫ್ಲಕ್ಸೊಟೈನ್ ಮತ್ತು ಎಸಿಟಲೊಪ್ರಮ್ ಶಿಫಾರಸ್ಸು ಮಾಡಲಾಗುವ ಎರಡು ಆಯ್ಕೆಗಳಾಗಿವೆ. ಖಿನ್ನತೆ-ಶಮನಕಾರಿಗಳು ಮಕ್ಕಳಲ್ಲಿ ಉಪಯೋಕರವಾಗಿ ಕಂಡುಬಂದಿಲ್ಲ. ಯಾವುದೇ ಖಿನ್ನತೆ-ಶಮನಕಾರಿ ಸಿರಮ್ ಸೋಡಿಯಮ್ನ ಮಟ್ಟವನ್ನು ಕಡಿಮೆ ಮಾಡಬಲ್ಲದು (ಇದನ್ನು ಹೈಪೊನೆಟ್ರೇಮಿಯಎಂದು ಕೂಡ ಕರೆಯಲಾಗುತ್ತದೆ); ಆದಾಗ್ಯೂ, ಇದು ಹೆಚ್ಚಾಗಿ SSRIಗಳಲ್ಲಿ ನಲ್ಲಿ ಕಂಡುಬರುತ್ತದೆಂದು ವರದಿಯಾಗಿದೆ. ನಿದ್ರಾಹೀನತೆಯನ್ನು ಉಂಟುಮಾಡುವುದು ಅಥವಾ ಇನ್ನಷ್ಟು ಹೆಚ್ಚಿಸುವುದು SSRIಗಳಿಗೆ ಅಸಾಮಾನ್ಯವಲ್ಲ; ಇಂತಹ ಪ್ರಸಂಗಗಳಲ್ಲಿ ಶಮನಗೊಳಿಸುವ ಖಿನ್ನತೆ-ಶಮನಕಾರಿ ಮಿರ್ಟಾಜ್ಪೈನ್ ಅನ್ನು ಬಳಸಬಹುದು.

ಏಕಅಮೈನ್ ಆಕ್ಸಿಡೇಸ್ ಪ್ರತಿರೋಧಕಗಳುಖಿನ್ನತೆ-ಶಮನಕಾರಿಗಳ ಹಳೆಯ ವರ್ಗಗಳಾಗಿವೆ. ಜೀವಬೆದರಿಕೆಯ ಆಹಾರಕ್ರಮ ಮತ್ತು ಔಷಧಿಯ ಪರಸ್ಪರ ಕ್ರಿಯೆಯಿಂದ ಇದು ವಿಪತ್ತಿಗೆ ಸಿಕ್ಕಿದೆ. ಇವುಗಳನ್ನು ಈಗಲೂ ವಿರಳವಾಗಿ ಮಾತ್ರ ಬಳಸಲಾಗುತ್ತಿದೆ, ಆದರೂ ಈ ವರ್ಗದ ನೂತನ ಮತ್ತು ಸಹನೀಯ ಕಾರಕಗಳನ್ನು ಅಭಿವೃದ್ಧಿಪಡಿಸಲಾಗಿದೆ.

"ಚಿಕಿತ್ಸೆಗೆ ಜಗ್ಗದ ಖಿನ್ನತೆ" ಮತ್ತು "ಚಿಕಿತ್ಸೆ ನಿರೋಧಕ ಖಿನ್ನತೆ" ಎಂಬ ಪದಗಳನ್ನು ಕನಿಷ್ಠ ಪಕ್ಷ ಎರಡು ಖಿನ್ನತೆ-ಶಮನಕಾರಿಗಳ ಬಳಕೆಗೆ ಪ್ರತಿಕ್ರಿಯೆ ನೀಡದಂತಹ ಪ್ರಸಂಗಗಳನ್ನು ವಿವರಿಸಲು ಬಳಸಲಾಗುತ್ತದೆ. ಅನೇಕ ಪ್ರಮುಖ ಅಧ್ಯಯನಗಳಲ್ಲಿ, ಕೇವಲ 35 ಪ್ರತಿಶತದಷ್ಟು ರೋಗಿಗಳು ಮಾತ್ರ ವೈದ್ಯಕೀಯ ಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆತೋರುತ್ತಾರೆ. . ವ್ಯಕ್ತಿಯಲ್ಲಿ ಚಿಕಿತ್ಸೆಯನ್ನು ತಡೆದುಕೊಳ್ಳುವಂತಹ ಖಿನ್ನತೆಯಿದೆಯೇ ಅಥವಾ ಪ್ರಧಾನ ಖಿನ್ನತೆಗೆ ಒಳಗಾದ ರೋಗಿಗಳಲ್ಲಿ ಸಾಮಾನ್ಯವಾದ ಒಟ್ಟಿಗಿರುವ ಅಸ್ವಸ್ಥತೆಗಳಿಂದ ಸಮಸ್ಯೆ ಉಂಟಾಗಿದೆಯೇ ಎಂದು ವೈದ್ಯರಿಗೆ ನಿರ್ಧರಿಸಲು ಕಷ್ಟವಾಗುತ್ತದೆ.

ಅಮೇರಿಕದ ಬಹು ವಿಶ್ವವಿದ್ಯಾನಿಲಯಗಳ ಮನಶ್ಶಾಸ್ತ್ರಜ್ಞರ ತಂಡವು, ಖಿನ್ನತೆಯ-ಶಮನಕಾರಿಗಳು ಖಿನ್ನತೆಯನ್ನು ಕಡಿಮೆ ಅಥವಾ ಸಾಧಾರಣ ಖಿನ್ನತೆ ಪ್ರಸಂಗಗಳಲ್ಲಿ ಪ್ಲಾಸೀಬೋ ಗಿಂತ ಉತ್ತಮ ಪರಿಣಾಮ ಬೀರುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಅಧ್ಯಯನವು ಪ್ಯಾರಾಕ್ಸಟೈನ್ ಮತ್ತು ಇಮಿಪ್ರಮೈನ್ ನ ಮೇಲೆ ಗಮನಹರಿಸಿತ್ತು

ಔಷಧ ವೃದ್ಧಿ

ಚಿಕಿತ್ಸೆಗೆ ಪ್ರತಿರೋಧವನ್ನು ನೀಡುವಂತಹ ಪ್ರಸಂಗಗಳಲ್ಲಿ ಖಿನ್ನತೆ-ಶಮನಕಾರಿಯ ಪ್ರಭಾವವನ್ನು ಹೆಚ್ಚಿಸಲು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುವ ಔಷಧಿಗಳನ್ನು ಸೇರಿಸಬಹುದು. ಖಿನ್ನತೆ-ಶಮನಕಾರಿಗಳಿಗೆ ಪ್ರತಿಕ್ರಿಯಿಸಲು ವಿಫಲವಾದವರಿಗೆ ಖಿನ್ನತೆ-ಶಮನಕಾರಿ ಚಿಕಿತ್ಸೆ ವೃದ್ಧಿಗೆ ಲಿತಿಯಮ್ ಲವಣಗಳೊಂದಿಗೆ ಔಷಧಿಗಳನ್ನು ಬಳಸಲಾಗುತ್ತದೆ. ಇದಿಷ್ಟೇ ಅಲ್ಲದೇ, ಲಿತಿಯಮ್ ಖಿನ್ನತೆಯ ಮರುಕಳಿಸುವಿಕೆಯಲ್ಲಿ ಆತ್ಮಹತ್ಯೆಯ ಅಪಾಯವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ. ಥೈರಾಯ್ಡ್ ಹಾರ್ಮೋನ್ ಸೇರಿಸುವುದರಿಂದ, ಸಹಜವಾಗಿ ಕಾರ್ಯನಿರ್ವಹಿಸುವ ಥೈರಾಯ್ಡ್ ಹೊಂದಿರುವ ರೋಗಿಗಳಲ್ಲಿ ಕೂಡ ಟ್ರಿಐಡೊಥೈರಾನೈನ್ ಲಿತಿಯಮ್‌ನಂತೆ ಕಾರ್ಯನಿರ್ವಹಿಸುತ್ತದೆ. ರೋಗಿಯು ಖಿನ್ನತೆ-ಶಮನಕಾರಿಗಳಿಗೆ ಪ್ರತಿಕ್ರಿಯಿಸದಿದ್ದಲ್ಲಿ ಅಟಿಪಿಕಲ್ ಆಂಟಿಸೈಕೊಟಿಕ್ ಗಳನ್ನು ಸೇರಿಸುವುದು ಖಿನ್ನತೆ-ಶಮನಕಾರಿ ಔಷಧಿಗಳ ಪರಿಣಾಮವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಆದರೂ ಇದು ಹೆಚ್ಚಾಗಿ ಅಡ್ಡ ಪರಿಣಾಮಗಳನ್ನು ಬೀರುತ್ತದೆ.

ಔಷಧ ಮತ್ತು ಮನಶ್ಚಿಕಿತ್ಸೆಯ ತುಲಾನಾತ್ಮಕ ಫಲಪ್ರದತೆ

FDA ಗೆ ಮಂಡಿಸಲಾದ ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳ ಇತ್ತೀಚಿನ ಎರಡು ಸಮೂಹ-ವಿಶ್ಲೇಷಣೆಗಳು ಕೆಳಕಂಡಂತೆ ತಿಳಿಸಿವೆ: ಖಿನ್ನತೆ-ಶಮನಕಾರಿಗಳು ಸಂಖ್ಯಾಶಾಸ್ತ್ರೀಯವಾಗಿ, ಪ್ಲಾಸೀಬೋಗಿಂತ ಹೆಚ್ಚು ಪರಿಣಾಮಕಾರಿ. ಆದರೆ ಅವುಗಳ ಒಟ್ಟು ಪರಿಣಾಮಕಾರಿತ್ವ ಕಡಿಮೆಯಿಂದ ಸಾಧಾರಣ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ "ವೈದ್ಯಕೀಯವಾಗಿ ಗಮನಾರ್ಹ" ಪರಿಣಾಮದ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕ್ಲಿನಿಕಲ್ ಎಕ್ಸಲೆನ್ಸ್ ವಿಧಿಸಿರುವ ಮಾನದಂಡವನ್ನು ಅವು ಮೀರಿಹೋಗಿಲ್ಲ. ಸಾಧಾರಣ ಖಿನ್ನತೆಗೆ ಪರಿಣಾಮದ ಗಾತ್ರ ತುಂಬ ಕಡಿಮೆಯಿದೆ. ಆದರೆ ಇದು ತೀವ್ರವಾದ ಖಿನ್ನತೆಗೆ ತೀವ್ರತೆ ಹೆಚ್ಚಿಸುವ ಮೂಲಕ"ವೈದ್ಯಕೀಯ ಗಮನಾರ್ಹತೆ" ಯನ್ನು ಮುಟ್ಟುತ್ತದೆ. ಈ ಫಲಿತಾಂಶಗಳು ಹಿಂದಿನ ವೈದ್ಯಕೀಯ ಅಧ್ಯಯನಗಳೊಂದಿಗೆ ಹೊಂದಿಕೆಯಾಗುತ್ತವೆ. ಈ ಅಧ್ಯಯನಗಳಲ್ಲಿ ತೀವ್ರವಾದ ಖಿನ್ನತೆಗೆ ಒಳಗಾದ ರೋಗಿಗಳು ಮಾತ್ರ ಪ್ಲಾಸೀಬೋ ಚಿಕಿತ್ಸೆಗಿಂತ ಹೆಚ್ಚು ಮನಶ್ಚಿಕಿತ್ಸೆ ಅಥವಾ ಖಿನ್ನತೆ-ಶಮನಕಾರಿ ಇಮಿಪ್ರಮೈನ್ ಚಿಕಿತ್ಸೆಯಿಂದ ಲಾಭಪಡೆಯುತ್ತಿದ್ದರು. ಒಂದೇ ರೀತಿಯ ಫಲಿತಾಂಶವನ್ನು ಪಡೆದಿದ್ದರೂ, ಲೇಖಕರು ಅವರ ಅರ್ಥವಿವರಣೆಯ ಬಗ್ಗೆ ವಾದಿಸಿದರು. ಒಬ್ಬ ಲೇಖಕ "ಯಾವುದೇ ರೋಗಿಗಾದರು ಖಿನ್ನತೆ-ಶಮನಕಾರಿ ಔಷಧಿಯ ಲಿಖಿತ ಸೂಚಿಯನ್ನು ಬೆಂಬಲಿಸುವಂತಹ ದಾಖಲೆಗಳು ಕಡಿಮೆ ಇರುವಂತೆ ತೋರುತ್ತವೆ. ಆದರೆ ತೀವ್ರವಾಗಿ ಖಿನ್ನತೆಗೆ ಒಳಪಟ್ಟ ರೋಗಿಗಳಿಗೆ ಪರ್ಯಾಯ ಚಿಕಿತ್ಸೆಗಳಿಂದ ಲಾಭದೊರೆಯದಿದ್ದಲ್ಲಿ ಮಾತ್ರ ಖಿನ್ನತೆ- ಶಮನಕಾರಿ ಔಷಧಿಯ ಲಿಖಿತ ಸೂಚಿಯನ್ನು ಬೆಂಬಲಿಸಲಾಗುತ್ತದೆ" ಎಂದು ತಿಳಿಸಿದ್ದಾರೆ. ಮತ್ತೊಬ್ಬ ಲೇಖಕರು, "ಖಿನ್ನತೆ-ಶಮನಕಾರಿಯ 'ಬಟ್ಟಲು' ಭರ್ತಿಯಾಗಲು ತುಂಬ ದೂರದಲ್ಲಿದೆ" ಆದರೆ "ಅದು ಸಂಪೂರ್ಣ ಖಾಲಿಯಾಗಿದೆ" ಎನ್ನುವುದಕ್ಕೆ ಅಸಮ್ಮತಿ ಸೂಚಿಸಿದರು. ಔಷಧಿಗೆ ಮೊದಲ ಹಂತದ ಪರ್ಯಾಯವು ಮನಶ್ಚಿಕಿತ್ಸೆಯಾಗಿದ್ದು, ಅದು ಅತ್ಯುತ್ತಮ ಫಲದಾಯಕತೆಯನ್ನು ಹೊಂದಿಲ್ಲ ಎಂದು ತಿಳಿಸಿದರು. .

ಪ್ರಧಾನ ಖಿನ್ನತೆಯ ಚಿಕಿತ್ಸೆಯಲ್ಲಿ ಖಿನ್ನತೆ-ಶಮನಕಾರಿಗಳು ಸಾಮಾನ್ಯವಾಗಿ ಮನಶ್ಚಿಕಿತ್ಸೆಯಂತೆ ಪರಿಣಾಮಕಾರಿಯಾಗಿವೆ ಹಾಗು ಈ ತೀರ್ಮಾನವು MDDಯ ಸೌಮ್ಯ ಮತ್ತು ತೀವ್ರರೂಪಗಳೆರಡಕ್ಕೂ ನಿಜವೆನಿಸಿದೆ ಎನ್ನುವುದು ಸಂಶೋಧನೆಯ ಒಂದು ಅರ್ಥವಿವರಣೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಔಷಧಿಯು ಡಿಸ್ತಿಮಿಯ ಗೆ ಉತ್ತಮ ಫಲಿತಾಂಶವನ್ನು ಬೀರುತ್ತದೆ. SSRIಗಳ ಉಪಗುಂಪು ಮನಶ್ಚಿಕಿತ್ಸೆಗಿಂತ ಸ್ವಲ್ಪಮಟ್ಟಿಗೆ ಹೆಚ್ಚು ಫಲಕಾರಿಯಾಗಿದೆ. ಮತ್ತೊಂದು ಕಡೆಯಲ್ಲಿ ಮನಶ್ಚಿಕಿತ್ಸೆಗಿಂತ ಖಿನ್ನತೆ-ಶಮನಕಾರಿ ಚಿಕಿತ್ಸೆಯನ್ನು ಅಧಿಕ ಸಂಖ್ಯೆಯ ರೋಗಿಗಳು ಗಮನಾರ್ಹವಾಗಿ ತ್ಯಜಿಸುತ್ತಾರೆ. ಖಿನ್ನತೆ-ಶಮನಕಾರಿಗಳ ಅಡ್ಡಪರಿಣಾಮಗಳ ಕಾರಣದಿಂದ ಹೀಗೆ ಮಾಡುತ್ತಾರೆ. ಯಶಸ್ವಿ ಮನಶ್ಚಿಕಿತ್ಸೆಯು ಪ್ರಧಾನ ಖಿನ್ನತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಿದ ಮೇಲೆ ಅಥವಾ ಸಾಂದರ್ಭಿಕವಾಗಿ "ಮರುಕಳಿಸುವ" ಅವಧಿಗಳಿಂದ ಬದಲಾಯಿಸಿದ ನಂತರವು ಅದರ ಮರುಕಳಿಸುವಿಕೆಯನ್ನು ತಡೆಯುವಂತೆ ಕಂಡುಬರುತ್ತದೆ. ತಡೆಗಟ್ಟುವಿಕೆಯ ಇದೇ ಮಟ್ಟವನ್ನು ಖಿನ್ನತೆ-ಶಮನಕಾರಿ ಚಿಕಿತ್ಸೆ ಮುಂದುವರೆಸುವ ಮೂಲಕ ಪಡೆದುಕೊಳ್ಳಬಹುದು. ಅದೇನೇ ಆದರೂ ಈ ಕುರಿತು ಮತ್ತೊಂದು ವಾದ ಕೆಳಕಂಡಂತಿದೆ: ಔಷಧಿ ಮತ್ತು ಮನಶ್ಚಿಕಿತ್ಸೆ ಎರಡು ಬೇರೆ ಬೇರೆ ವಸ್ತುಗಳಾಗಿವೆ. ಅಲ್ಲದೇ ಇವುಗಳ ಹೋಲಿಕೆಗಳು ವೈಜ್ಞಾನಿಕವಾಗಿ ಕ್ರಮಬದ್ಧವಲ್ಲ. ಮನಶ್ಚಿಕಿತ್ಸೆಯು ಭಾವನೆಗಳ ಹಿಂದಿರುವ ಅರ್ಥವನ್ನು ತಿಳಿಯುವ ಮತ್ತು ನಿಭಾಯಿಸುವ ಕ್ರಿಯೆಯನ್ನು ಒಳಗೊಂಡಿದೆ. ಔಷಧೀಕರಣವು ಜೀವರಾಸಾಯನಿಕಗಳ ಮೂಲಕ ಈ ಭಾವನೆಗಳನ್ನು ನಿಯಂತ್ರಿಸುವ ಕ್ರಿಯೆಯನ್ನು ಒಳಗೊಂಡಿದೆ. ಅನೇಕ ಪ್ರಸಂಗಗಳಲ್ಲಿ ಎರಡು ಮಾರ್ಗಗಳನ್ನು ಸಂಯೋಜನೆಯಾಗಿ ಅಥವಾ ಅನುಕ್ರಮವಾಗಿ ಬಳಸಬೇಕಾಗುತ್ತದೆ.

ಖಿನ್ನತೆ ಶಮನಕಾರಿಗಳು ಮತ್ತು ಆತ್ಮಹತ್ಯೆ ಪ್ರವೃತ್ತಿ

ಮಕ್ಕಳಲ್ಲಿ, ಹರೆಯದವರಲ್ಲಿ, ಮತ್ತು ಕೆಲವೊಂದು ಅಧ್ಯಯನಗಳಲ್ಲಿ 18 ರಿಂದ 24 ವಯಸ್ಸಿನೊಳಗಿರುವ ಯುವ ವಯಸ್ಕರ ಪೈಕಿ SSRIಗಳ ಚಿಕಿತ್ಸೆಗೆ ಒಳಪಟ್ಟಿರುವವರಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಭಾವನೆಗಳು ಮತ್ತು ಆತ್ಮಹತ್ಯೆಗೆ ಸಂಬಂಧಿಸಿದ ನಡವಳಿಕೆಗಳು ಉಂಟಾಗುವ ಹೆಚ್ಚಿನ ಅಪಾಯವಿದೆ. ವಯಸ್ಕರಲ್ಲಿ SSRIಗಳು ಆತ್ಮಹತ್ಯೆಯ ಅಪಾಯವನ್ನು ಉಂಟುಮಾಡುತ್ತದೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಒಂದು ವಿಮರ್ಶೆಯು SSRIಗಳು ಮತ್ತು ಆತ್ಮಹತ್ಯೆ ಅಪಾಯದ ಸಾಧ್ಯತೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಕಂಡುಕೊಂಡಿತು; ಆದರೆ ಇತರ ಅಧ್ಯಯನಗಳು ಪ್ಲಾಸೀಬೋ ಗೆ ಹೋಲಿಸಿದರೆ SSRIಗಳನ್ನು ಬಳಸುವವರ ಅತ್ಮಹತ್ಯೆ ಪ್ರಯತ್ನಗಳಲ್ಲಿ ಹೆಚ್ಚಳವನ್ನು ಕಂಡಿದೆ; ಅಲ್ಲದೇ ಇನ್ನೂ ಇತರ ಅಧ್ಯಯನಗಳು ಹೊಸ “SSRI-ಯುಗ” ದಲ್ಲಿ ಖಿನ್ನತೆ-ಶಮನಕಾರಿಗಳ ವ್ಯಾಪಕ ಬಳಕೆಯಿಂದಾಗಿ ಸಾಂಪ್ರದಾಯಿಕವಾಗಿ ಹೆಚ್ಚಿನ ಎಲ್ಲೆಗೆರೆಯ ಆತ್ಮಹತ್ಯೆ ಪ್ರಮಾಣಗಳನ್ನು ಒಳಗೊಂಡ ಬಹುಪಾಲು ರಾಷ್ಟ್ರಗಳಲ್ಲಿ ಆತ್ಮಹತ್ಯೆಯ ಪ್ರಮಾಣದಲ್ಲಿ ಗಮನಾರ್ಹ ಕುಸಿತ ಉಂಟಾಗಿದ್ದನ್ನು ಕಂಡುಕೊಂಡಿದೆ.

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ SSRI ನ ಮೇಲೆ ಮತ್ತು ಇತರ ಖಿನ್ನತೆ-ಶಮನಕಾರಿ ಔಷಧಿಗಳ ಮೇಲೆ 2007ರಲ್ಲಿ ಬ್ಲ್ಯಾಕ್ ಬಾಕ್ಸ್ ವಾರ್ನಿಂಗ್ ಚಾಲ್ತಿಗೆ ತರಲಾಯಿತು.. ಈ ಬ್ಲ್ಯಾಕ್ ಬಾಕ್ಸ್ ವಾರ್ನಿಂಗ್ ಅನ್ನು 24 ವರ್ಷಗಳಿಗಿಂತ ಕಡಿಮೆ ವಯಸ್ಸಿನ ರೋಗಿಗಳಲ್ಲಿ ಆತ್ಮಹತ್ಯೆಯ ಸಾಧ್ಯತೆ ಹೆಚ್ಚಾದ ಕಾರಣ ಚಾಲ್ತಿಗೆ ತರಲಾಗಿತ್ತು. ಇಂತಹದ್ದೇ ಮುನ್ನೆಚ್ಚರಿಕೆಯ ಸೂಚನೆ ರೂಪಗಳನ್ನು ಜಪಾನಿನ ಆರೋಗ್ಯ ಸಚಿವಾಲಯ ಜಾರಿಗೆ ತಂದಿತು .

ವಿದ್ಯುತ್ಕಂಪನ ಚಿಕಿತ್ಸೆ

ವಿದ್ಯುತ್ಕಂಪನ ಚಿಕಿತ್ಸೆಯು (ECT) ಒಂದು ವಿಧಾನವಾಗಿದ್ದು, ಮಿದುಳಿಗೆ ಎರಡು ವಿದ್ಯುದ್ವಾರಗಳ ಮೂಲಕ ವಿದ್ಯುತ್ ಕಂಪನಗಳನ್ನು ಸಾಮಾನ್ಯವಾಗಿ ಪ್ರತಿ ಕಣತಲೆಗೆ ಒಂದರಂತೆ ರವಾನಿಸಲಾಗುತ್ತದೆ.ರೋಗಿಯು ಸಾಮಾನ್ಯ ಅರಿವಳಿಕೆಯ ಸಂಕ್ಷಿಪ್ತ ಅವಧಿಯಲ್ಲಿದ್ದ ಸಮಯದಲ್ಲಿ ಸೀಜರ್(ಅಲ್ಪಾವಧಿಯ ಕ್ರಮವಲ್ಲದ ಮೆದುಳು ಚಟುವಟಿಕೆ) ಪ್ರೇರಿಸುವುದಾಗಿದೆ. ಆಸ್ಪತ್ರೆಯ ಮನೋವೈದ್ಯರು ತೀವ್ರವಾದ ಪ್ರಧಾನ ಖಿನ್ನತೆಯ ಪ್ರಸಂಗಗಳು ಖಿನ್ನತೆ-ಶಮನಕಾರಿ ಔಷಧಿಗೆ ಪ್ರತಿಕ್ರಿಯೆ ನೀಡದಂತಹ ಪ್ರಕರಣಗಳಲ್ಲಿ ಅಥವಾ ಮನಶ್ಚಿಕಿತ್ಸೆ ಅಥವಾ ಸಹಾಯಕ ಮಧ್ಯಸ್ಥಿಕೆಗಳಿಗೆ ಪ್ರತಿಕ್ರಿಯಿಸದಂತಹ ಕಡಿಮೆ ಪ್ರಕರಣಗಳಲ್ಲಿ ECT ಯನ್ನು ಶಿಫಾರಸ್ಸು ಮಾಡಬಹುದು. ECTಯು ಖಿನ್ನತೆ-ಶಮನಕಾರಿ ಚಿಕಿತ್ಸೆಗಿಂತ ಅತಿ ಶೀಘ್ರವಾಗಿ ಪರಿಣಾಮಬೀರಬಲ್ಲದು. ಆದ್ದರಿಂದ ತುರ್ತುಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಇದನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ, ಕ್ಯಾಟಟೋನಿಕ್ ಖಿನ್ನತೆ , ಇಲ್ಲಿ ರೋಗಿಯು ಆಹಾರ ಸೇವಿಸುವುದನ್ನು ಮತ್ತು ನೀರು ಕುಡಿಯುವುದನ್ನು ನಿಲ್ಲಿಸಿರುತ್ತಾನೆ, ಅಥವಾ ರೋಗಿಯು ತೀವ್ರವಾಗಿ ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾನೆ. ಇಂತಹ ಪ್ರಸಂಗಗಳಲ್ಲಿ ECT ಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ECT ಯು ತತ್‌ಕ್ಷಣ ಅಲ್ಪಾವಧಿಗೆ ಬಹುಶಃ ಫಾರ್ಮಕೊಥೆರಪಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ, ಸಮುದಾಯ ಆಧಾರಿತ ಅಧ್ಯಯನವು ಇದರ ದಿನನಿತ್ಯದ ಬಳಕೆಯಲ್ಲಿ ಕಡಿಮೆ ಉಪಶಮನ ದರವನ್ನು ಕಂಡಿದ್ದಾರೆ. ECT ಯನ್ನು ಪ್ರತ್ಯೇಕವಾಗಿ ಬಳಸಿದಾಗ, ಮೊದಲನೆಯ ಆರುತಿಂಗಳೊಳಗೆ ಖಿನ್ನತೆ ಮರುಕಳಿಸಬಹುದಾದ ಪ್ರಮಾಣ ಅತ್ಯಂತ ಹೆಚ್ಚಿರುತ್ತದೆ; ಹಿಂದಿನ ಅಧ್ಯಯನಗಳು ಸುಮಾರು 50ಪ್ರತಿಶದಷ್ಟು ಮರುಕಳಿಸುವ ಸಾಧ್ಯತೆಗಳಿವೆ ಎಂದಿವೆ. ಅತ್ಯಂತ ಇತ್ತೀಚಿನ ನಿಯಂತ್ರಿತ ಪರೀಕ್ಷೆಗಳು ಪ್ಲಾಸೀಬೋನೊಂದಿಗೆ ಕೂಡ 84 ಪ್ರತಿಶತದಷ್ಟು ಪ್ರಮಾಣವನ್ನು ಕಂಡುಕೊಂಡಿವೆ. ಮುಂಚಿನ ಉಪಶಮನ ದರವನ್ನು ಮನೋವೈದ್ಯಕೀಯ ಔಷಧಿಗಳ ಬಳಕೆ ಅಥವಾ ಮುಂದಿನ ECTಯಿಂದಾಗಿ ಕಡಿಮೆಮಾಡಬಹುದು(ಮುಂದಿನದ್ದನ್ನು ಕೆಲವು ತಜ್ಞರು ಶಿಫಾರಸ್ಸು ಮಾಡದಿದ್ದರು ಕೂಡ) ಆದರೆ ಅಧಿಕವಾಗಿ ಉಳಿದಿದೆ. ECT ಯಿಂದ ಉಂಟಾಗಬಹುದಾದ ಆರಂಭಿಕ ಸಾಮಾನ್ಯ ಪ್ರಾಥಮಿಕ ಪ್ರತಿಕೂಲ ಪರಿಣಾಮಗಳು ಕೆಳಕಂಡವುಗಳನ್ನು ಒಳಗೊಂಡಿವೆ: ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸ್ಮರಣೆ ನಷ್ಟ ,ಭ್ರಾಂತ ಸ್ಥಿತಿ ಹಾಗು ತಲೆನೋವು. ECT ನಂತರ ಉಂಟಾಗುವ ನೆನಪಿನ ಶಕ್ತಿಯ ತೊಂದರೆಗಳು ಸಾಮಾನ್ಯವಾಗಿ ಒಂದು ತಿಂಗಳೊಳಗೆ ಗುಣಮುಖವಾದರೂ ಕೂಡ, ECT ಯು ವಿವಾದಾತ್ಮಕ ಚಿಕಿತ್ಸೆಯಾಗಿ ಉಳಿದಿದೆ. ಅಲ್ಲದೇ ಇದರ ದಕ್ಷತೆ ಮತ್ತು ಸುರಕ್ಷತೆಯ ಬಗ್ಗೆ ಚರ್ಚೆ ನಡೆಯುತ್ತಲೆ ಇದೆ.

ಡೀಪ್ ಬ್ರ್ಯೇನ್ ಸ್ಟಿಮ್ಯುಲೇಷನ್

ಡೀಪ್ ಬ್ರ್ಯೇನ್ ಸ್ಟಿಮ್ಯುಲೇಷನ್ (DBS) ಎಂಬುದು ನರಶಸ್ತ್ರಚಿಕಿತ್ಸೆಯಾಗಿದ್ದು, ಇದನ್ನು ವಿಶೇಷವಾಗಿ ಪಾರ್ಕಿನ್‌ಸನ್ಸ್ ರೋಗ ದಂತಹ ಚಲನೆಯ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಚಿಕಿತ್ಸೆಯಲ್ಲಿ ನರಶಸ್ತ್ರಚಿಕಿತ್ಸಾ ತಜ್ಞರು ತಲೆಬುರುಡೆಯಲ್ಲಿ ರಂಧ್ರವನ್ನು ಮಾಡಿ ರೋಗಿಯ ಅಂಗಾಂಶದೊಳಗೆ ವಿದ್ಯುದ್ವಾರವನ್ನು ಸೇರಿಸುತ್ತಾರೆ. ಅನಂತರ, ಎದೆಯಲ್ಲಿರುವಂತಹ ಉಪಕರಣ ಒಳಸೇರಿಸಲಾದ ವಿದ್ಯುದ್ವಾರಕ್ಕೆ ತಲೆಬುರುಡೆಯ ಚರ್ಮದ ಕೆಳಗಿರುವ ವೈರ್ ಗಳ ಮೂಲಕ ಸಂಕೇತವನ್ನು ರವಾನಿಸುತ್ತದೆ.

ವೈದ್ಯಕೀಯ ಪರೀಕ್ಷೆಗಳು,ಅಪಸ್ಮಾರ ಮತ್ತು ಖಿನ್ನತೆಯ ಚಿಕಿತ್ಸೆಯಲ್ಲಿ DBS ನ ಬಳಕೆಯ ಮೇಲೆ ಗಮನಹರಿಸಿದವು. ಆದರೆ FDA ಈ ಬಳಕೆಯನ್ನು ಅಂಗೀಕರಿಸಿಲ್ಲ. ಈ ಚಿಕಿತ್ಸೆಗೆ ಮಿದುಳಿನ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಇದು ಖಿನ್ನತೆಯ ಚಿಕಿತ್ಸೆಯಲ್ಲಿ ಬಳಸಲಾಗುವ ಮಿದುಳಿನ ಉದ್ದೀಪನದ ಅತ್ಯಂತ ಆಕ್ರಮಣಶೀಲ ರೂಪವಾಗಿದೆ.

ದೈಹಿಕ ವ್ಯಾಯಾಮಗಳು

U.K.ಯ ಆರೋಗ್ಯ ಸಚಿವಾಲಯವು ತೀಕ್ಷ್ಣವಲ್ಲದ ಖಿನ್ನತೆ ನಿರ್ವಹಣೆಗೆದೈಹಿಕ ವ್ಯಾಯಾಮವನ್ನು ಶಿಫಾರಸ್ಸು ಮಾಡಿದೆ ಆದರೆ ಇದು ಇದು ಸಾಂಖ್ಯಿಕವಾಗಿ ಪ್ರಧಾನ ಖಿನ್ನತೆ ಅಸ್ವಸ್ಥತೆಯ ಬಹುಪಾಲು ಪ್ರಕರಣಗಳ ರೋಗಲಕ್ಷಣಗಳ ಮೇಲೆ ಸಾಧಾರಣ, ಗಮನಾರ್ಹವಲ್ಲದ ಪರಿಣಾಮ ಬೀರುತ್ತದೆ.

ನೇರ ಮಾರಾಟದ ಸಂಯುಕ್ತಗಳು

ಸೆಂಟ್ ಜಾನ್ಸ್ ವರ್ಟ್ಎಂಬುದು ಪ್ರಪಂಚದ ಕೆಲವೊಂದು ಭಾಗಗಳಲ್ಲಿ ಗಿಡಮೂಲಿಕೆ ಔಷಧಿಯ ರೂಪದಲ್ಲಿ ದೊರಕುವ ನೇರ ಮಾರಾಟದ ಔಷಧಿಗಳಾಗಿವೆ; ಆದಾಗ್ಯೂ, ಪ್ರಧಾನ ಖಿನ್ನತೆಯ ಚಿಕಿತ್ಸೆಯಲ್ಲಿ ಇದರ ಪರಿಣಾಮಕಾರಿತ್ವಕ್ಕೆ ಸಾಕ್ಷ್ಯವು ವ್ಯತ್ಯಾಸದಿಂದ ಕೂಡಿದ್ದು, ಗೊಂದಲಗೊಳಿಸುವಂತಿದೆ. ಇದರ ಸುರಕ್ಷೆಯನ್ನು ಔಷಧವಸ್ತುಗಳ ಗುಣಮಟ್ಟದಲ್ಲಿರುವ ಅಸಾಂಮಜಸ್ಯ ಮತ್ತು ವಿಭಿನ್ನ ತಯಾರಿಕೆಗಳಲ್ಲಿ ಬಳಸುವ ಕ್ರಿಯಾಶೀಲ ಪದಾರ್ಥಗಳ ಮೊತ್ತಗಳಿಂದ ರಾಜಿಮಾಡಿಕೊಳ್ಳ ಬೇಕಾಗಬಹುದು. ಇದು ಖಿನ್ನತೆ-ಶಮನಕಾರಿಗಳನ್ನು ಒಳಗೊಂಡಂತೆ ಮುಂದೆ ಸೂಚಿಸಲಾದ ಅನೇಕ ಔಷಧಿಗಳೊಂದಿಗೆ ಪರಸ್ಪರ ಪರಿಣಾಮ ಬೀರಬಹುದು. ಅಲ್ಲದೇ ಇದು ಹಾರ್ಮೋನಿನ ಗರ್ಭನಿರೋಧಕ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಲ್ಲದು.

ಪ್ರಧಾನ ಖಿನ್ನತೆಗೆ ಓಮೆಗ-3 ಫ್ಯಾಟಿ ಆಸಿಡ್ಸ್ ನ ಪರಿಣಾಮಕಾರಿತ್ವವು ಅಸ್ಪಷ್ಟವಾಗಿದೆ, ಅಲ್ಲದೇ ನಿಯಂತ್ರಿತ ಅಧ್ಯಯನಗಳು ಮತ್ತು ಸಮೂಹ ವಿಶ್ಲೇಷಣೆಗಳು ಸಕಾರಾತ್ಮಕ ಮತ್ತು ನಕಾರಾತ್ಮಕ ತೀರ್ಮಾನಗಳಿಗೆ ಬೆಂಬಲ ನೀಡಿವೆ.

S-ಅಡೆನೊಸಿಲ್ ಮೆಥಿಯನೀನ್ (SAMe)ನ ಅಲ್ಪಾವಧಿಯ ವೈದ್ಯಕೀಯ ಪರೀಕ್ಷೆಗಳ ವಿಮರ್ಶೆಗಳು, ಇದು ವಯಸ್ಕರಲ್ಲಿ ಪ್ರಧಾನ ಖಿನ್ನತೆಯ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಆಗಿರಬಹುದೆಂದು ಸೂಚಿಸಿದೆ. 2002 ರ ವಿಮರ್ಶೆಯು ಕೆಳಕಂಡಂತೆ ವರದಿ ಮಾಡಿದೆ: ಟ್ರಿಪ್ಟೊಫ್ಯಾನ್ ಮತ್ತು 5-ಹೈಡ್ರಾಕ್ಸಿಟ್ರಿಪ್ಟೊಫ್ಯಾನ್, ಪ್ಲಾಸೀಬೋಗಿಂತ ಉತ್ತಮವೆಂಬಂತೆ ಕಂಡುಬರುತ್ತವೆ. ಆದರೆ ಬಹುತೇಕ ಇವುಗಳ ಗುಣಮಟ್ಟ ಕಳಪೆಯಾಗಿದೆ ಮತ್ತು ಇದು ಅಪೂರ್ಣವಾಗಿದೆ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯಗಳು ಕಂಡುಬಂದಿವೆ.

ಇತರ ಶಾರೀರಿಕ ಚಿಕಿತ್ಸೆಗಳು

ರಿಪಿಟಿಟಿವ್ ಟ್ರಾನ್ಸಕ್ರಾನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಷನ್ (rTMS) ವಿಧಾನವು ತಲೆಯ ಹೊರಗಿನಿಂದ ಮಿದುಳಿಗೆ ಪ್ರಬಲವಾದ ಕಾಂತಕ್ಷೇತ್ರಗಳನ್ನು ಪ್ರಯೋಗಿಸುವುದಾಗಿದೆ. ಬಹು ನಿಯಂತ್ರಿತ ಅಧ್ಯಯನಗಳು ಚಿಕಿತ್ಸೆಗೆ-ಪ್ರತಿರೋಧದ ಖಿನ್ನತೆಯಲ್ಲಿ ಈ ವಿಧಾನದ ಬಳಕೆಗೆ ಬೆಂಬಲ ನೀಡಿವೆ; ಈ ವಿಧಾನಕ್ಕೆ ಯುರೋಪ್, ಕೆನಡಾ, ಆಸ್ಟ್ರೇಲಿಯಾ, ಮತ್ತು US ನಲ್ಲಿ ಅಂಗೀಕರಿಸಲಾಗಿದೆ rTMS ಅಸಂಕೀರ್ಣವಾದ ಖಿನ್ನತೆಯ ಮೇಲೆ ಮತ್ತು ಔಷಧಿ ಪ್ರತಿರೋಧಕ ಖಿನ್ನತೆಯ ಮೇಲೆ ಒಂದೇ ರೀತಿಯಲ್ಲಿ ಪರಿಣಾಮ ಬೀರುವಂತೆ ಕಂಡುಬರುತ್ತದೆ; ಆದರೂ ಇದು ಅಕ್ಕಪಕ್ಕ ಯಾದೃಚ್ಛಿಕೀಕರಿಸಿದ ಪರೀಕ್ಷೆಯಲ್ಲಿ ECT ಗಿಂತ ಕೆಳಮಟ್ಟದಲ್ಲಿದೆ.

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ವೇಗಸ್ ನರ ಉತ್ತೇಜಕ ವನ್ನು ಚಿಕಿತ್ಸೆ ಪ್ರತಿರೋಧ ಖಿನ್ನತೆಗಾಗಿ ಬಳಸಲು FDA 2005ರಲ್ಲಿ ಅಂಗೀಕರಿಸಿತು, ಆದರೂ ಇದು ದ್ವಿಕುರುಡು-ಪ್ರಯೋಗ( ರೋಗಿಗೆ ಅರಿವಿಲ್ಲದ ಚಿಕಿತ್ಸೆ) ಚಿಕಿತ್ಸೆಗೆ ಪ್ರತಿರೋಧದ ಖಿನ್ನತೆಯ ರೋಗಿಗಳ ಮೇಲೆ ಆನುಷಂಗಿಕವಾಗಿ ಬಳಸಿದಾಗ ಇದು ಅಲ್ಪಾವಧಿ ಲಾಭ ನೀಡುವುದರಲ್ಲಿ ವಿಫಲವಾಯಿತು ; 2008 ರ ಕ್ರಮಬದ್ಧ ವಿಮರ್ಶೆಯು ಕೆಳಕಂಡಂತೆ ತಿಳಿಸಿದೆ: ಮುಕ್ತ ಅಧ್ಯಯನಗಳಲ್ಲಿ ವರದಿಮಾಡಲಾದ ಆಶಾದಾಯಕ ಫಲಿತಾಂಶಗಳ ಹೊರತಾಗಿಯು, ಪ್ರಧಾನ ಖಿನ್ನತೆಯಲ್ಲಿ ಇದರ ಕಾರ್ಯಕಾರಿತ್ವವನ್ನು ದೃಢಪಡಿಸಲು ಮತ್ತಷ್ಟು ವೈದ್ಯಕೀಯ ಪರೀಕ್ಷೆಗಳ ಅಗತ್ಯವಿದೆ ಎಂಬುದನ್ನು ತಿಳಿಸಿದೆ.

ವ್ಯಾಧಿಯ ಮುನ್ನರಿವು

ಪ್ರಧಾನ ಖಿನ್ನತೆಯ ಪ್ರಸಂಗಗಳು ಕೆಲವು ಬಾರಿ ಸಮಯ ಸರಿದಂತೆ ಚಿಕಿತ್ಸೆ ನೀಡಲಿ ಅಥವಾ ನೀಡದಿರಲಿ ಗುಣವಾಗುತ್ತದೆ. ಕಾಯುತ್ತಿರುವವರ ಪಟ್ಟಿಯಲ್ಲಿರುವ ಹೊರರೋಗಿಗಳು ಕೆಲವೇ ತಿಂಗಳೊಳಗೆ ರೋಗಲಕ್ಷಣದಲ್ಲಿ 10–15 ಪ್ರತಿಶತದಷ್ಟು ಇಳಿಕೆಯನ್ನು ತೋರಿಸಿದ್ದಾರೆ, ಅಲ್ಲದೇ ಸರಿಸುಮಾರು 20 ಪ್ರತಿಶದಷ್ಟು ರೋಗಿಗಳು ಖಿನ್ನತೆ ಅಸ್ವಸ್ಥತೆಯ ಸಂಪೂರ್ಣ ಮಾನದಂಡವನ್ನು ಮುಟ್ಟಲಿಲ್ಲ. ಪ್ರಸಂಗದ ಮಧ್ಯಸ್ಥ ಕಾಲಾವಧಿಯು, ಮೊದಲನೆಯ ಮೂರು ತಿಂಗಳಲ್ಲಿ ಅಧಿಕ ಪ್ರಮಾಣದ ಚೇತರಿಕೆಯೊಂದಿಗೆ ಸುಮಾರು 23 ವಾರಗಳೆಂದು ಅಂದಾಜು ಮಾಡಲಾಗಿದೆ.

ಪ್ರಧಾನ ಖಿನ್ನತೆಯ ಮೊದಲನೆಯ ಪ್ರಸಂಗದಲ್ಲಿ ನರಳುತ್ತಿರುವ 80 ಪ್ರತಿಶತದಷ್ಟು ರೋಗಿಗಳು ಅವರ ಜೀವಿತಾವಧಿಯಲ್ಲಿ ಕೊನೆಯ ಪಕ್ಷ 1 ಕ್ಕಿಂತ ಹೆಚ್ಚು ಪ್ರಸಂಗದಿಂದ ನರಳುತ್ತಾರೆ. ಹಾಗು ಅವರ ಜೀವಮಾನದಲ್ಲಿ ಸರಿಸುಮಾರು 4 ಪ್ರಸಂಗಗಳನ್ನಾದರೂ ಎದುರಿಸುತ್ತಾರೆ. ಇತರ ಅನೇಕ ಸಾಮೂಹಿಕ ಅಧ್ಯಯನಗಳು ಕೆಳಂಡಂತೆ ಸೂಚಿಸಿವೆ:ಖಿನ್ನತೆಯ ಪ್ರಸಂಗವಿರುವವರಲ್ಲಿ ಸುಮಾರು ಅರ್ಧ ಜನ(ಚಿಕಿತ್ಸೆ ನೀಡಲಿ ಅಥವಾ ನೀಡದಿರಲಿ) ಚೇತರಿಸಿಕೊಂಡಿದ್ದಾರೆ ಮತ್ತು ಸುಸ್ಥಿತಿಯಲ್ಲಿದ್ದಾರೆ. ಇನ್ನುಳಿದ ಅರ್ಧಜನರಿಗೆ ಕೊನೆಯ ಪಕ್ಷ ಮತ್ತೊಮ್ಮೆಯಾದರೂ ಖಿನ್ನತೆ ಮರುಕಳಿಸಿದೆ. ಅಲ್ಲದೇ ಸುಮಾರು 15 ಪ್ರತಿಶತದಷ್ಟು ಜನರು ದೀರ್ಘಕಾಲದ ಮರುಕಳಿಸುವಿಕೆಯನ್ನು ಅನುಭವಿಸಿದ್ದಾರೆ. ಆಯ್ದ ಒಳರೋಗಿ ಮೂಲಗಳಿಂದ ಒದಗಿಸಲಾದ ಅಧ್ಯಯನಗಳು ,ಅಲ್ಪ ಪ್ರಮಾಣದ ಚೇತರಿಕೆಯನ್ನು ಮತ್ತು ಹೆಚ್ಚಿನ ನಿರಂತರತೆಯನ್ನು ಸೂಚಿಸಿದರೆ, ಬಹುಪಾಲು ಹೊರರೋಗಿಗಳ ಅಧ್ಯಯನವು, 11 ತಿಂಗಳ ಕಾಲಾವಧಿಯ ಮಧ್ಯಸ್ಥ ಪ್ರಸಂಗಗಳೊಂದಿಗೆ ಬಹುಮಟ್ಟಿಗೆ ಎಲ್ಲರೂ ಚೇತರಿಸಿಕೊಂಡಿರುವುದನ್ನು ತೋರಿಸುತ್ತದೆ. ತೀವ್ರವಾದ ಅಥವಾ ಮನೋವಿಕೃತ ಖಿನ್ನತೆಗೆ ಒಳಗಾದ 90ಪ್ರತಿಶತದಷ್ಟು ರೋಗಿಗಳು ಹಾಗು ಅವರಲ್ಲಿ ಇತರ ಮಾನಸಿಕ ಅಸ್ವಸ್ಥತೆಗಳ ಮಾನದಂಡವನ್ನು ಮುಟ್ಟಿದಂತಹ ಬಹುಪಾಲು ರೋಗಿಗಳಿಗೆ ಖಿನ್ನತೆ ಮರುಕಳಿಸುತ್ತದೆ.

ರೋಗಲಕ್ಷಣಗಳನ್ನು ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ತಗ್ಗಿಸದಿದ್ದಲ್ಲಿ ಮರುಕಳಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಪ್ರಸ್ತುತ ಮಾರ್ಗದರ್ಶಿಗಳು, ಖಿನ್ನತೆಯನ್ನು ತಗ್ಗಿಸಿದ ನಂತರ ಅದರ ಮರುಕಳಿಕೆಯನ್ನು ತಡೆಗಟ್ಟಲು ನಾಲ್ಕರಿಂದ ಆರು ತಿ6ಗಳವರೆಗೆ ಖಿನ್ನತೆ-ಶಮನಕಾರಿಯನ್ನು ಬಳಸುವಂತೆ ಶಿಫಾರಸ್ಸು ಮಾಡುತ್ತವೆ. ಅನೇಕ ರಾಂಡಮೈಸ್ಡ್ ಕಂಟ್ರೋಲ್ಡ್ ಟ್ರಯಲ್ ಗಳಿಂದ ಪಡೆದ ಸಾಕ್ಷ್ಯವು ಗುಣಹೊಂದಿದ ಮೇಲೂ ಖಿನ್ನತೆ-ಶಮನಕಾರಿ ಔಷಧಿಗಳನ್ನು ಮುಂದುವರೆಸುವುದರಿಂದ ಮತ್ತೆ ಮರುಕಳಿಸಬಹುದಾದ ಸಾಧ್ಯತೆಯನ್ನು 70 ಪ್ರತಿಶತದಷ್ಟು ಕಡಿಮೆಮಾಡಬಹುದು(ಪ್ಲಾಸೀಬೋ ಮೇಲೆ 41% vs. ಖಿನ್ನತೆ-ಶಮನಕಾರಿಯ ಮೇಲೆ 18%)ಎಂದು ಸೂಚಿಸುತ್ತದೆ. ನಿರೋಧಕ ಪರಿಣಾಮವು ಬಹುಶಃ ಬಳಕೆಯ ಮೊದಲನೆಯ 36 ತಿಂಗಳಿಗೆ ಕೊನೆಗೊಳ್ಳುತ್ತದೆ.

ಖಿನ್ನತೆ ಮರುಕಳಿಸಿದಂತಹ ಪ್ರಸಂಗಗಳನ್ನು ಅನುಭವಿಸಿದ ಜನರಿಗೆ, ಅತ್ಯಂತ ತೀವ್ರವಾದ ಮತ್ತು ದೀರ್ಘಕಾಲದ ಖಿನ್ನತೆಯು ಉಂಟಾಗದಂತೆ ತಡೆಯಲು ಚುರುಕಾದ ಮತ್ತು ಚಾಲ್ತಿಯಲ್ಲಿರುವ ಚಿಕಿತ್ಸೆಯ ಅಗತ್ಯವಿರುತ್ತದೆ. ಕೆಲವು ಪ್ರಕರಣಗಳಲ್ಲಿ, ಜನರು ದೀರ್ಘಾವಧಿಯ ವರೆಗೆ ಅಥವಾ ಜೀವನ ಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರಬೇಕಾದ ಅಗತ್ಯವಿರುತ್ತದೆ.

ಫಲಿತಾಂಶವು ಕಳಪೆಯಿರುವ ಪ್ರಕರಣಗಳು ಅಸಮರ್ಪಕ ಚಿಕಿತ್ಸೆಯೊಂದಿಗೆ ಸಂಬಂಧಿಸಿರುತ್ತವೆ. ತೀವ್ರವಾದ ಆರಂಭಿಕ ರೋಗಲಕ್ಷಣಗಳು ಕೆಳಕಂಡವುಗಳನ್ನು ಒಳಗೊಂಡಿವೆ: ಮನೋವಿಕಾರ, ಮುಂಚಿತ ವಯಸ್ಸಿನಲ್ಲೇ ರೋಗ ಕಾಣಿಸಿಕೊಳ್ಳುವುದು, ಅತ್ಯಂತ ಹಿಂದಿನ ಪ್ರಸಂಗಗಳು, 1 ವರ್ಷದ ನಂತರವು ಚೇತರಿಕೆಯಲ್ಲಿ ಅಪೂರ್ಣತೆ, ಮುಂಚೆಯೇ ಇದ್ದಂತಹ ತೀವ್ರವಾದ ಮಾನಸಿಕ ಅಥವಾ ವೈದ್ಯಕೀಯ ಅಸ್ವಸ್ಥತೆ, ಹಾಗು ಅಪಸಾಮಾನ್ಯ ಕುಟುಂಬ.

ಖಿನ್ನತೆಗೆ ಒಳಗಾದ ವ್ಯಕ್ತಿಗಳು ಖಿನ್ನತೆಗೆ ಒಳಗಾಗದ ವ್ಯಕ್ತಿಗಳಿಗಿಂತ ಹೆಚ್ಚು ಆಯುರ್ನಿರೀಕ್ಷೆಯನ್ನು ಹೊಂದಿರುತ್ತಾರೆ. ಏಕೆಂದರೆ ಖಿನ್ನತೆಗೆ ಒಳಗಾದ ವ್ಯಕ್ತಿಗಳು ಆತ್ಮಹತ್ಯೆಯಿಂದ ಮರಣ ಹೊಂದುವ ಸಾಧ್ಯತೆಗಳಿರುತ್ತದೆ. ಆದರೂ, ಅವರು ಇತರ ಕಾರಣಗಳಿಂದಾಗಿ ಸಾವನ್ನಪ್ಪುವ ಹೆಚ್ಚಿನ ದರವನ್ನು ಹೊಂದಿರುತ್ತಾರೆ. ಹೆಚ್ಚಾಗಿ ಹೃದಯ ಕಾಯಿಲೆಯಂತಹ ವೈದ್ಯಕೀಯ ಸ್ಥಿತಿಗಳಿಂದ ಮರಣಕ್ಕೆ ಒಳಗಾಗುತ್ತಾರೆ. ಆತ್ಮಹತ್ಯೆಯನ್ನು ಮಾಡಿಕೊಂಡ 60 ಪ್ರತಿಶತದಷ್ಟು ಜನರು ಪ್ರಧಾನ ಖಿನ್ನತೆಯಂತಹ ಚಿತ್ತ ಸ್ಥಿತಿ ಅಸ್ವಸ್ಥತೆಯನ್ನು ಹೊಂದಿರುತ್ತಾರೆ. ಅಲ್ಲದೇ ಒಂದುವೇಳೆ ವ್ಯಕ್ತಿಯು ಹತಾಶ ಭಾವನೆಯನ್ನು ಹೊಂದಿದ್ದಲ್ಲಿ ಅಥವಾ ಖಿನ್ನತೆ ಹಾಗು ಅಸ್ಥಿರ ಭಾವನೆಯ ವ್ಯಕ್ತಿತ್ವ ಅಸ್ವಸ್ಥತೆ ಎರಡನ್ನೂ ಹೊಂದಿದ್ದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಪ್ರಧಾನ ಖಿನ್ನತೆಯನ್ನು ನಿರ್ಣಯಿಸುವುದರೊಂದಿಗೆ ಸಂಬಂಧಿಸಿರುವ ಜೀವಮಾನವಿಡಿ ಆತ್ಮಹತ್ಯೆ ಅಪಾಯದ ಸಾಧ್ಯತೆಗಳು US ನಲ್ಲಿ 3.4 ಪ್ರತಿಶದಷ್ಟಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದು ಎರಡು ವಿದೃಶ ಅಂಕಿಅಂಶವಾದ ಪುರುಷರಿಗೆ 7%ಮತ್ತು ಮಹಿಳೆಯರಿಗೆ 1% ಸರಾಸರಿಯಿಂದ ಕೂಡಿದೆ. (ಆದರೂ ಆತ್ಮಹತ್ಯೆ ಪ್ರಯತ್ನಗಳು ಮಹಿಳೆಯರಲ್ಲಿ ಆಗಾಗ್ಗೆ ಸಂಭವಿಸುತ್ತದೆ). ಈ ಅಂದಾಜು ಹಿಂದೆ ಅಂಗೀಕರಿಸಲಾಗಿದ್ದ 15 ಪ್ರತಿಶತಕ್ಕಿಂತ ಗಣನೀಯವಾಗಿ ಕಡಿಮೆಯಿದೆ. ಈ ಅಂದಾಜನ್ನು ಆಸ್ಪತ್ರೆಗೆ ಸೇರಿಸಲಾಗಿದ್ದ ರೋಗಿಗಳ ಹಳೆಯ ಅಧ್ಯಯನಗಳ ಮೇಲೆ ವ್ಯಾಖ್ಯಾನಿಸಲಾಗಿತ್ತು.

ಸೋಂಕುಶಾಸ್ತ್ರ

ಹರಡಿಕೆ

ಪ್ರಧಾನ ಖಿನ್ನತೆಯ ಅಸ್ವಸ್ಥತೆ 
2002ರಲ್ಲಿ ಪ್ರತಿ 100,000 ನಿವಾಸಿಗಳಲ್ಲಿ ಕಂಡುಬಂದ ಏಕಧ್ರುವೀಯ ಖಿನ್ನತೆಯ ಅಸ್ವಸ್ಥತೆಗಳಿಗೆ ಅಸಾಮರ್ಥ್ಯ ಹೊಂದಿಸಿದ ನಷ್ಟವಾದ ವರ್ಷಗಳು.[552][553][554][555][556][557][558][559][560][561][562][563][564]

ಖಿನ್ನತೆಯು ವಿಶ್ವವ್ಯಾಪಿರೋಗ ವ್ಯಾಪನೆಯ ಪ್ರಮುಖ ಕಾರಣವಾಗಿದೆ. ಜೀವಾವಧಿಯ ಹರಡಿಕೆಯು ಜಪಾನ್ ನಲ್ಲಿ 3 ಪ್ರತಿಶತದಿಂದ US ನಲ್ಲಿ 17 ಪ್ರತಿಶತದವರೆಗೆ ವ್ಯಾಪಕವಾಗಿ ವ್ಯತ್ಯಾಸದಿಂದ ಕೂಡಿದೆ. ಬಹುತೇಕ ರಾಷ್ಟ್ರಗಳಲ್ಲಿ ಅವರ ಜೀವಮಾನದ ಅವಧಿಯಲ್ಲಿ ಖಿನ್ನತೆಯಿಂದ ನರಳುವ ಜನರ ಸಂಖ್ಯೆಯು 8–12 ಪ್ರತಿಶದಷ್ಟು ಹರಡಿರುತ್ತದೆ. ಉತ್ತರ ಅಮೆರಿಕದಲ್ಲಿ ಒಂದು ವರ್ಷದ ಕಾಲಾವಧಿಯಲ್ಲಿಪ್ರಧಾನ ಖಿನ್ನತೆಯ ಪ್ರಸಂಗಳಿಗೆ ಒಳಗಾದವರಲ್ಲಿ ಪುರುಷರು 3–5% ಹಾಗು ಮಹಿಳೆಯರು 8–10 %ರಷ್ಟಿದ್ದಾರೆ. ಜನಸಂಖ್ಯಾ ಅಧ್ಯಯನಗಳು, ಪ್ರಧಾನ ಖಿನ್ನತೆಯು ಪುರುಷರಲ್ಲಿರುವುದಕ್ಕಿಂತ ಸಾಮಾನ್ಯವಾಗಿ ಎರಡು ಪಟ್ಟು ಹೆಚ್ಚು ಮಹಿಳೆಯರಲ್ಲಿರುತ್ತದೆ ಎಂಬುದನ್ನು ದೃಢವಾಗಿ ತೋರಿಸಿವೆ. ಹೀಗೇಕೆಂದು ಸ್ಪಷ್ಟವಾಗಿಲ್ಲದಿದ್ದರೂ ಕೂಡ ಗಮನಿಸದಂತಹ ಅಂಶಗಳು ಇದಕ್ಕೆ ಕಾರಣವಾಗಿರಬಹುದು. ತುಲನಾತ್ಮಕವಾಗಿ ಇದರ ಹೆಚ್ಚಳವು ಕಾಲನುಕ್ರಮ ವಯಸ್ಸಿಗಿಂತ ಹೆಚ್ಚಾಗಿ ಪ್ರೌಢಾವಸ್ಥೆಯ ಬೆಳವಣಿಗೆಗೆ ಸಂಬಂಧಿಸಿದೆ. 15 ಮತ್ತು 18ರ ವಯಸ್ಸುಗಳ ನಡುವೆ ಲಿಂಗ ಅನುಪಾತಗಳಿಂದ ಕೂಡಿರುತ್ತದೆ. ಅಲ್ಲದೇ ಇದು ಹಾರ್ಮೋನ್ ಅಂಶಗಳಿಗಿಂತ ಮನಸ್ಸಾಮಾಜಿಕ ಅಂಶಗಳೊಂದಿಗೆ ಹೆಚ್ಚು ಸಂಬಂಧಿಸಿದೆ.

ಜನರು ಹೆಚ್ಚಾಗಿ 30 ರಿಂದ 40 ನೇ ವಯಸ್ಸಿನ ನಡುವೆ ಅವರ ಮೊದಲನೆಯ ಖಿನ್ನತೆಯ ಪ್ರಸಂಗದಿಂದ ನರಳುತ್ತಾರೆ ಹಾಗು 50 ರಿಂದ 60ನೇ ವಯಸ್ಸಿನ ನಡುವೆ ಎರಡನೆ ಸಣ್ಣ ಪ್ರಸಂಗ ಸಂಭವಿಸುತ್ತದೆ. ಪಾರ್ಶ್ವವಾಯು, ಪಾರ್ಕಿನ್ ಸನ್ ರೋಗ, ಅಥವಾ ಮಲ್ಟಿಪಲ್ ಸ್ಕ್ಲೆರೋಸಿಸ್ ಮತ್ತು ಪ್ರಸವದ ನಂತರದ ಮೊದಲನೆಯ ವರ್ಷದಲ್ಲಿ ನರವೈಜ್ಞಾನಿಕ ಸ್ಥಿತಿಗಳೊಂದಿಗೆ ಪ್ರಧಾನ ಖಿನ್ನತೆಯ ಅಪಾಯವು ಹೆಚ್ಚಾಗುತ್ತದೆ. ಇದು ಹೃದಯರಕ್ತನಾಳದ ರೋಗಗಳ ನಂತರ ಅತ್ಯಂತ ಸಾಮಾನ್ಯವಾಗಿದೆ. ಅಲ್ಲದೇ ಇದು ಉತ್ತಮ ಫಲಿತಾಂಶಕ್ಕಿಂತ ಕಡಿಮೆ ಮಟ್ಟದ ಫಲಿತಾಂಶದೊಂದಿಗೆ ಸಂಬಂಧಿಸಿದೆ. ಹಿರಿಯರಲ್ಲಿ ಖಿನ್ನತೆಯು ಹರಡುವ ಪ್ರಮಾಣ ಬಗ್ಗೆ ಅಧ್ಯಯನಗಳು ವಿವಾದಾತ್ಮಕವಾಗಿವೆ. ಆದರೆ ಬಹುಪಾಲು ಅಂಕಿಅಂಶ ಈ ವಯಸ್ಸಿನವರಲ್ಲಿ ಇಳಿಕೆಯಿರುತ್ತದೆ ಎಂದು ಸೂಚಿಸಿವೆ.

ಸಹವ್ಯಾಪನೆ

ಪ್ರಧಾನ ಖಿನ್ನತೆಯು ಇತರ ಮನೋವೈದ್ಯಕೀಯ ಸಮಸ್ಯೆಗಳೊಂದಿಗೆ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. 1990–92 ರ ನ್ಯಾಷನಲ್ ಸಹವ್ಯಾಪನೆ ಸಮೀಕ್ಷೆ (US)ಯು ಪ್ರಧಾನ ಖಿನ್ನತೆಗೆ ಒಳಗಾದ 51 ಪ್ರತಿಶತದಷ್ಟು ರೋಗಿಗಳು ಜೀವಮಾನದ ಆತಂಕದಿಂದ ಕೂಡ ನರಳುತ್ತಾರೆ ಎಂದು ವರದಿ ಮಾಡಿದೆ. ಆತಂಕದ ಲಕ್ಷಣಗಳು ಖಿನ್ನತೆ ಅಸ್ವಸ್ಥತೆಯ ಕಾಲಾವಧಿಯ ಮೇಲೆ ಪ್ರಮುಖ ಪರಿಣಾಮ ಬೀರಬಲ್ಲವು ಹಾಗು ಇದರಿಂದಾಗಿ ಚೇತರಿಸಿಕೊಳ್ಳುವುದು ಕೂಡ ನಿಧಾನವಾಗುತ್ತದೆ. ಅಲ್ಲದೇ ಮರುಕಳಿಸುವ ಸಾಧ್ಯತೆಯು ಹೆಚ್ಚುತ್ತದೆ, ಅಸಮರ್ಥತೆ ಮತ್ತು ಆತ್ಮಹತ್ಯೆಯ ಪ್ರಯತ್ನಗಳು ಹೆಚ್ಚುತ್ತವೆ. ಅಮೇರಿಕದ ನರ ಅಂತಃಸ್ರಾವಕ ತಜ್ಞರಾದ ರಾಬರ್ಟ್ ಸಪ್ಲೊಸ್ಕಿ ಒತ್ತಡ, ಆತಂಕ, ಮತ್ತು ಖಿನ್ನತೆಯ ನಡುವಿನ ಸಂಬಂಧವನ್ನು ಜೀವವೈಜ್ಞಾನಿಕವಾಗಿ ಅಳೆಯಬಹುದು ಮತ್ತು ಚಿತ್ರಿಸಬಹುದು ಎಂದು ಇದೇ ರೀತಿ ವಾದಿಸಿದ್ದಾರೆ. ಆಲ್ಕೋಹಾಲ್ ಮತ್ತು ಔಷಧಿ ದುರ್ಬಳಕೆಯ ದರದಲ್ಲಿ ಹೆಚ್ಚಳ ಮತ್ತು ವಿಶೇಷವಾಗಿ ಅವಲಂಬನೆ, ಹಾಗು ವ್ಯಕ್ತಿಗಳಲ್ಲಿ ಸುಮಾರು ಮೂರರಷ್ಟು ವ್ಯಕ್ತಿಗಳಿಗೆ ADHDನಿಂದ ರೋಗನಿರ್ಣಯಿಸಿದ ಸಹವ್ಯಾಪನೆ ಖಿನ್ನತೆ(ಕಾಮೋರ್ಬಿಡ್ ಖಿನ್ನತೆ) ಇದೆಯೆಂದು ಗುರುತಿಸಲಾಗಿದೆ. ಆಘಾತದ ನಂತರ ಒತ್ತಡದ ಅಸ್ವಸ್ಥತೆ ಮತ್ತು ಖಿನ್ನತೆ ಹೆಚ್ಚಾಗಿ ಒಟ್ಟಿಗೆ-ಕಾಣಿಸಿಕೊಳ್ಳುತ್ತವೆ.

ಖಿನ್ನತೆ ಮತ್ತು ನೋವು ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ನೋವಿನಲ್ಲಿರುವುದು ಖಿನ್ನತೆ ಭಾವನೆ ಉಂಟುಮಾಡುತ್ತದೆ ಎನ್ನುವ ಸರಳ ಕಾರಣದಿಂದ ಇದು ಸ್ಪಷ್ಟವಾಗಿರಬಹುದು.[ಸೂಕ್ತ ಉಲ್ಲೇಖನ ಬೇಕು] ವಿಶೇಷವಾಗಿ ದೀರ್ಘಕಾಲದ ಅಥವಾ ನಿಯಂತ್ರಿಸಲಾಗದ ನೋವಾಗಿದ್ದರೆ ಖಿನ್ನತೆ ಉಂಟುಮಾಡುತ್ತದೆ. ಇದು ಕೂಡ ಸೆಲಿಗ್ಮ್ಯಾನ್ ನ ಅಸಹಾಯಕತೆಯ ಕಲಿಕೆ ಸಿದ್ಧಾಂತಕ್ಕೆ ಹೊಂದಿಕೆಯಾಗುತ್ತದೆ. ಒಂದು ಅಥವಾ ಅದಕ್ಕಿಂತ ಹೆಚ್ಚು ನೋವಿನ ಲಕ್ಷಣಗಳು 65ಪ್ರತಿಶತದಷ್ಟು ಖಿನ್ನತೆಗೆ ಒಳಗಾದ ರೋಗಿಗಳಲ್ಲಿ ಕಂಡುಬರುತ್ತದೆ. ಅಲ್ಲದೇ ನೋವಿನಿಂದ ನರಳುತ್ತಿರುವ ಐದರಿಂದ 85 ಪ್ರತಿಶತದಷ್ಟು ರೋಗಿಗಳು ಅವರ ಸ್ಥಿತಿಯನ್ನು ಆಧರಿಸಿ ಖಿನ್ನತೆಯಿಂದ ನರಳುತ್ತಿರುತ್ತಾರೆ; ಸಾಮಾನ್ಯ ಚಿಕಿತ್ಸೆಯಲ್ಲಿ ಹರಡಿರುವ ಪ್ರಮಾಣ ಕಡಿಮೆ ಮತ್ತು ವಿಶೇಷ ಚಿಕಿತ್ಸಾಲಯಗಳಲ್ಲಿ ಹೆಚ್ಚಿರುತ್ತದೆ. ಖಿನ್ನತೆಯ ನಿರ್ಣಯವು ಯಾವಾಗಲು ನಿಧಾನವಾಗುತ್ತದೆ ಅಥವಾ ಸರಿಯಾಗಿ ನಡೆಯುವುದಿಲ್ಲ. ಇದರಿಂದ ಫಲಿತಾಂಶವು ಕೆಟ್ಟದ್ದಾಗಿರುತ್ತದೆ. ಒಂದು ವೇಳೆ ಖಿನ್ನತೆಯನ್ನು ಗುರುತಿಸಲಾದರೂ, ಸಂಪೂರ್ಣ ತಪ್ಪಾಗಿ ಭಾವಿಸಿದರೆ ಫಲಿತಾಂಶವು ನಿಸ್ಸಂದೇಹವಾಗಿ ಕೆಟ್ಟದ್ದಾಗಿರುತ್ತದೆ.

ಖಿನ್ನತೆಯು 1.5- ರಿಂದ 2-ಪಟ್ಟು ಹೃದಯರಕ್ತನಾಳ ರೋಗದ ಹೆಚ್ಚಿದ ಅಪಾಯದೊಂದಿಗೆ ಸಂಬಂಧಿಸಿದೆ. ಇತರ ಅಪಾಯದ ಅಂಶಗಳಿಂದ ಇದು ಪ್ರತ್ಯೇಕವಾಗಿದೆ. ಅಲ್ಲದೇ ಇದು ಧೂಮಪಾನ ಮತ್ತು ಬೊಜ್ಜಿನಂತಹ ಸಂಭವನೀಯ ಅಪಾಯದ ಅಂಶಗಳೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದೆ. ಪ್ರಧಾನ ಖಿನ್ನತೆಗೆ ಒಳಗಾದ ಜನರು ಹೃದಯರಕ್ತನಾಳದ ಅಸ್ವಸ್ಥತೆಗಳನ್ನು ಗುಣಪಡಿಸುವಂತಹ ವೈದ್ಯಕೀಯ ಶಿಫಾರಸ್ಸುಗಳನ್ನು ಅನುಸರಿಸುವ ಸಾಧ್ಯತೆ ಕಡಿಮೆ. ಇದು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರ ಜೊತೆಯಲ್ಲಿ, ಹೃದಯರೋಗ ತಜ್ಞರು ಅವರ ಆರೈಕೆಯಲ್ಲಿರುವ ಜನರ ಹೃದಯರಕ್ತನಾಳದ ಸಮಸ್ಯೆಯನ್ನು ಜಟಿಲಗೊಳಿಸುವ ಮನಸ್ಸಿನ ಖಿನ್ನತೆಯನ್ನು ಗುರುತಿಸದೇ ಇರಬಹುದು.

ರೋಗದ ಪರಿಣಾಮಗಳು

ಖಿನ್ನತೆಯು ಹೆಚ್ಚಾಗಿ ನಿರುದ್ಯೋಗ ಮತ್ತು ಬಡತನದೊಂದಿಗೆ ಸಂಬಂಧಿಸಿರುತ್ತದೆ. ಪ್ರಧಾನ ಖಿನ್ನತೆಯು ಉತ್ತರ ಅಮೇರಿಕಾದ ಮತ್ತು ಇತರ ಅಧಿಕ ಆದಾಯದ ರಾಷ್ಟ್ರಗಳ ರೋಗದ ಹೊರೆಗೆ ಪ್ರಮುಖ ಕಾರಣವಾಗಿದೆ ಹಾಗು ವಿಶ್ವವ್ಯಾಪಿ ನಾಲ್ಕನೇ ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2030 ನೇ ವರ್ಷದಲ್ಲಿ,HIV ನಂತರ ಇದು ವಿಶ್ವವ್ಯಾಪಿ ರೋಗದ ಹೊರೆಗೆ ಎರಡನೇ ಪ್ರಮುಖ ಕಾರಣವಾಗಿದೆ. ಮರುಕಳಿಸಿದ ನಂತರ ಚಿಕಿತ್ಸೆಯನ್ನು ತೆಗೆದುಕೊಳ್ಳುವಲ್ಲಿ ನಿಧಾನವಾಗುವುದು ಮತ್ತು ವಿಫಲವಾಗುವುದು , ಹಾಗು ಆರೋಗ್ಯ ವೃತ್ತಿಪರರು ಚಿಕಿತ್ಸೆಯನ್ನು ಒದಗಿಸುವಲ್ಲಿ ವಿಫಲರಾಗುವುದು ಅಸಮರ್ಥತೆಯನ್ನು ಕಡಿಮೆಮಾಡಲು ಇರುವಂತಹ ಎರಡು ತಡೆಗಳಾಗಿವೆ.

ಇತಿಹಾಸ

ಪ್ರಾಚೀನ ಗ್ರೀಕ್ ವೈದ್ಯ ಹಿಪ್ಪೋಕ್ರೇಟ್ಸ್, ವಿಷಣ್ಣತೆಯ ಲಕ್ಷಣವನ್ನು, ನಿರ್ದಿಷ್ಟವಾದ ಮಾನಸಿಕ ಹಾಗು ದೈಹಿಕ ರೋಗಲಕ್ಷಣಗಳೊಂದಿಗೆ ಕಂಡುಬರುವ ಒಂದು ವಿಶಿಷ್ಟ ಕಾಯಿಲೆಯೆಂದು ವಿವರಿಸಿದ್ದಾನೆ; ಎಲ್ಲ ರೀತಿಯ "ಭಯ ಹಾಗು ನಿರಾಶೆಗಳು, ಬಹಳ ದೀರ್ಘಕಾಲದವರೆಗೂ ಮುಂದುವರೆದರೆ", ಇವುಗಳು ಕಾಯಿಲೆಯ ಲಕ್ಷಣವನ್ನು ಒಳಗೊಂಡಿರುತ್ತದೆಂದು ವಿವರಿಸಿದ್ದಾನೆ. ಇದು ಸದೃಶತೆಯನ್ನು ಹೊಂದಿದ್ದರೂ ಇಂದಿನ ಖಿನ್ನತೆಯ ಕಲ್ಪನೆಗಿಂತ ವಿಶಾಲವಾದ ಕಲ್ಪನೆಯನ್ನು ಹೊಂದಿದೆ; ದುಃಖ, ಖಿನ್ನತೆ, ಹಾಗು ನಿರಾಶೆ, ಹಾಗು ಸಾಮಾನ್ಯವಾಗಿ ಭಯ, ಸಿಟ್ಟು, ವಂಚನೆಗಳು ಹಾಗು ಗೀಳಿನ ಲಕ್ಷಣಗಳ ಸಮೂಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಸ್ವತಃ ಖಿನ್ನತೆ ಎಂಬ ಪದವು ಲ್ಯಾಟಿನ್ ಭಾಷೆಯ ಕ್ರಿಯಾಪದ ಡೆಪ್ರಿಮೆರ್ ನಿಂದ ವ್ಯುತ್ಪತ್ತಿಯನ್ನು ಹೊಂದಿದೆ, ಇದು "ಉತ್ಸಾಹ ಕುಂದಿಸು" ಎಂಬ ಅರ್ಥವನ್ನು ನೀಡುತ್ತದೆ. 14ನೇ ಶತಮಾನದಿಂದ, "ನಿರುತ್ಸಾಹಗೊಳ್ಳುವುದು" ಎಂಬ ಪದವನ್ನು ನಿಗ್ರಹಿಸುವುದು ಅಥವಾ ಚೈತನ್ಯವನ್ನು ತಗ್ಗಿಸುವುದು ಎಂಬ ಅರ್ಥಕ್ಕೆ ಸೀಮಿತಗೊಳಿಸಲಾಗಿತ್ತು. ಈ ಪದವನ್ನು 1665ರಲ್ಲಿ ಇಂಗ್ಲಿಷ್ ಲೇಖಕ ರಿಚರ್ಡ್ ಬೇಕರ್ ತಮ್ಮ ಕ್ರೋನಿಕಲ್ ನಲ್ಲಿ, "ಚೈತನ್ಯದ ಪ್ರಧಾನ ಖಿನ್ನತೆಯನ್ನು" ಹೊಂದಿರುವ ವ್ಯಕ್ತಿಗೆ ಸೂಚಿಸಿದರು, ಹಾಗು ಇದೆ ಪದವನ್ನು ಮತ್ತೊಬ್ಬ ಇಂಗ್ಲಿಷ್ ಲೇಖಕ ಸ್ಯಾಮ್ಯುಯೆಲ್ ಜಾನ್ಸನ್ 1753ರಲ್ಲಿ ಇದೆ ಅರ್ಥದಲ್ಲಿ ಬಳಸಿದರು. ಈ ಪದವು ಶರೀರವಿಜ್ಞಾನ ಹಾಗು ಅರ್ಥಶಾಸ್ತ್ರದಲ್ಲೂ ಸಹ ಬಳಕೆಯಾಯಿತು. ಮನೋವೈದ್ಯಕೀಯ ರೋಗಲಕ್ಷಣಕ್ಕೆ ಸಂಬಂಧಿಸಿದಂತೆ ಈ ಪದದ ಮೊದಲ ಬಳಕೆಯನ್ನು ಫ್ರೆಂಚ್ ಮನೋವೈದ್ಯ ಲೂಯಿಸ್ ಡೆಲಸಿಯುವೆ 1856ರಲ್ಲಿ ಬಳಸಿದರು, ಹಾಗು 1860ರ ಸುಮಾರಿಗೆ ಈ ಪದವು ವೈದ್ಯಕೀಯ ನಿಘಂಟುಗಳಲ್ಲಿ, ಭಾವನಾತ್ಮಕ ಕ್ರಿಯೆಯ ಶರೀರವೈಜ್ಞಾನಿಕ ಹಾಗು ರೂಪಕ ಲಕ್ಷಣದ ತಗ್ಗಿದ ಸ್ಥಿತಿಯನ್ನು ಸೂಚಿಸಲು ಬಳಕೆಯಾಯಿತು. ಅರಿಸ್ಟಾಟಲ್ ನಿಂದೀಚೆಗೆ, ವಿಷಣ್ಣತೆಯು ವಿದ್ಯಾವಂತ ಹಾಗು ಬೌದ್ಧಿಕ ಶ್ರೇಷ್ಠತೆಯ ಮನುಷ್ಯರೊಂದಿಗೆ ಸಂಬಂಧಿಸಿತ್ತು. ಇದು ಚಿಂತನೆ ಹಾಗು ಸೃಜನಶೀಲತೆಗೆ ಹಾನಿಕಾರಕವೆಂದು ಭಾವಿಸಲಾಗಿತ್ತು. ಹೊಸ ಕಲ್ಪನೆಯು ಈ ಸಂಬಂಧಗಳನ್ನು ಪರಿತ್ಯಜಿಸುವುದರ ಜೊತೆಗೆ 19ನೇ ಶತಮಾನದುದ್ದಕ್ಕೂ, ಈ ಪದವು ಮಹಿಳೆಯರೊಂದಿಗೆ ಹೆಚ್ಚು ತಳುಕು ಹಾಕಿಕೊಂಡಿದೆ.

ಆದಾಗ್ಯೂ ವಿಷಣ್ಣತೆ ಯು, ಪ್ರಧಾನವಾದ ರೋಗನಿರ್ಣಯ ಪದವಾಗಿ ಉಳಿದರೂ, ಖಿನ್ನತೆ ವೈದ್ಯಕೀಯ ಪ್ರಬಂಧಗಳಲ್ಲಿ ಹೆಚ್ಚಿನ ಚಲಾವಣೆಯನ್ನು ಗಳಿಸಿತು ಹಾಗು ಶತಮಾನದ ಕೊನೆಯ ಭಾಗದ ಹೊತ್ತಿಗೆ ಇದು ಒಂದು ಸಮಾನಾರ್ಥಕ ಪದವಾಯಿತು; ಜರ್ಮನ್ ಮನೋವೈದ್ಯ ಎಮಿಲ್ ಕ್ರಯೆಪೆಲಿನ್, ಇದನ್ನು ಮುಖ್ಯ ಪದವಾಗಿ ಬಳಸಿದವರಲ್ಲಿ ಮೊದಲಿಗರಿರಬೇಕು, ಇವರು ಖಿನ್ನತೆಯ ಸ್ಥಿತಿ ಗಳಾಗಿ ವಿಷಣ್ಣತೆಯ ವಿವಿಧ ವಿಧಗಳನ್ನು ಸೂಚಿಸಲು ಈ ಪದವನ್ನು ಬಳಸಿದರು.

ಸಿಗ್ಮಂಡ್ ಫ್ರಾಯ್ಡ್, ವಿಷಣ್ಣತೆಯ ಸ್ಥಿತಿಯನ್ನು ತಮ್ಮ 1917ರ ಪತ್ರಿಕೆ ಮೌರ್ನಿಂಗ್ ಅಂಡ್ ಮೆಲಾಂಕಲಿಯ ಲ್ಲಿ ಶೋಕಕ್ಕೆ ಹೋಲಿಸುತ್ತಾರೆ.

ಅವರು ವಾಸ್ತವಿಕ ನಷ್ಟವಾದ, ಸಾವು ಅಥವಾ ಭಾವಪ್ರಧಾನ ಬೇರ್ಪಡಿಕೆಯ ಮೂಲಕ ಆಗುವಂತಹ ಮೌಲ್ಯಯುತ ಸಂಬಂಧಗಳ ನಷ್ಟವು ವೈಯಕ್ತಿಕ ನಷ್ಟವನ್ನೂ ಸಹ ಉಂಟುಮಾಡುತ್ತದೆ; ಖಿನ್ನತೆಗೆ ಒಳಪಟ್ಟ ವ್ಯಕ್ತಿಯು ಅಪ್ರಜ್ಞೆಯ, ಸ್ವಾರ್ಥಪರ ಪ್ರಕ್ರಿಯೆಯಾದ ಅಹಂನ ಸಹಜ ಮಾನಸಿಕ ಪ್ರಚೋದನೆಯ ಮನಶ್ಶಕ್ತಿಕೇಂದ್ರೀಕರಣ ದ ಮೂಲಕ ತನ್ನ ಪ್ರೀತಿಯ ವಸ್ತುವನ್ನು ಗುರುತಿಸಿಕೊಳ್ಳುತ್ತಾನೆ ಎಂಬ ಸಿದ್ಧಾಂತವನ್ನು ರಚಿಸಿದ್ದಾರೆ. ಇಂತಹ ನಷ್ಟಗಳು ತೀವ್ರತರವಾದ ವಿಷಣ್ಣತೆಯ ಲಕ್ಷಣಗಳನ್ನು ಉಂಟುಮಾಡುತ್ತದೆ, ಇದು ಶೋಕಕ್ಕಿಂತಲೂ ಹೆಚ್ಚು ಗಂಭೀರವಾಗಿರುತ್ತದೆ; ಇದನ್ನು ಬಾಹ್ಯ ಜಗತ್ತು ನಕರಾತ್ಮಕವಾಗಿ ಕಾಣುವುದಷ್ಟೇ ಅಲ್ಲದೆ, ಸ್ವತಃ ಅಹಂನೊಂದಿಗೆ ರಾಜಿಮಾಡಿಕೊಳ್ಳಲಾಗುತ್ತದೆ. ರೋಗಿಯ ಸ್ವ-ಗ್ರಹಿಕೆಯ ಕ್ಷೀಣತೆಯು, ಅವನ ಸ್ವದೂಷಣೆ, ಕೀಳರಿಮೆ ಹಾಗು ತಿರಸ್ಕಾರಾರ್ಹತೆಯ ಅವನ ನಂಬಿಕೆಯಿಂದ  ಬಹಿರಂಗಗೊಳ್ಳುತ್ತದೆ. ಅವರು ಬಾಲ್ಯ ಜೀವನದ ಅನುಭವಗಳೂ ಸಹ ಇದಕ್ಕೆ ಒಳಪಡುವ ಅಂಶಗಳೆಂದು ಸ್ಪಷ್ಟಪಡಿಸುತ್ತಾರೆ. ಮೇಯರ್, ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಗಳಿಗೆ ಮಹತ್ವನೀಡುತ್ತಾ, ಒಂದು ಮಿಶ್ರ ಸಾಮಾಜಿಕ ಹಾಗು ಜೀವವಿಜ್ಞಾನದ ಚೌಕಟ್ಟನ್ನು ಮುಂದಿಡುತ್ತಾರೆ. ಜೊತೆಗೆ ವಿಷಣ್ಣತೆ  ಎಂಬ ಪದದ ಬದಲಾಗಿ ಖಿನ್ನತೆ  ಎಂಬ ಪದವನ್ನು ಬಳಸಬೇಕೆಂದು ವಾದಿಸುತ್ತಾರೆ.  DSMನ ಮೊದಲ ರೂಪಾಂತರ (DSM-I, 1952) ಖಿನ್ನತೆಯ ಪ್ರತಿಕ್ರಿಯೆ ಯನ್ನು ಹಾಗು DSM-II (1968) ಖಿನ್ನತೆಯ ನರವ್ಯಾಧಿ ಯನ್ನು ಒಳಗೊಂಡಿತ್ತು, ಆಂತರಿಕ ಸಂಘರ್ಷ ಅಥವಾ ಗುರುತಿಸಲಾಗುವ ಘಟನೆಗೆ ನೀಡಲಾಗುವ ತೀವ್ರತರವಾದ ಪ್ರತಿಕ್ರಿಯೆ ಎಂದು ಅರ್ಥನಿರೂಪಿಸಲಾಗಿದೆ, ಜೊತೆಗೆ ಇದು ಪ್ರಧಾನ ಭಾವನಾತ್ಮಕ ಅಸ್ವಸ್ಥತೆಗಳ ಒಳಗೆ ಉನ್ಮಾದ-ಖಿನ್ನತೆಯ ಮನೋವಿಕಾರವುಳ್ಳ ಖಿನ್ನತೆಯ ವಿಧವನ್ನೂ ಸಹ ಒಳಗೊಂಡಿದೆ. 

20ನೇ ಶತಮಾನದ ಮಧ್ಯಭಾಗದ ಹೊತ್ತಿಗೆ, ಸಂಶೋಧಕರು, ಖಿನ್ನತೆಯು ಮಿದುಳಿನಲ್ಲಿರುವ ನರಪ್ರೇಕ್ಷಕಗಳಲ್ಲಿ ಉಂಟಾಗುವ ರಾಸಾಯನಿಕ ಅಸಮತೋಲನವೆಂದು ಸಿದ್ಧಾಂತ ರಚಿಸಿದರು, ಈ ಸಿದ್ಧಾಂತವು 1950ರಲ್ಲಿ ನಡೆಸಲಾದ ಅವಲೋಕನವನ್ನು ಆಧರಿಸಿದೆ. ಇದು ಏಕಅಮೈನ್ ನರಪ್ರೇಕ್ಷಕ ಮಟ್ಟಗಳನ್ನು ಮಾರ್ಪಡಿಸುವಾದ ರಿಸರ್ಪಿನ್ ಹಾಗು ಐಸೋನಿಯಸಿಡ್ ಉಂಟುಮಾಡುವ ಪರಿಣಾಮಗಳು ಹಾಗು ಇದು ಹೇಗೆ ಖಿನ್ನತೆಯ ರೋಗಲಕ್ಷಣಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬ ಅವಲೋಕನಗಳನ್ನು ಆಧರಿಸಿದೆ.

ಪ್ರಧಾನ ಖಿನ್ನತೆಯ ಅಸ್ವಸ್ಥತೆ ಎಂಬ ಪದವನ್ನು 1970ರ ಮಧ್ಯಭಾಗದಲ್ಲಿ USನ ಪ್ರಾಯೋಗಿಕ ಚಿಕಿತ್ಸಕರ ಗುಂಪೊಂದು, ರೋಗಲಕ್ಷಣದ ಮಾದರಿಗಳನ್ನು ಆಧರಿಸಿದ ರೋಗನಿರ್ಣಯದ ಮಾನದಂಡದ ಪ್ರಸ್ತಾವನೆಗಳ ಭಾಗವಾಗಿ ಪರಿಚಯಿಸಿತು(ಇದನ್ನು, ಈ ಹಿಂದಿನ ಫೆಯಿಗ್ಹ್ನರ್ ಕ್ರೈಟೀರಿಯವನ್ನು ಆಧರಿಸಿ "ರಿಸರ್ಚ್ ಡಯಗ್ನೋಸ್ಟಿಕ್ ಕ್ರೈಟೀರಿಯ" ಎಂದು ಕರೆಯಲಾಗುತ್ತದೆ), ಹಾಗು ಇದನ್ನು 1980ರಲ್ಲಿ DSM-IIIಗೆ ಸೇರಿಸಲಾಯಿತು.. ಸ್ಥಿರತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ICD-10, ಕೇವಲ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಇದೆ ಮಾನದಂಡವನ್ನು ಬಳಸಿದವು, ಆದರೆ ತೀವ್ರವಲ್ಲದ ಖಿನ್ನತೆಯ ಪ್ರಸಂಗ ಗಳನ್ನು ಗುರುತಿಸಲು DSM ರೋಗನಿರ್ಣಯದ ಪ್ರತಿಕ್ರಿಯಾರಂಭ ಮಿತಿಯನ್ನು ಬಳಕೆ ಮಾಡಿತು, ಸಾಧಾರಣ ಹಾಗು ತೀವ್ರತರವಾದ ಪ್ರಸಂಗಗಳಿಗೆ ಅಧಿಕ ಪ್ರತಿಕ್ರಿಯಾರಂಭ ಮಿತಿ ವರ್ಗಗಳನ್ನು ಸೇರ್ಪಡೆಗೊಳಿಸಿತು. ವಿಷಣ್ಣತೆ ಯ ಪ್ರಾಚೀನ ಕಲ್ಪನೆಯು, ವಿಷಣ್ಣತೆಗೆ ಒಳಗಾಗುವ ಉಪಮಾದರಿಯ ಕಲ್ಪನೆಯಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ.

ಖಿನ್ನತೆಯ ಬಗೆಗಿನ ಹೊಸ ಅರ್ಥನಿರೂಪಣೆಗಳನ್ನು ವ್ಯಾಪಕವಾಗಿ ಸ್ವೀಕರಿಸಲಾಯಿತು, ಆದಾಗ್ಯೂ ಕೆಲವು ಚರ್ಚಾಸ್ಪದ ಸಂಶೋಧನೆಗಳು ಹಾಗು ಅಭಿಪ್ರಾಯಗಳು ಇಂದಿಗೂ ಅಸ್ತಿತ್ವದಲ್ಲಿದೆ. ವಿಷಣ್ಣತೆಯ ರೋಗನಿರ್ಣಯ ಶಾಸ್ತ್ರಕ್ಕೆ ಹಿಂದಿರುಗಲು ಕೆಲವು ಮುಂದುವರಿದ ಪ್ರಯೋಗಗಳನ್ನು ಆಧರಿಸಿದ ಚರ್ಚೆಗಳಿವೆ. ರೋಗನಿರ್ಣಯವನ್ನು ಒಳಗೊಂಡಿರುವ ವಿಸ್ತರಣೆ ಕುರಿತು ಕೆಲವು ಟೀಕೆಗಳು ಕೇಳಿಬಂದಿವೆ. ಇವುಗಳು, 1950ರ ಉತ್ತರಾರ್ಧದಿಂದೀಚೆಗೆ ಖಿನ್ನತೆ-ಶಮನಕಾರಿಗಳು ಹಾಗು ಜೀವವೈಜ್ಞಾನಿಕ ಮಾದರಿಗಳ ಅಭಿವೃದ್ಧಿ ಹಾಗು ಉತ್ತೇಜನಕ್ಕೆ ಸಂಬಂಧಪಟ್ಟಿದೆ.

ಸಾಮಾಜಿಕ ಸಾಂಸ್ಕೃತಿಕ ಅಂಶಗಳು

ಪ್ರಧಾನ ಖಿನ್ನತೆಯ ಅಸ್ವಸ್ಥತೆ 
ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಕಡೇಪಕ್ಷ ಎರಡು ವರ್ಷಗಳ ಕಾಲ ಪ್ರಧಾನ ಖಿನ್ನತೆಯ ಪ್ರಸಂಗಗಳನ್ನು ಅನುಭವಿಸಿರುವಂತೆ ಕಂಡುಬಂದಿದೆ.

ಸಂಸ್ಕೃತಿಗಳ ಒಳಗೆ ಹಾಗು ಸಂಸ್ಕೃತಿಯ ನಡುವೆ ಖಿನ್ನತೆಯ ಬಗೆಗಿನ ಜನರ ಭಾವನೆಗಳು ವ್ಯಾಪಕವಾಗಿ ಬದಲಾವಣೆಯಾಗುತ್ತದೆ. "ವೈಜ್ಞಾನಿಕ ನಿಶ್ಚಿತತೆಯ ಕೊರತೆಯ ಕಾರಣದಿಂದಾಗಿ" ಒಬ್ಬ ವ್ಯಾಖ್ಯಾನಕಾರನು, "ಖಿನ್ನತೆಯ ಬಗೆಗಿನ ಚರ್ಚೆಯು ಭಾಷೆಯ ಮೇಲಿನ ಪ್ರಶ್ನೆಗಳಾಗಿ ಮಾರ್ಪಡುತ್ತದೆಂದು" ಗಮನಿಸಿದ್ದಾರೆ. ನಾವು ಕರೆಯಲ್ಪಡುವ-'ಕಾಯಿಲೆ,' 'ಅಸ್ವಸ್ಥತೆ', 'ಮನಸ್ಸಿನ ಸ್ಥಿತಿಗತಿ'-ನಾವು ಅದನ್ನು ಹೇಗೆ ನೋಡುತ್ತೇವೆ, ಹೇಗೆ ಅದನ್ನು ಪತ್ತೆಮಾಡಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತೇವೆ ಎಂಬುದರ ಮೇಲೆ ಪರಿಣಾಮವನ್ನು ಬೀರುತ್ತದೆ." ವೈಯಕ್ತಿಕ ವೃತ್ತಿಪರ ಚಿಕಿತ್ಸೆಯ ಅಗತ್ಯವಿರುವ ಕಾಯಿಲೆ ಎಂದು ತೀವ್ರತರವಾದ ಖಿನ್ನತೆಯ ಪರಿಸ್ಥಿತಿಗಳನ್ನು ಪರಿಗಣಿಸುವ ವ್ಯಾಪ್ತಿಯಲ್ಲಿ ಸಾಂಸ್ಕೃತಿಕ ವ್ಯತ್ಯಾಸಗಳಿವೆ, ಅಥವಾ ಇದು ಮತ್ತೇನನ್ನೋ ಸೂಚಿಸಬಹುದು, ಉದಾಹರಣೆಗೆ ಸಾಮಾಜಿಕ ಅಥವಾ ನೈತಿಕ ಸಮಸ್ಯೆಗಳನ್ನು ನಿಭಾಯಿಸುವ ಅಗತ್ಯ, ಜೀವವೈಜ್ಞಾನಿಕ ಅಸಮತೋಲನಗಳ ಪರಿಣಾಮ, ಅಥವಾ ಕಟುವೇದನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಎದುರಾಗುವ ವೈಯಕ್ತಿಕ ಭೇದಗಳ ಪ್ರತಿಬಿಂಬವಾಗಿರಬಹುದು. ಇವುಗಳು ಬಲಹೀನತೆ ಹಾಗು ಭಾವನಾತ್ಮಕ ಸಂಘರ್ಷಗಳ ಭಾವನೆಗಳನ್ನು ಬಲಪಡಿಸಬಹುದು.

ಚೀನಾದಂತಹ ಕೆಲ ರಾಷ್ಟ್ರಗಳಲ್ಲಿ ರೋಗನಿರ್ಣವು ಬಹಳ ಕಡಿಮೆ ಕಂಡುಬರುತ್ತದೆ. ಚೀನಿಯರು ಸಾಂಪ್ರದಾಯಿಕವಾಗಿ ಭಾವನಾತ್ಮಕ ಖಿನ್ನತೆಯನ್ನು ಅಲ್ಲಗಳೆಯುತ್ತಾರೆ ಅಥವಾ ದೈಹಿಕ ಕಾಯಿಲೆಯ ಕಲ್ಪನೆ(ಸೊಮಾಟೈಜ್) ಯೆಂದು ಭಾವಿಸುತ್ತಾರೆಂದು ವಾದಿಸಲಾಗಿತ್ತು.(ಆದಾಗ್ಯೂ 1980ರ ಆರಂಭದಿಂದೀಚೆಗೆ, ಖಿನ್ನತೆಯ ಬಗ್ಗೆ ಚೀನಿಯರ ನಿರಾಕರಣೆಯು ತೀವ್ರವಾಗಿ ಪರಿವರ್ತನೆಗೊಂಡಿದೆ). ಪರ್ಯಾಯವಾಗಿ, ಪಾಶ್ಚಿಮಾತ್ಯ ಸಂಸ್ಕೃತಿಗಳಲ್ಲಿ, ಮಾನವನ ವೇದನೆಯ ಕೆಲ ಅಭಿವ್ಯಕ್ತತೆಗಳಿಗೆ ಅಸ್ವಸ್ಥತೆಯ ಸ್ಥಾನಮಾನ ನೀಡಿ ಮರುರಚನೆ ಮಾಡುವುದರ ಮೂಲಕ ಎತ್ತರಿಸಿರಬಹುದು.. ಆಸ್ಟ್ರೇಲಿಯನ್ ಪ್ರಾಧ್ಯಾಪಕ ಗೊರ್ಡನ್ ಪಾರ್ಕರ್ ಹಾಗು ಇತರರು, ದುಃಖ ಮತ್ತು ಸಂಕಟಕ್ಕೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಸ್ಥಿತಿಯನ್ನು ಖಿನ್ನತೆಯ ಪಾಶ್ಚಿಮಾತ್ಯ ಕಲ್ಪನೆ ಎಂದು ವಾದಿಸುತ್ತಾರೆ. ಇದೆ ರೀತಿ, ಹಂಗೇರಿಯನ್-ಅಮೆರಿಕನ್ ಮನೋವೈದ್ಯ ಥಾಮಸ್ ಸ್ಜಸ್ಜ್ ಹಾಗು ಇತರರು, ಖಿನ್ನತೆಯು ಒಂದು ರೂಪಕ ಸ್ವರೂಪದ ಕಾಯಿಲೆಯಾಗಿದ್ದು ಇದನ್ನು ವಾಸ್ತವವಾದ ಕಾಯಿಲೆಯೆಂದು ಅಸಮಂಜಸವಾಗಿ ಪರಿಗಣಿಸುತ್ತಾರೆ. DSM ಹಾಗು ಅದನ್ನು ಬಳಸಿಕೊಳ್ಳುವ ವರ್ಣನಾತ್ಮಕ ಮನೋರೋಗಚಿಕಿತ್ಸೆಯು ಕೇವಲ ಅಮೂರ್ತ ಸಂಗತಿಯಾದ ಖಿನ್ನತೆಯನ್ನು ಮೂರ್ತರೂಪಗೊಳಿಸುವ ಬಗ್ಗೆ ಒಲವನ್ನು ತೋರುತ್ತದೆ, ಇದು ವಾಸ್ತವವಾಗಿ ಸಾಮಾಜಿಕ ರಚನೆಗಳಾಗಿರಬಹುದು ಎಂಬ ಬಗ್ಗೆ ಕಳವಳ ವ್ಯಕ್ತವಾಗಿದೆ. ಅಮೆರಿಕದ ಮೂಲಕಲ್ಪನೆಯ ಮನಶ್ಶಾಸ್ತ್ರಜ್ಞ ಜೇಮ್ಸ್ ಹಿಲ್ಲ್ಮನ್, ಖಿನ್ನತೆಯು ಆತ್ಮಕ್ಕೆ ಆರೋಗ್ಯಕರವಾಗಿರಬಹುದು, ಅಷ್ಟರಮಟ್ಟಿಗೆ ಇದು "ಆಶ್ರಯ, ಸೀಮಿತತೆ, ಕೇಂದ್ರೀಕರಣ, ಗುರುತ್ವ, ತೂಕ, ಹಾಗು ದೈನ್ಯತೆಯ ಬಲಹೀನತೆಯನ್ನು ಉಂಟುಮಾಡುತ್ತದೆ" ಎಂದು ಬರೆಯುತ್ತಾರೆ. ಹಿಲ್ಲ್ಮನ್, ಖಿನ್ನತೆಯನ್ನು ಹೋಗಲಾಡಿಸುವ ಚಿಕಿತ್ಸಕ ಪ್ರಯತ್ನಗಳು, ಕ್ರೈಸ್ತಧರ್ಮದ ಪುನರುತ್ಥಾನದ ವಿಷಯವನ್ನು ಪ್ರತಿಧ್ವನಿಸುತ್ತದೆ, ಆದರೆ ವ್ಯಕ್ತಿಯ ಭಾವಪೂರ್ಣ ಸ್ಥಿತಿಯನ್ನು ಪಿಶಾಚೀಕರಿಸುವ ದುರದೃಷ್ಟಕರ ಪರಿಣಾಮವನ್ನು ಹೊಂದಿದೆ ಎಂದು ವಾದಿಸಿದ್ದಾರೆ.

ಐತಿಹಾಸಿಕ ವ್ಯಕ್ತಿಗಳು ಸಾಮಾನ್ಯವಾಗಿ ಖಿನ್ನತೆಯ ಬಗ್ಗೆ ಚರ್ಚಿಸಲು ಅಥವಾ ಚಿಕಿತ್ಸೆಯನ್ನು ಪಡೆಯಲು ಹಿಂಜರಿಯುತ್ತಿದ್ದರು. ಖಿನ್ನತೆಯ ಪರಿಸ್ಥಿತಿ ಬಗ್ಗೆ ಇದ್ದ ಸಾಮಾಜಿಕ ಕಳಂಕ ಅಥವಾ ಚಿಕಿತ್ಸೆ ಅಥವಾ ರೋಗನಿರ್ಣಯದ ಬಗ್ಗೆ ಇದ್ದ ಅಜ್ಞಾನ ಇದಕ್ಕೆ ಮುಖ್ಯ ಕಾರಣವಿರಬಹುದು. ಆದಾಗ್ಯೂ, ಪತ್ರಗಳು, ದಿನಚರಿಗಳು, ಚಿತ್ರಗೆಲಸಗಳು, ಬರಹಗಳು ಅಥವಾ ಕೆಲವು ಐತಿಹಾಸಿಕ ವ್ಯಕ್ತಿಗಳ ಕುಟುಂಬ ಹಾಗು ಸ್ನೇಹಿತರು ನೀಡಿದ ಉಲ್ಲೇಖಗಳ ಬಗೆಗಿನ ವಿಶ್ಲೇಷಣೆ ಅಥವಾ ವ್ಯಾಖ್ಯಾನಗಳಿಂದ ಕೆಲವು ಮಾದರಿಯ ಖಿನ್ನತೆಗಳನ್ನು ಹೊಂದಿದ್ದರ ಬಗ್ಗೆ ಊಹೆಗೆ ಎಡೆ ಮಾಡಿಕೊಟ್ಟಿದೆ. ಖಿನ್ನತೆಗೆ ಒಳಪಟ್ಟಿರಬಹುದಾದ ಕೆಲವರಲ್ಲಿ ಇಂಗ್ಲಿಷ್ ಲೇಖಕಿ ಮೇರಿ ಶೆಲ್ಲಿ, ಅಮೆರಿಕನ್-ಬ್ರಿಟಿಶ್ ಬರಹಗಾರ ಹೆನ್ರಿ ಜೇಮ್ಸ್, ಹಾಗು ಅಮೆರಿಕಾದ ಅಧ್ಯಕ್ಷ ಅಬ್ರಹಾಂ ಲಿಂಕನ್ ಸೇರಿದ್ದಾರೆ. ಸಂಭಾವ್ಯ ಖಿನ್ನತೆಯನ್ನು ಹೊಂದಿದ್ದ ಕೆಲವು ಪ್ರಸಿದ್ಧ ಸಮಕಾಲೀನ ಜನರಲ್ಲಿ ಕೆನೆಡಿಯನ್ ಹಾಡು ಬರಹಗಾರ ಲಿಯೋನಾರ್ಡ್ ಕೋಹೆನ್ ಹಾಗು ಅಮೆರಿಕಾದ ನಾಟಕಕಾರ ಹಾಗು ಕಾದಂಬರಿಕಾರ ಟೆನ್ನಿಸ್ಸಿ ವಿಲ್ಲಿಯಮ್ಸ್ ಸೇರಿದ್ದಾರೆ. ಕೆಲವು ಪ್ರವರ್ತಕ ಮನಶ್ಶಾಸ್ತ್ರಜ್ಞರಾದ, ಅಮೆರಿಕದವರಾದ ವಿಲ್ಲಿಯಮ್ ಜೇಮ್ಸ್ ಹಾಗು ಜಾನ್ B. ವ್ಯಾಟ್ಸನ್, ಸ್ವಯಂ ಖಿನ್ನತೆಯನ್ನು ನಿಭಾಯಿಸುತ್ತಿದ್ದರು.

ನರವೈಜ್ಞಾನಿಕ ಅಸ್ವಸ್ಥತೆಗಳು ಹಾಗು ಚಿತ್ತಿಸ್ಥಿತಿಯ ಅಸ್ವಸ್ಥತೆಗಳನ್ನು ಸೃಜನಶೀಲತೆಯೊಂದಿಗೆ ತಳಕು ಹಾಕಬಹುದೇ ಬೇಡವೇ ಎಂಬುದನ್ನು ಕುರಿತು ಚರ್ಚೆಗಳು ಮುಂದುವರೆದಿದೆ, ಈ ಚರ್ಚೆಗಳು ಅರಿಸ್ಟಾಟಲನ ಸಮಯದಿಂದಲೂ ಚಾಲ್ತಿಯಲ್ಲಿದೆ. ಬ್ರಿಟಿಶ್ ಸಾಹಿತ್ಯವು ಖಿನ್ನತೆಯ ಪರ್ಯಾಲೋಚನೆಗಳಿಗೆ ಹಲವಾರು ಉದಾಹರಣೆಗಳನ್ನು ನೀಡಿದೆ. ಇಂಗ್ಲಿಷ್ ತತ್ತ್ವಶಾಸ್ತ್ರಜ್ಞ ಜಾನ್ ಸ್ಟುವರ್ಟ್ ಮಿಲ್, ತಾವೇ ಹೆಸರಿಸಿದ "ನರಗಳ ಜಡ ಸ್ಥಿತಿ"ಯನ್ನು ಹಲವಾರು ತಿಂಗಳ ದೀರ್ಘಾವಧಿಯವರೆಗೂ ಅನುಭವಿಸಿದರು. ಒಬ್ಬ ವ್ಯಕ್ತಿ "ಸುಖಾನುಭವ ಅಥವಾ ಆನಂದಕರ ಪ್ರಚೋದನೆಗೆ ಒಳಗಾಗದಿದ್ದರೆ, ಇತರ ಸಮಯಗಳಲ್ಲಿ ಸಂತೋಷಕರವಾಗಿದ್ದ ಚಿತ್ತಸ್ಥಿತಿಯು ನೀರಸವಾಗಿರುತ್ತದೆ ಅಥವಾ ಉದಾಸೀನ ಭಾವದಿಂದ ಇರುತ್ತದೆ". ಅವರು ಇಂಗ್ಲಿಷ್ ಕವಿ ಸ್ಯಾಮ್ಯುಯೆಲ್ ಟೇಲರ್ ಕಾಲ್ರಿಡ್ಜ್ ರ "ಡಿಜೆಕ್ಶನ್" ಬಗ್ಗೆ ಉಲ್ಲೇಖಿಸುತ್ತಾ, ತಮ್ಮ ಪರಿಸ್ಥಿತಿಯ ಯಥೋಚಿತ ಉದಾಹರಣೆಯೆಂದು ಹೇಳುತ್ತಾರೆ: "ಒಂದು ಮನೋಯಾತನೆ, ಶೂನ್ಯ, ಕತ್ತಲೆ ಹಾಗು ಉತ್ಸಾಹಶೂನ್ಯವಿಲ್ಲದ ದುಃಖ,/ ಒಂದು ನಿದ್ರಾಜನಕ, ನಿಗ್ರಹಿತ, ತೀವ್ರತರವಾದ ಭಾವನೆಗಳಿಲ್ಲದ ದುಃಖ,/ ಇದಕ್ಕೆ ಯಾವುದೇ ಸ್ವಾಭಾವಿಕ ಮಾರ್ಗ ಅಥವಾ ಶಮನ ಸಿಗುವುದಿಲ್ಲ/ ಶಬ್ದದ, ಅಥವಾ ನಿಟ್ಟುಸಿರು, ಅಥವಾ ಕಣ್ಣೀರಿನ ಮೂಲಕವಾಗಲಿ." ಇಂಗ್ಲಿಷ್ ಬರಹಗಾರ ಸ್ಯಾಮ್ಯುಯೆಲ್ ಜಾನ್ಸನ್, ತಮ್ಮ ಖಿನ್ನತೆಯನ್ನು ವಿವರಿಸಲು 1780ರ "ದಿ ಬ್ಲ್ಯಾಕ್ ಡಾಗ್" ನಲ್ಲಿ ಖಿನ್ನತೆ ಎಂಬ ಪದವನ್ನು ಬಳಸುತ್ತಾರೆ, ಹಾಗು ಇದನ್ನು ತರುವಾಯ ಖಿನ್ನತೆಯಿಂದ ಬಳಲುತ್ತಿದ್ದ ಮಾಜಿ ಬ್ರಿಟಿಶ್ ಪ್ರಧಾನಿ ಸರ್ ವಿನ್ಸ್ಟನ್ ಚರ್ಚಿಲ್ ಜನಪ್ರಿಯಗೊಳಿಸಿದರು.

ಪ್ರಧಾನ ಖಿನ್ನತೆಯ ಸಾಮಾಜಿಕ ಕಳಂಕವು ವ್ಯಾಪಕವಾಗಿ ಹರಡಿತ್ತು ಹಾಗು ಸ್ವಲ್ಪಮಟ್ಟಿಗೆ ಮಾನಸಿಕ ಆರೋಗ್ಯ ಸೇವೆಗಳ ಸಂಪರ್ಕದಿಂದ ತಗ್ಗಿಸಿತು. ಚಿಕಿತ್ಸೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳು ಗಮನಾರ್ಹವಾಗಿ ಆರೋಗ್ಯ ವೃತ್ತಿಪರರ ಅಭಿಪ್ರಾಯಗಳಿಗಿಂತ ಭಿನ್ನವಾಗಿರುತ್ತದೆ; ಔಷಧವಿಜ್ಞಾನಕ್ಕಿಂತ ಪರ್ಯಾಯ ಚಿಕಿತ್ಸಾಕ್ರಮಗಳು ಹೆಚ್ಚು ಸಹಕಾರಿಯೆಂದು ಹೇಳಲಾಯಿತು. ಆದರೆ ಇದನ್ನು ಕಳಪೆಯಾಗಿ ಭಾವಿಸಲಾಯಿತು. UKಯಲ್ಲಿ, ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ಸ್ ಹಾಗು ರಾಯಲ್ ಕಾಲೇಜ್ ಆಫ್ ಜನರಲ್ ಪ್ರ್ಯಾಕ್ಟಿಷನರ್ಸ್ ಜಂಟಿಯಾಗಿ ಐದು ವರ್ಷದ ಡಿಫೀಟ್ ಡಿಪ್ರೆಶನ್ ಅಭಿಯಾನವನ್ನು 1992ರಿಂದ 1996ರವರೆಗೂ ನಡೆಸಿ ಅದರ ಬಗ್ಗೆ ಅರಿವನ್ನು ಮೂಡಿಸುವುದರ ಜೊತೆಗೆ ಕಳಂಕವನ್ನು ಕಡಿಮೆ ಮಾಡಲು ಯತ್ನಿಸಿದರು; ಇದರ ನಂತರ ನಡೆಸಲಾದ ಒಂದು MORI ಅಧ್ಯಯನವು, ಖಿನ್ನತೆ ಹಾಗು ಅದರ ಚಿಕಿತ್ಸೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯದಲ್ಲಿ ಒಂದು ಸಣ್ಣ ಸಕಾರಾತ್ಮಕ ಬದಲಾವಣೆಯನ್ನು ಗುರುತಿಸಿತು.

ಟಿಪ್ಪಣಿಗಳು

ಉಲ್ಲೇಖಗಳು

Tags:

ಪ್ರಧಾನ ಖಿನ್ನತೆಯ ಅಸ್ವಸ್ಥತೆ ರೋಗಲಕ್ಷಣಗಳು ಮತ್ತು ಚಿಹ್ನೆಗಳುಪ್ರಧಾನ ಖಿನ್ನತೆಯ ಅಸ್ವಸ್ಥತೆ ಕಾರಣಗಳುಪ್ರಧಾನ ಖಿನ್ನತೆಯ ಅಸ್ವಸ್ಥತೆ ರೋಗನಿರ್ಣಯಪ್ರಧಾನ ಖಿನ್ನತೆಯ ಅಸ್ವಸ್ಥತೆ ತಡೆಗಟ್ಟುವಿಕೆಪ್ರಧಾನ ಖಿನ್ನತೆಯ ಅಸ್ವಸ್ಥತೆ ನಿರ್ವಹಣೆಪ್ರಧಾನ ಖಿನ್ನತೆಯ ಅಸ್ವಸ್ಥತೆ ವ್ಯಾಧಿಯ ಮುನ್ನರಿವುಪ್ರಧಾನ ಖಿನ್ನತೆಯ ಅಸ್ವಸ್ಥತೆ ಸೋಂಕುಶಾಸ್ತ್ರಪ್ರಧಾನ ಖಿನ್ನತೆಯ ಅಸ್ವಸ್ಥತೆ ಇತಿಹಾಸಪ್ರಧಾನ ಖಿನ್ನತೆಯ ಅಸ್ವಸ್ಥತೆ ಸಾಮಾಜಿಕ ಸಾಂಸ್ಕೃತಿಕ ಅಂಶಗಳುಪ್ರಧಾನ ಖಿನ್ನತೆಯ ಅಸ್ವಸ್ಥತೆ ಟಿಪ್ಪಣಿಗಳುಪ್ರಧಾನ ಖಿನ್ನತೆಯ ಅಸ್ವಸ್ಥತೆ ಬಾಹ್ಯ ಕೊಂಡಿಗಳುಪ್ರಧಾನ ಖಿನ್ನತೆಯ ಅಸ್ವಸ್ಥತೆ

🔥 Trending searches on Wiki ಕನ್ನಡ:

ಊಟಭರತನಾಟ್ಯಶ್ಯೆಕ್ಷಣಿಕ ತಂತ್ರಜ್ಞಾನಭಾರತದ ಮುಖ್ಯ ನ್ಯಾಯಾಧೀಶರುಒನಕೆ ಓಬವ್ವಭಾರತೀಯ ಸ್ಟೇಟ್ ಬ್ಯಾಂಕ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಉತ್ತರ ಕನ್ನಡಭಾರತದ ರೂಪಾಯಿನಚಿಕೇತ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಬೆಂಕಿಮಾರ್ಕ್ಸ್‌ವಾದಭಾಷೆಯೂಟ್ಯೂಬ್‌ನೀನಾದೆ ನಾ (ಕನ್ನಡ ಧಾರಾವಾಹಿ)ಶ್ರೀ ರಾಮಾಯಣ ದರ್ಶನಂರಾಜಧಾನಿಗಳ ಪಟ್ಟಿಸಂವಿಧಾನಗ್ರಹಶ್ರವಣಬೆಳಗೊಳಫೇಸ್‌ಬುಕ್‌ರವಿಚಂದ್ರನ್ಲಸಿಕೆಕೃಷ್ಣಬಳ್ಳಾರಿಧಾರವಾಡಭಾರತೀಯ ಅಂಚೆ ಸೇವೆಗೋಪಾಲಕೃಷ್ಣ ಅಡಿಗಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆನಾಗಸ್ವರತತ್ಸಮ-ತದ್ಭವಹಾವಿನ ಹೆಡೆಮಲ್ಲಿಕಾರ್ಜುನ್ ಖರ್ಗೆರಾಷ್ಟ್ರಕವಿತತ್ಪುರುಷ ಸಮಾಸಇಂಡಿಯನ್ ಪ್ರೀಮಿಯರ್ ಲೀಗ್ಮೊದಲನೆಯ ಕೆಂಪೇಗೌಡಮೈಸೂರು ಮಲ್ಲಿಗೆಅಡಿಕೆತಾಪಮಾನಭಾರತೀಯ ಮೂಲಭೂತ ಹಕ್ಕುಗಳುವಿರೂಪಾಕ್ಷ ದೇವಾಲಯಗೌತಮ ಬುದ್ಧಕನ್ನಡ ವ್ಯಾಕರಣಗಂಗ (ರಾಜಮನೆತನ)ಜಿ.ಎಸ್.ಶಿವರುದ್ರಪ್ಪರಾಯಚೂರು ಜಿಲ್ಲೆಕಿತ್ತೂರು ಚೆನ್ನಮ್ಮವೆಂಕಟೇಶ್ವರ ದೇವಸ್ಥಾನಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಹೊಂಗೆ ಮರಕನ್ನಡ ಛಂದಸ್ಸುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಚಿನ್ನವಿಧಾನಸೌಧಜೈನ ಧರ್ಮಹರಪ್ಪಮಹಾತ್ಮ ಗಾಂಧಿಛಂದಸ್ಸುಭಾರತದಲ್ಲಿನ ಜಾತಿ ಪದ್ದತಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಪೂನಾ ಒಪ್ಪಂದಭಾರತದ ಜನಸಂಖ್ಯೆಯ ಬೆಳವಣಿಗೆಸ್ವಾಮಿ ವಿವೇಕಾನಂದಕುಕ್ಕೆ ಸುಬ್ರಹ್ಮಣ್ಯ ದೇವಾಲಯಹಳೆಗನ್ನಡಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸಂಗ್ಯಾ ಬಾಳ್ಯಾ(ನಾಟಕ)ಕರ್ನಾಟಕದ ಸಂಸ್ಕೃತಿಸಮಾಸಬ್ಲಾಗ್ವಿರಾಟಕರ್ನಾಟಕದ ಅಣೆಕಟ್ಟುಗಳುಮಾಸ🡆 More