ಉತ್ತರ ಕರ್ನಾಟಕದಲ್ಲಿ ವರುಷಕೊಮ್ಮೆ ಶಿವರಾತ್ರಿ, ಯುಗಾದಿ ಸಮಯದಲ್ಲಿ ಭಕ್ತರು ಮಲ್ಲಿಕಾರ್ಜುನ ದರ್ಶನಕಕ್ಕಾಗಿ ಶ್ರೀಶೈಲ ಪರ್ವತಕ್ಕೆ ಯಾತ್ರೆ ಹೋಗುತ್ತಾರೆ.
ಈ ಯಾತ್ರಿಕರು ತಮ್ಮ ಹೆಗಲ ಮೇಲೆ "ಕಂಬಿ" ಹೊತ್ತುಕೊಂಡು ಹೋಗುವ ಒಂದು ಸಾಂಪ್ರದಾಯಿಕ ಆಚರಣೆಯೇ "ಕಂಬಿ ಕುಣಿತ". ಈ ಹಿಂದೆ ಭಕ್ತರು ದೇವರ ದರ್ಶನಕ್ಕಾಗಿ ನಡೆದುಕೊಂಡೇ ಹೊಗುತ್ತಿದ್ದರು. ಸುತ್ತಮುತ್ತಲ ಊರಿನವರೆಲ್ಲ ಕೂಡಿಕೊಂಡು ಹಾಡುತ್ತ-ಕುಣಿಯುತ್ತಾ, ದೇವರ ಬಗ್ಗೆ ಕಥೆಗಳನ್ನು, ಪವಾಡಗಳನ್ನು ಹೇಳುತ್ತಾ ದಾರಿ ಸಾಗಿಸುತ್ತಿದ್ದರು. ಇದಕ್ಕೆ "ಪರಿಸೆ" ಹೊರಡುವುದು ಎನ್ನುತ್ತಾರೆ.
ಸಾಮಾನ್ಯವಾಗಿ ಶ್ರೀಶೈಲಕ್ಕೆ ಹೋಗಿ ಬರಲು ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ಅಷ್ಟು ಅವಧಿಗೆ ಬೇಕಾಗುವ ಸಾಮಾನುಗಳನ್ನೆಲ್ಲ ಜೊತೆಯಲ್ಲೇ ಒಯ್ಯ ಬೇಕಾಗಿತ್ತು. ಅದನ್ನೆಲ್ಲ ಕಂಬಿ ಕಟ್ಟಿದ ನೆಲುವುಗಳಲ್ಲಿಟ್ಟುಕೊಂಡು ಹೋಗುವುದು ವಾಡಿಕೆ. ಐದಾರು ಮೊಳ ಉದ್ದವಿರುವ ಬಿದಿರಿನ ಗಳ, ಅದರ ಎರಡು ಕೊನೆಗಳಿಗೂ ಬಿಗಿದು ಜೋಡಿಸಿದ ಸುಮಾರು ಮೂರು ಅಡಿ ಎತ್ತರವಿರುವ ಬಿದಿರು ಕಡ್ಡಿಯ ಟಿಸಲು ಗಾಲುಗಳು. ಈ ಕಾಲುಗಳಿಗೆ ಕಟ್ಟಿದ ಕಾಯಕ ಗಂಟೆಗಳು. ಎರಡು ಕಾಲುಗಳಿಗೂ ಸೇರಿಸುವಂತೆ ಅಡ್ಡಲಾಗಿ ಕಟ್ಟಿದ ಮತ್ತೊಂದು ಗಳದ ಮಧ್ಯಭಾಗದಲ್ಲಿ ನಂದಿ ವಿಗ್ರಹ, ಅದಕ್ಕೆ ಕೂಡಿಸಿದ ಕಳಸ ಮತ್ತು ಹಾಕಿದ "ಗಲ್ಲಪ". ಕಂಬಿಯ ಕೋಲಿಗೆ ಬಣ್ಣದ ವಸ್ತ್ರದ (ಪತಾಕೆ) ಆವರಣ. ಅಲ್ಲಲ್ಲಿ ಭಸ್ಮ ಲೇಪನ - ಇದು ಕಂಬಿಯ ಸ್ವರೂಪ. ಇದನ್ನು ಗಲ್ಲಪದ ಹಿಂದೆ ಟಿಸಲು ಗಾಲುಗಳು ಮಧ್ಯದಲ್ಲಿ ಜೋಡಿಸಿದ ಕಾವಡಿಗೆ (ಅಡ್ಡಪಟ್ಟಿ) ನೆಲುವನ್ನು ಕಟ್ಟಿ ನಿತ್ಯ ಬಳಕೆಯ ವಸ್ತುಗಳನ್ನು ಇಟ್ಟುಕೊಳ್ಳುವರು.
ದೈಹಿಕ ತೊಂದರೆಯಿಂದಲೋ, ಆರ್ಥಿಕ ಅಡಚಣೆಯಿಂದಲೋ ಶ್ರೀಶೈಲಕ್ಕೆ ಹೋಗಲು ಸಾಧ್ಯವಾಗದ ಕೆಲವು ಮಲ್ಲಿಕಾರ್ಜುನನ ಭಕ್ತರು ತಮ್ಮ ಹರಕೆ, ಮುಡಿಪುಗಳನ್ನು ಹೋಗುವವರ ಕೈಲಿ ಕೊಟ್ಟು, ಮಲ್ಲಯ್ಯನಿಗೆ ಮುಟ್ಟಿಸುವಂತೆ ಹೇಳುತ್ತಾರೆ. ಶ್ರೀಶೈಲಕ್ಕೆ ಹೋಗಿ ದೇವರ ದರ್ಶನ ಪಡೆದು ಸುಖವಾಗಿ ಹಿಂದಿರುಗಿದ ಭಕ್ತರ ಬಗ್ಗೆ ಜನರಿಗೆ ಅಪಾರ ಗೌರವ. ಅವರನ್ನು ಪುಣ್ಯವಂತರೆಂದು ಭಾವಿಸಿ, ಅವರ ದರ್ಶನ ಮಾಡಿದರೆ ದೇವರನ್ನು ಕಂಡತಾಗುವುದೆಂದು ತಿಳಿಯುತ್ತಾರೆ. ತಾವು ಕೊಟ್ಟ ಹರಕೆ ಮುಡಿಪುಗಳು ಕಂಬಿಯ ಮೂಲಕ ದೇವರಿಗೆ ಮುಟ್ಟಿಸುವುದರಿಂದ ಆ ಕಂಬಿಯ ಮೂಲಕವೇ ದೇವರು ಬರುತ್ತಾನೆಂಬುದು ಅವರ ನಂಬಿಕೆ. ಈ ಕಂಬಿಯೇ ಕಂಬಿ ಮಲ್ಲಯ್ಯ ನಾದನೆಂದು ಹೇಳುತ್ತಾರೆ. ಹೀಗೆ ಶ್ರೀಶೈಲಕ್ಕೆ ಹೋಗುವ "ಕಂಬಿ ಮಲ್ಲಯ್ಯ"ಗಳನ್ನು ಬೀಳ್ಕೂಡುವ ಊರಿನ ಜನ, ಅವರು ಹಿಂತಿರುಗಿ ಬಂದಾಗಲೂ ಊರಿನ ಗಡಿಯಲ್ಲಿ ಗೌರವದಿಂದ ಸ್ವಾಗತಿಸಿ ಕುಶಲವನ್ನು ವಿಚಾರಿಸುತ್ತಾರೆ. ನಂತರ ತಾಳ, ಮದ್ದಳೆ, ಚಿನ್ನಕಹಳೆ, ಸನಾದಿ, ಮುಂತಾದ ಮಂಗಳ ವಾದ್ಯಗಳೂಂದಿಗೆ ಊರೊಳಗೆ ಕರೆದು ತರುತ್ತಾರೆ.
ದಾರಿಯಲ್ಲಿ "ಸಿದ್ದಗಿರಿ ಶಿವಗಿರಿ ಮಹಾಂತ ಮಲ್ಲಯ್ಯ" ಎಂದು ಕಂಬಿ ಹೊತ್ತವನು ಉದ್ಗರಿಸಿದರೆ ಉಳಿದವರು "ಉಘೇ ಉಘೇ'" ಎಂದು ಜಯಘೋಷ ಮಾಡುತ್ತಾರೆ. ಹೀಗೆ ಶ್ರೀಶೈಲ ಮಲ್ಲಿಕಾರ್ಜುನನ ಬಿರುದಾವಳಿಗಳನ್ನು ಹೇಳಿಕೂಂಡು ಭಕ್ತರು ಆವೇಶದಲ್ಲಿ ಕಂಬಿಯ ಅಯ್ಯಗಳೂ ಸಂಬಾಳದ ಜೊತೆಗೆ ಸೊಗಸಾಗಿ ಕುಣಿಯುತ್ತಾರೆ. ಕುಣಿತದ ನಂತರ ಮಲ್ಲಯ್ಯನನ್ನು ಕುರಿತ ಹಾಡುಗಳನ್ನು ಹೇಳುತ್ತಾರೆ. ಕೊನೆಯಲ್ಲಿ ಮಂಗಳಾರತಿಯಾಗುತ್ತದೆ. "ಕಂಬಿಯ ಅಯ್ಯ"ಗಳು ಶ್ರೀಶೈಲದಿಂದ ಬರುವಾಗ ಮರ ಬುಟ್ಟಿ, ಗಿರಿಯ ಹುಂಡಿ, ದವನ-ಹವನ ಮುಂತಾದವುಗಳನ್ನು ತಂದು ಭಕ್ತರಿಗೆ ಕೊಟ್ಟು ಅವರಿಂದ ಕಾಣಿಕೆ ಪಡೆಯುತ್ತಾರೆ.
This article uses material from the Wikipedia ಕನ್ನಡ article ಕಂಬಿ ಕುಣಿತ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.