ಆನಂದಕಂದ (ಏಪ್ರಿಲ್ ೧೬,೧೯೦೦ - ಅಕ್ಟೋಬರ್ ೩೦,೧೯೮೨) ಕಾವ್ಯನಾಮದಿಂದ ಪ್ರಸಿದ್ಧರಾದ, ಕವಿಭೂಷಣ ಎಂದು ಪುರಸ್ಕೃತರಾದ ಬೆಟಗೇರಿ ಕೃಷ್ಣಶರ್ಮರ ಜನನ ೧೯೦೦ ಏಪ್ರಿಲ್ ೧೬ ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಆಯಿತು.
ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ. ಓ ನನ್ನ ಕಣ್ಣೆ ಓ ನನ್ನ ಕಣ್ಣೆ ಕೃಷ್ಣಶರ್ಮರು ೧೨ ವರ್ಷದ ಬಾಲಕನಿದ್ದಾಗಲೆ ಅವರ ತಂದೆ ತೀರಿಕೊಂಡರು; ೧೫ನೆಯ ವರ್ಷಕ್ಕೆ ಅಣ್ಣ ಹಣಮಂತರಾಯನ ಮರಣ. ೧೮ನೆಯ ವರ್ಷದಲ್ಲಿ ಇವರ ತಾಯಿ ಸಹ ನಿಧನರಾದರು. ಸ್ವತಃ ಕೃಷ್ಣಶರ್ಮರೆ ತಮ್ಮ ೧೪ನೆಯ ವಯಸ್ಸಿನಲ್ಲಿ ತೀವ್ರವಾದ ವಿಷಮಶೀತ ಜ್ವರದಿಂದ ಬಳಲಿದರು. ೧೫ನೆಯ ವಯಸ್ಸಿನಲ್ಲಿ ಪ್ಲೇಗ್ ಜ್ವರಕ್ಕೆ ತುತ್ತಾಗಿ ಜೀವನ ಪರ್ಯಂತ ಇವರ ಕೈ ಹಾಗು ಕಾಲುಗಳು ದುರ್ಬಲವಾದವು. ಕೃಷ್ಣಶರ್ಮರ ಮದುವೆ ೧೯೨೮ರಲ್ಲಿ ತುಳಸಾಬಾಯಿಯವರ ಜೊತೆಗೆ ಜರುಗಿತು. ಇವರಿಗೆ ಮೂವರು ಹೆಣ್ಣು ಮಕ್ಕಳು ಹಾಗು ಒಬ್ಬ ಮಗ. ಇವರ ೫೬ನೆಯ ವಯಸ್ಸಿನಲ್ಲಿ ಚಿಕ್ಕ ಮಗಳು ವಿಷಮಶೀತ ಜ್ವರದಿಂದ ಮರಣ ಹೊಂದಿದಳು. ಮರುವರ್ಷ ಇವರ ಹೆಂಡತಿ ನಿಧನರಾದರು.
ಬೆಟಗೇರಿ ಕೃಷ್ಣಶರ್ಮ | |
---|---|
ಜನನ | ಏಪ್ರಿಲ್ ೧೬. ೧೯೦೦ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ |
ಮರಣ | ಅಕ್ಟೋಬರ್ ೩೦, ೧೯೮೨ |
ಕಾವ್ಯನಾಮ | ಆನಂದಕಂದ |
ವೃತ್ತಿ | ಕವಿಗಳು |
ವಿಷಯ | ಕನ್ನಡ ಸಾಹಿತ್ಯ |
ಪ್ರಾಥಮಿಕ ಶಾಲೆಯ ೫ನೆಯ ತರಗತಿಯ ವರೆಗೆ ಕೃಷ್ಣಶರ್ಮರು ಬೆಟಗೇರಿಯಲ್ಲಿಯೆ ಶಿಕ್ಷಣ ಪಡೆದರು. ಮುಂದಿನ ತರಗತಿಗಳು ಅಲ್ಲಿರಲಿಲ್ಲ. ತಂದೆಯ ಮರಣ ಹಾಗು ಬಡತನದಿಂದಾಗಿ ಬೇರೆಡೆಗೆ ಕಲಿಯಲು ಹೋಗುವದು ದುಸ್ಸಾಧ್ಯವಾಗಿತ್ತು. ಐದು ಮೈಲು ದೂರದ ಮಮದಾಪುರಕ್ಕೆ ಕಂಪಿಸುವ ಕಾಲುಗಳ ಮೇಲೆ ನಡೆಯುತ್ತಲೆ ಹೋಗಿ ಕಲಿಕೆ ಮುಂದುವರಿಸಿದ ಕೃಷ್ಣಶರ್ಮರು ೧೯೧೭ರಲ್ಲಿ ಬೆಳಗಾವಿಗೆ ಹೋಗಿ ಪರೀಕ್ಷೆಗೆ ಕುಳಿತು ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.
೧೯೧೮ರಲ್ಲಿ ಕೃಷ್ಣಶರ್ಮರು ಬೆಳಗಾವಿಯಲ್ಲಿ ಮುನಸಿಪಾಲಿಟಿಯ ಆರೋಗ್ಯ ಇಲಾಖೆಯಲ್ಲಿ ನೌಕರಿ ಹಿಡಿದರು. ಮನೆಮನೆಗೆ ಹೋಗಿ ಇಲಿಬಲೆಗಳನ್ನು ಕೊಡುವದು; ಸಿಲುಕಿದ ಇಲಿಗಳ ಸಹಿತವಾಗಿ ಬಲೆಗಳನ್ನು ಮರಳಿ ತಂದು ಕೊಡುವದೇ ಇವರ ಕೆಲಸ. ನಾಲ್ಕಾರು ದಿನಗಳಲ್ಲಿ ಆ ಕೆಲಸ ಬಿಟ್ಟು ಶಿಕ್ಷಕನ ನೌಕರಿಗೆ ಪ್ರಯತ್ನಿಸಿದರು. ಆ ಕೆಲಸ ಸಿಗುವ ಸಂಭವವಿದ್ದಾಗಲೆ ಶ್ರೀಯುತ ನರಸಿಂಹಾಚಾರ್ಯ ಪುಣೇಕರ (ಕಾವ್ಯಾನಂದ) ಇವರ ಸೂಚನೆಯಂತೆಕಿತ್ತೂರಿಗೆ ಹೋಗಿ ಕೆಲ ಕಾಲ ಅವರಲ್ಲಿ ಸಂಸ್ಕೃತ ಅಧ್ಯಯನ ಮಾಡಿದರು. ಮರಳಿ ಬೆಳಗಾವಿಗೆ ಬಂದು ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾದರು. ರಾಷ್ಟ್ರೀಯ ಚಳುವಳಿಗಳ ಜೊತೆಜೊತೆಗೆ ಕನ್ನಡದ ಕೆಲಸವನ್ನೂ ಸಹ ಮಾಡಿದರು. ಬೆಳಗಾವಿ ರಾಷ್ಟ್ರೀಯ ಶಾಲೆಯಿಂದ ಯಮಕನಮರಡಿ ರಾಷ್ಟ್ರೀಯ ಶಾಲೆಗೆ, ಅಲ್ಲಿಂದ ಧಾರವಾಡ ರಾಷ್ಟ್ರೀಯ ಶಾಲೆಗೆ ಕೃಷ್ಣಶರ್ಮರು ಅಲೆದಾಡಿದರು. ಆ ಶಾಲೆಯೂ ಮುಚ್ಚಿದಾಗ ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿ ಶಿಕ್ಷಕರಾದರು. ವ್ಯವಸ್ಥಾಪಕ ವರ್ಗದೊಡನೆ ಮೂಡಿದ ಭಿನ್ನಾಭಿಪ್ರಾಯದಿಂದಾಗಿ ಆ ಕೆಲಸವನ್ನು ಬಿಟ್ಟುಕೊಟ್ಟು ಧಾರವಾಡಕ್ಕೆ ಮರಳಿದ ಕೃಷ್ಣಶರ್ಮರು ೧೯೩೮ರಲ್ಲಿ ಜಯಂತಿಯ ಸಂಪಾದಕತ್ವವನ್ನು ವಹಿಸಿಕೊಂಡರು.
೧೯೨೨ರಲ್ಲಿಯೆ ಬೆಳಗಾವಿಯಿಂದ ಹೊರಡುತ್ತಿದ್ದ ಮಾತೃಭೂಮಿ ಪತ್ರಿಕೆಗೆ ಕೃಷ್ಣಶರ್ಮರು ಸಂಪಾದಕರಾದರು. ಆ ಪತ್ರಿಕೆ ಆರ್ಥಿಕ ತೊಂದರೆಯಿಂದಾಗಿ ಒಂದು ವರ್ಷದ ಬಳಿಕ ಮುಚ್ಚಿಹೋಯಿತು.೧೯೨೫ರಲ್ಲಿ ಧಾರವಾಡಕ್ಕೆ ಬಂದ ಕೃಷ್ಣಶರ್ಮರು ೧೯೨೭ರವರೆಗೆ ಸ್ವಧರ್ಮ ಪತ್ರಿಕೆಯ ಸಂಪಾದಕರಾಗಿದ್ದರು. ಈ ಪತ್ರಿಕೆ ೨ ವರ್ಷಕಾಲ ನಡೆಯಿತು. ೧೯೩೦ರಿಂದ ೧೯೩೩ರವರೆಗೆ ಕೃಷ್ಣಶರ್ಮರು ಜಯಕರ್ನಾಟಕ ಪತ್ರಿಕೆಯ ಸಂಪಾದಾಕರಾಗಿ ಹಾಗು ೧೯೩೫ರಿಂದ ೧೯೩೬ರವರೆಗೆ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ೧೯೩೮ರಲ್ಲಿ “ ಜಯಂತಿ ”ಯ ಸ್ಥಾಪನೆ.
‘""ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’""ಎಂದು ಹಾಡಿದವರು ನಮ್ಮ ಆನಂದಕಂದರು. ಆನಂದಕಂದರು ತಮ್ಮ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಇಡೀ ನಾಡನ್ನು ಬೆಳಗಿ ಕನ್ನಡ ನಾಡಿನ ಅಸಂಖ್ಯಾತ ಪ್ರತಿಭೆಗಳನ್ನೂ ಹುಟ್ಟುಹಾಕಿದರು. ಭಾರತದ ಸ್ವಾತಂತ್ರ್ಯ ಪ್ರಾಪ್ತಿ, ಕರ್ನಾಟಕತ್ವದ ಜಾಗೃತಿ ಮತ್ತು ಕರ್ನಾಟಕ ಏಕೀಕರಣಗಳಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಇವರದು ಸಿಂಹಪಾಲು.
ಕೃಷ್ಣಶರ್ಮರು ಬಾಲ್ಯದಿಂದಲೆ ಕವನರಚನೆ ಪ್ರಾರಂಭಿಸಿದ್ದರು. ರಾಷ್ಟ್ರೀಯ ಚಳುವಳಿಗಾಗಿ, ಕನ್ನಡ ಸ್ವಯಂಸೇವಕರಿಗಾಗಿ, ಕಾಂಗ್ರೆಸ್ ಅಧಿವೇಶನಗಳಿಗಾಗಿ ಅವರು ಕವನ ರಚಿಸಿ ಕೊಟ್ಟರು. ಅವರ ಪ್ರಥಮ ಕವನ 'ಭಕ್ತಿ ಕುಸುಮಾವಳಿ ೧೯೧೮ರಲ್ಲಿ ಪ್ರಭಾತ' ಪತ್ರಿಕೆಯಲ್ಲಿ ಪ್ರಕಟವಾಯಿತು. ಕೇವಲ ಕನ್ನಡ ಮುಲ್ಕಿ ಪರೀಕ್ಷೆಯನ್ನು ಮಾಡಿಕೊಂಡ ಕೃಷ್ಣಶರ್ಮರು ಇಂಗ್ಲಿಶ್ ಕಲಿಯಲಿಲ್ಲ. ಆದರೂ ಅವರು ವಿದ್ವತ್ತು ಅಗಾಧವಾದದ್ದು. ಸಂಶೋಧನೆ, ಜಾನಪದ ಕ್ಷೇತ್ರಗಳಲ್ಲಿ ಮೌಲಿಕವಾದ ಕಾರ್ಯ ಅವರಿಂದ ಆಗಿದೆ. ೧೯೩೫ರಲ್ಲಿ ಜಿ.ಬಿ.ಜೋಶಿ ಹಾಗು ಗೋವಿಂದರಾವ ಚುಳಕಿಯವರ ಜೊತೆಗೂಡಿ ಧಾರವಾಡದಲ್ಲಿ ಮನೋಹರ ಗ್ರಂಥಮಾಲೆಯನ್ನು ಸ್ಥಾಪಿಸಿದರು.
(ಆಕಾಶವಾಣಿಗಾಗಿ ತರಂಗ ರೂಪಕಗಳು)
ಆರು ದಶಕಗಳಿಗೂ ಮಿಕ್ಕಿ ಅವ್ಯಾಹತವಾಗಿ ಶ್ರೀ ಬೆಟಗೇರಿ ಕೃಷ್ಣಶರ್ಮರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಬಹುಮುಖ ಕೊಡುಗೆಗಳಿಗೆ ಸಂದ ಗೌರವಗಳು ಅನೇಕ. ೧೯೭೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಕೃಷ್ಣಶರ್ಮರಿಗೆ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿತು. ಇದಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಅವರಿಗೆ ಸಂದವು.
ಡಾ. ಬೆಟಗೇರಿ ಕೃಷ್ಣಶರ್ಮರು ನಮ್ಮ ನಾಡಿಗೆ ಅಪರಿಮಿತವಾಗಿ ಶ್ರಮಿಸಿ ೧೯೮೨ನೆಯ ಅಕ್ಟೋಬರ್ ತಿಂಗಳ ೩೦ರಂದು ಧಾರವಾಡದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.
This article uses material from the Wikipedia ಕನ್ನಡ article ಆನಂದಕಂದ (ಬೆಟಗೇರಿ ಕೃಷ್ಣಶರ್ಮ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.