ತಿಕೋಟಾ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿದೆ.
ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೨೦ ಕಿ. ಮಿ. ದೂರದಲ್ಲಿದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ ತಾಲ್ಲೂಕಿನ ತಿಕೋಟಾ ನಗರವನ್ನು ಹೊಸ ತಾಲ್ಲೂಕೆಂದು ರಚಿಸಿದೆ.
ತಿಕೋಟಾ ತಿಕೋಟಾ | |
---|---|
village | |
Population (೨೦೧೨) | |
• Total | ೧೫೦೦೦ |
ತಿಕೋಟಾದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆಯ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್. ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಪೋಲಿಸ್ ಠಾಣೆ, ಅಂಚೆ ಕಚೇರಿ, ಎಸ್.ಬಿ.ಐ. ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.
ವಿಜಯಪುರ ಜಿಲ್ಲೆ ಎಂದೊಡನೆ ಥಟ್ಟನೆ ನೆನಪಿಗೆ ಬರುವುದು ಬರಗಾಲ ಮತ್ತು ಸುಡು ಸುಡು ಬಿಸಿಲು. ವಿದೇಶಕ್ಕೆ ರಫ್ತಾಗುವ ಬೀಜರಹಿತ ದ್ರಾಕ್ಷಿ, ದಾಳಿಂಬೆ, ಬಾಳೆ, ಬಾರೆ ಹಣ್ಣುಗಳ ಖ್ಯಾತಿಯ ತಿಕೋಟಾ ಸಿಗುತ್ತದೆ. ಇಲ್ಲಿ ನಡೆಯುವ ಹಾಜಿ ಮಸ್ತಾನ್ ಉರುಸ್ ಭಾವೈಕ್ಯದ ಪ್ರತೀಕವಾಗಿದೆ.
ಏಷ್ಯಾದಲ್ಲಿಯೇ ಪ್ರಪ್ರಥಮ ಸರ್ಕಸ್ ಕಂಪೆನಿ ಪ್ರಾರಂಭಿಸಿದ ವಿಷ್ಣುಪಂತ ಛತ್ರೆ ಹಾಗೂ ಕಾಶೀನಾಥ ಛತ್ರೆ, ಚೌಡಕಿ ಪದದ ಗೌರವ್ವ ಮಾದರ ಮುಂತಾ ದವರು ತಿಕೋಟಾದ ಹೆಮ್ಮೆಯ ಮಕ್ಕಳು. ಕಪ್ಪು ಕಲ್ಲಿನ ತಾಜಮಹಲ್ ಎಂದು ಕರೆಯಿಸಿಕೊಳ್ಳುವ ಇಬ್ರಾಹಿಂ ರೋಜಾದ ಶಿಲ್ಪಿ ಮಲೀಕ್ ಸಂದಲನ ಸಮಾಧಿ ಹೊಂದಿದ ಈ ಗ್ರಾಮ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.
ಏಷ್ಯಾದಲ್ಲಿಯೇ ಮೊದಲ ಸರ್ಕಸ್ ಕಂಪನಿ ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿರುವ ತಿಕೋಟಾ ಗ್ರಾಮದ ವಿಷ್ಣುಪಂತ ಛತ್ರೆಯವರು ಭೂಗಂಧರ್ವರ ಎಲ್ಲ ವಿಕ್ಷಿಪ್ತತೆಯನ್ನು ಒಪ್ಪಿಕೊಂಡು, ಸಹಿಸಿಕೊಂಡು ಅವರನ್ನು ಕಟ್ಟಿಕೊಂಡು ದೇಶ-ವಿದೇಶಗಳನ್ನು ತಿರುಗಿದರು. ಅವರ ಸಂಗೀತಕ್ಕೆ ಮಾರು ಹೋಗಿದ್ದ ವಿಷ್ಣುಪಂತ ಛತ್ರೆ ತಮ್ಮ ಸರ್ಕಸ್ ಕಂಪನಿಯಲ್ಲಿನ ಅನೇಕ ಹುಲಿಗಳೊಂದಿಗೆ ಭೂಗಂಧರ್ವರನ್ನೂ ಸಂಗೀತ ಲೋಕದ ಹುಲಿಯೆಂದೇ ಭಾವಿಸಿ ಪೋಷಿಸಿದರು. ಭೂಗಂಧರ್ವರು ಧೃಪದ ಗಾಯನದಲ್ಲಿ ನಿಷ್ಣಾತರಾಗಿದ್ದರು. ನಾಲ್ವರು ಗಂಧರ್ವರಲ್ಲಿ ಇವರೊಬ್ಬರೇ ಹೆಚ್ಚಾಗಿ ಧೃಪದ ಹಾಡಿದವರು. ಛತ್ರೆಯವರು ಇವರಿಂದ ಕಲಿತು ಕರ್ನಾಟಕದ ಏಕೈಕ ಧೃಪದ ಗಾಯಕ ಎನಿಸಿದರು.
ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾನದಲ್ಲಿ ತಿಕೋಟಾ ತಾಲ್ಲೂಕು ಕೇಂದ್ರವಾಗಿತ್ತು. ಈಗ ಹೋಬಳಿ ಕೇಂದ್ರ ವಾಗಿದೆ. ಹೀಗೆ ಹಲವು ವಿಶೇಷಗಳ ಈ ಊರಿನಲ್ಲಿ ಪ್ರತಿವರ್ಷ ಜರುಗುವ ಹಾಜಿ ಮಸ್ತಾನ್ ಉರುಸ್ ಹಿಂದೂ-ಮುಸ್ಲಿಮರ ಭಾವೈಕ್ಯದ ಪ್ರತೀಕವಾಗಿದೆ. ಈ ವರ್ಷ ಸೆ.12ರಿಂದ ಮೂರು ದಿನ ಉರುಸ್ ಜರುಗಲಿದೆ.
ಜಾತ್ರೆ ನಿಮಿತ್ತ 20 ದಿನಗಳವರೆಗೆ ಎಲ್ಲ ಜಾತಿಯವರು ರೋಜಾ (ಹಗಲು ಉಪವಾಸ) ವ್ರತ ಮಾಡುತ್ತಾರೆ. ಉರುಸ್ (ಪುಣ್ಯತಿಥಿ) ನ ಮೊದಲ ದಿನ ಸಂದಲ್ (ಗಂಧ) ಹೊರಡುವುದು ಬ್ರಾಹ್ಮಣರಾದ ರಾಮರಾವ್ ದೇಸಾಯಿ ಅವರ ಮನೆಯಿಂದ. ಮರುದಿನ ನೈವೇದ್ಯದ ಜೊತೆ ಗಲೀಫ್ (ವಸ್ತ್ರ) ಬರುವುದು ಲಿಂಗಾಯತರಾದ ಡಾ. ಮಲ್ಲನಗೌಡ ಪಾಟೀಲರ ಮನೆಯಿಂದ.
ಮೂರು ದಿನಗಳ ಕಾಲ ಕುಸ್ತಿ, ಬಯಲಾಟ, ನಾಟಕ ಕಾರ್ಯಕ್ರಮಗಳು ಇರುತ್ತವೆ. ಬಹು ಸಂಖ್ಯೆಯಲ್ಲಿ ಹಿಂದೂ–ಮುಸ್ಲಿಮರು ಪಾಲ್ಗೊಂಡು ಸಂಭ್ರಮದಿಂದ ಜಾತ್ರೆಗೆ ಮೆರುಗು ತರುತ್ತಾರೆ. ಇಲ್ಲಿ ಜಾತಿ, ಮತ, ಪಂಥ, ಪಂಗಡಗಳ ಸೋಂಕಿಲ್ಲ. ಮೇಲು-ಕೀಳೆಂಬ ಭೇದ-ಭಾವವಿಲ್ಲ. ಭಕ್ತಿ-ಶ್ರದ್ಧೆಯಿಂದ ಒಂದಾಗಿ ಆರಾಧಿಸುತ್ತಾರೆ.
ಹಾಜಿ ಮಸ್ತಾನ್ ಸ್ವಧರ್ಮದ ಬಗ್ಗೆ ಪ್ರೀತಿ ಮತ್ತು ಪರಧರ್ಮಗಳ ಬಗ್ಗೆ ಗೌರವವಿದ್ದ ಇಸ್ಲಾಂ ಧರ್ಮದ ಸೂಫಿ ಸಂತನಾಗಿದ್ದ. ಸಾಧನೆಯ ಬಲದಿಂದ ಸಿದ್ಧ ಪುರುಷನಾಗಿದ್ದ. ‘ಲೋಕವೇ ನನ್ನ ಮನೆ ಮನು ಕುಲವೇ ನನ್ನ ಕುಟುಂಬ’ ಎಂಬ ವಿಶಾಲ ತತ್ವದಿಂದ ಎಲ್ಲರ ಕಲ್ಯಾಣ ವನ್ನೇ ಬಯಸಿದ ಸಂತ ಶ್ರೇಷ್ಠನಾಗಿದ್ದ.
ಇಸ್ಲಾಂ ಧರ್ಮದ ಪಂಚಸೂತ್ರಗಳಲ್ಲಿ ಕೊನೆಯದಾದ ಹಜ್ ಯಾತ್ರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಸುಲಭವೆನಿಸಿರ ಬಹುದು. ಆದರೆ ಹಿಂದಿನ ಕಾಲದಲ್ಲಿ ಸಾಮಾನ್ಯರಿಗೆ ಅಸಾಧ್ಯವಾದ ಕೆಲಸ. ಅದು ಹಾಜಿ ಮಸ್ತಾನ್ ಅವರಂಥ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಸಾಧ್ಯ ವಾಗುತ್ತಿತ್ತು. ತಮ್ಮ ಯೋಗ ಸಾಧನೆ ಯಿಂದ ಹಜ್ ಯಾತ್ರೆ ಮಾಡಿ ಬಂದ ಕೀರ್ತಿ ಇವರಿಗಿದೆ ಎಂಬುದು ಪ್ರತೀತಿ.
ಬಡಕಲ್ಲ ಸಾಹೇಬರ ಸಮಾಧಿ ಪಕ್ಕದಲ್ಲಿದೆ. ದಿಗಂಬರರಾಗಿದ್ದ ಇವರ ನಿಜನಾಮ ಸಂಗೀನ್ ಶಾ ವಲಿ. ಇವರ ಶಿಷ್ಯ ನೂರಜಿ ಸಾಬ್ ಬಡಕಲ್ಲನಿಂದಾಗಿ ‘ಬಡಕಲ್ಲ ಸಾಹೇಬ’ ಆಗಿದೆ. ಏಳು ನದಿಗಳ ನೀರನ್ನು ಒಂದೇ ದಿನದಲ್ಲಿ ತಂದು ಇಲ್ಲಿ ಚಾವಣಿ ಕಟ್ಟಬೇಕೆಂಬ ಐತಿಹ್ಯವಿದೆ. ಅದಿನ್ನೂ ಕೈಗೂಡಿಲ್ಲ.
ಹಾಜಿಮಸ್ತಾನ್ ದರ್ಗಾ ಕಟ್ಟಿಸಿ ದವರು ಹಿಂದೂಗಳಾದ ಪೀರಶೆಟ್ಟಿ ಮನೆತನದವರು. ಜಾತ್ರೆಯಿಂದ ಪ್ರಥಮ ಗಂಧ (ಸಂದಲ) ಏರಿಸುವ ಗೌರವದ ಸ್ಥಾನ ಅವರಿಗಿದೆ. ಮೊದಲು ಬಡಕಲ್ಲ ಸಾಹೇಬರ ದರ್ಗಾಕ್ಕೆ ಹೋಗಿ ನಂತರ ಹಾಜಿ ಮಸ್ತಾನ ದರ್ಗಾಕ್ಕೆ ಹೋಗು ವುದು ಪರಂಪರೆಯಾಗಿ ಮುಂದು ವರಿದಿದೆ. ಜಾತ್ರೆಗೆ ಬರುವ ಲಕ್ಷಾಂತರ ಜನರಿಗಾಗಿ ದರ್ಗಾದ ಹಿಂಬದಿ ಇರುವ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸಲಾಗಿದೆ.
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 11,984 ಇದೆ. ಅದರಲ್ಲಿ 6,111 ಪುರುಷರು ಮತ್ತು 5,873 ಮಹಿಳೆಯರು ಇದ್ದಾರೆ.
ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ತುಬಚಿ-ಬಬಲೇಶ್ವರ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.
ಗ್ರಾಮದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.
ಗ್ರಾಮದಲ್ಲಿ ನೆಮ್ಮದಿ ಕೇಂದ್ರವಿದೆ.
ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
ಗ್ರಾಮವು ಬಬಲೇಶ್ವರ ವಿಧಾನಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
This article uses material from the Wikipedia ಕನ್ನಡ article ತಿಕೋಟಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.