ಈ ಬಸದಿಯು ಬಂಟ್ವಾಳ ತಾಲೂಕು ಕಾಡಬೆಟ್ಟು ಗ್ರಾಮದಲ್ಲಿದೆ.
ಬಸದಿಯ ಪಡುಭಾಗದಲ್ಲಿ ಕಾಡು ಇದೆ. ಹತ್ತಿರದಲ್ಲಿ ಕಾಡಬೆಟ್ಟು ಗುತ್ತು ಮನೆ ಇದೆ ಹಾಗೂ ಆವರಣದಲ್ಲಿ ಬಸದಿಯ ಬಾವಿ ಇದೆ. ಇದಕ್ಕೆ ಹತ್ತಿರದಲ್ಲಿರುವ ಬಸದಿಗಳು ಅಜ್ಜಿಬೆಟ್ಟು ಬಸದಿ ೪ ಕಿ. ಮೀ., ಕಾವಳಕಟ್ಟೆ ಬಸದಿ ೪ ಕಿ. ಮೀ., ಅಲಂಪುರಿ ಬಸದಿ ೩ ಕಿ. ಮೀ. ಪಂಜಿಕಲ್ಲು ಬಸದಿ ೪ ಕಿ. ಮೀ. ದೂರದಲ್ಲಿದೆ. ಇದು ಕಾಡಬೆಟ್ಟುಗುತ್ತಿನ ಕುಟುಂಬಸ್ಥರ ಸ್ವಂತ ಬಸದಿ. ಊರಲ್ಲಿ ೬ ಶ್ರಾವಕರ ಮನೆಗಳಿವೆ. ಅವರು ಪ್ರತಿ ತಿಂಗಳು ಪೂಜಾಕಾರ್ಯಗಳಿಗೆ ಹಾಗೂ ಪಂಚಪರ್ವಗಳಿಗೆ ಬಸದಿಗೆ ಬರುತ್ತಿರುತ್ತಾರೆ. ಬಸದಿಯು ಕಾರ್ಕಳ ಮಠಕ್ಕೆ ಸೇರಿದುದು.
ಕಾಡಬೆಟ್ಟು ಗುತ್ತಿನ ಹಿರಿಯವರಾದ ಶ್ರೀಮತಿ ದೇವಮ್ಮ ಹೆಂಗ್ಸು ಎಂಬವರು ಈ ಬಸದಿಯನ್ನು ಕಟ್ಟಿಸಿದರೆಂದು ಹೇಳುತ್ತಾರೆ. ಆ ಮನೆಯ ವಂಶಸ್ಥರೇ ಕಾಡಬೆಟ್ಟು ಗುತ್ತಿನಲ್ಲಿದ್ದುಕೊಂಡು ನಡೆಸಿಕೊಂಡು ಬರುತ್ತಿದ್ದಾರೆ. ಈ ಬಸದಿಯು ಜೀರ್ಣೋದ್ಧಾರಗೊಂಡು, ದಿನಾಂಕ ೨೫-೦೪-೨೦೦೯ ರಿಂದ ೨೯-೦೪-೨೦೦೯ರವರೆಗೆ ಪುನರ್ ಪ್ರತಿಷ್ಠಾ ಕಾರ್ಯಕ್ರಮ ನಡೆದಿದೆ. ದೇವರ ಮೂಲಬಿಂಬದ ಪೀಠದಲ್ಲಿ ಈ ರೀತಿ ಬರಹವಿದೆ - " ಶ್ರೀ ಸ್ವಸ್ತಿ ಶ್ರೀಮಾನ್ ಶಾಲಿವಾಹನ ಶಖ ವರುಶ ೧೭೫೮ನೇ ವರ್ಧಮಾನ ಕೈ ಸಲುವ ಋಮುಖಿ ನಾಮ ಸಂವತರದ ಫಾಲ್ಗುಣಿ ಶು.೧೦ ಯು ಗುರುವಾರ ದೆವಂಮಪದುಮ ಶ್ಘ್ಠಾ ಖ್ ಕಾಡಬೆಘ್ಠು ಬಸ್ತಿ ಕಘ್ಠಿಸಿ ಚಂದ್ರಪ್ರಭ ಶಿಯರ್ಥಕರ ಪ್ರಶಿಷ್ಟ್ ಶುಭ ಮಸ್ತು ” ಇದರ ಅನುಸಾರ ೧೮೨೬ನೇ ಇಸವಿಯಲಿ ಈ ಬಸದಿಯನ್ನು ನಿರ್ಮಾಣ ಮಾಡಲಾಗಿದೆ ಮತ್ತು ಇದಕ್ಕೆ ೧೫೦ ಮುಡಿ ಗದ್ದೆಯನ್ನು ಬಸದಿಗೆ ಎಂದು ಬರೆದು ಕೊಟ್ಟಿದ್ದರು. ಆದರೆ ಈಗ ಭೂಮಸೂದೆಯ ಅನುಸಾರ ಎಲ್ಲಾ ಭೂಮಿಯು ಕಳೆದು ಹೋಗಿದೆ, ಸರ್ವಾಹ್ಣ ಯಕ್ಷನ ಪ್ರತಿಮೆ ಇರುವುದರಿಂದ ಹಿಂದೆ ಇಲ್ಲಿ ಉತ್ಸವಾದಿಗಳು ನಡೆಯುತ್ತಿದ್ದಿರಬಹುದೆಂದು ಹೇಳಬಹುದು.
ಹಿಂದೆ ಶ್ರೀಧರ ಇಂದರು ಬಸದಿಯಲ್ಲಿ ಪೂಜೆ ಮಾಡುತ್ತಿದ್ದರು. ಆನಂತರ ‘ಶ್ರೀ ಧರ್ಮರಾಜ ಇಂದ್ರರು ೬೫ ವರ್ಷ ಪ್ರಾಯವಾದರೂ ಈಗಲೂ ಪೂಜೆ ಮಾಡುತ್ತಿದ್ದಾರೆ. ಜತೆಗೆ ಪಂಚಕಲ್ಯಾಣದ ನಂತರ ಶ್ರೀ ವಿದ್ಯಾಧರ ಇಂದ್ರರೂ ಪೂಜೆ ಮಾಡುತ್ತಾರೆ. ಗಂಧಕುಟಿಯಲ್ಲಿರುವ ಗಣಧರಪಾದ, ಶ್ರುತ, ಬ್ರಹ್ಮದೇವರಿಗೆ ಹಾಗೂ ಸರ್ವಾಹ್ಣ ಯಕ್ಷನಿಗೆ ಸದಾ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಮಾತೆ ಪದ್ಮಾವತಿಯಮ್ಮ ಭೈರವಿ ಪದ್ಮಾವತಿಯಮ್ಮ ಎಂಬ ರೂಪದಲ್ಲಿದ್ದು, ದಿನಾಲೂ ಪೂಜೆ ನಡೆಯುತ್ತದೆ. ದಿನಾಲೂ ಸೀರೆ ಉಡಿಸಿ, ಬಳೆಗಳನ್ನು ಹಾಕಲಾಗುತ್ತದೆ. ಆದರೆ ವಿಶೇಷ ಅಲಂಕಾರ ಮಾಡುವುದಿಲ್ಲ. ಅಮ್ಮನವರಿಗೆ ಬೆಳ್ಳಿ ಕವಚ ಇದೆ, ಬಸದಿಯ ಮುಖ ಉತ್ತರಕ್ಕಿದೆ ಹಾಗೂ ಅಮ್ಮನವರ ಮೂರ್ತಿಯೂ ಉತ್ತರಾಭಿ ಮುಖವಾಗಿದೆ. ಕಾಲಬಳಿ ಕುಕ್ಕುಟ ಸರ್ಪವಿದೆ, ಮದುವೆ ಸಂಬಂಧ ದೇವರ ಒಪ್ಪಿಗೆ ನೋಡಲು ಹೂ ಹಾಕಿ ನೋಡುವ ಕ್ರಮ ಇದೆ. ಅನಂತರ ಪ್ರಸಾದ ಪಡೆಯಲಾಗುತ್ತದೆ. ದಿನವೂ ಮೂಲಸ್ವಾಮಿಗೆ ಜಲಾಭಿಷೇಕ ಮಾಡಲಾಗುತ್ತದೆ. ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಹಣ್ಣುಕಾಯಿ ಪೂಜೆ ಇತ್ಯಾದಿ ಹಾಗೂ ಇಷ್ಟದ ಆರಾಧನೆಗಳನ್ನು ಮಾಡಲಾಗುತ್ತದೆ. ಬಸದಿಯಲ್ಲಿ ಹಿಂದೆ ಎರಡು ಹೊತ್ತು ಪೂಜೆ, ಒಂದು ಹೊತ್ತು ನೈವೇದ್ಯ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಈಗ ಅಕ್ಕಿ ಇಟ್ಟು ದಿವಸಕ್ಕೆ ಒಂದೇ ಪೂಜೆ ಮಾಡಲಾಗುತ್ತಿದೆ.
ಬಸದಿಗೆ ಮೇಗಿನ ನೆಲೆ ಇಲ್ಲ, ಚವ್ವೀಷ ತೀರ್ಥಂಕರರು, ಶ್ರೀ ಅನಂತನಾಥ ತೀರ್ಥಂಕರರು, ಭಗವಾನ್ ಬಾಹುಬಲಿ ಸ್ವಾಮಿ, ಸರ್ವಾಹ್ಣ ಯಕ್ಷ, ಶ್ರೀ ಪಾರ್ಶ್ವನಾಥಸ್ವಾವಿ, ಭೈರವಿ ಪದ್ಮಾವತೀ ಅಮ್ಮ ಮತ್ತು ಬ್ರಹ್ಮಯಕ್ಷನ ಮೂರ್ತಿಗಳು ಈ ಬಸದಿಯಲ್ಲಿ ಪೂಜೆಗೊಳ್ಳುತ್ತಿವೆ. ಬಸದಿಯು ಉತ್ತರಾಭಿಮುಖವಾಗಿದ್ದು, ಬಸದಿಯ ಬಲಬದಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಕ್ಷೇತ್ರಪಾಲ ಗುಡಿ ಹಾಗೂ ಸನ್ನಿಧಿ ಇದೆ. ಈ ಸಂಬಂಧ ತ್ರಿಶೂಲ, ನಾಗನ ಕಲ್ಲು ಇವೆಲ್ಲವನ್ನು ಒಂದು ಪೀಠದ ಮೇಲೆ ಸ್ಥಾಪಿಸಲಾಗಿದೆ. ಗುಡಿಯ ಹೊರಗೆ ಎಡಬದಿಯಲ್ಲಿ ಗುತ್ತಿನ ಕುಟುಂಬ ದೈವ ಹಾಗೂ ಗ್ರಾಮದೈವವಾದ ಪಂಜುರ್ಲಿ ದೈವದ ಸನ್ನಿಧಿ ಇದೆ. ಅದಕ್ಕೆ ದಿನವೂ ದೇವರ ಪ್ರಸಾದ ಪ್ರೋಕ್ಷಣೆ ಮಾಡಲಾಗುತ್ತದೆ. ಬಲಿಕಲ್ಲುಗಳು ಇವೆ. ಅದಕ್ಕೂ ಪೂಜೆ ನಡೆಸಲಾಗುತ್ತದೆ.
ಬಸದಿಯ ಅಂಗಳದಲ್ಲಿ ಹಿಂದೆ ಒಂದು ಪಾರಿಜಾತ ಹೂವಿನ ಸಸಿ ಇತ್ತು. ಈಗ ಇಲ್ಲ. ಆದ್ದರಿಂದ ಅಂಗಳದ ಹೊರಗೆ ಬೇರೆ ಬೇರೆ ಹೂವಿನ ಗಿಡಗಳನ್ನು ನೆಡಲಾಗಿದೆ. ಬಸದಿಯ ಪ್ರವೇಶದ್ವಾರದ ಎಡಬಲಗಳಲ್ಲಿರುವ ಗೋಪುರವನ್ನು ವಿಶೇಷ ಪೂಜೆ - ಪುರಸ್ಕಾರಗಳು ನಡೆಯುವಾಗ ಶ್ರಾವಕರಿಗೆ ಕುಳಿತುಕೊಳ್ಳಲು ಉಪಯೋಗಿಸಲಾಗುತ್ತದೆ ಹಾಗೂ ಎಲೆಕ್ಟ್ರಿಕಲ್ ಡೋಲು, ಗಂಟೆ ಇದೆ. ಪೂಜಾ ಸಮಯದಲ್ಲಿ ಇದನ್ನು ಬಾರಿಸಲಾಗುತ್ತದೆ. ಬಸದಿಗೆ ಕಾರ್ಯಾಲಯ ಇಲ್ಲ. ಮುನಿವಾಸ ಇಲ್ಲ. ಆದರೆ ಎರಡು ಮುನಿಗಳು ಎರಡು ದಿನ ತಂಗಿದ್ದರು. ಅವರಲ್ಲಿ ಒಬ್ಬರು ಪ್ರಸಿದ್ಧರಾದ ಪೂಜ್ಯ ವಿಶ್ವನಂದಿನಿ ಮುನಿ ಮಹಾರಾಜರು. ಚಾತುರ್ಮಾಸವನ್ನು ಈ ಬಸದಿಯಲ್ಲಿ ಯಾರೂ ಮಾಡಿರಲಿಲ್ಲ. ಪ್ರವೇಶದ್ವಾರದಲ್ಲಿ ದ್ವಾರಪಾಲಕರ ವರ್ಣಚಿತ್ರಗಳಿವೆ. ಆದರೆ ಶಿಲಾಮುರ್ತಿಯಿಲ್ಲ. ಎದುರಿನ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇಲ್ಲ, ಆದರೆ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಬಸದಿಯ ಸುತ್ತಲೂ ಮುರಕಲ್ಲಿನ ಪ್ರಾಕಾರ ಗೋಡೆಯಿದೆ. ಮೂಲಸ್ವಾಮಿಯ ಬಿಂಬ ಶಿಲೆಯದ್ದು ೯ ಇಂಚು ಎತ್ತರ, ಖಡ್ಗಾಸನ ಭಂಗಿಯಲ್ಲಿದೆ. ಸುತ್ತಲೂ ಮಕರ ತೋರಣದ ಪ್ರಭಾವಳಿ ಇದೆ. ನೀರಿಗೆ ಬಾವಿ ಕ್ಷೇತ್ರದಲ್ಲಿಯೇ ಇದೆ. ಬಸದಿಯು ಹಂಚಿನ ಮಾಡಿನದ್ದಾಗಿದೆ.
ಬಸದಿಯಲ್ಲಿ ವರುಷದ ಪರ್ವಗಳು - ನವರಾತ್ರಿ ಪೂಜೆ, ನೂಲ ಶ್ರಾವಣ ಇತ್ಯಾದಿ ಹಬ್ಬಗಳ ಆರಾಧನೆ. ಯಾರಾದರೂ ನೋಂಪು ಮಾಡುವುದಿದ್ದರೆ ಅವಕಾಶ ಇದೆ.
This article uses material from the Wikipedia ಕನ್ನಡ article ಚಂದ್ರನಾಥಸ್ವಾಮಿ ಬಸದಿ, ಕಾಡಬೆಟ್ಟು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.