ಸತ್ಯವತಿ ಮಹಾಭಾರತದಲ್ಲಿ ಸತ್ಯವತಿಯು ಮೀನುಗಾರನ ಮಗಳು .
ಶಂತನುವಿನ ಪತ್ನಿ. ಭೀಷ್ಮನ ಮಲತಾಯಿ. ಶಂತನು ಮತ್ತು ಸತ್ಯವತಿಗೆ ಇಬ್ಬರು ಗಂಡು ಮಕ್ಕಳಾದರು, ಇವರು ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಶಂತನು ಮಹಾರಾಜನ ನಂತರ ಸತ್ಯವತಿ ಹಸ್ತಿನಾಪುರದ ಮಹಾರಾಣಿಯಾಗಿ ರಾಜ್ಯಭಾರ ಮಾಡುತ್ತಾಳೆ. ಮಹಾಭಾರತದಲ್ಲಿ, ಚಿತ್ರಾಂಗದನು ಶಂತನು ಮತ್ತು ಸತ್ಯವತಿಯ ಹಿರಿಯ ಮಗ. ಅವನ ತಂದೆಯ ಮರಣದ ನಂತರ, ಆತನು ಹಸ್ತಿನಾಪುರದ ಸಿಂಹಾಸನವನ್ನು ಏರಿದನು, ಆದರೆ ಇದೇ ಹೆಸರಿನ ಗಂಧರ್ವನಿಂದ ಕೊಲ್ಲಲ್ಪಟ್ಟನು. ಚಿತ್ರಾಂಗದನು ಒಬ್ಬ ಮಹಾನ್ ಯೋದ್ಧನಾಗಿದ್ದನು ಮತ್ತು ಎಲ್ಲ ರಾಜರನ್ನು ಸೋಲಿಸಿದನು. ಸತ್ಯವತಿ ಮೀನಿನ ಮಗಳಾದುದ್ದರಿಂದ ಮತ್ಸ್ಯಗಂಧಿ ಎಂದೂ ನಂತರ ಯೋಜನಾಗಂಧಿ ಎಂದೂ ಕರೆಯಲಾಗಿದೆ.
ಸತ್ಯವತಿ | |
---|---|
Information | |
ಕುಟುಂಬ | ಉಪರಿಚರ ವಾಸು (ತಂದೆ) |
ಗಂಡ/ಹೆಂಡತಿ | ಶಂತನು |
ಮಕ್ಕಳು | ಪರಾಶರ ಅವರೊಂದಿಗೆ ಕೃಷ್ಣದ್ವೈಪಾಯನ ಮತ್ತು ಶಂತನು ಅವರೊಂದಿಗೆ ಚಿತ್ರಾಂಗದ ಮತ್ತು ವಿಚಿತ್ರವೀರ್ಯ |
ಮಹಾಭಾರತದಲ್ಲಿ ಬರುವ ದಾಶರಾಜನಿಗೆ ಉಚ್ಚೈಶ್ರವಸ್ಸು ಎಂದೂ ಹೆಸರಿದೆ. ಇವನು ಬೆಸ್ತರ ರಾಜ. ಒಮ್ಮೆ ಬೆಸ್ತರು ಮೀನು ಹಿಡಿಯುವಾಗ ಒಂದು ಹೆಣ್ಣು ಮಗು ಸಿಕ್ಕಿತು. ಅದನ್ನು ಅವರು ಈತನಿಗೆ ಒಪ್ಪಿಸಿದರು. ಮುಂದೆ ಆ ಹೆಣ್ಣು ಮಗು ಮತ್ಸ್ಯಗಂಧಿನಿ, ಸತ್ಯವತಿ, ಯೋಜನಗಂಧಿ ಎಂಬ ಹೆಸರುಗಳಿಂದ ಪ್ರಸಿದ್ಧಳಾದಳು. ಪರಾಶರ ಮುನಿಯಿಂದ ಅವಳಿಗೆ ತೇಜಸ್ವಿನಿಯಾದ ಕೃಷ್ಣದ್ವೈಪಾಯನ ಎಂಬ ಮಗ ಹುಟ್ಟಿದ. ಮುಂದೆ ಆಕೆ ಶಂತನು ಚಕ್ರವರ್ತಿಯನ್ನು ಮದುವೆಯಾದಳು.
ಒಂದು ದಿನ ಶಂತನು ದಾಶರಾಜನ ಪುತ್ರಿ ಸತ್ಯವತಿಯನ್ನು ನೋಡಿ ಮೋಹಗೊಂಡು ಆಕೆಯನ್ನು ವಿವಾಹವಾಗುವುದಾಗಿ ದಾಶರಾಜನಿಗೆ ತಿಳಿಸಿದ. ಆದರೆ ದಾಶರಾಜ ಮುಂದೆ ಸತ್ಯವತಿಯ ಗರ್ಭದಲ್ಲಿ ಜನಿಸಿದ ಪುತ್ರನನ್ನು ಉತ್ತರಾಧಿಕಾರಿಯಾಗಿ ಮಾಡುವುದಾಗಿ ಮಾತುಕೊಟ್ಟರೆ ಮಗಳನ್ನು ಕೊಡವುದಾಗಿ ಕರಾರು ಹಾಕಿದ. ಶಂತನುವಿಗೆ ಇದು ಸಮ್ಮತವಾಗದಿದ್ದರೂ ಅವನ ಮನಸ್ಸಲ್ಲೆಲ್ಲ ಸತ್ಯವತಿ ತುಂಬಿಕೊಂಡಿದ್ದಳು. ಇದರಿಂದಾಗಿ ಶಂತನು ವ್ಯಾಕುಲನಾಗಿದ್ದ. ಈ ವಿಷಯ ಮಂತ್ರಿಯ ಮೂಲಕ ತಿಳಿದುಕೊಂಡ ಭೀಷ್ಮ ದಾಶರಾಜನಲ್ಲಿಗೆ ಹೋಗಿ ಸಂಧಾನ ನಡೆಸಿ, ತಾನು ಮದುವೆಮಾಡಿಕೊಳ್ಳದೆ ಬ್ರಹ್ಮಚಾರಿಯಾಗಿಯೇ ಉಳಿಯುವುದಾಗಿ ಪ್ರತಿಜ್ಞೆಮಾಡಿ ಸತ್ಯವತಿಯೊಂದಿಗೆ ತನ್ನ ತಂದೆಯ ವಿವಾಹ ನೆರವೇರಿಸಿದ. ಸಂತೋಷಗೊಂಡ ತಂದೆ ಮಗನಿಗೆ ಇಚ್ಛಾಮರಣಿಯಾಗೆಂದು ವರವಿತ್ತ. ಮುಂದೆ ಭೀಷ್ಮ ಸತ್ಯವತಿಯ ಮಗ ವಿಚಿತ್ರವೀರ್ಯನಿಗಾಗಿ ಕಾಶೀರಾಜನ ಪುತ್ರಿಯಾದ ಅಂಬೆ, ಅಂಬಿಕೆ, ಅಂಬಾಲಿಕೆಯರನನ್ನು ಅಪಹರಿಸಿಕೊಂಡು ಬಂದ. ಆದರೆ ಅಂಬೆ ವಿಚಿತ್ರ ವೀರ್ಯವನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆಯನ್ನು ಸಾಲ್ವರಾಜನಲ್ಲಿಗೆ ಕಳುಹಿಸಿಕೊಟ್ಟ. ವಿಚಿತ್ರವೀರ್ಯನಿಗೆ ಸಂತಾನ ಇರಲಿಲ್ಲ. ಅವನ ಸಾವಿನ ಅನಂತರ ವಂಶ ನಿಂತುಹೋಗುವ ಸ್ಥಿತಿಗೆ ಬಂತು. ಆಗ ಸತ್ಯವತಿ ಅಂಬಿಕೆ, ಅಂಬಾಲಿಕೆಯವರೊಂದಿಗೆ ಸಂತಾನಕ್ಕಾಗಿ ಕೂಡಲು ಭೀಷ್ಮನನ್ನು ಪ್ರೇರಿಸಿದರೂ ಅದಕ್ಕೆ ಭೀಷ್ಮ ಒಪ್ಪಲಿಲ್ಲ. ಬಳಿಕ ಸತ್ಯವತಿ ಭೀಷ್ಮನ ಸೂಚನೆ ಮೇರೆಗೆ ವ್ಯಾಸನನ್ನು ಬರಮಾಡಿಕೊಂಡು ಅಂಬಿಕೆ, ಅಂಬಾಲಿಕೆಯರಲ್ಲಿ ಸಂತಾನವನ್ನು ಅನುಗ್ರಹಿಸಲು ಕೇಳಿ ಕೊಂಡಳು.
This article uses material from the Wikipedia ಕನ್ನಡ article ಸತ್ಯವತಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.