ಅಶೋಕ ಚಕ್ರ ಸಮ್ಮಾನಿತ ಕ್ಯಾಪ್ಟನ್ ಹರ್ಷನ್ ರಾಧಾಕೃಷ್ಣನ್ ನಾಯರ್ (೧೫ ಏಪ್ರಿಲ್ ೧೯೮೦ - ೨೦ ಮಾರ್ಚ್ ೨೦೦೭) ಅವರು ಭಾರತೀಯ ಸೇನೆಯಲ್ಲಿ ಅಧಿಕಾರಿ.
ಇವರು "ಪ್ರಿಡೇಟರ್ಸ್" ಎಂದು ಕರೆಯಲ್ಪಡುವ ಪ್ಯಾರಾ(ವಿಶೇಷ ಪಡೆಗಳು) ದಳದ ಇಲೈಟ ೨ನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು . ಅವರಿಗೆ ೨೦೦೮ ರಲ್ಲಿ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು. ೨೦ ಮಾರ್ಚ್ ೨೦೦೭ರಂದು ಜಮ್ಮು ಕಾಶ್ಮೀರದ ಛೋಟಿ ಮಾರ್ಗಿ ಪ್ರದೇಶದಲ್ಲಿ ನಡೆದ ಹರ್ಕತುಲ್ ಮುಜಾಹಿದೀನ್ ಭಯೋತ್ಪಾದಕರ ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ತೊಡೆ ಮತ್ತು ಕುತ್ತಿಗೆಗೆ ಗುಂಡು ತಗುಲಿದ ಕಾರಣ ಅವರು ವೀರ ಮರಣವನ್ನು ಹೊಂದಿದರು.
ಕ್ಯಾಪ್ಟನ್ ಹರ್ಷನ್ ಆರ್ ಅಶೋಕ ಚಕ್ರ | |
---|---|
ಜನ್ಮನಾಮ | ಹರ್ಷನ್ ರಾಧಾಕೃಷ್ಣನ್ ನಾಯರ್ |
ಜನನ | ತಿರುವನಂತಪುರಂ, ಕೇರಳ, ಭಾರತ | ೧೫ ಏಪ್ರಿಲ್ ೧೯೮೦
ಮರಣ | 20 March 2007 ಜಮ್ಮು ಕಾಶ್ಮೀರ | (aged 26)
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | ಭಾರತೀಯ ಸೇನೆ |
ಸೇವಾವಧಿ | ೨೦೦೨-೨00೭ |
ಶ್ರೇಣಿ(ದರ್ಜೆ) | ಕ್ಯಾಪ್ಟನ್ |
ಸೇವಾ ಸಂಖ್ಯೆ | IC-62541 |
ಘಟಕ | 2 Para (Special Forces) |
ಪ್ರಶಸ್ತಿ(ಗಳು) | ಅಶೋಕ ಚಕ್ರ |
ಹರ್ಷನ್ ರಾಧಾಕೃಷ್ಣನ್ ನಾಯರ್ ಅವರು ಏಪ್ರಿಲ್ ೧೫, ೧೯೮೦ ರಂದು ಕೇರಳ ರಾಜ್ಯದ ತಿರುವನಂತಪುರದ ಮಣಕಾಡ್ನಲ್ಲಿ ಜನಿಸಿದರು. ಕೆ. ರಾಧಾಕೃಷ್ಣನ್ ನಾಯರ್ ಮತ್ತು ಜಿಎಸ್ ಚಿತ್ರಾಂಬಿಕಾ ಅವರ ತಂದೆ ತಾಯಿಯ ಹೆಸರುಗಳಾಗಿವೆ. ಅವರು ಕಜ಼ಕೂಟಂನ ಸೈನಿಕ ಶಾಲೆ ಹಾಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(NDA) ಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು. ಅವರು ೧೯೯೭ರಲ್ಲಿ ಪಾಲಕ್ಕಾಡನ ಎನ್ಎಸ್ಎಸ್ ಇಂಜಿನಿಯರಿಂಗ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್(B.Tech) ಪದವಿಗೆ ಪ್ರವೇಶ ಪಡೆದಿದ್ದರು. ಆದರೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(NDA)ಗೆ ಸೇರುವ ಸಲುವಾಗಿ ತಮ್ಮ ಪದವಿ ಕೋರ್ಸ್ಅನ್ನು ಅರ್ಧಕ್ಕೆ ತೊರೆದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿ(NDA)ನಲ್ಲಿ ಅವರು ೧೦೧ ನೇ ಕೋರ್ಸ್, ಗಾಲ್ಫ್ ಸ್ಕ್ವಾಡ್ರನ್ನ ಸದಸ್ಯರಾಗಿದ್ದರು. ಹರ್ಷನ್ ಅವರು ಸೈನಿಕ್ ಶಾಲೆಯಲ್ಲಿ ೧೨ನೇ ತರಗತಿಯಲ್ಲಿ (೧೯೯೬-೯೭) ಓದುತ್ತಿರುವಾಗ ಕೆಡೆಟ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು ಹಾಗೂ ಶಾಲಾವಾರ್ಷಿಕ ದಿನಾಚರಣೆಯ ಸಂದರ್ಭದಲ್ಲಿ ಆಡಲಾದ 'ಜೂಲಿಯಸ್ ಸೀಸರ್' ನಾಟಕದಲ್ಲಿ 'ಬ್ರೂಟಸ್' ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದರು.
ಡಿಸೆಂಬರ್ ೧೬,೨೦೦೨ ರಂದು ಹರ್ಷನ್ ಅವರನ್ನು ವಿಶೇಷ ಪಡೆಗಳ ೨ನೇ ಬೆಟಾಲಿಯನ್ಗೆ ಲೆಫ್ಟಿನೆಂಟ್ ಆಗಿ ನಿಯೋಜಿಸಲಾಯಿತು ಹಾಗೂ ಇಸ್ರೇಲ್ನಲ್ಲಿ ನಡೆದ ವಿಶೇಷ ಆಯುಧಗಳ ತರಬೇತಿಗೂ ಆಯ್ಕೆಯಾಗಿದ್ದರು. ನಂತರ ಅವರು ಡಿಸೆಂಬರ್ ೧೬,೨೦೦೪ ರಂದು ಕ್ಯಾಪ್ಟನ್ ಆಗಿ ಬಡ್ತಿ ಪಡೆದರು.
ಜಮ್ಮು ಕಾಶ್ಮೀರದ ಕೈಂಗೂರ್ ನಾರ್ನಲ್ಲಿ ಮಾರ್ಚ್ ೭, ೨೦೦೭ ರಂದು ಭಯೋತ್ಪಾದಕರ ಎನ್ಕೌಂಟರ್ ಕಾರ್ಯಾಚರಣೆ ಪ್ರಾರಂಭವಾಯಿತು. ಸಣ್ಣ ತಂಡವೊಂದನ್ನು ಮುನ್ನಡೆಸುತ್ತಿರುವಾಗ ಕ್ಯಾಪ್ಟನ್ ಹರ್ಷನ್ ಅವರು ಎಂಟಿ-೩೨೪೫ ಪ್ರದೇಶದಲ್ಲಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದರು ಹಾಗೂ ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದರು.
ನಂತರ ಚೋಟಿಮರ್ಗಿಯ ಎಂಟಿ-೩೪೪೮ ಪ್ರದೇಶದಲ್ಲಿ ಕಾರ್ಯಾಚರಣೆಯ ಮುಂದುವರೆಯಿತು. ಮಾರ್ಚ್ ೨೦ ರಂದು, ಹರ್ಷನ್ ಅವರು ತಮ್ಮ ತಂಡದ ಜೂನಿಯರ್ ಸಾರ್ಜೆಂಟ್ಗಳೊಡನೆ ಸೇರಿಕೊಂಡು ಭಯೋತ್ಪಾದಕರು ಅಡಗಿಕೊಂಡಿದ್ದ ಮನೆಯೊಂದನ್ನು ಸುತ್ತುವರೆದರು. ನಂತರ ಬೆಳಗ್ಗೆ ೦೩:೫೦ ಕ್ಕೆ, ನಾಲ್ವರು ಭಯೋತ್ಪಾದಕರು ಹರ್ಷನ್ ಮತ್ತು ಅವರ ಸಹಚರರ ಕಡೆಗೆ ಗುಂಡು ಹಾರಿಸಲಾರಂಭಿಸಿದರು. ತಮ್ಮ ತೊಡೆಗೆ ಗುಂಡು ತಗುಲಿದ್ದನ್ನು ಲೆಕ್ಕಿಸದೆ ಹರ್ಷನ್ ಅವರು ಭಯೋತ್ಪಾದಕರ ಗುಂಪಿನ ನಾಯಕನನ್ನು ಹೊಡೆದುರುಳಿಸಿದರು. ತೀವ್ರ ಗಾಯದ ಹೊರತಾಗಿಯೂ, ಅವರು ಮತ್ತೊಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದರು. ಆದರೆ ಅಷ್ಟರಲ್ಲಿ ಕುತ್ತಿಗೆಗೆ ಗುಂಡು ತಗುಲಿಬಿಟ್ಟಿತ್ತು. ಅಂತಹ ಪರಿಸ್ಥಿತಿಯಲ್ಲೂ ಸಹ ಅವರು ಗ್ರೆನೇಡನ್ನು ಎಸೆದು ಮೂರನೇ ಭಯೋತ್ಪಾದಕನನ್ನು ಗಾಯಗೊಳಿಸಿದರು.
ಹರ್ಷನ್ ಅವರ ಅಸಾಧಾರಣ ಧೈರ್ಯ, ಹೋರಾಟದ ಮನೋಭಾವ ಹಾಗೂ ದೇಶಕ್ಕೆ ಅವರು ಮಾಡಿದ ತ್ಯಾಗವನ್ನು ಪರಿಗಣಿಸಿ ರಾಷ್ಟ್ರದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.
This article uses material from the Wikipedia ಕನ್ನಡ article ಹರ್ಷನ್ ಆರ್. ನಾಯರ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.