ಜಾಮಿ 1414-1492.
ಪರ್ಷಿಯದ ಕವಿ, ಅನುಭಾವಿ. ಈತನ ಪೂರ್ಣ ಹೆಸರು ನೂರುದ್ದೀನ್ ಅಬ್ದುಲ್ ರಹ್ಮಾನ್ ಜಾಮಿ. ಜಾಮಿ ಎಂಬ ಕಾವ್ಯ ನಾಮದಿಂದ ಅನೇಕ ಕೃತಿಗಳನ್ನು ರಚಿಸಿ ಪಂಡಿತಪಾಮರರ ಗೌರವಕ್ಕೆ ಪಾತ್ರನಾದವ.
ಈತನ ತಂದೆ ನೈಜಾಮುದ್ದೀನ್ ಮತ್ತು ತಾತ ಶಂಸುದ್ದೀನ್ ಮಹಾವಿದ್ವಾಂಸರೆನಿಸಿಕೊಂಡಿದ್ದರು. ಹಿರಿಯರ ಮಾರ್ಗದಲ್ಲೇ ಅಡಿಯಿಟ್ಟ ಈತ ತನ್ನ ವಿದ್ವತ್ತಿನಿಂದ ಮಾತ್ರವಲ್ಲದೆ, ಪರಿಶುದ್ಧ ಜೀವನ ಮತ್ತು ವೈರಾಗ್ಯ ಮನೋಭಾವದಿಂದ ಎಲ್ಲರ ಮನ್ನಣೆಯನ್ನೂ ಪಡೆದ.
ಹೀರಾತ್ನಲ್ಲಿ ಹುಟ್ಟಿದ ಈತ ಅಲ್ಲಿಯೇ ವಿದ್ಯಾಭ್ಯಾಸ ಪಡೆದ. ಚಿಕ್ಕ ವಯಸ್ಸಿನಲ್ಲೇ ಪವಿತ್ರ ಕುರಾನನ್ನು ಬಾಯಿಪಾಠ ಮಾಡಿಕೊಂಡ. ಮದರ್ಸ-ಇ-ನೈಜಾಮಿಯಾದಲ್ಲಿ ವಿದ್ಯಾಭ್ಯಾಸ ಪೂರೈಸಿದ ಅನಂತರ ಹೆಚ್ಚಿನ ಅಧ್ಯಯನಕ್ಕಾಗಿ ಸಮರಖಂಡಕ್ಕೆ ತೆರಳಿದ. ಅಲ್ಲಿ ಖ್ವಾಜಾ ಅಲಿ ಎಂಬ ಗುರುವಿನ ಬಳಿ ಶಿಷ್ಯವೃತ್ತಿಯನ್ನು ಅವಲಂಬಿಸಿ ಸಾಹಿತ್ಯ ಮತ್ತು ಧರ್ಮಶಾಸ್ತ್ರಗಳಲ್ಲಿ ಪರಿಣತನಾಗಿ ಸೂಫಿ ತತ್ತ್ವದ ಬಗ್ಗೆ ಹೆಚ್ಚಿನ ಒಲವನ್ನು ತೋರಿಸಿದ.
ಐದು ವರ್ಷದ ಹುಡುಗನಾಗಿದ್ದಾಗಲೇ ಈತನ ತಂದೆ ಈತನನ್ನು ಆ ಕಾಲದ ಹಿರಿಯ ಸೂಫಿ ಸಂತ ಖ್ವಾಜಾ ಮಹಮ್ಮದ್ ಪಾರ್ಸಾರವರ ಬಳಿಗೆ ಕರೆದುಕೊಂಡು ಹೋಗಿದ್ದನಂತೆ. ಆ ಮಹಾತ್ಮ ಜಾಮಿಯನ್ನು ವಿಶ್ವಾಸದಿಂದ ಮೈದಡವಿ ಆಶೀರ್ವದಿಸಿದನಂತೆ. ಬೀಳ್ಕೊಡುವಾಗ ನಗುಮೊಗದಿಂದ ಹುಡುಗನಿಗೆ ಒಂದು ಸೇರು ಕಲ್ಲುಸಕ್ಕರೆಯನ್ನು ಕೊಟ್ಟು ಉಪಚರಿಸಿದನಂತೆ. ಅಂದಿನಿಂದ ಆ ಮಹಾತ್ಮನ ವರ್ಚಸ್ಸು, ಹೊಳೆಯುತ್ತಿದ್ದ ಕಣ್ಣುಗಳು, ಸುಂದರವದನ ಮತ್ತು ಮುಗುಳುನಗೆ ಜಾಮಿಯ ಚಿತ್ತದಲ್ಲಿ ಅಚ್ಚಳಿಯದೆ ಉಳಿದುವು. ಸೂಫಿ ತತ್ತ್ವದ ಬಗ್ಗೆ ಈತ ತೋರಿದ ಅಭಿಮಾನಕ್ಕೆ ಈ ಚಿಕ್ಕ ಘಟನೆ ಮೂಲ ಕಾರಣವಾಗಿದ್ದರೂ ಇರಬಹುದು.
ಉದ್ದಾಮ ಪಂಡಿತ, ಅನುಭಾವಿ, ಕವಿ ಆದ ಜಾಮಿ ಧರ್ಮಗುರುವಾಗಿ ವಿಶಿಷ್ಟಸ್ಥಾನವನ್ನು ಗಳಿಸಿದ. ತಿಮಿರುಡ್ ಸುಲ್ತಾನ ಹುಸಾಯಿನ್-ಇ-ಬಾಖರ್ (1506) ಮತ್ತು ಆತನ ಮುಖ್ಯಮಂತ್ರಿ ಅಮೀರ್-ಅಲಿ-ಷೇರ್ರವರಿಂದ ಸನ್ಮಾನಿತನಾದ. ಅಲ್ಲದೆ ಅಟೊಮನ್ ಸುಲ್ತಾನ ಮಹಮ್ಮದ್ (1451-81) ಮತ್ತು ಎರಡನೆಯ ಬಾಯಾಸೀದ್ (1481-1512) ಇವರುಗಳ ವಿಶ್ವಾಸ ಗೌರವಗಳಿಗೂ ಪಾತ್ರನಾದ. ತುಂಬುಜೀವನ ನಡೆಸಿ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿದ್ದ ಜಾಮಿ 1492ರಲ್ಲಿ ಮೊಹರಂ ತಿಂಗಳ ಶುಕ್ರವಾರದಂದು ವಿಧಿವಶನಾದ.
ಪರ್ಷಿಯನ್ ಸಾಹಿತ್ಯ ಸಂಪತ್ತಿಗೆ-ಮುಖ್ಯವಾಗಿ ಕಾವ್ಯಕ್ಕೆ-ಈತ ವಿಪುಲವಾದ ಕೊಡುಗೆಯನ್ನು ನೀಡಿದ್ದಾನೆ. ಗಜಲ್, ಕಸೀದಾ, ರುಬಾಯಿ ಮತ್ತು ಮಸ್ನವಿ ರಚನೆಗಳಲ್ಲಿ ಈತ ಪ್ರಖ್ಯಾತ. ಸಾದಿಯ ನೈತಿಕದೃಷ್ಟಿ, ರೂಮಿಯ ಔನ್ನತ್ಯ, ಹಫೀಸ್ನ ಸರಳತೆ ಮತ್ತು ನಯವಾದ ಹರಿವು, ಅಲ್ಲದೆ ನಿಜಾಮಿಯ ನಿರ್ದಿಷ್ಟತೆ ಜಾಮಿಯ ಕಾವ್ಯಗಳಲ್ಲಿ ಹಿತಮಿತವಾಗಿ ಬೆರೆತು, ಅಪೂರ್ವಶಕ್ತಿ, ಸೌಂದರ್ಯವನ್ನು ನೀಡಿವೆಯೆಂಬುದಾಗಿ ದಿ ಪರ್ಷಿಯನ್ ಪೋರ್ಟ್ರೇಟ್ ಎಂಬ ಗ್ರಂಥದ ಕರ್ತೃ ತಿಳಿಸಿದ್ದಾನೆ. ಕಸೀದಾ ರಚನೆಯಲ್ಲಿ (ಕಸೀದಾ ಎಂದರೆ ಚಕ್ರವರ್ತಿ ಅಥವಾ ಸುಲ್ತಾನರನ್ನು ಹೊಗಳಿ ಬರೆಯುವ ಪದ್ಯ) ವಿಶೇಷ ನೈಪುಣ್ಯವನ್ನು ಪಡೆದು ಜಾಮಿ ಅಗ್ರಮಾನ್ಯನಾಗಿದ್ದಾನೆಂದು ವಿಮರ್ಶಕರ ಅಭಿಪ್ರಾಯ. ಜಾಮಿಯ ಕಸೀದಾದ ವೈಶಿಷ್ಟ್ಯವೇನೆಂದರೆ ಹೊಗಳಿಕೆಗೆ ಬದಲಾಗಿ ಉಪದೇಶವಿರುವುದು. ಈತನ ಘಸಲ್ಗಳಲ್ಲಿ ಕಾಣುವ ಅನುರಾಗ ಪರಮಪುರುಷನಲ್ಲಿರುವಂತೆ, ಕಸೀದಾಗಳಲ್ಲಿ ನ್ಯಾಯಪರಿಪಾಲನೆ, ಧರ್ಮಮಾರ್ಗ, ನೀತಿಯ ಬಗ್ಗೆ ಅಧಿಕಾರಯುತವಾದ ಸರ್ವಮಾನ್ಯವಾದ ಸೂಚನೆಗಳಿವೆ.
ಪರ್ಷಿಯನ್ನಿನ ಶ್ರೇಷ್ಠ ಕವಿಗಳಲ್ಲಿ ಜಾಮಿಯೇ ಕಟ್ಟಕಡೆಯವನೆಂಬ ಒಂದು ಅಭಿಪ್ರಾಯವೂ ಇದೆ. ಈತನ ಮುಖ್ಯ ಕೃತಿಗಳು : ಹಫ್ತ್ ಔರಂಗ್, ಯೂಸುಫ್-ಓ-ಸುಲೇಖಾ, ನಫಾಹಾತ್-ಉಲ್-ಉನ್ಸ ಮತ್ತು ಬೆಹಾರಿಸ್ತಾನ್.
This article uses material from the Wikipedia ಕನ್ನಡ article ಜಾಮಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.