ಮೈಸೂರು ವಾಸುದೇವಾಚಾರ್ಯ

ಮೈಸೂರು ವಾಸುದೇವಾಚಾರ್ಯರು (ಮೇ ೨೮,೧೮೬೫ - ಮೇ ೧೭, ೧೯೬೧)ಕರ್ನಾಟಕ ಸಂಗೀತದ ಒಬ್ಬ ಪ್ರಮುಖ ವಾಗ್ಗೇಯಕಾರ.ಕರ್ನಾಟಕ ರಾಜ್ಯದಲ್ಲಿ ಆಗಿಹೋದ ವಾಗ್ಗೇಯಕಾರರಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹವ ಇವರು ತ್ಯಾಗರಾಜರ ಶಿಷ್ಯಪರಂಪರೆಗೆ ಸೇರಿದ್ದಾರೆ.

ಮೈಸೂರು ವಾಸುದೇವಾಚಾರ್ಯ
Bornಮೇ ೨೮, ೧೮೬೫
Diedಮೇ ೧೭, ೧೯೬೧
Occupation(s)ವಾಗ್ಗೇಯಕಾರರು, ಸಂಗೀತ ಗಾಯಕರು

ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತ ವಾಗ್ಗೇಯಕಾರರ ಪಂಕ್ತಿಯಲ್ಲಿ ಶಾಶ್ವತವಾದ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ. ಹತ್ತಾರು ಮಂದಿ ಶಿಷ್ಯರಿಗೆ ವಿದ್ಯಾದಾನ ಮಾಡಿದ್ದಾರೆ. ನೂರಾರು ಸಭೆಗಳಿಗೆ ಗಾನಾನಂದ ಸಮಾರಾಧನೆಯನ್ನು ಮಾಡಿದ್ದಾರೆ.

ಭಾವ ಸಂಗೀತ

ವಾಸುದೇವಾಚಾರ್ಯರದು ಭಾವ ಸಂಗೀತ. ಅವರಿಗೆ ಸಂಗೀತ ವಿದ್ಯೆ ಕುಲವೃತ್ತಿಯಾಗಿ ಬಂದದ್ದಲ್ಲ. ಅದು ಅವರ ಸ್ವಂತ ಇಷ್ಟದಿಂದ ಹಿರಿಯರ ಇಷ್ಟಕ್ಕೆ ವಿರೋಧವಾಗಿ ಸಂಪಾದಿಸಿಕೊಂಡ ಭಾಗ್ಯ. ಸ್ವಭಾವತಃ ಭಾವಜೀವಿಯಾದ ಆಚಾರ್ಯರಿಗೆ ಮಹಾಕಾವ್ಯ ವ್ಯಾಸಂಗದಿಂದ ಭಾವಸಂಸ್ಕಾರವಾಗಿತ್ತು. ಆ ಭಾವರಸ ಅವರ ಸಂಗೀತದಲ್ಲಿ ನಾದ ಪ್ರವಾಹವಾಯಿತು. ವರ್ಣ ಹಾಡಿದರೂ ಅದರಲ್ಲಿ ಭಾವ ವೈಖರಿ ಎದ್ದು ಕಾಣುವಂತಹ ಸಂಗೀತ ಅವರದು.

ವಾಸುದೇವಾಚಾರ್ಯರ ಗಾಯನವನ್ನು ಹಲವಾರು ಸಲ ಕೇಳಿ ಆನಂದಿಸಿದ ಡಿ.ವಿ.ಜಿಯವರು ಅವರ ಗಾಯನದ ಹಿರಿಮೆಯನ್ನು ಕುರಿತು ಆಡಿರುವ ಈ ಕೆಲವು ಮಾತುಗಳು ಮನನೀಯವಾಗಿವೆ: “ವಾಸುದೇವಾಚಾರ್ಯರ ಗಾಯನ, ಜೀವವನ್ನು ತೊಳೆದು ಆತ್ಮಕ್ಕೆ ದಿವ್ಯ ದರ್ಶನವನ್ನು ಉಂಟುಮಾಡುವಂತಹ ಉನ್ನತಮಟ್ಟದ ಸಂಗೀತ. ಆ ಸಂಗೀತ ಕ್ಷಣಿಕ ಪ್ರಪಂಚವನ್ನು ಮರೆಯಿಸಿ ದಿವ್ಯ ಧ್ಯಾನದಲ್ಲಿ ಮನಸ್ಸನ್ನು ಲೀನ ಮಾಡಬಲ್ಲದು. ಅಂಥ ಸಂಗೀತ ಕೇಳುವಾಗ ಮತ್ತು ನೆನೆಯುವಾಗ ಮನಸ್ಸು ಅನುಭವಿಸುವ ಬಿಡುಗಡೆಯೂ ಏಕಾಂತೋನ್ನತಿಯೂ ಮೋಕ್ಷವೆಂಬುದಲ್ಲದಿದ್ದರೆ ಆ ಶಬ್ಧದ ಅರ್ಥಕ್ಕೆ ಭೂಲೋಕದಲ್ಲಿ ಬೇರೆ ಉದಾಹರಣೆ ಯಾವುದುಂಟೋ ಅದನ್ನು ಕಂಡವರಿಲ್ಲ”

೧೯೮೦ರ ದಶಕದಲ್ಲಿ ಸಂಗೀತಾಭಿರುಚಿಯ ಪ್ರದರ್ಶನದಿಂದ ಅಪಾರ ಪ್ರಸಿದ್ಧ ಪಡೆದ ‘ಶಂಕರಾಭರಣಂ’ ಚಿತ್ರದಲ್ಲಿ ಶಂಕರಶಾಸ್ತ್ರಿ ಪಾತ್ರ ಮೈಸೂರು ವಾಸುದೇವಾಚಾರ್ಯರ ಕೃತಿ ‘ಬ್ರೋಚೇವಾರೆವರುರ’ ಎಂಬ ಗೀತೆಯ ಹಿನ್ನಲೆಯಲ್ಲಿ ಹೇಳುವ ಮಾತು ನೆನಪಿಗೆ ಬರುತ್ತಿದೆ, “.....ಪರಮ ಆರ್ದ್ರತೆಯಿಂದ ಕೂಡಿರುವ ಈ ಗೀತೆ ಆಧ್ಯಾತ್ಮವೇ ನಾದಗಂಗೆಯಾಗಿ ತಾನೇ ತಾನಾಗಿ ಒಬ್ಬ ಪರಮಮಾನವರಲ್ಲಿ ಹೃದಯಾಳದಲ್ಲಿ ಮೂಡಿ ಬಂದಿರುವ ಅಪೂರ್ವ ಸೃಷ್ಠಿಯಾಗಿದೆ”. ಈ ಮಾತುಗಳು ಈ ಸಂಗೀತ ಲೋಕದ ಪರಮಾಚಾರ್ಯರನ್ನು ಎಂತಹ ಪರಮೋಚ್ಚ ಪೀಠದಲ್ಲಿರಿಸಿ ಪೂಜಿಸುತ್ತಿದೆ ಎಂಬುದಕ್ಕೆ ಒಂದು ನಿದರ್ಶನವಾಗಿದೆ.

ಅಪೂರ್ವ ಶ್ಲೋಕ ಗಾಯನ

ವಾಸುದೇವಾಚಾರ್ಯರ ಶ್ಲೋಕ ಗಾಯನದ ಬಗೆಗೂ ಡಿ.ವಿ.ಜಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ: “ವಾಸುದೇವಾಚಾರ್ಯರ ಶ್ಲೋಕ ಗಾಯನದ ಸೊಗಸು ಅತಿಶಯವಾದದ್ದು. ಅದು ಗಾಯಕರಲ್ಲಿ ಅಷ್ಟು ಹೆಚ್ಚಾಗಿ ದೊರೆಯುವುದು ಅಸಾಧ್ಯವೆನಿಸುತ್ತದೆ. ಆ ಸೊಗಸಿನ ಹುಟ್ಟು ಅವರ ಸಂಸ್ಕೃತ ಸಾಹಿತ್ಯ ಪರಿಶ್ರಮದಿಂದ ಬಂದದ್ದು. ಅವರ ಸಂಸ್ಕೃತ ಪದೋಚ್ಚಾರಣೆ ಅಕ್ಷರ ಜ್ಞಾನದಿಂದ ಬಲಪಟ್ಟದ್ದು. ಅವರು ಪ್ರತಿಯೊಂದು ಸಂಸ್ಕೃತ ಪದದ ಭಾವವನ್ನೂ, ಅಕ್ಷರ ಭಾವವನ್ನೂ ಸಹ ಸ್ವತಃ ಅನುಭವಿಸಿ ನುಡಿಯುತ್ತಿದ್ದರು. ಅಕ್ಷರ ಅಕ್ಷರದಲ್ಲಿಯೂ ಗಮಕ; ಅಕ್ಷರ ಅಕ್ಷರಕ್ಕೂ ನಡುವೆ ಗಮಕ. ಒಮ್ಮೆ ರಾಮೋತ್ಸವದಲ್ಲಿ ಆಚಾರ್ಯರು ಹಾಡಿದ “ಶಂಕರ ಗುರುವರಮಹಿಮಾ...” ಎಂಬ ರಾಗಮಾಲಿಕೆ ಬೆಂಗಳೂರು ರಸಿಕ ಪ್ರಪಂಚವನ್ನೇ ಸೂರೆಗೊಂಡಿತು. ಆಗ ಎಲ್ಲಿ ಹೋದರೂ ಆ ಹಾಡಿಕೆಯ ಪ್ರಶಂಸೆಯೇ.”

ಒಮ್ಮೆ ಒಬ್ಬ ಸಂಸ್ಕೃತ ವಿದ್ವಾಂಸರು ಹಾಗೂ ಸಂಗೀತಾಭಿಮಾನಿಗಳೂ ಆದ ಮಿತ್ರರೊಬ್ಬರು ಆಗ್ರಹದಿಂದ “ಸ್ವಾಮೀ, ಸಂಗೀತದವರು ಸಂಸ್ಕೃತಕ್ಕೆ ಕೈ ಹಾಕಬಾರದು. ಅವರು ಅಕ್ಷರಗಳನ್ನು ಹಿಗ್ಗಾ ಮುಗ್ಗಾ ಎಳೆದು ವಿರೂಪಮಾಡಿ ಹಾಳುಮಾಡಿ ಬಿಡುತ್ತಾರೆ” ಎಂದರು. ಆ ವಿದ್ವಾಂಸರು ಕೆಲವು ದಿನಗಳ ನಂತರ ವಾಸುದೇವಾಚಾರ್ಯರ ಸಂಸ್ಕೃತ ಗೀತೆಗಳ ಹಾಡಿಕೆಯನ್ನು ಕೇಳಿದಾಗ ತಮ್ಮ ಹಳೆಯ ಅಭಿಪ್ರಾಯವನ್ನು ಸಂಪೂರ್ಣವಾಗಿ ತೊರೆದು “ಸಂಗೀತಕ್ಕೆ ತಕ್ಕ ಭಾಷೆಯೆಂದರೆ ಸಂಸ್ಕೃತ” ಎಂದು ಹೇಳಲಾರಂಭಿಸಿದರು.

‘ಇದು ವಾಸುದೇವಾಚಾರ್ಯರ ವಿಶೇಷ’ ಎಂದು ಮೇಲಿನ ಘಟನೆಯನ್ನು ಪ್ರಸ್ತಾಪಿಸುತ್ತಾ ಡಿವಿಜಿಯವರು “ಸಂಸ್ಕೃತದ ಅಕ್ಷರ ಸ್ವಭಾವ ಗ್ರಹಣ, ಶಬ್ಧ ಸ್ವರೂಪ ಗ್ರಹಣ, ಅದರ ಯಥಾವತ್ತಾದ ಪುನರುತ್ಪಾನ – ಇದು ಸಂಸ್ಕೃತ ಸಾಹಿತ್ಯ ಪಾಂಡಿತ್ಯದಿಂದ ವಾಸುದೆವಾಚಾರ್ಯರಿಗೆ ಬಂದಿದ್ದ ವೈಶಿಷ್ಟ್ಯ” ಎಂದು ಹೇಳಿ ಅಚಾರ್ಯರು ಸಂಸ್ಕೃತದಲ್ಲಿ ಹೊಂದಿದ್ದ ಘನ ಪಾಂಡಿತ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ.

ಸಾಹಿತ್ಯ ಮತ್ತು ಸಂಗೀತಗಳೆರಡರಲ್ಲೂ ಅಗ್ರಗಣ್ಯರು

ಮೈಸೂರು ವಾಸುದೇವಾಚಾರ್ಯರು ಸಾಹಿತ್ಯ ಸಂಗೀತಗಳೆರಡರಲ್ಲೂ ಗಟ್ಟಿಗರೆಂಬುದು ಅವರ ಸಮಕಾಲೀನ ವಿದ್ವನ್ಮಣಿಗಳಿಗೆಲ್ಲಾ ವಿದಿತವಾಗಿತ್ತು. ಗುಣಗ್ರಾಹಿಗಳಾದ ಬಿಡಾರಂ ಕೃಷ್ಣಪ್ಪನವರು ಪರಸ್ಥಳಗಳಿಗೆ ಹೋಗಿ ಕಛೇರಿಮಾಡಿ, ಶ್ರೋತೃಗಳಿಂದ ಮೆಚ್ಚುಗೆ ಪಡೆದಾಗ ಅವರು “ನನ್ನ ಸಂಗೀತವನ್ನು ಕೇಳಿಯೇ ಇಷ್ಟು ಅಚ್ಚರಿ ಪಡುತ್ತಿದ್ದೀರಿ; ತಲೆದೂಗುತ್ತಿದ್ದೀರಿ. ನೀವು ಕೇಳಲೇಬೇಕಾದ ನಿಜವಾದ ಸಂಗೀತ ಬೇರೊಂದಿದೆ. ನಮ್ಮ ಆಸ್ಥಾನದಲ್ಲಿ ಸಂಗೀತ ಸಾಹಿತ್ಯಗಳೆರಡರಲ್ಲೂ ನಿಸ್ಸೀಮರಾದ ಹಿರಿಯರೊಬ್ಬರಿದ್ದಾರೆ. ಅವರನ್ನೊಮ್ಮೆ ನೀವು ಬರಮಾಡಿಕೊಂಡು ಅವರ ಗಾನ ಪ್ರತಿಭೆಯ ಅನುಭವ ಪಡೆಯಿರಿ” ಎಂದು ವಾಸುದೇವಾಚಾರ್ಯರ ಬಗ್ಗೆ ಹೇಳುತ್ತಿದ್ದರು.

ಒಮ್ಮೆ ವೀಣೆ ಶೇಷಣ್ಣನವರ ಮನೆಯಲ್ಲಿ ವಾಸುದೇವಾಚಾರ್ಯರ ಸಂಗೀತ. ಅಂದು ಆಚಾರ್ಯರು ಆಗ ತಾನೇ ಮಾಡಿ ಮುಗಿಸಿದ್ದ ಖರಹರಪ್ರಿಯರಾಗದ “ಗಾನ ಸುಧಾರಸ” ಎಂಬ ತಮ್ಮ ಕೀರ್ತನೆಯನ್ನು ಹಿರಿಯರಲ್ಲಿ ಸಮರ್ಪಿಸುವ ಉದ್ದೇಶದಿಂದ ಹಾಡಿದರು. ಆ ಕೀರ್ತನೆಯಲ್ಲಿ ‘ತ್ಯಾಗರಾಜ’ ಮತ್ತು ‘ವಾಸುದೇವ’ ಎಂಬ ಅಂಕಿತಗಳಿದ್ದುದರಿಂದ ಶೇಷಣ್ಣ ಮತ್ತು ಕೃಷ್ಣಪ್ಪನವರಲ್ಲಿ ಅದು ತ್ಯಾಗರಾಜರದ್ದೋ ಅಥವಾ ಆಚಾರ್ಯರದ್ದೋ ಎಂಬ ವಿಷಯದಲ್ಲಿ ಸ್ವಲ್ಪ ಜಿಜ್ಞಾಸೆ ಉಂಟಾಗಿ, ಪರಿಹಾರವಾಗದೆ ಆಚಾರ್ಯರನ್ನೇ ಕೇಳಿದಾಗ “ತಮ್ಮ ಅನುಗ್ರಹದಿಂದ ಇದೇ ತಾನೇ ನನ್ನಿಂದ ದೇವರು ಮಾಡಿಸಿದ್ದು, ಲೋಪದೋಷಗಳೇನಿದ್ದರೂ ತಿದ್ದಿಕೊಳ್ಳಲು ಸಿದ್ಧನಿದ್ದೇನೆ” ಎಂದು ವಿನಮ್ರರಾಗಿ ನುಡಿದರು.

ಅದನ್ನು ಕೇಳಿದ ಶೇಷಣ್ಣನವರು ಆನಂದತುಂದಿಲರಾಗಿ “ಈ ಸಂಗೀತ ಕೇಳಿದ ಮೇಲೆ ನನಗೆ ಊಟ ಉಪಚಾರಗಳು ಯಾವುವೂ ಬೇಕಿಲ್ಲ. ನನ್ನ ಕೃಷ್ಣದೇವರ ಬಳಿ ನಾನು ಮಲಗುತ್ತೇನೆ” ಎಂದರು. ಆಚಾರ್ಯರಿಗೆ ಹಾರಹಾಕಲು ಇಬ್ಬರಲ್ಲೂ ಪೋಟಾಪೋಟಿ ನಡೆಯಿತು.

ವಾಸುದೇವಾಚಾರ್ಯರ ಕಾರ್ಯಕ್ಷೇತ್ರ ಮುಪ್ಪುರಿಗೊಂಡು – ವಾಗ್ಗೇಯಕಾರರಾಗಿ, ಗಾಯಕರಾಗಿ, ಸಾಹಿತಿಯಾಗಿ – ಮೂರು ದಿಕ್ಕಿನಲ್ಲಿ ಮುಂದುವರೆದಿತ್ತು. ಈ ಮೂರೂ ಕ್ಷೇತ್ರಗಳಲ್ಲೂ ಅವರ ಸಾಧನೆ ಗಮನಾರ್ಹವಾಗಿದ್ದರೂ, ಅವರ ಹೆಸರು ಬಹಳವಾಗಿ ವಿದ್ವತ್ ಜನರ ಬಾಯಿಯಲ್ಲಿ ಕೇಳಿ ಬರುವುದು “ವಾಗ್ಗೇಯಕಾರ ವಾಸುದೇವಾಚಾರ್ಯ” ಎಂದೇ.

ಆಚಾರ್ಯರ ಎರಡು ಕನ್ನಡ ಕೃತಿಗಳು

ಆಚಾರ್ಯರು ತಮ್ಮ 91ನೆಯ ಇಳಿ ವಯಸ್ಸಿನಲ್ಲಿ ಬರೆದ ‘ನಾ ಕಂಡ ಕಲಾವಿದರು’ ಎಂಬ ಅಪೂರ್ವ ಗ್ರಂಥದಲ್ಲಿ ಹೇಳಿಕೊಂಡಿರುವ (ಲೇಖಕನ ಮಾತು) ಕಳಕಳಿಯ ಈ ಮಾತುಗಳು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿವೆ.

“ನನಗೆ 90 ವರ್ಷಗಳು ತುಂಬಿ 91ನೆಯ ವರ್ಷ ಪ್ರಾರಂಭ. ಸುಮಾರು ನನ್ನ ಐದನೆಯ ವಯಸ್ಸಿನಲ್ಲಿ ನಾನು ‘ಸಪಸ’ ಕೂಗಿದ್ದು. ಅಲ್ಲಿಂದ ಇಲ್ಲಿಯ ತನಕ ಅಂದರೆ 85 ವರ್ಷಗಳ ಅವಧಿಯಲ್ಲಿ ಅನೇಕಾನೇಕ ಸುಪ್ರಸಿದ್ಧ ವಿದ್ವಾಂಸರುಗಳ ಸಂದರ್ಶನ ಪ್ರಾಪ್ತವಾಯಿತು ನನಗೆ. ಅವರಲ್ಲಿ ಕೆಲವರು ಗುರುಸ್ವರೂಪದವರು, ಮತ್ತೆ ಕೆಲವರು ಪರಮಮಿತ್ರರಾದವರು. ನನ್ನ ಜೀವನದ ಗುರಿ ಹಾಗೂ ಸಾಧನೆಗಳ ಮೇಲೆ ಈ ಮಹಾ ವ್ಯಕ್ತಿಗಳೆಲ್ಲಾ ಒಂದಲ್ಲ ಒಂದು ವಿಧದಲ್ಲಿ ಪ್ರಭಾವ ಬೀರಿದ್ದಾರೆ. ಹುಟ್ಟಿದ ದಿನವಾದ ಇಂದು ಅವರೆಲ್ಲರನ್ನೂ ಪೂಜ್ಯ ಭಾವನೆಯಿಂದಲೂ ಕೃತಜ್ಞತೆಯಿಂದಲೂ ಸ್ಮರಿಸಿಕೊಳ್ಳುವ ಉದ್ದೇಶದಿಂದ ಈ ಪುಟ್ಟ ಪುಸ್ತಕವನ್ನು ರೂಪಗೊಳಿಸಿದ್ದೇನೆ. ಇದೇ ಕನ್ನಡ ಬಂಧುಗಳಿಗೆ ನಾನು ನೀಡುತ್ತಿರುವ ಪ್ರಥಮ ಕಾಣಿಕೆ. ಆದ್ದರಿಂದ ಭಾಷೆ, ಶೈಲಿ, ವಿವರಣೆ ಮೊದಲಾದವುಗಳಲ್ಲಿ ನ್ಯೂನತೆಗಳು ಕಂಡು ಬರುವುದು ಸಹಜ. ವಾಚಕರು ಉದಾರ ಮನಸ್ಸಿನಿಂದ ವಿಷಯ ಗ್ರಹಣ ಮಾತ್ರ ಮಾಡಬೇಕಾಗಿ ಕೋರುತ್ತೇನೆ.”

ಆಚಾರ್ಯರು ತಮ್ಮ ಈ ಕೃತಿಯಲ್ಲಿ ಸಮಕಾಲೀನರಾದ ಹನ್ನೊಂದು ಮಂದಿ ಘನವೆತ್ತ ವಿದ್ವಾಂಸರ ಜೀವನ, ಸಿದ್ಧಿ ಸಾಧನೆಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅಚಾರ್ಯರು ಈ ಕೃತಿಯನ್ನು ಬರೆಯದೆ ಹೋಗಿದ್ದಿದ್ದರೆ ಎಷ್ಟೋ ಮಂದಿ ಅವರ ತಲೆಮಾರಿನ ಸಂಗೀತ ವಿದ್ವಾಂಸರ ಬಗೆಗೆ ಅನೇಕ ಅಪರೂಪದ ಸಂಗತಿಗಳು ದೊರೆಯದೇ ಹೋಗುತ್ತಿತ್ತು.

‘ನಾ ಕಂಡ ಕಲಾವಿದರು’ ಕೃತಿಯನ್ನು ಹೊರತಂದ ಐದು ವರ್ಷಗಳ ನಂತರ ಆಚಾರ್ಯರು ‘ನೆನಪುಗಳು’ ಎಂಬ ಮತ್ತೊಂದು ಕೃತಿಯನ್ನು ಸಿದ್ಧಪಡಿಸಿ ಅದನ್ನು ತಮ್ಮ ತೊಂಬತ್ತೇಳನೆ ಜನ್ಮ ದಿನೋತ್ಸವದ ನೆನಪಾಗಿ, ಕನ್ನಡಿಗರಿಗೆ ಅರ್ಪಿಸಬೇಕೆಂಬ ಹಿರಿಯಾಸೆಯಿಂದ ಇದ್ದರು. ಅವರ ಮೊಮ್ಮಕ್ಕಳ ಸಹಕಾರದಿಂದ ಆಚಾರ್ಯರ ಆಸೆಯೇನೋ ನೆರವೇರಿತು. ಆದರೆ ನೆನಪುಗಳು ಕೃತಿ ಪ್ರಕಟವಾದದ್ದನ್ನು ನೋಡುವ ಭಾಗ್ಯ ಆಚಾರ್ಯರಿಗೆ ಬರಲಿಲ್ಲ. ಅವರು ತಮ್ಮ 97ನೆಯ ಜನ್ಮದಿಂದ ಹಿಂದಿನ ದಿನ (ಮೇ ೧೭, ೧೯೬೧) ತಮ್ಮ ದೈನಂದಿನ ಕಾರ್ಯಕ್ರಮಗಳನ್ನೆಲ್ಲಾ ನೆರವೇರಿಸಿ, ‘ಇಂಥ ಪ್ರಭುವ ಕಾಣೆನೋ’ ಎಂಬ ದೇವರನಾಮವನ್ನು ಕೇಳುತ್ತಲೇ ಶಾಂತವಾಗಿ ಮರಣವನ್ನಪ್ಪಿದರು.

ಅವರ ಎರಡನೆಯ ಕೃತಿ ‘ನೆನಪುಗಳು’ ಎಂಬ ಕೃತಿಯಲ್ಲಿ ಆಚಾರ್ಯರಿಗೆ ಅರಮನೆಯ ಪ್ರವೇಶವಾದ ದಿನದಿಂದ ಹಿಡಿದು ಮುಂದೆ ಅವರು ಕೀರ್ತಿ ಶಿಖರವನ್ನು ಮುಟ್ಟಿದವರೆಗಿನ ಅನೇಕ ಚಿತ್ರಗಳಿವೆ. ಅಚಾರ್ಯರು ತಾವು ಕೆಲವು ಕೃತಿ ರಚನೆ ಮಾಡಲು ಕಾರಣವಾದ ಸನ್ನಿವೇಶಗಳನ್ನು ಇಲ್ಲಿ ಹೃದಯ ತುಂಬಿ ಬಣ್ಣಿಸಿದ್ದಾರೆ. ಗುರುಕುಲವಾಸದಲ್ಲಿ ಅವರಿಗೆ ಆದ ವಿನೂತನ ಅನುಭವಗಳ ಸೊಗಸನ್ನು ಸವಿಯಲು ಆಚಾರ್ಯರು ಬರೆದಿರುವ ‘ನಾ ಕಂಡ ಕಲಾವಿದರು’ ಕೃತಿಯಲ್ಲಿ ಬರುವ ‘ಪಟ್ನಂ ಸುಬ್ರಮಣ್ಯ ಅಯ್ಯರ್’ ಎಂಬ ನುಡಿ ಚಿತ್ರವನ್ನು ಓದಿಯೇ ನೋಡಬೇಕು.

ನಾನು ಬಂದ ಕೆಲಸವಾಯಿತು

ಆಚಾರ್ಯರು ನಿಧನರಾಗುವುದಕ್ಕೆ ಕೆಲವು ಘಂಟೆಗಳ ಮುಂಚೆ ಪಕ್ಕದಲ್ಲಿದ್ದ ಬೂದಲೂರು ಕೃಷ್ಣಮೂರ್ತಿ ಶಾಸ್ತ್ರಿಗಳನ್ನು ಸಮೀಪಕ್ಕೆ ಕರೆದು “ಶಾಸ್ತ್ರಿಗಳೇ! ನಾನು ಬಂದ ಕೆಲಸವಾಯಿತು. ನಾನಿನ್ನು ಹೋಗಿ ಬರುತ್ತೇನೆ. ನನ್ನ ಕೊನೆಯ ಒಂದು ಮಾತನ್ನು ನೀವು ನಡೆಸಿಕೊಡಬೇಕು. ಎಲ್ಲ ಸಂಗೀತ ವಿದ್ವಾಂಸರಿಗೂ – ಅವರು ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ನನ್ನ ನಮಸ್ಕಾರಗಳನ್ನು ತಿಳಿಸಬೇಕು. ಎಂದರೋ ಮಹಾನುಭಾವುಲು! ಎಲ್ಲರ ಆಶೀರ್ವಾದದ ಬಲದಿಂದ ಮುಂದಿನ ಜನ್ಮದಲ್ಲಾದರೂ ನನಗೆ ನಿಜವಾದ ಸಂಗೀತ ಬರುವಂತಾಗಬೇಕು” ಎಂದರು.

ಆಚಾರ್ಯರ ಈ ಮಾತುಗಳನ್ನು ಕೇಳಿದರೆ ಯಾರಿಗೇ ಆಗಲಿ ಹೃದಯ ಮಿಡಿದು, ಕಣ್ಣು ತೇವವಾಗುತ್ತದೆ. ಆಚಾರ್ಯರು ತಾವು ಬದುಕಿ ಬಾಳಿದ ತೊಂಬತ್ತು ವರ್ಷಗಳ ಬಾಳಿನಲ್ಲಿ ಸಾರ್ಥಕ ಜೀವನವನ್ನು ನಡೆಸಿದರು.

ಶ್ರೀಮದ್ ರಾಮಾಯಣದ ನೃತ್ಯ ನಾಟಕ ಸಂಯೋಜನೆ

ಶ್ರೀರಾಮ ಸಂಕೀರ್ತನದಿಂದ ಮೊದಲುಗೊಂಡು ನಡೆದು ಬಂದ ಆಚಾರ್ಯರ ಸಂಗೀತ ರಚನೆಯ ಕಾರ್ಯ ಇವರ ಇಳಿ ವಯಸ್ಸಿನಲ್ಲಿ ಶ್ರೀಮದ್ ರಾಮಾಯಣದ ನೃತ್ಯ ನಾಟಕ ಸಂಗೀತ ಸಂಯೋಜನೆಗೆ ಮೀಸಲಾಗಿತ್ತು – ಎನ್ನುವಂತಿದೆ. ‘ನನ್ನ ಜೀವನದ ಒಂಬತ್ತು ದಶಕಗಳನ್ನು ಹುಟ್ಟಿ ಬೆಳೆದ ಮೈಸೂರಿನಲ್ಲಿ ಕಳೆದು, ಆ ಬಳಿಕ ಮದ್ರಾಸಿಗೆ ತೆರಳಿ, ಈ ಮಹತ್ಕಾರ್ಯಗಳನ್ನು ಕೈಗೊಳ್ಳುತ್ತೇನೆಂಬುದನ್ನು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ’ ಎಂದು ಆಚಾರ್ಯರೇ ಹೇಳಿದ್ದಾರೆ. ಮದ್ರಾಸಿಗೆ ಆಚಾರ್ಯರನ್ನು ಅವರ ಇಳಿವಯಸ್ಸಿನಲ್ಲಿ ಬರಮಾಡಿಕೊಂಡು, ಅವರ ಸಂಗೀತ ಸಾರಾಮೃತದ ದಿವ್ಯ ಪಕ್ವ ಫಲವನ್ನು ಸಾರ್ಥಕ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬಯಸಿದ ಮಹನೀಯರಾದ ಟೈಗರ್ ವರದಾಚಾರ್ಯರನ್ನೂ, ತಮ್ಮನ್ನು ಹೆತ್ತ ತಂದೆಗಿಂತ ಹೆಚ್ಚು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಕಲಾಕ್ಷೇತ್ರದ ಶ್ರೀಮತಿ ರುಕ್ಮಿಣಿ ದೇವಿಯವರನ್ನೂ ಆಚಾರ್ಯರು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ. ಕಲಾಕ್ಷೇತ್ರದ ಉಪಯೋಗಕ್ಕೆಂದು ಕೆಲವು ನೃತ್ಯ ನಾಟಕಗಳನ್ನು ನುರಿತ ವಿದ್ವಾಂಸರಿಂದ ಮಾಡಿಸಬೇಕೆಂದು ಯೋಚಿಸಿದ್ದ ರುಕ್ಮಿಣಿ ದೇವಿಯವರು ಆಚಾರ್ಯರಿಗೆ ಇದ್ದ ರಾಮಾಯಣ ಪ್ರಸಂಗಗಳಲ್ಲಿಯ ಆಳವಾದ ಪಾಂಡಿತ್ಯ ಪ್ರತಿಭೆಗಳನ್ನು ಗಮನಿಸಿ ಶ್ರೀಮದ್ ರಾಮಾಯಣ ನೃತ್ಯ ನಾಟಕಕ್ಕೆ ಸಂಗೀತವನ್ನು ಅಳವಡಿಸುವಂತೆ ಆಚಾರ್ಯರನ್ನು ಆಹ್ವಾನಿಸಿದರು.

ಸುಮಾರು ಏಳು ವರ್ಷಗಳ ಕಾಲವನ್ನು ಈ ಮಹತ್ಕಾರ್ಯಕ್ಕಾಗಿ ವಿನಿಯೋಗಿಸಿ ಅದರಲ್ಲಿ ತಮ್ಮ ‘ಕಲ್ಪನಾ ಶಕ್ತಿ, ಪಾಂಡಿತ್ಯ, ಪ್ರತಿಭೆ ಮುಂತಾದುವುಗಳನ್ನೆಲ್ಲಾ ಬಳಸಿ, ಕೀರ್ತನೆಗಳಿಗೆ ಬಳಸದಿರುವ ಚಿತ್ತ ಭ್ರಮರಿ, ಶೂಲಿನಿ, ಧಾತು ವರ್ಧಿನಿ – ಮುಂತಾದ ಹತ್ತಾರು ಅಪರೂಪದ ರಾಗಗಳನ್ನು ಬಳಸಿ – ರಾಮಾಯಣ ನೃತ್ಯ ನಾಟಕದ ಪ್ರತಿಯೊಂದು ಭಾಗವೂ ಹೃದಯ ಸ್ಪರ್ಶಿಯಾಗಿ, ರಸಭಾವಪೂರ್ಣವಾಗಿರುವಂತೆ ಮಾಡಿದರು. ಒಂದೊಂದೂ ಸುಮಾರು ಮೂರು ಘಂಟೆಯ ಅವಧಿಯ ಆರು ಭಾಗಗಳಿದ್ದು ಅದರಲ್ಲಿ ಮೂರು ಭಾಗಗಳು ಆಚಾರ್ಯರು ಬದುಕಿರುವಾಗಲೇ ಪೂರ್ಣಗೊಂಡು ಪ್ರದರ್ಶಿತವಾದವು. ಅಚಾರ್ಯರು ಒಂದೊಂದು ಭಾಗದಲ್ಲೂ ಸುಮಾರು 70-80 ರಾಗಗಳನ್ನು ಬಳಸಿ, ರಂಜಿಸಿ, ಕಡೆಯ ಎರಡು ಭಾಗಗಳಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಅವರು ಜೀವನ್ಮುಕ್ತರಾದರು. ರಾಮಾಯಣ ನೃತ್ಯ ನಾಟಕ ಆಚಾರ್ಯರ ಅಪೂರ್ವ ಸಂಗೀತ ಜ್ಞಾನದ ಪೂರ್ಣ ಫಲ. ರುಕ್ಮಿಣಿ ದೇವಿಯವರ ಕೋರಿಕೆಯಂತೆ ಇವರ ಮೊಮ್ಮಗ ಎಸ್ ರಾಜರಾಮ್ ಕಲಾಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡರು. ರಾಮಾಯಣದ ನೃತ್ಯ ನಾಟಕ ಸಂಗೀತ ಸಂಯೋಜನೆಯ ಉಳಿದ ಕೆಲಸವನ್ನು ಎಸ್ ರಾಜಾರಾಮ್ ಮುಗಿಸಿದರು.

ಸಂಗೀತ ಕೃತಿಗಳು

ವಾಸುದೇವಾಚಾರ್ಯರು ಸುಮಾರು ೨೦೦ಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ವರ್ಣ,ಕೃತಿ,ಜಾವಳಿ, ರಾಗಮಾಲಿಕೆ, ತಿಲ್ಲಾನ ಮೊದಲಾದ ಹಲವು ಪ್ರಕಾರಗಳೂ ಸೇರಿವೆ.ತಮ್ಮ ರಚನೆಗಳಿಗೆ ವಾಸುದೇವಾಚಾರ್ಯರು ಹೆಚ್ಚಾಗಿ ಸಂಸ್ಕೃತ ಹಾಗೂ ತೆಲುಗು ಭಾಷೆಗಳನ್ನು ಬಳಸಿದ್ದಾರೆ. ತಮ್ಮ ರಚನೆಗಳಲ್ಲಿ ವಾಸುದೇವ ಅನ್ನುವ ಅಂಕಿತವನ್ನು (ಸ್ಬನಾಮಮುದ್ರೆ) ಉಪಯೋಗಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಕರುಣಿಸೌ ತಾಯೆ ಎಂಬ ಸರಸ್ವತಿ ಮನೋಹರಿ ರಾಗ ಕೃತಿಯನ್ನು ರಚಿಸಿದ್ದಾರೆ. ಬ್ರೋಚೇ ವಾರ ವರೇ (ಖಮಾಸ್ ರಾಗ), ದೇವಾದಿ ದೇವ ( ಸುನಾದವಿನೋದಿನಿ ರಾಗ), ಮಾಮವತು ಶ್ರೀ ಸರಸ್ವತಿ (ಹಿಂದೋಳ ರಾಗ), ಭಜರೇ ಮಾನಸ (ಅಭೇರಿ ರಾಗ), ರಾ ರಾ ರಾಜೀವ ಲೋಚನ ರಾಮ (ಮೋಹನ ರಾಗ) ಮೊದಲಾದ ಕೃತಿಗಳು ಬಹಳ ಜನಪ್ರಿಯವಾಗಿವೆ.

ವಾಸುದೇವಾಚಾರ್ಯರು ತಮ್ಮ ಹಿಂದಿನ ಪೀಳಿಗೆಯ ವಾಗ್ಗೇಯಕಾರರು ಹೆಚ್ಛಾಗಿ ರಚನೆಗಳನ್ನು ಮಾಡದಿದ್ದ ಸಿಂಹೇಂದ್ರ ಮಧ್ಯಮ,ಧರ್ಮವತಿ, ನಾಟಕಪ್ರಿಯ, ರಿಷಭಪ್ರಿಯ ಮೊದಲಾದ ಮೇಳರಾಗಗಳಲ್ಲಿ ರಚನೆಗಳನ್ನು ಮಾಡಿ, ಆ ರಾಗಗಳಿಗೆ ಒಳ್ಳೆ ಲಕ್ಷ್ಯವನ್ನು ಕಲ್ಪಿಸಿಕೊಟ್ಟರು.

ಕೃತಿ ರಾಗ ತಾಳ ಭಾಷೆ ಯೂ ಟ್ಯೂಬ್ ಕೊಂಡಿ
ಬ್ರೋಚೇ ವಾರ ಖಮಾಸ್ ಆದಿ ತೆಲುಗು

ಬಾಲ ಮುರಳಿ ಕೃಷ್ಣ - https://www.youtube.com/watch?v=T_waxWH_be0

ಶ್ರೀ ಚಾಮುಂಡೇಶ್ವರಿ ಬಿಲಹರಿ ಆದಿ ಸಂಸ್ಕೃತ

ಎಮ್ ಎಸ್ ಸುಬ್ಬಲಕ್ಷ್ಮಿ - https://www.youtube.com/watch?v=rvZw70p4XPY

ಮಾಮವತು ಶ್ರೀ ಸರಸ್ವತಿ ಹಿಂದೋಳ ಆದಿ ಸಂಸ್ಕೃತ

ಸುಧಾ ರಘುನಾಥನ್ - https://www.youtube.com/watch?v=a_-UV1mLZug

ರಾ ರಾ ರಾಜೀವ ಲೋಚನ ರಾಮ' ಮೋಹನ ಆದಿ ತೆಲುಗು

ಮಹಾರಾಜ ಪುರಂ ಸಂತಾನಂ - https://www.youtube.com/watch?v=P-O8UCFBx4A

ಭಜ ರೇ ಮಾನಸ' ಅಭೇರಿ ಆದಿ ಸಂಸ್ಕೃತ

ರಂಜನಿ ಹೆಬ್ಬಾರ್ - https://www.youtube.com/watch?v=goW_vixNkKE

ಮೈಸೂರು ಆಸ್ಥಾನದಲ್ಲಿ

ವಾಸುದೇವಾಚಾರ್ಯರು ಮೈಸೂರಿನ ಅರಮನೆಯಲ್ಲಿ ದೀರ್ಘಕಾಲ ಆಸ್ಥಾನ ವಿದ್ವಾಂಸರಾಗಿದ್ದವರು. ಕಡೆಯ ಅರಸರಾದ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಸಂಗೀತ ಗುರುಗಳೂ ಆಗಿದ್ದರು. ನಂತರ, ಒಡೆಯರು ತಾವೇ ಸಂಗೀತರಚನೆಗಳನ್ನು ಮಾಡುವಾಗ,ಮೊದಲಿಗೆ ಅವರು ಅದನ್ನು ವಾಸುದೇವಾಚಾರ್ಯರಿಗೆ ಕೇಳಿಸಿ, ನಂತರ,ಅವರ ಅಭಿಪ್ರಾಯವನ್ನು ಕೇಳಿ ಅಗತ್ಯವಿದ್ದರೆ ರಚನೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುತ್ತಿದ್ದರಂತೆ.

ಮಾಹಿತಿ ಕೃಪೆ

ಡಾ. ಕೆ. ಶ್ರೀಕಂಠಯ್ಯನವರ ‘ಸಂಗೀತ ಕಲೋಪಾಸಕರು’ ಕೃತಿಯಲ್ಲಿರುವ ಮೈಸೂರು ವಾಸುದೇವಾಚಾರ್ಯರ ಕುರಿತಾದ ಲೇಖನ

Tags:

ಮೈಸೂರು ವಾಸುದೇವಾಚಾರ್ಯ ಭಾವ ಸಂಗೀತಮೈಸೂರು ವಾಸುದೇವಾಚಾರ್ಯ ಅಪೂರ್ವ ಶ್ಲೋಕ ಗಾಯನಮೈಸೂರು ವಾಸುದೇವಾಚಾರ್ಯ ಸಾಹಿತ್ಯ ಮತ್ತು ಸಂಗೀತಗಳೆರಡರಲ್ಲೂ ಅಗ್ರಗಣ್ಯರುಮೈಸೂರು ವಾಸುದೇವಾಚಾರ್ಯ ಆಚಾರ್ಯರ ಎರಡು ಕನ್ನಡ ಕೃತಿಗಳುಮೈಸೂರು ವಾಸುದೇವಾಚಾರ್ಯ ನಾನು ಬಂದ ಕೆಲಸವಾಯಿತುಮೈಸೂರು ವಾಸುದೇವಾಚಾರ್ಯ ಶ್ರೀಮದ್ ರಾಮಾಯಣದ ನೃತ್ಯ ನಾಟಕ ಸಂಯೋಜನೆಮೈಸೂರು ವಾಸುದೇವಾಚಾರ್ಯ ಸಂಗೀತ ಕೃತಿಗಳುಮೈಸೂರು ವಾಸುದೇವಾಚಾರ್ಯ ಮೈಸೂರು ಆಸ್ಥಾನದಲ್ಲಿಮೈಸೂರು ವಾಸುದೇವಾಚಾರ್ಯ ಮಾಹಿತಿ ಕೃಪೆಮೈಸೂರು ವಾಸುದೇವಾಚಾರ್ಯಕರ್ನಾಟಕಕರ್ನಾಟಕ ಸಂಗೀತತ್ಯಾಗರಾಜಮೇ ೧೭ಮೇ ೨೮೧೮೬೫೧೯೬೧

🔥 Trending searches on Wiki ಕನ್ನಡ:

ಧರ್ಮವಾಲಿಬಾಲ್ಅಮೇರಿಕ ಸಂಯುಕ್ತ ಸಂಸ್ಥಾನಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಶೈಕ್ಷಣಿಕ ಸಂಶೋಧನೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಜೀವಕೋಶದಾಸ ಸಾಹಿತ್ಯಮುಖ್ಯ ಪುಟರಾಘವಾಂಕಜಯಂತ ಕಾಯ್ಕಿಣಿಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಕ್ರೈಸ್ತ ಧರ್ಮರೋಸ್‌ಮರಿಮೈಸೂರು ಅರಮನೆಸ್ಕೌಟ್ಸ್ ಮತ್ತು ಗೈಡ್ಸ್ವಿಜಯನಗರಪೂರ್ಣಚಂದ್ರ ತೇಜಸ್ವಿಸೆಸ್ (ಮೇಲ್ತೆರಿಗೆ)ಕಾಳಿದಾಸಕ್ರೀಡೆಗಳುಪಂಪಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುವ್ಯಾಪಾರ ಸಂಸ್ಥೆಗೋತ್ರ ಮತ್ತು ಪ್ರವರರೈತವಾರಿ ಪದ್ಧತಿಜಿ.ಪಿ.ರಾಜರತ್ನಂದಾಳಿಂಬೆಇಂಡಿಯನ್ ಪ್ರೀಮಿಯರ್ ಲೀಗ್ತೆನಾಲಿ ರಾಮ (ಟಿವಿ ಸರಣಿ)ಶಬರಿರಕ್ತದೊತ್ತಡಬಹಮನಿ ಸುಲ್ತಾನರುಶಿಶುಪಾಲಅಯೋಧ್ಯೆವಿಜ್ಞಾನಭಾರತದಲ್ಲಿನ ಚುನಾವಣೆಗಳುಬೌದ್ಧ ಧರ್ಮಜಯಪ್ರಕಾಶ ನಾರಾಯಣಚಂಡಮಾರುತಕನಕದಾಸರುಕರ್ನಾಟಕದ ನದಿಗಳುಶಿಕ್ಷಕಛಂದಸ್ಸುಸಾಲುಮರದ ತಿಮ್ಮಕ್ಕಉತ್ತರ ಕನ್ನಡವಿದ್ಯಾರಣ್ಯಜಾನಪದಕಲ್ಯಾಣ್ಹಲ್ಮಿಡಿ ಶಾಸನಅಷ್ಟ ಮಠಗಳುಬೆಳಗಾವಿರಗಳೆಭಾರತದ ಮುಖ್ಯಮಂತ್ರಿಗಳುನಾರುರುಡ್ ಸೆಟ್ ಸಂಸ್ಥೆಕೊಡಗುರಾಶಿಅಳಿಲುಅಮೃತಧಾರೆ (ಕನ್ನಡ ಧಾರಾವಾಹಿ)ಅಳತೆ, ತೂಕ, ಎಣಿಕೆಸಹಕಾರಿ ಸಂಘಗಳುಭಗವದ್ಗೀತೆವಿಜಯ್ ಮಲ್ಯಕೇಶಿರಾಜಭಾರತದ ಆರ್ಥಿಕ ವ್ಯವಸ್ಥೆನಾಗಸ್ವರಋತುಮಾನವ ಸಂಪನ್ಮೂಲ ನಿರ್ವಹಣೆಒಕ್ಕಲಿಗಭಾರತದಲ್ಲಿ ತುರ್ತು ಪರಿಸ್ಥಿತಿಯಮರಾಹುಲ್ ಗಾಂಧಿಅವತಾರಮೈಗ್ರೇನ್‌ (ಅರೆತಲೆ ನೋವು)ಗುರುರಾಜ ಕರಜಗಿಅಕ್ಷಾಂಶ ಮತ್ತು ರೇಖಾಂಶಮೈಸೂರು ಮಲ್ಲಿಗೆ🡆 More