ತಂಜಾವೂರು ತಮಿಳುನಾಡಿನ ಒಂದು ಐತಿಹಾಸಿಕ ಪಟ್ಟಣ.
ಇದು ಇತಿಹಾಸ ಕಾಲದಿಂದಲೂ ಚೋಳರು, ಪಾಂಡ್ಯರು,ವಿಜಯನಗರ ಸಾಮ್ರಾಜ್ಯ, ನಾಯಕರು ಮತ್ತು ಮರಾಠ ರಿಂದ ಆಳಲ್ಪಟ್ಟಿತ್ತು. ಇದು ದಕ್ಷಿಣ ಭಾರತದಲ್ಲಿ ಧರ್ಮ,ಕಲೆ ಹಾಗೂ ಶಿಲ್ಪಕಲೆಯ ಅತ್ಯಂತ ದೊಡ್ಡ ಕೇಂದ್ರವಾಗಿದೆ.ಇಲ್ಲಿರುವ ಬೃಹದೀಶ್ವರ ದೇವಾಲಯ ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ತಂಜಾವೂರು ಶಿಲ್ಪಕಲೆ ಎಂಬ ಪ್ರಕಾರವೇ ಇಲ್ಲಿ ಬೆಳೆದು ಬಂದಿದೆ.
ದಕ್ಷಿಣಭಾರತದ ಪ್ರಭಾ ದೇಗುಲಗಳನ್ನು ನೆನಪಿಸಿಕೊಂಡಾಕ್ಷಣ ನೆನಪಾಗುವುದು ತಮಿಳ್ನಾಡಿನ ತಂಜಾವೂರಿನ ಬೃಹದೀಶ್ವರ ದೇವಾಲಯ. ನೀವು ಕಲಾರಸಿಕರಾಗಿದ್ದರೆ, ಈ ಸುಂದರ ದೇಗುಲವನ್ನೊಮ್ಮೆ ಕಣ್ತುಂಬಿಕೊಳ್ಳಲೇಬೇಕು.
ಕ್ರಿ. ಶ. 1010ರಲ್ಲಿ ಒಂದನೇ ರಾಜರಾಜ ಚೋಳನು ನಿರ್ಮಿಸಿದ ದೇಗುಲ ಇದಾಗಿದೆ. ಮೊದಲು ರಾಜನು ಪರಶಿವನನ್ನು ಪೂಜಿಸಲು ತಿರುವರೂರಿಗೆ ತೆರಳುವ ಅನಿವಾರ್ಯತೆ ಇತ್ತಂತೆ. ಹಾಗಾಗಿ ತಂಜಾವೂರಿನಲ್ಲಿಯೇ ದೇಗುಲ ನಿರ್ಮಿಸುವ ಅಭಿಲಾಷೆ ಹೊಂದಿ, ಇಲ್ಲಿ ಬೃಹತ್ ಲಿಂಗವನ್ನು ಪ್ರತಿಷ್ಠಾಪಿಸಿದನು ಎಂಬ ಪ್ರತೀತಿ ಇದೆ. ತುಮಿನಾಡಿನಲ್ಲಿ ಇದು "ದಕ್ಷಿಣ ಮೇರು' ಎಂದೇ ಪ್ರಸಿದ್ಧಿ ಹೊಂದಿದೆ.
ದ್ರಾವಿಡ ಶೈಲಿಯ ಈ ದೇಗುಲದ ವಾಸ್ತುಶಿಲ್ಪಿ ಕುಂಜರ ಮಲ್ಲನ್ ರಾಜ ರಾಜ ಪೆರುಂತಚನ್. ದೇಗುಲದ ವಾಸ್ತು ಶಿಲ್ಪವನ್ನು ಪ್ರಸಿದ್ಧ ಗ್ರಂಥಗಳಾದ ವಾಸ್ತು ಶಾಸ್ತ್ರ ಮತ್ತು ಆಗಮ ಶಾಸ್ತ್ರ ವನ್ನಾಧರಿಸಿ ನಿರ್ಮಿಸಲಾಗಿದೆಯಂತೆ. ದೇಗುಲದ ನಿರ್ಮಾಣಕ್ಕೆ ಅಂಗುಲ ಪ್ರಮಾಣವನ್ನು ಬಳಸುತ್ತಿದ್ದರಂತೆ.
16ನೇ ಶತಮಾನದಲ್ಲಿ ದೇಗುಲದ ಸುತ್ತಲೂ ನಿರ್ಮಿಸಿರುವ ಆವರಣ ಗೋಡೆ ಹಾಗೂ ಕಂದಕಗಳು ಭದ್ರತಾ ವ್ಯವಸ್ಥೆಯನ್ನು ಸಾರುತ್ತವೆ.
ಇಡೀ ದೇಗುಲವನ್ನು ಸುಮಾರು ಐದು ವರ್ಷಗಳ (ಕ್ರಿ.ಶ.1004 ರಿಂದ 1009) ಅವಧಿಯಲ್ಲಿ ಸಂಪೂರ್ಣವಾಗಿ ಶಿಲಾಮಯವಾಗಿಯೇ ನಿರ್ಮಾಣ ಮಾಡಲಾಗಿದೆ. ದೇಗುಲದ ಸುಮಾರು 16 ಅಡಿಗಳಷ್ಟು ಎತ್ತರದ ಪಂಚಾಂಗದಲ್ಲಿ ದೇವತೆಗಳ ಹಾಗೂ ನಟರಾಜನ ಗಣಗಳ ಕೆತ್ತನೆಗಳನ್ನು ಕಾಣಬಹುದು. ಗೋಪುರದ ಶಿಖರದಲ್ಲಿರುವ ಕಲಶವು 81.284 ಟನ್ಗಳಷ್ಟು ತೂಕದ್ದು, 8 ಶಿಲೆಗಳ ಜೋಡಣೆಯಿಂದ ನಿರ್ಮಾಣಗೊಂಡಿದೆ. ಇಲ್ಲಿನ ಒಂದೊಂದು ಕಲಾಕುಸುರಿಗಳು ಶಿಲ್ಪಿಯ ಕಲಾನೈಪುಣ್ಯತೆಯನ್ನು ಸಾರುತ್ತವೆ. ಅಂದಿನ ಕಾಲದಲ್ಲಿ ಯಾವುದೇ ಆಧುನಿಕ ಯಂತ್ರಗಳ ನೆರವಿಲ್ಲದೇ ಈ ಶಿಖರದ ನಿರ್ಮಾಣವನ್ನು ಸುಮಾರು 6.5 ಕಿ.ಮೀ.ನಷ್ಟು ಉದ್ದದ ವರೆಗೆ ಮಣ್ಣಿನ ಇಳಿಜಾರನ್ನು ಕೃತಕವಾಗಿ ರಚಿಸುವ ಮೂಲಕ ಮಾಡಲಾಗಿರುವುದು ವೈಶಿಷ್ಟ್ಯವೇ ಸರಿ!
ಏಕಶಿಲೆಯಲ್ಲಿ ನಿರ್ಮಿಸಲ್ಪಟ್ಟಿರುವ ಕೃಷ್ಣ ವರ್ಣದ ಬೃಹತ್ ನಂದಿಯು ಎರಡು ಮೀ. ಎತ್ತರ, ಆರು ಮೀ. ಉದ್ದ, ಎರಡೂವರೆ ಮೀಟರ್ ಅಗಲ ಹಾಗೂ 20 ಟನ್ ಭಾರ ಉಳ್ಳ¨ªಾಗಿರುತ್ತದೆ. ಗರ್ಭಗುಡಿಯೊಳಗೆ ವಿರಾಜಮಾನನಾಗಿರುವ, 3.7 ಮೀ. ಎತ್ತರದ ಲಿಂಗರೂಪಿ ಶಿವನಿಗೆ ರಜತ ಕವಚದ ಪಂಚ ಹೆಡೆಯ ಶೇಷನ ಆಶ್ರಯ. ಈಶಾನ್ಯದಲ್ಲಿ 18 ಅಡಿ ಎತ್ತರದ ಬೃಹನ್ನಾಯಕಿ(ಪಾರ್ವತಿ)ಯೂ ಆಸೀನಳಾಗಿ¨ªಾಳೆ.
ಅಲ್ಲದೆ, ಚಂಡಿಕೇಶ್ವರಿ, ವರಾ ಅಮ್ಮನ್, ಗಣಪತಿ, ಮಯೂರನ ಮೇಲೆ ಕುಳಿತಿರುವ ಸುಬ್ರಹ್ಮಣ್ಯನ ದರುಶನವೂ ನಮಗಾಗುತ್ತದೆ.
ಅಷ್ಟ ದಿಕಾ³ಲಕರಾದ ಇಂದ್ರ, ಅಗ್ನಿ, ಯಮ, ನಿರುತಿ, ವರುಣ, ವಾಯು, ಕುಬೇರ, ಈಶಾನರ ಮೂರ್ತಿಗಳು ಸ್ಥಾಪಿಸಲ್ಪಟ್ಟ ಬಹು ಅಪರೂಪದ ದೇವ ಸನ್ನಿಧಿ ಇದಾಗಿದೆ. ಗೋಡೆಗಳಲ್ಲಿ ತಮಿಳುನಾಡಿನ ಸಾಂಪ್ರದಾಯಿಕ ಕಲೆಯಾದ ಭರತನಾಟ್ಯದ 108 ಕರಣಗಳನ್ನು ಶಿಲೆಯಲ್ಲಿ ಕೆತ್ತಲಾಗಿದೆ. ಇವುಗಳು ಚೋಳ ಮನೆತನದ ಕಲಾಸಕ್ತಿಯನ್ನೂ, ಸಿರಿವಂತಿಕೆಯನ್ನೂ ಬಿಂಬಿಸುತ್ತವೆ.
2010ರಲ್ಲಿ ಈ ದೇಗುಲವು ತನ್ನ ಸಾವಿರ ವರ್ಷಗಳ ಇತಿಹಾಸವನ್ನು ಪೂರೈಸಿದ್ದು, ಆ ಸುಸಂದರ್ಭದಲ್ಲಿ ತಮಿಳುನಾಡು ಸರಕಾರವು ಭರತನಾಟ್ಯ ಯಜ್ಞ ಎಂಬ ವಿಶಿಷ್ಟ ನೃತ್ಯ ಕಲಾ ಪ್ರದರ್ಶನವನ್ನು ಹೆಸರಾಂತ ಕಲಾವಿದರಾದ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಂದ ಏರ್ಪಡಿಸಿತ್ತು. ಸಾವಿರ ವರ್ಷಗಳ ಇತಿಹಾಸವನ್ನು ಬಿಂಬಿಸಲು ಮುಂಬಯಿ, ಪುಣೆ, ತಮಿಳ್ನಾಡು, ಆಂಧ್ರ, ಕರ್ನಾಟಕ, ಕೇರಳ, ಸಿಂಗಾಪುರ, ಮಲೇಶಿಯಾ ಹೀಗೆ ದೇಶ ವಿದೇಶದ ಒಟ್ಟು 1000 ಕಲಾವಿದರು ನೃತ್ಯ ಪದರ್ಶನ ನೀಡಿ, ಈ ಪುಟ್ಟ ನಗರವನ್ನು "ಸಾಂಸ್ಕೃತಿಕ ರಾಜಧಾನಿ'ಯನ್ನಾಗಿ ಮಾರ್ಪಡಿಸಿದ್ದರು.
ಯುನೆಸ್ಕೋದ ವರ್ಲ್ಡ್ ಹೆರಿಟೇಜ್ ಸೈಟ್ನಲ್ಲಿ ಗ್ರೇಟ್ ಲಿಂಗ್ ಚೋಳ ಟೆಂಪಲ್ ಎಂಬ ಬಿರುದಾಂಕಿತವನ್ನು ಹೊಂದಿರುವುದು ಹೆಮ್ಮೆಯ ಸಂಗತಿ.
ಹೀಗೆ ಹೋಗಬಹುದು: ಬೆಂಗಳೂರಿನಿಂದ ತಂಜಾವೂರಿಗೆ 415 ಕಿ.ಮೀ. ದೂರ. ಸನಿಹದ ಪ್ರೇಕ್ಷಣೀಯ ಸ್ಥಳಗಳಾದ ಧರಸುರಂ(34 ಕಿ.ಮೀ.), ಚಿದಂಬರಂ(110 ಕಿ. ಮೀ.) ಕೂಡಾ ವೀಕ್ಷಿಸಿ ಬರಬಹುದು.
http://www.udayavani.com/kannada/news/%E0%B2%B8%E0%B2%BE%E0%B2%AA%E0%B3%8D%E0%B2%A4%E0%B2%BE%E0%B2%B9%E0%B2%BF%E0%B2%95-%E0%B2%B8%E0%B2%82%E0%B2%AA%E0%B2%A6/73186/%E0%B2%8A%E0%B2%B0%E0%B3%86%E0%B2%82%E0%B2%A6%E0%B2%B0%E0%B3%86-%E0%B2%A4%E0%B2%82%E0%B2%9C%E0%B2%BE%E0%B2%B5%E0%B3%82%E0%B2%B0%E0%B3%81 Archived 2015-06-16 ವೇಬ್ಯಾಕ್ ಮೆಷಿನ್ ನಲ್ಲಿ.
This article uses material from the Wikipedia ಕನ್ನಡ article ತಂಜಾವೂರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.