ದತ್ತಾತ್ರೆಯ ವಾಮನ ಬೇಂದ್ರೆ (ಜುಲೈ ೨೮, ೧೯೩೫ - ಸೆಪ್ಟೆಂಬರ್ ೨೮, ೨೦೧೬) ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಲೋಕದಲ್ಲಿ ಗಣ್ಯರಾಗಿದ್ದಾರೆ.
ಇವರು ವರಕವಿ ದ. ರಾ. ಬೇಂದ್ರೆಯವರ ಪುತ್ರ.
ವಾಮನ ದತ್ತಾತ್ರೆಯ ಬೇಂದ್ರೆ | |
---|---|
ಜನನ | ಜುಲೈ ೨೮, ೧೯೩೫ ಹಾವೇರಿ ಜಿಲ್ಲೆಯ ರಾಣಿ ಬೆನ್ನೂರು |
ಮರಣ | ೨೮ ಸೆಪ್ಟೆಂಬರ್ ೨೦೧೬ |
ವೃತ್ತಿ | ಪ್ರಾಧ್ಯಾಪಕರು, ಸಾಹಿತಿಗಳು |
ವಿಷಯ | ಕನ್ನಡ ಸಾಹಿತ್ಯ |
ಅತ್ಯುತ್ತಮ ಪ್ರಾಧ್ಯಾಪಕರೂ, ಸಾಹಿತಿಗಳೂ ಆದ ವಾಮನ ಬೇಂದ್ರೆಯವರು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ ಜುಲೈ ೨೮, ೧೯೩೫ರ ವರ್ಷದಲ್ಲಿ ಜನಿಸಿದರು. ತಂದೆ ವರಕವಿ ದ.ರಾ.ಬೇಂದ್ರೆ ಅವರು, ತಾಯಿ ಲಕ್ಷ್ಮೀಬಾಯಿಯವರು. ಅವರ ಪ್ರಾರಂಭಿಕ ಶಿಕ್ಷಣ ಗದಗದಲ್ಲಿ ನೆರವೇರಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿ ಪಡೆದ ವಾಮನ ಬೇಂದ್ರೆಯವರು, ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ - ಒಂದು ಅಧ್ಯಯನ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು.
ವಾಮನ ಬೇಂದ್ರೆಯವರು ಉದ್ಯೋಗ ಪ್ರಾರಂಭಿಸಿದ್ದು ಸಾಂಗ್ಲಿಯ ವೆಲ್ಲಿಂಗ್ಡನ್ ಕಾಲೇಜಿನಲ್ಲಿ. ನಂತರ ಧಾರವಾಡದ ವಿದ್ಯಾರಣ್ಯ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕಿಟಲ್ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು.
ವಾಮನ ಬೇಂದ್ರೆಯವರಿಗೆ ಸಾಹಿತ್ಯ ರಚನೆ ತಂದೆಯಿಂದ ಬಂದ ಬಳುವಳಿ. ಶಾಲೆಯಲ್ಲಿದ್ದಾಗಲೇ ಅವರ ಬರವಣಿಗೆ ಪ್ರಾರಂಭಗೊಂಡಿತು. ಇಂಟರ್ ಮೀಡಿಯೆಟ್ ಓದುತ್ತಿದ್ದಾಗಲೇ ಪ್ರಬಂಧ, ನಾಟಕ ರಚನೆಯಲ್ಲಿ ಸಮರ್ಥರಾಗಿದ್ದ ಅವರು, ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿಭಾಷೆಗಳ ಮೇಲಣ ಪ್ರಭುತ್ವ ಸಾಧಿಸಿದ್ದರಲ್ಲದೆ, ಸಂಗೀತ, ನಾಟಕ, ಭಾಷಣ ಮುಂತಾದ ಕಲೆಗಳನ್ನು ಸಹಾ ತಮ್ಮ ಹವ್ಯಾಸವಾಗಿರಿಸಿಕೊಂಡಿದ್ದರು.
ವಾಮನ ಬೇಂದ್ರೆಯವರ ಮೊದಲ ಕವನ ಮೊದಲ ತೊದಲು. ನಂತರ ಅನಂತಧಾರೆ, ಸ್ಪಂದನ ಪ್ರಕಟಗೊಂಡವು. ಸೊಂಡಿಲ ಗಣಪ್ಪ ಬಂದ, ಸ್ಪರ್ಶ ಹಾಗೂ ಇತರ ನಾಟಕಗಳೂ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆ ಮಾಡಿದರು. ಕುಶಲಕವಿ ಲಕ್ಷ್ಮೀಶ, ಲಕ್ಷ್ಮೀಶ ಕವಿ-ಕಾವ್ಯ ಪರಂಪರೆ, ಲಕ್ಷ್ಮೀಶ : ಒಂದು ಅಧ್ಯಯನ, ಬೇಂದ್ರೆ ಕಾವ್ಯಲೋಕ, ಬೇಂದ್ರೆ ಬೆಳಕು, ಕವಿಚೂತವನ ಚೈತ್ರ ಲಕ್ಷ್ಮೀಶ, ದ.ರಾ.ಬೇಂದ್ರೆ ಜೀವನ ಪರಿಚಯ ಮುಂತಾದವು ವಾಮನ ಬೇಂದ್ರೆಯವರ ಹಲವು ಕಥನಗಳು. ಇದಲ್ಲದೆ ಕುಣಿಯೋಣ ಬಾರ, ಅಂಬಿಕಾತನಯ ಹಾಡs ಬೆಳದಿಂಗಳ ನೋಡs, ನೋಡ್ಯಾನs ದಶಾವತಾರ, ಅಂಬಿಕಾತನಯ ಹಾಡ್ಯಾನs, ಕನ್ನಡಕ್ಕೆ ಕಿಟೆಲ್ ಕೊಡುಗೆ, ನಾಳಿನ ಕನಸು, ಚೈತನ್ಯದ ಪೂಜೆ, ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ತ್ವ, ಸಿದ್ಧಾಂತ, ಬೇಂದ್ರೆ ಋತುದರ್ಶನ, ಬೇಂದ್ರೆ ಸಮಗ್ರ ಕಾವ್ಯ ಸಂಪುಟ, ಬೇಂದ್ರೆಯವರ ಜೀವನ ಮಹಾಕಾವ್ಯ ‘ಔದುಂಬರ ಗಾಥೆ’ ಮುಂತಾದ ಕೃತಿಗಳನ್ನು ವಾಮನ ಬೇಂದ್ರೆಯವರು ಸಂಪಾದಿಸಿದರು. ಅವರ ಭಾಷಾಂತರಗಳೆಂದರೆ ಗುರುಗೋವಿಂದ ಸಿಂಗ, ಭಾರತೀಯ ಸಾಹಿತ್ಯ ಸಂಕಲನ, ಕಾಲಾಯ ತಸ್ಮೈನಮಃ, ಜಾನಪದ ಸಾಹಿತ್ಯ, ಸಮರ್ಥ ರಾಮದಾಸ ಹಾಗೂ ಸ್ವಾಮಿ ವಿವೇಕಾನಂದ ಮುಂತಾದವು. ಇದಲ್ಲದೆ ಅವರು ಬೇಂದ್ರೆಯವರ ಕವನಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದಾರೆ.
ವಾಮನ ಬೇಂದ್ರೆಯವರ ‘ಅನಂತಧಾರೆ’ ಕವನ ಸಂಕಲನಕ್ಕೆ ಮುನ್ನುಡಿಯಲ್ಲಿ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಹೀಗೆ ಗುರುತಿಸುತ್ತಾರೆ: “ಸಾಧನಕೇರಿಯ ‘ಶ್ರೀಮಾತಾ’ದಲ್ಲಿ ದ ರಾ ಬೇಂದ್ರೆಯವರು ಈಗ ಇಲ್ಲ; ಈಗ ಅವರು ‘ಸಾವಿರದ ಮನಗಳಲ್ಲಿ’ ಮನೆ ಮಾಡಿಕೊಂಡಿದ್ದಾರೆ. ಆದರೂ ಧಾರವಾಡದ ಮನೆ ಅವರ ಕರ್ಮಕ್ಷೇತ್ರವೇ.” ಈ ಸಂಕಲನದ ಕವಿತೆಯೊಂದರಲ್ಲಿ ವಾಮನರು ಹೇಳುತ್ತಾರೆ –
ಡಾ. ವಾಮನದತ್ತಾತ್ರೇಯ ಬೇಂದ್ರೆ ೨೮ಸೆಪ್ಟೆಂಬರ್೨೦೧೬ ಬುಧವಾರದಂದು ಹುಬ್ಬಳ್ಳಿಯಲ್ಲಿ ನಿಧನರಾದರು. ಅವರಿಗೆ ೮೧ ವರ್ಷವಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಮನ ಬೇಂದ್ರೆಯವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆ ಲೈಫ್ ಲೈನ್ ನಲ್ಲಿ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದರು.
This article uses material from the Wikipedia ಕನ್ನಡ article ವಾಮನ ಬೇಂದ್ರೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.