ಮಾಕಳಿ ದುರ್ಗ:
ಬೆಂಗಳೂರಿನ ಉತ್ತರ ದಿಕ್ಕಿನಲ್ಲಿ ೬೦ ಕಿ ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ೪೪೬೦ ಅಡಿ ಎತ್ತರದ ಬೆಟ್ಟದ ಮೇಲಿದೆ. ಬೆಟ್ಟದ ಬುಡದಿಂದ ಸುಮಾರು ೧೧೧೭ ಅಡಿ ಎತ್ತರದಲ್ಲಿ ಎರಡು ಹಂತದ ಕೋಟೆಯೊಂದನ್ನು ಕಟ್ಟಲಾಗಿದೆ. ಕೋಟೆಯು ಅಂಡಾಕಾರದಲ್ಲಿದ್ದು ಒಂದು ಕಿ ಮೀ ಸುತ್ತಳತೆ ಹೊಂದಿದೆ. ಇಲ್ಲಿ ಮದ್ದಿನಮನೆ, ಉಗ್ರಾಣ ಹಾಗು ಹಲವು ಕೋಣೆಗಳನ್ನು ಕಟ್ಟಲಾಗಿದೆ. ಇಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಿವ, ಮಾರ್ಕಂಡೇಯನ ದೇವಸ್ಥಾನಗಳಿವೆ. ಮಾರ್ಕಂಡೇಯ ಋಷಿಗಳು ಇಲ್ಲಿ ತಪಸ್ಸು ಮಾಡಿದ್ದರೆಂದು ನಂಬಲಾಗುತ್ತದೆ.
ಇತಿಹಾಸ: ಪ್ರಾರಂಭದಲ್ಲಿ ವಿಜಯನಗರದ ಅರಸರು ತಮ್ಮ ಸೈನ್ಯ ತರಬೇತಿಗಾಗಿ ಈ ಸ್ಥಳವನ್ನು ಉಪಯೋಗಿಸುತ್ತಿದ್ದರೆಂದು ತಿಳಿದು ಬರುತ್ತದೆ. ಆಗಲೇ ಮೊದಲ ಹಂತದ ಕೋಟೆಯನ್ನು ಕಟ್ಟಲಾಯಿತು. ಈ ಕೆಲಸವನ್ನು ಆಗ ವಿಜಯನಗರದ ಅರಸರ ಮಾಂಡಲೀಕರಾಗಿದ್ದ ಆವತಿ ನಾಡಪ್ರಭುಗಳು ಮಾಡಿ ಮುಗಿಸಿದರು. ನಂತರ ಕಾಲಾನುಕ್ರಮದಲ್ಲಿ ಇದನ್ನು ಮರಾಠರು ನಂತರ ಅವರಿಂದ ಯಲಹಂಕ ನಾಡಪ್ರಭುಗಳು ಕೊನೆಯದಾಗಿ ಟಿಪ್ಪು ಸುಲ್ತಾನನು ವಶಪಡಿಸಿಕೊಂಡನು. ಆಗ ಅವನೇ ಕೋಟೆಯ ಎರಡನೇ ಹಂತದ ಗೋಡೆಯನ್ನು ಎತ್ತರಿಸಿದನು. ಈ ಎರಡನೇ ಹಂತದ ಗೋಡೆ ಮೊದಲ ಹಂತದ ಗೋಡೆಗಿಂತ ಚಿಕ್ಕ-ಚಿಕ್ಕ ಕಲ್ಲುಗಳಿಂದ ಕಟ್ಟಲ್ಪಟ್ಟಿದ್ದನ್ನು ನಿಚ್ಚಳವಾಗಿ ಗುರುತಿಸಬಹುದು. ಅಲ್ಲಿ ಅವನು ತನ್ನ ನೆಚ್ಚಿನ ಬಂಟ ಲತೀಫಬೇಗ್ ಎಂಬುವವನನ್ನು ಉಸ್ತುವಾರಿಗೆ ನೇಮಿಸಿಟ್ಟ. ಮರಾಠರ ಕೈವಶವಾಗಿದ್ದ ಕಾಲದಲ್ಲಿ ಅವರು ಮಾಕಳಿದುರ್ಗದ ಜೊತೆಗೆ ಮಧುಗಿರಿ, ರಾಯದುರ್ಗ, ಶಿರಾ, ಹೊಸಕೋಟೆ ಹಾಗು ದೊಡ್ಡ ಬಳ್ಳಾಪುರ ಕೋಟೆಗಳನ್ನು ನೋಡಿಕೊಳ್ಳಲು ಗುತ್ತಿಯ ಮುರಾರಿರಾಯ ಎಂಬುವವನನ್ನು ನೇಮಿಸಿದ್ದರು. ಕಟ್ಟಕಡೆಯದಾಗಿ ೧೭೯೦ರಲ್ಲಿ ಟಿಪ್ಪುವಿನಿಂದ ಬ್ರಟಿಷರು ಕೋಟೆಯನ್ನು ಗೆದ್ದುಕೊಂಡರು.
ಬ್ರಿಟಿಷರಿಂದ ಟಿಪ್ಪುವಿನ ಪತನವಾದ ನಂತರ ಮಾಕಳಿ ದುರ್ಗ ಅನಾಥವಾಯ್ತು. ಸಾಥು-ಸನ್ಯಾಸಿಗಳ, ಸಿದ್ಧರ ನೆಲೆವೀಡಾಯ್ತು. ಬಿಟಿಷ್ ಸರ್ವೆಯರ್ ನೊಬ್ಬ ದಾಖಲಿಸಿರುವಂತೆ ಇಲ್ಲಿ ಜಂಗಮರಿಗೆ ಮಲ್ಲೇಶ್ವರ ಸ್ವಾಮಿಗಳೆಂದು ಕರೆಯಲಾಗುತ್ತಿತ್ತಂತೆ. ಅವರು ಆಗಾಗ ಬೆಟ್ಟದಿಂದ ಕೆಳಗೆ ಇಳಿದು ಬಂದು ಕೆಳ ಊರುಗಳಲ್ಲಿ ಭಿಕ್ಷೆ ಸ್ವೀಕರಿಸಿ ಅಲ್ಲಿನ ಜನಕ್ಕೆ ಔಷಧಿ ಕೊಟ್ಟು ಮತ್ತೆ ಬೆಟ್ಟದ ಮೇಲೆ ಹೋಗಿ ತಂಗುತ್ತಿದ್ದರಂತೆ.
ಮಾಕಳಿದುರ್ಗ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಘಾಟಿ ಸುಬ್ರಮಣ್ಯ ಕ್ಷೇತ್ರದ ಸಮೀಪವಿರುವ ಬೆಟ್ಟ . ಘಾಟಿಸುಬ್ರಹ್ಮಣ್ಯ ದಿಂದ ೪ ಕೀ.ಮೀ ದೂರದಲ್ಲಿದೆ. ಮಾಕಳಿದುರ್ಗ ಮೇಲೆ ಪುರಾತನ ಕೋಟೆ ಇದ್ದು ಕೋಟೆಯನ್ನು ಘಾಟಿ ಸುಬ್ರಹ್ಮಣ್ಯ ದೇವಾಲಯ ನಿರ್ಮಿಸಿದ್ದು ಸೊಂಡೂರು ಮಹಾರಾಜರು ಕಟ್ಟಿದರು ಎಂದು ಸ್ಥಳಿಯರು ಹೇಳುತ್ತಾರೆ. ಕೋಟೆಗೆ ನಾಲ್ಕು ಮುಖ್ಯ ದ್ವಾರಗಳಿದ್ದು ಕೋಟೆಯ ಮಧ್ಯಭಾಗದಲ್ಲಿ ಮಾಕಳಿ ಮಲ್ಲೇಶ್ವರ ಸ್ವಾಮಿದೇವಾಲವಿದೆ. ಹಿಂಬಾಗದಲ್ಲಿ ಒಂದು ಬಾವಿ ಇದ್ದು ಕುಡಿಯಲು ಹಾಗೂ ಇತರೆ ಕೆಲಸಗಳಿಗೆ ಇದೆ ನೀರನ್ನು ಬಳಸುತ್ತಿದ್ದರು ಎನ್ನಬಹುದು. ದೇವಾಲಯದಲ್ಲಿ ನಿಧಿ ಎನ್ನುವ ಕಾರಣದಿಂದ ಈ ಹಿಂದೆ ಇದ್ದ ಮಾಕಳಿ ಮಲ್ಲೇಶ್ವರ ಸ್ವಾಮಿ ವಿಗ್ರಹವನ್ನು ಹಾಗೂ ನಂದಿ, ದ್ವಜಸ್ಥಂಭವನ್ನು ಕಳ್ಳರು ಹಾಳುಗೇಡವಿದ್ದಾರೆ. ಮಾಕಳಿ ಮಲ್ಲೇಶ್ವರ ಸ್ವಾಮಿ ಭಕ್ತರು ಹೊಸ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಪುರಾತತ್ವ ಇಲಾಖೆಯ ನಿರ್ಲಕ್ಷದಿಂದ ಸುಮಾರು ೫೦೦ ವರ್ಷಗಳ ಭವ್ಯ ಸ್ಮಾರಕ ಕಳ್ಳಕಾಕರ ಕಾಟದಿಂದ ಅವನತಿ ಹಾದಿ ಹಿಡಿದಿದೆ. ಪ್ರತಿ ದಿನ ಚಾರಣ ಪ್ರೀಯರು ಮಾಕಳಿದುರ್ಗ ಬರುತ್ತಾರೆ. ಇಲ್ಲಿ ಸುಂದರ ಪರಿಸರವನ್ನು ನೋಡಿ ಕಣ್ಣುತುಂಬಿ ಕೊಳ್ಳುತ್ತಾರೆ. ಮಾಕಳಿದುರ್ಗ ಪಕ್ಕದಲ್ಲಿ ಇನ್ನೋಂದು ಬೆಟ್ಟವಿದೆ. ಅದು ಮಾಕಳಿದುರ್ಗ ಗ್ರಾಮಕ್ಕೆ ಹೊಂದಿಕೊಂಡಿದೆ. ಈ ಬೆಟ್ಟದ ಹಿಂಭಾಗದಲ್ಲಿ ೧೦೦೦ ಎರಕೆ ಅರಣ್ಯ ಪ್ರದೇಶವಿದ್ದು ಈ ಅರಣ್ಯದಲ್ಲಿ ಚಿರತೆ. ಮೊಲ ಇತ್ಯಾದಿ ಪ್ರಾಣಿಗಳು ಇವೆ.
This article uses material from the Wikipedia ಕನ್ನಡ article ಮಾಕಳಿದುರ್ಗ ಕೋಟೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.