ಭಾಷೆಗೆ ಮತ್ತು ಕಾವ್ಯಕ್ಕೆ ಛಂದಸ್ಸೂ ಸಾಧಕವಾದುದು..ಕಾವ್ಯಗಳಲ್ಲಿ ಗದ್ಯ ಪದ್ಯ ಮತ್ತು ¸ಅವೆರಡರ ಮಿಶ್ರಣ ಚಂಪೂ ಎಂದು ಮೂರು ಬಗೆ. ಪದ್ಯ ಕಾವ್ಯ ಗಳಿಗೆ ಛಂದಸ್ಸು ವಿಷಯವನ್ನು ಸಂಗ್ರಹಿಸಿ ಹೇಳಲೂ , ರಸವತ್ತಾಗಿ ಹೇಳಲೂ ಮನೋಹರವಾಗಿ ತಿಳಿಸಲೂ ಅನುಕೂಲ. ನೆನಪಿಟ್ಟುಕೊಳ್ಳಲು ಪದ್ಯವು ಬಹಳ ಅನುಕೂಲ. ಕೇಳುಗರಿಗೆ ಇಂಪಾಗಿ ರಸವತ್ತಾಗಿ ಗಮಕ ಶೈಲಿಯಲ್ಲಿ ಹಾಡಬಹುದು. ಈ ಪದ್ಯರಚನೆಯ ನಿಯಮಗಳನ್ನು ಛಂದಶಾಸ್ತ್ರವು ಹೇಳುವುದು. ಇದು ಕಾವ್ಯ ಲಕ್ಷಣವಾದ ಅಲಂಕಾರದ ಜೊತೆಜೊತೆಯಲ್ಲಿಯೇ ಸಾಗುವುದು.
ಪದ್ಯರಚನೆ ಮತ್ತು ಮಾರ್ಗ ದೇಸಿ ಕಾವ್ಯಗಳು
ಪದ್ಯವು ಕೆಲವು ಸಾಲುಗಳಿಂದ ಕೋಡಿರುವುದು. ಅದನ್ನು ಪಾದಗಳೆನ್ನುವರು. ಪ್ರತಿ ಪಾದವೂ ಗೊತ್ತಾದ ಅಕ್ಷರಗಳ ಗುಂಪಿನಿಂದ ಅಥವಾ ಗಣಗಳಿಂದ ಕೂಡಿರುತ್ತದೆ. ಅದು ಆ ಪದವನ್ನು ನುಡಿಯುವ ,ಕಾಲ, ವನ್ನು ಅವಲಂಬಿಸಿರುತ್ತದೆ. ಇದು ಪದ್ಯಕ್ಕೆ ಒಂದು ಲಯ ಅಥವಾ ಯತಿ, ಗ್ರಾಮ್ಯದಲ್ಲಿ ಹೇಳುವುದಾದರೆ ‘ಗತ್ತು’ ಕೊಡುವುದು. ಒಂದು ಅಕ್ಷರವನ್ನು ನುಡಿಯುವ ಕಾಲ ‘ಲಘು’ ಮತ್ತು ಎರಡು ಅಕ್ಷರದ ಅಥವಾ ದೀರ್ಘಅಕ್ಷರದ ಕಾಲ ‘ಗುರು’. ಗುರು ಲಘುಗಳು ಗೊತ್ತಾದ ಕ್ರಮದಲ್ಲಿ ಸೇರಿ ಗಣಗಳಾಗುವುವು. ಹೀಗೆ ನಿಯಮಬದ್ಧವಾಗಿ ಗಣಗಳಿಂದ ರಚಿತವಾದದ್ದು ಪದ್ಯ. ಸಂಪ್ರದಾಯ ಬದ್ಧವಾಗಿ ಬರೆದ ಪ್ರಾಸಲಕ್ಷಣವುಳ್ಳ ಪದ್ಯಗಳ ಕಾವ್ಯ ‘ಮಾರ್ಗ’ ಕಾವ್ಯ. ಜಾನಪದ ಅಥವಾ ಸಂಪ್ರದಾಯ ನಿಯಮ ಅನುಸರಿಸದೆ ಬರೆದ ಪದ್ಯಗಳು ‘ದೇಸಿ’ ಎನಿಸಿಕೊಳ್ಳುತ್ತವೆ.
ಛಂದಸ್ಸು ಮತ್ತು ಪ್ರಾಸ
ಜೈಮಿನಿ ಭಾರತದ ಛಂದಸ್ಸು ವಾರ್ಧಕ ಷಟ್ಪದಿ. ಇದು ಆರು ಪಾದಗಳುಳ್ಳದ್ದು. ಇದರಲ್ಲಿ ಪ್ರತಿ ಪಾದದಲ್ಲಿಯೂ ಆರಂಭದ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುದು. ಇದು ಆದಿ ಪ್ರಾಸ (ಎರಡನೇ ಅಕ್ಷರದ ಪ್ರಾಸ-ದ್ವಿತೀಯ ಪ್ರಾಸ). ಇದು ಷಟ್ಪದಿಗಳ ಸಾಮಾನ್ಯ ಲಕ್ಷಣ. ಇದರಲ್ಲಿ ಪಂಚಮಾತ್ರಾಗಣಗಳು ಒಂದು ಎರಡನೇ ಪಾದ ಮತ್ತು ನಾಲ್ಕು ಐದನೇಪಾದಗಳಲ್ಲಿ ನಾಲ್ಕು ನಾಲ್ಕು ಇರುತ್ತವೆ, ಮೂರು ಮತ್ತು ಆರನೆಯ ಪಾದಗಳಲ್ಲಿ ಆರು ಗಣಗಳಿರುವುವು. ಪ್ರತಿ ಪಾದದ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನ ಇರಬೇಕು. ಸಾಲಿ ಎರಡನೇ ಅಕ್ಷರ ಒಂದೇ ಬಗೆಯ ವ್ಯಂಜನವುಳ್ಳದ್ದು. *ಉದಾ: ವಾರ್ಧಕ:
ಕಾವ್ಯ ಸೌಂದರ್ಯವನ್ನುಂಟುಮಾಡುವ ಶಬ್ದ ಅರ್ಥಗಳ ವೈಚಿತ್ರ್ಯ ಮತ್ತು ವಿಶಿಷ್ಟತೆಗಳಿಗೆ ಅಲಂಕಾರವೆಂದು ಹೆಸರು. ಧ್ವನಿ (ಒಳಾರ್ಥವಿರುವುದು) ರಸ, ವಕ್ರೋಕ್ತಿ, ರೀತಿ, ಗುಣ ಇವು ಸಂದರ್ಭಕ್ಕೆ ಶಬ್ದವೈ ಚಿತ್ರ್ಯವನ್ನೋ ಅರ್ಥವೈಚಿತ್ರ್ಯವನ್ನೋ ಉಂಟುಮಾಡಿ ಕಾವ್ಯಕ್ಕೆ ಸೌಂದರ್ಯವನ್ನು ತರುವುವು. ಕಾವ್ಯ ಸೌಂದರ್ಯವನ್ನು ಹೀಗೆ ಹೇಳುವರು: ಧ್ವನಿ ರಸಗಳು ಕಾವ್ಯ ಶರೀರದಲ್ಲಿ ಜೀವದಂತೆಯೂ, ಗುಣಗಳು ಶೌರ್ಯ ಧೈರ್ಯಗಳಂತೆ, ಅಲಂಕಾರಗಳು ಮೈಮೇಲೆ ಹಾಕಿಕೊಳ್ಳುವ ಒಡವೆಗಳಂತೆ ಇರುತ್ತವೆ, ಅಲಂಕಾರಗಳು ಅಗತ್ಯವಾದರೂ ಅನಿವಾರ್ಯವಲ್ಲ. ಹೆಚ್ಚು ಕಾಡಿಮೆ ಮಾಡಿಕೊಳ್ಳಬಹುದು. ಬಹಳಷ್ಟು ಪಂಡಿತರು ರಸವೇ ಪ್ರಧಾನವೆನ್ನುವರು.
ಅಲಂಕಾರಗಳಲ್ಲಿ ಅರ್ಥಾಲಂಕಾರಗಳಿಗೆ ಪ್ರಾಧಾನ್ಯತೆ ಕೊಡುವರು. ಶಬ್ದಾಲಂಕಾರಗಳು ಪದ್ಯದ ಕೇಳುವಿಕೆಗೆ ವಿಶಿಷ್ಟ ಹಿತವನ್ನು ಕೊಡುವುವುದು. ಈ ರಸಾಲಂಕಾರದಲ್ಲಿ ನಾನಾ ಬಗೆಗಳಿವೆ; ಅದರಲ್ಲಿ ಒಮ್ಮತವಿಲ್ಲ. ಶಬ್ದಾಲಂಕಾರಕ್ಕೆ ‘ಅನುಪ್ರಾಸ, ಯಮಕ, ಚಿತ್ರಕವಿತ್ವ ಮುಂತಾಗಿ ಇವೆ.(ಮುಂದೆ ನೋಡಿ).
ಅರ್ಥಆಲಂಕಾರಗಳಲ್ಲಿ ಉಪಮೆ, ರೂಪಕ, ದೀಪಕ, ದೃಷ್ಟಾಂತ, ಭ್ರಾಂತಿ, ಉತ್ಪ್ರೇಕ್ಷೆ, ಪರ್ಯಾಯೋಕ್ತಿ, ಸಮಾಸೋಕ್ತಿ, ಅತಿಶಯೋಕ್ತಿ, ವಿರೋಧಾಭಾಸ, ಮೊದಲಾದವು. ಶೃಂಖಲಾ ಮೂಲ ಅಲಂಕಾರಗಳಲ್ಲಿ, ಏಕಾವಳಿ, ಅನುಮಾನ, ಯಥಾ ಸಂಖ್ಯೆ ಮೊದಲಾದವಿವೆ. ವ್ಯಾಜಸ್ತುತಿ, (ನಿಂದಾಸ್ತುತಿ), ವ್ಯಾಜನಿಂದೆ (ಹೋಲಿಕೆಯಲ್ಲಿ ಇಬ್ಬರನ್ನೂ ನಿಂದಿಸುವುದು.) ಇದಲ್ಲದೆ ಮಿಶ್ರ ಅಲಂಕಾರಗಳೂ ಇವೆ.
ಉದಾಹರಣೆಗಳು
ಅಲಂಕಾರಗಲ ಮುಂದಿರುವ ಸಂಖ್ಯೆಯು, ಶ್ರೀಡಿ.ಆರ್.ಪಾಂಡುರಂಗ ಅವರು ಲೆಕ್ಕಮಾಡಿದ ಕಾವ್ಯದಲ್ಲಿರುವ ಒಟ್ಟು ಆ ಬಗೆಯ ಅಲಂಕಾರಗಳು.
*೧.
ಅಕ್ಷರಾನುಪ್ರಾಸಗಳು-11;
ಎತ್ತಿ ಬಹಸತ್ತಿಗೆಯ ಮೊತ್ತಂಗಳೆತ್ತಲಘಾ/
ಕತ್ತಲಿಸೆ ಪೊತ್ತಮನೆವೆತ್ತ ಬಲ್ಗತ್ತಿಗಳ/
ಕಿತ್ತು ಭಟರೆತ್ತಿ ಜಡಿಯುತ್ತರಲ್ಕತ್ತ ಬೆಳಗಿತ್ತುವವು ಮತ್ತೆ ಬಲಕ್ಕೆ//19//ಸಂ.4//
ಅರ್ಥಾಂತರನ್ಯಾಸ, ದೀಪಕ ಮುಂತಾದ ಅಲಂಕಾರಗಳು ಸಾಕಷ್ಟಿವೆ. ಆದರೆ ಉಪಮಾಲಂಕಾದಲ್ಲಿ ಲಕ್ಷ್ಮೀಶನದು ಹೆಚ್ಚಿನ ಪ್ರತಿಭೆ.
ಒಂದೇ ಪದ್ಯದಲ್ಲಿ ಎರದು ಮೂರು ಅಲಂಕಾರಗಳಿರುವ ಸಾಧ್ಯತೆಯೂ ಇದೆ. ಲಕ್ಷ್ಮೀಶನಿಗೆ ಉಪಮಾಲಂಕಾರ ಬಹುಪ್ರಿಯ.
ಪ್ರಕೃತಿವರ್ಣನೆ ಮತ್ತು ಕವಿಯ ಪ್ರತಿಭೆ
ನಿತ್ಯನೂತನವಾದ ಪ್ರಕೃತಿಯನ್ನು ವರ್ಣಿಸುವುದು ಕವಿಗೆ ಆನಂದ-ರಮ್ಯ. ಈತನ ಪದ್ಯಗಳಲ್ಲಿ ಕಾವ್ಯಕ್ಕೆ ಮರಗು ಕೊಡುವ ಓಜಸ್ಸು,ಪ್ರಸಾದ, ಸಮತಾ, ಮಾಧುರ್ಯ, ಸುಕುಮಾರತೆ, ಆರ್ಥವ್ಕ್ತಿ, ಉದಾರತೆ, ಶ್ಲೇಷ, ಕಾಂತಿ, ಸಮಾಧಿ ಎಂಬ ಈ ಹತ್ತು ಗುಣಗಳನ್ನು ಕಾವ್ಯದುದ್ದಕ್ಕೂ ಕಾಣಬಹುದು.
ಪದಗಳಿಗೆ ಎರಡೆರಡು ಅರ್ಥವಿಟ್ಟು ಹೇಳಿದೆ: ಪರರ ಅರ್ಥವನ್ನು ಎಂದರೆ ಹಣವನ್ನು ಅಪಹರಿಸದ, ಪೂಜ್ಯರಿಗೆ (ಯತಿಗಳಿಗೆ) ಅಗೌರವ ತೋರದ, ನಿತ್ಯದ ಕರ್ತವ್ಯಗಳನ್ನು ಬಿಡದ, ಉತ್ತಮ ಗುಣಗಳ ನಡತೆಗೆ ತಪ್ಪದ, ಕೆಟ್ಟ ಮಾತನ್ನಾಡದ, ಸನ್ಮಾರ್ಗಲ್ಲಿ ನೆಡವ ಸತ್ಪುರುಷನಂತೆ, -(ಪುನಃ ಅದೇ ಪದಗಳಿಗೆಬೇರೆ ಅರ್ಥ) ಕೃತಿಚೌರ್ಯ ಮಾಡದೆ(ಪಾರದೆ ಪರರ ಅರ್ಥವನ್ನು), ಕಾವ್ಯದ ಯತಿಗೆ ಭಂಗಬರದಂತೆ (ಯತಿ:ಓದಿನಲ್ಲಿ ಛಂದಸ್ಸಿಗೆ ತಕ್ಕ ನಿಲುಗಡೆ), ವ್ಯಾಕರಣ ದೋಷವಿಲ್ಲದೆ, ವಿಶೇಷ ಕಾವ್ಯಲಕ್ಷಣದಿಂದ, ಅಪಶಬ್ಧ-ಕೀಳು/ತಪ್ಪು ಭಾಷೆ ಇರದಂತೆ (ದುರುಕ್ತಿ), ಗಂಭೀರ ಲಕ್ಷಣದ (ಸತ್ಪುರುಷನಂತಿರುವ) ಕಾವ್ಯವನ್ನು ಶಾರದಾದೇವಿಯ ಕೃಪೆಯಿಂದ ಹೇಳುವೆನು- ದೋಷವಿದ್ದರೆ ಅದನ್ನು ಬಿಟ್ಟು (ತೊರೆದು), ಪೂರ್ಣವಾಗಿ ಆಲಿಸಿರಿ. ಈ ಬಗೆಯ ದ್ವಂದಾರ್ಥವಿರುವ ಅನೇಕ ಪದ್ಯಗಳು ಈ ಕಾವ್ಯದಲ್ಲಿವೆ.
ಕಾವ್ಯದ ಗುಣ ಛಂದಸ್ಸು ಲಕ್ಷಣಮಲಂಕಾರ ಭಾವರಸದೊಂದಿಗೆ ಸತ್ಕೃತಿ ಚಮತ್ಕೃತಿ ಕಾವ್ಯದ ಗುಣ - ಹಾಗೆ ತನ್ನ ಕೃತಿ ಇದೆ ಎಂದಿದ್ದಾನೆ ಕವಿ, ಅದು ನಿಜವಾಗಿದೆ.
ಲಕ್ಷ್ಮೀಶನ ನುಡಿಗಟ್ಟು
ಲಕ್ಷ್ಮೀಸನು ನೆನಪಿನಲ್ಲಿ ಉಳಿಯಬಹುದಾದ ಅನೇಕ ಅನುಭವದ ನುಡಿಗಟ್ಟುಗಳನ್ನು ತನ್ನ ಕಾವ್ಯದಲ್ಲಿ ಉಪಯೋಗಿಸಿದ್ದಾನೆ.
ಉದಾಹರಣೆಗೆ:
ಅರಿದರಿದು ಪರಹಿಂಸೆಯಂ ಮಾಡಿ ಮಾನವಂಬಾಳ್ದಪನೆ.♠ ಲೋಕದೊಳ್ ಆರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ!;
ಗಾದೆ ಮಾತು:ಹಸ್ತಿನಾವತಿಗೆ ಕೃಷ್ಣನ ಬರುವು:: ಅನ್ನೆಗಂ ತೊಳಲುತ ಅರಸುವ ಬಳ್ಳಿ ಕಾಲ್ತೊಡಕಿದಂತೆ :[೨]
ಲಕ್ಷ್ಮೀಶನು ಮಹಾಕವಿ ಎಂದು ಪಂಡಿತರು ಒಪ್ಪದ್ದಾರೆ. ಅಲ್ಲದೆ ಜನಪ್ರಿಯ ಕವಿ. ತನ್ನ ಕಾವ್ಯ ಪ್ರತಿಭೆಯಿಂದ ಕಾವ್ಯದಲ್ಲಿ ರಸೋತ್ಕರ್ಷ ತಂದಿದ್ದಾನೆ. ಅವನ ಶಬ್ದ ಸಂಪತ್ತಿ, ಅರ್ಥಗಾಂಭೀರ್ಯ, ಧ್ವನಿರಮ್ಯತೆ, ನಾದಮಾಧುರ್ಯ, ಪದಲಾಲಿತ್ಯ ನಮ್ಮನು ಸೆಳೆಯುತ್ತದೆ. ಕೇಳುಗರು ಇದರಲ್ಲಿನ ಕೃಷ್ಣ ಭಕ್ತಿಗೆ ಮಾರುಹೋಗುವರು. ಭಕ್ರಿಗೆ ಕಾವ್ಯ ಪೂಜನೀಯವಾಗುವುದು.
ಕಾವ್ಯ ಲಕ್ಷಣಗಳೆಂಬ ಆಭರಣಗಳಿಂದ ಸರ್ವಾಲಂಕಾರಭೂಷಿತಳಾದ ಲಕ್ಷ್ಮೀಕಾಂತನನ್ನು ಹೊಗಳುವ ದೇವೀಸ್ವರೂಪದ ಈ ಕೃತಿಲಲನೆಯ ಸಂತಸದ ನಡಿಗೆಯ / ಪದಗಳ ಲಾಲಿತ್ಯದ ಸೊಗಸಿಗೆ ಪ್ರೀತಿಯಿಂದ ನಮಿಸದವರು ಯಾರಿದ್ದಾರೆ! ಎಲ್ಲರೂ ಮೆಚ್ಚುವರು. (ಹೀಗೆ ತನ್ನ ಕಾವ್ಯಕ್ಕೆ ಕೃತಿಲಲನೆ ಎಂಬ ಅಧ್ಬುತ ರೂಪಕವನ್ನು ಹೆಣೆದಿದ್ದಾನೆ ಕವಿ.)
ಮಂಗಳಾಚರಣೆ
ಮಂಗಳಾಚರಣೆಯ ಕೊನೆಯ ಪದ್ಯ:
ಪುಣ್ಯಮಿದು ಕೃಷ್ಣಚರಿತಾಮೃತಂ ಸುಕವೀಂದ್ರ|
ಗಣ್ಯಮಿದು ಶೃಂಗಾರ ಕುಸುಮತರು ತುರುಗಿದಾ|
ರಣ್ಯಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಂಗಳ||
This article uses material from the Wikipedia ಕನ್ನಡ article ಜೈಮಿನಿ ಭಾರತದಲ್ಲಿ ಅಲಂಕಾರಗಳು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.