ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ (ಸು.
ಕ್ರಿ.ಪೂ. ೩೫೦ - ೨೮೩), ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು.."ವಿಷ್ಣುಗುಪ್ತ" ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ.
ಚಾಣಕ್ಯ | |
---|---|
Other names | ಕೌಟಿಲ್ಯ, ವಿಷ್ಣುಗುಪ್ತಾ |
Occupation(s) | ಪ್ರಾಧ್ಯಾಪಕ, ಸಲಹೆಗಾರ ಚಂದ್ರಗುಪ್ತ ಮೌರ್ಯ |
Known for | ಅಡಿಪಾಯ ಮೌರ್ಯ ಸಾಮ್ರಾಜ್ಯ |
Notable work | ಅರ್ಥಶಾಸ್ತ್ರ (ಶಾಸ್ತ್ರಗ್ರಂಥ), ಚಾಣಕ್ಯ ನೀತಿ |
ಅಸಾಧಾರಣ ಪ್ರತಿಭಾವಂತ. ಹಿಡಿದ ಕೆಲಸವನ್ನು ಪಟ್ಟು ಹಿಡಿದು, ಸಾಧಿಸುವ ಸ್ವಭಾವದವನು. ಸಕಲ ಶಾಸ್ತ್ರ ಪಾರಂಗತ, ಅರ್ಥಶಾಸ್ತ್ರ ಪ್ರವೀಣ. ರಾಜನೀತಿ ವಿಶಾರದ. ಸಾಮ, ದಾನ, ಭೇದ, ದಂಡ ಎಂಬ ಚತರೋಪಾಯ ಚತುರದ್ಯೆಯಲ್ಲಿ ತುಂಬಾ ಅನುಭವಿ, ಸೂಕ್ಷ್ಮಮತಿ. ಆತನ ಮನಸ್ಸಿನ ಅಭಿಪ್ರಾಯವನ್ನು ಹೀಗೆಂದು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಬಹಳ ರಹಸ್ಯವಾಗಿ ಕೆಲಸ ಮಾಡುವವನು. ಬಹುದೂರದ ಅಲೋಚನೆ, ಯಾವ ಕೆಲಸದಲ್ಲಿಯೇ ಆಗಲಿ ಆತ ಇಟ್ಟ ಗುರಿ, ಮಾಡಿದ ಅಂದಾಜು ಎಂದೂ ತಪ್ಪುತ್ತಿರಲಿಲ್ಲ. ಮಹಾತ್ಯಾಗಿ, ಮಹಾ ತಪಸ್ವಿ. ಹೊರನೋಟಕ್ಕೆ ತುಂಬ ಕಠಿಣ ಸ್ವಭಾವದವನು. ಅಪಾರ ಲೋಕಾನುಭವವಿದ್ದವನು. ಶತ್ರುಗಳನ್ನು ಸಂಹಾರ ಮಾಡುವುದರಲ್ಲಿ ಬಗೆಬಗೆಯ ತಂತ್ರಗಳನ್ನು ಸಮಯವರಿತು ಎಚ್ಚರಿಕೆಯಿಂದ ಮಾಡುವಾತ. ಆತನಿಗೆ ತಿಳಿಯದ ಶಾಸ್ತ್ರವಿಲ್ಲ. ಗೊತ್ತಿಲ್ಲದ ವಿಚಾರವಿಲ್ಲ. ಅದೊಂದು ಪ್ರತಿಭಾಪುಂಜ. “ಚಾಣಕ್ಯ ತಂತ್ರ” ಎಂಬ ಮಾತು ಈಗಲೂ ಗಾದೆಯಾಗಿದೆ. ನಂದವಂಶವನ್ನು ಸರ್ವನಾಶಮಾಡಿ, ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಕನಾಗಿ ಮೆರೆದ ಪುಣ್ಯ ಪುರುಷ ಚಾಣಕ್ಯ. ಚಾಣಕ್ಯನಿಗೆ ಕೌಟಿಲ್ಯ ಎಂದು ಇನ್ನೊಂದು ಹೆಸರು. ಈತನ ಪ್ರತಿಭೆಯನ್ನು ತೋರಿಸುವ ಒಂದು ಪುಸ್ತಕ ಇಂದೂ ಉಳಿದಿದೆ. “ಅರ್ಥಶಾಸ್ತ್ರ” ಎಂದು ಅದರ ಹೆಸರು. ಅದು ಇಂಗ್ಲೀಷ್, ಫ್ರೆಂಚ್, ಜರ್ಮನ್- ಹೀಗೆ ಹಲವು ಭಾಷೆಗಳಿಗೆ ಅನುವಾದವಾಗಿದೆ. ದುರದೃಷ್ಟವೆಂದರೆ ಈತನ ವಿಷಯ ಖಚಿತವಾಗಿ ತಿಳಿದಿರುವುದು ಬಹು ಸ್ವಲ್ಪ. ಬೇರೆ ಬೇರೆ ಪುಸ್ತಕಗಳಲ್ಲಿ ದೊರೆಯುವ ಅಷ್ಟಿಷ್ಟು ಸಾಮಗ್ರಿಗಳನ್ನೆಲ್ಲ ಸೇರಿಸಿ ನಾವು, “ಪ್ರಾಯಶ: ಇದು ಇವನ ಜೀವನ ಚರಿತ್ರೆ” ಎಂದು ಹೇಳಬಹುದು.
ಚಾಣಕ್ಯನ ವಿದ್ಯಾಭ್ಯಾಸ ತಕ್ಷಶಿಲೆ ಎಂಬ ಊರಿನ ಪ್ರಸಿದ್ಧ ಶಾಲೆಯಲ್ಲಿ ಆಯಿತು. ತಕ್ಷಶಿಲೆಯ ಅಧ್ಯಾಪಕರು ಜಗತ್ಪ್ರಸಿದ್ಧ ವಿದ್ವಾಂಸರು. ಭಾರತದ ಎಲ್ಲಾ ಭಾಗಗಳಿಂದ ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದರು. ರಾಜರು ಸಹ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ಕಳುಹಿಸುತ್ತಿದ್ದರು. ಇಲ್ಲಿ ಒಬ್ಬ ಉಪಾಧ್ಯಾಯನ ಬಳಿ ಒಂದು ನೂರು ಒಂದು ಮಂದಿ ವಿದ್ಯಾರ್ಥಿಗಳು ಇದ್ದರಂತೆ. ಅಷ್ಟು ಮಂದಿಯೂ ರಾಜಕುಮಾರರಂತೆ! ಸಾಮಾನ್ಯವಾಗಿ ಹದಿನಾರನೆಯ ವರ್ಷಕ್ಕೆ ವಿದ್ಯಾರ್ಥಿ ಈ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಿದ್ದ. ವೇದಗಳನ್ನೂ ಧನುರ್ವಿದ್ಯೆ, ಬೇಟೆ, ಆನೆಗಳನ್ನು ನೋಡಿಕೊಳ್ಳುವುದು ಹೇಗೆ ಎಂಬುವುದನ್ನೂ ಹದಿನೆಂಟು ಕಲೆಗಳನ್ನೂ ಕಲಿಸುತ್ತಿದ್ದರು. ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ಸಮರಶಾಸ್ತ್ರ, ಇವುಗಳಿಗಾಗಿ ಇಲ್ಲಿದ್ದ ವಿದ್ಯಾ ಸಂಸ್ಥೆಗಳು ಭಾರತದಲ್ಲಿ ಮಾತ್ರವಲ್ಲ, ಆಚೆಯೂ ಸಹ ಪ್ರಖ್ಯಾತವಾಗಿದ್ದವು. ಇಂತಹ ಕೇಂದ್ರದಲ್ಲಿ ವಿದ್ಯಾಭ್ಯಾಸವಾಯಿತು.
ಪುಸ್ತಕ ಇಂದು ಜಗತ್ಪ್ರಸಿದ್ಧ. ಯೂರೋಪಿನ ರಾಜ್ಯಶಾಸ್ತ್ರ ನಿಪುಣರು, ಸಮಾಜಶಾಸ್ತ್ರ ನಿಪುಣರು, ಅರ್ಥಶಾಸ್ತ್ರ ನಿಪುಣರು ಇದನ್ನು ಕುತೂಹಲದಿಂದ ಅಧ್ಯಯನ ಮಾಡುತ್ತಾರೆ.ರಾಜಕುಮಾರನನ್ನು ಹೇಗೆ ಬೆಳೆಸಬೇಕು, ಅವರ ವಿದ್ಯಾಭ್ಯಾಸ ಹೇಗಾಗಬೇಕು ಇವುಗಳ ವಿವರಣೆಯಿಂದ “ಅರ್ಥಶಾಸ್ತ್ರ” ಪ್ರಾರಂಭವಾಗುತ್ತದೆ. ಅನಂತರ ರಾಯಭಾರಿಗಳ ಆಯ್ಕೆ, ಗೂಢಚಾರರನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಇವುಗಳ ವಿವರಣೆ. ರಾಜನಿಗೆ ಅಪಾಯ ಒದಗದ ಹಾಗೆ ರಕ್ಷಣೆ ಕೊಡಬೇಕು ಎಂದು ಚಾಣಕ್ಯ ವಿವರಿಸುತ್ತಾನೆ. ಕಾನೂನು, ಪೋಲಿಸರ ಕೆಲಸ-ಕಾರ್ಯ, ಶ್ರೀಮಂತರನ್ನು ಹೇಗೆ ಅಧೀನದಲ್ಲಿ ಇಟ್ಟುಕೊಳ್ಳಬೇಕು, ಅವರು ದಾನ ಮಾಡುವಂತೆ ಹೇಗೆ ಪ್ರಚೋದಿಸಬೇಕು, ನೇರವಾಗಿ ಯುದ್ಧವನ್ನು ತಪ್ಪಿಸುವ ವಿಧಾನಗಳು, ಜ್ಯೋತಿಷ್ಯ, ಪುರೋಹಿತ ಮತ್ತಿತರರ ಕರ್ತವ್ಯವೇನು, ಶತ್ರುರಾಜರನ್ನು ಉಪಾಯದಿಂದ ಕೊಲ್ಲುವುದು ಹೇಗೆ, ಮನುಷ್ಯರು ಮತ್ತು ಪ್ರಾಣಿಗಳು ನಿದ್ರೆ ಮಾಡುವಂತೆ ಮಾಡುವ ಕ್ರಮ- ಹೀಗೆ “ಅರ್ಥಶಾಸ್ತ್ರ”ದಲ್ಲಿ ಚಾಣಕ್ಯ ಚರ್ಚೆ ಮಾಡುವ ವಿಷಯಗಳು ನೂರಾರು. ಎಷ್ಟು ವಿಷಯಗಳನ್ನು ಪರಿಶೀಲಿಸುತ್ತಾನೆ ಎನ್ನುವುದೇ ಬೆರಗನ್ನುಂಟು ಮಾಡುತ್ತದೆ. ಅವನ ಕುಶಾಗ್ರ ಬುದ್ಧಿ ವಿಸ್ಮಯಗೊಳಿಸುವಂತಹದು. ಚಾಣಕ್ಯನ ಪ್ರಕಾರ ರಾಜನ ಮುಖ್ಯ ಕರ್ತವ್ಯ ಧರ್ಮರಕ್ಷಣೆ. ಧರ್ಮವನ್ನು ಎತ್ತಿಹಿಡಿದ ರಾಜನಿಗೆ ಇಹದಲ್ಲೂ ಪರದಲ್ಲೂ ಸುಖ. ಮತ್ತೊಂದು ಮಾತನ್ನು ಚಾಣಕ್ಯ ಹೇಳುತ್ತಾನೆ- ಬಹುಸ್ವಾರಸ್ಯವಾದುದು, ಮುಖ್ಯವಾದುದು. ರಾಜ ತನ್ನ ಅಧಿಕಾರವನ್ನು ಅನ್ಯಾಯವಾಗಿ ಉಪಯೋಗಿಸಿದರೆ ಅವನಿಗೂ ಶಿಕ್ಷೆ ಆಗಬೇಕು.“ರಾಜನಿಗೆ ಸದಾ ಪ್ರಜೆಗಳ ಹಿತಕ್ಕಾಗಿ ದುಡಿಯುವುದೇ ವ್ರತ; ರಾಜ್ಯದ ಆಡಳಿತದ ಕೆಲಸವೇ ಶ್ರೇಷ್ಠ ಧರ್ಮಾಚರಣೆ: ಎಲ್ಲರನ್ನೂ ಸಮಾನರಾಗಿ ಕಾಣುವುದೇ ಬಹು ದೊಡ್ಡ ದಾನ.” “ಜನರ ಸುಖವೇ ರಾಜನ ಸುಖ, ಅವರ ಕಲ್ಯಾಣವೇ ಅವನ ಕಲ್ಯಾಣ, ಅವನು ತನ್ನ ಸುಖದ ಕಡೆಗೆ ಲಕ್ಷ್ಯ ಕೊಡಬಾರದು. ತನ್ನ ಪ್ರಜೆಗಳ ಸಂತೋಷದಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕು”. ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ಈ ಮಾತುಗಳನ್ನು ಬರೆದ ಚಾಣಕ್ಯ ರಾಜ್ಯಶಾಸ್ತ್ರ ನಿಪುಣ, ವಿವೇಕಿ; ತಂತ್ರಗಾರಿಕೆ, ಬುದ್ಧಿವಂತಿಕೆ, ಛಲ ಸಾಹಸಗಳಿಗೆ ಮತ್ತೊಂದು ಹೆಸರು ಚಾಣಕ್ಯ.
ಅರ್ಥಶಾಸ್ತ್ರ ಮತ್ತು ಚಾಣಕ್ಯ ನೀತಿ ಸಾರ(ಚಾಣಕ್ಯ ನೀತಿ ಶಾಸ್ತ್ರ)ಚಾಣಕ್ಯನ ಎರಡು ಮುಖ್ಯ ಪುಸ್ತಕಗಳಾಗಿವೆ.
೧) ಬೇರೆಯವರ ತಪ್ಪುಗಳಿಂದ ಕಲಿಯಿರಿ ಎಲ್ಲಾ ತಪ್ಪುಗಳನ್ನು ಮಾಡುವಷ್ಟು ಆಯಸ್ಸು ನಿಮಗಿಲ್ಲಾ
೨) ನೀವು ಹುಟ್ಟುವಾಗ ಏನು ಇರಲಿಲ್ಲ ಆದರೆ ಸಾಯುವಾಗ ನಿಮ್ಮ ಹೆಸರಿನೊಂದಿಗೆ ಸಾಯುತ್ತೀರಿ ನಿಮ್ಮ ಹೆಸರು ಬರಿ ಅಕ್ಷರಗಳಿಂದ ಕೂಡಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು.
೩)ಸತ್ಯವಿದ್ದರು ನಂಬಲಾರದ್ದನ್ನು ಹೇಳಬಾರದು
೪) ಶತ್ರುವನ್ನು ಅವನ ಮರ್ಮದಲ್ಲಿ ಹೊಡೆಯಬೇಕು
೫) ಬುದ್ಧಿವಂತನಿಗೆ ಜೀವನದ ಭಯವಿಲ್ಲ
೬)ಅತಿ ಪ್ರಾಮಾಣಿಕರಾಗಬೇಡಿ ಏಕೆಂದರೆ ನೇರವಾಗಿರುವ ಮರಗಳು ಮೊದಲು ನೆಲಕ್ಕುರುಳುತ್ತವೆ ಆನಂತರ ಡೊಂಕು ಮರದ ಸರದಿ
೭) ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ ಅವೇ ನಿಮಗೆ ಮುಳುವಾಗುತ್ತವೆ.
೮) ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೆ ಇರುತ್ತದೆ ಸ್ವಾರ್ಥ ರಹಿತ ಸ್ನೇಹವೇ ಇಲ್ಲಾ ಇದೊಂದು ಕಹಿಸತ್ಯ
೯) ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ವ್ಯಕ್ತಿ ಆಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲಾ
೧೦) ದೇವರು ವಿಗ್ರಹದೊಳಗಿಲ್ಲಾ ನಿಮ್ಮ ಭಾವನೆಗಳೇ ದೇವರು ನಿಮ್ಮ ಆತ್ಮವೇ ದೇವಸ್ಥಾನ
೧೧) ವಿಶ್ವದ ಅತ್ಯಂತ ದೊಡ್ಡ ಶಕ್ತಿ ಎಂದರೆ ಒಂದು ಯುವ ಶಕ್ತಿ ಮತ್ತೊಂದು ಯುವತಿಯ ಸೌಂದರ್ಯ.
This article uses material from the Wikipedia ಕನ್ನಡ article ಚಾಣಕ್ಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.