ಇವನು ಚಂದ್ರ ವಂಶದ ಭರತ ಕುಲದವನು ಮತ್ತು ಪಾಂಡವರು ಮತ್ತು ಕೌರವರ ಪೂರ್ವಜ.
ಶಂತನು ಮತ್ತು ಗಂಗಾ
ಒಮ್ಮೆ ಗಂಗಾ ತೀರದಲ್ಲಿ ಸಂಚರಿಸುತ್ತಿದ್ದಾಗ ಶಂತನು ಒಬ್ಬಳು ಅನನ್ಯ ಸೌಂದರ್ಯವತಿಯನ್ನು ನೋಡಿದನು. ಅವಳಿಗೆ ಎಷ್ಟು ಆಕರ್ಷಿತನಾದನೆಂದರೆ ಅವಳನ್ನು ಮದುವೆಯಾಗುವಂತೆ ಕೇಳಿಕೊಂಡನು. ಆ ಸುಂದರಿ ಮದುವೆಗೆ ಒಪ್ಪಲು ಒಂದು ಷರತ್ತನ್ನು ವಿಧಿಸಿದಳು. ಅದರ ಪ್ರಕಾರ, ಯಾವುದೇ ಕ್ಷಣ ರಾಜನು ಅವಳು ಏನೇ ಮಾಡಿದರೂ ಪ್ರಶ್ನೆ ಮಾಡಬಾರದು; ಮಾಡಿದರೆ ಅವನನ್ನು ಬಿಟ್ಟು ಹೋಗುವುದಾಗಿ ಹೇಳಿದಳು. ರಾಜನು ಇದಕ್ಕೆ ಒಪ್ಪಿ ವಿವಾಹ ನೆರವೇರಲ್ಪಟ್ಟಿತು.
ಸ್ವಲ್ಪ ಕಾಲ ಕಳೆಯಲು ರಾಜನಿಗೆ ಒಂದು ಗಂಡು ಮಗುವನ್ನು ಹೆತ್ತಳು. ಆದರೆ ಹುಟ್ಟಿದ ತಕ್ಷಣ ಮಗುವನ್ನು ಗಂಗಾ ನದಿಗೆ ಎಸೆದುಬಿಟ್ಟಳು. ರಾಜನಿಗೆ ಇದರಿಂದ ಸಖೇದಾಶ್ಚರ್ಯವಾದರೂ, ಪತ್ನಿ ಬಿಟ್ಟುಹೋಗುವುದನ್ನು ಸಹಿಸಲಾರದೇ ಅವಳಿಗೆ ಏನೂ ಪ್ರಶ್ನೆ ಮಾಡಲಿಲ್ಲ. ಆದರೆ ಈ ಪರಿಪಾಟ ಮುಂದಿನ ಆರು ಹಸುಗೂಸುಗಳಿಗೂ ಆಯಿತು.
ಆದರೆ ಎಂಟನೆಯ ಮಗು ಹುಟ್ಟಿದ್ದು, ಈ ಕೂಸನ್ನೂ ತನ್ನ ಪತ್ನಿ ನದಿಗೆ ಎಸೆಯುವುದನ್ನು ನೋಡಿದಾಗ ರಾಜನಿಗೆ ಸಿಟ್ಟು ತಡೆಯಲಾಗಲಿಲ್ಲ. ಅವಳನ್ನು ತಡೆದು ಕೂಸುಗಳನ್ನು ನದಿಗೆ ಎಸೆಯಲು ಕಾರಣವೇನೆಂದು ಕೇಳಿದಾಗ, ಆ ಸುಂದರಿ ತನ್ನ ನಿಜವಾದ ಗುರುತನ್ನು ತೋರಿ, ತಾನು ಗಂಗೆಯೆಂದು ಹೇಳಿ, ತಾನು ಈ ಮಗುವನ್ನು ಕರೆದು ಕೊಂಡು ಹೋಗಿ ಕಾಲಾಂತರದಲ್ಲಿ ರಾಜನಿಗೆ ಹಿಂದಿರುಗಿಸುವುದಾಗಿ ಹೇಳಿದಳು.
ಶಂತನು ಅವಳ ಈ ನಿರ್ಗಮನದಿಂದ ಬಹಳಷ್ಟು ನೊಂದು, ವರ್ಷಾನುಗಟ್ಟಲೆ ತನ್ನ ಮಗನ ವಾಪಸಾತಿಗೆ ಕಾದನು. ತನ್ನ ಮಾತಿನಂತೆ ಗಂಗೆ ರಾಜನ ಮಗನನ್ನು ಹಿಂದಿರುಗಿಸಿದಳು. ಆ ಮಗು, ಆಗ ಯುವಕನಾಗಿ ಬೆಳೆದಿದ್ದ. ಈ ಯುವಕನೇ ದೇವವ್ರತ/ಗಾಂಗೇಯ. ಇವನು ಭೀಷ್ಮ ಎಂಬ ಹೆಸರಿನಿಂದ ಪರಿಚಿತ. ಮಹಾಭಾರತದ ಕೇಂದ್ರ ಪಾತ್ರಗಳಲ್ಲಿ ಒಬ್ಬ.
ಶಂತನು ಮತ್ತು ಸತ್ಯವತಿ
ದೇವವ್ರಥನು ಒಬ್ಬ ಆಕರ್ಷಕ ಯುವಕನಾಗಿ ಬೆಳೆದಾಗ ಶಂತನು ಮೀನುಗಾರನ ಮಗಳಾದ ಸತ್ಯವತಿಯನ್ನು ನೋಡಿ ಮೋಹಿತನಾದನು. ಅವಳ ತಂದೆಯು ಮದುವೆಗೆ ಒಪ್ಪಲು ಷರತ್ತನ್ನು ವಿಧಿಸಿದನು. ಇದರ ಪ್ರಕಾರಸತ್ಯವತಿ ಜನ್ಮ ನೀಡುವ ಯಾವುದೇ ಸಂತಾನ ಸಿಂಹಾಸನಕ್ಕೆ ಅಧಿಕಾರಿಯಾಗಬೇಕು ಎಂದು.
ದೇವವ್ರಥನಿಗೆ ಇದರಿಂದ ಅನ್ಯಾಯವಾಗುವುದೆಂದು ಅರಿತ ಶಂತನು ಈ ಷರತ್ತಿಗೆ ಒಪ್ಪಲಾರದೇ ಹಿಂದಿರುಗಿದನು. ಆದರೆ ದೇವವ್ರಥನು ಇದನ್ನರಿತು ಸಿಂಹಾಸನದ ಆಸೆಯನ್ನು ತೊರೆದು ಸತ್ಯವತಿಯ ಸಂತಾನವೇ ಸಿಂಹಾಸನವೇರುವುದಾಗಿ ಸತ್ಯವತಿಯ ತಂದೆಗೆ ಮಾತು ಕೊಟ್ಟನು. ಇನ್ನೂ ಸಂದೇಹದಿಂದಿದ್ದ ಮೀನುಗಾರನನ್ನು ಒಪ್ಪಿಸಲು ಮತ್ತು ಸತ್ಯವತಿಯ ಸಂತಾನದ ಮುಂದಿನ ಪೀಳಿಗೆಗಳು ರಾಜ್ಯಭಾರ ಮಾಡಲು ಅನುವು ಮಾಡಿಕೊಡಲು ಜೀವನ ಪರ್ಯಂತ ಬ್ರಹ್ಮಚರ್ಯವನ್ನು ಆಚರಿಸುವುದಾಗಿ ಪ್ರತಿಜ್ಞೆ ಮಾಡಿದನು.
ಈ ಘಟನೆ ಅವನ ಹೆಸರು 'ಭೀಷ್ಮ' ಎಂದಾಗಲು ಕಾರಣವಾಯಿತು. ಶಂತನು ಮತ್ತು ಸತ್ಯವತಿಗೆ ಇಬ್ಬರು ಗಂಡು ಮಕ್ಕಳಾದರು, ಇವರು ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಶಂತನುವಿನ ಮರಣದ ನಂತರ, ಸತ್ಯವತಿಯು ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ರಾಜ್ಯಭಾರ ಮುಂದುವರಿಸಿದಳು. ಇದಕ್ಕೆ ಭೀಷ್ಮರ ಸಹಕಾರ, ಸಹಾಯವಿದ್ದಿತು.
This article uses material from the Wikipedia ಕನ್ನಡ article ಶಂತನು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.