ಸ್ಯಾಂಡ್ ಆರ್ಟಿಸ್ಟ್ ರಾಘವೇಂದ್ರ ಹೆಗಡೆ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಕಲಾವಿದ ರಾಘವೇಂದ್ರ ಹೆಗಡೆ ಕರ್ನಾಟಕದ ಏಕಮೇವ ಮರಳುಚಿತ್ರ ಕಲಾವಿದರು.
ಹಲವಾರು ಪ್ರಸಿದ್ದ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಚಿತ್ರಕಲಾವಿದರೂ ಆಗಿರುವ ಅವರು ಸ್ಥಳದಲ್ಲೇ ನೀಡುವ ವಿಷಯದ ಮೇಲೆ ಸದ್ಯಸ್ಪೂರ್ತಿಯಿಂದ ಚಿತ್ರರಚನೆ ಮಾಡಬಲ್ಲರು. ಜಾಗತಿಕ ಸಮಾವೇಶಗಳು, ಲೋಕಾರ್ಪಣೆಗಳು, ಸಿನಿಮಾ, ಧಾರಾವಾಹಿ, ಅವಧಾನ, ಪ್ರವಚನ, ಸಂಗೀತ ಮುಂತಾದ ನೂರಾರು ಕಾರ್ಯಕ್ರಮಗಳಲ್ಲಿ ಚಿತ್ರ, ಮರಳುಚಿತ್ರ ಪ್ರದರ್ಶನ ನೀಡಿರುತ್ತಾರೆ.
ಹುಟ್ಟೂರು ಸಿರ್ಸಿ ಸಮೀಪದಲ್ಲಿರುವ ಹೇರೂರು ಕಡ್ನಮನೆ. ಹುಟ್ಟಿದ್ದು ಮಾರ್ಚ ೧೪ ೧೯೮೦. ಹುಟ್ಟೂರಲ್ಲೇ ಇವರ ಪ್ರಾಥಮಿಕ ಶಿಕ್ಷಣ. ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ಬಿ.ಎಫ಼್.ಎ.ಪದವಿ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಎಂ.ಎಫ಼್.ಎ. ತಂದೆ ಗಜಾನನ ಹೆಗಡೆ ಕೃಷಿಕರು ಮತ್ತು ಹವ್ಯಾಸಿ ಯಕ್ಷಗಾನ ಭಾಗವತರು. ತಾಯಿ ಯಮುನಾ. ಸೋದರ ರವೀಂದ್ರ ಹೆಗಡೆ ಕೃಷಿಕರು. ಶಿಲ್ಪಕಲೆ, ಚಿತ್ರಕಲೆ, ರಂಗಭೂಮಿ, ಸಂಘಟನೆ, ಸಂದರ್ಭ ಚಿತ್ರಗಳನ್ನು ಹಲವು ಪುಸ್ತಕಗಳಿಗೆ ಬರೆದಿರುತ್ತಾರೆ. ಹೈಸ್ಕೂಲ್ ಚಿತ್ರಕಲಾ ಶಿಕ್ಷಕರಾಗಿದ್ದ ಬಿ.ಎಮ್.ಚಿತ್ರಗಿಮಠ ರವರು ರಾಘವೇಂದ್ರ ಹೆಗಡೆಯವರಲ್ಲಿನ ಕಲಾಸಕ್ತಿಯನ್ನು ಕಂಡು ಪ್ರೋತ್ಸಾಸಿದವರು. ಬೆಂಗಳೂರಿಗೆ ತಮ್ಮ ಸ್ನಾತಕೋತ್ತರ ಪದವಿಗಾಗಿ ಬಂದ ರಾಘವೇಂದ್ರ ಹೆಗಡೆ ಹಲವು ಕಲಾಮಾದ್ಯಮಗಳಿಗೆ ತಮ್ಮನ್ನು ತೆರೆದುಕೊಂಡರು. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ರಾಘವೇಂದ್ರ ಹೆಗಡೆ ಪತ್ನಿ ಅರ್ಚನಾ ಹೆಗಡೆ(ಆರ್ಕಿಟೆಕ್ಟ್) ಅವಳಿ ಮಕ್ಕಳಾದ ಭಕ್ತಿ, ಸೂಕ್ತಿಯೊಂದಿಗೆ ಜೀವಿಸುತ್ತಿದ್ದಾರೆ.
ರಾಘವೇಂದ್ರ ಹೆಗಡೆ ತಮ್ಮ ಸ್ನಾತಕೋತ್ತರ ಪದವಿ ಮುಗಿಸಿ ಹಲವು ಕಾಲೇಜುಗಳಲ್ಲಿ ಅಥಿತಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಗಾರ್ಡನ್ ಸಿಟಿ ಕಾಲಾಜಿನಲ್ಲಿ ಫ಼್ಯಾಷನ್ ಡಿಸೈನಿಂಗ್ ನಲ್ಲಿ ನವೀನ ಆಭರಣ ತಯಾರಿಕೆಯನ್ನು, ಆರ್. ವಿ. ಕಾಲೇಜಿನ ಆರ್ಕಿಟೆಕ್ಚರ್ ಬೇಸಿಕ್ ಡಿಸೈನ್ ತರಗತಿಯನ್ನು ವೀಗನ್ ಅಂಡ್ ಲೀ ಕಾಲೇಜಿನಲ್ಲಿ ರೇಖಾಗಣಿತದ ಮಾದರಿಯನ್ನು ಪಾಠ ಮಾಡುತ್ತಿದ್ದರು. ಇದೇ ಸಮಯದಲ್ಲಿ ಕಲಾಗಂಗೋತ್ರಿ ಎಂಬ ರಂಗಭೂಮಿ ತಂಡವನ್ನು ಸೇರಿ ಸಂಸ್ಕೃತ ನಾಟಕ ಮಧ್ಯಮ ವ್ಯಾಯೋಗದಲ್ಲಿ ಪಾತ್ರದಾರಿಯಾದರು. ನಂತರ ಎಸ್.ಎಲ್.ಭೈರಪ್ಪನವರ ಮಂದ್ರ ಕಾದಂಬರಿ ಆಧಾರಿತ ನಾಟಕಕ್ಕೆ ರಂಗ ಸಜ್ಜಿಕೆ, ಈಡಿಪಸ್ ನಾಟಕಕ್ಕೆ ವಸ್ತ್ರ ವಿನ್ಯಾಸವನ್ನು ಮಾಡಿದರು. ಕವಿ ಕೆ.ಎಸ್ ನರಸಿಂಹಸ್ವಾಮಿ ಕವನಗಳ ಆಧರಿತ ಮೈಸೂರು ಮಲ್ಲಿಗೆ ನಾಟಕದಲ್ಲಿ ಅಳಿಯನ ಪಾತ್ರಕ್ಕೆ ಬಣ್ಣ ಹಚ್ಚಿ ನಟನಾಗಿ ನೂರಿಪ್ಪತ್ತಕಿಂತ ಹೆಚ್ಚು ಪ್ರದರ್ಶನವನ್ನು ನಾಡಿನಾದ್ಯಂತ ನೀಡಿದರು. ಇದೇ ಸಮಯದಲ್ಲಿ ಪ್ರಸಿದ್ದ ಶತಾವಧಾನಿ ಡಾ.ರಾ ಗಣೇಶ ರವರ ಅವಧಾನ ಕಾರ್ಯಕ್ರಮದಲ್ಲಿ ಪೃಚ್ಚಕರಾಗಿ ಭಾಗವಹಿಸುತ್ತಿದ್ದರು. ಹತ್ತಕ್ಕಿಂತ ಹೆಚ್ಚು ಪುಸ್ತಕಗಳಿಗೆ. ಮುಖಪುಟ, ಸಂದರ್ಬ ಚಿತ್ರ ರಚನೆ ಮಾಡಿದ್ದಾರೆ. ಬೆಂಗಳೂರಿನ ಪ್ರಸಿದ್ದ ಗರುಡಾ ಮಾಲ್ ನಲ್ಲಿ ಕಲಾಸಲಹೆಗಾರರಾಗಿ ಅಲ್ಲಿ ಹಲವು ಕಲಾಕ್ರತಿಗಳನ್ನು ರಚಿಸಿರುತ್ತಾರೆ. ೨೦೦೭ ರಲ್ಲಿ ಅಂದಿನ ರಾಷ್ಟಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರಿಗೆ ತಮ್ಮ ಕಲಾಕ್ರತಿಯನ್ನು ಕೊಡುಗೆಯಾಗಿ ನೀಡಿದ್ದು ಇಂದಿಗೂ ಅದು ರಾಷ್ಟ್ರಪತಿ ಭವನದ ಸಂಗ್ರಹದಲ್ಲಿದೆ.
೨೦೧೦ರ ಜೂನ್ ೫ ರಂದು ತಮ್ಮ ಮೊದಲ ಮರಳುಚಿತ್ರ ಪ್ರದರ್ಶನವನ್ನು ಗೋಕುಲಂ ಸಂಗೀತ ಶಾಲೆ ಆಯೋಜಿಸುವ ಕಲಾರ್ಣವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೀಡಿದ್ದು ಅದು ಕರ್ನಾಟಕ ಕಂಡ ಮೊದಲ ಮರಳುಚಿತ್ರ ಪ್ರದರ್ಶನ. ೨೦೧೦ರಲ್ಲಿ ಆರಂಭಿಸಿ ಇಂದಿನವರೆಗೆ (೨೦೧೮) ಜಗತ್ತಿನಾದ್ಯಂತ ೫೫೦ ಕ್ಕೂ ಹೆಚ್ಚು ಮರಳುಚಿತ್ರ ಪ್ರದರ್ಶನ ನೀಡಿದ್ದಾರೆ.
This article uses material from the Wikipedia ಕನ್ನಡ article ರಾಘವೇಂದ್ರ ಹೆಗಡೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.