ಬೇವು

ಬೇವು ಭಾರತೀಯ ಉಪಖಂಡದ ಮೂಲವಾಸಿ.

ಬೇವು
ಬೇವು
ಅಜಡಿರಕ್ಟ ಇಂಡಿಕ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Sapindales
ಕುಟುಂಬ:
Meliaceae
ಕುಲ:
Azadirachta
ಪ್ರಜಾತಿ:
A. indica
Binomial name
Azadirachta indica
A.Juss., 1830
Synonyms
  • Azadirachta indica var. minor Valeton
  • Azadirachta indica var. siamensis Valeton
  • Azadirachta indica subsp. vartakii Kothari, Londhe & N.P.Singh
  • Melia azadirachta L.
  • Melia indica (A. Juss.) Brandis

ಇದನ್ನು ಕನ್ನಡದಲ್ಲಿ ಒಳ್ಳೆ ಬೇವು, ಕಹಿಬೇವು, ಕಹಿನಿಂಬೆ ಮರ, ಕಹಿನಿಂಬ, ಇಸಬೇವು, ಬೇವು, ವಿಷಬೇವು, ಕಾಯಿಬೇವು ಎಂದು ಪ್ರಾಂತೀಯವಾರು ಗುರುತಿಸುತ್ತಾರೆ. ತೀವ್ರ ತರದ ಬರಗಾಲದಲ್ಲಿಯೂ ಬದುಕಿ, ಜನೋಪಯೋಗಿ ಎನಿಸಿದ ಮರ. ಇದು ಇಂಡೋ-ಮಲಯ ಪ್ರದೇಶ ಹಾಗೂ ಆಫ್ರಿಕದ ಉಷ್ಣವಲಯಗಳಲ್ಲೆಲ್ಲ ಕಾಣದೊರೆಯುತ್ತದೆ.

ಎಲ್ಲ ತೆರನ ಮಣ್ಣುಗಳಲ್ಲಿ ಇದು ಬೆಳೆಯುತ್ತದಾದರೂ ಕಪ್ಪು ಎರೆಭೂಮಿಯಲ್ಲಿ ಉತ್ತಮ ಬೆಳೆವಣಿಗೆ ತೋರುತ್ತದೆ. ಮರದ ವೃದ್ಧಿ ಬೀಜಗಳ ಮೂಲಕ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಮೆಲಿಯೇಸಿ ಕುಟುಂಬಕ್ಕೆ ಸೇರಿದ್ದು,ಅಜಡಿರಕ್ಟ ಇಂಡಿಕ (Azadirachta Indica) ಎಂಬುದು ಸಸ್ಯಶಾಸ್ತ್ರೀಯ ಹೆಸರು. 'ವೆಪ್ಪಮ್' ಎಂದು ತಮಿಳು ಭಾಷೆಯಲ್ಲಿ, 'ವೇಪ' ಎಂದು ತೆಲುಗುಭಾಷೆಯಲ್ಲಿ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ 'ನೀಮ್' ಎಂದು ಹೆಸರಿದೆ.

ಸಂ: ನಿಂಬಾ

ಹಿಂ: ನೀಮ್

ಮ: ಲಿಂಬ

ಗು: ಲಿಂಬಾಡೋ

ತೆ: ವಿಂಬು

ತ: ನಿಂಬಾಮು

ಸಸ್ಯದ ಗುಣಲಕ್ಷಣಗಳು

ಮದ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಬೇವಿನಮರ ಸುಮಾರು ೩೦ ರಿಂದ ೬೦ ಅಡಿ ಎತ್ತರದವರೆಗೆ ಬೆಳೆಯುತ್ತದೆ. ಒಣಸೀಮೆಗಳಲ್ಲಿ ಬೆಳೆಯುವಂಥ ಬೇವಿನ ಮರದ ಎಲೆಗಳು ವರ್ಷಕ್ಕೊಮ್ಮೆ ಉದುರುವುವಾದ್ದರಿಂದ ಇದನ್ನು ಪರ್ಣಪಾತಿ ಮರಗಳ ಗುಂಪಿಗೆ ಸಹ ಸೇರಿಸುವುದಿದೆ. ಬರಗಾಲದ ಸಮಯದಲ್ಲಿ ಎಲೆ ಉದುರಿಸುತ್ತದೆ. ದಟ್ಟವಾದ ಹಂದರ. ತೊಗಟೆ ಸಾಧಾರಣ ಮಂದ, ಕರಿಬೂದು ಬಣ್ಣವಿರುತ್ತದೆ. ದಾರುವು ಕೆಂಪು ಕಂದು ಬಣ್ಣವಿದ್ದು, ಸೀಳಿಕೆಗಳಿರುತ್ತವೆ.

ಎಲೆಗಳು ಸಂಯುಕ್ತ, ಏಕಪಿಚ್ಚಕ ಮಾದರಿಯವು. ಪರ್ಯಾಯರೀತಿಯಲ್ಲಿ ಜೋಡಣೆಗೊಂಡಿರುವುವು. ಎಲೆಗಳ ಅಂಚು ಗರಗಸದಂತೆ. ಎಲೆಗಳ ಕಕ್ಷಗಳಲ್ಲಿ ಸ್ಥಿತವಾಗಿರುವ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂ ಅರಳುವ ಸಮಯ ಫೆಬ್ರುವರಿ-ಏಪ್ರಿಲ್. ಫಲ ಒಂಟಿ ಬೀಜವುಳ್ಳ ಬೆರಿ ಮಾದರಿಯದು.

ಬೇವಿನಮರ ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಗೊಂಚಲು ಗೊಂಚಲಾಗಿ ಸಣ್ಣ ಬಿಳಿಹೂಗಳನ್ನು ಬಿಡುತ್ತದೆ. ಬೇವಿನಮರದ ಹೂಗಳ ಪರಿಮಳ ಜೇನಿನ ಪರಿಮಳವನ್ನು ಹೋಲುತ್ತದೆ.

ಹೂಗಳು ಚಿಕ್ಕವು ಮತ್ತು ಬೆಳ್ಳಗಿರುತ್ತವೆ. ಕಾಯಿಗಳು ಹಸಿರಾಗಿದ್ದು ಹಣ್ಣಾದಾಗ ಹಳದಿ ಬಣ್ಣವನ್ನು ಹೊಂದುತ್ತವೆ. ಹಣ್ಣನ್ನು ಹಿಚುಕಿದಾಗ ಬಿಳಿ ಅಂಟಾದ ದ್ರವವು ಹೊರಡುವುದು. ಮರದ ಗೋಂದು ಬೆಳ್ಳಗಿರುವುದು. ಇದರಲ್ಲಿ ಕಹಿಯಾದ “ಮಾರ್ಗೊಸೈನ್” ಅನ್ನುವ ಕಟು ಕ್ಷಾರವಿರುವುದು.

ಬೇವು ಕಹಿರುಚಿಗೆ ಇನ್ನೊಂದು ಹೆಸರು ಎನಿಸಿದೆ. ಇದರ ಎಲ್ಲ ಭಾಗಗಳು ಕಹಿಯೇ. ಇದಕ್ಕೆ ಕಾರಣ ನಿಂಬಿಡನ್ ಎಂಬ ಕಹಿಸಾರ.

ಉಪಯೋಗಗಳು

ಬರಗಾಲದಲ್ಲಿ ಬದುಕಿ ಉಳಿಯುವ ಮರವಾದುದರಿಂದ ಭಾರತದ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೆರಳಿನಾಶ್ರಯದ ಪ್ರಮುಖ ಮರ. ಸಾಲು ಮರಗಳಾಗಿ,ತೋಪುಗಳಾಗಿ ನೆಡಲ್ಪಟ್ಟಿದೆ. ಇದರ ದಾರುವು ಬಹು ಉಪಯೋಗಿ. ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ. ಗೃಹ ನಿರ್ಮಾಣ, ಪಿಠೋಪಕರಣ ಮುಂತಾದ ಕೆಲಸಗಳಿಗೆ, ಮನೆಕಟ್ಟಡ, ಕೆತ್ತನೆ, ಹಲಗೆ, ಆಟಿಕೆ, ನೇಗಿಲು ಮುಂತಾದ ಕೃಷಿ ಉಪಕರಣಗಳು-ಇವಕ್ಕೆ ಉಪಯೋಗಿಸಲ್ಪಡುತ್ತದೆ. ತೊಗಟೆಯಿಂದ ಬರುವ ಅಂಟು, ಹೂವು, ಎಲೆಗಳು ಔಷಧಿಗಳಿಗೆ ಉಪಯೋಗವಾಗುತ್ತದೆ. ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರ. ಎಳೆಯ ಕಡ್ಡಿ ದಂತಮಾರ್ಜನಕ್ಕಾಗಿ ಉಪಯೋಗವಾಗುತ್ತದೆ.

ಕೆಲವೊಮ್ಮೆ ಚಳಿಗಾಲದಲ್ಲಿ ಬೇವಿನ ಮರದ ಬುಡದಿಂದ ಒಂದು ಬಗೆಯ ಬಿಳಿಯ ರಸ ಒಸರುತ್ತದೆ. ಸಿಹಿಮಿಶ್ರಿತ ಹುಳಿ ರುಚಿಯುಳ್ಳ ಇದಕ್ಕೆ ಬೇವಿನ ಹೆಂಡ ಎಂದು ಹೆಸರು. ಮರದಿಂದ ಹೊರಬಂದ ಕೂಡಲೆ ಬ್ಯಾಕ್ಟೀರಿಯ ಕ್ರಿಯೆಗೆ ಪಕ್ಕಾಗಿ ಇದು ನೊರೆ ನೊರೆಯಾಗುತ್ತದೆ. ಅಂತೆಯೇ ಇದಕ್ಕೆ ಅಸಹ್ಯವಾಸನೆ ಉಂಟಾಗುತ್ತದೆ. ಆದರೂ ಇದನ್ನು ಕುಷ್ಠ, ಇನ್ನಿತರ ಬಗೆಯ ಚರ್ಮರೋಗಗಳು, ನಿಶ್ಯಕ್ತಿ ಮುಂತಾದುಗಳ ನಿವಾರಣೆಗೆ ಉಪಯೋಗಿಸಲಾಗುತ್ತದೆ.

ಔಷಧೀಯ ಗುಣಗಳು

  • ಹಲವು ಶತಮಾನಗಳಿಂದ ಭಾರತೀಯ ನಾಟೀ ವೈದ್ಯ ಪದ್ಧತಿ ಮತ್ತು ಆಯುರ್ವೇದ ಪದ್ಧತಿಯಲ್ಲಿ ಬೇವು ಔಷಧಿಯಾಗಿ ಬಳಕೆಯಾಗುತ್ತಿದೆ.
  • ಬೇವಿನಮರದ ಅಂಗಗಳಾದ ಎಲೆ , ತೊಗಟೆ, ಹೂ, ಹಣ್ಣು, ಕಡ್ಡಿ, ಬೀಜ, ಎಣ್ಣೆ ಹಾಗು ಬೇರುಗಳು ಔಷಧೀಯ ಗುಣಗಳನ್ನು ಮೈದುಂಬಿಕೊಂಡಿರುತ್ತವೆ.
  • ಬೇವಿನಮರದಲ್ಲಿ ಸುಮಾರು ೧೩೫ಕ್ಕೂ ಹೆಚ್ಚು ರೋಗನಿವಾರಕ ಗುಣಗಳಿವೆ ಎಂದು ಇತ್ತೀಚಿನ ಸಂಶೋಧನೆ ತಿಳಿಸುತ್ತದೆ.
  • ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬೇವು ಸಹಾಯಕ ಎಂದು ಭಾರತೀಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
  • ಕುಷ್ಠ, ತೊನ್ನು, ಕಣ್ಣಿನ ತೂಂದರೆ, ಹೊಟ್ಟೆ ಹುಳು, ಕೆಮ್ಮು, ಉಬ್ಬಸ, ಪೈಲ್ಸ್, ಮಧುಮೇಹ, ಕಾಮಾಲೆ, ಪ್ಲೇಗ್, ಇಸುಬು, ಅಲ್ಸರ್ ಜ್ವರ ದೋಷನಿವಾರಣೆಗೆ ಬಳಸಲ್ಪಡುತ್ತದೆ.
  • ಬೇವಿನ ಮರದ ಉತ್ಪನಗಳನ್ನು ಪಶುವೈದ್ಯ ಚಿಕಿತ್ಸೆಯಲ್ಲೂ ಬಳಸಲಾಗುತ್ತದೆ.
  • ಮೈ ಉರಿ, ಕಜ್ಜಿ, ತುರಿಗೆ ಹಸಿ ಅಥವಾ ಒಣಗಿದ ಬೀಜಗಳನ್ನು ಚೆನ್ನಾಗಿ ಜಜ್ಜಿ ಸ್ವಲ್ಪ ಎಳ್ಳೆಣ್ಣೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿ ಎರಡು ಬಿಲ್ಲೆ ಕರ್ಪೂರ ಹಾಕಿ, ಪಾತ್ರೆಯನ್ನು ಕೆಳಗಿಳಿಸಿರಿ. ಈ ಮುಲಾಮನ್ನು ಹಚ್ಚಿರಿ.
  • ಪ್ರತಿನಿತ್ಯ ಐದು ಬೇವಿನ ಎಲೆಗಳನ್ನು ತಿನ್ನುವುದರಿಂದ ರಕ್ತ ಶುದ್ಧಿಯಾಗುವುದು, ಚರ್ಮ ವ್ಯಾಧಿಗಳಿಂದ ರಕ್ಷಣೆ ಸಿಗುವುದು.
  • ಮಲೇರಿಯಾ ಜ್ವರದಲ್ಲಿ ಬೇವಿನ ಚೆಕ್ಕೆಯ ಕಷಾಯದಲ್ಲಿ ಶಾಜೀರಿಗೆ(ಕಹಿ ಜೀರಿಗೆ) ಚೂರ್ಣ ¼ ಟೀ ಚಮಚ ಸೇರಿಸಿ ಸ್ವಲ್ಪ ಜೇನು ಸೇರಿಸಿ ಕುಡಿಸುವುದು. ಬೇವಿನ ಎಣ್ಣೆಯನ್ನು ಹಳ್ಳಗಳಲ್ಲಿ ನಿಂತಿರುವ ನೀರಿಗೆ ಹಾಕುವುದು. ಸೊಳ್ಳೆಗಳು ಸಾಯುವುವು. ಸೊಳ್ಳೆಗಳ ಮೊಟ್ಟೆ ಮರಿಗಳು ನಾಶವಾಗುವುವು.
  • ಮಧುಮೇಹಕ್ಕೆ ಬೇವಿನ ಚಿಗುರೆಲೆಗಳನ್ನು ನುಣ್ಣಗೆ ಅರೆದು ಗಜ್ಜುಗದ ಗಾತ್ರದ ಗುಳಿಗೆ ಮಾಡಿ ಒಂದೊಂದು ಗುಳಿಗೆಯನ್ನು ಸೇವಿಸುವುದು.
  • ಕೈಕಾಲುಗಳ ಸೆಳೆತಕ್ಕೆ ಬೇವಿನ ಎಣ್ಣೆಯನ್ನು ಕೈಕಾಲುಗಳಿಗೆ ಹಚ್ಚಿ ಚೆನ್ನಾಗಿ ತಿಕ್ಕಿರಿ. ಕೈಕಾಲು ತಣ್ಣಗಿರುವಾಗ ಈ ಚಿಕಿತ್ಸೆಯನ್ನು ಒಂದೆರಡು ತಾಸು ಮುಂದುವರೆಸುವುದು. ಬೇವಿನ ಎಣ್ಣೆಯನ್ನು ವೀಳ್ಯದೆಲೆಗೆ ಹಚ್ಚಿ ತಿನ್ನುವುದರಿಂದ ಸಹ ಅನುಕೂಲವಾಗುವುದು.
  • ಹಿಮ್ಮಡಿಗಳ ಬಿರುಕಿಗೆ ಅಥವಾ ಸೀಳುವಿಕೆಗೆ 20 ಬೇವಿನ ಹಸಿ ಎಲೆಗಳನ್ನು ಸ್ವಲ್ಪ ತುಪ್ಪದೊಂದಿಗೆ ಕಪ್ಪಾಗುವವರೆಗೂ ಹುರಿಯಿರಿ ಮತ್ತು ಹುರಿದ ಬೇವಿನೆಲೆಗಳನ್ನು ನುಣ್ಣಗೆ ಅರೆದು ಸ್ವಲ್ಪ ಬಿಸಿಯಾಗಿರುವ ಜೇನು ಮೇಣದಲ್ಲಿ ಸೇರಿಸಿರಿ. ತಣ್ಣಗಾದ ಮೇಲೆ ಹಿಮ್ಮಡಿಗಳಿಗೆ ಲೇಪಿಸುವುದು.
  • ಕಿವಿ ನೋವಿಗೆ ಬೇವಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಒಂದೆರಡು ತೊಟ್ಟು ಎಣ್ಣೆಯನ್ನು ನೋವಿರುವ ಕಿವಿಗೆ ಹಾಕುವುದು.
  • ಬೇವಿನ ಎಣ್ಣೆಯನ್ನು ಗಜಕರ್ಣ, ವೃಣ ಮುಂತಾದ ಚರ್ಮರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಸಂಧೀವಾತಕ್ಕೂ ಇದು ಪರಿಣಾಮಕಾರಿ. ಜಂತುನಿವಾರಕ, ಕೀಟ ನಿರೋಧಿ ಗುಣಗಳೂ ಇದಕ್ಕುಂಟು. ಬೇವಿನ ಎಣ್ಣೆಯನ್ನು ಹಲ್ಲುಸರಿ, ಸಾಬೂನುಗಳೊಂದಿಗೆ ಸೇರಿಸುವುದುಂಟು.
  • ಎಲೆಗಳು ಪಚನಕಾರಿ, ಕಫಹಾರಿ, ಜಂತುನಿವಾರಕ, ಮೂತ್ರೋತ್ತೇಜಕ, ವಿಷಾಪಹಾರಿ, ಕ್ರಿಮಿನಾಶಕ ಎಂದು ಹೆಸರಾಂತಿವೆ. ಜೇನುತುಪ್ಪದೊಡನೆ ಸೇವಿಸಿದರೆ ಕಾಮಾಲೆ ಹಾಗೂ ಚರ್ಮ ರೋಗಗಳೂ ವಾಸಿಯಾಗುವುವು ಎನ್ನಲಾಗಿದೆ. ಎಲೆಗಳನ್ನು ಬೆಚ್ಚಾರ, ಕಷಾಯ ಮತ್ತು ಕರ್ಪೂರ ತೈಲಗಳಲ್ಲಿ ಅದ್ದಿದ ಬಟ್ಟೆಯನ್ನು ಮೂಳೆ ಮುರಿತಗಳಿಗೆ ಪಟ್ಟಿಯಾಗಿ ಕಟ್ಟುವುದಿದೆ.
  • ತೊಗಟೆ ಬಂಧಕ, ಜಂತು ನಿವಾರಕ, ಜ್ವರಹರ, ಉತ್ತೇಜಕ ಎನ್ನಲಾಗಿದೆ. ಇದು ಚರ್ಮರೋಗಗಳಿಗೆ ಮದ್ದೂ ಹೌದು.
  • ತಲೆನೋವಿನ ಚಿಕಿತ್ಸೆಗೆ ಹೂ ಮತ್ತು ಎಲೆಗಳ ಬೆಚ್ಚಾರ ಪರಿಣಾಮಕಾರಿ ಎನಿಸಿದೆ.
  • ಬೇವಿನ ಹಣ್ಣನ್ನು ಮೂತ್ರಪಿಂಡದ ಕಾಯಿಲೆ, ಮೂಲವ್ಯಾಧಿ, ಹೊಟ್ಟೆಯಲ್ಲಿಯ ಹುಳು, ಕುಷ್ಠ ಮುಂತಾದವುಗಳ ಚಿಕಿತ್ಸೆಗೆ ಬಳಸಲಾಗುತ್ತದೆ.
  • ಬೇವಿನ ಗೋಂದು ಒಳ್ಳೆಯ ಉತ್ತೇಜಕ, ತಂಪುಕಾರಕ, ಶಕ್ತಿ ವರ್ಧಕ ಎನಿಸಿದೆ.
  • ಒಣಬೀಜಗಳ ಲೇಪವನ್ನು ಹೇನುಗಳ ನಿವಾರಣೆಗೆ ಬಳಸುವುದಿದೆ.

ಧಾರ್ಮಿಕ ಮಹತ್ವ

ಭಾರತೀಯರು ಚಾಂದ್ರಮಾನ ಯುಗಾದಿ ಆಚರಣೆಯಲ್ಲಿ ಬೇವು ಬೆಲ್ಲವನ್ನು ಜೀವನದಲ್ಲಿ ಸಿಹಿ ಕಹಿಯನ್ನು ಸಮಾನವಾಗಿ ಪರಿಗಣಿಸಬೇಕೆಂದು ಸಾಂಕೇತಿಕವಾಗಿ ಬಳಸುತ್ತಾರೆ.

ಛಾಯಾಂಕಣ

ಅಧಾರ ಗ್ರಂಥಗಳು

  1. ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ಉಲ್ಲೇಖಗಳು

ಬೇವು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೇವು

Tags:

ಬೇವು ಸಸ್ಯಶಾಸ್ತ್ರೀಯ ವರ್ಗೀಕರಣಬೇವು ಸಸ್ಯದ ಗುಣಲಕ್ಷಣಗಳುಬೇವು ಉಪಯೋಗಗಳುಬೇವು ಔಷಧೀಯ ಗುಣಗಳುಬೇವು ಧಾರ್ಮಿಕ ಮಹತ್ವಬೇವು ಛಾಯಾಂಕಣಬೇವು ಅಧಾರ ಗ್ರಂಥಗಳುಬೇವು ಉಲ್ಲೇಖಗಳುಬೇವು

🔥 Trending searches on Wiki ಕನ್ನಡ:

ಏಷ್ಯನ್ ಕ್ರೀಡಾಕೂಟಜವಾಹರ‌ಲಾಲ್ ನೆಹರುಛಂದಸ್ಸುಭಗತ್ ಸಿಂಗ್ಪರ್ಯಾಯ ದ್ವೀಪದಿಯಾ (ಚಲನಚಿತ್ರ)ಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಭಾರತದಲ್ಲಿನ ಶಿಕ್ಷಣಸಂಖ್ಯಾಶಾಸ್ತ್ರಜನತಾ ದಳಸಿಂಧೂತಟದ ನಾಗರೀಕತೆಗರ್ಭಧಾರಣೆಟಿಪ್ಪು ಸುಲ್ತಾನ್ದಾದಾ ಭಾಯಿ ನವರೋಜಿಪೆಟ್ರೋಲಿಯಮ್ಬಾಲಕಾರ್ಮಿಕಭಾರತದ ಆರ್ಥಿಕ ವ್ಯವಸ್ಥೆಹೊಯ್ಸಳಜವಹರ್ ನವೋದಯ ವಿದ್ಯಾಲಯಜೋಡು ನುಡಿಗಟ್ಟುಇಮ್ಮಡಿ ಪುಲಿಕೇಶಿಮೊಜಿಲ್ಲಾ ಫೈರ್‌ಫಾಕ್ಸ್ಕಾರ್ಲ್ ಮಾರ್ಕ್ಸ್ಹೆಚ್.ಡಿ.ಕುಮಾರಸ್ವಾಮಿಕುದುರೆಸಾರಾ ಅಬೂಬಕ್ಕರ್ರಾಮಕೃಷ್ಣ ಪರಮಹಂಸಸುಮಲತಾಮಂಗಳಮುಖಿಮಾನ್ಸೂನ್ಮೈಗ್ರೇನ್‌ (ಅರೆತಲೆ ನೋವು)ಕೆಂಪೇಗೌಡ (ಚಲನಚಿತ್ರ)ಕೊರೋನಾವೈರಸ್ಮೈಸೂರು ದಸರಾಚಿಪ್ಕೊ ಚಳುವಳಿವಸಾಹತು ಭಾರತಜಿ.ಎಸ್.ಶಿವರುದ್ರಪ್ಪಶಿಕ್ಷಣಪರಿಮಾಣ ವಾಚಕಗಳುಮಾರುಕಟ್ಟೆಭಾರತದಲ್ಲಿ ಬ್ರಿಟಿಷ್ ಆಳ್ವಿಕೆಹಿಂದೂ ಮಾಸಗಳುತೂಕಕನ್ನಡ ಛಂದಸ್ಸುಕರಗಭಾರತದ ಗಡಿಗಳು ಮತ್ತು ನರೆ ರಾಜ್ಯಗಳುನೈಟ್ರೋಜನ್ ಚಕ್ರದಾಸವಾಳಕನ್ನಡದಲ್ಲಿ ವಚನ ಸಾಹಿತ್ಯಕ್ಯಾರಿಕೇಚರುಗಳು, ಕಾರ್ಟೂನುಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಂಪತ್ತಿನ ಸೋರಿಕೆಯ ಸಿದ್ಧಾಂತಚಂಪಾರಣ್ ಸತ್ಯಾಗ್ರಹಪ್ರಜಾವಾಣಿಚಂದ್ರಗುಪ್ತ ಮೌರ್ಯಮತದಾನಸೂಳೆಕೆರೆ (ಶಾಂತಿ ಸಾಗರ)ಪ್ರಸ್ಥಭೂಮಿಪಂಜೆ ಮಂಗೇಶರಾಯ್ಯೋಗ ಮತ್ತು ಅಧ್ಯಾತ್ಮದಯಾನಂದ ಸರಸ್ವತಿಬೇಸಿಗೆಉಡವಿನಾಯಕ ಕೃಷ್ಣ ಗೋಕಾಕಭೀಮಸೇನ ಜೋಷಿಭೂಮಿಯ ವಾಯುಮಂಡಲದಕ್ಷಿಣ ಕನ್ನಡಬಸವೇಶ್ವರಬಾಲ ಗಂಗಾಧರ ತಿಲಕರಾಷ್ಟ್ರೀಯ ಶಿಕ್ಷಣ ನೀತಿಅತೀಶ ದೀಪಂಕರಸಂಚಿ ಹೊನ್ನಮ್ಮಧರ್ಮಸ್ಥಳಸ್ತ್ರೀಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭಾರತದ ನದಿಗಳುಭಾರತದ ಸಂವಿಧಾನ🡆 More