ಬೀದರ ಭಾರತದ ಕರ್ನಾಟಕ ರಾಜ್ಯದ ಒಂದು ನಗರ.
ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು ಬೀದರ ಕರ್ನಾಟಕ ರಾಜ್ಯದ ಮುಕುಟ ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ | |
---|---|
city | |
Country | India |
State | Karnataka |
Region | Bayaluseeme |
District | Bidar |
Government | |
• Deputy Commissioner | Dr. PC Jaffer IAS |
Area | |
• Total | ೪೩ km೨ (೧೭ sq mi) |
Elevation | ೬೧೪ m (೨,೦೧೪ ft) |
Population | |
• Total | ೧,೭೦,೨೦೪ |
• Density | ೪,೦೦೦/km೨ (೧೦,೦೦೦/sq mi) |
Languages | |
• Official | Kannada |
Time zone | UTC+5:30 (IST) |
PIN | 585 401 |
Telephone code | 91 8482 |
Vehicle registration | KA38 |
Website | www |
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೀದರ - ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಭಾಲ್ಕಿ, ಹುಮನಾಬಾದ್, ಬೀದರ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, ಬಿಜಾಪುರ, ಗೋಲ್ಕೊಂಡ, ಗುಲ್ಬರ್ಗಾ ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು ಬಸವಕಲ್ಯಾಣದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. ಬಸವಕಲ್ಯಾಣದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ ಭಾಲ್ಕಿ ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ.
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ ನಾಂದೇಡ್ ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ. ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. ಬಸವಕಲ್ಯಾಣ ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ ಹಳ್ಳಿಖೇಡ ನಾಲಾ ಇವುಗಳು ಸಣ್ಣ ಹೊಳೆಗಳು.
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು ಬಸವಣ್ಣನವರ ಕಾಲದಲ್ಲಿ ಮತ್ತು ಬಹಮನಿ ಸುಲ್ತಾನರ ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. ರಾಷ್ಟ್ರಕೂಟರು, ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ ಬಸವಕಲ್ಯಾಣವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು ಬಿಜಾಪುರದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ. ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. ಬಸವಕಲ್ಯಾಣದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ. ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
ಕನ್ನಡ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಸ್ತುತ ಪ್ರೊ. ಸಿದ್ರಾಮಪ್ಪ ಮಸಿಮಡೆ ಅವರ ಅಧ್ಯಕ್ಷತೆಯಲ್ಲಿ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಪರಿಷತ್ತು ತಾಲ್ಲೂಕಿನಲ್ಲಿರುವ ಘಟಕಗಳು ಮತ್ತು ವಲಯ ಘಟಕಗಳನ್ನು ಹೊಂದಿದೆ. ಇತರ ಅನೇಕ ಸಂಘ ಸಂಸ್ಥೆಗಳಾದ ಬೀದರ ಜಿಲ್ಲಾ ಲೇಖಕರ ಮತ್ತು ಕಲಾವಿದರ ಸಂಘ ಶಿವಕುಮಾರ್ ಕಟ್ಟೆ ಯವರ ಅಧ್ಯಕ್ಷತೆಯಲ್ಲಿ ಮತ್ತು ಧರಿನಾಡು ಕನ್ನಡ ಸಂಘ, ದೇಶಾಂಶ ಹುಡ್ಗಿಯವರ ಅಧ್ಯಕ್ಷತೆಯಲ್ಲಿ, ಸಾಹಿತ್ಯ ಪರಿಷತ್ತಿನ ಜೊತೆ ಸೇರಿಕೊಂಡು ಬೀದರ ಜಿಲ್ಲೆಯ ಕನ್ನಡ ಅಭಿವೃದ್ಧಿಯ ಕೆಲಸ ಮಾಡುತ್ತಿವೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಘಟ್ಟಗಳು ಬರುವುದುಂಟು. ಬೀದರ್ನಲ್ಲಿ ನಡುಗನ್ನಡದ ಭಾಗವಾಗಿರುವ ದಾಸ ಸಾಹಿತ್ಯದ ಪ್ರಸಾರಕ್ಕಾಗಿ ಹುಟ್ಟಿಕೊಂಡಿರುವ ರಾಜ್ಯಮಟ್ಟದ ಸಂಸ್ಥೆ ದಾಸ ಸಾಹಿತ್ಯ ಪರಿಷತ್ತು.
2009ರಲ್ಲಿ ಶಿಕ್ಷಕ, ಸಾಹಿತಿ ಬಿ.ಎಂ ಅಮರವಾಡಿ ಕಲ್ಪನೆಯ ಕೂಸಾಗಿ ಸಂಸ್ಥಾಪಕ ಅಧ್ಯಕ್ಷರಾಗಿ ರಾಜ್ಯಮಟ್ಟದ ದಾಸ ಸಾಹಿತ್ಯ ಪರಿಷತ್ತು ಸಂಸ್ಥೆಯು ರಚಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಜಿಲ್ಲಾ ಘಟಕಗಳು ಹೊಂದಿದೆ.
ಪ್ರೊ. ವಸಂತ ಕುಷ್ಟಗಿ ಸರ್ವಾಧ್ಯಕತೆಯಲ್ಲಿ ರಾಜ್ಯಮಟ್ಟದ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ 2013ರಲ್ಲಿ ಹಾಗೂ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ ಸರ್ವಾಧ್ಯಕ್ಷತೆಯಲ್ಲಿ 2014ರಲ್ಲಿ ರಾಜ್ಯಮಟ್ಟದ ದ್ವಿತೀಯ ದಾಸ ಸಾಹಿತ್ಯ ಸಮ್ಮೇಳನಗಳು ಆಯೋಜಿಸಲಾಗಿತ್ತು.
ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಜಿ, ಉಡುಪಿ ಶ್ರೀಮಠದ ಪುತ್ತಿಗೆ ಶ್ರೀಗಳು ಸೇರಿದಂತೆ ನಾಡಿನ ಹೆಸರಾಂತ ಸಾಹಿತಿಗಳು, ಚಿಂತಕರು ಹಾಗೂ ವಿದ್ವಾಂಸರು ಪರಿಷತ್ತಿನ ಕಾರ್ಯವೈಖರಿಗೆ ಮುಕ್ತ ಕಂಠದಿಂದ ಹೊಗಳಿದ್ದು ಉಂಟು. ಶಾಲಾ ಕಾಲೇಜು ಸೇರಿದಂತೆ ಎಲ್ಲೆಡೆ ದಾಸರ ಕುರಿತು ಉಪನ್ಯಾಸಗಳು, ವಿಚಾರ ಸಂಕಿರಣಗಳು, ದಾಸವಾಣಿ ಅಂತಹ ಕಾರ್ಯಕ್ರಮಗಳು ಮಾಡುತ್ತ ದಾಸರ ಸಂದೇಶಗಳು ಎಲ್ಲೆಡೆ ಪ್ರಸಾರ ಮಾಡುತ್ತ ಸಾಗುತ್ತಿದೆ.
ಬೀದರ
This article uses material from the Wikipedia ಕನ್ನಡ article ಬೀದರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.