ಪಾರಿಜಾತ ಎನ್ನುವುದು ಒಂದು ಬಗೆಯ ಹೂವು.
ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು. ಪಾರಿಜಾತವನ್ನು ನಿಕ್ಟಾಂತಸ್ ಆರ್ಬೋ-ಟ್ರಿಸ್ಟಿಸ್ ('Nyctanthes arbor-tristis L.') ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ.
ಕನ್ನಡ - ಪಾರಿಜಾತ
ಆಂಗ್ಲ - ನೈಟ್ ಜಾಸ್ಮಿನ್, ಕೋರಲ್ ಜಾಸ್ಮಿನ್
ಹಿಂದಿ - ಹರಸಿಂಗಾರ್, ಷೆಫಾಲಿಕಾ
ತಮಿಳು - ಮಂಜಪೂ, ಪವಳ ಮಲ್ಲಿಗೈ
ತೆಲುಗು - ಪಗಡಮಲ್ಲೆ, ಪಾರಿಜಾತಮು
ಮಲೆಯಾಳಂ -ಪವಿಳಮ್ಮಲ್ಲಿ,ಪಾರಿಜಾತಿಕಂ
ಬಂಗಾಲಿ - ಷಿಯಲಿ
ಒರಿಯಾ - ಗಂಗಾ ಷಿಯಲಿ
ಮರಾಠಿ - ಖುರಸಳಿ,ಪಾರಿಜಾತಕ ಸಂಸ್ಕ್ರತ - ಪಾರಿಜಾತ
ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತ ಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ.
ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ವಾತವ್ಯಾಧಿಯಲ್ಲಿ ಇದರ ಕಷಾಯವನ್ನು ಬಳಸುತ್ತಾರೆ. ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.
ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.
ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, ಟ್ರೀ ಆಫ್ ಸ್ಯಾಡ್ನೆಸ್, ಎನ್ನುವವರೂ ಇದ್ದಾರೆ.
ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರ ಬಗ್ಗೆ ಇರುವ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವ ಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿ ಅರಳುವ ಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.
ಇದು ಮಧ್ಯಮ ಗಾತ್ರದ ಹೊದರು ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದ ಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು. ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು, ಬೂದಿಮಿಶ್ರಿತ ಹಸಿರುಬಣ್ಣ. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ.
This article uses material from the Wikipedia ಕನ್ನಡ article ಪಾರಿಜಾತ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.