ನೇತ್ರಾವತಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ನದಿ.
ಚಿಕ್ಕಮಗಳೂರು ಜಿಲ್ಲೆಯ ಸಂಸ್ಥೆಯಲ್ಲಿ ಉಗಮವಾಗುವ ಈ ನದಿಯು ಮುಂದೆ ಉಪ್ಪಿನಂಗಡಿಯಲ್ಲಿ ಕುಮಾರಧಾರೆ ನದಿಯೊಂದಿಗೆ ಸಂಗಮವಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. [[[ಕರ್ನಾಟಕ|[ಕರ್ನಾಟಕ]]]] ರಾಜ್ಯದ ಪ್ರಮುಖ ತೀರ್ಥಸ್ಥಳಗಳಲ್ಲಿ ಒಂದಾದ ಧರ್ಮಸ್ಥಳದ ಮೂಲಕ ಈ ನದಿಯು ಹಾದು ಹೋಗುತ್ತದೆ. ಆದ್ದರಿಂದಲೇ ಇದನ್ನು ಭಾರತದ ಪವಿತ್ರ ನದಿಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ನೇತ್ರಾವತಿ - ಕರ್ನಾಟಕದ ಕರಾವಳಿಯ ಒಂದು ಮುಖ್ಯ ನದಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ದೊಡ್ಡದು. ಸ್ಥೂಲವಾಗಿ ಪಶ್ಚಿಮಾಭಿಮುಖವಾಗಿ ಸಾಗಿ, ಒಟ್ಟು ಸುಮಾರು ೧೬೦ ಕಿಮೀ. ದೂರ ಹರಿದು ಮಂಗಳೂರಿನ ಪಡುಬದಿಯಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಹಿಂದೆ ಹಿರಣ್ಯಾಕ್ಷನೆಂಬ ದಾ ನವನನ್ನು ವರಾಹ ಸ್ವಾಮಿ ಸಂಹರಿಸಿ ಭೂಮಿಯನುದ್ಧರಿಸಿದ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶ್ಛಂಗೇರಿಯಿಂದ ೧೬ ಕಿಮೀ. ದೂರದಲ್ಲಿ ಪಶ್ಚಿಮಘಟ್ಟಗಳ ಒಂದು ಭಾಗವಾದ ಗಂಗಾ ಮೂಲ, ವರಾಹಪರ್ವತ ಎಂದು ಕರೆಯಲ್ಪಡುವ ವೇದಪಾದ ಪರ್ವತದಲ್ಲಿ ವಿಶ್ರಮಿಸಿದನಂತೆ. ಆಗ ಅ ಮೂರ್ತಿಯ ಎಡಕೋರೆಯಿಂದ ಇಳಿದ ಹನಿಗಳು ತುಂಗಾ ನದಿಯಾಗಿಯೂ, ಭೂಮಿಯನ್ನು ಭದ್ರವಾಗಿ ಹಿಡಿದುಕೊಂಡ ಬಲದಾಡೆಯ ಹನಿಗಳು ಭದ್ರಾ ನದಿಯಾಗಿಯೂ. ಕಣ್ಣಂಚಿನ ಹನಿಗಳು ನೇತ್ರವತಿಯಾಗಿಯೂ ಹರಿದುವೆಂಬುದು ಪುರಾಣ ಕಥೆ. ವರಾಹಪರ್ವತದ ಕಣ್ಣಿನಂತಿರುವ ಭಾಗದಿಂದ ಹರಿದುಬರುವ ನೇತ್ರಾವತೀ ನದಿಯ ನೀರು ನೇತ್ರರೋಗ ಪರಿಹಾರಕವೆಂದು ನಂಬಿಕೆಯಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿ ಮಘಟ್ಟದ ಭಾಗವಾದ ಬಲ್ಲಾಳರಾಯನ ದುರ್ಗದಲ್ಲಿ (೧,೫೦೪ ಮೀ.) ನೇತ್ರಾವತಿ ನದಿ ಉಗಮಿಸುತ್ತದೆ. ಪ್ರಾಚೀನ. ಬೆಲುರು ಗ್ರೀಕ್ ಇತಿಹಾಸಕಾರರು ಈ ನದಿಯನ್ನು ನೀತ್ರಿ ಎಂದು ಕರೆದಿದ್ದಾರೆ.
ಹಲವಾರು ಕಿರುಹೊಳೆಗಳೊಂದಿಗೆ ಪಶ್ಚಿಮಘಟ್ಟದ ಬಂಗಾಡಿ ಕಣಿವೆಯಲ್ಲಿಳಿದು ಬರುತ್ತಲೇ ಕಡಿರುದ್ಯಾವರಕ್ಕೆ ಸ್ವಲ್ಪ ದೂರದಲ್ಲಿ ಈ ನದಿ ಎರಡು ಹಂತಗಳಲ್ಲಿ ಬಂಡಾಜೆ ಜಲಪಾತವಾತಿ ಪರಿಣಮಿಸುತ್ತದೆ. ಮುಂದೆ ಇದು ನೈಋತ್ಯಾಭಿಮುಖವಾಗಿ ಹರಿಯುತ್ತ ಮುಂಡಾಜೆಯ ದಕ್ಷಿಣಕ್ಕೆ ಚಾರ್ಮಾಡಿ ಹೊಳೆಯನ್ನು ಕೂಡಿ ಧರ್ಮಸ್ಥಳಕ್ಕೆ ಉತ್ತರದಲ್ಲಿ ಸುಮಾರು ೨ ಕಿಮೀ. ದೂರದಲ್ಲಿ ಪ್ರವಹಿಸುತ್ತದೆ. ನೇತ್ರಾವತಿಯನ್ನು ದಕ್ಷಿಣದಲ್ಲಿ ನೆರಿಯಾ ಹೊಳೆ ಸೇರುತ್ತದೆ. ಈ ಹೊಳೆ ಮತ್ತು ಇತರ ತೊರೆಗಳು ಧರ್ಮಸ್ಥಳವನ್ನು ಸುತ್ತುವರಿದಿವೆ. ಅನಂತರ ಎಡದಿಂದ ಶಿಶಿಲಾ ಮತ್ತು ಸ್ವಲ್ಪ ದೂರದಲ್ಲಿ ಬಲದಿಂದ ಏರುಮಲೆ (ಬೆಳ್ತಂಗಡಿ) ಹೊಳೆಗಳ ನೀರನ್ನು ಪಡೆದು ಮುನ್ನಡೆಯುವ ನೇತ್ರಾವತಿ ನದಿ ಅಲ್ಲಲ್ಲಿ ಕಿರುಬಂಡೆಗಳಿರುವ. ಅದರೆ ಹೆಚ್ಚು ಸಮತಟ್ಟಾದ ಬಯಲುನೆಲವನ್ನು ಪ್ರವೇಶಿಸುತ್ತದೆ. ಕೊಡಗಿನಲ್ಲಿ, ಪಶ್ಚಿಮಘಟ್ಟಗಳ ಭಾಗವಾದ ಕುಮಾರಪರ್ವತದಲ್ಲಿ (ಪುಷ್ಪಗಿರಿ 1೧,೬೫೪ ಮೀ.) ಹುಟ್ಟಿ, ಹಾಸನ ಕೊಡಗು ಜಿಲ್ಲೆಗಳ ನಡುವೆ ಗಡಿ ನದಿಯಾಗಿ ಹರಿದು ಬಿಸಲೆ ಘಾಟಿನ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಕುಳಗುಂದದ ಬಯಲಿನ ಬಳಿ ಸುಬ್ರಹ್ಮಣ್ಯ ಕ್ಷೇತ್ರವನ್ನು ಹಾದುಬರುವ ಕುಮಾರಧಾರಾ ನದಿ ಉಪ್ಪಿನಂಗಡಿಯಲ್ಲಿ ನೇತ್ರಾವತಿಯನ್ನು ಎಡದಿಂದ ಬಂದು ಸೇರುತ್ತದೆ. ಅದು ನೇತ್ರಾವತಿಯ ಪ್ರಮುಖ ಉಪನದಿ.
ಮುಂದೆ ನೇತ್ರಾವತಿ ನದಿ ಪಶ್ಚಿಮಾಭಿಮುಖವಾಗಿ ಸಮುದ್ರದ ಕಡೆಗೆ ಹರಿಯುತ್ತದೆ. ತಾಲ್ಲೂಕು ಕೇಂದ್ರವಾದ ಬಂಟವಾಳವನ್ನು ಬಲದಲ್ಲೂ ಸುಮಾರು ೫ ಕಿಮೀ. ಅಚೆಗಿನ ಪಾಣೆಮಂಗಳೂರು ಪೇಟೆಯನ್ನು ಎಡದಲ್ಲೂ ಹಾದು ಫರಂಗಿಪ್ಭೆಟೆಯ ದಟ್ಟ ಹಸಿರು ಹಚ್ಚೆಯ ಬಳಿ ನಿಧಾನ ಗತಿಯನ್ನು ತಳೆಯುತ್ತದೆ. ಇದು ಹೊತ್ತು ತಂದ ರೇವೆ ಮಣ್ಣನ್ನು ಇಳಿಸಿ ಪಾವೂರು ಎಂಬಲ್ಲಿಂದ ಅಲ್ಲಲ್ಲಿ ಹಲಕೆಲವು ಉಳಿಯಗಳನ್ನು (ಕುದುರು) ನಿರ್ಮಿಸಿದೆ. ಈ ಚಿಕ್ಕ ಫಲವತ್ತಾದ ನಡುಗಡ್ಡೆಗಳಲ್ಲಿ ಮುಖ್ಯವಾದವು ಪಾವೂರು ಉಳಿಯ, ಗಟ್ಟಿಕುದುರು ಮತ್ತು ಉಳ್ಳಾಲ (ಸೋಮನಾಥ) ಉಳಿಯ. ಸಮುದ್ರವನ್ನು ಸೇರುವ ಮುನ್ನ ನೇತ್ರಾವತಿ ನದಿ ೧.೫ ಕಿಮೀ. ಅಗಲವಾಗಿ ನಿಧಾನವಾಗಿ ಹರಿಯುತ್ತದೆ. ಉಳ್ಳಾಲದ ಸಮೀಪದಲ್ಲಿ ಫಲ್ಗುಣಿ (ಗುರುಪುರ) ಹೊಳೆಯೊಡಗೂಡಿ ಅಳಿವೆಯಾಗಿ ಪರಿಣಮಿಸಿ ಸಮುದ್ರವನ್ನು ಸೇರುತ್ತದೆ. ಸಮುದ್ರಕ್ಕೂ ಇದಕ್ಕೂ ನಡುವೆ ಕಿರಿ ಅಗಲದ ಮರಳದಂಡೆಯ ಬೆಂಗರೆ ಎಂಬ ಕಿನಾರೆ ಪ್ರದೇಶವಿದೆ. ನೇತ್ರಾವತಿ ಮತ್ತು ಗುರುಪುರ ನದಿಗಳು ಸಂಯುಕ್ತವಾಗಿ ಮಂಗಳೂರಿನ ಬಳಿಯೇ ಸಮುದ್ರವನ್ನು ಸೇರುವುವಾದರೂ ಮಂಗಳೂರಿಗೆ ಸ್ವಾಭಾವಿಕ ರೇವಿನ ಸೌಕರ್ಯವಿಲ್ಲ. ಅಳಿವೆಯಿಂದ ಈಚೆಗೆ ನದೀಪಾತ್ರದಲ್ಲಿ ಪ್ರತಿ ಮಳೆಗಾಲದಲ್ಲೂ ತುಂಬುವ ಮರಳು ಮತ್ತು ಕೆಸರು ಸಣ್ಣಪುಟ್ಟ ನೌಕೆಗಳ ಸಂಚಾರಕ್ಕೂ ತಡೆಯನ್ಮ್ನಂಟುಮಾಡುತ್ತವೆ. ಸಮುದ್ರದಲ್ಲಿ ಸುಮಾರು ೫ ಕಿಮೀ. ದೂರದಲ್ಲಿ ದೊಡ್ಡ ಹಡಗುಗಳು ಲಂಗರುಹಾಕಿ ನಿಲ್ಲುವ, ಅದರಿಂದ ಸರಕುಗಳನ್ನು ಸಾಗಿಸಲು ಮಂಜಿಗಳನ್ನು ಬಳಸುವ ಕ್ರಮದಿಂದ ಮಂಗಳೂರಿನ ಹಳೆಯ ಬಂದರಿನ ಸೀಮಿತ ಕಾರ್ಯ ನಡೆಯುತ್ತಿತ್ತು. ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಯಾವುದೇ ರೀತಿಯ ಸಾಗಾಣಿಕೆ ಸಾಧ್ಯವಿರಲಿಲ್ಲ. ಮಂಗಳೂರಿನ ಉತ್ತರಕ್ಕೆ ೧೦ ಕಿಮೀ. ದೂರದಲ್ಲಿ ನವಮಂಗಳೂರು ಸರ್ವಋತು ಬಂದರು ಆಗಿದೆ.
ನೇತ್ರಾವತಿ ನದಿಯಲ್ಲಿ ಮಳೆಗಾಲದಲ್ಲಿ ವಿಪರೀತವಾದ ನೆರೆ ಬರುವುದುಂಟು. ಬೆಳ್ತೆಂಗಡಿ, ಪುತ್ತೂರು, ಸುಳ್ಯ, ಬಂಟವಾಳ ಮತ್ತು ಮಂಗಳೂರು ತಾಲ್ಲೂಕುಗಳಲ್ಲಿ ಹರಿಯುವ ನೇತ್ರಾವತಿ ನದಿಯ ಬಯಲಿನಲ್ಲಿ ಬತ್ತ, ಕಬ್ಬು, ಅಡಕೆ, ತೆಂಗು, ದವಸಧಾನ್ಯ ಮತ್ತು ಗೇರುಬೀಜ ಬೆಳೆಯುತ್ತವೆ.
ನೇತ್ರಾವತಿ ನದಿಯ ನೀರನ್ನು ಬಂಟ್ವಾಳ ತಾಲ್ಲೂಕಿನ ತುಂಬೆ ಎಂಬಲ್ಲಿ ಸಂಗ್ರಹಿಸಿ ಕೊಳವೆಗಳ ಮೂಲಕ ಮಂಗಳೂರು ನಗರ, ನವಮಂಗಳೂರು ಬಂದರು ವಲಯ ಮತ್ತು ಉತ್ತರದ ಸುರತ್ಕಲ್ ಎಂಜಿನಿಯರಿಂಗ್ ಕಾಲೇಜು ಪ್ರದೇಶಗಳಿಗೆ ಪೂರೈಕೆ ಮಾಡಲಾಗಿದೆ. ಬಂಟ್ವಾಳ ಮತ್ತು ಹಂಚಿಕಟ್ಟೆಗಳಲ್ಲಿ ಕಟ್ಟಿರುವ ಅಣೆಕಟ್ಟುಗಳಿಂದ ಮತ್ತು ಹಲವೆಡೆಗಳಲ್ಲಿ ಪಂಪುಗಳ ಮೂಲಕ ಈ ನದಿಯ ನೀರು ಕೃಷಿಗೆ ಉಪಯೋಗವಾಗುತ್ತಿದೆ
ನೇತ್ರಾವತಿಯ ಉಪನದಿಗಳಲ್ಲಿ ಒಂದಾದ ಎತ್ತಿನಹೊಳೆಯ ತಿರುವು ಯೋಜನೆಗೆ ಸ್ಥಳೀಯರಿಂದ ವ್ಯಾಪಕ ವಿರೋಧವಿದೆ. ಈ ಯೋಜನೆಯ ಪ್ರಯೋಗಿಕತೆಯ ಬಗ್ಗೆ ಜನರಲ್ಲಿ ಪ್ರಶ್ನೆ ಎದ್ದಿದೆ.
This article uses material from the Wikipedia ಕನ್ನಡ article ನೇತ್ರಾವತಿ ನದಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.