ಅಶೋಕ ಚಕ್ರ

ಅಶೋಕ ಚಕ್ರವು ಸಾಮ್ರಾಟ್ ಅಶೋಕನ ಚಿಹ್ನೆಯಾಗಿದ್ದು,ಭಾರತದ ಧ್ವಜದಲ್ಲಿ ಅಳವಡಿಸಿಕೊಳ್ಳಲಾಗಿದೆ.ಅಶೋಕಚಕ್ರದಲ್ಲಿ ವೃತ್ತಾಕಾರದ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ,ಚಕ್ರದಲ್ಲಿನ ೨೪ ಕಂಬಗಳು ಬೌದ್ಧಧರ್ಮದ ಆಚರಣೆಯನ್ನು ಸೂಚಿಸುತ್ತವೆ.

ಈ ಲೇಖನ ಅಶೋಕ ಚಕ್ರ ಚಿಹ್ನೆಯ ಬಗ್ಗೆ ಇತರ ಉಪಯೋಗಗಳಿಗೆ "ಅಶೋಕ ಚಕ್ರ (ದ್ವಂದ್ವ ನಿವಾರಣೆ)" ಪುಟ ನೋಡಿ
ಅಶೋಕ ಚಕ್ರ
ಭಾರತದ ರಾಷ್ಟ್ರಧ್ವಜದಲ್ಲಿ ಉಪಯೋಗಿಸಿರುವ ಅಶೋಕ ಚಕ್ರ

ಪ್ರಾಚ್ಯ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ಈ ಚಕ್ರ ಅಶೋಕ ಮಹಾರಾಜನಿಂದ ಸಾರಾನಾಥದಲ್ಲಿ ನಿರ್ಮಾಣವಾದ ಸ್ಮಾರಕಸ್ತಂಭದ ಸಿಂಹಶೀರ್ಷಿಕೆಯಲ್ಲಿದೆ. ಅಶೋಕ ಸಾರಾನಾಥದ ಸ್ತಂಭವನ್ನು ಚೂನಾರ್ ಪರ್ವತಗಳ ಕಲ್ಲಿನಲ್ಲಿ ಅತ್ಯಂತ ಸುಂದರವಾಗಿ ಕಡೆಸಿ ಸಾರಾನಾಥದಲ್ಲಿ ಸ್ಥಾಪಿಸಿ, ಅದರ ತುದಿಯನ್ನು ಧರ್ಮ ಚಕ್ರವನ್ನೊಳಗೊಂಡ ಸಿಂಹ ಶೀರ್ಷಿಕೆಯಿಂದಲಂಕರಿಸಿದ. ಅವನ ಆಳ್ವಿಕೆಯ ಅನಂತರ ಶತಮಾನಗಳ ಮೇಲೆ ಭಾರತವನ್ನು ಸಂದರ್ಶಿಸಿದ ಚೀನ ದೇಶದ ಬೌದ್ಧಯಾತ್ರಿಕ ರಾದ ಫಾಹಿಯಾನ್, ಯುವಾನ್ಚಾಂಗ್ ಮತ್ತು ಇತ್ಸಿಂಗ್-ಇವರು ಸಾರಾನಾಥದ ಸ್ತಂಭವನ್ನು ನೋಡಿ ವಿಸ್ಮಿತರಾಗಿ, ಈ ಕೃತಿ ದೇವ ಶಿಲ್ಪಿಗಳಿಂದ ನಿರ್ಮಾಣ ವಾಗಿರಬೇ ಕೆಂದು ಅಭಿಪ್ರಾಯ ಪಟ್ಟರು. ಪಾಶ್ಚಾತ್ಯ ವಿದ್ವಾಂಸ ವಿನ್ಸೆಂಟ್ ಸ್ಮಿತ್ ಈ ಸ್ಮಾರಕವನ್ನು ವಿವರಿಸುತ್ತ ಶಿಲ್ಪಕಲೆ ಮೌರ್ಯರ ಕಾಲದಲ್ಲಿ ಸರ್ವೋತ್ಕೃಷ್ಟ ಮಟ್ಟವನ್ನು ಮುಟ್ಟಿತೆಂದೂ ಇಪ್ಪತ್ತನೆಯ ಶತಮಾನದಲ್ಲೂ ಎಣೆಯಿಲ್ಲದ ಶಿಲ್ಪಕಲಾಕೃತಿಯಾಗಿ ಉಳಿದಿದೆ ಯೆಂದೂ ಅಭಿಪ್ರಾಯ ಪಟ್ಟಿದ್ದಾನೆ. ಪ್ರಾಕ್ತನಶಾಖೆಯ ನಿರ್ದೇಶಕ ಮಾರ್ಷಲ್, ಸಾರಾನಾಥ ಸ್ಮಾರಕ ಪ್ರಾಚೀನ ಭಾರತದ ಶಿಲ್ಪಕಲೆಯ ಅತ್ಯಂತ ಶ್ರೇಷ್ಠವಾದ ಕೃತಿಯೆಂದು ಅಭಿಪ್ರಾಯಪಟ್ಟಿದ್ದಾನೆ.

ಬೌದ್ಧಧರ್ಮ ಭಾರತದಲ್ಲಿ ಕ್ಷೀಣಿಸಿದ ಅನಂತರ ಸಾರಾನಾಥ ಪಟ್ಟಣ ಹಾಳಾಯಿತು; ಅಶೋಕನ ಸ್ತಂಭ ಮುರಿದು ಬಿತ್ತು. 18 ಮತ್ತು 19ನೆಯ ಶತಮಾನಗಳಲ್ಲಿ ನಡೆದ ಪ್ರಾಚ್ಯ ಸಂಶೋಧನೆಯ ಕಾಲದಲ್ಲಿ ಸಾರಾನಾಥದ ಅವಶೇಷಗಳು ಬೆಳಕಿಗೆ ಬಂದವು. ಕಂಬ ಮುರಿದು ಬಿದ್ದಾಗ ಚಕ್ರವನ್ನೊಳಗೊಂಡ ಸಿಂಹಶೀರ್ಷ ಸ್ವಲ್ಪಮಟ್ಟಿಗೆ ಹಾನಿಗೊಳಗಾದರೂ ತೀರ ಭಿನ್ನವಾಗದೆ ತನ್ನ ಸೌಂದರ್ಯ ವನ್ನುಳಿಸಿಕೊಂಡಿದೆ. ಸ್ತಂಭ ಸು. 50 ಅಡಿ ಎತ್ತರವಾಗಿದ್ದಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಸಿಂಹಶೀರ್ಷದ ಕೆಳಭಾಗದಲ್ಲಿ ಗಂಟೆಯಾಕಾರದ ಒಂದು ಕಮಲಪುಷ್ಪವನ್ನು ಕೆತ್ತಲಾಗಿದೆ. ಇದು 2'ಗಳಷ್ಟು ಎತ್ತರವಾಗಿದೆ. ಅರಳಿದ ಕಮಲ ಹದಿನಾರು ದಳಗಳನ್ನು ಕೆಳಭಾಗಕ್ಕೆ ಒತ್ತಿಹಿಡಿದಂತೆ ಕೆತ್ತಲಾಗಿದೆ. ಗಂಟೆಯ ಆಕಾರದಲ್ಲಿ ಕೆತ್ತಲಾಗಿರುವ ಈ ಕಮಲದ ಮೇಲೆ ಚಕ್ರಾಕಾರವಾಗಿರುವ ಒಂದು ಪೀಠವಿದೆ. ಈ ಪೀಠ ಸುಮಾರು ಒಂದು ಅಡಿ ಎತ್ತರವಾಗಿಯೂ 2 ಅಡಿ 10 ಅಂಗುಲ ಸುತ್ತಳತೆಯಿಂದಲೂ ಕೂಡಿದೆ. ಈ ಪೀಠದಲ್ಲಿ ನಾಲ್ಕು ದಿಕ್ಕಿಗೂ ನಾಲ್ಕು ಚಕ್ರಗಳು ಮತ್ತು ಪ್ರತಿ ಎರಡು ಚಕ್ರಗಳ ಮಧ್ಯೆ ಒಂದೊಂದರಂತೆ ಆನೆ, ವೃಷಭ, ಕುದುರೆ, ಸಿಂಹ-ಈ ನಾಲ್ಕು ಪ್ರಾಣಿಗಳನ್ನು ಕೆತ್ತಲಾಗಿದೆ. ಈ ಪೀಠದ ಮೇಲ್ಭಾಗದಲ್ಲಿ ಒಂದೊಂದು ಚಕ್ರದ ಮೇಲೂ ಒಂದೊಂದು ಸಿಂಹದಂತೆ ನಾಲ್ಕು ದಿಕ್ಕುಗಳಿಗೂ ಮುಖ ಮಾಡಿ, ಬಾಯಿತೆರೆದಿರುವ ನಾಲ್ಕು ಸಿಂಹಗಳು ಬೆನ್ನಿಗೆ ಬೆನ್ನುಕೊಟ್ಟು ನಿಂತಿವೆ. ಪ್ರತಿಯೊಂದು ಸಿಂಹವೂ 3 ಅಡಿ 9 ಅಂಗುಲ ಎತ್ತರವಾಗಿದೆ. ಅಲ್ಲಿ ದೊರಕಿರುವ ಇನ್ನೂ ಕೆಲವು ಅವಶೇಷಗಳ ಆಧಾರದ ಮೇಲೆ ಸಿಂಹಶೀರ್ಷಕ್ಕೆ ಶಿಖರವಾಗಿ ಇನ್ನೊಂದು ದೊಡ್ಡ ಶಿಲಾಚಕ್ರವನ್ನು ನಾಲ್ಕು ಸಿಂಹಗಳ ನಡುವೆ ನೇರವಾಗಿ ನಿಲ್ಲಿಸಲಾಗಿತ್ತೆಂದು ವಿದ್ವಾಂಸರು ನಂಬಿದ್ದಾರೆ. ಪೀಠದಲ್ಲಿ ಕಡೆದಿರುವ ಪ್ರತಿಯೊಂದು ಚಕ್ರದಲ್ಲೂ 24 ಅರಗಳು ಇವೆ. ಮೇಲಿನ ಚಕ್ರದಲ್ಲಿ 32 ಅರಗಳಿದ್ದುವೆಂದು ತಿಳಿದು ಬಂದಿವೆ. ಚಕ್ರ ಸಂಕೇತಸೂಚಕವೆಂದೂ ಅದಕ್ಕೆ ವಿಶಿಷ್ಟವಾದ ಅರ್ಥವಿದೆಯೆಂದೂ ವಿದ್ವಾಂಸರು ನಂಬಿದ್ದಾರೆ. ಮೇಲಿನ ಮಹಾಚಕ್ರದ 32 ಅರಗಳು ಮಹಾಪುರುಷರಾದವರ 32 ಪುರುಷಲಕ್ಷಣಸೂಚಕವೆಂದೂ ಸಿಂಹಪೀಠದಲ್ಲಿನ ಚಕ್ರಗಳ 24 ಅರಗಳು ಕಾಲಗಣನೆಗೆ ಮಾನವಾದ ಸಂವತ್ಸರದ 24 ಪಕ್ಷಗಳನ್ನು ಸೂಚಿಸುವುದೆಂದೂ ಜ್ಞಾನಿಯಾದವ ಸದಾ ಕಾಲದಲ್ಲೂ ಎಚ್ಚರವಾಗಿರಬೇಕೆಂದೂ ಈ ಧರ್ಮಚಕ್ರ ಸದಾ ಜ್ಞಾಪಿಸುತ್ತಿರುತ್ತದೆ ಎಂದೂ ನಂಬಲಾಗಿದೆ. ಧರ್ಮಚಕ್ರಗಳನ್ನೊಳಗೊಂಡ ಪೀಠದ ಮೇಲಿರುವ ಪ್ರಾಣಿಗಳು ಬುದ್ಧದೇವನ ಹಿಂದಿನ ಜನ್ಮಗಳ ಸಂಕೇತವೆಂದು ಬೌದ್ಧಜಾತಕಗಳಿಂದ ತಿಳಿದುಬರುತ್ತದೆ. ಅಲ್ಲದೆ ಭಾರತೀಯ ಸಂಪ್ರದಾಯದಲ್ಲಿ ಚಕ್ರಕ್ಕೆ ಬ್ರಹ್ಮಾಂಡಚಕ್ರ, ಭವ ಚಕ್ರ, ಕಾಲಚಕ್ರ, ಧರ್ಮಚಕ್ರ, ಸುದರ್ಶನಚಕ್ರ ಮುಂತಾದ ಹಲವಾರು ಸಾಂಕೇತಿಕ ನಿರೂಪಣೆಗಳಿವೆ. ಬೌದ್ಧ ಪುರಾಣಗಳಲ್ಲಿ ಧರ್ಮಚಕ್ರಕ್ಕೆ ಸಂಬಂಧಿಸಿದ ವ್ಯಾಖ್ಯಾನಗಳು ಹೇರಳವಾಗಿ ದೊರೆಯುತ್ತವೆ. ದಿವ್ಯಜ್ಞಾನವನ್ನು ಬುದ್ಧಗಯೆಯ ಬಳಿಯಲ್ಲಿ ಪಡೆದ ಅನಂತರ ಬುದ್ಧ ಧರ್ಮಚಕ್ರವನ್ನು ಪ್ರವರ್ತಿಸುವುದಕ್ಕಾಗಿ ಕಾಶೀನಗರಕ್ಕೆ ಹೋಗುವುದಾಗಿ ಹೇಳಿದನಂತೆ. ಮತ್ತೊಂದು ಸಂದರ್ಭದಲ್ಲಿ ಬುದ್ಧ ಸ್ತ್ರೀಯಾಗಲಿ ಪುರುಷನಾಗಲಿ ಇಂಥ ಯಾನದಿಂದ ನಿರ್ವಾಣದ ಸಮೀಪಕ್ಕೆ ಹೋಗುವರು ಎಂಬುದಾಗಿ ಧರ್ಮಚಕ್ರದ ರೀತಿಯನ್ನು ಕುರಿತು ಹೇಳಿದನಂತೆ. ಕಳಿಂಗ ರಣರಂಗದ ಭೀಕರ ದೃಶ್ಯವನ್ನು ನೋಡಿದ ಸಾಮ್ರಾಟ್ ಅಶೋಕ ಬಹುವಾಗಿ ಮನನೊಂದ. ಇನ್ನು ಮುಂದೆ ಸಾಮ್ರಾಜ್ಯ ದಾಹಕ್ಕಾಗಿ ಯುದ್ಧ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿದ. ಸಾಮ್ರಾಜ್ಯವನ್ನು ಅಶೋಕದತ್ತ ಒಯ್ಯಲು ಅದಕ್ಕಾಗಿ ತನ್ನ ಭೋಗ ಭಾಗ್ಯ ಸಂಪತ್ತು ಸರ್ವಸ್ವವನ್ನೂ ತ್ಯಾಗ ಮಾಡಿದ. ಭಗವಾನ್ ಬುದ್ಧನಿಂದ ಪ್ರಸಾರವಾದ ಧರ್ಮಕ್ಕೆ ಶರಣಾದ. ಅದರ ಪ್ರಸಾರಕ್ಕಾಗಿ ಇನ್ನೂ ಅನೇಕ ಕಾರ್ಯಕ್ರಮಗಳ ಜೊತೆಗೆ ಶಿಲಾಶಿಲ್ಪವನ್ನೂ ಧರ್ಮಲಿಪಿಯನ್ನೂ (ಶಾಸನ) ಆಚರಣೆಗೆ ತಂದ.

ಸಾರಾನಾಥ ಸ್ಮಾರಕದ ಶಿಲಾಶಿಲ್ಪದಲ್ಲಿರುವ ಧರ್ಮಚಕ್ರವನ್ನು ಭಾರತದ ರಾಷ್ಟ್ರೀಯ ಬಾವುಟಕ್ಕೆ ಅಳವಡಿಸಿಕೊಳ್ಳಲಾಗಿದೆ. ಪಂಡಿತ್ ಜವಹರಲಾಲ್ ನೆಹರು ಭಾರತ ರಾಜ್ಯಾಂಗ ಸಭೆಯ ಧ್ವಜ ವಿಚಾರವನ್ನು ಮಂಡಿಸುತ್ತ ಭಾರತದ ರಾಷ್ಟ್ರಧ್ವಜ ಅಡ್ಡಗಲವಾಗಿದ್ದು, ಕೇಸರಿ, ಬಿಳುಪು, ಹಸುರು ಬಣ್ಣಗಳಿಂದ ಕೂಡಿದ್ದು, ನಡುವಣ ಬಿಳಿಯ ಪಟ್ಟಿಯ ಮಧ್ಯಭಾಗದಲ್ಲಿ ಚರಕದ ಪ್ರತಿನಿಧಿಯಾಗಿ ಒಂದು ಚಕ್ರ ಸಾಗರನೀಲವರ್ಣದಲ್ಲಿ ಇರತಕ್ಕದ್ದು; ಈ ಚಕ್ರದ ರಚನೆ ಸಾರಾನಾಥದ ಅಶೋಕ ಸ್ತಂಭದ ಸಿಂಹಶೀರ್ಷದ ಪೀಠದಲ್ಲಿ ಕಾಣುವ ಚಕ್ರದ ಮಾದರಿಯಾಗಿರತಕ್ಕದ್ದು; ಚಕ್ರದ ಅಡ್ಡಳತೆ ಬಿಳಿಪಟ್ಟಿಯ ಅಗಲದಷ್ಟಿರತಕ್ಕದ್ದು; ಬಾವುಟದ ಅಗಲಕ್ಕೂ ಉದ್ದಕ್ಕೂ 2:3 ಪ್ರಮಾಣ ಇರತಕ್ಕದ್ದು ಎಂಬುದಾಗಿ 1947ರ ಜುಲೈ 22 ರಂದು ಘೋಷಿಸಿದರು.

ಅಶೋಕನ ಕಾಲದಲ್ಲಿ ಭಾರತದಲ್ಲಿ ಮೂಡಿದ್ದ ಐಕ್ಯ, ಶಾಂತಿ, ಸಮೃದ್ಧಿ-ಇವುಗಳು ಅವನ ಆಳ್ವಿಕೆಯ ಮೊದಲಾಗಲೀ ಅನಂತರವಾಗಲೀ ನಮ್ಮ ನಾಡಿನಲ್ಲಿ ಕಾಣಬಂದಿಲ್ಲ. ಸಕಲ ಜೀವಿಗಳ ಕಲ್ಯಾಣವೇ ತನ್ನ ಕರ್ತವ್ಯವೆಂದು ಬಗೆದಿದ್ದವನೆಂದರೆ ಪ್ರಾಚೀನ ಭಾರತದ ಯುಗಪುರುಷ ಅಶೋಕ. ಆಧುನಿಕ ಯುಗದ ಅಹಿಂಸಾ ಅಧ್ವರ್ಯು ಮಹಾತ್ಮ ಗಾಂಧೀಜಿ ಯವರ ನೇತೃತ್ವದಲ್ಲಿ ಸ್ವಾತಂತ್ರ್ಯವನ್ನು ಪಡೆದ ಭಾರತ ಅಶೋಕ ಚಕ್ರವನ್ನು ತನ್ನ ಧ್ವಜಚಿಹ್ನೆಯನ್ನಾಗಿ ಆರಿಸಿಕೊಂಡಿರುವುದು ಅತ್ಯಂತ ಉಚಿತವಾಗಿದೆಯಲ್ಲದೆ ಭಾರತದ ಧ್ಯೇಯ ಸದ್ಧರ್ಮಸ್ಥಾಪನೆ ಎಂಬುದನ್ನು ಈ ಚಿಹ್ನೆ ಸೂಚಿಸುತ್ತದೆ.

ಉಲ್ಲೇಖ

ಅಶೋಕ ಚಕ್ರ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಧರ್ಮಬೌದ್ಧಧರ್ಮಭಾರತದ ಧ್ವಜಸಾಮ್ರಾಟ್ ಅಶೋಕ

🔥 Trending searches on Wiki ಕನ್ನಡ:

ನಿರಂಜನಸೂರ್ಯವ್ಯೂಹದ ಗ್ರಹಗಳುಕನ್ನಡ ಸಂಧಿಮ್ಯಾಕ್ಸ್ ವೆಬರ್ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಭಾರತದಲ್ಲಿ ಮೀಸಲಾತಿತ್ರಿಪದಿರಾಷ್ಟ್ರೀಯ ಶಿಕ್ಷಣ ನೀತಿಚುನಾವಣೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮಂಗಳೂರುಭಾರತೀಯ ಭೂಸೇನೆರಾಜಸ್ಥಾನ್ ರಾಯಲ್ಸ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿನಾಗಚಂದ್ರಮಧ್ಯಕಾಲೀನ ಭಾರತಸಾರ್ವಭೌಮತ್ವಸವದತ್ತಿಜಿ.ಪಿ.ರಾಜರತ್ನಂಕರ್ನಾಟಕದ ಸಂಸ್ಕೃತಿಯೋಗ ಮತ್ತು ಅಧ್ಯಾತ್ಮಮಾಸ್ತಿ ವೆಂಕಟೇಶ ಅಯ್ಯಂಗಾರ್ಸಿಗ್ಮಂಡ್‌ ಫ್ರಾಯ್ಡ್‌೧೮೬೨ಬಾದಾಮಿ ಗುಹಾಲಯಗಳುಭೂಕಂಪಕನ್ನಡದ ಉಪಭಾಷೆಗಳುಅಂತರಜಾಲಭಾರತದಲ್ಲಿ ಪಂಚಾಯತ್ ರಾಜ್ವೆಂಕಟೇಶ್ವರ ದೇವಸ್ಥಾನಸುಧಾ ಚಂದ್ರನ್ಕೆಂಪುಸಂವತ್ಸರಗಳುಅಲಾವುದ್ದೀನ್ ಖಿಲ್ಜಿರೇಣುಕಈರುಳ್ಳಿದೂರದರ್ಶನಭಾರತದ ಮುಖ್ಯಮಂತ್ರಿಗಳುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಹೃದಯಪ್ರಾಥಮಿಕ ಶಿಕ್ಷಣಭಾರತದ ಆರ್ಥಿಕ ವ್ಯವಸ್ಥೆಭಾರತೀಯ ಮೂಲಭೂತ ಹಕ್ಕುಗಳುವಿಮೆಭಾರತದ ಸ್ವಾತಂತ್ರ್ಯ ಚಳುವಳಿಕೊಡಗುಇನ್ಸ್ಟಾಗ್ರಾಮ್ಕರ್ನಾಟಕದ ತಾಲೂಕುಗಳುಶಿಶುನಾಳ ಶರೀಫರುಶ್ರೀ ರಾಘವೇಂದ್ರ ಸ್ವಾಮಿಗಳುಜಾನಪದಗಿರೀಶ್ ಕಾರ್ನಾಡ್ಜ್ಯೋತಿಷ ಶಾಸ್ತ್ರಮುಖ್ಯ ಪುಟಕಾವೇರಿ ನದಿಮುಮ್ಮಡಿ ಕೃಷ್ಣರಾಜ ಒಡೆಯರುಗ್ರಾಮ ಪಂಚಾಯತಿಭಗತ್ ಸಿಂಗ್ಹಂಪೆಕೇಸರಿ (ಬಣ್ಣ)ಹೊಯ್ಸಳಹರಿಶ್ಚಂದ್ರಉಗುರುಬೆಂಕಿಮಾಸಭಾರತದ ರಾಜಕೀಯ ಪಕ್ಷಗಳುವಿಕ್ರಮಾರ್ಜುನ ವಿಜಯಹೊಯ್ಸಳೇಶ್ವರ ದೇವಸ್ಥಾನವಿಜಯನಗರಕೊರೋನಾವೈರಸ್ಆಯುರ್ವೇದಕೆ. ಎಸ್. ನರಸಿಂಹಸ್ವಾಮಿಸಾರ್ವಜನಿಕ ಹಣಕಾಸುಚಂದ್ರಯಾನ-೩ಮಂಗಳಮುಖಿಚದುರಂಗಭರತನಾಟ್ಯಭೋವಿ🡆 More