ಸ್ವಾತಂತ್ರ್ಯಾ ನಂತರದ ಸಮಯ ೧೯೫೩ರಲ್ಲಿ ಭಾರತ ದೇಶವೂ ಸ್ವಾತಂತ್ರ್ಯದ ನವ ಉಲ್ಲಾಸದ ಗಾಳಿಯಲ್ಲಿ ಮಿಂದು ಏಳುತ್ತಿತ್ತು.ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಪಡೆದು ಕೆಲವೇ ವರುಷಗಳಾಗಿ ಭಾರತ ಪುಟ್ಟ ಮಗುವಿನಂತೆ ಸಣ್ಣ ಹೆಜ್ಜೆಗಳನ್ನು ಇಡುತ್ತಾ ಬೆಳೆಯಿತು.೧೯೫೩ನೇ ಇಸವಿ, ಇಂದು ನಮ್ಮ ಇತಿಹಾಸವಾಗಿದೆ.ಇತಿಹಾಸ ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಅಥವ ಕಥೆ.ಮಾನವನ ಬದುಕು, ಸಮಾಜ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳೇ ಇತಿಹಾಸ.೧೯೫೩ನೇ ಇಸವಿಯು ನಮ್ಮ ಭಾರತ ದೇಶದಲ್ಲಿ ನಡೆದ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿ, ಇಂದು ನಮ್ಮೆಲ್ಲರಿಗೆ ಆ ವರ್ಷದ ಇತಿಹಾಸವು ಅತ್ಯಮೂಲ್ಯವಾಗಿದೆ.
೧೯೫೩ನೇ ಇಸವಿಯಲ್ಲಿ ಡಾ.ರಾಜೇಂದ್ರ ಪ್ರಸಾದ್ರವರು ಭಾರತದ ರಾಷ್ಟ್ರಪತಿಗಳಾಗಿದ್ದರು.ಇವರು ಭಾರತದ ಮೊದಲ ಅಧ್ಯಕ್ಷರೂ ಹೌದು. ಒಟ್ಟು ೧೨ ವರ್ಷಗಳ ಕಾಲ ರಾಷ್ಟ್ರಪತಿಗಳಾಗಿದ್ದ ಪ್ರಸಾದರವರು ಆ ಸ್ಥಾನಕ್ಕೆ ಒಂದು ಅನನ್ಯ ಗೌರವ ತಂದುಕೊಟ್ಟರು.ಇವರಂತೆಯೇ ಸ್ವಾತಂತ್ರ್ಯ ಹೋರಾಟಗಾರರಾದ ಜವಹರಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನ ಮಂತ್ರಿಗಳಾಗಿ ದೇಶಕ್ಕೆ ಸೇವೆಸಲ್ಲಿಸಿದರು. ಆಗಸ್ಟ್ ೧೫, ೧೯೪೭ ರಿಂದ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.ಮುಂದೆ ನೆಹರು ಪ್ರಾರಂಭಿಸಿದ ಅಲಿಪ್ತ ಚಳುವಳಿಯಲ್ಲಿ ಭಾರತಕ್ಕೆ ಸಹಕಾರ ನೀಡಿದ ಯುಗೋಸ್ಲೆವಿಯಾದ ಹೊಸ ಅಧ್ಯಕ್ಷರಾಗಿ ಜೊಸೆಫ್ ಬ್ರೊಜ಼್ ಟಿಟೋ ಜನವರಿ ೧೪ರಂದು ಆಯ್ಕೆಯಾದರು.ಇದೇ ವರ್ಷ ಯುಗೋಸ್ಲೆವಿಯಾ,ಟರ್ಕಿ ಮತ್ತು ಗ್ರೀಸ್ ಬಾಲ್ಕನ್ ಒಪ್ಪಂದವನ್ನು ಮಾಡಿಕೊಂಡರು. ಜನವರಿ ೬ರಂದು, ರಂಗೂನ್ ಬರ್ಮಾನಲ್ಲಿ ನಡೆದ ಏಷ್ಯನ್ ಸಮಾಜವಾದಿ ಕಾನ್ಫರೆನ್ಸ್ನಲ್ಲಿ ದೇಶದ ಜನರ ಏಳಿಗೆಗಾಗಿ ಭಾರತ ಸಹಾ ಇದರಲ್ಲಿ ಭಾಗವಹಿಸಿತು.
ಇಂಡಿಯನ್ ಏರ್ಲೈನ್ಸ್ ೧೯೫೩ರ ಏರ್ ಕಾರ್ಪೊರೇಶನ್ಸ್ ಆಕ್ಟ್ನ ಪ್ರಕಾರ, ಪ್ರಾರಂಭಿಕ ೩೨ದಶಲಕ್ಷ ರೂಪಾಯಿ ಬಂಡವಾಳದೊಂದಿಗೆ ಆಗಸ್ಟ್ ೧,೧೯೫೩ರಲ್ಲಿ ಶುರುವಾಯಿತು. ಭಾರತದಲ್ಲಿನ ಸಮಗ್ರ ಏರ್ ಲೈನ್ ಉದ್ದಿಮೆಯನ್ನು ರಾಷ್ಟ್ರೀಕರಣಗೊಳಿಸಲು ಈ ಕಾನೂನನ್ನು ಜಾರಿಗೆ ತರಲಾಯಿತು.ಈ ನೂತನ ಏರ್ ಲೈನ್ ಯುನೈಟೆಡ್ ಕಿಂಗಡಮ್ ನ ಬ್ರಿಟಿಷ್ ಓವರ್ ಸೀಸ್ ಏರ್ ವೇಸ್ ಕಾರ್ಪೋರೇಶನ್ ಮತ್ತು ಬ್ರಿಟಿಷ್ ಯುರೋಪಿಯನ್ ಏರ್ ವೇಸ್ಗಳ ಮಾದರಿಯಲ್ಲಿ ಸಮ್ಮಿಳಿತಗೊಳಿಸಲಾಯಿತು.
ಭಾರತ ಸರಕಾರ ಮೊದಲ ಬಾರಿಗೆ ೧೯೫೩ರಲ್ಲಿ ಹಿಂದುಳಿದ ವರ್ಗಕ್ಕಾಗಿ ಒಂದು ಸಮಿತಿಯನ್ನು ಸ್ಥಾಪಿಸಿ,ಆಚಾರ್ಯ ಕಾಲೇಕರ್ ಅವರನ್ನು ಈ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿತು ಹಾಗೂ ಮೊದಲ ಬಾರಿಗೆ ೨೯ ಮೇ, ೧೯೫೩ರಲ್ಲಿ ಎವರೆಸ್ಟ್ ಶಿಖರ ಏರಿದ ಎಡ್ಮಂಡ್ ಹಿಲರಿ ಮತ್ತು ತೇನ್ಸಿಂಗ್ ನೋರ್ವೇರವರ ಸಾಧನೆಯನ್ನು ಮೆಚ್ಚಿ ಭಾರತೀಯ ಅಂಚೆ ಸೇವೆಯು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು ಹಾಗೂ ಭಾರತೀಯ ಅಂಚೆ ಸೇವೆಯು ೧೦೦ ವರ್ಷಗಳ ಸೇವೆಯ ನೆನಪಿಗಾಗಿ ಅನನ್ಯವಾದ ಒಂದು ಅಂಚೆ ಚೀಟಿಯನ್ನು ಸಹಾ ಬಿಡುಗಡೆ ಮಾಡಿತ್ತು.
ಸ್ವಾತಂತ್ರ್ಯ ಪಡೆದ ನಂತರ ಭಾರತದಾಚೆ ಪಾಕಿಸ್ತಾನದಲ್ಲಿ ಮೊದಲ ವಿಜ್ಞಾನದ ಸಂಸ್ಥೆಯೊಂದನ್ನು ೧೯೫೩ನೇ ಇಸವಿಯಲ್ಲಿ ಉದ್ಘಾಟಿಸಲಾಯಿತು,ಈಜಿಪ್ಟ್ ರಾಷ್ಟ್ರವು ಗಣರಾಜ್ಯವಾಗಿ ಘೋಷಿತವಾಯಿತು,ಫಿಲಿಪ್ಪೀನ್ಸ್ ರಾಷ್ಟ್ರದ ೭ನೇ ಅಧ್ಯಕ್ಷರಾಗಿ ರಾಮನ್ ಮ್ಯಾಗ್ಸೆಸೆ ಆಯ್ಕೆಯಾದರು, ಜುಲೈ ೨೭ರಂದು ಕೊರಿಯ ರಾಷ್ಟ್ರವು ಉತ್ತರ ಮತ್ತು ದಕ್ಷಿಣ ಕೊರಿಯವಾಗಿ ವಿಭಾಗಗೊಳ್ಳುವ ಮೂಲಕ ಕೊರಿಯ ಯುದ್ಧ ಮುಕ್ತಾಯವಾಯಿತು,ಜಗತ್ತಿನ ೯ನೇ ಶಿಖರ ನಂಗಾ ಪರ್ವತವನ್ನು ಆಸ್ಟ್ರೇಲಿಯಾದ ಹರ್ಮನ್ನ್ ಬುಹ್ಲ್ ಒಬ್ಬನೇ ಹತ್ತಿ ಜುಲೈ ೩ರಂದು ದಂಡಯಾತ್ರೆಯನ್ನು ಪೂರೈಸಿದ, ರಷ್ಯಾ ರಾಷ್ಟ್ರವು ತಮ್ಮಲ್ಲಿ ಹೈಡ್ರೋಜನ್ ಬಾಂಬ್ ಇದೆಯೆಂದು ಘೋಷಿಸಿತು. ಈ ನಡುವೆ ಭಾರತದಲ್ಲಿ ಮದ್ರಾಸ್ ರಾಜ್ಯದ ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಪೊಟ್ಟಿ ಶ್ರೀರಾಮುಲುರವರು ಉಪವಾಸ ಆರಂಭಿಸಿದರು, ಹಾಗೆಯೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹೋರಾಟ ಮತ್ತು ನಾಗರಿಕ ಕ್ರೋಧಕ್ಕೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್ ೧ ರಂದು ಆಂಧ್ರಕ್ಕೆ ರಾಜ್ಯದ ಸ್ಥಾನವು ದಕ್ಕಿ, ಕರ್ನೂಲ್ ಅದರ ರಾಜಧಾನಿಯಾಯಿತು.
'ದೊ ಬಿಘ ಜ಼ಮೀನ್' ಚಲನಚಿತ್ರಕ್ಕೆ ೧೯೫೩ರ 'ಫಿಲ್ಮಫೇರ್ ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿಯನ್ನು ಪಡೆಯಿತು ಹಾಗೂ ಈ ಚಲನಚಿತ್ರದ ನಿರೂಪಕ ಬಿಮಲ್ ರಾಯ್ಗೆ 'ಫಿಲ್ಮಫೇರ್ ಅತ್ಯುತ್ತಮ ನಿರೂಪಕ' ಪ್ರಶಸ್ತಿ ದೊರಕಿತು. ಆ ವರ್ಷ ಬಿಡುಗಡೆಯಾದ ಐತಿಹಾಸಿಕ ಚಲಚಿತ್ರ 'ಅನಾರ್ಕಲಿ' ಆ ವರ್ಷದ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ದಾಖಲೆ ನಿರ್ಮಿಸಿತು.
This article uses material from the Wikipedia ಕನ್ನಡ article ೧೯೫೩, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.