ಕರ್ನಾಟಕದ ಬಿಜಾಪುರ ಜಿಲ್ಲೆಗೆ ಹೊಂದಿಕೊಂಡಿರುವ, ಮಹಾರಾಷ್ಟ್ರದ ಜಿಲ್ಲೆ ಸೊಲ್ಲಾಪುರ.
ಹಿಂದೆ 'ಸೊನ್ನಲಿಗೆ'ಯಾಗಿದ್ದ ಸೊಲ್ಲಾಪುರ ಕರ್ಮಯೋಗಿ ಸಿದ್ಧರಾಮೇಶ್ವರರ ಕರ್ಮಭೂಮಿ.ಸೊಲ್ಲಾಪುರ (ಮರಾಠಿಯಲ್ಲಿ ಸೋಲಾಪುರ್) ಮಹಾರಾಷ್ಟ್ರ ರಾಜ್ಯದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ನಗರ , ಮತ್ತು ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಉತ್ತರ ದಕ್ಷಿಣ ರೈಲುದಾರಿಯಲ್ಲಿ ಇದೊಂದು ಪ್ರಮುಖ ಜಂಕ್ಷನ್. ಅನೇಕ ಸಣ್ಣ ಮತ್ತು ಮಧ್ಯಮ ಸ್ಥರದ ಉದ್ಯಮಗಳು ಇಲ್ಲಿವೆ. ವಿದ್ಯುತ್ ಮಗ್ಗಗಳು ಹಾಗೂ ಹತ್ತಿ ಗಿರಣಿಗಳ ಮುಖ್ಯ ಕೇಂದ್ರವೂ ಇದಾಗಿದೆ. ಸೊಲ್ಲಾಪುರದ ಚಾದರಗಳು (ಬೆಡ್ ಶೀಟುಗಳು) ತಮ್ಮ ಹೊಸ ಹೊಸ ವಿನ್ಯಾಸಗಳಿಗೆ ಮತ್ತು ತಾಳಿಕೆಯಿಂದಾಗಿ ಮನೆಮಾತಾಗಿವೆ. ಇಲ್ಲಿಯ ಊರದೈವ ಶ್ರೀ ಸಿದ್ಧೇಶ್ವರ. ಮಕರಸಂಕ್ರಾಂತಿಯಂದು ನಡೆಯುವ ನಂದಿಧ್ವಜದ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಮಹಾರಾಷ್ಟ್ರದ ಬೀಡಿ ಉದ್ಯಮದಲ್ಲಿಯೂ ಸೊಲ್ಲಾಪುರ ಜಿಲ್ಲೆ ಮುಂದಿದೆ. ಇಲ್ಲಿಯ ಹುತಾತ್ಮರ ಸ್ಮಾರಕಕ್ಕೆ ದಿನವೂ ಅನೇಕರು ವಂದಿಸುತ್ತಾರೆ. ಕೂಡಲಸಂಗಮ, ಕರ್ಮಾಲಾ, ಮತ್ತು ಬಾರ್ಶಿ ಶಿಕ್ಷಣ ಮತ್ತು ಔದ್ಯೋಗೀಕರಣದಿಂದ ಪ್ರಗತಿಪಥದಲ್ಲಿವೆ. ಅಕ್ಕಲಕೋಟೆಯ ಸ್ವಾಮಿ ಮಹಾರಾಜರ ಮಠಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬೃಹತ್ ಸಂಖ್ಯೆಯ ಭಕ್ತರು ನಡೆದುಕೊಳ್ಳುತ್ತಾರೆ.
Solapur सोलापूर | |
---|---|
ಮಹಾನಗರ | |
Nickname(s): ಸೊನ್ನಲಿಗೆ, ಸಿದ್ಧೇಶ್ವರ ನಗರಿ | |
ದೇಶ | ಭಾರತ |
ರಾಜ್ಯ | ರಾಜ್ಯ |
ಜಿಲ್ಲಾ | ಸೊಲ್ಲಾಪುರ |
ಸರ್ಕಾರ | |
• ಪಾಲಿಕೆ | ಸೋಲಾಪುರ ಪುರಸಭೆ |
• ಮೇಯರ್ | Prof Sushilatai Abute |
• ಉಪ ಮೇಯರ್ | Mr. Pravin Dongre |
• ನಗರಾಯುಕ್ತ | Mr. Chandrakant Gudewar |
Elevation | ೪೫೭ m (೧,೪೯೯ ft) |
Population (2011 Census of India) | |
• ಮಹಾನಗರ | ೯,೫೧,೧೧೮ |
• Metro | ೯,೫೧,೧೧೮ |
Demonym(s) | Solapurkar |
Language | |
• Official | ಮರಾಠಿ |
ಸಮಯ ವಲಯ | ಯುಟಿಸಿ+5:30 (IST) |
PIN CODE | 41300X |
Telephone code | +91-217 |
ವಾಹನ ನೋಂದಣಿ | MH-13 (Solapur city) MH-45 (Solapur(Akluj) rural district) |
ಮಾತನಾಡುವ ಭಾಷೆಗಳು | ಮರಾಠಿ, ಕನ್ನಡ, ತೆಲುಗು, ಹಿಂದಿ, |
ಲಿಂಗ ಅನುಪಾತ | 52/48 ♂/♀ |
ಸಾಕ್ಷರತೆ | 83.88% |
ಜಾಲತಾಣ | solapur |
ಸೊಲ್ಲಾಪುರ ಜಿಲ್ಲೆ ಪುರಾತನ ಕಾಲದಿಂದಲೂ ಚಾಲುಕ್ಯರು, ರಾಷ್ಟ್ರಕೂಟರು, ಯಾದವರು ಮತ್ತು ಬಹಮನಿ ಸುಲ್ತಾನ ಇತ್ಯಾದಿ ರಾಜರುಗಳ ಆಳ್ವಿಕೆಗೆ ಒಳಪಟ್ಟಿತ್ತು. ಸೊಲ್ಲಾಪುರ ಎಂಬ ಹೆಸರು ಸೋಳಾ ( ಹದಿನಾರು) ಮತ್ತು ಪುರ ( ಹಳ್ಳಿ) ಎಂಬ ಪದಗಳಿಂದ ಬಂದಿರಬೇಕು ಅನ್ನುತ್ತಾರೆ. ಈಗಿನ ಸೊಲ್ಲಾಫುರದಲ್ಲಿ ಆದಿಲಪುರ, ಅಹಮದ್ ಪುರ, ಚಪಲದೇವ, ಫತೇಹ್ ಪುರ, ಜಾಮದಾರವಾಡಿ, ಕಲಜಾಪುರ, ಖದರಪುರ, ಖಂಡೇರ್ವಕಿವಾಡಿ, ಮುಹಮ್ಮದ್ ಪುರ, ರಾನಾಪುರ, ಸಂದಾಲಪುರ, ಶೇಕ್ ಪುರ, ಸೋಲಾಪುರ, ಸೋನಲಗಿ, ಸೋನಾಪುರ ಮತ್ತು ವೈದಕ್ ವಾಡಿ ಎಂಬ ಹದಿನಾರು ಹಳ್ಳಿಗಳು ಅಡಕವಾಗಿವೆ. ಆದರೆ ಈಚೆಗಿನ ಸಂಶೋಧನೆಯ ಪ್ರಕಾರ ಈ ನಂಬಿಕೆ ನಿರಾಧಾರವಾದದ್ದು. ಕಾಮಟಿ ಎಂಬಲ್ಲಿ ಸಿಕ್ಕಿರುವ, ಶಕೆ ೧೨೩೮ರ, ಯಾದವರ ಪತನದ ನಂತರದ ಕಾಲದ, ಒಂದು ಸಂಸ್ಕೃತ ಶಾಸನದ ಪ್ರಕಾರ ಈ ಊರಿನ ಹೆಸರು ಸೋನಾಲಿಪುರ. ಸೊಲ್ಲಾಪುರ ಕೋಟೆಯೊಳಗಿನ ಒಂದು ಶಾಸನದ ಪ್ರಕಾರ , ಈ ಊರನ್ನು ಸೋನಾಲಪುರ ಎಂದು ಕರೆಯಲಾಗುತ್ತಿತ್ತು. ಕೋಟೆಯ ಬಾವಿಯಮೇಲಿನ ಬರಹದ ಪ್ರಕಾರ ಊರಿನ ಹೆಸರು ಸಂದಾಲಪುರ ಎಂದಿತ್ತು.
ಮುಸ್ಲಿಮ್ ಆಡಳಿತದಕಾಲದಲ್ಲಿಯೂ ಇದು ಸಂದಾಲಪುರವಾಗಿತ್ತು. ಆದ್ದರಿಂದ ಸೋನಾಲಪುರ ಕಾಲಕ್ರಮೇಣ ತನ್ನ ನ ಕಾರವನ್ನು ಕಳೆದುಕೊಂಡು ಸೋಲಾಪುರ ಎಂದಾಗಿರಬಹುದು ಎಂದು ಊಹಿಸಲು ಕಾರಣಗಳಿವೆ. ಮುಂದೆ ಬ್ರಿಟಿಶರ ಬಾಯಲ್ಲಿ ಇದು ಶೋಲಾಪುರವಾಗಿ , ಈಗಲೂ ಶೋಲಾಪುರ ಎಂಬ ಹೆಸರನ್ನೂ ಉಪಯೋಗಿಸಲಾಗುತ್ತದೆ.
ಈಗಿನ ಸೋಲಾಪುರ ಜಿಲ್ಲೆ ಮೊದಲು ಅಹಮದ್ ನಗರ, ಪುಣೆ ಮತ್ತು ಸತಾರಾ ಜಿಲ್ಲೆಗಳಲ್ಲಿ ಹಂಚಿಹೋಗಿತ್ತು. ೧೮೩೮ರಲ್ಲಿ ಇದು ಅಹಮದ್ ನಗರದ ಉಪ-ಜಿಲ್ಲೆಯಾಯಿತು. ಇದರಲ್ಲಿ ಬಾರ್ಶಿ, ಮೋಹೋಲ್,ಮಧಾ, ಕರ್ಮಾಲಾ, ಇಂಡಿ, ಹಿಪ್ಪರಗಿ ಮತ್ತು ಮುದ್ದೇಬಿಹಾಳ ಉಪವಿಭಾಗಳು ಸೇರಿದ್ದವು. ೧೮೬೪ರಲ್ಲಿ ಈ ಉಪ-ಜಿಲ್ಲೆಯನ್ನು ರದ್ದುಗೊಳಿಸಲಾಯಿತು. ೧೮೭೧ರಲ್ಲಿ ಇದನ್ನು ಸೊಲ್ಲಾಪುರ,ಬಾರ್ಶಿ, ಮೋಹೋಲ್, ಮಧಾ ಮತ್ತು ಕರ್ಮಾಲಾ ಅಲ್ಲದೆ ಸತಾರಾ ಜಿಲ್ಲೆಯ ಎರಡು ಉಪ-ವಿಭಾಗಗಳಾದ ಪಂಢರಪುರ ಮತ್ತು ಸಂಗೋಳಾ ಸೇರಿದಂತೆ ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ೧೮೭೫ರಲ್ಲಿ ಇದಕ್ಕೆ ಮಾಲ್ಶಿರಸ್ ಉಪ-ವಿಭಾಗವನ್ನು ಸೇರಿಸಲಾಯಿತು. ೧೯೫೬ರ ರಾಜ್ಯಗಳ ಪುನರ್ರಚನೆಯ ಸಂದರ್ಭದಲ್ಲಿ ಸೊಲ್ಲಾಪುರ ಮಹಾರಾಷ್ಟ್ರಕ್ಕೆ ಸೇರಿತು.
ಭಾರತ ಸ್ವತಂತ್ರವಾಗುವ ಮೊದಲೇ ಸ್ವತಂತ್ರವಾಗಿದ್ದು ಸೊಲ್ಲಾಪುರದ ವೈಶಿಷ್ಟ್ಯ. ೧೯೩೦ರ ಮೇ ೯ರಿಂದ ೧೧ರವರೆಗೆ ಇಲ್ಲಿಯ ಜನಗಳಿಗೆ ಸ್ವಾತಂತ್ರ್ಯ ಲಭಿಸಿತ್ತು. ಈ ವಿಶಿಷ್ಟ ಕಥೆ ಇಂತಿದೆ.ಮೇ ೧೯೩೦ರಲ್ಲಿ ಮಹಾತ್ಮಾ ಗಾಂಧಿಯವರ ಬಂಧನದೊಂದಿಗೆ ದೇಶಾದ್ಯಂತ ಬ್ರಿಟಿಶರ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. ಅದು ಸೊಲ್ಲಾಪುರಕ್ಕೂ ಹಬ್ಬಿ ಅಲ್ಲಿಯೂ ಮೆರವಣಿಗೆ, ಪ್ರತಿಭಟನೆಗಳಾದವು. ಪೋಲೀಸರ ಗುಂಡೇಟಿನಲ್ಲಿ ಅನೇಕರು ಮಡಿದರು. ಇದರಿಂದ ರೊಚ್ಚಿಗೆದ್ದ ಜನಜಂಗುಳಿ ಪೋಲೀಸ್ ಠಾಣೆಗೆ ನುಗ್ಗಿದರು. ಅಲ್ಲಿದ್ದ ಪೋಲೀಸರು ಮತ್ತಿತರ ಅಧಿಕಾರಿಗಳು ಸೊಲ್ಲಾಪುರದಿಂದ ಪಲಾಯನ ಹೂಡಿದರು. ಈ ಸನ್ನಿವೇಶದಲ್ಲಿ ಊರಿನ ಕಾನೂನು ಪಾಲನೆ , ಶಾಂತಿ ಕಾಪಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿತ್ತು. ಅಂದಿನ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಮಕೃಷ್ಣ ಜಾಜು , ಇತರೆ ಕಾಂಗ್ರೆಸ್ಸಿಗರೊಂದಿಗೆ ೯ರಿಂದ ೧೧ರವರೆಗೆ ಈ ಜವಾಬ್ದಾರಿಯನ್ನು ನಿಭಾಯಿಸಿದರು.
ಅಂತೆಯೇ, ಭಾರತದ ಮುನಿಸಿಪಾಲಿಟಿಗಳಲ್ಲಿಯೇ ಮೊದಲಬಾರಿಗೆ ಮುನಿಸಿಪಾಲಿಟಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸಿದ ಹೆಗ್ಗಳಿಕೆಯೂ (೧೯೩೦ರಲ್ಲಿ) ಈ ಊರಿನದು. ಗಾಂಧಿಯವರ ದಾಂಡಿ ಉಪ್ಪಿನ ಸತ್ಯಾಗ್ರಹದಿಂದ ಸ್ಪೂರ್ತಿಗೊಂಡ ಸೊಲ್ಲಾಪುರದ ಕೆಲ ತರುಣರು ಸೊಲ್ಲಾಪುರದ ಮುನಿಸಿಪಾಲಿಟಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸಲು ತೀರ್ಮಾನಿಸಿದರು. ಅ ಯೋಜನೆಯ ಪ್ರಕಾರ ಪುಣೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ. ಅಣ್ಣಾಸಾಹೇಬ ಭೋಪಟ್ಕರ್ ೧೯೩೦ರ ಏಪ್ರಿಲ್ ೬ನೆ ತಾರೀಖು ಮುನಿಸಿಪಾಲಿಟಿಯ ಮೇಲೆ ಧ್ವಜ ಹಾರಿಸಿದರು. ಇದರಿಂದ ತ್ರಸ್ತರಾದ ಬ್ರಿಟಿಶರು ಸೊಲ್ಲಾಫುರದಲ್ಲಿ ಮಾರ್ಶಿಯಲ್ ಲಾ ಜಾರಿ ಮಾಡಿ, ಅನೇಕ ಮುಂದಾಳುಗಳನ್ನು ಹಾಗೂ ನಾಗರೀಕರರನ್ನು ಬಂಧಿಸಿದರು. ಮಲ್ಲಪ್ಪ ಧನಶೆಟ್ಟಿ, ಕುರ್ಬಾ ನ್ ಹುಸೇನ್ , ಜಗನ್ನಾಥ ಶಿಂದೆ ಮತ್ತು ಕಿಸನ್ ಸಾರ್ದಾ ಇವರನ್ನು ಮಂಗಳವಾರ ಪೋಲೀಸ್ ಠಾಣೆಯ ಇಬ್ಬರು ಪೋಲಿಸರನ್ನು ಕೊಂದ ಆರೋಪದ ಮೇಲೆ ಬಂಧಿಸಲಾಯಿತು. ಕೆಳ ನ್ಯಾಯಾಲಯದಲ್ಲಿ ಇವರಿಗೆ ವಿಧಿಸಲಾದ ಗಲ್ಲು ಶಿಕ್ಷೆ, ಮುಂದೆ ಉಚ್ಚ ನ್ಯಾಯಾಲಯದಲ್ಲಿಯೂ ಖಾಯಮ್ ಆಗಿ , ಈ ನಾಲ್ವರನ್ನು ೧೯೩೧ರ ಜನವರಿ ೧೨ರಂದು ಗಲ್ಲಿಗೇರಿಸಲಾಯಿತು. ಈ ನಾಲ್ವರು ಹುತಾತ್ಮರ ಸ್ಮರಣಾರ್ಥ ನಗರಮಧ್ಯದಲ್ಲಿ ಇವರ ಮೂರ್ತಿಗಳನ್ನು ಪ್ರತಿಷ್ಟಾಪಿಸಿ , ಈ ಜಾಗವನ್ನು ಹುತಾತ್ಮಾ ಚೌಕ ಎಂದು ಹೆಸರಿಸಲಾಗಿದೆ.
ಇಲ್ಲಿಯ ಊರದೇವರು ಶ್ರೀ ಸಿದ್ಧರಾಮೇಶ್ವರ. ೧೨ನೆಯ ಶತಮಾನದ ಈ ಐತಿಹಾಸಿಕ ವ್ಯಕ್ತಿಯ ಕರ್ಮಯೋಗ ದಿಂದ ದೈವತ್ವಕ್ಕೇರಿದ. ಸಿದ್ಧರಾಮ ವೀರಶೈವ ಧರ್ಮಕ್ಕೆ ಅಪಾರ ಕೊಡುಗೆ ನೀಡಿದ್ದು, ವೀರಶೈವರ ಆಚಾರ್ಯ ಪಂಥಕ್ಕೆ ಸೇರಿದವನು, ಅದ್ಬುತ ವಚನಕಾರ.
ಉಭಯಕವಿ ಕಮಲರವಿ ಎಂದು ಬಿರುದಾಂಕಿತನಾದ ರಾಘವಾಂಕನು ಸಿದ್ದರಾಮ ಚರಿತೆಯನ್ನು ಷಟ್ಪದಿಯಲ್ಲಿ ರಚಿಸಿ ,ಸಿದ್ದರಾಮನ ಮೇರುವ್ಯಕ್ತಿತ್ವ ವನ್ನು ಅಭಿವ್ಯಕ್ತಗೊಳಿಸಿದ್ದಾನೆ. ಬರಗಾಲಪೀಡಿತ ಸೊಲ್ಲಾಪುರದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಸಿದ್ಧರಾಮೇಶ್ವರನು ೪೦೦೦ ಶಿವಶರಣರೊಂದಿಗೆ , ಕೆರೆಯನ್ನು ತೋಡಿದನು ಮತ್ತು ದೇವಾಲಯಗಳನ್ನು ನಿರ್ಮಿಸಿದನು. ಆತ ಸೊಲ್ಲಾಪುರದಲ್ಲಿಯೇ ಸಜೀವ ಸಮಾಧಿಗೇರಿದನು.ಅವನ ವಚನಗಳನ್ನು ಡಾ.ಎಲ್.ಬಸವರಾಜುರವರು ಸಂಪಾದಿಸಿ 'ಸೋನ್ನಲಾಪುರದ ಸಂತ ಸಿದ್ದರಾಮನ ನಿಜ ವಚನಗಳು ', ಎಂಬ ಪುಸ್ತಕದಲ್ಲಿ ಹೊರತಂದಿದ್ದಾರೆ .
ಸೊಲ್ಲಾಪುರ ಮುಂಬಯಿಯಿಂದ ೪೩೩ ಕಿ.ಮೀ, ಪುಣೆಯಿಂದ ೨೪೪ ಕಿ.ಮೀ ದೂರದಲ್ಲಿದೆ. ಸೊಲ್ಲಾಪುರ ದೆಹಲಿ, ಹೈದರಾಬಾದು, ಬೆಂಗಳೂರು ಮೊದಲಾದ ನಗರಗಳಿಗೆ ರೈಲು ಮತ್ತು ರಸ್ತೆಯ ನೇರ ಸಂಪರ್ಕ ಹೊಂದಿದೆ. ಸೊಲ್ಲಾಫುರದಿಂದ ೧೮ ಕಿ.ಮೀ ದೂರದಲ್ಲಿರುವ ನಾನಜ್ Great Indian Bustardಗೆ ನೆಲೆಯಾಗಿದೆ. (ಸ್ಥಳೀಯ ಹೆಸರು ಮಳ್ಧೋಕ್).ಈ ಕಾರಣದಿಂದ ಇದು ಒಂದು ಅಂತರರಾಷ್ಟ್ರೀಯ ಪರಿಸರ ಪ್ರವಾಸಿಗಳ ಆಕರ್ಷಣೆಯಾಗಿದೆ.
ಮಹಾರಾಷ್ಟ್ರದ ಅತಿ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಪಂಢರಪುರ ಇಲ್ಲಿಂದ ೭೦ ಕಿ.ಮೀ ದೂರದಲ್ಲಿದೆ. ಇಲ್ಲಿ ಚಂದ್ರಭಾಗಾ ನದಿಯ ತೀರದಲ್ಲಿ ವಿಠೋಬ -ರಖುಮಾಯಿಯ ಮಂದಿರವಿದೆ. ಪುರಂದರದಾಸರ ಆರಾಧ್ಯದೈವ ಪಂಢರಪುರದ ವಿಠ್ಠಲ. ಇಲ್ಲಿಂದ ೩೮ ಕಿ.ಮೀ ದೂರದ ಅಕ್ಕಲಕೋಟೆ ಮಠ ಮತ್ತು ಸ್ವಾಮಿಗಳಿಂದ ಭಕ್ತರ ಮನಸ್ಸನ್ನು ಸೆಳೆಯುತ್ತದೆ.
ಸೊಲ್ಲಾಪುರ (ಮರಾಠಿಯಲ್ಲಿ ಸೋಲಾಪುರ್) ಮಹಾರಾಷ್ಟ್ರ ರಾಜ್ಯದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ನಗರ , ಮತ್ತು ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಉತ್ತರ ದಕ್ಷಿಣ ರೈಲುದಾರಿಯಲ್ಲಿ ಇದೊಂದು ಪ್ರಮುಖ ಜಂಕ್ಷನ್. ಇಲ್ಲಿ ಅನೇಕ ಸಣ್ಣ ಮತ್ತು ಮಧ್ಯಮ ಸ್ಥರದ ಉದ್ಯಮಗಳು ಇಲ್ಲಿವೆ. ವಿದ್ಯುತ್ ಮಗ್ಗಗಳು ಹಾಗೂ ಹತ್ತಿ ಗಿರಣಿಗಳ ಮುಖ್ಯ ಕೇಂದ್ರವೂ ಇದಾಗಿದೆ. ಸೊಲ್ಲಾಪುರದ ಚಾದರಗಳು (ಬೆಡ್ ಶೀಟುಗಳು) ತಮ್ಮ ಹೊಸ ಹೊಸ ವಿನ್ಯಾಸಗಳಿಗೆ ಮತ್ತು ತಾಳಿಕೆಯಿಂದಾಗಿ ಮನೆಮಾತಾಗಿವೆ. ಇಲ್ಲಿಯ ಊರದೈವ ಶ್ರೀ ಸಿದ್ಧೇಶ್ವರ. ಮಕರಸಂಕ್ರಾಂತಿಯಂದು ನಡೆಯುವ ನಂದಿಧ್ವಜದ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಮಹಾರಾಷ್ಟ್ರದಬೀಡಿ ಉದ್ಯಮದಲ್ಲಿಯೂ ಸೊಲ್ಲಾಪುರ ಜಿಲ್ಲೆ ಮುಂದಿದೆ. ಇಲ್ಲಿಯ ಹುತಾತ್ಮರ ಸ್ಮಾರಕಕ್ಕೆ ದಿನವೂ ಅನೇಕರು ವಂದಿಸುತ್ತಾರೆ. ಕೂಡಲಸಂಗಮ, ಕರ್ಮಾಲಾ, ಮತ್ತು ಬಾರ್ಶಿ ಶಿಕ್ಷಣ ಮತ್ತು ಔದ್ಯೋಗೀಕರಣದಿಂದ ಪ್ರಗತಿಪಥದಲ್ಲಿವೆ. ಅಕ್ಕಲಕೋಟೆಯ ಸ್ವಾಮಿ ಮಹಾರಾಜರ ಮಠಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬೃಹತ್ ಸಂಖ್ಯೆಯ ಭಕ್ತರು ನಡೆದುಕೊಳ್ಳುತ್ತಾರೆ.
೨೦೦೧ರ ಜನಗಣತಿಯ ಪ್ರಕಾರ ಇಲ್ಲಿಯ ಜನಸಂಖ್ಯೆ ೮೭೩,೦೩೭. ಇದರಲ್ಲಿ ಪುರುಷರು ೫೧% ಮತ್ತು ಸ್ತ್ರೀಯರು ೪೯%. ಇಲ್ಲಿಯ ಸರಾಸರಿ ಸಾಕ್ಷರತೆಯ ಪ್ರಮಾಣ ೬೭% ಇದ್ದು ಇದು ಭಾರತದ ಸರಾಸರಿ ಸಾಕ್ಷರತಾ ಪ್ರಮಾಣ (೫೯.೫%)ಕ್ಕಿಂತ ಹೆಚ್ಚಾಗಿದೆ. ಪುರಷರ ಸಾಕ್ಷರರು ೭೫% ಮತ್ತು ಸ್ತ್ರೀ ಸಾಕ್ಷರರು ೫೮% ಇದ್ದಾರೆ. ೬ ವರ್ಷಕ್ಕಿಂತ ಸಣ್ಣ ಮಕ್ಕಳು ೧೩% ಇದ್ದಾರೆ. ಮರಾಠಿ ಮುಖ್ಯಭಾಷೆಯಾಗಿದ್ದರೂ, ಕನ್ನಡ ಮಾತನಾಡುವವರೂ ವಿಪುಲವಾಗಿದ್ದಾರೆ.
This article uses material from the Wikipedia ಕನ್ನಡ article ಸೊಲ್ಲಾಪುರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.