ಸೂಲಗಿತ್ತಿ ನರಸಮ್ಮರವರು ಕರ್ನಾಟಕದಲ್ಲಿ ನೆಲೆಸಿದ್ದ ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತೆ.
ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕೃಷ್ಣಾಪುರದ ಮೂಲದವರು. ಸೂಲಗಿತ್ತಿ ನರಸಮ್ಮ ಆಸ್ಪತ್ರೆ, ವೈದ್ಯರಿಲ್ಲದ ಕಾಲದಲ್ಲಿ ಆಧುನಿಕ ಕಾಲದ ಹೆರಿಗೆ ತಜ್ಞೆಯಂತೆ ೧೫,೦೦೦ ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. ಅವರ ಈ ಕೆಲಸವನ್ನು ಪರಿಗಣಿಸಿ ಭಾರತ ಸರ್ಕಾರವು ೨೦೧೮ರಲ್ಲಿ ಪದ್ಮಶ್ರೀ ಹಾಗೂ ೨೦೧೩ರಲ್ಲಿ ವಯೋಶ್ರೇಷ್ಟ ಸಮ್ಮಾನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಇವರು ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಪಡೆದಿದ್ದಾರೆ.
ಸೂಲಗಿತ್ತಿ ಡಾ. ನರಸಮ್ಮ | |
---|---|
ಜನನ | ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ, ಕರ್ನಾಟಕ, ಭಾರತ |
ಮರಣ | 25 ಡಿಸೆಂಬರ್ 2018 ಬೆಂಗಳೂರು, ಕರ್ನಾಟಕ, ಭಾರತ |
ವೃತ್ತಿ | ಸೂಲಗಿತ್ತಿ |
ರಾಷ್ಟ್ರೀಯತೆ | ಭಾರತೀಯ |
ಕಾಲ | ೨೦ನೆಯ ಶತಮಾನ |
ಪ್ರಮುಖ ಪ್ರಶಸ್ತಿ(ಗಳು) | ಭಾರತ ಸರ್ಕಾರದ ವಯೋಶ್ರೇಷ್ಟ ಸಮ್ಮಾನ, ಪದ್ಮಶ್ರೀ ಪ್ರಶಸ್ತಿ (೨೦೧೮), ಗೌರವ ಡಾಕ್ಟರೇಟ್ (೨೦೧೪), ರಾಜ್ಯೋತ್ಸವ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಡಿ. ದೇವರಾಜ ಅರಸು ಪ್ರಶಸ್ತಿ |
ಬಾಳ ಸಂಗಾತಿ | ಆಂಜಿನಪ್ಪ |
ನರಸಮ್ಮನವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಾಪುರದಲ್ಲಿ ಜನಿಸಿದರು. ಕರ್ನಾಟಕವಾದರೂ ಸುತ್ತಲೂ ಆಂಧ್ರ ರಾಜ್ಯ, ಅವರ ಆಡುಭಾಷೆ ತೆಲುಗು. ನರಸಮ್ಮ ಅವರು ಆದಿ ಜಾಂಭವ ಜನಾಂಗಕ್ಕೆ ಸೇರಿದವರು. ನರಸಮ್ಮ ಅವರಿಗೆ ೧೨ ವರ್ಷದಲ್ಲಿ ಮದುವೆಯಾಗಿತ್ತು. ೨೦ನೇ ವಯಸ್ಸಿನಲ್ಲಿ ಅಂದರೆ ೧೯೪೦ರಲ್ಲಿ ತನ್ನ ಚಿಕ್ಕಮ್ಮನ ಹೆರಿಗೆಗೆ ನರಸಮ್ಮ ಸಹಾಯ ಮಾಡಿದ್ದರು. ನರಸಮ್ಮ ಮತ್ತು ಅವರ ಪತಿ ಆಂಜಿನಪ್ಪ ಅವರಿಗೆ ೧೨ ಮಕ್ಕಳಿದ್ದರು. ಅವರಲ್ಲಿ ನಾಲ್ವರು ಗಂಡು ಮಕ್ಕಳು ಚಿಕ್ಕವರಿರುವಾಗಲೇ ತೀರಿಕೊಂಡಿದ್ದಾರೆ. ೨೨ ಮೊಮ್ಮಕ್ಕಳಿದ್ದಾರೆ.
ನರಸಮ್ಮ ಅವರು ಅಲೆಮಾರಿ ಜನಾಂಗಕ್ಕೆ ಸೇರಿದವರು. ಆ ಜನಾಂಗದ ಅದೆಷ್ಟೋ ಮಹಿಳೆಯರು ಕೃಷ್ಣಾಪುರಕ್ಕೆ ಬಂದು ನರಸಮ್ಮ ಅವರಲ್ಲಿ ಆಶ್ರಯ ಪಡೆದು ಹೆರಿಗೆ ಮಾಡಿಸಿಕೊಂಡಿದ್ದಾರೆ. ಗರ್ಭಿಣಿಯರಿಗೆ ನೈಸರ್ಗಿಕ ಆಯುರ್ವೇದ ಔಷಧಗಳನ್ನು ಕೂಡ ತಯಾರಿಸಿ ಕೊಡುತ್ತಿದ್ದರು. ಗರ್ಭಿಣಿಯರ ಭ್ರೂಣದ ನಾಡಿಮಿಡಿತ ಅರ್ಥ ಮಾಡಿಕೊಂಡು, ಅದರ ಆರೋಗ್ಯ, ಮಗುವಿನ ತಲೆ ಯಾವ ಕಡೆಗಿದೆ, ೮-೯ ತಿಂಗಳಲ್ಲಿ ಮಗು ಗಂಡೊ-ಹೆಣ್ಣೊ ಎಂದು ಕೂಡ ಹೇಳುವಷ್ಟು ನಿಪುಣರು.
ಇವರ ಅಜ್ಜಿ ಮರಿಗೆಮ್ಮ ಹೆರಿಗೆ ಮಾಡಿಸುತ್ತಿದ್ದರು. ಅವರ ಜೊತೆ ನರಸಮ್ಮ ಅವರು ಕೂಡ ಹೋಗುತ್ತಿದ್ದರು. ಹೆರಿಗೆ ಮಾಡಿಸುವಾಗ ಬೇರೆ ಯಾರನ್ನೂ ಒಳಕ್ಕೆ ಬಿಡುತ್ತಿರಲಿಲ್ಲ ಆದರೆ ಇವರನ್ನು ಮಾತ್ರ ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು ಆಗ ಈಕೆಗೆ ೧೬-೧೭ರ ವಯಸ್ಸು. ಹನುಮಕ್ಕ ಎಂಬುವವರಿಗೆ ಹೆರಿಗೆ ನೋವಾದಾಗ, ತನ್ನ ಅಜ್ಜಿ ಇರಲಿಲ್ಲ, ಮನೆಯಲ್ಲಿ ಯಾರೂ ಇರಲಿಲ್ಲ. ಆಗ ನರಸಮ್ಮನವರೇ ಹೆರಿಗೆ ಮಾಡಿಸಿದೆ. ಅದೇ ಮೊದಲು ಮಾಡಿಸಿದ ಹೆರಿಗೆ. ಅಂದಿನಿಂದ ಹಿಡಿದು ಇಲ್ಲಿಯವರೆಗೆ ೧೫ ಸಾವಿರ ಹೆರಿಗೆಗಳನ್ನು ಮಾಡಿಸಿರುವ ಖ್ಯಾತಿ ೯೭ ವರ್ಷದ (೨೦೧೮ರ ಪ್ರಕಾರ) ನರಸಮ್ಮನವರಿಗೆ ಸಲ್ಲುತ್ತದೆ. ಜನರು ಹೆರಿಗೆ ಮಾಡಿಸಿದ್ದಕ್ಕೆ ರವಿಕೆ ಬಟ್ಟೆ, ಭತ್ತ, ರಾಗಿ ಇತ್ಯಾದಿಗಳನ್ನು ನರಸಮ್ಮನಿಗೆ ಕೊಡುತ್ತಿದ್ದರು. ವರ್ಷದ ಫಸಲು ಬಂದಾಗ ಬೆಳೆಯ ರಾಶಿಯಲ್ಲಿ ಎಷ್ಟೋ ಮಂದಿ ಮೊದಲನೇ 'ಮೊರ' ಇವರಿಗೆ ಕೊಡುತ್ತಿದ್ದರು.
ಗಿಡಮೂಲಿಕೆಗಳಿಂದಾಗಿ ಸಲೀಸಾಗಿ ಹೆರಿಗೆ ಮಾಡಿಸುತ್ತಿದ್ದರು. ಬುಡುಬುಡಿಕೆಯವರು ಗಿಡಮೂಲಿಕೆ ಔಷಧ ಹೆಚ್ಚು ಬಳುತ್ತಿದ್ದರು. ಅವರಿಂದ ಗಿಡಮೂಲಿಕೆ ಔಷಧ ಮಾಡುವುದನ್ನು ತಿಳಿದುಕೊಂಡು. ಕಷಾಯ ಮಾಡುವುದು, ಕಸ ಬೀಳಿಸುವುದು ಎಲ್ಲವನ್ನು ಕಲಿತರು. ಹೆರಿಗೆಯಷ್ಟೇ ಅಲ್ಲ, ಕಣ್ಣಿಗೆ ಬಿದ್ದ ಕಸ ತೆಗೆಯುವುದು, ಗಂಟಲಿನ ಶೀತದ ಗಟ್ಟೆ ಹೋಗಲು, ಕಿರುನಾಲಿಗೆ ಬೆಳೆದರೆ ಎಲ್ಲಕ್ಕೂ ಔಷಧ ಮಾಡುತ್ತಿದ್ದರು. ಮಗು ಹುಟ್ಟಿ ೯ ದಿನದವರೆಗೂ, ಅಂದರೆ 'ಪುರಡಿ' ಮಾಡೋವರೆಗೂ ಇವರೇ ಬಾಣಂತಿ, ಮಗುವನ್ನು ನೋಡಿಕೊಳ್ಳುತ್ತಿದ್ದರು. ಶಿಶುವಿಗೆ ನೀರು ಸಹ ಇವರೇ ಹಾಕುತ್ತಿದ್ದರು. ಪ್ರಸ್ತುತ ಅವರ ಒಂದಿಬ್ಬರು ಹೆಣ್ಣು ಮಕ್ಕಳು ಮತ್ತು ಸೊಸೆಯಂದಿರು ಸೂಲಗಿತ್ತಿ ನರಸಮ್ಮನವರ ಪವಿತ್ರ ವಿದ್ಯೆಯನ್ನು ಮುಂದುವರಿಸುತ್ತಿದ್ದಾರೆ.
ತಮ್ಮ ಸಾಧನೆಗಾಗಿ ನರಸಮ್ಮ ಅವರಿಗೆ ಈ ಕೆಳಗಿನ ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
ಸಾಲುಮರದ ತಿಮ್ಮಕ್ಕ
This article uses material from the Wikipedia ಕನ್ನಡ article ಸೂಲಗಿತ್ತಿ ನರಸಮ್ಮ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.