ಸುಂದರರಾಜ್ ಕನ್ನಡ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಕಲಾವಿದರಾಗಿದ್ದಾರೆ.
ಮೊದಲು ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಇವರು ಈಗ ಹೆಚ್ಚಾಗಿ ಹಾಸ್ಯ ನಟ (ಕೋತಿಗಳು ಸಾರ್..ಕೋತಿಗಳು ಚಿತ್ರ) ಮತ್ತು ಪೋಷಕ ನಟರಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.ಇವರ ಪತ್ನಿ ಪ್ರಮೀಳಾ ಜೋಷಾಯ್ ಕೂಡ ಚಲನಚಿತ್ರ ಮತ್ತು ಕಿರುತೆರೆಯ ಕಲಾವಿದೆಯಾಗಿದ್ದಾರೆ.
ಸುಂದರರಾಜ್ ರಂಗಭೂಮಿ ಮತ್ತು ಚಲನಚಿತ್ರ ಲೋಕದ ಅತ್ಯುತ್ತಮ ಕಲಾವಿದರಲ್ಲೊಬ್ಬರು. ಸುಂದರರಾಜ್ 1951ರ ಫೆಬ್ರವರಿ 2ರಂದು ಜನಿಸಿದರು. ಇವರು 3 ವರ್ಷದವರಿದ್ದಾಗ ಇವರ ಕುಟುಂಬ ತಮಿಳುನಾಡಿನ ಶ್ರೀರಂಗಂ ಇಂದ ಬೆಂಗಳೂರಿಗೆ ವಲಸೆ ಬಂತು. ತಂದೆ ಎಂ. ಎನ್. ಕೃಷ್ಣಸ್ವಾಮಿ ಅವರು ನಿವೃತ್ತ ಸೇನಾನಿ. ತಾಯಿ ವಿಜಯಲಕ್ಷ್ಮಿ. ಮನೆಯಲ್ಲಿ ಸಂಗೀತ, ನೃತ್ಯ ಮತ್ತು ವಿವಿಧ ಕಲಾಭಿರುಚಿಯ ವಾತಾವರಣವಿತ್ತು. ಬಸವನಗುಡಿಯ ನಿವಾಸಿಯಾಗಿ ನ್ಯಾಷನಲ್ ಸ್ಕೂಲು ಮತ್ತು ಕಾಲೇಜಿನ ಓದುವ ದಿನಗಳಲ್ಲಿ ಅನೇಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದ ಸುಂದರರಾಜ್ ಅವರಿಗೆ ನಾಟಕಗಳಲ್ಲಿ ಅಭಿನಯಿಸುವುದು ಮತ್ತು ಸಿನಿಮಾ ನೋಡುವುದರಲ್ಲಿ ಅಪಾರ ಆಸಕ್ತಿ ಇತ್ತು ಸುಂದರರಾಜ್ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದುವ ದಿನಗಳಲ್ಲೇ ಮಹಾನ್ ರಂಗತಜ್ಞರಾದ ಬಿ. ವಿ. ಕಾರಂತರ ಮೆಚ್ಚಿನ ಹುಡುಗರಲ್ಲಿ ಒಬ್ಬರಾಗಿ, 1972ರಲ್ಲಿ ಅವರ ನಿರ್ದೇಶನದಲ್ಲಿ ಪ್ರಸಿದ್ಧವಾದ 'ಹಯವದನ' ನಾಟಕದಲ್ಲಿ ಪಾತ್ರವಹಿಸಿದರು. ಕಾರಂತರ ಹಯವದನ, ಜೋಕುಮಾರಸ್ವಾಮಿ, ಸತ್ತವರ ನೆರಳು, ಗೋಕುಲ ನಿರ್ಗಮನ ಮುಂತಾದ ನಾಟಕಗಳಂತೂ ರಂಗಭೂಮಿಗೆ ಹೊಸ ಭಾಷ್ಯ ಬರೆದಂತವು. ಈ ಅಲೆಯಲ್ಲಿ ಹೊಮ್ಮಿಬಂದ ಸುಂದರರಾಜ್ 1974ರಲ್ಲಿ ಪ್ರಸಿದ್ಧ 'ಬೆನಕ' ತಂಡದ ಪ್ರಾರಂಭಿಕ ಸದಸ್ಯರಲ್ಲಿ ಒಬ್ಬರಾದರು ಇಂದೂ ಬೆನಕದೊಂದಿಗೆ ಅವರು ನಾಗಾಭರಣ ಮತ್ತು ಇತರರೊಂದಿಗೆ ಅದರ ನಿರ್ವಹಣೆಯಲ್ಲಿ ಮುಂದುವರೆದಿದ್ದಾರೆ. ಸ್ವಯಂ ಸುಂದರರಾಜ್ ಅವರೇ ನಿರ್ದೇಶಿಸಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ‘ಯಮರಂಜನ' ನೂರಾರು ಪ್ರದರ್ಶನಗಳನ್ನು ಕಂಡು ಯಶಸ್ವಿಯಾಯಿತು. ನಟನೆಯನ್ನು ಬದುಕಿನ ವೃತ್ತಿಯಾಗಿ ಅನ್ವೇಷಿಸುತ್ತಿದ್ದ ಸಂದರ್ಭಗಳಲ್ಲಿ ಸುಂದರರಾಜ್ ಮತ್ತು ಅವರ ಪತ್ನಿ ಪ್ರಮೀಳಾ ಜೋಷಾಯ್ ಇಬ್ಬರೂ ಅನೇಕ ವೃತ್ತಿರಂಗಭೂಮಿ ನಾಟಕಗಳಲ್ಲೂ ಅಭಿನಯಿಸಿದ್ದರು. ಕಲಾತ್ಮಕ ಚಲನಚಿತ್ರಗಳಲ್ಲಿ ಅಭಿನಯಿಸುತ್ತ ಬಂದ ಸುಂದರರಾಜ್ ಅನೇಕ ಕಲಾತ್ಮಕ ಮತ್ತು ವಾಣಿಜ್ಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಾಡು, ಚೋಮನದುಡಿ, ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಅನ್ವೇಷಣೆ, ತಪ್ಪಿದ ತಾಳ, ಸಂಕ್ರಾಂತಿ, ಚಂದನದ ಗೊಂಬೆ, ಪ್ರಾಯ ಪ್ರಾಯ ಪ್ರಾಯ, ಬಂಗಾರದ ಜಿಂಕೆ, ದಿಗ್ಗಜರು, ಮತದಾನ, ಆಕಸ್ಮಿಕ, ಕುರಿಗಳು ಸಾರ್ ಕುರಿಗಳು ಸೇರಿದಂತೆ ಸುಂದರರಾಜ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ಅಪಾರ ಅನುಭವವುಳ್ಳ ಸುಂದರರಾಜ್ ಚಲನಚಿತ್ರಗಳ ಸಂಕಲನ, ಕಲಾವಿನ್ಯಾಸ ಮತ್ತು ನಿರ್ಮಾಣ ವಿಭಾಗಗಳಲ್ಲೂ ಕೆಲಸಮಾಡಿದ್ದಾರೆ. ಸುಂದರರಾಜ್ ಮತ್ತು ಅವರ ಪತ್ನಿ ಪ್ರಮೀಳಾ ಜೋಷಾಯ್ ಇಬ್ಬರೂ ಚಲನಚಿತ್ರ ಮತ್ತು ರಂಗಭೂಮಿಯಲ್ಲಿ ಅಪಾರ ಕೆಲಸ ಮಾಡಿ ಹೆಸರಾಗಿದ್ದಾರೆ. ಅವರ ಪುತ್ರಿ ಮೇಘನಾ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಮೇಘನಾ ಅವರ ಪತಿ ಚಿರಂಜೀವಿ ಸರ್ಜಾ 2020ರ ಜೂನ್ ಮಾಸದಲ್ಲಿ ಆಕಸ್ಮಿಕವಾಗಿ ನಿಧನರಾದ ದುಃಖದಿಂದ ಈ ಕುಟುಂಬ ಚೇತರಿಸಿಕೊಳ್ಳಲು ಯತ್ನಿಸುತ್ತಿದೆ. ನಾಡಿನ ಉತ್ತಮ ಕಲಾವಿದರಾದ ಸುಂದರರಾಜ್ ಮತ್ತು ಅವರ ಕುಟುಂಬದವರ ಬದುಕು ಸಕಲ ಭಾಗ್ಯಗಳಿಂದ ಉತ್ತಮಗೊಳ್ಳಲಿ ಎಂದು ಆಶಿಸಿ ಸುಂದರರಾಜ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳೋಣ.
This article uses material from the Wikipedia ಕನ್ನಡ article ಸುಂದರರಾಜ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.