ಸವಿತಾ ನಾಗಭೂಷಣ ನಮ್ಮ ನಡುವೆ ಸೂಕ್ಷ್ಮ ಮನಸ್ಸಿನ ಕಾವ್ಯ ಸಂವೇದನೆಯ ಮೂಲಕ ಗುರುತಿಸಲ್ಪಟ್ಟವರು.
ಹೆಚ್ಚು ವಿಮರ್ಶೆಯ ಗೊಂದಲಗಳಿಗೆ ಗೂಡಾಗದೆ ತಾನಾಯಿತು ತನ್ನ ಕವಿತೆಯಾಯಿತು ಎಂಬ ನಿರ್ಲಿಪ್ತತೆಯಲ್ಲಿ ತನ್ನ ಅನುಭವ,ನೆನಹುಗಳಿಗೆ ಕವಿ ಭಾಷೆಯ ಉಡುಗೆ ತೊಡಿಸಿ ಕಳೆದ ನಾಲ್ಕು ದಶಕಗಳಿಂದ ಬರೆಯುತ್ತಿರುವವರು. ಬರವಣಿಗೆ ಎನ್ನುವುದು ಅವರಿಗೆ ತಾನಿರುವಷ್ಟು ಸಹಜ. ಅವರ ಕಲ್ಪನೆಯ ತೆಕ್ಕೆಗೆ ಸುತ್ತಲಿನ ಪರಿಸರ ಹೂವು,ಹಣ್ಣು, ಚಂದ್ರ, ತಾರೆ, ಭೂಮಿ, ಆಕಾಶ, ಗಿಡ, ಮರ, ಬಳ್ಳಿ ಎಲ್ಲವೂ ಕಾವ್ಯ ವಸ್ತುವಾಗಿ ಬಿಚ್ಚಿಕೊಳ್ಳುತ್ತವೆ. ತಾನು ಬದುಕುತ್ತಿರುವ ಸಮಾಜದ ನೋವು ನಲಿವುಗಳಿಗೆ ದನಿಯಾಗುತ್ತಲೇ ಅಲ್ಲಿನ ಸಮಸ್ಯೆ, ಕಾವುಗಳಿಗೆ ಸರಳ ಸಾಂತ್ವನಗಳು ಅವರ ಕವಿತೆಯಲ್ಲಿ ದೊರೆಯುತ್ತವೆ. ಒಮ್ಮೊಮ್ಮೆ ತುಂಟ ಹುಡುಗಿಯ ಕಂಠಪಾಠದಂತೆ ಅವರ ಕವಿತೆಗಳು ಹೊಸಲೋಕವೊಂದನ್ನು ನಮ್ಮ ಮುಂದೆ ತೆರೆದಿಡುತ್ತವೆ. ಶಬ್ದಗಳ ಆಡಂಬರದಲ್ಲಿ ಅವರ ಕವಿತೆಗಳು ಎಲ್ಲಿಯೂ ಮುಚ್ಚಿ ಹೋಗುವುದಿಲ್ಲ. ಸಹೃದಯ ಮನಸ್ಸು ಕವಿತೆಯ ಜಾಡು ಹಿಡಿದು ಹಿಂಬಾಲಿಸಲು ಕೊಂಚವೂ ಕಷ್ಟವಾಗದ ಹಾಗೆ ಅವರ ಬರವಣಿಗೆಯ ಶೈಲಿ ನವಿರಾಗಿದೆ; ಅಷ್ಟೇ ಪ್ರಬುದ್ಧವಾಗಿದೆ.
ಜೀವ ಸಂವೇದನೆಯನ್ನು ಸರಕು ಪ್ರಪಂಚ ಆಕ್ರಮಿಸಿಕೊಂಡಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುವ ಅವರು ಜೀವ ಕಾರುಣ್ಯದ ನೆಲೆಯೊಂದನ್ನು ಶೋಧಿಸಲುಯತ್ನಿಸುತ್ತಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಚಿಂತನೆಯ ಎಳೆಗಳು ಈ ಹುಡುಕಾಟದ ಬಿರು ಬಿಸಿಲಿನ ಹಾದಿಯ ನೆರಳುಗಳು. ಬಂದೂಕಿನ ನಳಿಕೆಯಲ್ಲೂ ಗೂಡು ಕಟ್ಟುವ ಗುಬ್ಬಚ್ಚಿಗಳ ಚಿತ್ರ ಕಲ್ಪಿಸುವ ಅವರು ಕೌರ್ಯವನ್ನು ಧಿಕ್ಕರಿಸುವ ಮಾತಾಡುತ್ತಾರೆ.
ನಿನ್ನ ಸಾವಿರ ಸಾವಿರ
ನದಿಗಳಲ್ಲಿ ಬಂದೂಕಿನ
ಅಲೆಗಳು ತೇಲುವುದನ್ನೂ
ಪುಟಿಯುವ ಮೀನುಗಳ ಬದಲು
ಗುಂಡುಗಳು ಹಾರಾಡುವುದನ್ನೂ
ಓಕುಳಿಯ ಬದಲು
ನೆತ್ತರು ಹರಿಯುವುದನ್ನೂ
ಧಿಕ್ಕರಿಸುತ್ತೇನೆ. (ಧಿಕ್ಕರಿಸುತ್ತೇನೆ)
ಈ ಧಿಕ್ಕಾರದ ಒಳಗೆ ಮಾನವತ್ವವನ್ನು ಅರಳಿಸುವ ಹಂಬಲ ಮೊನಚು ಬಾಣವಾಗಿ ಮರಳಿ ಬರುತ್ತದೆ.
ಗೆಳೆಯಾ.....
ಕೋವಿ, ಗುಂಡು, ರಕ್ತ, ಚೀತ್ಕಾರ
ಈ ಭುವಿಗೆ ತುಂಬಾ ಹಳತು.
ಬದುಕ ಬೆಳಗಿಸಲು ಹೊಸ ಅಸ್ತ್ರಗಲೇನಾದರೂ
ನಿನ್ನ ಬಳಿ ಇವೆಯಾ, ಹೇಳು.... (ಕೋವಿ ಹಿಡಿಯದ ಕೈಗಳೇ ಕಂಬನಿ ಒರೆಸಬೇಕು)
ಬಲೆಯೊಳಗಿದ್ದರೂ ದುಃಖ ಬಯಲೊಳಗಿದ್ದರೂ ದುಃಖ
ಬೀಸೋ ಕಲ್ಲಿನ ನಡುವೆ ಬದುಕು ಕಾಣಕ್ಕ....(ದುಃಖ)
ಹೆಣ್ಣಿನ ಶಕ್ತಿಯ ಕುರಿತು ಮತಾಡುವ ಸವಿತಾ ಅವರ ಕವನಗಳಲ್ಲಿ ತಾಯ್ತನ, ಧಾರಣಶಕ್ತಿ, ವಾತ್ಸಲ್ಯ, ಪ್ರಶ್ನೆ ಎಲ್ಲವೂ ಇವೆ. ವ್ಯವಸ್ಥೆಯನ್ನು ಇವುಗಳ ಮೂಲಕವೇ ನೋಡುವ ಹಂಬಲವೂ ಇದೆ. ’ಕೊಂಡ ಹಾಯುವಳು’ ಅವರ ಇನ್ನೊಂದು ಮಹತ್ವದ ಕವನ. ಹೆಣ್ಣು ಸುಕೋಮಲೆ, ಚಂಚಲೆ ಮೊದಲಾದ ಪೂರ್ವಕಲ್ಪಿತ ಚಿತ್ರಣಗಳಿಗೆ ಬದಲಾಗಿ ಅ ಗಂಡ, ಮನೆ, ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಸಾಗುವ ಹೆಣ್ಣಿನ ಚಿತ್ರ ಅವಳ ಅದಮ್ಯ ಚೇತನದ ಶಕ್ತಿ ಕೇಂದ್ರವೂ ಆಗುವುದು ಕವಿತೆಯ ಸಾರ್ಥಕ್ಯ.
ಗಂಡ ಕುಡಿಯುವನು
ನಿತ್ಯ ಹೊಡೆಯುವನು
ಮೈ ತುಂಬ ಸಾಲ
ಮನೆ ತುಂಬಾ ಮಕ್ಕಳು
ಹಸಿವು ನೋವು
ಮಿಗಿಲಾಗಿ ಸವತಿಯ ಕಾಟ
ಹರಕೆ ಹೊತ್ತಿಹಳು
ಒಮ್ಮೆ, ಮತ್ತೊಮ್ಮೆ
ಮಗದೊಮ್ಮೆ
ಹಾಯುವಳು ಕೊಂಡ
ನೋಡುವನವಳ ಗಂಡ
ದೂರದಿಂದಲೇ ಮಂಕಾಗಿ.
ಜಾಗತೀಕರಣ, ಷೇರುಪೇಟೆ, ರೈತರ ಸಮಸ್ಯೆ, ಭಯೋತ್ಪಾದನೆ, ಪೌರ ಕಾರ್ಮಿಕ ಹೀಗೆ ಅನೇಕ ಸಂಗತಿಗಳು ಅವರನ್ನು ಕಾಡಿವೆ. ಅದಕ್ಕೊಂದು ಸಾಂತ್ವನದ ದಾರಿ ಹುಡುಕುವ ಕುತೂಹಲವನ್ನು ಕವಿತೆಗಳು ಉಳಿಸಿಕೊಂಡಿವೆ. ಯುದ್ಧ, ಸಾವು ತನ್ನನ್ನು ಕಂಗೆಡಿಸಿದಾಗ ’ಬುದ್ಧ ನನ್ನನ್ನು ಸಂತೈಸುತ್ತಾನೆ’ ಎಂಬ ಭರವಸೆಯಲ್ಲಿ ಕವಯಿತ್ರಿ ಆಶಾಭಾವ ತಾಳುತ್ತಾರೆ. ಸುತ್ತಲಿನ ನಿಸರ್ಗದೊಂದಿಗೆ ಮಾನವ ಅಸ್ಥಿತ್ವವನ್ನು ಗುರುತಿಸುತ್ತಾ ಅತಿ ನಿರೀಕ್ಷೆಗಳಿಲ್ಲದೆ ತನ್ನಷ್ಟಕ್ಕೆ ತಾನು ಕಂಡುಕೊಂಡ ಕಾವ್ಯ ರಿಂಗಣದಲ್ಲಿ ಜೀವ ಮಿಡಿತದ ಸದ್ದನ್ನು ಕೇಳುವ ಮಗುವಿನ ಮುಗ್ಧ ಮನಸ್ಸನ್ನು ಅವರು ಇಂದಿಗೂ ಆತುಕೊಂಡಿದ್ದಾರೆ. ನನ್ನೆಲ್ಲಾ ಪದ್ಯಗಳಲ್ಲಿರುವಂತೆಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ ಇಷ್ಟವಾಗದಿದ್ದರೆ ಬೇಡ. ಕಿಂಚಿತ್ತೂ ಕೋಪವಿಲ್ಲ. ಸಾಹಿತಿ ಡಿ.ಎಸ್.ನಾಗಭೂಷಣ ಇವರ ಪತಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ಸವಿತಾ ನಾಗಭೂಷಣ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.