ಸಮರ್ಥ ಸದ್ಗುರು (ಸ.ಸ) ಶ್ರೀ ಗಣಪತರಾವ ಮಹಾರಾಜರು ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದ ಆಧ್ಯಾತ್ಮ ಗುರುಗಳಾಗಿದ್ದರು.
ಮಹಾರಾಜರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದವರು.
ಸ.ಸ ಗಣಪತರಾವ ಮಹಾರಾಜರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದಲ್ಲಿ ಶಾಂತಿ ಕುಟೀರ ಆಶ್ರಮವನ್ನು ಸ್ಥಾಪಿಸಿದ್ದಾರೆ.
ಶ್ರೀ ಗಣಪತರಾವ ಮಹಾರಾಜರು ಶ್ರೀ ದತ್ತಾತ್ರೆಯ ಭಕ್ತರಾದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದ ಸುಸಂಸ್ಕತ ಮನೆತನದ ಶಿವರಾಮ ಪಂತ ಹಾಗೂ ಸರಸ್ವತಿ ದಂಪತಿಯ ಐದು ಜನ ಪುತ್ರರಲ್ಲಿ ಮೂರನೇಯವರಾಗಿ 1909 ರಲ್ಲಿ ಭಾದ್ರಪದ ಶುದ್ದ ಚತುರ್ಥಿ(ಗಣೇಶ ಚತುರ್ಥಿ) ಯಂದು ಬೆಳಿಗ್ಗೆ 5 ಗಂಟೆಗೆ ಜನಿಸಿದರು.
ಮೆಟ್ರಿಕ್ವರೆಗೆ ವಿಜಯಪುರದ ಪಿ.ಡಿ.ಜೆ ಹೈಸ್ಕೂಲದಲ್ಲಿ ಓದಿದ ಇವರು ಆಧ್ಯಾತ್ಮಿಕ ಸಾಧನೆ ಮಾಡುತ್ತಲೇ ವಿದ್ಯಾಭ್ಯಾಸವನ್ನು ಮುಂದುವರೆಸಿ ಸಾಂಗ್ಲಿಯ ವೆಲ್ಲಿಂಗಟನ್ ಕಾಲೇಜ್, ಧಾರವಾಡದ ಕರ್ನಾಟಕ ಕಾಲೇಜ್ ಮತ್ತು 1932ರಲ್ಲಿ ಪುಣೆಯ ಫಗ್ರ್ಯೂಸನ್ ಕಾಲೇಜಿನಿಂದ ಬಿ.ಎಸ್.ಸಿ. ಪದವಿಯನ್ನು ಪಡೆದರು.
ಬಾಲ್ಯದಲ್ಲೇ ಆಧ್ಯಾತ್ಮದ ಕಡೆಗೆ ಒಲವುಳ್ಳವರಾಗಿದ್ದ ಗಣಪತರಾವ್ ಮಹಾರಾಜರು ಚಿಕ್ಕ ದೇವರ ದರ್ಶನದ ಹಂಬಲವುಳ್ಳವರಾಗಿ ನಿತ್ಯವೂ ವಿಜಯಪುರದ ಶ್ರೀ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದರು. ತಮ್ಮ 13ನೇ ವಯಸ್ಸಿನಲ್ಲೇ ಗುರುಗಳಾದ ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪ್ರವಚನಗಳಿಂದ ಪ್ರಭಾವಿತರಾಗಿ ಅವರಿಂದ ಶಿಷ್ಯತ್ವ ಸ್ವೀಕರಿಸಿದರು. ಮನೆಯ ಬಾಗಿಲಿಗೆ ಬಂದ ನೌಕರಿಯನ್ನು ನಿರಾಕರಿಸಿ ಕನ್ನೂರಿನ ತಮ್ಮ ಸ್ವಂತ ಹೊಲದಲ್ಲಿಯೇ ಬಂದು ನೆಲೆಸಿ ಆಧ್ಯಾತ್ಮ ಸಾಧನೆಯನ್ನು ಮುಂದುವರಿಸಿದರು. ಅಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತ ಮೊದಲಿದ್ದ ಪುಟ್ಟ ಮನೆ ಬದಲಾಗುತ್ತ ಹೋಗಿ ಭಕ್ತರ ಆಶ್ರಮವಾಯಿತು. ಈಗ ಸುಮಾರು 2000 ಭಕ್ತರು ಕೂಡುವಂತಹ ದೊಡ್ಡ ಪ್ರವಚನ ಮಂದಿರ, ವಿಶಾಲ ಭೋಜನ ಶಾಲೆ, ಉಳಿದುಕೊಳ್ಳಲು ನೂರಕ್ಕೂ ಹೆಚ್ಚು ಕೋಣೆಗಳನ್ನು ಆಶ್ರಮವು ಹೊಂದಿದೆ.
ತಮ್ಮ ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರು 1936 ರಲ್ಲಿ ದೇಹತ್ಯಾಗ ಮಾಡಿದ ನಂತರ ಸದ್ಗುರುಗಳ ಕೃಪಾರ್ಶಿವಾದದಿಂದ 1942 ರಲ್ಲಿ ಗುರುಸ್ಥಾನದಲ್ಲಿ ಭೂಷಿತರಾಗಿ 1962 ರವರೆಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿಯೇ ಇದ್ದರು. ಶ್ರೀ ಸದ್ಗುರು ಗಣಪತರಾವ ಮಹಾರಾಜರ ಅಮೃತವಾಣಿಯು ಜನರಿಗೆ ಪ್ರಿಯವಾಗಿ ಕರ್ನಾಟಕ, ಮಹಾರಾಷ್ಟ್ರ ಭಾಗದ ಸಹಸ್ರ ಸಹಸ್ರ ಜನರು ಅವರ ಶಿಷ್ಯರಾದರು. ಶಿಷ್ಯರ ಸಾಧನಕ್ಕೆ ಪುಷ್ಠಿಯಾಗುವದಕ್ಕಾಗಿ ಸ್ವಾನುಭವದ ಗ್ರಂಥಗಳನ್ನು ಕನ್ನಡ, ಮರಾಠಿಯಲ್ಲಿ ರಚಿಸಿದರು. ಕೆಲವು ಗ್ರಂಥಗಳು ಹಿಂದಿ, ಇಂಗ್ಲೀಷ, ಭಾಷೆಗೆ ತುರ್ಜುಮೆಯಾದ್ದರಿಂದ ದೇಶ ವಿದೇಶದವರು ಸಹ ಕನ್ನೂರ ಆಶ್ರಮಕ್ಕೆ ಬಂದು ಹೋಗುತ್ತಿದ್ದರು. ಆಜನ್ಮ ಬ್ರಹ್ಮಚಾರಿಗಳಾಗಿ, ಸ್ವಾನುಭವಿಗಳಾಗಿ ಶಿಷ್ಯರ ಕಲ್ಯಾಣ ಬಯಸುತ್ತ ಭಕ್ತರ ಪಾಲಿಗೆ ನಡೆದಾಡುವ ದೇವರೆನಿಸಿದರು. ಆದ್ದರಿಂದ ಇಂದ್ರಿಯ ಸುಖಕ್ಕೆ ಅತಿಯಾಗಿ ಬಲಿಯಾಗದೇ, ಪ್ರಾರಬ್ಧಾನುಕಾರವಾಗಿ ಬಂದ ವಿಷಯಗಳನ್ನು ಆನಂದದಿಂದ ಸ್ವೀಕರಿಸಬೇಕು ಮತ್ತು ಪ್ರಯತ್ನದಿಂದ ಪರಮಾರ್ಥ ಸಾಧಿಸಬೇಕು. ನಾವು ಎಲ್ಲಿಯೇ ಇದ್ದರೂ ಮತ್ತು ಎಂಥದ್ದೇ ಪರಿಸ್ಥಿತಿಯಲ್ಲಿದ್ದರೂ ಆನಂದದಿಂದಿರುವುದನ್ನು ಮಾಡಿಕೊಳ್ಳಬೇಕು
ಆಶ್ರಮದಲ್ಲಿ ಪ್ರತಿ ವರ್ಷ ಗಣೇಶ ಚೌತಿ, ದತ್ತ ಜಯಂತಿ ಹಾಗೂ ಯುಗಾದಿ ಸಪ್ತಾಹಗಳು ನಡೆಯುತ್ತವೆ. ಗಣೇಶ ಚತುರ್ಥಿಯಂದು ಜನಿಸಿದ ಸದ್ಗುರುಗಳ ಜನ್ಮೋತ್ಸವವನ್ನು ಜ್ಞಾನಸತ್ರದ ರೂಪದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಯಾವದೇ ಭೇದಭಾವವಿಲ್ಲದೇ ಎಲ್ಲ ವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ, ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂತರೆಲ್ಲರಿಗೂ ಬಹು ಆತ್ಮೀಯರಾಗಿದ್ದ ಶ್ರೀ ಗಣಪತರಾವ್ ಮಹಾರಾಜರು ಅಗಷ್ಟ್ 18, 2004ರಲ್ಲಿ ಭಾದ್ರಪದ ಶಷ್ಠಿಯಂದು ತಮ್ಮ ಇಚ್ಚೆಯಂತೆ ದೇಹತ್ಯಾಗ ಮಾಡಿದರು.
ನೀವೆಲ್ಲ ಮೂಲತಃ ಆನಂದಸ್ವರೂಪರೇ ಇದ್ದೀರಿ, ಆನಂದದಿಂದ ಬಾಳಿ ಬದುಕಿರಿ, ಎಲ್ಲರ ಮೇಲೆ ಪ್ರೇಮ ಮಾಡಿರಿ, ಆನಂದದ ಮೂಲಾಧಾರದಿಂದಲೇ ಸಹಜಸ್ಥಿತಿ ಹೊಂದಿರಿ ಎಂದು ಸಂದೇಶ ನೀಡಿದವರು ನಡೆದಾಡುವ ದೇವರೆಂದೆನಿಸಿದ್ದ ವಿಜಯಪುರ ತಾಲಲ್ಲೂಕಿನ ಸುಕ್ಷೇತ್ರ ಕನ್ನೂರ ಶಾಂತಿಕುಟೀರ ಆಶ್ರಮದ ಸ್ಥಾಪಕರಾದ ಸಮರ್ಥ ಸದ್ಗುರು ಶ್ರೀ ಗಣಪತರಾವ ಮಹಾರಾಜರು.
This article uses material from the Wikipedia ಕನ್ನಡ article ಶಾಂತಿ ಕುಟೀರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.