ಶಂಕರ ಮೊಕಾಶಿ ಪುಣೇಕರ (ಮೇ ೮, ೧೯೨೮) ನಮ್ಮ ನಾಡಿನ ಮಹಾನ್ ವಿದ್ವಾಂಸರಾಗಿ, ಬರಹಗಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.
ಶಂಕರ ಮೊಕಾಶಿ ಪುಣೇಕರ | |
---|---|
ಜನನ | ಮೇ ೮, ೧೯೨೮ ಧಾರವಾಡ |
ಮರಣ | ಆಗಸ್ಟ್ ೧೧, ೨೦೦೪ |
ವೃತ್ತಿ | ಪ್ರಾಧ್ಯಾಪಕರು ಮತ್ತು ಸಾಹಿತಿಗಳು |
ವಿಷಯ | ಕನ್ನಡ ಸಾಹಿತ್ಯ |
ಶಂಕರ ಮೊಕಾಶಿ ಪುಣೇಕರ್ ಅವರು ಕನ್ನಡದ ಅತ್ಯಂತ ಸ್ವೋಪಜ್ಞ ಕವಿ-ಕಾದಂಬರಿಕಾರ-ವಿಮರ್ಶಕ. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಮಹಾನ್ ವಿದ್ವಾಂಸರಾದ ಶಂಕರ ಮೊಕಾಶಿ ಪುಣೇಕರರು ಮೇ ೮, ೧೯೨೮ರಂದು ಧಾರವಾಡದಲ್ಲಿ ಹುಟ್ಟಿ ಅಲ್ಲಿಯೇ ತಮ್ಮ ಶಿಕ್ಷಣವನ್ನೆಲ್ಲ ಮುಗಿಸಿದರು. ಬಿ.ಎ ಪಡೆದ ನಂತರ ನಾಲ್ಕು ವರ್ಷಗಳ ಕಾಲ ವಿಜಯಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರದಲ್ಲಿ ಮತ್ತೊಮ್ಮೆ ಓದಿಗೆ ಹಿಂದಿರುಗಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪದವಿ ಪಡೆದು ಅಲ್ಲಿಯೇ ಪಿ.ಎಚ್.ಡಿ ಪದವಿಯನ್ನು ಗಳಿಸಿದರು. ಪಿ.ಎಚ್.ಡಿ.ಗಾಗಿ ಯೇಟ್ಸ್ ಕವಿಯನ್ನು ಕುರಿತು ಬರೆದ ಪ್ರಬಂಧ, ಮೊಕಾಶಿಯವರನ್ನು ಒಬ್ಬ ಗಮನಾರ್ಹ ಯೇಟ್ಸ್ ಪಂಡಿತರನ್ನಾಗಿ ಮಾಡಿತು. ವಿದ್ವಾಂಸರು ಅದನ್ನು ಒಂದು ಅಪರೂಪದ ಪ್ರಬಂಧ ಎಂದು ಕೊಂಡಾಡಿದರು.
ಶಂಕರ ಮೊಕಾಶಿ ಪುಣೇಕರರು ಬೆಳಗಾವಿಯ ಆರ್.ಪಿ.ಡಿ ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿನ ಕೆ.ಸಿ. ಕಾಲೇಜುಗಳಲ್ಲಿ ಅಧ್ಯಾಪನ ನಡೆಸಿದರು. ಐ ಐ ಟಿ ಯಲ್ಲಿ ಹತ್ತು ವರ್ಷ ದುಡಿದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ರೀಡರ್ ಎಂದು ಕೆಲಸ ಮಾಡಿದರು. ಈ ಸಮಯದಲ್ಲಿ ಮಲ್ಲಿಕಾರ್ಜುನ ಮನಸೂರರಲ್ಲಿ ಸಂಗೀತ ಶಿಷ್ಯತ್ವವನ್ನು ಮಾಡಿದರು. ತಮ್ಮ ಸೇವಾವಧಿಯ ಕೊನೆಯ ಘಟ್ಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಆ ಹುದ್ಧೆಯಿಂದ 1988ರಲ್ಲಿ ನಿವೃತ್ತಿ ಹೊಂದಿದರು. ಡಾ. ಮೊಕಾಶಿಯವರು ಒಂದು ವರ್ಷ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಪುಣೇಕರ ಅವರು ಉನ್ನತ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೆ ಚೋಮ್ ಸ್ಕಿ – ಸ್ಕಿನ್ನರ್ ಪದ್ಧತಿಯನ್ನು ಕಂಡು ಹಿಡಿದಿದ್ದಾರೆ.
‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಸಂಗೀತ ವಿಮರ್ಶೆಯನ್ನು ಹಲವಾರು ವರ್ಷ ಮಾಡಿದ ಪುಣೇಕರರು ಕೆಲವು ಹೊಸ ರಾಗಗಳನ್ನೂ ಕಂಡುಹಿಡಿದಿದ್ದಾರೆ.
ಪುಣೇಕರ ಅವರು 1984ರಲ್ಲಿ ಯುಗೋಸ್ಲಾವಿಯಾದಲ್ಲಿ ನಡೆದ ವಿಶ್ವ ಕಾವ್ಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಇಂಗ್ಲೆಂಡ್, ಬಲ್ಗೇರಿಯಾ ಮತ್ತು ಹಂಗೇರಿ ದೇಶಗಳಲ್ಲಿಯೂ ಪುಣೇಕರ ಅವರು ಪ್ರವಾಸ ಮಾಡಿ, ಸಂಶೋಧನ ಕಾರ್ಯ ನಡೆಸಿದರು. ಈ ಸಂಶೋಧನೆ ಯಲ್ಲಿ ಅವರ ಮುಖ್ಯ ಉದ್ದೇಶ ಭಾರತದ ವೈದಿಕ ಮತ್ತು ಮಹಾಕಾವ್ಯ ಕಾಲದಲ್ಲಿನ ಸಂಸ್ಕೃತಿಗೂ, ಪಾಶ್ಚಾತ್ಯ ದೇಶಗಳಿಗೂ ಇದ್ದ ಸಂಬಂಧವನ್ನು ಹುಡುಕಿ ತೆಗೆಯುವುದು. ಪುಣೇಕರರು ಕೇಂದ್ರ ಸಾಹಿತ್ಯ ಆಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಮತ್ತು ಜ್ಞಾನಪೀಠ ದ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
"ಅವಧೇಶ್ವರಿ" (೧೯೮೭)
ಈ ಮಹಾನ್ ವಿದ್ವಾಂಸರು ಆಗಸ್ಟ್ ೧೧, ೨೦೦೪ರಂದು ಈ ಲೋಕವನ್ನಗಲಿದರು. ಈ ಮಹಾನ್ ವಿದ್ವಾಂಸರ ಚೇತನಕ್ಕೆ ನಮ್ಮ ಅನಂತ ಪ್ರಣಾಮಗಳು.
This article uses material from the Wikipedia ಕನ್ನಡ article ಶಂಕರ ಮೊಕಾಶಿ ಪುಣೇಕರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.