ಇವುಗಳನ್ನು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದ್ದು, ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಧರ್ಮಗ್ರಂಥಗಳಾಗಿವೆ. ವೇದಗಳು ಅಪೌರುಷೇಯವಾಗಿವೆ. ಅಂದರೆ ಇವುಗಳನ್ನು ಮಾನವರು ರಚಿಸಿದ್ದಲ್ಲ ಎನ್ನಲಾಗುತ್ತದೆ.
ಮೇಲೆ ತಿಳಿಸಿದಂತೆ ವೇದಗಳು ನಾಲ್ಕು. ಋಕ್, ಯಜುಸ್, ಸಾಮ, ಅಥರ್ವ. ವೇದವೆಂದರೆ ಜ್ಞಾನ -ತಿಳುವಳಿಕೆ ಎಂದು ಅರ್ಥ. ಋಗ್ವೇದವು ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ವಾಙ್ಮಯ(ಸಾಹಿತ್ಯ) ಎನಿಸಿದೆ. ಋಕ್, ಯಜುಸ್, ಸಾಮವೇದ ಇವು ಮೂರು ವೇದಗಳಿಗೆ ತ್ರಯೀ ಎಂದು ಹೆಸರು ಅವಕ್ಕೆ ಹೆಚ್ಚು ಮಹತ್ವ. ಋಗ್ವೇದದಲ್ಲಿ ದೇವತೆಗಳ ಸ್ತುತಿಗೆ ಎಂದರೆ ಋಕ್ಗಳಿಗೆ ಪ್ರಾಧಾನ್ಯ ಪ್ರಾಮುಖ್ಯತೆ. ಯಜುರ್ವೇದದಲ್ಲಿ ಯಜ್ಞಕ್ಕೆ ಸಂಬಂಧಪಟ್ಟ ಮಂತ್ರಗಳಿವೆ. ಅದರಲ್ಲಿ ಬಹಳಷ್ಟು ಋಗ್ವೇದ ಮಂತ್ರಗಳೇ ಇವೆ. ಸಾಮವೇದ ಮಂತ್ರಗಳು ಗಾನಕ್ಕೆ -ಯಜ್ಞದಲ್ಲಿ ಅಥವಾ ದೇವತೆಗಳ ಪ್ರೀತಿಗಾಗಿ ಹಾಡುವವು. ಅಥರ್ವದಲ್ಲಿ ಯಜ್ಞ, ಮದ್ದು, ಮಾಟ, ಇವುಗಳಿಗೆ ಸಂಬಂಧಪಟ್ಟ ಮಂತ್ರಗಳಿವೆ. ವೇದ ಸಂಹಿತೆಯನ್ನು ಅಷ್ಟಕ, ಅದ್ಯಾಯ, ವರ್ಗ ಎಂದು ವಿಭಾಗಿಸಿದ್ದಾರೆ. ಇನ್ನೊಂದು ಬಗೆಯ ವಿಭಾಗ, ಮಂಡಲ, ಅನುವಾಕ, ಸೂಕ್ತ, ಮಂತ್ರ, -ಈ ಎರಡನೆಯ ಬಗೆಯ ವಿಭಾಗ ಹೆಚ್ಚು ಪ್ರಚಲಿತವಾಗಿದೆ. ಅನವಾಕಗಳ ೮೫, ಅನುವಾಮದಲ್ಲಿ ಸೂಕ್ತಗಳು ೧೦೨೮, ಅದರಲ್ಲಿ ಮಂತ್ರಗಳು ೧೦೫೫೦. ಯಜ್ಞದಲ್ಲಿ ಋಗ್ವೇದವು ಹೋತೃವಿಗೆ ಸಂಬಂಧಿಸಿದೆ, ಯಜುರ್ವೇದವು -ಅಧ್ವರ್ಯುವಿಗೆ, ಸಾಮವೇದವು ಉದ್ಗಾತೃವಿಗೆ ಸಂಬಂಧಿಸಿವೆ. ಯಜ್ಞದಲ್ಲಿ ಬ್ರಹ್ಮ ಸ್ಥಾನದಲ್ಲಿರುವವನಿಗೆ ಅಥರ್ವವೇದ; ಅವನು ಎಲ್ಲರ ಮೇಲ್ವಿಚಾರಕ.
ಶಾಖೆಗಳು
ವೇದಗಳಲ್ಲಿ ಹಿಂದೆ ಅನಂತ ಶಾಖೆಗಳಿದ್ದು ಈಗ ೧೦-೧೨ ಶಾಖೆಗಳಿವೆ. ಪ್ರತಿಯೊಂದು ವೇದಕ್ಕೂ ನಾಲ್ಕು ಸ್ಕಂದಗಳಿವೆ (ಭಾಗ). ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು. ಸಂಹಿತೆಗಳು ಮಂತ್ರ ಭಾಗ ಬ್ರಾಹ್ಮಣಗಳು ಯಜ್ಞ ಕ್ರಮ ಹೇಳುವವು, ಆರಣ್ಯಕಗಳಲ್ಲಿ ಯಾಗ ವಿಧಾನ, ಅಧ್ಯಾತ್ಮಿಕ ವಿಚಾರ, ಉಪನಿಷತ್ (ಬ್ರಹ್ಮ -ಮೂಲ ಚೈತನ್ಯ ವಿಚಾರ) ಚರ್ಚೆಗೆ ಮುಖ್ಯವಾದುದು. ಮಂತ್ರಗಳು ಪ್ರಾಚೀನವಾದವು ಉಪನಿಷತ್ ಅತ್ಯಂತ ಅನಂತರದ್ದು, ವೇದದ ಮೊದಲ ಮೂರುಭಾಗಗಳಿಗೆ ಕರ್ಮಕಾಂಡವೆಂತಲೂ, ಉಪನಿಷತ್ತಿಗೆ ಜ್ಞಾನ ಕಾಂಡವೆಂತಲೂ ಹೆಸರಿದೆ. ವೇದಗಳನ್ನು ಅಪೌರುಷೇಯವೆಂದು ಹೇಳುತ್ತಾರೆ. ಎಂದರೆ "ಮನುಷ್ಯರಿಂದ ರಚಿಲ್ಪಟ್ಟುದಲ್ಲ, ದೇವರಿಂದಲೇ ಬಂದಿದ್ದು" ಋಷಿಗಳ ಮನಸ್ಸಿಗೆ ತಾನಾಗಿ ಗೋಚರಿಸಿದ್ದು. ಅವು ಬಾಯಿಯಿಂದ ಬಾಯಿಗೆ ಬಂದದ್ದರಿಂದ ಶ್ರುತಿ (ಕೇಳಿದ್ದು) ಎಂಬ ಹೆಸರಿದೆ .
ವೈದಿಕ ದೇವತೆಗಳಲ್ಲಿ ಪ್ರಮುಖರು: ಇಂದ್ರ, ಅಗ್ನಿ, ವರುಣ, ವಾಯು, ಯಮ, ವಿಷ್ಣು, ಮಿತ್ರ, ರುದ್ರ, ಬ್ರಹಸ್ಪತಿ, ಸರಸ್ವತಿ, ಪೃಥ್ವೀ, ರಾತ್ರೀ, ವಾಕ್, ಇಳಾ, ಸಂಧ್ಯಾ ಇತ್ಯಾದಿ ದೇವತೆಗಳಿದ್ದಾರೆ. ಆದಿತ್ಯರು ೧೨, ರುದ್ರರು ೧೧, ಮಾರುತಗಳು ಏಳು, ಹೀಗೆ ದೇವತೆಗಳ ಗುಂಪುಗಳು ಇವೆ. ವಿಶ್ವೇದೇವತೆಗಳೆಂದರೆ ಎಲ್ಲಾದೇವತೆಗಳು ಸೇರಿದ ಗುಂಪು.
ದೇವತೆಗಳಲ್ಲಿ ವಿಭಾಗಗಳು
ದೇವತೆಗಳಲ್ಲಿ ಮೂರು ಭಾಗಗಳು :
ಪೃಥ್ವಿಸ್ಥಾನದವರು: ಅಗ್ನಿ, ಪೃಥ್ವೀ, ಸೋಮ, ನದಿ, ಬೃಹಸ್ಪತಿ, ಇತ್ಯಾದಿ.
ಅಂತರಿಕ್ಷ ಸ್ಥಾನದವರು: ವಾಯು, ಇಂದ್ರ, ರುದ್ರ, ಮಾರುತ, ಆಪ, ಇತ್ಯಾದಿ.
ದ್ಯುಸ್ಥಾನದವರು: ವರುಣ, ಮಿತ್ರ, ಸೂರ್ಯ, ಸವಿತಾ, ರಾತ್ರಿ, ಅದಿತಿ, ವಿಷ್ಣು, ಇತ್ಯಾದಿ.
ಒಟ್ಟು - ಮೂವತ್ಮೂರು (೧೧×೩=೩೩) ದೇವತೆಗಳು. ಇವರೇ ಮೂವತ್ಮೂರು ಕೋಟಿ ಎನಿಸಲ್ಪಟ್ಟಿದ್ದಾರೆ.
ಅನೇಕ ದೇವತೆಗಳಿದ್ದರೂ ಕೆಲವೆಡೆ ದೇವರೊಬ್ಬನೇ ಎಂಬ ವಿಚಾರವೂ ಇದೆ. ಏಕಂ ಸತ್ ವಿಪ್ರಾಃ ಬಹುದಾ ವದಂತಿ;
ಋಗ್ವೇದದಲ್ಲಿ - ಸತ್ತವರು ಪಿತೃಲೋಕಕ್ಕೆ ಹೋಗಿ ಅಲ್ಲಿರುವ -ಅಲ್ಲಿ ವಾಸಿಸುವ ಕಲ್ಪನೆ ಇದ್ದಂತೆ ಕಾಣುತ್ತದೆ. ಪುನರ್ಜನ್ಮ ನಂತರದ ಕಲ್ಪನೆ ಎಂಬ ಅಭಿಪ್ರಾಯವಿದೆ. ಹಾಗಾಗಿ ದೇವತೆಗಳಲ್ಲದೆ ಪಿತೃಗಳದ್ದೂ ಒಂದು ಗುಂಪು ಇದೆ.
ಮೊಟ್ಟಮೊದಲಿಗೆ ಪುರುಷಸೂಕ್ತವು ಪ್ರಪಂಚದ ವಿಕಾಸಕ್ಕೆ ಪುರುಷನೇ (ಬ್ರಹ್ಮ-ಮೂಲ ಚೈತನ್ಯ) ಕಾರಣವೆನ್ನುತ್ತದೆ.
ವೇದಗಳು ಅತ್ಯಂತ ಪ್ರಾಚೀನವಾಗಿದ್ದು (೫೦೦೦ವರ್ಷಕ್ಕಿಂತ ಹಿಂದಿನದು), ಅದರ ಶುದ್ಧರೂಪವನ್ನು ಸ್ವಲ್ಪವೂ ಕೆಡದಂತೆ ಉಳಿಸಿಕೊಂಡು ಬಂದಿದ್ದು ಮಾನವನ ಇತಿಹಾಸಕ್ಕೆ ಒಂದು ಅಪೂರ್ವ ದಾಖಲೆಯಗಿದೆ. ಅದನ್ನು ಯಥಾ ರೂಪದಲ್ಲಿ ಕಾಪಾಡಿ ಕೊಂಡುಬರಲು ಜಟೆ, ಘನ, ಕ್ರಮ ಹೀಗೆ ಹೇಳುವ ಒಂದು ವಿಶಿಷ್ಟ ಪದ್ದತಿ ಕಾರಣವಾಗಿದೆ.
This article uses material from the Wikipedia ಕನ್ನಡ article ವೇದ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.