ಭಾರತದ ಇತಿಹಾಸದಲ್ಲಿ ೧೯ನೇ ಶತಮಾನದಲ್ಲಿ ಆಂಗ್ಲರಿಂದ ನಮ್ಮ ಧರ್ಮ ಸಂಸ್ಕೃತಿ ಆಚರಣೆಗಳು ನಶಿಸಿಹೋಗುವ ಕಾಲದಲ್ಲಿ ಶ್ರೀ ರಾಮಕೃಷ್ಣರ ಅವತಾರವಾಯಿತು.
ಮುಂದೆ ಶ್ರೀ ರಾಮಕೃಷ್ಣರು ಶಾರದಾದೇವಿಯವರು ವಿವೇಕಾನಂದರಂತಹ ಶಿಷ್ಯರಿಗೆ ಗುರು ಹಾಗು ಶ್ರೀ ಮಾತೆಯಾದರು. ಕಲ್ಕತ್ತೆಯ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರಾಗಿದ್ದ ಮಾಸ್ಟರ್ ಮಹಾಶಯ ಅವರು ಶ್ರೀ ರಾಮಕೃಷ್ಣರ ಭಕ್ತರಾಗಿದ್ದರು. ಅವರು ಕಾಲೇಜಿನಲ್ಲಿ ಆಗಾಗ ವಿದ್ಯಾರ್ಥಿಗಳಿಗೆ ಶ್ರೀ ರಾಮಕೃಷ್ಣರ ಬಗ್ಗೆ ಹೇಳುತ್ತಿದ್ದರು. ಅದರಿಂದ ಪ್ರಭಾವಿತರಾಗಿ ಅನೇಕ ಯುವಕರು ರಜೆ ದಿನಗಳಲ್ಲಿ ಶ್ರೀ ರಾಮಕೃಷ್ಣರ ಬಳಿಗೆ ಬಂದು ಅವರ ಬೋಧನೆಗಳನ್ನು ಕೇಳುತ್ತಿದ್ದರು. ಆ ರೀತಿಯಲ್ಲಿ ನರೇಂದ್ರ ಮತ್ತು ಇತರರು ಅವರ ಶಿಷ್ಯರಾದರು. ಮಾಸ್ಟರ್ ಮಹಾಶಯರೇ ರಾಮಕೃಷ್ಣರ ಬೋಧನೆಗಳನ್ನೆಲ್ಲ ಬರೆದಿಟ್ಟುಕೊಂಡಿದ್ದು ಮುಂದೆ ಅವುಗಳನೆಲ್ಲಾ ಪುಸ್ತಕ ರೂಪದಲ್ಲಿ ರಾಮಕೃಷ್ಣರ ವಚನ ವೇದ ಎಂಬ ಹೆಸರಿನಿಂದ ಪ್ರಕಟಿಸಲಾಗಿದೆ. ಇದು ಎಂದೆಂದಿಗೂ ಅನರ್ಗ್ಯ ರತ್ನ ಅಂದರೆ ಇದು ಅನೇಕರ ಜೀವನವನ್ನೇ ಬದಲಾಯಿಸಿ ಗುರಿಯ ಕಡೆಗೆ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ಸ್ವಾಮಿ ವಿವೇಕಾನಂದರು ಮತ್ತು ಇತರ ಅಂದಿನ ಯುವಕರು ಶ್ರೀ ರಾಮಕೃಷ್ಣರ ಬೋಧನೆಗಳನ್ನು ಪ್ರಪಂಚಕ್ಕೆ ಸಾರಲು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಗಳನ್ನು ಕಟ್ಟಿದರು. ವಿವೇಕಾನಂದರು "ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯಚ" ಎಂಬ ಧ್ಯೇಯವನ್ನು ಘೋಷಿಸಿದರು. ವಿವೇಕಾನಂದರ ಮಹೋತ ಸಾಧನೆಗಳಲ್ಲಿ ಹಿಂದೂ ಧರ್ಮದ ಪುನರುತ್ತಾನ ಮತ್ತು ನವೀಕರಣ ಒಂದು. ಇವರು ಶ್ರೀ ರಾಮಕೃಷ್ಣರ ಬೋಧನೆಗಳಿಂದ ಪ್ರೇರಣೆ ಹೊಂದಿ ಭಾರನಾಗೋರ್ ಒಂದು ಹಳೆಯ ಕಟ್ಟಡದಲ್ಲಿ ರಾಮಕೃಷ್ಣ ಮಠವು ಪ್ರಾರಂಭವಾಯಿತು.
ರಾಮಕೃಷ್ಣ ಮಠವು ಒಂದು ಆಧ್ಯಾತ್ಮಿಕ ಸನ್ಯಾಸಿಗಳ ಸಂಘ. ಇಲ್ಲಿ ಪೂಜೆ ಹಾಗೂ ಇತರ ಕಾರ್ಯಕ್ರಮಗಳು ಹಿಂದು ಸಂಪ್ರದಾಯದಂತೆ ನಡೆಯುತ್ತದೆ. ಶ್ರೀ ರಾಮಕೃಷ್ಣ ಮಠದ ಕೇಂದ್ರ ಸ್ಥಾನವು ಪಶ್ಚಿಮ ಬಂಗಾಳದ ಕಲ್ಕತ್ತಾನಗರದ ಗಂಗಾನದಿ ತೀರದ ದಕ್ಷಿಣೇಶ್ವರದಲ್ಲಿದೆ. ಇದನ್ನು ಬೇಲೂರು ಮಠ ಎಂದು ಕರೆಯುತ್ತಾರೆ. ೨ನೇ ಜನವರಿ ೧೮೯೯ರಲ್ಲಿ ಅಂತಿಮವಾಗಿ ಸನ್ಯಾಸಿ ಸಂಘವನ್ನು ಬೇಲೂರು ಮಠಕ್ಕೆ ಸ್ಥಳಾಂತರಿಸಲಾಯಿತು.
ಸ್ವಾಮಿ ವಿವೇಕಾನಂದರು ಈ ಮಠದ ವಿನ್ಯಾಸವನ್ನು ಶ್ರೀ ರಾಮಕೃಷ್ಣರ ಬೋಧನೆಗಳ ತತ್ವವಿಚಾರವನ್ನು ಬಿಂಬಿಸುವ ನಿಟ್ಟಿನಲ್ಲಿ ಎಲ್ಲ ಧರ್ಮಗಳ ಪವಿತ್ರ ದೇವಸ್ಥಾನಗಳ ವಿನ್ಯಾಸಗಳನ್ನು ಒಟ್ಟು ಗೂಡಿಸಿ ನಿರ್ಮಿಸಿರುತ್ತಾರೆ. ವಿವೇಕಾನಂದರ ಜೊತೆ ಇದ್ದ ರಾಮಕೃಷ್ಣರ ನೇರ ಸನ್ಯಾಸಿ ಶಿಷ್ಯರು- ರಾಖಾಲ್- ಬ್ರಹ್ಮಾನಂದ
, ಯೋಗಿನ್- ಯೋಗಾನಂದ,ಬಾಬುರಾಮ- ಪ್ರೇಮಾನಂದ
, ನಿರಂಜನ- ನಿರಂಜನಾನಂದ, ಶಶಿ- ರಾಮಕೃಷ್ಣಾನಂದ
, ಶರತ್- ಶಾರದಾನಂದ
, ಲಾಟು- ಅದ್ಭುತಾನಂದ, ಹರಿ- ತುರಿಯಾನಂದ,ಶಾರದ- ತ್ರಿಗುಣಾತೀತಾನಂದ, ಗೋಪಾಲದಾದ- ಅದ್ವೈತಾನಂದ, ತಾರಕ- ಶಿವಾನಂದ,ಕಾಳಿ- ಅಭೇದಾನಂದ
, ಗಂಗಾಧರ- ಅಖಂಡಾನಂದ,ಹರಿಪ್ರಸನ್ನ- ವಿಜ್ಙಾನಾನಂದ.
ಸನ್ಯಾಸಿಗಳೆಂದರೆ ಗುಹೆಯಲ್ಲಿದ್ದು ಬರೀ ತಪಸ್ಸು, ಧ್ಯಾನ ಮಾಡುವುದಲ್ಲ, ಸಮಾಜದ ಜೊತೆ ಇದ್ದು ಸಮಾಜದ ಉದ್ಧಾರ ಮಾಡುವುದೇ ಒಂದು ನಿಜವಾದ ಧರ್ಮ ಎಂಬುದನ್ನು ತೋರಿಸಿದವರು ಸ್ವಾಮಿ ವಿವೇಕಾನಂದ. ಇವರು ಧರ್ಮವನ್ನು ಗುಹೆಗಳಿಂದ ಪ್ರಪಂಚದ ಉದ್ದ ಅಗಲಕ್ಕೂ ಸಾರಿದ ವೇದಾಂತ ಕೇಸರಿ. ಶ್ರೀ ರಾಮಕೃಷ್ಣ ಮಠದಲ್ಲಿ ಸನ್ಯಾಸ ದೀಕ್ಷೆ ನೀಡುವ ಮೊದಲು ಬ್ರಹ್ಮಾಚಾರಿಗಳಾಗಿ ಒಂಬತ್ತು ವರ್ಷ ಸುಧೀರ್ಘ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ಶ್ರೀ ರಾಮಕೃಷ್ಣರ ಬೋದನೆಗಳನ್ನು ಮತ್ತು ವಿವೇಕಾನಂದರ, ಶಾರದಾದೇವಿಯವರ ಹಾಗೂ ಇತರ ಮಹಾನ್ ಶಿಷ್ಯರ ಬೋಧನೆಗಳನ್ನು ತಿಳಿಸಿಕೊಡಲಾಗುತ್ತದೆ. ಇದರ ಮೂಲಕ ಅವರು ಮುಂದೆ ಪ್ರಪಂಚದ ವಿವಿಧ ಕಡೆಗಳಲ್ಲಿ ಶ್ರೀ ರಾಮಕೃಷ್ಣ ಮಠದ ಬೋಧನೆಗಳನ್ನು ಪ್ರಚಾರ ಮಾಡುವುದು ಹಾಗೂ ಅಲ್ಲಿ ಬರುವ ಭಕ್ತರಿಗೆ ಆಧ್ಯಾತ್ಮಿಕ ಸಾಧನೆಯನ್ನು ನೀಡುವುದು. ರಾಮಕೃಷ್ಣ ಮಠವು ಆಧ್ಯಾತ್ಮಿಕ ಕೇಂದ್ರವಾಗಿ ಹಾಗೂ ರಾಮಕೃಷ್ಣ ಮಿಷನ್ ಮೂಲಕ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಬಹಳ ಹಿಂದುಳಿದ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು ಅಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ, ಉತ್ತಮ ಜೀವನ ನೀಡಲು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಆರೋಗ್ಯ, ಆಹಾರ ಇತರ ಅವಶ್ಯಕತೆಗಳನ್ನು ಪೂರೈಸುವ ಕಾರ್ಯಗಳನ್ನು ಕೈಗೊಳ್ಳುತ್ತದೆ.
ಶ್ರೀ ರಾಮಕೃಷ್ಣ ಪರಮಹಂಸರು ವೇದಗಳ ಉಪನಿಷತ್ತುಗಳ ಹಾಗೂ ಸ್ಮ್ರುತಿ, ಪುರಾಣ, ಭಗವದ್ಗೀತೆಯಿಂದ ಯೋಗ ಸಾಧನೆಯನ್ನು ಜನರಿಗೆ ಬಹಳ ಸುಲಭರೀತಿಯಲ್ಲಿ ಮಾಡಿ ತೋರಿಸಿದರು. ಅವರು ಎಲ್ಲ ಧರ್ಮಗಳ ಸಾಧನೆಯನ್ನು ಮಾಡಿ ಅವುಗಳಲ್ಲಿನ ಸಾರವು ಒಂದೇ ಎಂದು ಪ್ರಪಂಚಕ್ಕೆ ನಿರೂಪಿಸಿದರು. ಹಿಂದೂ ಶಾಸ್ತ್ರದ ಪ್ರಕಾರ 'ದೇವನೊಬ್ಬ ನಾಮ ಹಲವು' ಎಂಬುದನ್ನು( ಏಕಂ ತತ್ ವಿಪ್ರಾ ಬಹುದಾ ವದಂತಿ- ಸತ್ಯ ಒಂದೇ ಅದನ್ನು ಬುದ್ಧಿವಂತರ ಅನೇಕ ಹೆಸರುಗಳಿಂದ ಕರೆಯುತ್ತಾರೆ.) ಪ್ರಪಂಚಕ್ಕೆ ಸಾರಿದರು. ಅವರು ಸಣ್ಣ- ಸಣ್ಣ ಕತೆಗಳ ಮೂಲಕ ಅತ್ಯಂತ ಕ್ಲಿಷ್ಠವಾದ ತತ್ವಗಳನ್ನು ಸುಲಭದ ರೀತಿಯಲ್ಲಿ ಬೋಧಿಸಿರುತ್ತಾರೆ. ಉದಾಹರಣೆಗೆ ನೀರನ್ನು ನೀಳ್ಲು, ವಾಟರ್, ಆಕ್ವಾ ಎಂದು ಕರೆದರೂ ಅದು ನೀರೇ ಆಗಿರುತ್ತದೆ. ಅಂದರೆ ಒಂದೇ ವಸ್ತುವನ್ನು ಹಲವು ನಾಮಗಳಿಂದ ಕರೆಯಲಾಗಿದೆ. ಇದೇ ರೀತಿ ಒಂದೇ ಊರಿಗೆ ಅನೇಕ ಧರಿಗಳಿಂದ ಬಂದು ಸೇರಬಹುದು ಅಂದರೆ ದೇವರು ಒಬ್ಬನು ಅವನನ್ನು ಆಯಾ ಧರ್ಮದ ಸಾಧನಾ ರೀತಿಯಂತೆ ಅರಿಯಬಹುದು. ಇದನ್ನು ಶ್ರೀ ರಾಮಕೃಷ್ಣರು " ಜತೋಮತ್ ತತೋಪತ್"- ಎಷ್ಟು ಮತಗಳಿವೆಯೋ ಅಷ್ಟು ಸಾಧನಾ ದಾರಿಗಳಿವೆ ಎಂದು ಬೋಧಿಸಿದರು.
ಪ್ರಪಂಚದಲ್ಲಿ ಧರ್ಮ ಎಂಬುವುದು ಒಂದು ನಿಶ್ಚಿತತೆ ಇಲ್ಲದ ವಿಜ್ಞಾನ. ಏಕೆಂದರೆ ಅದು ಅನುಭವದ ಮೇಲಿನ ವಿಜ್ಞಾನವಲ್ಲ. ಆದಾಗ್ಯೂ ಕೆಲವೇ ಜನರು ಧರ್ಮವನ್ನು ಅನುಭವದಿಂದ ಬೋಧನೆ ಮಾಡುತ್ತಿರುತ್ತಾರೆ ಅವರನ್ನೇ ಯೋಗಿಗಳೆಂದು ಕರೆಯುತ್ತಾರೆ. ಎಲ್ಲರು ಒಂದೇ ವಿಧದಲ್ಲಿ ಒಂದೇ ಸತ್ಯವನ್ನು ಭೋದಿಸುತ್ತಾರೆ ಇದೇ ಧರ್ಮದ ನಿಜವಾದ ವಿಜ್ಞಾನ . ವಿವೇಕಾನಂದರು ಧರ್ಮವನ್ನು "ಮನುಷ್ಯನಲ್ಲಿರುವ ದಿವ್ಯತೆಯನ್ನು ಅಭಿವ್ಯಕ್ತಿಗೊಳಿಸಿವುದು" ಎಂದು ಸಾರಿರುತ್ತಾರೆ.ಧರ್ಮವು ಸತ್ಯದೊಂದಿಗೆ ವ್ಯವಹರಿಸುವುದು. ವಿವೇಕಾನಂದರಿಗೆ ಧರ್ಮವೆಂದರೆ ಆಚರಣೇ ಮಾಡತಕ್ಕದ್ದು ಎಂದು ನಂಬಿದ್ದರು. ಅವರು ಪಾತಂಜಲಿ ಯೋಗಸೂತ್ರಗಳನ್ನು ಹಾಗೂ ಜೀಸಸ್, ಬುದ್ಧ, ಶಂಕರರ ಸಿದ್ಧಾಂತಗಳನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು. ಅವರಿಗೆ ತಮ್ಮ ವೇದಾಂತವೆಂದರೆ ಭಯದಿಂದ ಮುಕ್ತಿ. ಅವರು ಯಾವಾಗಲೂ "ಭಯವೇ ಸಾವು ಭಯವಿಲ್ಲದಿರುವುದೇ ಜೀವನ" ಎಂದು ಬೋಧಿಸುತ್ತಿದ್ದರು. ಅವರ ಮೊಟ್ಟ ಮೊದಲೆನೆಯ ಬೋಧನೆಯೇ "ಎದ್ದೇಳು ಎಚ್ಚರಗೊಳ್ಳು ಗುರಿ ಮುಟ್ಟುವ ತನಕ ನಿಲ್ಲದಿರು" ಇದು ಉಪನಿಷತ್ತಿನ ಉತ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ ನಿಭೋದಶ ಎಂಬುದಾಗಿದೆ. ವಿವೇಕಾನಂದರು ಶಿಕ್ಷಣವು ಒಳ್ಳಯ ನಡತೆ ಶೀಲವನ್ನು ಬೆಳೆಸುವುದಾಗಿರಬೇಕೆಂದು ಒತ್ತಿ ಒತ್ತಿ ಹೇಳುತ್ತಿದ್ದರು. ಇವರು ಧ್ಯಾನಕ್ಕೆ ಬಹಳ ಮಹತ್ವ ನೀಡುತ್ತಿದ್ದರು, ಅವರ ಅದ್ಭುತ ಸಾಧನೆಯೇ ಇದಕ್ಕೆ ಒಂದು ನಿದರ್ಶನ. ಇವರನ್ನು 'ವೇದಾಂತ ಸಿಂಹ' ಎಂದು ಕರೆಯುತ್ತಿದ್ದರು. ಇವರು ಯಾವಾಗಲೂ ಕರ್ಮಯೋಗ, ಜ್ಞಾನ ಯೋಗ, ಭಕ್ತಿಯೋಗ ಮತ್ತು ರಾಜಯೋಗ ಇವುಗಳಲ್ಲಿ ಒಂದರ ಮೂಲಕ ಅಥವಾ ಎಲ್ಲವುಗಳ ಸಮ್ಮಿಲನಗಳಿಂದ ಅರಿಯಬಹುದೆಂದು ಬೋಧಿಸಿದ್ದಾರೆ. ಸ್ವಾಮಿ ವಿವೇಕಾನಂದರ ಎಲ್ಲಾ ಬೋಧನೆಗಳನ್ನು ಹಾಗೂ ಬರವಣಿಗೆಗಳನ್ನು ಒಂಬತ್ತು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಸ್ವಾಮಿ ವಿವೇಕಾನಂದರ ಜೊತೆ ಇದ್ದಂತಹ ಸನ್ಯಾಸಿ ಶಿಷ್ಯರಲ್ಲಿ ಸ್ವಾಮಿ ಬ್ರಹ್ಮಾನಂದ, ಸ್ವಾಮಿ ಅಭೇದಾನಂದ, ಸ್ವಾಮಿ ಶಾರದಾನಂದ, ಸ್ವಾಮಿ ರಾಮಕೃಷ್ಮಾನಂದ, ಸ್ವಾಮಿ ತುರಿಯಾನಂದ, ಸ್ವಾಮಿ ಅದ್ವೈತಾನಂದ, ಸ್ವಾಮಿ ಯೋಗಾನಂದ ಹಾಗೂ ಸ್ವಾಮಿ ಶಿವಾನಂದ ಮುಂತಾದವರು ಸಹ ಬಹಳ ಮೇದಾವಿಗಳಾಗಿದ್ದು ಇಂದಿಗೂ ರಾಮಕೃಷ್ಣ ಮಠದ ಆರಿತಿ ಸ್ತೋತ್ರ ಸ್ವಾಮಿ ಅಭೇದಾನಂದರು ರಚಿಸಿದಾಗಿದ್ದ ಅತ್ಯಂತ ಅರ್ಥಪೂರ್ಣ ಮತ್ತು ಬಹಳ ಉತ್ತಮವಾದ ಸ್ತೋತ್ರವಾಗಿದೆ. ಸ್ವಾಮಿ ಬ್ರಹ್ಮಾನಂದರು ಬರೆದಿರುವ ಬ್ರಹ್ಮಾನಂದ ಸುಧೇ ಎಂಬುದು ಪ್ರತಿಯೊಬ್ಬರ ಜೀವನ ಸಂಗಾತಿ. ಸ್ವಾಮಿತುರಿಯಾನಂದರು ವಿವೇಕಾನಂದರ ನಂತರ ಅಮೇರಿಕಾದಲ್ಲಿ ಸಲ್ಲಿಸಿದ ಸೇವೆ ಉನ್ನತ ಸ್ಥಾನದ್ದಾಗಿದೆ. ಅವರು ವಿದ್ಯಾವಂತರಾಗಿದ್ದು ಅಲ್ಲಿ ನೀಡಿದ ತರಬೇತಿ ಹಾಗೂ ವೇದಗಳು, ಉಪನಿಷತ್ತುಗಳು, ಭವದ್ಗೀತೆಗಳ ಅಧ್ಯಯನದಿಂದ ಎಲ್ಲ ವರ್ಗದ ಜನ ಸಾಮಾನ್ಯರಿಗೆ ಅವುಗಳನ್ನು ತಿಳಿ ಹೇಳಲು ಸಮರ್ಥರಾಗಿದ್ದಾರೆ. ಶ್ರೀ ರಾಮಕೃಷ್ಣರನ್ನು ಗುರು ಮಹರಾಜ್ ಎಂತಲೂ ಶಾರದಾದೇವಿ ಅವರನ್ನು ಶ್ರೀ ಮಾತೆ ಹಾಗೂ ವಿವೇಕಾನಂದರನ್ನು ಸ್ವಾಮೀಜಿ ಮಹಾರಾಜ್ ಎಂದು ಕರೆಯುತ್ತಾರೆ. ಇವರುಗಳು ರಾಮಕೃಷ್ಣ ಮಠದ ತ್ರಿರ್ಮೂತಿಗಳು.
ರಾಮಕೃಷ್ಣ ಮಠದ ಲಾಂಚನವು ಒಂದು ವಿಶಿಷ್ಟವಾದುದ್ದಾಗಿದೆ. ' ಲಾಂಚನದಲ್ಲಿನ ಅಲೆಗಳಿಂದ ಕೂಡಿದ ನೀರು ಕರ್ಮಯೋಗವನ್ನು, ಕಮಲವು ಭಕ್ತಿಯನ್ನೂ ಮತ್ತು ಉದಯುತ್ತಿರುವ ಸೂರ್ಯ ಜ್ಙಾನವನ್ನು ಸೂಚಿಸುತ್ತದೆ. ಅವುಗಳನ್ನು ಸುತ್ತುವರಿದ ಸರ್ಪವು ಯೋಗ ಮತ್ತು ಕುಂಡಲಿನೀ ಶಕ್ತಿಯನ್ನು ಸೂಚಿಸುತ್ತದೆ. ಲಾಂಚನದಲ್ಲಿನ ಹಂಸವು ಪರಮಾತ್ಮನ ಸೂಚಕವಾಗಿದೆ. ಈ ಲಾಂಚನ ಉದ್ದೇಶ ತನ್ನ ಜ್ಙಾನ ಮತ್ತು ಯೋಗದಿಂದ ಪರಮಾತ್ಮನ ಸಾಕ್ಷಾತ್ತಾರವನ್ನು ಪಡೆಯಬಹುದು.' - ಸ್ವಾಮಿ ವಿವೇಕಾನಂದ
ರಾಮಕೃಷ್ಣ ಮಠದ ಪ್ರಧಾನ ಕೇಂದ್ರವು ಕಲ್ಕತ್ತಾದ ದಕ್ಷಿಣೇಶ್ವರದಲ್ಲಿದೆ, ಅದನ್ನು ಬೇಲೂರು ಮಠ ಎಂದು ಕರೆಯುತ್ತಾರೆ. ಪ್ರಪಂಚದಲ್ಲಿ ಅನೇಕ ಶಾಖೆಗಳನ್ನು ಹೊಂದಿದೆ. ಭಾರತದಲ್ಲಿ ಮುಖ್ಯವಾಗಿ ಚೆನೈ, ಮೈಸೂರು, ಬೆಂಗಳೂರು, ದಿಹಲಿ, ಬಾಂಬೆ, ರಾಯಪುರ, ಹೈದರಾಬಾದ್ ಹಾಗೂ ಮಯಾವಟಿಯಲ್ಲಿನ ಅದ್ವೈತ ಆಶ್ರಮ, ಕಲ್ಕತ್ತಾದಲ್ಲಿನ ಅದ್ವೈತ ಆಶ್ರಮ. ಮಾಯವಟಿಯಲ್ಲಿರುವ ಅದ್ವೈತ ಆಶ್ರಮವು ಹಿಮಾಲಯದಲ್ಲಿರುವ ಅತಿ ಉನ್ನತ ಸಾಧನಾ ಕೇಂದ್ರ. ಚೆನೈ ಮತ್ತು ಅದ್ವೈತ ಆಶ್ರಮಗಳು ರಾಮಕೃಷ್ಣ ಮಠದ ಪ್ರಮುಖ ಪುಸ್ತಕ ಪ್ರಕಟನ ಶಾಖೆಗಳಾಗಿವೆ. ಇದಲ್ಲದೆ ಆಯಾ ಶಾಖೆಗಳೆ ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟನೆ ಮಾಡುತ್ತದೆ. ಚೆನೈಯಿಂದ ವೇದಾಂತ ಕೇಸರಿ ಮತ್ತು ಅದ್ವೈತ ಆಶ್ರಮದಿಂದ ಪ್ರಭುದ್ದ ಭಾರತ ಎಂಬ ಎರಡು ಮಾಸಿಕ ಪತ್ರಿಕೆಗಳು ಸುಮಾರು ೧೦೦ ವರ್ಷಗಳಿಂದ ಆಂಗ್ಲ ಭಾಷೆಯಲ್ಲಿ ಪ್ರಕಟಣೆಗೊಳ್ಳುತ್ತಿವೆ. ಇವು ವೇದಗಳು, ಉಪನಿಷತ್ತುಗಳು ಹಾಗೂ ಶ್ರೀ ರಾಮಕೃಷ್ಣರು, ಶಾರದಾದೇವಿ, ವಿವೇಕಾನಂದರ ಬಗ್ಗೆ ಹಾಗೂ ಇತರ ರಾಮಕೃಷ್ಣ ಮಠದ ಕಾರ್ಯಕ್ರಮಗಳ, ಲೇಖನಗಳನ್ನು ಮತ್ತು ಪುಸ್ತಕ ಪರಿಚಯಗಳನ್ನು ಹೊಂದಿರುತ್ತವೆ.
ರಾಮಕೃಷ್ಣ ಮಠದ ಶಾಕೆಗಳಲ್ಲಿ ಪ್ರತಿದಿನ ಬೆಳ್ಳಿಗ್ಗೆ ಧ್ಯಾನ ಮಾಡಲು ಅವಕಾಶವಿರುತ್ತದೆ. ಸಂಜೆ ಶ್ರೀ ರಾಮಕೃಷ್ಣರ ಆರತಿ ಹಾಗೂ ಭಜನೆ ಕಾರ್ಯಕ್ರಮಗಳು ಇರುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಮಠದ ಸ್ವಾಮೀಜಿಯವರುಗಳು ಪ್ರವಚನಗಳನ್ನು ನೀಡುತ್ತಾರೆ. ಅನೇಕ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು, ಸಮ್ಮೇಳನಗಳನ್ನು ನಡೆಸುತ್ತಿರುತ್ತಾರೆ. ಆಸಕ್ತಿಯಿರುವ ಯುವಕರಿಗೆ ರಾಮಕೃಷ್ಣ ಮಠದಲ್ಲಿ ಯುವಕ ಸಂಘ ಬಾಲಕರಿಗೆ ಬಾಲಕ ಸಂಘಗಳ ಮೂಲಕ ಸೇವಾ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಲು ತರಬೇತಿ ನೀಡಲಾಗುತ್ತದೆ. ಅಲ್ಲದೆ ಬೇಗನೆ ಶಿಬಿರಗಳನ್ನು ಹಾಗೂ ಯೋಗ ತರಗತಿಗಳನ್ನು ನಡೆಸಲಾಗಿತ್ತಿದೆ. ಈ ಮೂಲಕ ಎಲ್ಲರು ಒಳ್ಳೆಯ ನಡತೆಯನ್ನು ಬೆಳೆಸಿಕೊಳ್ಳಲು, ಅನೇಕ ಅತ್ಯಂತ ಕಷ್ಟವಾದ ವಿಷಯಗಳನ್ನು ತಿಳಿಯಲು ಒಂದು ಸಧವಕಾಶವಾಗುತ್ತದೆ. ಈ ಮೂಲಕ ರಾಮಕೃಷ್ಣ ಮಠವು ಅತಿ ದೊಡ್ಡ ಪ್ರಮಾಣದಲ್ಲಿ ಜ್ಞಾನ ಪ್ರಚಾರವನ್ನು ಮಾಡುತ್ತಿದೆ.
ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಎರಡು ವಿಭಾಗಗಳ ಒಟ್ಟು ಆಡಳಿತವು ಬೇಲೂರು ಮಠದ ಟ್ರಸ್ಟ ಮೂಲಕ ನಡೆಯುತ್ತದೆ. ಇದು ರಾಮಕೃಷ್ಣ ಮಠದಸಚಿವಾಲಯ. ಇವುಗಳಿಗೆ ಒಬ್ಬ ಹಿರಿಯ ಸ್ವಾಮೀಜಿಯವರು ಅಧ್ಯಕ್ಷರಾಗಿರುತ್ತಾರೆ ಉಳಿದಂತೆ ಒಬ್ಬರು ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರುಗಳು ಇರುತ್ತಾರೆ. ಆಯಾ ಶಾಖೆಗಳಲ್ಲಿ ಸ್ವಾಮೀಜಿಯವರೊಬ್ಬರು ಅಧ್ಯಕ್ಷರಾಗಿರುತ್ತಾರೆ. ಪ್ರಧಾನ ಕೇಂದ್ರದಲ್ಲಿರುವ ಅಧ್ಯಕ್ಷರೂ ಹಾಗೂ ಉಳಿದ ಉಪಾಧ್ಯಕ್ಷರವರು ಮಂತ್ರದೀಕ್ಷೆ, ಸನ್ಯಾಸದೀಕ್ಷೆ ಕೊಡುತ್ತಾರೆ.
ರಾಮಕೃಷ್ಣ ಮಠದಂತೆಯೇ ಅಲ್ಲಿನ ಸ್ತ್ರೀ ಭಕ್ತರು ಶಾರದಾದೇವಿಯವರ ಶಿಷ್ಯಯರಾಗಿ ತಾವೂ ಸಾಧನೆ ಮಾಡಲು ಅವಕಾಶ ಬೇಕೆಂದು ಕೋರಿ ಮಹಿಳೆಯರಿಗಾಗಿಯೇ ಶಾರದಾ ಮಠವನ್ನು ಪ್ರಾರಂಭಿಸಿದರು. ಶಾರದಾ ಮಠದಲ್ಲಿ ಸ್ತ್ರೀ ಸನ್ಯಾಸಿನಿಯವರನ್ನು ಮಾತೆಯವರೆಂದು ಕರೆಯಲಾಗುತ್ತದೆ. ಈ ಮಠವು ಸಹ ಶಾಖೆಗಳನ್ನು ಹೊಂದಿವೆ. ಇಲ್ಲಿ ಮಾತೆಯರು ಆರತಿ- ವಾರದ ಪ್ರವಚನ, ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾರೆ.
This article uses material from the Wikipedia ಕನ್ನಡ article ರಾಮಕೃಷ್ಣ ಮಠ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.