ಅವರ ಹುಟ್ಟು ಹೆಸರು ವೆಂಕಟ ರಮಣ ಅಯ್ಯರ್, ತಮಿಳುನಾಡಿನ ಮಧುರೆಯ ಹತ್ತಿರದ ತಿರುಚುರಿ ಎಂಬ ಗ್ರಾಮದಲ್ಲಿ ಸುಬ್ರಮಣ್ಯ ಅಯ್ಯರ್ ಮತ್ತು ಅಳಗಮ್ಮಾಳ್ ಎಂಬ ದಂಪತಿಗಳಿಗೆ ಜನಿಸಿದರು.
ಅವರ ಪರಿವಾರದ ನಾಲ್ಕು ಮಕ್ಕಳಲ್ಲಿ ಇವರು ಎರಡನೆಯವರು. ೧೮೯೬ರಲ್ಲಿ, ೧೬ನೆಯ ವಯಸ್ಸಿನಲ್ಲಾದ ಆತ್ಮ ಪ್ರಜ್ಙಾನುಭವದ ನಂತರ, ಅವರು ಶಾಶ್ವತವಾಗಿ ಅರುಣಾಚಲಕ್ಕೆ (ತಿರುವಣ್ಣಾಮಲೆಗೆ) ಹೊರಟು ಬಂದರು ಮತ್ತು ಶೇಷಾಯುಷ್ಯವನ್ನು ಇಲ್ಲಿಯೇ ಕಳೆದರು.
ಶ್ರೀ ರಮಣರು ಆತ್ಮ ವಿಚಾರವನ್ನು, ಅಂದರೆ, 'ನಾನು ಯಾರು' ಎಂಬ ಆತ್ಮಾನ್ವೇಷಣಾ ವಿಧಾನವನ್ನು ಆತ್ಮ ಜ್ಙಾನ ಪ್ರಾಪ್ತಿಗೆ ಮುಖ್ಯ ಸಾಧನವೆಂದು ಬೋಧಿಸುವರು - ಈ ವಿಧಾನವನ್ನು 'ಶ್ರೀ ರಮಣ ನುಟ್ರಿರಟ್ಟು' ಎಂಬ ಪ್ರಬಂಧದಲ್ಲಿ ವಿಸ್ತರಿಸಿರುವರು. ಶ್ರೀ ರಮಣರು ಈ ಆತ್ಮವಿಚಾರ ವಿಧಾನವನ್ನು ಬುಧ್ಯಾತ್ಮಕ ವ್ಯಾಯಾಮವೆಂದು ಅಪಾರ್ಥ ಮಾಡಬಾರದೆಂದೂ ಎಚ್ಚರಿಸುವರು - ಅಂದರೆ, ಉಚಿತ ರೀತಿಯಲ್ಲಿ ಮಾಡಿದ್ದಲ್ಲಿ, ಈ ಆತ್ಮವಿಚಾರವು 'ನಾನು' ಎಂಬ ಸಂವೇದನೆಯ ಮೇಲೆ ಆಲೋಚನೆಗಳಿಲ್ಲದೆ ಸುಭದ್ರವಾಗಿ ಮತ್ತು ಪ್ರಖರವಾಗಿ ಕೇಂದ್ರೀಕರಿಸುವುದೇ ಆಗಿರುವುದು ಎಂದು ವಿಶದಪಡಿಸಿರುವರು. ಶ್ರೀ ರಮಣರ ಸ್ವಂತ ಆತ್ಮವಿಚಾರವನ್ನು ಅವರು ಈ ರೀತಿ ಈ ರೀತಿ ಬಣ್ಣಿಸುವರು:
"...ನನ್ನ ಸೋದರಮಾವನ ಮನೆಯ ಮೊದಲನೆಯ ಮಾಳಿಗೆಯ ಒಂದು ಕೋಣೆಯಲ್ಲಿ ಹಾಗೆಯೇ ಕುಳಿತಿದ್ದೆ. ನಾನು ಅಪರೂಪಕ್ಕೆಲ್ಲೋ ಜ್ವರಕ್ಕೀಡಾಗುತ್ತಿದ್ದೆ, ಅಂದಂತೂ ನನ್ನ ಆರೋಗ್ಯದಲ್ಲಿ ಏನೇನೂ ತೊಂದರೆಯಿರಲಿಲ್ಲ. ಆದರೆ ಹಟಾತ್ತನೆ ಸಾವಿನ ಭಯ ನನ್ನನ್ನಾವರಿಸಿತು. ನನ್ನ ಆರೋಗ್ಯದಲ್ಲಿ ಇದಕ್ಕಾಗಿ ಅದಾವುದೇ ಕಾರಣವಿರಲಿಲ್ಲ. ಅಲ್ಲದೆ ಭಯಗ್ರಸ್ತನಾಗಲು ಕಾರಣವೇನಾದರೂ ಇರಬಹುದೆ ಎಂದು ಪರೀಕ್ಷಿಸಲೂ ನನ್ನಲ್ಲಿ ಸಂಕಲ್ಪವೇಳಲಿಲ್ಲ. ನಾನು ಸಾವಿಗೀಡಾಗುತ್ತಿದ್ದೇನೆಂದು ಅನಿಸಿತು ಮತ್ತು ಅದರ ವಿಷಯವಾಗಿ ಏನು ಮಾಡಬೇಕೆಂದು ಆಲೋಚಿಸತೊಡಗಿದೆ. ಮರಣ ಭೀತಿಯ ಅಘಾತ ನನ್ನ ಮನಸ್ಸನ್ನು ಅಂತರ್ಮುಖಿಯಾಗುವಂತೆ ಮಾಡಿತು. ಯಾವುದೇ ಪದಗಳನ್ನು ಉಪಯೋಗಿಸದೆ ನನಗೇ ನಾನು ಮಾನಸಿಕವಾಗಿ ಈ ರೀತಿ ಹೇಳಿಕೊಂಡೆ: 'ಈಗ ಸಾವು ಬಂದಿದೆ. ಹಾಗೆಂದರೇನು? ಸಾಯುತ್ತಿರುವುದು ಯಾವುದು? ಈ ದೇಹ ಸಾಯುತ್ತದೆ'. ತತ್ ಕ್ಷಣವೇ ನಾನು ಸಾವಿನ ಆಗುವಿಕೆಯನ್ನು ನಟಿಸಿದೆ. ದೇಹವು ಸೆಟೆದು ಕೊಂಡಿದೆಯೋ ಎಂಬಂತೆ ನಾನು ನನ್ನ ಕಾಲುಗಳನ್ನು ಚಾಚಿ ಅಲುಗಾಡದಂತಿದ್ದೆ. ಈ ವಿಚಾರಕ್ಕೆ ಹೆಚ್ಚು ವಾಸ್ತವ್ಯವನ್ನು ಕೊಡಲು ಶವವಿರುವಂತೆಯೇ ಅನುಕರಿಸಿದೆ. ನನ್ನ ಉಸಿರನ್ನು ಹಿಡಿದು ಕೊಂಡೆ, ತುಟಿಗಳನ್ನು ಬಿಗಿಯಾಗಿ ಯಾವುದೇ ಸದ್ದು ಬಾರದಂತೆ, ('ನಾನು' ಎಂಬುದಾಗಲೀ ಅಥವಾ ಇನ್ನಾವುದೋ ಶಬ್ಧ ಆಗಲಿ ಬಾರದಂತೆ) ಮುಚ್ಚಿಕೊಂಡೆ. ಆಗ ನನಗೇ ಹೇಳಿಕೊಂಡೆ: 'ಸರಿ ಹಾಗಾದರೆ, ಈ ದೇಹ ಸತ್ತು ಹೋಗಿದೆ. ಸೆಟೆದುಕೊಂಡ ಹಾಗೆಯೇ ಅದನ್ನು ಕೊಂಡೊಯ್ದು ಸುಟ್ಟು ಭಸ್ಮ ಮಾಡಿ ಬಿಡುತ್ತಾರೆ. ಆದರೆ ಈ ದೇಹದ ಸಾವಿನಿಂದ ನಾನು ಸತ್ತೆನೇ? ಈ ದೇಹ 'ನಾನು' ಎಂಬುದೇ? ಅದು ಮೌನ ಮತ್ತು ಜಡ. ಆದರೆ ನಾನು ನನ್ನ ವ್ಯಕ್ತಿತ್ವದ ಸಂಪೂರ್ಣ ಶಕ್ತಿಯನ್ನು ಮತ್ತು ನನ್ನಲ್ಲಿನ 'ನಾನು' ಎಂಬ ಸ್ವರವನ್ನೂ ಕೂಡ ಇದರಿಂದ ಬೇರೆ ಎಂಬ ಅನುಭವವನ್ನು ಪಡೆಯುತ್ತಿದ್ದೇನೆ. ಆದ್ದರಿಂದ ಈ ದೇಹವನ್ನು ಮೀರಿದ ಚೇತನ ನಾನು. ದೇಹ ಸಾಯುತ್ತದೆ, ಆದರೆ ಅದನ್ನು ಮೀರಿಸಿದ ಚೇತನವನ್ನು ಸಾವು ಮುಟ್ಟಲಾರದು. ಹಾಗೆಂದರೆ, ನಾನು ಸಾವಿಲ್ಲದ ಚೇತನ'. ಇದೆಲ್ಲವೂ ಮಂದ ಆಲೋಚನೆಗಳಲ್ಲ. ಅದು ನನ್ನಲ್ಲಿ ಆಲೋಚನೆ ಗಳೇ ಇಲ್ಲವೇನೋ ಎಂಬಂತೆ ಜೀವಂತ ಸತ್ಯಗಳಂತೆ ನನ್ನಲ್ಲಿ ಸುಸ್ಪಷ್ಟವಾಗಿ ಮಿಂಚಿ ಹಾದು ಹೋಯಿತು. ನಾನು ಸತ್ಯವಾದುದಾವುದೋ ಆಗಿದ್ದೆ. ನನ್ನ ಪ್ರಸ್ತುತ ಸ್ಥಿತಿಯಲ್ಲಿನ ಒಂದೇ ಸತ್ಯತೆಯಾಗಿದ್ದೆ ಮತ್ತು ದೇಹದೊಡನೆ ಪ್ರಜ್ಙಾಪೂರ್ವಕವಾಗಿ ಜೋಡಣೆಗೊಂಡಿದ್ದೆಲ್ಲವೂ ಆ 'ನಾನು' ಎಂಬುದರ ಮೇಲೆಯೇ ಕೇಂದ್ರೀಕೃತವಾಗಿತ್ತು. ಆ ಕ್ಷಣದ ನಂತರ, 'ನಾನು' ಅಥವಾ ಆತ್ಮವು, ಈ ಪ್ರಬಲ ವಿಸ್ಮಿತತೆಯಿಂದ ತನ್ನ ಮೇಲೆಯೇ ಗಮನವನ್ನು ಕೇಂದ್ರೀಕರಿಸಿತು. ಸಾವಿನ ಭಯವು ಎಂದೆಂದಿಗೂ ಮಾಯವಾಗಿ ಹೋಯಿತು. ಅಹಂ ಎಂಬುದು ಆತ್ಮ ಪ್ರಜ್ಙೆಯ ಮಹಾಪೂರದಲ್ಲಿ ಕಳೆದು ಹೋಯಿತು. ಆ ಸಮಯದಿಂದ ಆತ್ಮಲೀನತೆಯು ಲುಪ್ತಿಯಿಲ್ಲದೆ ಮುಂದುವರೆಯಿತು. ಬೇರೆ ಆಲೋಚನೆಗಳು ಸಂಗೀತದ ನಾದಗಳಂತೆ ಬಂದು ಹೋಗಬಹುದು. ಆದರೆ 'ನಾನು' ಎಂಬುದು ಮೂಲಭೂತ ಶೃತಿಯಂತೆ ಮುಂದುವರೆಯಿತು. ಅದು ಉಳಿದೆಲ್ಲ ನಾದಗಳ ಪಾಯದಲ್ಲಿದ್ದು ಉಳಿದೆಲ್ಲ ನಾದಗಳನ್ನು ಮಿಶ್ರಿಸುವ ಶೃತಿ".
ಶ್ರೀ ರಮಣರ ಬೋಧನೆ ಮತ್ತು ಶ್ರೀ ಶಂಕರಾಚಾರ್ಯರಿಂದ ವಿಸ್ತೃತವಾದ ಅದ್ವೈತ ಸಿದ್ಧಾಂತಗಳಲ್ಲಿ ಸಾಕಷ್ಟು ಸಾದೃಶ್ಯವಿದ್ದರೂ ಕೆಲವು ಭೇದಗಳೂ ಇರುವುವು.
This article uses material from the Wikipedia ಕನ್ನಡ article ರಮಣ ಮಹರ್ಷಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.