ರಂ.
ಶಾ. ಎಂದು ಪ್ರಖ್ಯಾತರಾದ ರಂಗನಾಥ ಶಾಮಾಚಾರ್ಯ ಲೋಕಾಪುರ (ಜುಲೈ ೧೩, ೧೯೩೨) ಕನ್ನಡ ಮತ್ತು ಮರಾಠಿ ಸಾಹಿತ್ಯ ಲೋಕದಲ್ಲಿನ ಮಹತ್ವದ ಸಾಧಕರಾಗಿದ್ದಾರೆ.
ರಂ. ಶಾ. ಲೋಕಾಪುರ | |
---|---|
ಜನನ | ರಂಗನಾಥ ಶಾಮಾಚಾರ್ಯ ಲೋಕಾಪುರ ಜುಲೈ ೧೩, ೧೯೩೨ |
ಕಾವ್ಯನಾಮ | ರಂ. ಶಾ. |
ವೃತ್ತಿ | ಸಾಹಿತಿ, ಸಂಶೋಧಕರು, ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಉದ್ಯೋಗಸ್ಥರು |
ವಿಷಯ | ಕನ್ನಡ ಮತ್ತು ಮರಾಠಿ ಸಾಹಿತ್ಯ |
ಸಾಹಿತ್ಯ ಲೋಕದಲ್ಲಿ ‘ರಂ. ಶಾ’ ಎಂದೇ ಪ್ರಸಿದ್ಧರಾಗಿರುವ ರಂಗನಾಥ ಶಾಮಾಚಾರ್ಯ ಲೋಕಾಪುರ ಅವರು ಜುಲೈ 13, 1932ರಂದು ಜಮಖಂಡಿ ತಾಲ್ಲೂಕಿನ ಹುನ್ನೂರಿನಲ್ಲಿ ಜನಿಸಿದರು. ತಂದೆ ಶಾಮಾಚಾರ್ಯ ರು ಮತ್ತು ತಾಯಿ ಇಂದಿರಾಬಾಯಿಯವರು. ಲೋಕಾಪುರ ಅವರ ಪ್ರಾರಂಭಿಕ ಶಿಕ್ಷಣ ಬೆಳಗಾವಿಯಲ್ಲಿ ನೆರವೇರಿತು. ತಂದೆ ಹಳಗನ್ನಡ, ಛಂದಸ್ಸುಗಳಲ್ಲಿ ವಿದ್ವಾಂಸರಾಗಿದ್ದುದರ ದೆಸೆಯಿಂದಾಗಿ ಲೋಕಾಪುರರಿಗೆ ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಮೊಳೆಯಲು ಪ್ರೇರಣೆ ದೊರಕಿತ್ತು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಅವರಲ್ಲಿ ಕನ್ನಡ, ಸಂಸ್ಕೃತದಲ್ಲಿ ಆಸಕ್ತಿ ಹುಟ್ಟಿತು. ಅವರಿಗೆ ಪ್ರ.ಗೋ.ಕುಲಕರ್ಣಿಯವರಿಂದ ಹಳೆಗನ್ನಡ ಪಾಠವಾಯಿತು. ಬೆಳಗಾವಿಯಲ್ಲಿ ಇಂಟರ್ ಮೀಡಿಯೆಟ್ ಕಾಲೇಜು, ಕೊಲ್ಹಾಪುರದ ರಾಜಾರಾಂ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದರು. ಮುಂದೆ ರಂ.ಶಾ ಅವರು ಉದ್ಯೋಗಕ್ಕಾಗಿ ಸೇರಿದ್ದು ಮುಂಬೈನ ಅಕೌಂಟೆಂಟ್ ಜನರಲ್ರವರ ಕಚೇರಿಯಲ್ಲಿ.
ಕಾಲೇಜಿನ ದಿನಗಳಲ್ಲಿ ರಂ. ಶಾ ಅವರಿಗೆ ಪ್ರಾಚಾರ್ಯರಾಗಿದ್ದ ವಿ. ಕೃ. ಗೋಕಾಕರ ಸಂಪರ್ಕ ಲಭಿಸಿತ್ತು. ಇಂಗ್ಲಿಷ್ ಸಾಹಿತ್ಯದ ಪರಿಚಯವೂ ಚೆನ್ನಾಗಿ ದೊರಕಿತು. ಇದಲ್ಲದೆ ಹಿಂದಿ ಭಾಷೆಯನ್ನೂ ಕಲಿತು ಹಿಂದಿ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಲ್ಲದೆ ಪ್ರೇಮಚಂದರ ಎಂಟು ಹಿಂದಿ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.
ರಂ. ಶಾ ಅವರ ಹಲವಾರು ಸಣ್ಣಕಥೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆಯಲ್ಲದೆ ಕಥಾಸಂಕಲನಗಳಾಗಿಯೂ ಪ್ರಕಟಗೊಂಡಿವೆ. ರಂ. ಶಾ ಅವರು ಅನಂತಮೂರ್ತಿಯವರ ‘ಸಂಸ್ಕಾರ’ ಮತ್ತು ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ ಕಾದಂಬರಿಗಳನ್ನು ಮರಾಠಿಗೆ ಅನುವಾದ ಮಾಡಿದ್ದಾರೆ. ವಿ. ಗ. ಕಾನಿಟ್ಕರರ ಪ್ರಸಿದ್ಧ ಮರಾಠಿ ಕಾದಂಬರಿ ‘ಹೋರಪಳ’ವನ್ನು ‘ಅಗ್ನಿದಿವ್ಯ’ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ.
ರಂ.ಶಾ ಅವರು ಮರಾಠಿಯಿಂದ ಕನ್ನಡಕ್ಕೆ ತಂದಿರುವ ತುಕಾರಾಂ ಅವರ `ಜ್ಞಾನೇಶ್ವರಿ' ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ನೇ ಸಾಲಿನ ಅನುವಾದ ಪ್ರಶಸ್ತಿ ಪಡೆದಿದೆ. ಮರಾಠಿ ಸಂತ ಜ್ಞಾನೇಶ್ವರ ಅವರು ೧೩ನೇ ಶತಮಾನದಲ್ಲಿ ರಚಿಸಿದ್ದ ಸಾಹಿತ್ಯವನ್ನು `ಕನ್ನಡ ಜ್ಞಾನೇಶ್ವರಿ' ಎಂಬ ಕೃತಿ ರಚನೆ ಮೂಲಕ ಲೋಕಾಪುರರು ಕನ್ನಡಕ್ಕೆ ತಂದಿದ್ದಾರೆ.
ಈ ಎಲ್ಲ ಸಾಧನೆಗಳ ಜೊತೆಗೆ ರಂ. ಶಾ ಅವರು ಕನ್ನಡ-ಮರಾಠಿ ಭಾಷೆಗಳ ತೌಲನಿಕ ಅಧ್ಯಯನ ನಡೆಸಿದ ಫಲವಾಗಿ ‘ಹಳೆಗನ್ನಡ ಮತ್ತು ಮರಾಠಿ’ ಎಂಬ ಸಂಶೋಧನಾ ಗ್ರಂಥವನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮೂಲಕ ೧೯೯೪ರಲ್ಲಿ ಪ್ರಕಟಿಸಿದ್ದಾರೆ. ಇದೇ ಕೃತಿಯನ್ನು ಮರಾಠಿ ಭಾಷೆಯಲ್ಲಿ “ಜ್ಞಾನೇಶ್ವರೀ ಕಾಲೀನ ಮರಾಠಿ ಭಾಷೇವಾರ ಕನ್ನಡ ಪ್ರಭಾವ” ಎಂದು ೩ ಸಂಪುಟಗಳಲ್ಲಿ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ್ದಾರೆ. ಮಹಾರಾಷ್ಟ್ರದ ಗ್ರಂಥೋತ್ತೇಜಕ ಸಂಸ್ಥೆಯಿಂದ ಈ ಕೃತಿಗೆ ಪುರಸ್ಕಾರ ಲಭಿಸಿದೆ. ಹೀಗೆ ರಂ. ಶಾ ಅವರು ಕನ್ನಡ-ಮರಾಠಿ ಎರಡೂ ಭಾಷೆಗಳನ್ನು ಅಧ್ಯಯನ ಮಾಡಿ ಪರಸ್ಪರ ಕೊಡುಕ್ಕೊಳ್ಳುವಿಕೆಯ ತಿಳುವಳಿಕೆಯನ್ನು ನೀಡಿದ್ದಾರೆ.
ಬ್ರೆಕ್ಟನ ನಾಟಕ ‘ಗುಡ್ ಪರ್ಸನ್ ಆಫ್ ಶೆಜುವಾನ್’ ಕೃತಿಯನ್ನು ‘ಸಂಕಾನ್ತೇಯ ಚಂದ್ರಿ’ ಎಂಬ ಹೆಸರಿನಿಂದ ಅನುವಾದ ಮಾಡಿದ್ದಾರೆ. 'ನೆಳಲಿಯ ಪ್ರಸಂಗ’ ಎಂಬುದು ರಂ. ಶಾ ಅವರ ಮತ್ತೊಂದು ನಾಟಕ.
ರಂ. ಶಾ ಅವರು ನಾಥ್ ಫೆಲೋಶಿಪ್ ಪಡೆದು ಸಂಪ್ರದಾಯದ ಬಗ್ಗೆ ಸಂಶೋಧನಾ ಗ್ರಂಥ ರಚನೆ ಮಾಡಿದ್ದಾರೆ. ‘ಕರ್ನಾಟಕದಲ್ಲಿ ಅವೈದಿಕ ಸಾಹಿತ್ಯ ಪರಂಪರೆಗಳು’ ರಂ. ಶಾ ಅವರ ಮತ್ತೊಂದು ಮಹತ್ವದ ಕೃತಿ.
ಈ ಮಹಾನ್ ಸಾಧಕ ರಂ.ಶಾ. ಲೋಕಾಪುರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೇ ಅಲ್ಲದೆ, ಜೋಳದ ರಾಶಿ ದೊಡ್ಡನಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಕಣಜ Archived 2016-05-20 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಪತ್ರಿಕಾ ಮಾಧ್ಯಮದಲ್ಲಿನ ವಿವಿಧ ಸುದ್ಧಿಗಳು
This article uses material from the Wikipedia ಕನ್ನಡ article ರಂ. ಶಾ. ಲೋಕಾಪುರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.