ಮುಖ್ತಾರ್ ಅಹಮದ್ ಅನ್ಸಾರಿ(೧೮೮೦-೧೯೩೬) ರಾಷ್ಟ್ರೀಯತಾಭಾವನೆ ಎಲ್ಲರಲ್ಲೂ ಬೆಳೆಯುವುದೊಂದೇ ಸುಭದ್ರ ಭವ್ಯ ಭಾರತ ನಿರ್ಮಾಣಕ್ಕೆ ದಾರಿ ಎಂದು ನಂಬಿ, ಹಿಂದೂ ಮುಸ್ಲಿಂ ಐಕ್ಯಕ್ಕಾಗಿ ಭಾರತದಲ್ಲಿ ಅಜೀವಪರ್ಯಂತ ದುಡಿದ ದೇಶಭಕ್ತ.
ಸಂಯುಕ್ತಪ್ರಾಂತ್ಯದ ಶ್ರೀಮಂತ ಮನೆತನವೊಂದರಲ್ಲಿ ಜನ್ಮವೆತ್ತಿ (1880), ಮದರಾಸ್ ವಿಶ್ವವಿದ್ಯಾನಿಲಯದ ಬಿ.ಎ. ಪದವಿಗಳಿಸಿದರು. ವೈದ್ಯಕೀಯ ಶಿಕ್ಷಣಕ್ಕೆಂದು 1900ರಲ್ಲಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಎಂ.ಡಿ., ಎಂ.ಎಸ್., ಮತ್ತು ಎಲ್.ಆರ್.ಸಿ.ಪಿ. ಪ್ರೌಢಪದವಿಗಳನ್ನು ಸಂಪಾದಿಸಿದರು. 1911ರವರೆಗೂ ಇಂಗ್ಲೆಂಡಿನಲ್ಲೇ ನಿಂತು, ಹೌಸ್ ಸರ್ಜನ್, ರೆಸಿಡೆಂಟ್ ಮೆಡಿಕಲ್ ಆಫೀಸರ್ ಹುದ್ಧೆಗಳಲ್ಲಿ ದುಡಿದು, ಅಪಾರ ಅನುಭವ ಹಾಗೂ ಜನಾನುರಾಗವನ್ನು ಗಳಿಸಿ ಸ್ವದೇಶಕ್ಕೆ ಹಿಂತಿರುಗಿದರು. ದೆಹಲಿಯಲ್ಲಿ ವೈದ್ಯವೃತ್ತಿಯನ್ನು ಪ್ರಾರಂಭಿಸಿ, ಕೆಲವು ದಿನಗಳಲ್ಲೇ ದೇಶದ ಅತ್ಯಂತ ಸಮರ್ಥ ವೈದ್ಯರಲ್ಲೊಬ್ಬರೆಂಬ ಖ್ಯಾತಿಗಳಿಸಿ, ಶ್ರೀಮಂತರು ಬಡವರು ಎಂಬ ಭೇದಭಾವವಿಲ್ಲದೆ, ಎಲ್ಲ ರೋಗಿಗಳನ್ನೂ ಉಪಚರಿಸಿ, ವೈದ್ಯನ ಮನೋಧರ್ಮ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟರು.
ಆಗಿನ ರಾಜಕೀಯ ಪರಿಸ್ಥಿತಿಯಿಂದಾಗ ಜನತೆಯಲ್ಲಿ ಉಂಟಾಗಿದ್ದ ಅಲ್ಲೋಲಕಲ್ಲೋಲ, ಹಿಂದೂಗಳಿಗೂ ಮುಸ್ಲಿಮರಿಗೂ ಮಧ್ಯೆ ವೈರವನ್ನುಂಟುಮಾಡಲು ನಡೆಯುತ್ತಿದ್ದ ಸಂಚು ಸಂಧಾನಗಳು. ಆರ್ಥಿಕ-ಶೋಷಣೆಯಿಂದಾಗಿ ಜನರಲ್ಲಿ ಹರಡಿದ್ದ ದಾರಿದ್ರ್ಯ, ನಿರಾಶೆ, ಇವನ್ನು ಸರಿಪಡಿಸಿ ನಾಡಿನ ಭವ್ಯ ಭವಿಷ್ಯವನ್ನು ರೂಪಿಸಲೆತ್ನಿಸುತ್ತಿದ್ದ ಗಾಂಧೀಜಿಯವರ ವ್ಯಕ್ತಿತ್ವ ಅನ್ಸಾರಿಯವರ ಹೃದಯವನ್ನು ಸೆಳೆಯಿತು. ರಾಜಕೀಯವೇನೂ ಇವರಿಗೆ ಹೊಸದಾಗಿರಲಿಲ್ಲ. 1899ರಲ್ಲೇ ಮದರಾಸಿನಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. 1912-13ರಲ್ಲಿ ತುರ್ಕಿ-ಬಾಲ್ಕನ್ ರಾಷ್ಟ್ರಗಳ ನಡುವೆ ಯುದ್ಧ ನಡೆದಾಗ, ಗಾಯಗೊಂಡವರ ಶುಶ್ರೂಷೆಗಾಗಿ ವೈದ್ಯಕೀಯ ತಂಡವೊಂದನ್ನು ಕಳುಹಿಸಿದ್ದರು. 1918ರಲ್ಲಿ ಮುಸ್ಲಿಂ ಲೀಗ್ ಕಾಂಗ್ರೇಸ್ನೊಂದಿಗೆ ವಿಲೀನವಾದಾಗ ಲೀಗಿನ ಸ್ವಾಗತಾಧ್ಯಕ್ಷರಾಗಿ ದುಡಿದಿದ್ದರು. ಪ್ರತಿಯೊಂದು ಕಾಂಗ್ರೆಸ್ ಅಧಿವೇಶನದಲ್ಲೂ ಹಾಜರಿದ್ದು ಅದರ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದರು. ಹಿಂದೂ ಮುಸ್ಲಿಂ ಐಕ್ಯತೆ ಅವರ ಜೀವನದ ಉಸಿರಾಗಿತ್ತು. ಮುಸ್ಲಿಂರಲ್ಲಿ ರಾಷ್ಟ್ರೀಯತಾ ಮನೋಭಾವವನ್ನು ಬಲಗೊಳಿಸಲು ರಾಷ್ಟ್ರೀಯ ಮುಸ್ಲಿಂ ದಳವನ್ನು ನಿರ್ಮಿಸಿದ್ದರು. 1927ರಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು. ಗಾಂಧೀಜಿಯವರು ಪ್ರಾರಂಭಿಸಿದ ಅಸಹಕಾರ ಚಳುವಳಿಯಲ್ಲಿ ಎಲ್ಲರೊಟ್ಟಾಗಿ ಯಶಸ್ಸನ್ನು ತಂದರೂ ಕೂಡಿಬಾಳುವ ವಿಷಯದಲ್ಲಿ ವಿಫಲರಾಗಿರುವ ಜನತೆಯ ವಿಷಯದಲ್ಲಿ ತಮಗಿದ್ದ ದುಃಖಾತಂಕಗಳನ್ನು ತೋಡಿಕೊಂಡರು. ಕೌನ್ಸಿಲ್ ಪ್ರವೇಶಕ್ಕೆ ಅವರ ವಿರೋಧವಿದ್ದರೂ 1934ರ ಚುನಾವಣೆಯಲ್ಲಿ ಹೋರಾಡಬೇಕೆಂದು ನಿರ್ಣಯವಾದಾಗ ಅದಕ್ಕೆ ತಮ್ಮ ಬೆಂಬಲ ನೀಡಿದರು; ಆದರೆ ತಾವು ಮಾತ್ರ ಚುನಾವಣೆಗೆ ನಿಲ್ಲಲಿಲ್ಲ. ಗಾಂಧೀಜಿಯವರು ಇವರ ಸರಳತೆ, ನಿವ್ರ್ಯಾಜಮನೋಭಾವ, ರಾಷ್ಟ್ರಪೇಮ ಇವುಗಳನ್ನು ತುಂಬಾ ಮೆಚ್ಚಿದ್ದರು. ಅನ್ಸಾರಿಯಂಥ ದೇಶಭಕ್ತರು ಸೂತ್ರಧಾರಿಗಳಾಗಿರುವಾಗ ನಾಡಿನ ಅಭ್ಯುದಯಕ್ಕೆ ಯಾವ ಕೊರತೆಯೂ ಇಲ್ಲ ಎಂದು ಅವರು ಹೇಳಿದರು. ವೈದ್ಯನಾಗಿ, ರಾಜಕೀಯ ಮುಂದಾಳಾಗಿ, ನಿರಂತರ ದುಡಿದು ತಮ್ಮ ಐವತ್ತಾರನೆಯ ವಯಸ್ಸಿನಲ್ಲಿ ಅನ್ಸಾರಿ ಕಾಲವಾದರು.
This article uses material from the Wikipedia ಕನ್ನಡ article ಮುಖ್ತಾರ್ ಅಹಮದ್ ಅನ್ಸಾರಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.