ಭಾಸನು ಸಂಸ್ಕೃತ ಭಾಷೆಯ ಪ್ರಾಚೀನ ಕಾಲದ ಸುಪ್ರಸಿದ್ಧ ನಾಟಕಕಾರ .
ಆದರೆ ಇವನ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ. ಕಾಳಿದಾಸನು ತನ್ನ ಕೃತಿಯೊಂದರಲ್ಲಿ ಭಾಸನ ಹೆಸರು ಹೇಳಿರುವದರಿಂದ ಭಾಸನು ಕಾಳಿದಾಸನಿಗೂ ಮೊದಲು ಇದ್ದನೆಂದು ನಮಗೆ ಗೊತ್ತಾಗುತ್ತದೆ. ಕಾಳಿದಾಸನು ಕ್ರಿ.ಪೂ. ಒಂದನೇ ಶತಮಾನದಿಂದ ಕ್ರಿ.ಶ. ನಾಲ್ಕನೇ ಶತಮಾನದವರೆಗಿನ ನಡುವಿನ ಅವಧಿಯಲ್ಲಿ ಇದ್ದನು . ಆದ್ದರಿಂದ ಭಾಸನು ಕ್ರಿ.ಪೂ. ೨ ನೇ ಶತಮಾನ ಮತ್ತು ಕ್ರಿ.ಶ. ೨ ನೇ ಶತಮಾನದ ನಡುವಿನ ಅವಧಿಯಲ್ಲಿ ಇದ್ದನು ಎಂದು ತಿಳಿಯಬಹುದು. ಭಾಸನ ಕೃತಿಗಳಲ್ಲಿ ಬಳಸಿದ ಭಾಷೆಯ ಆಧಾರದ ಮೇಲೆ ಅವನು ಕ್ರಿ.ಶ. ಐದನೇ ಶತಮಾನದಲ್ಲಿ ಇದ್ದನು ಎಂದೂ ಹೇಳುತ್ತಾರೆ. ಅವನ ನಾಟಕಗಳು ಶತಮಾನಗಳ ಕಾಲ ನಾಪತ್ತೆ ಆಗಿದ್ದವು. ಕ್ರಿ.ಶ. ೮೮೦-೯೨೦ ರ ನಡುವೆ ಹೆಸರಾಂತ ಕವಿ , ನಾಟಕಕಾರ ಮತ್ತು ವಿಮರ್ಶಕ ರಾಜಶೇಖರನು ಬರೆದ ಕಾವ್ಯಮೀಮಾಂಸೆಯಂತಹ ಇತರ ಕೃತಿಗಳಲ್ಲಿನ ಉಲ್ಲೇಖದ ಮೂಲಕವೇ ಅವನ ಬಗ್ಗೆ ತಿಳಿದಿತ್ತು. ಕಾವ್ಯಮೀಮಾಂಸೆಯಲ್ಲಿ ರಾಜಶೇಖರನು ಸ್ವಪ್ನವಾಸವದತ್ತ ನಾಟಕವನ್ನು ಭಾಸನದೆಂದು ಹೇಳುತ್ತಾನೆ.
೧೯೧೨ ರಲ್ಲಿ ದಿವಂಗತ ಮಹಾಮಹೋಪಾಧ್ಯಾಯ ಗಣಪತಿ ಶಾಸ್ತ್ರಿಗಳಿಗೆ ಕೇರಳದ ತಿರುವನಂತಪುರದಲ್ಲಿ ಹದಿಮೂರು ನಾಟಕಗಳು ಸಿಕ್ಕವು. ಉಳಿದ ಶಾಸ್ತ್ರೀಯ(ಕ್ಲಾಸಿಕಲ್) ನಾಟಕಗಳ ರೀತಿಯಲ್ಲಿ ಅವುಗಳಲ್ಲೂ ಅವನ್ನು ರಚಿಸಿದವರ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆದರೆ ಸ್ವಪ್ನವಾಸವದತ್ತವು ಅವುಗಳಲ್ಲೊಂದಾಗಿತ್ತು. ಅವುಗಳಲ್ಲಿನ ಬರವಣಿಗೆಯ ಶೈಲಿ ಮತ್ತು ತಂತ್ರಗಾರಿಕೆಯ ರೀತಿಯನ್ನು ಗಮನಿಸಿಯೂ , ಸ್ವಪ್ನವಾಸವದತ್ತ ನಾಟಕವು ಭಾಸನದೆಂದು ಗೊತ್ತಾಗಿರುವದರಿಂದಲೂ ಈ ಎಲ್ಲ ನಾಟಕಗಳು ಭಾಸನವು ಎಂದು ಒಪ್ಪಲಾಯಿತು. ಕೆಲವರು ಈ ನಾಟಕಗಳೆಲ್ಲವನ್ನು ಭಾಸನು ಬರೆದಿರುವದರ ಬಗ್ಗೆ ಸಂದೇಹ ವ್ಯಕ್ತಪಡಿಸಿದರಾದರೂ ಕಾಲಕ್ರಮೇಣ ಈ ಎಲ್ಲ ನಾಟಕಗಳು ಭಾಸನವೇ ಎಂಬ ತೀರ್ಮಾನಕ್ಕೆ ಬರಲಾಯಿತು.
ಭಾಸನು ನಾಟ್ಯಶಾಸ್ತ್ರದ ಎಲ್ಲ ನಿಯಮಗಳನ್ನು ಪಾಲಿಸಿಲ್ಲ. ನಾಟ್ಯಶಾಸ್ತ್ರದ ನಿಯಮಗಳನ್ನು ಅನುಸರಿಸದ, ಕಾಳಿದಾಸನ ನಂತರದ ನಾಟಕವಾವುದೂ ಸಿಕ್ಕಿಲ್ಲದುದರಿಂದ ಕಾಳಿದಾಸನಿಗಿಂತಲೂ ಈ ನಾಟಕಗಳು ಹಳೆಯವು ಎಂಬುದಕ್ಕೆ ಈ ವಿಷಯವೇ ರುಜುವಾತು ಎಂದು ಸ್ವೀಕರಿಸಲಾಗಿದೆ. ದೈಹಿಕ ಹಿಂಸೆಯನ್ನೊಳಗೊಂಡಂತಹ ದೃಶ್ಯಗಳನ್ನು ಊರುಭಂಗದಂತಹ ನಾಟಕಗಳಲ್ಲಿ ಭಾಸನು ಬರೆದಿದ್ದಾನೆ . ಇದನ್ನು ನಾಟ್ಯಶಾಸ್ತ್ರವು ಖಂಡಿತಾ ಅನುಮತಿಸುವದಿಲ್ಲ.
ಊರುಭಂಗ ಮತ್ತು ಕರ್ಣಭಾರ ಇವೆರಡೇ ಪ್ರಾಚೀನ ಭಾರತದ ದುರಂತ ಸಂಸ್ಕೃತನಾಟಕಗಳು. ದುರ್ಯೋಧನನು ಮಹಾಭಾರತದ ಖಳನಾಯಕನೆಂದೇ ಇದ್ದರೂ , ತನ್ನ ತೊಡೆಗಳನ್ನು ಮುರಿಸಿಕೊಂಡು , ಸಾವನ್ನು ಎದುರುನೋಡುತ್ತಾ , ತನ್ನ ಕೃತಿಗಳಿಗೆ ಪಶ್ಚಾತ್ತಾಪ ಪಡುವ ಅವನು 'ಊರುಭಂಗ'ದಲ್ಲಿ ನಾಯಕನೇ ಆಗಿದ್ದಾನೆ. ತನ್ನ ಕುಟುಂಬದವರೊಂದಿನ ಅವನ ಸಂಬಂಧಗಳನ್ನು ಬಹಳ ಕರುಣಾಜನಕವಾಗಿ ಭಾಸನು ಚಿತ್ರಿಸಿದ್ದಾನೆ. ಮಹಾಭಾರತವಾದರೋ ಅಂಥ ಪಶ್ಚಾತ್ತಾಪವನ್ನು ಸೂಚಿಸುವುದಿಲ್ಲ. ಕರ್ಣಭಾರವು ಮಹಾಭಾರತದ ಇನ್ನೊಂದು ಪ್ರಮುಖಪಾತ್ರವಾದ ಕರ್ಣನ ದುಃಖಮಯ ಅಂತ್ಯದ ಮುನ್ಸೂಚನೆಗಳೊಂದಿಗೆ ಕೊನೆಯಾಗುವದು. ಭಾರತದಲ್ಲಿ ಆರಂಭಿಕ ನಾಟಕಗಳು ನಾಟ್ಯಶಾಸ್ತ್ರದಿಂದ ಪ್ರೇರಿತವಾಗಿದ್ದು ದುಃಖಾಂತ್ಯವನ್ನು ಅನುಚಿತ ಎಂದು ಪರಿಗಣಿಸಿದವು.
ನಂತರದ ನಾಟಕಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಈ ನಾಟಕಗಳು ಚಿಕ್ಕವಾಗಿದ್ದು ಭಾರತದ ಮಹಾಕಾವ್ಯಗಳಾದ ರಾಮಾಯಣ , ಮಹಾಭಾರತಗಳನ್ನು ಆಧರಿಸಿವೆ. ಭಾಸನು ಕಾವ್ಯಗಳ ನಾಯಕರ ಪರ ಇದ್ದರೂ ವಿರೋಧಿಗಳನ್ನು ಬಲು ಸಹಾನುಭೂತಿಯಿಂದ ಕಾಣುತ್ತಾನೆ. ಅದಕ್ಕಾಗಿ ಅವನು ತಕ್ಕಮಟ್ಟಿಗೆ ಸ್ವಾತಂತ್ರ್ಯವನ್ನೂ ವಹಿಸುತ್ತಾನೆ. ಪ್ರತಿಮಾನಾಟಕದಲ್ಲಿ ರಾಮಾಯಣದಲ್ಲಿ ಅನಾಹುತಗಳಿಗೆ ಕಾರಣವಾಗುವ ಕೈಕೇಯಿಯು ಉದಾತ್ತಧ್ಯೇಯವೊಂದರ ಸಾಧನೆಗಾಗಿ ಖಂಡನೆಭರ್ತ್ಸನೆಗಳನ್ನು ಸಹಿಸುವಂತೆ ತೋರಿಸಲಾಗಿದೆ.
ಹರಿವಂಶದ ಮೇಲೆ ಆಧಾರಿತ
ಬೃಹತ್ಕಥೆಯ ಆಧಾರದ ಮೇಲೆ ರಚಿತ:
ಬಹುಶಃ ದೂತವಾಕ್ಯ ಮತ್ತು ಬಾಲಚರಿತ ಇವೆರಡೇ ಸಂಸ್ಕೃತದಲ್ಲಿ ಪ್ರಸಿದ್ಧ ನಾಟಕಾರನೊಬ್ಬ ಕೃಷ್ಣನನ್ನು ಪ್ರಮುಖ ಪಾತ್ರವಾಗಿಟ್ಟು ರಚಿಸಿದ ನಾಟಕಗಳು . ಅವನ ಉಳಿದ ನಾಟಕಗಳು ಕಾವ್ಯಗಳನ್ನು ಆಧರಿಸಿಲ್ಲ . ಅವಿಮಾರಕ ಒಂದು ರಮ್ಯಕಥಾನಕ. ಅಪೂರ್ಣವಾಗಿರುವ ದರಿದ್ರ ಚಾರುದತ್ತ ನಾಟಕದ ಕಥೆಯನ್ನು ಮುಂದುವರೆಸಿ ಶೂದ್ರಕನು ಮೃಚ್ಛಕಟಿಕ ನಾಟಕವನ್ನು ಬರೆದು ಅದು ಸುಪ್ರಸಿದ್ಧವಾಯಿತು . ಈ ನಾಟಕವನ್ನು ಆಧರಿಸಿಯೇ ಗಿರೀಶ್ ಕಾರ್ನಾಡ್ ಅವರು ಉತ್ಸವ್ ಎಂಬ ಚಲಚ್ಚಿತ್ರವನ್ನು ೧೯೮೪ರಲ್ಲಿ ನಿರ್ಮಿಸಿದರು.
ಅವನ ಅತ್ಯಂತ ಪ್ರಸಿದ್ಧ ನಾಟಕಗಳಾದ ಸ್ವಪ್ನವಾಸವದತ್ತ ಮತ್ತು ಪ್ರತಿಜ್ಙಾಯೌಗಂಧರಾಯಣ ಬುದ್ಧನ ಸಮಕಾಲೀನನಾದ ಉದಯನ ಎಂಬ ರಾಜನ ಸುತ್ತ ಇದ್ದ ದಂತಕತೆಗಳನ್ನಾಧರಿಸಿದ್ದವು ಆಗಿವೆ.
ಅವನ ನಾಟಕಗಳು ೨೦ನೇ ಶತಮಾನದಲ್ಲಿ ಬೆಳಕಿಗೆ ಬಂದರೂ ಅವುಗಳಲ್ಲಿ ಊರುಭಂಗ ಮತ್ತು ಕರ್ಣಭಾರನಾಟಕಗಳು ಇಂದಿನ ಅಭಿರುಚಿಗೆ ಹೊಂದುವಂತಿರುವದರಿಂದ ಜನಪ್ರಿಯವಾಗಿ ಸಂಸ್ಕೃತದಲ್ಲಿ , ಇತರ ಭಾಷೆಗಳಲ್ಲಿಯೂ ಅನುವಾದಗೊಂಡು ಪ್ರದರ್ಶನಗೊಳ್ಳುತ್ತಿವೆ. ಅನೇಕ ನಾಟಕಗಳ ಭಾಗಗಳು ಕೊಡಿಯಾಟ್ಟಂನಲ್ಲಿಯೂ ಪ್ರದರ್ಶನಗೊಳ್ಳುತ್ತಿವೆ.
This article uses material from the Wikipedia ಕನ್ನಡ article ಭಾಸ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.