ರೂಪಾಯಿ (ಚಿಹ್ನೆ: ₹; ಸಂಕೇತ: INR) ಭಾರತದ ಅಧಿಕೃತ ನಗದು ವ್ಯವಸ್ಥೆ. ಇದರ ಪ್ರಕಟಣೆ ಮತ್ತು ವಿತರಣೆಯನ್ನು ಭಾರತೀಯ ರಿಜರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ಈ ಹಿಂದೆ ರೂಪಾಯಿಗೆ ಸಾಮಾನ್ಯವಾಗಿ ಬಳಸಲಾಗುವ ಚಿಹ್ನೆಗಳು Rs(ಆಂಗ್ಲ), ₨, रू(ಹಿಂದಿ) ಮತ್ತು ರೂ.(ಕನ್ನಡ). ೨೦೧೦ ರಿಂದ ₹ ಚಿಹ್ನೆಯನ್ನು ಅಧಿಕೃತವಾಗಿ ಬಳಸಲಾಗುತ್ತದೆ. ಆಧುನಿಕ ರೂಪಾಯಿಯು ೧೦೦ ಪೈಸೆಗಳನ್ನು ಹೊಂದಿರುತ್ತದೆ.
ಭಾರತೀಯ ಹಣದ ಚಿಹ್ನೆಯ ಅರ್ಥವನ್ನು ಅರ್ಥಶಾಸ್ತ್ರಜ್ಞರು ತಮ್ಮದೆ ಆದ ವ್ಯಾಪಾರ ದ ಮೂಲಕ ವ್ಯಕ್ತ ಪಡಿಸಿದ್ದಾರೆ. ರೂಪಾಯಿ ಮೇಲಿನ ಎರಡು ಗೆರೆಗಳು ಒಂದು ಬೇಡಿಕೆಯನ್ನು ಸೂಚಿಸಿದರೆ ಇನ್ನೊಂದು ಪೂರೈಕೆಯನ್ನು ಸೂಚಿಸುತ್ತದೆ. ಇದು ನಮ್ಮದೇ ದೇಶದ ಭಾಷೆಯಾದ ಹಿಂದಿ ಭಾಷೆಯಿಂದ ಆಯ್ದು ಕೊಳ್ಳಲಾಗಿದೆ. ಈ ಚಿಹ್ನೆಯ ""ನ್ನು ಹಿಂದಿ ರ/र ಅಕ್ಷರ ದಿಂದ ಆಯ್ದುಕೊಳ್ಳ ಲಾಗಿದೆ.
"ರೂಪಾಯಿ" ಎಂಬ ಪದವು ಸಂಸ್ಕೃತ ಪದ ‘ರೂಪ್ಯ’ ಮೂಲದಿಂದ ಗುಣವಾಚಕವಾಗಿ ರೂಪಿಸಿದ "ಟಂಕಿಸಿದ ಬೆಳ್ಳಿ, ಬೆಳ್ಳಿ ನಾಣ್ಯ" ಎಂದರ್ಥ ಕೊಡುವುದು; ಒಂದು ನಿರ್ದಿಷ್ಟ ಅರ್ಥದಲ್ಲಿ, " ಸುಂದರಾಕೃತಿಯ ನಾಣ್ಯ " ಎಂಬ ಅರ್ಥವನ್ನೂ ಕೊಡುವುದು. ನಾಮಪದ ರೂಪ "ಆಕಾರವನ್ನು ಪಡೆದ ಪ್ರತಿರೂಪದ ಚಿತ್ರ". ಪದ ರೂಪ ಪಡೆದದ್ದು; ಮತ್ತೂ ವಿವರವಾಗಿ ದ್ರಾವಿಡ ಮೂಲ, “ಉರುಪ್ಪು” ಪದದಿಂದ, "ದೇಹದ ಅಂಗ" ಎಂಬ ಅರ್ಥವನ್ನೂ ಹೊಂದಿದೆ.
ಮೊದಲು "ರೂಪಿಯಾ" ಎಂಬ ಹೆಸರಿನ 178 ಧಾನ್ಯಗಳ ತೂಕದ ಬೆಳ್ಳಿ ನಾಣ್ಯವು 1540 ಮತ್ತು 1545. ನಡುವೆ ಚಕ್ರವರ್ತಿ ಶೇರ್ ಷಾ ಸೂರಿಯ ಸಂಕ್ಷಿಪ್ತ ಆಳ್ವಿಕೆಯಲ್ಲಿ ಉತ್ತರ ಭಾರತದಲ್ಲಿ ಮುದ್ರಿಸಲ್ಪಟ್ಟಿತು. ಸೂರಿಯು “ದಾಮ” ಎಂಬ ತಾಮ್ರದ ನಾಣ್ಯಗಳನ್ನು ಮತ್ತು 169 ಧಾನ್ಯಗಳ ತೂಗುವ “ಮೊಹರು” ಎಂಬ ಚಿನ್ನದ ನಾಣ್ಯಗಳನ್ನೂ ಸಹ ಜಾರಿಗೆ ತಂದನು.
ಪುರಾತನ ಭಾರತದಲ್ಲಿ ನಾಣ್ಯ
ಭಾರತದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣೆಗೆ ಬಂದಿದ್ದು ಕ್ರಿ.ಪೂ 6ನೇ ಶತಮಾನದಲ್ಲಿ (ಸರಿ ಸುಮಾರು ಇದೇ ಅವಧಿಯಲ್ಲಿ ಅತ್ತ ಚೀನಾದಲ್ಲಿ ಮತ್ತು ಮಧ್ಯಪ್ರಾಚ್ಯದ ಲಿಡಿಯಾದಲ್ಲಿ ನಾಣ್ಯಗಳು ಟಂಕಿಸಲು ಆರಂಭಿಸಿದ್ದವು).
ಪುರಾತನ ಭಾರತದಲ್ಲಿದ್ದ ಮಹಾಜನಪದರ ಆಡಳಿತ (ಮಗಧ, ಕುರು, ಪಾಂಚಾಲ, ಸೌರಾಷ್ಟ್ರ ಇತ್ಯಾದಿ) ನಾಣ್ಯಗಳನ್ನು ಚಲಾವಣೆಗೆ ತಂದಿತ್ತು. ಬೆಳ್ಳಿಯನ್ನು ಚಪ್ಪಟೆಯಾಗಿ ತಟ್ಟಿ ಅದರಲ್ಲಿ ಚಿತ್ರಗಳನ್ನು ಅಚ್ಚೊತ್ತಲಾಗಿತ್ತು. ಆ ಕಾಲಕ್ಕೆ ಅದನ್ನು ‘ಪುರಾಣ’, ‘ಕರ್ಷಪಣ’ ಅಥವಾ ‘ಪಣ’ ಎಂದು ಕರೆಯುತ್ತಿದ್ದರಂತೆ. ಈ ನಾಣ್ಯಗಳು ನಿಗದಿತ ತೂಕವನ್ನು ಹೊಂದಿದ್ದವು. ಆದರೆ, ಆಕಾರ ಒಂದೇ ರೀತಿಯಲ್ಲಿರಲಿಲ್ಲ. ನಾಣ್ಯದಲ್ಲಿ ಇದ್ದ ಚಿಹ್ನೆಗಳೆಲ್ಲ ಆಯಾ ರಾಜವಂಶಕ್ಕೆ ಸಂಬಂಧಿಸಿದ್ದಾಗಿತ್ತು.
ನಂತರ ಅಧಿಕಾರಕ್ಕೆ ಬಂದ ಮೌರ್ಯರು (ಕ್ರಿ.ಪೂ 322–ಕ್ರಿ.ಪೂ185) ನಾಣ್ಯಕ್ಕೆ ಹೊಸ ರೂಪ ನೀಡಿದರು. ಚಿನ್ನ, ಬೆಳ್ಳಿ, ತಾಮ್ರ ಸೇರಿದಂತೆ ಬೇರೆ ಬೇರೆ ಲೋಹಗಳಿಂದ ನಾಣ್ಯಗಳನ್ನು ಆ ಕಾಲದಲ್ಲಿ ತಯಾರಿಸಲಾಗುತ್ತಿತ್ತು. ಮೌರ್ಯರ ಮೊದಲ ರಾಜ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಚಾಣಕ್ಯ ಬರೆದಿರುವ ‘ಅರ್ಥಶಾಸ್ತ್ರ’ ಗ್ರಂಥದಲ್ಲಿ ನಾಣ್ಯಗಳ ಬಗ್ಗೆ ಉಲ್ಲೇಖ ಇದೆ. ಬೆಳ್ಳಿ ನಾಣ್ಯಗಳನ್ನು ‘ರುಪ್ಯರೂಪ’ ಎಂದು, ಚಿನ್ನದ ನಾಣ್ಯಗಳನ್ನು ‘ಸುವರ್ಣರೂಪ’ ಎಂದು, ತಾಮ್ರದಿಂದ ಮಾಡಿದ ನಾಣ್ಯವನ್ನು ‘ತಾಮರ ರೂಪ’ ಎಂದೂ, ಸೀಸದಿಂದ ಮಾಡಿದ ನಾಣ್ಯವನ್ನು ‘ಸೀಸರೂಪ’ ಎಂದು ಕರೆಯಲಾಗುತ್ತಿತ್ತು. ಮೌರ್ಯರು ತಮ್ಮ ರಾಜಮನೆತನದ ಮಾನದಂಡಕ್ಕೆ ತಕ್ಕಂತಹ ನಾಣ್ಯಗಳನ್ನು ರೂಪಿಸಿದ್ದರು.
ಗ್ರೀಕರ ಕಾಲ
ಆ ಬಳಿಕ ದೇಶದಲ್ಲಿ ಅಧಿಪತ್ಯ ಸಾಧಿಸಿದ ಗ್ರೀಸ್ ಮೂಲದ ರಾಜರು ನಾಣ್ಯಗಳಲ್ಲಿ ರಾಜ್ಯದ ಮುಖ್ಯಸ್ಥರ ಚಿತ್ರಗಳನ್ನು ಅಚ್ಚೊತ್ತಲು ಆರಂಭಿಸಿದರು. ನಾಣ್ಯದ ಒಂದು ಮುಖದಲ್ಲಿ ರಾಜನ ಚಿತ್ರವಿದ್ದರೆ, ಮತ್ತೊಂದು ಮುಖದಲ್ಲಿ ಆತ ಪೂಜಿಸುತ್ತಿದ್ದ ದೇವರ ಚಿತ್ರವನ್ನು ಬಿಡಿಸಲಾಗುತ್ತಿತ್ತು. ಇಂಡೋ-ಗ್ರೀಕ್ ರಾಜರ ವ್ಯಾಪ್ತಿಯಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಿಂದ ಪ್ರೇರಿತರಾಗಿ, ದೇಶದಲ್ಲಿದ್ದ ಇತರ ಆಡಳಿತ ವಂಶಗಳು, ಬುಡಕಟ್ಟು ಪ್ರದೇಶಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿದವರು, ತಮ್ಮದೇ ಆದಂತಹ ನಾಣ್ಯಗಳನ್ನು ತಯಾರಿಸಿ ಚಲಾವಣೆಗೆ ತಂದರು.
ಗುಪ್ತರ ಕಾಲ
ಸುಮಾರು ಕ್ರಿ.ಶ.೭೮ ರಲ್ಲಿ ಬಂದ ಕುಶಾನರೂ ನಾಣ್ಯಗಳನ್ನು ಟಂಕಿಸುತ್ತಿದ್ದರು. ಕುಶಾನರ ಕಾನಿಷ್ಕನ ಕಾಲದ ನಾಣ್ಯಗಳು ಸಿಕ್ಕಿವೆ. ಅದೇ ಕಾಲದಲ್ಲಿ ದಕ್ಷಿಣದ ಆಂಧ್ರದಲ್ಲಿ ಆಳುತ್ತಿದ್ದ ರಾಜರ ನಾಣ್ಯಗಳೂ ಸಿಕ್ಕಿವೆ.
ಹೆಚ್ಚು ಸಂಖ್ಯೆಯಲ್ಲಿ ಚಿನ್ನದ ನಾಣ್ಯಗಳು ಚಲಾವಣೆಗೆ ಬಂದಿದ್ದು ಗುಪ್ತರ ಕಾಲದಲ್ಲಿ. ಗುಪ್ತ ಸಾಮ್ರಾಜ್ಯದ ರಾಜರು ನಡೆಸುತ್ತಿರುವ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಬಿಂಬಿಸುವ ಚಿತ್ರಗಳನ್ನು ನಾಣ್ಯಗಳಲ್ಲಿ ಕೆತ್ತಲಾಗುತ್ತಿತ್ತು. ಸಂಸ್ಕೃತದಲ್ಲಿ ಬರೆದಿದ್ದ ಶಾಸನಗಳನ್ನೂ ಬರೆಯಲಾಗುತ್ತಿತ್ತು. ಸಮುದ್ರಗುಪ್ತನು ಸ್ವತಃ ಕವಿ ಹಾಗೂ ಸಂಗೀತ ಕಲೆಯಲ್ಲಿ ನಿಪುಣ; ಅವನ ನಾಣ್ಯಗಳ ಪೈಕಿ ಒಂದರ ಮೇಲೆ ರಾಜನು ವೀಣೆಯನ್ನು ನುಡಿಸುತ್ತಿರುವ ಚಿತ್ರವಿದೆ.[೨]
ಟರ್ಕಿಯ ಸುಲ್ತಾನರು ಉತ್ತರ ಭಾರತಕ್ಕೆ ಬಂದು ಅಧಿಕಾರ ಸ್ಥಾಪಿಸುವವರೆಗೆ ಈ ಬಗೆಯ ನಾಣ್ಯಗಳ ಸಂಪ್ರದಾಯ ಮುಂದುವರೆಯಿತು.
ರೂಪಾಯಿ ಹೆಸರು ಉಗಮ
೧೩ನೇ ಶತಮಾನದ ಆರಂಭದಲ್ಲಿ ಧಾಳಿಮಾಡಿದ ಮಹಮದ್ ಘೋರಿಯ ಸೇನಾಧಿಪತಿ ಕುತ್ಬುದ್ದೀನ್ ಮತ್ತು ಅವನ ನಂತರದವರೂ ತಮ್ಮದೇ ನಾಣ್ಯಗಳನ್ನು ಜಾರಿಗೆ ತಂದಿದ್ದರು. ಬಲ್ಬನ್ನ ಕಾಲದ ನಾಣ್ಯಗಳೂ ಸಿಕ್ಕಿವೆ.
ನಂತರ 16ನೇ ಶತಮಾನದಲ್ಲಿ (ಕ್ರಿ.ಶ 1526) ಮೊಘಲ್ರು ಸಾಮ್ರಾಜ್ಯ ಅಧಿಪತ್ಯ ಸ್ಥಾಪಿಸುವುದರೊಂದಿಗೆ ಭಾರತದ ಹಣಕಾಸು ವ್ಯವಸ್ಥೆ ಮತ್ತೊಂದು ಮಜಲಿಗೆ ತೆರೆದುಕೊಂಡಿತು. ತಮ್ಮ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಏಕರೂಪದ ಮತ್ತು ಸಂಘಟಿತ ಹಣಕಾಸು ವ್ಯವಸ್ಥೆಯನ್ನು ಮೊಘಲರು ಜಾರಿಗೆ ತಂದರು. ನಂತರ ಬಂದಿದ್ದೇ ರೂಪಾಯಿ.
1540ರ ನಂತರದಲ್ಲಿ ನಾಣ್ಯಗಳನ್ನು ರೂಪಾಯಿ ಮಾನದಂಡದಲ್ಲಿ ಅಳೆಯುವ ಪದ್ಧತಿ ಜಾರಿಗೆ ಬಂತು. ಇದಕ್ಕೆ ಕಾರಣೀಭೂತನಾದವನು ಉತ್ತರ ಭಾರತದಲ್ಲಿ ಸುರ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಶೇರ್ ಷಾ ಸೂರಿ ಎಂಬ ಆಫ್ಘಾನಿಸ್ತಾನ ಮೂಲದ ಪಠಾಣ್ ಸಮುದಾಯದ ರಾಜ. ಈ ಶೇರ್ ಖಾನ್ ಮೊದಲು "ರೂಪಿಯಾ" ಎಂಬ ಹೆಸರಿನ 178 ಧಾನ್ಯಗಳ ತೂಕದ ಬೆಳ್ಳಿ ನಾಣ್ಯವು 1540 ಮತ್ತು 1545. ನಡುವೆ ಚಕ್ರವರ್ತಿ ಶೇರ್ ಷಾ ಸೂರಿಯ ಸಂಕ್ಷಿಪ್ತ ಆಳ್ವಿಕೆಯಲ್ಲಿ ಉತ್ತರ ಭಾರತದಲ್ಲಿ ಮುದ್ರಿಸಲ್ಪಟ್ಟಿತು. ಸೂರಿಯು “ದಾಮ” ಎಂಬ ತಾಮ್ರದ ನಾಣ್ಯಗಳನ್ನು ಮತ್ತು 169 ಧಾನ್ಯಗಳ ತೂಗುವ “ಮೊಹರು” ಎಂಬ ಚಿನ್ನದ ನಾಣ್ಯಗಳನ್ನೂ ಸಹ ಜಾರಿಗೆ ತಂದನು. [೧]
ರೂಪಾಯಿ ಹೆಸರಿನ ಈ ಬಗೆಯ ಬೆಳ್ಳಿ ನಾಣ್ಯ ಮೊಘಲ್ ಅವಧಿಯಲ್ಲಿ,ನಂತರ ಮರಾಠಾ ಯುಗದಲ್ಲಿ ಹಾಗೂ ಬ್ರಿಟಿಷ್ ಭಾರತ ಬಳಕೆಯಲ್ಲಿ ಬಂದವು
ಬ್ರಿಟಿಷ್ ಕಂಪನಿಯ ನಾಣ್ಯ
1717ರಲ್ಲಿ ಬ್ರಿಟಿಷರು, ಬಾಂಬೆಯಲ್ಲಿದ್ದ ಮೊಘಲರ ನಾಣ್ಯ ತಯಾರಿಕಾ ಕೇಂದ್ರದಲ್ಲಿ ನಾಣ್ಯ ತಯಾರಿಸಲು ಅನುಮತಿ ಪಡೆದುಕೊಂಡರು. ಅಲ್ಲಿ ಬ್ರಿಟಿಷ್ ಆಡಳಿತ ಚಿನ್ನ, ಬೆಳ್ಳಿ ತಾಮ್ರ ಮತ್ತು ತಗಡಿನಿಂದ (ಟಿನ್) ನಾಣ್ಯಗಳನ್ನು ತಯಾರಿಸಲು ಆರಂಭಿಸಿತು. ಚಿನ್ನದ ನಾಣ್ಯವನ್ನು ಕ್ಯಾರೊಲಿನಾ ಎಂದು, ಬೆಳ್ಳಿ ನಾಣ್ಯವನ್ನು ಏಂಜಲಿನಾ ಎಂದೂ, ತಾಮ್ರ ನಾಣ್ಯವನ್ನು ಕುಪ್ಪರೊನ್ ಹಾಗೂ ತಗಡಿನ ನಾಣ್ಯವನ್ನು ಟಿನ್ನಿ ಎಂದು ಕರೆಯಲಾಗುತ್ತಿತ್ತು.
ಬ್ರಿಟಿಷ್ ಇಂಡಿಯಾದಲ್ಲಿ ದೇಶದ ಮೊದಲ ಕಾಗದದ ಹಣ ತಯಾರಾಯಿತು. ಬ್ಯಾಂಕ್ ಆಫ್ ಹಿಂದೊಸ್ತಾನ್ 1770ರಲ್ಲಿ ಮೊದಲ ಕಾಗದದ ನೋಟನ್ನು ಬಿಡುಗಡೆ ಮಾಡಿತು. ಜನರಲ್ ಬ್ಯಾಂಕ್ ಆಫ್ ಬೆಂಗಾಲ್ ಮತ್ತು ಬೆಂಗಾಲ್ ಬ್ಯಾಂಕ್ ಕೂಡ ಕಾಗದದ ಹಣವನ್ನು ಚಲಾವಣೆಗೆ ತಂದವು. ಈ ಕಾಗದದ ನೋಟನ್ನು ಬೆಳ್ಳಿ ನಾಣ್ಯಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಇತ್ತು.
1835ರಲ್ಲಿ ಬ್ರಿಟಿಷರು ದೇಶದಾದ್ಯಂತ ಏಕರೂಪದ ನಾಣ್ಯಗಳನ್ನು ಬಳಸುವುದಕ್ಕಾಗಿ ನಾಣ್ಯ ಪದ್ಧತಿ ಕಾಯ್ದೆಯನ್ನೇ ಜಾರಿಗೆ ತಂದರು. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ತಮ್ಮ ವಸಾಹತುಗಳಲ್ಲಿ ರೂಪಾಯಿ ಪದ್ಧತಿಯನ್ನು ಅಧಿಕೃತವಾಗಿ ಜಾರಿಗೆ ತಂದರು. ಹಿಂದಿನ ನೋಟುಗಳು ಮತ್ತು ನಾಣ್ಯಗಳಲ್ಲಿದ್ದ ಸ್ಥಳೀಯ ಆಡಳಿತದ ಚಿಹ್ನೆಗಳ ಬದಲಿಗೆ ಬ್ರಿಟಿಷ್ ಆಡಳಿತಗಾರರ ಚಿತ್ರಗಳನ್ನು ಮುದ್ರಿಸಲು ಆರಂಭಿಸಿದರು. 1862ರಲ್ಲಿ ಬ್ರಿಟನ್ ರಾಣಿ ವಿಕ್ಟೋರಿಯಾ ಗೌರವಾರ್ಥ ಅವರ ಚಿತ್ರಗಳನ್ನೊಳಗೊಂಡ ಸರಣಿ ನೋಟುಗಳು ಮತ್ತು ನಾಣ್ಯಗಳು ಚಲಾವಣೆಗೆ ಬಂದವು.
ಮೊಘಲ್ ಚಕ್ರವರ್ತಿ II ನೇ ಶಾ ಆಲಮ್ ಪೂರ್ವ ಭಾರತದ ದೊಡ್ಡ ಭಾಗಗಳ ಆದಾಯವನ್ನು ಸಂಗ್ರಹಿಸಲು ಈಸ್ಟ್ ಇಂಡಿಯಾ ಕಂಪನಿಯ ಹಕ್ಕನ್ನು ಒಪ್ಪಿ ಅಲಹಾಬಾದ್ ಒಪ್ಪಂದಕ್ಕೆ ಸಹಿ ಮಾಡಿದನು. ಆರಂಭಿಕ ಬಂಗಾಳ ಸಮಸ್ಯೆಗಳು ಮೊಘಲ್ ಚಕ್ರವರ್ತಿ ಅಲಮಗಿರ್ II, ಹಾಗೂ ನಂತರ ಶಾ ಆಲಮ್ II ರ ಹೆಸರಿನಲ್ಲಿ ಇರಿಸಲಾಯಿತು. ಈ ವಿತ್ತೀಯ ವ್ಯವಸ್ಥೆಯು "ಭಾರತೀಯ ಸ್ಟ್ಯಾಂಡರ್ಡ್" ಎಂದು, 1 ಏಪ್ರಿಲ್ 1957 ರ ತನಕ ಇದು ನಡೆಯಿತು.
ರಾಣಿ ವಿಕ್ಟೋರಿಯಾಳ ಕಿರೀಟಸಹಿತ ವರುವ ಎದೆಮಟ್ಟದ ಚಿನ್ನದ ನಾಣ್ಯಗಳು 1862 ರ ಆರಂಭದಲ್ಲಿದ್ದು ಈ ನಾಣ್ಯಗಳು ಹಿಂದಿನ ತೂಕವನ್ನೇ ಹೋದಿತ್ತು; ಒಂದು ಮೊಹರು ನಾಣ್ಯ ಒಂದು ತೊಲ(11.66 ಗ್ರಾಂ = ಒಂದು ತೊಲ) ಮತ್ತು ಅದು (0.9167) ಉತ್ಕೃಷ್ಟತೆಯ ಚಿನ್ನ ಒಳಗೊಂಡಿತ್ತು.
ವಿಕ್ಟೋರಿಯಾ ರಾಣಿ 'ಮೊಹರುಗಳು ವರ್ಷದ 1870 ರ ಜೊತೆ 1875,ಹಾಗೂ ವಿಕ್ಟೋರಿಯಾಳ ಉತ್ತಮಪಡಿಸಿದ ಅದೇ ಚಿತ್ರದೊಂದಿಗೆ ಬಂದವು. 1876 ರಲ್ಲಿ ವಿಕ್ಟೋರಿಯಾ 'ಭಾರತದ ಮಹಾರಾಣಿ' ಎಂಬ ಬಿರುದನ್ನು ಪಡೆದರು. ಆಗ 1877 ರಿಂದ, ಎಲ್ಲಾ ನಾಣ್ಯಗಳನ್ನು ಮೇಲಿರುವ 'ವಿಕ್ಟೋರಿಯಾ ಮಹಾರಾಣಿ' ಎಂಬ ಹೆಸರಿಗೆ ಬದಲಾಯಿಸಲಾಯಿತು, ಈ ಹೊಸ ಚಿನ್ನದ ಮೊಹರುಗಳನ್ನು 1877 ಮತ್ತು 1891 ನಡುವೆ ನೀಡಲಾಯಿತು.
15 ರೂಪಾಯಿ (ಅಂದಾಜು) = 1 ಮೊಹರು. (ಒಂದು ತೊಲ ಚಿನ್ನದ ಬೆಲೆ)
ನಾಣ್ಯಗಳು
ಕಾಗದದ ಹಣ
1861 ರಲ್ಲಿ, ಭಾರತ ಸರ್ಕಾರವು ತನ್ನ ಮೊದಲ ಕಾಗದದ ಹಣ ಪರಿಚಯಿಸಿತು. 1864 ರಲ್ಲಿ 10 ರೂಪಾಯಿ ನೋಟುಗಳು; 1872 ರಲ್ಲಿ 5 ರೂಪಾಯಿ ನೋಟುಗಳು; 1899 ರಲ್ಲಿ 10,000 ರೂಪಾಯಿ ನೋಟುಗಳು;, 1900 ರಲ್ಲಿ 100 ರೂಪಾಯಿ ನೋಟುಗಳು;, 1905 ರಲ್ಲಿ 50 ರೂಪಾಯಿ ನೋಟುಗಳು, 1907 ರಲ್ಲಿ 500 ರೂಪಾಯಿ ನೋಟುಗಳು; ಮತ್ತು 1909 ರಲ್ಲಿ 1000 ರೂಪಾಯಿ ನೋಟುಗಳು; 1917 ರಲ್ಲಿ 1- ಮತ್ತು 2 1/2-ರೂಪಾಯಿ ನೋಟುಗಳು ಪರಿಚಯಿಸಲಾಯಿತು. 1938 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ನೊಟೆ ಉತ್ಪಾದನೆ ಆರಂಭಿಸಿತ್ತು. ಅದು 2, 5, 10, 50, 100, 1,000 ಮತ್ತು 10,000 ರೂಪಾಯಿ ನೋಟುಗಳನ್ನು ನೀಡುವ ಹೊಣೆ ಹೊಂದಿತು. ಸರ್ಕಾರ 1 ರೂಪಾಯಿ ನೋಟುಗಳನ್ನು ಮಾತ್ರಾ ನೀಡುವುದನ್ನು ಮುಂದುವರೆಸಿದೆ.
ಆರ್.ಬಿ.ಐ
1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸ್ಥಾಪನೆಯಾಯಿತು. ನಾಣ್ಯ, ನೋಟುಗಳ ಮುದ್ರಣ ಮತ್ತು ದೇಶದಾದ್ಯಂತ ಅವುಗಳನ್ನು ಚಲಾವಣೆಗೆ ತರುವ ಹೊಣೆಯನ್ನು ಅದು ಹೊತ್ತುಕೊಂಡಿತು. 1938ರಲ್ಲಿ ಅದು 5 ರೂಪಾಯಿ ಮುಖಬೆಲೆಯ ಮೊದಲ ನೋಟನ್ನು ಮುದ್ರಿಸಿತು. ಬ್ರಿಟನ್ ರಾಜ 6ನೇ ಜಾರ್ಜ್ನ ಚಿತ್ರವನ್ನು ನೋಟಿನಲ್ಲಿ ಮುದ್ರಿಸಲಾಗಿತ್ತು. 10 ಸಾವಿರ ಮುಖಬೆಲೆಯ ನೋಟನ್ನೂ ಅದು ಮುದ್ರಿಸಿತು. ಸ್ವಾತಂತ್ರ್ಯ ನಂತರ ಅದರ ಮಾನ್ಯತೆಯನ್ನು ರದ್ದುಗೊಳಿಸಿತು.
ಎರಡನೇ ವಿಶ್ವ ಮಹಾಯುದ್ಧದಲ್ಲಿ ಬೆಳ್ಳಿ ಲೋಹಕ್ಕೆ ತೀವ್ರ ಕೊರತೆ ಉಂಟಾಯಿತು. ಹಾಗಾಗಿ ಒಂದು ರೂಪಾಯಿ, 2 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು ಅನಿವಾರ್ಯವಾಯಿತು. ಸಣ್ಣ ಮುಖಬೆಲೆಯ ಬೆಳ್ಳಿಯ ನಾಣ್ಯಗಳ ಬದಲಿಗೆ, ತಾಮ್ರ-ನಿಕ್ಕೆಲ್ಗಳಿಂದ ಮಾಡಿದ ನಾಣ್ಯಗಳು ಚಲಾವಣೆಗೆ ಬಂತು. 1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡ ನಂತರವೂ ಸ್ವಲ್ಪ ಸಮಯದ ಕಾಲ ಹಳೆಯ ಹಣಕಾಸು ಪದ್ಧತಿಯೇ ಮುಂದುವರಿಯಿತು.
1950ರ ಆಗಸ್ಟ್ 15ರ ನಂತರ ನೋಟುಗಳಲ್ಲಿ ಮತ್ತು ನಾಣ್ಯಗಳಲ್ಲಿ ಬ್ರಿಟಿಷ್ ಆಡಳಿತಗಾರರ ಚಿತ್ರದ ಬದಲಿಗೆ ಅಶೋಕ ಸ್ತಂಭದ ಚಿತ್ರ ಮುದ್ರಿಸಲಾಯಿತು. ಅಲ್ಲಿಂದ ಮುಂದೆ ಭಾರತೀಯ ಹಣಕಾಸು ವ್ಯವಸ್ಥೆ ಮತ್ತೊಂದು ಹಂತಕ್ಕೆ ಕಾಲಿರಿಸಿತು. (ಆಣೆ ವ್ಯವಸ್ಥೆಯಲ್ಲಿ ಒಂದು ರೂಪಾಯಿ ಎಂದರೆ 16 ಆಣೆ (ಅಥವಾ 96(ಕಾಸು) ಪೈಸೆ ಆಗಿತ್ತು).
1955ರಲ್ಲಿ ಭಾರತೀಯ ನಾಣ್ಯ ಪದ್ಧತಿ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. 1957ರ ಏಪ್ರಿಲ್ 1ರಿಂದ ಜಾರಿಗೆ ಬಂತು. ಒಂದು ರೂಪಾಯಿ ಎಂದರೆ 100 ಪೈಸೆ ಎಂಬ ಮಾನದಂಡವನ್ನು ಅಂದಿನಿಂದ ಅನುಸರಿಸಲಾಯಿತು. ಅಂಧರಿಗೂ ಗುರುತಿಸಲು ಸುಲಭವಾಗುವ ರೀತಿಯಲ್ಲಿ ವಿವಿಧ ಆಕಾರದ ನಾಣ್ಯಗಳನ್ನು ಆರ್ಬಿಐ ಬಿಡುಗಡೆ ಮಾಡಿತು. 1969ರಲ್ಲಿ ಮಹಾತ್ಮ ಗಾಂಧಿ ಅವರ ಜನ್ಮಶತಮಾನೋತ್ಸವದ ಗೌರವಾರ್ಥ ಅವರ ಚಿತ್ರವಿರುವ ನೋಟುಗಳನ್ನು ಬಿಡುಗಡೆಗೊಳಿಸಲಾಯಿತು.
2010ರ ಜುಲೈನಲ್ಲಿ ರೂಪಾಯಿಗೆ ಒಂದು ಚಿಹ್ನೆಯೂ ಸಿಕ್ಕಿತು. ಆ ಮೂಲಕ ಕರೆನ್ಸಿಗೆ ಚಿಹ್ನೆ ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿತು. ಅದಕ್ಕೂ ಮೊದಲು ರೂ, Rs ಎಂದೆಲ್ಲ ಬರೆಯಲಾಗುತ್ತಿತ್ತು. ಈಗ ಈ "₹" ಚಿಹ್ನೆ (ಮೇಲೆ ಅಂಕಣದಲ್ಲಿ ದೊಡ್ಡದಾಗಿ ಕೊಟ್ಟಿದೆ.)ಉಪಯೋಗಿಸಬಹುದು.ಉದಯ ಕುಮಾರ್ ಧರ್ಮಲಿಂಗಂ ಎಂಬುವವರು ಈ ಚಿಹ್ನೆಯ ವಿನ್ಯಾಸಕಾರ.
ಅನಾಣ್ಯೀಕರಣ
ಭಾರತ ಸರ್ಕಾರದ ಘೋಷಿಸಲ್ಪಡದ ಕಪ್ಪು ಹಣ ಪರೀಕ್ಷಿಸಲು, ಇದಲ್ಲದೆ ಕಪ್ಪು ಹಣ ಎದುರಿಸಲು, ಒಂದು ಪ್ರಮುಖ ನಿರ್ಧಾರವಾಗಿ, 8 ನವೆಂಬರ್ 2016 ರಲ್ಲಿ ಅದೇ ದಿನದ ಮಧ್ಯರಾತ್ರಿಯಿಂದಲೇ ಜಾರಿಗೆಬರುವಂತೆ, ರೂ.500 ಮತ್ತು ರೂ.1000 ಬ್ಯಾಂಕ್ ನೋಟುಗಳು ಅಮಾನ್ಯವಾಗಿದೆ ಎಂದು ಅನಾಣ್ಯೀಕರಣ ಘೋಷಿಸಿತು. ನಿಗದಿತ ಉದ್ದೇಶ: ನಕಲಿ ಕರೆನ್ಸಿ ಮತ್ತು ಭ್ರಷ್ಟಾಚಾರ ತೊಡೆದುಹಾಕಲು (ಭಯೋತ್ಪಾದನೆಯ ಹಣಕಾಸು ಬಳಸಲಾಗುತ್ತದೆ). ರೂ.500 ಬ್ಯಾಂಕ್ನೊಟನ್ನು ಹೊಸದಾಗಿ ಮರುವಿನ್ಯಾಸಗೊಳಿಸಲಾಯಿತು; ಜೊತೆಗೆ ದಿ.10 ನವೆಂಬರ್ 2016 ರಿಂದ ಹೊಸ ಸರಣಿ,ರೂ.2000 ಬ್ಯಾಂಕ್ನೊಟನ್ನು ಚಲಾವಣೆಗೆ ಕೊಡಲಾಯಿತು.
This article uses material from the Wikipedia ಕನ್ನಡ article ಭಾರತದ ರೂಪಾಯಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.