ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ರು (೨೭ ಜೂನ್ ೧೮೩೮ – ೮ ಏಪ್ರಿಲ್ ೧೮೯೪) ( ಬಂಗಾಳಿ:বঙ্কিম চন্দ্র চট্টোপাধ্যায় ಬೋಂಗ್ಕಿಂ ಚೋಂದ್ರೊ ಚೋಟ್ಟೋಪಾದ್ಧೇ ) (ಮೂಲ ಬಂಗಾಳಿಯಲ್ಲಿ ಈ ಹೆಸರು 'ಚಟ್ಟೋಪಾಧ್ಯಾಯ' ಎಂದಿದ್ದರೂ ಸಹ, ಬ್ರಿಟಿಷರು ಇದನ್ನು 'ಚಟರ್ಜಿ' ಎಂದು ಉಚ್ಚರಿಸುತ್ತಿದ್ದರು) ಭಾರತದ ಓರ್ವ ಬಂಗಾಳಿ ಕವಿ, ಕಾದಂಬರಿಕಾರ, ಪ್ರಬಂಧಕಾರ ಮತ್ತು ಪತ್ರಕರ್ತರಾಗಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೇರೇಪಿಸಿದ ವಂದೇ ಮಾತರಮ್ ಗೀತೆಯ ಕವಿಯಾಗಿ ಇವರು ಅತ್ಯಂತ ಪ್ರಸಿದ್ಧರಾಗಿದ್ದರು. ಇದೇ ಗೀತೆಯು ನಂತರದಲ್ಲಿ ಭಾರತದ ರಾಷ್ಟ್ರೀಯ ಗೀತೆಯಾಗಿ ಘೋಷಿಸಲ್ಪಟ್ಟಿತು.
ಬಂಕಿಮ ಚಂದ್ರ ಚಟ್ಟೋಪಾಧ್ಯಾಯ বঙ্কিমচন্দ্র চট্টোপাধ্যায় | |
---|---|
ಜನನ | ಕಾಂಚಲಪಾಡ,ನೈಹಾತಿ, ಬಂಗಾಳ ಭಾರತ | ೨೭ ಜೂನ್ ೧೮೩೮
ಮರಣ | 8 April 1894 ಕೊಲ್ಕತ್ತ, ಬಂಗಾಳ ಪ್ರಾಂತ್ಯ, ಭಾರತ | (aged 55)
ವೃತ್ತಿ | ಸರ್ಕಾರಿ ನೌಕರ (ಡೆಪ್ಯುಟಿ ಕಲೆಕ್ಟರ್), ಬರಹಗಾರ |
ರಾಷ್ಟ್ರೀಯತೆ | ಭಾರತೀಯ |
ಜನಾಂಗೀಯತೆ | ಬಂಗಾಳಿ ಬ್ರಾಹ್ಮಣ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಕಲ್ಕತ್ತಾ ವಿಶ್ವವಿದ್ಯಾಲಯ |
ಪ್ರಕಾರ/ಶೈಲಿ | ಕವಿ. ಕಾದಂಬರಿಕಾರ, ವ್ಯಾಖ್ಯಾನಕಾರ, ಪತ್ರಕರ್ತ |
ವಿಷಯ | ಸಾಹಿತ್ಯ |
ಸಾಹಿತ್ಯ ಚಳುವಳಿ | ಬಂಗಾಲದ ಪುನುರುತ್ತಾನ |
ಪ್ರಮುಖ ಕೆಲಸ(ಗಳು) | ವಂದೇಮಾತರಂ ಗೀತೆಯ ರಚನೆ |
ಬಂಗಾಳದ, ಅಷ್ಟೇ ಏಕೆ ಭಾರತದ ಸಾಹಿತ್ಯಿಕ ಪುನರುದಯದಲ್ಲಿನ ಓರ್ವ ಪ್ರಮುಖ ವ್ಯಕ್ತಿಯಾಗಿ ಚಟರ್ಜಿಯವರನ್ನು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಕಾದಂಬರಿಗಳು, ಪ್ರಬಂಧಗಳು ಮತ್ತು ವ್ಯಾಖ್ಯಾನಗಳನ್ನು ಒಳಗೊಂಡಂತಿರುವ ಅವರ ಕೆಲವೊಂದು ಬರಹಗಳು ಸಾಂಪ್ರದಾಯಿಕವಾದ ಛಂದೋಬದ್ಧ ಪದ್ಯ-ಉದ್ದೇಶಿತ ಭಾರತೀಯ ಬರಹಗಳಿಗಿಂತ ವಿಭಿನ್ನವಾದ ಒಂದು ಹೊರಳುದಾರಿಯನ್ನು ತುಳಿದವು, ಮತ್ತು ಭಾರತದ ಉದ್ದಗಲಕ್ಕೂ ಇರುವ ಲೇಖಕರಿಗೆ ಸಂಬಂಧಿಸಿದಂತೆ ಒಂದು ಪ್ರೇರಣೆಯನ್ನು ಒದಗಿಸಿದವು.
ನೈಹತಿಯಲ್ಲಿರುವ ಕಂಥಾಲಪಾರ ಹಳ್ಳಿಯಲ್ಲಿ ಒಂದು ಸಂಪ್ರದಾಯನಿಷ್ಠ ಬಂಗಾಳಿ ಬ್ರಾಹ್ಮಣ ಕುಟುಂಬದಲ್ಲಿ, ಮೂವರು ಸೋದರರ ಪೈಕಿ ಅತ್ಯಂತ ಕಿರಿಯವರಾಗಿ ಚಟ್ಟೋಪಾಧ್ಯಾಯರು ಜನಿಸಿದರು. ಯಾದವ್ (ಅಥವಾ ಬಾದಬ್) ಚಂದ್ರ ಚಟ್ಟೋಪಾಧ್ಯಾಯ ಮತ್ತು ದುರ್ಗಾದೇಬಿ ಇವರ ಹೆತ್ತವರು. ಅವರ ಕುಟುಂಬವು ಸಂಪ್ರದಾಯನಿಷ್ಠವಾಗಿತ್ತು ಮತ್ತು ಓರ್ವ ಸರ್ಕಾರಿ ಅಧಿಕಾರಿಯಾಗಿದ್ದ ಅವರ ತಂದೆಯು ಮಿಡ್ನಾಪುರದ ಉಪ-ಜಿಲ್ಲಾಧಿಕಾರಿಯ ಹುದ್ದೆಗೇರಿದರು. ಅವರ ಸೋದರರ ಪೈಕಿ ಒಬ್ಬರಾದ ಸಂಜೀಬ್ ಚಂದ್ರ ಚಟರ್ಜಿಯವರೂ ಸಹ ಓರ್ವ ಕಾದಂಬರಿಕಾರರಾಗಿದ್ದರು ಮತ್ತು "ಪಲಮಾವು" ಎಂಬ ತಮ್ಮ ಪ್ರಸಿದ್ಧ ಪುಸ್ತಕದಿಂದಾಗಿ ಅವರು ಚಿರಪರಿಚಿತರಾಗಿದ್ದಾರೆ.
ಹೂಗ್ಲಿ-ಚಿನ್ಸುರಾದಲ್ಲಿನ ಮೊಹ್ಸಿನ್ ಕಾಲೇಜಿನಲ್ಲಿ ಮತ್ತು ನಂತರದಲ್ಲಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ಕಲಾವಿಭಾಗದಲ್ಲಿನ ಒಂದು ಪದವಿಯೊಂದಿಗೆ ೧೮೫೭ರಲ್ಲಿ ತೇರ್ಗಡೆಯಾದರು. ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಇಬ್ಬರು ಪದವೀಧರರ ಪೈಕಿ ಅವರು ಒಬ್ಬರಾಗಿದ್ದರು. ಇಷ್ಟೇ ಅಲ್ಲದೇ ನಂತರ ೧೮೬೯ರಲ್ಲಿ ಒಂದು ಕಾನೂನು ಪದವಿಯನ್ನೂ ಅವರು ಗಳಿಸಿದರು.
ತಮ್ಮ ತಂದೆಯ ರೀತಿಯಲ್ಲಿಯೇ ಜೆಸ್ಸೋರ್ನ ಉಪ-ಜಿಲ್ಲಾಧಿಕಾರಿಯಾಗಿ ಅವರು ನೇಮಿಸಲ್ಪಟ್ಟರು; ಓರ್ವ ಉಪ-ನ್ಯಾಯಾಧಿಪತಿಯ ಹುದ್ದೆಗೇರಿದ ಚಟರ್ಜಿಯವರು ೧೮೯೧ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು. ಆಡಳಿತ ನಡೆಸುತ್ತಿದ್ದ ಬ್ರಿಟಿಷರೊಂದಿಗೆ ಘರ್ಷಣೆಗೆ ಇಳಿಯಲು ಕಾರಣವಾಗುವಂಥ ಘಟನೆಗಳು ಅವರು ತಮ್ಮ ಕಾರ್ಯಕ್ಷೇತ್ರದಲ್ಲಿದ್ದಾಗಿನ ವರ್ಷಗಳಲ್ಲಿ ದಟ್ಟವಾಗಿ ತುಂಬಿಕೊಂಡಿದ್ದವು. ಆದಾಗ್ಯೂ, ೧೮೯೪ರಲ್ಲಿ ಭಾರತದ ಸಾಮ್ರಾಜ್ಯದ ಸಹಯೋಗಿ ದರ್ಜೆಯ ಒಂದು ಹುದ್ದೆಯನ್ನು ಅವರಿಗೆ ನೀಡಲಾಯಿತು.
ಈಶ್ವರಚಂದ್ರ ಗುಪ್ತರ ಮಾದರಿಯ ಅನುಸರಣೆಯಲ್ಲಿ ಛಂದೋಬದ್ಧ-ಪದ್ಯದ ಓರ್ವ ಬರಹಗಾರ/ಕವಿಯಾಗಿ ಚಟರ್ಜಿಯವರು ತಮ್ಮ ಸಾಹಿತ್ಯಿಕ ವೃತ್ತಿಜೀವನವನ್ನು ಆರಂಭಿಸಿದರು. ಆದಾಗ್ಯೂ, ತಮ್ಮ ಪ್ರತಿಭೆಯು ಬೇರೆಯದೇ ಆದ ದಿಕ್ಕಿನಲ್ಲಿ ಬೆಳಗಬೇಕಿದೆ ಎಂಬುದನ್ನು ಅವರು ಕೆಲವೇ ದಿನಗಳಲ್ಲಿ ಅರಿತುಕೊಂಡರು, ಮತ್ತು ಕಾದಂಬರಿ ಪ್ರಕಾರಕ್ಕೆ ತಿರುಗಿದರು. ಒಂದು ಘೋಷಿತ ಬಹುಮಾನಕ್ಕಾಗಿ ಸಲ್ಲಿಸಲ್ಪಟ್ಟ ಬಂಗಾಳಿ ಭಾಷೆಯಲ್ಲಿನ ಕಾದಂಬರಿಯೊಂದು ಅವರ ಪ್ರಥಮ ಪ್ರಯತ್ನವಾಗಿತ್ತು. ಅವರು ಸದರಿ ಬಹುಮಾನವನ್ನು ಗೆಲ್ಲಲಿಲ್ಲ, ಮತ್ತು ಆ ಕಿರುಕಾದಂಬರಿಯು ಎಂದಿಗೂ ಪ್ರಕಟಗೊಳ್ಳಲಿಲ್ಲ. ರಾಜ್ಮೋಹನ್'ಸ್ ವೈಫ್ ಎಂಬುದು ಮುದ್ರಣವನ್ನು ಕಂಡ ಅವರ ಮೊದಲ ಕಾದಂಬರಿಯಾಗಿತ್ತು. ಇದು ಇಂಗ್ಲಿಷ್ನಲ್ಲಿ ಬರೆಯಲ್ಪಟ್ಟಿತು ಮತ್ತು ಪ್ರಾಯಶಃ ಇದು ಘೋಷಿತ ಬಹುಮಾನಕ್ಕಾಗಿ ಸಲ್ಲಿಸಲ್ಪಟ್ಟ ಕಿರುಕಾದಂಬರಿಯ ಒಂದು ಅನುವಾದವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಅವರ ಮೊದಲ ಬಂಗಾಳಿ ರಮ್ಯ-ಸಾಹಿತ್ಯ ಕೃತಿ ಮತ್ತು ಬಂಗಾಳಿ ಭಾಷೆಯಲ್ಲಿನ ಮೊಟ್ಟಮೊದಲ ಕಾದಂಬರಿಯಾದ ದುರ್ಗೇಶ್ನೊಂದಿನಿ ೧೮೬೫ರಲ್ಲಿ ಪ್ರಕಟಿಸಲ್ಪಟ್ಟಿತು.
ಕಪಾಲಕುಂಡಲ (೧೮೬೬) ಎಂಬುದು ಚಟರ್ಜಿಯವರ ಮೊದಲ ಪ್ರಮುಖ ಪ್ರಕಟಣೆಯಾಗಿದೆ. ಈ ಕಾದಂಬರಿಯ ಕಥಾನಾಯಕಿಗೆ ಭವಭೂತಿಯ ಮಾಲತಿ ಮಾಧವ ಕೃತಿಯಲ್ಲಿ ಬರುವ ಭಿಕ್ಷೆಬೇಡುವ ಹೆಂಗಸಿನ ಹೆಸರನ್ನು ಇರಿಸಲಾಗಿದೆ. ಈ ಪಾತ್ರವು ಆಂಶಿಕವಾಗಿ ಕಾಳಿದಾಸನ ಶಾಕುಂತಲಾ ಮತ್ತು ಆಂಶಿಕವಾಗಿ ಷೇಕ್ಸ್ಪಿಯರ್ನ ಮಿರಾಂಡ ಳ ಮಾದರಿಯಲ್ಲಿದೆ. ಆದಾಗ್ಯೂ, ಸದರಿ ಆಂಶಿಕ ಹೋಲಿಕೆಗಳು ವಿಮರ್ಶಕರಿಂದ ಮಾಡಲ್ಪಟ್ಟಿರುವ ತಾರ್ಕಿಕ ನಿರ್ಣಯದ ವಿಶ್ಲೇಷಣೆಯಷ್ಟೇ ಆಗಿದ್ದು, ಚಟರ್ಜಿಯವರ ಕಥಾನಾಯಕಿಯು ಸಂಪೂರ್ಣವಾಗಿ ಅವರದ್ದೇ ಮೂಲಸೃಷ್ಟಿಯಾಗಿರಬಹುದಾಗಿದೆ. ಕೊಂಟಾಯ್ ಉಪವಿಭಾಗದಲ್ಲಿರುವ ದರಿಯಾಪುರ್ನ್ನು ಈ ಪ್ರಸಿದ್ಧ ಕಾದಂಬರಿಯ ಹಿನ್ನೆಲೆಯಾಗಿ ಅವರು ಆರಿಸಿಕೊಂಡಿದ್ದರು.
ಮೃಣಾಲಿನಿ (೧೮೬೯) ಎಂಬ ಅವರ ಮುಂದಿನ ರಮ್ಯ-ಸಾಹಿತ್ಯ ಕೃತಿಯು ಒಂದು ಬೃಹತ್ತಾದ ಐತಿಹಾಸಿಕ ಸಂದರ್ಭಕ್ಕೆ ಪ್ರತಿಯಾಗಿ ತಮ್ಮ ಕಥೆಯನ್ನು ಸಜ್ಜುಗೊಳಿಸುವಲ್ಲಿನ ಅವರ ಮೊದಲ ಪ್ರಯತ್ನವನ್ನು ಎತ್ತಿ ತೋರಿಸುತ್ತದೆ. ಕಟ್ಟುನಿಟ್ಟಾಗಿ ಎಂದು ಹೇಳಬಹುದಾದ ರೀತಿಯಲ್ಲಿ ರಮ್ಯ-ಸಾಹಿತ್ಯ ಕೃತಿಗಳ ಓರ್ವ ಬರಹಗಾರರಾಗಿದ್ದ ಚಟರ್ಜಿಯವರ ಆರಂಭಿಕ ವೃತ್ತಿಜೀವನವು ತುಳಿದ ಹೊರಳುದಾರಿ ಅಥವಾ ಬದಲಾವಣೆಯನ್ನು ಈ ಪುಸ್ತಕವು ಗುರುತುಮಾಡುತ್ತದೆ; ಪಥ ಬದಲಿಸಿದ ಚಟರ್ಜಿಯವರು ನಂತರದ ಅವಧಿಯಲ್ಲಿ, ಬಂಗಾಳಿ ಭಾಷೆಯನ್ನು ಮಾತನಾಡುವ ಜನರ ವಿಚಾರಶಕ್ತಿಯನ್ನು ಉತ್ತೇಜಿಸುವ ಸಾಹಿತ್ಯ ಸೃಷ್ಟಿಯೆಡೆಗೆ ಮತ್ತು ಬಂಗಾಳಿ ಸಾಹಿತ್ಯದಲ್ಲಿ ಒಂದು ಸಾಂಸ್ಕೃತಿಕ ಪುನರುದಯವನ್ನು ಉಂಟುಮಾಡುವ ಕಡೆಗೆ ಗುರಿಯಿರಿಸಿದರು. ಬಂಗೋದರ್ಶನ್ ಎಂಬ ಒಂದು ಸಾಹಿತ್ಯಿಕ ಮಾಸಪತ್ರಿಕೆಯ ಪ್ರಕಟಣೆಯನ್ನು ೧೮೭೨ರ ಏಪ್ರಿಲ್ನಲ್ಲಿ ಅವರು ಆರಂಭಿಸಿದರು; ಇದರ ಮೊದಲ ಆವೃತ್ತಿಯಲ್ಲಿ ಹೆಚ್ಚೂಕಮ್ಮಿ ಅವರದೇ ಸ್ವಂತ ಕೃತಿಯು ಸಂಪೂರ್ಣವಾಗಿ ತುಂಬಿಕೊಂಡಿತ್ತು. ಧಾರಾವಾಹಿ ರೂಪದ ಕಾದಂಬರಿಗಳು, ಕಥೆಗಳು, ಹಾಸ್ಯಭರಿತ ಚಿತ್ರಗಳು, ಐತಿಹಾಸಿಕ ಮತ್ತು ನಾನಾ ಬಗೆಯ ಪ್ರಬಂಧಗಳು, ಮಾಹಿತಿಪೂರ್ಣ ಲೇಖನಗಳು, ಧಾರ್ಮಿಕ ಉಪದೇಶಗಳು, ಸಾಹಿತ್ಯಿಕ ಟೀಕೆಗಳು ಮತ್ತು ಅವಲೋಕನಗಳನ್ನು ಈ ನಿಯತಕಾಲಿಕವು ಒಳಗೊಂಡಿತ್ತು. ವಿಷಬೃಕ್ಷ (ದಿ ಪಾಯ್ಸನ್ ಟ್ರೀ, ೧೮೭೩) ಕಾದಂಬರಿಯು ಬಂಗೋದರ್ಶನ್ ನಿಯತಕಾಲಿಕದಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಂಡ ಚಟರ್ಜಿಯವರ ಮೊದಲ ಕಾದಂಬರಿ ಎಂಬ ಕೀರ್ತಿಗೆ ಪಾತ್ರವಾಯಿತು.೪ ವರ್ಷಗಳ ನಂತರ ಬಂಗೋದರ್ಶನ್ ನಿಯತಕಾಲಿಕದ ಪ್ರಸರಣವು ಚಾಲ್ತಿಯಲ್ಲಿಲ್ಲದ ಸ್ಥಿತಿಯನ್ನು ತಲುಪಿತು. ನಂತರದಲ್ಲಿ ಅವರ ಸೋದರ ಸಂಜೀಬ್ ಚಂದ್ರ ಚಟರ್ಜಿಯವರು ಇದನ್ನು ಪುನರುಜ್ಜೀವನಗೊಳಿಸಿದರು.
ಚಂದ್ರಶೇಖರ್ (೧೮೭೭) ಎಂಬುದು ಚಟರ್ಜಿಯವರ ಮುಂದಿನ ಪ್ರಮುಖ ಕಾದಂಬರಿಯಾಗಿದ್ದು, ಬಹುಮಟ್ಟಿಗೆ ಸಂಬಂಧವಿಲ್ಲದ ಎರಡು ಸಮಾನಾಂತರ ಕಥಾವಸ್ತುಗಳನ್ನು ಇದು ಒಳಗೊಂಡಿದೆ. ಇದರಲ್ಲಿ ಬಿಂಬಿತವಾಗಿರುವ ಕಾಲಘಟ್ಟ ಅಥವಾ ಪರಿಸರವು ಒಮ್ಮೆ ಹದಿನೆಂಟನೇ ಶತಮಾನಕ್ಕೆ ವರ್ಗಾಯಿಸಲ್ಪಡುತ್ತದೆಯಾದರೂ, ಇದು ಐತಿಹಾಸಿಕ ಕಾದಂಬರಿಯಲ್ಲ. ಅವರ ಮುಂದಿನ ಕಾದಂಬರಿಯಾದ ರಜನಿ ಯು (೧೮೭೭) ಆತ್ಮಚರಿತ್ರೆಗೆ ಸಂಬಂಧಿಸಿದ ಒಂದು ಕಥಾವಸ್ತುವನ್ನು ಹೊಂದಿದ್ದು, ಓರ್ವ ಕುರುಡು ಹುಡುಗಿಯು ಅದರ ಶೀರ್ಷಿಕೆ ಪಾತ್ರದಲ್ಲಿದ್ದಳು. ಆತ್ಮಚರಿತ್ರೆಗೆ ಸಂಬಂಧಿಸಿದ ಕಥಾವಸ್ತುಗಳು ವಿಲ್ಕೀ ಕಾಲಿನ್ಸ್ ಎಂಬಾತನ "ಎ ವುಮನ್ ಇನ್ ವೈಟ್" ಎಂಬ ಕೃತಿಯಲ್ಲಿನ ಪ್ರಯೋಗ-ಕೌಶಲಗಳಲ್ಲಿ ಚಾಲ್ತಿಯಲ್ಲಿದ್ದವು. ಅಷ್ಟೇ ಅಲ್ಲ, ಕುರುಡು ಹುಡುಗಿಯೋರ್ವಳು ಪ್ರಧಾನ ಪಾತ್ರವೊಂದರಲ್ಲಿ ಇರುವ ನಿದರ್ಶನವು ಎಡ್ವರ್ಡ್ ಬುಲ್ವರ್-ಲಿಟ್ಟಾನ್ ಎಂಬಾತನ "ದಿ ಲಾಸ್ಟ್ ಡೇಸ್ ಆಫ್ ಪಾಂಪೇಯಿ" ಕೃತಿಯಲ್ಲಿರುವ ನಿಡಿಯಾ ಪಾತ್ರಕ್ಕೆ ಹೋಲುವಂತಿದ್ದರೂ, ಸದರಿ ಪ್ರಕಟಣೆಗಳೊಂದಿಗಿನ ರಜನಿ ಕಾದಂಬರಿಯ ಈ ಹೋಲಿಕೆಗಳು ಅಲ್ಲಿಗೇ ಕೊನೆಗೊಳ್ಳುತ್ತವೆ. ಕೃಷ್ಣಕಾಂತೆರ್ ವಿಲ್ (ಕೃಷ್ಣಕಾಂತಾ'ಸ್ ವಿಲ್, ೧೮೭೮) ಕಾದಂಬರಿಯಲ್ಲಿ ಒಂದು ಸಂಕೀರ್ಣ ಕಥಾವಸ್ತುವನ್ನು ಚಟರ್ಜಿ ರೂಪಿಸಿದರು. ಆ ಸಂಕೀರ್ಣತೆಯಲ್ಲಿ ಪಾಶ್ಚಾತ್ಯ ಕಾದಂಬರಿಗಳ ಒಂದು ಹೋಲಿಕೆಯನ್ನು ವಿಮರ್ಶಕರು ಕಂಡರು. ಇದರ ಕಥಾವಸ್ತುವು ಪಾಯ್ಸನ್ ಟ್ರೀ (ವಿಷಬೃಕ್ಷ) ಕೃತಿಯ ಕಥಾವಸ್ತುವನ್ನು ಒಂದಷ್ಟು ಹೋಲುತ್ತದೆ.
ರಾಜಸಿಂಹ (೧೮೮೧) (ಇದು ೧೮೯೩ರಲ್ಲಿ ಮರು-ಬರೆಯಲ್ಪಟ್ಟಿತು ಮತ್ತು ವಿಸ್ತಾರಗೊಳಿಸಲ್ಪಟ್ಟಿತು) ಎಂಬುದು ನಿಜವಾಗಿಯೂ ಐತಿಹಾಸಿಕ ಕಾದಂಬರಿ ಎಂಬುದಾಗಿ ಪರಿಗಣಿಸಲ್ಪಡಬಹುದಾದ ಚಟರ್ಜಿಯವರ ಏಕೈಕ ಕಾದಂಬರಿಯಾಗಿದೆ. ಆನಂದಮಠ (ದಿ ಅಬೆ ಆಫ್ ಬ್ಲಿಸ್, ೧೮೮೨) ಎಂಬುದು ಒಂದು ರಾಜಕೀಯ ಕಾದಂಬರಿಯಾಗಿದ್ದು, ಮುರ್ಷಿದಾಬಾದ್ನ ಮುಸ್ಲಿಂ ನವಾಬನ ಯೋಧರೊಂದಿಗೆ ಹೋರಾಡುವ ಓರ್ವ ಸನ್ಯಾಸಿ (ಹಿಂದೂ ತಪಸ್ವಿ) ಸೈನಿಕನನ್ನು ಅದು ಚಿತ್ರಿಸುತ್ತದೆ. ಬಂಗಾಳದಲ್ಲಿ ಅಸ್ತಿತ್ವದಲ್ಲಿದ್ದ ವಿದೇಶಿ ಟರ್ಕೋ-ಆಫ್ಘನ್ ಮುಸ್ಲಿಂ ಆಳ್ವಿಕೆಯನ್ನು ಬೇರುಸಹಿತ ಕೀಳಲು ಹಿಂದೂ ರಾಷ್ಟ್ರೀಯತೆಯು ಮೈಕೊಡವಿಕೊಂಡು ಎದ್ದುನಿಲ್ಲುವುದಕ್ಕೆ ಸಂಬಂಧಿಸಿದಂತೆ ಮತ್ತು ಸ್ವಯಂ ಆಳ್ವಿಕೆಗಾಗಿ ಹಿಂದೂಗಳು ಯೋಗ್ಯರಾಗುವವರೆಗೂ ಒಂದು ತಾತ್ಕಾಲಿಕ ಪರ್ಯಾಯವಾಗಿ ಈಸ್ಟ್ ಇಂಡಿಯಾ ಕಂಪನಿಯನ್ನು ಚಾಲ್ತಿಗೆ ತರಲು ಈ ಪುಸ್ತಕವು ಕರೆನೀಡುತ್ತದೆ. ಈ ಕಾದಂಬರಿಯು ವಂದೇ ಮಾತರಂ (ನಾನು ಮಾತೃಭೂಮಿಯನ್ನು ತಾಯಿಯೆಂಬಂತೆ ಪೂಜಿಸುವೆ) ಎಂಬ ಗೀತೆಯ ಮೂಲವೂ ಆಗಿದ್ದು, ಇದಕ್ಕೆ ರವೀಂದ್ರನಾಥ ಟ್ಯಾಗೋರ್ರವರು ಸಂಗೀತ ಸಂಯೋಜಿಸಿದ್ದರು; ಈ ಗೀತೆಯನ್ನು ಭಾರತದ ಅನೇಕ ರಾಷ್ಟ್ರೀಯತಾವಾದಿಗಳು ಆಸಕ್ತಿವಹಿಸಿ ಸ್ವೀಕರಿಸಿದರು, ಮತ್ತು ಅದೀಗ ಭಾರತದ ರಾಷ್ಟ್ರೀಯ ಗೀತೆಯಾಗಿದೆ. ಸನ್ಯಾಸಿ ಬಂಡಾಯದ ಕಾಲಾವಧಿಯನ್ನು ಈ ಕಾದಂಬರಿಯು ವಿರಳವಾಗಿ ಆಧರಿಸಿದೆಯಾದರೂ, ವಾಸ್ತವಿಕ ಬಂಡಾಯದಲ್ಲಿ ಹಿಂದೂ ಸನ್ಯಾಸಿಗಳು ಮತ್ತು ಮುಸ್ಲಿಂ ಫಕೀರರು ಹೀಗೆ ಎರಡೂ ವಲಯದವರೂ ಸಹ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಬಂಡಾಯವೆದ್ದರು. ಈ ಕಾದಂಬರಿಯು ಬಂಗದರ್ಶನ್ ನಲ್ಲಿ ಧಾರಾವಾಹಿ ಸ್ವರೂಪದಲ್ಲಿ ಮೊದಲು ಕಾಣಿಸಿಕೊಂಡಿತು.
ಚಟರ್ಜಿಯವರ ಮುಂದಿನ ಕಾದಂಬರಿಯಾದ ದೇವಿ ಚೌಧುರಾನಿ ಯು ೧೮೮೪ರಲ್ಲಿ ಪ್ರಕಟವಾಯಿತು. ಸೀತಾರಾಮ್ (೧೮೮೬) ಎಂಬ ಅವರ ಅಂತಿಮ ಕಾದಂಬರಿಯು, ತನ್ನ ಹೆಂಡತಿ ಮತ್ತು ತಾನು ಬಯಸುತ್ತಿರುವ ಹೆಂಗಸಿನ ನಡುವೆ ಆಯ್ಕೆಮಾಡಲು ಕಷ್ಟಪಡುತ್ತಿರುವ ಓರ್ವ ಸ್ಥಳೀಯ ಹಿಂದೂ ಧಣಿಯ ಕಥೆಯನ್ನು ಹೇಳುತ್ತದೆ; ತಾನು ಬಯಸುತ್ತಿರುವ ಹೆಂಗಸನ್ನು ಪಡೆಯಲು ಅಸಮರ್ಥನಾಗುವ ಈತ ಪ್ರಮಾದಗಳ ಒಂದು ಸರಣಿಯನ್ನೇ ನಡೆಸುತ್ತಾನೆ ಮತ್ತು ಸೊಕ್ಕಿನ, ಆತ್ಮಘಾತುಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾನೆ. ಅಂತಿಮವಾಗಿ, ಆತ ತನ್ನ ಸ್ವಾರ್ಥತೆಯನ್ನು ತುಲನೆಮಾಡಬೇಕಾಗಿ ಬರುತ್ತದೆ. ತನ್ನ ಸ್ಥಿರಾಸ್ತಿ ಹಾಗೂ ಮುಸ್ಲಿಂ ನಬಾಬ ರಿಗೆ ಸೇರಿರುವ ಆಕ್ರಮಿಸಿಕೊಳ್ಳಲು ಸಿದ್ಧರಾಗಿರುವ ಸೈನಿಕರ ನಡುವೆ ನಿಂತಿರುವ ಕೆಲವೇ ಸ್ವಾಮಿನಿಷ್ಠ ಯೋಧರನ್ನು ಆತ ಪ್ರಚೋದಿಸುತ್ತಾನೆ.
ಕಾದಂಬರಿಗಳನ್ನು ಹೊರತುಪಡಿಸಿದರೆ, ಚಟರ್ಜಿಯವರ ಹಾಸ್ಯಭರಿತ ರೇಖಾಚಿತ್ರಗಳು ಸುಪರಿಚಿತವಾಗಿರುವ ಅವರ ಅತ್ಯುತ್ತಮ ಕೆಲಸಗಳಾಗಿವೆ. ಕಮಲಾಕಾಂತೆರ್ ದಪ್ತರ್ (ಫ್ರಂ ದಿ ಡೆಸ್ಕ್ ಆಫ್ ಕಮಲಾಕಾಂತ, ೧೮೭೫; ೧೮೮೫ರಲ್ಲಿ ಇದನ್ನು ವಿಸ್ತಾರಗೊಳಿಸಿ ಕಮಲಾಕಾಂತ ಎಂದು ಹೆಸರಿಸಲಾಯಿತು) ಕೃತಿಯು ಅರ್ಧದಷ್ಟು ಹಾಸ್ಯಭರಿತ ರೇಖಾಚಿತ್ರಗಳು ಮತ್ತು ಅರ್ಧದಷ್ಟು ಗಂಭೀರ ರೇಖಾಚಿತ್ರಗಳನ್ನು ಒಳಗೊಂಡಿದೆ. ಡಿ ಕ್ವಿನ್ಸೆಯ ಕನ್ಫೆಷನ್ಸ್ ಆಫ್ ಆನ್ ಇಂಗ್ಲಿಷ್ ಓಪಿಯಂ-ಈಟರ್ ಕೃತಿಯಲ್ಲಿ ಕಂಡುಬರುವಂತೆ, ಇಲ್ಲಿನ ಕಮಲಾಕಾಂತ ಓರ್ವ ಅಫೀಮು-ವ್ಯಸನಿಯಾಗಿದ್ದಾನಾದರೂ, ಕಮಲಾಕಾಂತನು ಹೊರಗೆಡಹುವ ವ್ಯಂಗ್ಯದ, ರಾಜಕೀಯ ಸಂದೇಶಗಳನ್ನು ನಿಭಾಯಿಸುವ ತಮ್ಮ ಕುಶಲಗಾರಿಕೆಯಿಂದಾಗಿ ಚಟರ್ಜಿಯವರು ಆ ಹೋಲಿಕೆಯ ಅಭಿವ್ಯಕ್ತಿಯನ್ನೂ ಮೀರಿ ಸಾಗುತ್ತಾರೆ. ಎಂಬ
ಪ್ರಮಥನಾಥ್ ಬಿಷಿಯವರಂಥ ಕೆಲವೊಂದು ವಿಮರ್ಶಕರು ಚಟರ್ಜಿಯವರನ್ನು ಬಾಂಗ್ಲಾ ಸಾಹಿತ್ಯದಲ್ಲಿನ ಅತ್ಯುತ್ತಮ ಕಾದಂಬರಿಕಾರ ಎಂಬುದಾಗಿ ಪರಿಗಣಿಸುತ್ತಾರೆ. ಬಂಕಿಮ ಚಂದ್ರ ಚಟರ್ಜಿಯವರು ಸಾಧಿಸಿರುವ ರೀತಿಯಲ್ಲಿ ದರ್ಶನಶಾಸ್ತ್ರ ಮತ್ತು ಕಲೆಗಳೆರಡರಲ್ಲೂ ಅತ್ಯುತ್ಕೃಷ್ಟತೆ ಸಾಧಿಸಿದ ಕೆಲವೇ ಬರಹಗಾರರು ಪ್ರಪಂಚ ಸಾಹಿತ್ಯದಲ್ಲಿ ಸಿಗುತ್ತಾರೆ ಎಂಬುದು ಅವರ ನಂಬಿಕೆ. ವಸಾಹತೀಕರಣಕ್ಕೊಳಪಟ್ಟ ರಾಷ್ಟ್ರವೊಂದರಲ್ಲಿ ಬಂಕಿಮ ಚಂದ್ರರು ರಾಜಕೀಯವನ್ನು ಉಪೇಕ್ಷಿಸುವಂತಿರಲಿಲ್ಲ ಎಂಬುದಾಗಿ ಅವರು ವಾದಿಸುತ್ತಾರೆ. ಬ್ರಿಟಿಷ್ ವಸಾಹತುವೊಂದರಲ್ಲಿ ಅಸ್ತಿತ್ವವನ್ನು ಕಾಯ್ದುಕೊಂಡು ಬರೆಯುತ್ತಾ ಹೋದ, ಅದೇ ಸಮಯಕ್ಕೆ ಸ್ಥಾನಮಾನವನ್ನು ಸ್ವೀಕರಿಸುತ್ತಾ ಮತ್ತು ತಿರಸ್ಕರಿಸುತ್ತಾ ಹೋದ ಮೊದಲ ಬುದ್ಧಿಜೀವಿಗಳ ಪೈಕಿ ಅವರೂ ಒಬ್ಬರಾಗಿದ್ದರು. ಬಂಕಿಮ ಚಂದ್ರ ಚಟರ್ಜಿಯವರನ್ನು 'ಕಲಾವಿದ ಬಂಕಿಮ ಚಂದ್ರ' ಮತ್ತು 'ನೀತಿಬೋಧಕ ಬಂಕಿಮ ಚಂದ್ರ' ಎಂಬುದಾಗಿ ವಿಭಜಿಸಿ ಓದುವುದನ್ನೂ ಸಹ ಬಿಷಿಯವರು ತಿರಸ್ಕರಿಸುತ್ತಾರೆ; ಬಂಕಿಮ ಚಂದ್ರರನ್ನು ಸಮಗ್ರವಾಗಿ ಓದಬೇಕೆಂಬುದೇ ಅವರ ಅಭಿಪ್ರಾಯ. ಬಂಕಿಮ ಚಂದ್ರರನ್ನು ಓರ್ವ ನೀತಿಬೋಧಕರಾಗಿ ನೀವು ಅರ್ಥೈಸಿಕೊಳ್ಳದಿದ್ದಲ್ಲಿ ಅವರಲ್ಲಿನ ಕಲಾವಿದನನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ ಮತ್ತು ಅವರನ್ನು ಓರ್ವ ಕಲಾವಿದರಾಗಿ ನೀವು ಅರ್ಥೈಸಿಕೊಳ್ಳದಿದ್ದಲ್ಲಿ ಅವರಲ್ಲಿನ ನೀತಿಬೋಧಕನನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ ಎಂಬುದು ಗಮನಾರ್ಹ ಅಂಶ.
ಕೇವಲ ಹನ್ನೊಂದನೇ ವರ್ಷದಷ್ಟು ಕಿರಿಯ ವಯಸ್ಸಿನಲ್ಲಿಯೇ ಅವರು ಮದುವೆಯಾದರು, ಅವರ ಮೊದಲ ಹೆಂಡತಿಯು ೧೮೫೯ರಲ್ಲಿ ಮರಣಿಸಿದರು. ಅವರು ನಂತರದಲ್ಲಿ ರಾಜಲಕ್ಷ್ಮಿ ದೇವಿಯವರನ್ನು ಮದುವೆಯಾದರು. ಅವರಿಗೆ ಮೂವರು ಹೆಣ್ಣುಮಕ್ಕಳಿದ್ದರು.
“ | Have you read the Poison Tree Of Bankim Chandra Chatterjee? | ” |
ಕಾದಂಬರಿ
ಧಾರ್ಮಿಕ ವ್ಯಾಖ್ಯಾನಗಳು
ಕವನ ಸಂಗ್ರಹಗಳು
ಪ್ರಬಂಧಗಳು
Page ಮಾಡ್ಯೂಲ್:Portal/styles.css has no content.
This article uses material from the Wikipedia ಕನ್ನಡ article ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.