ನಾಕುತಂತಿ ಕನ್ನಡದ ವರಕವಿಯಂದು ಪ್ರಸಿದ್ಧರಾದ ದ.ರಾ.ಬೇಂದ್ರೆಯವರ ಕವಿತೆಗಳ ಸಂಗ್ರಹವಾಗಿದೆ.
ಬೇಂದ್ರೆಯವರ ಈ ಕೃತಿಗೆ ೧೯೭೪ ಇಸವಿಯ ಜ್ಞಾನಪೀಠ ಪ್ರಶಸ್ತಿ ಬಂದಿದೆ.
ಲೇಖಕರು | ದ.ರಾ.ಬೇಂದ್ರೆ |
---|---|
ಪ್ರಕಾಶಕರು | ಕಾವ್ಯಧಾರಾ ಪ್ರಕಾಶನ |
ಪ್ರಕಟವಾದ ದಿನಾಂಕ | ೧೯೬೪ |
ನಾಕುತಂತಿ ನಾಲ್ಕು ಅಂಶಗಳನ್ನು ಕೇಂದ್ರೀಕರಿಸುವ ಕವಿತೆಗಳನ್ನು ಹೊಂದಿದೆ, ಅವುಗಳೆಂದರೆ ನಾನು, ನೀನು, ಆನು, ತಾನು. ಅದ್ವೈತ ಸಿದ್ಧಾಂತದ ಪ್ರಕಾರ ಇವು ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿಯ ನಾಲ್ಕು ಹಂತಗಳು.
ಉದಯ ಟಿವಿಯಲ್ಲಿ ೨೦೦೫-೨೦೦೬ರಲ್ಲಿ ಇದೇ ಹೆಸರಿಂದ ಕನ್ನಡ ಧಾರಾವಾಹಿ ಪ್ರಸಾರವಾಗುತ್ತಿತ್ತು. ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಬೇಂದ್ರೆಯವರ ನಾಕುತಂತಿಯ ನಾನು-ನೀನು-ಆನು-ತಾನು ಕವಿತೆಯನ್ನು ಅಳವಡಿಸಿಕೊಂಡು ರಾಗ ಸಂಯೋಜಿಸಿದ್ದಾರೆ.
ಮರದಲ್ಲಿರುವ ಹಣ್ಣು ಪಕ್ವವಾಗಬೇಕಾದರೆ ಅದು ಬಿಸಿಲನ್ನು ಉಣ್ಣಬೇಕು. ಗುರುದೇವ ರವೀಂದ್ರನಾಥ ಠಾಕೂರರನ್ನು ಉದ್ದೇಶಿಸಿ ಬರೆದ ಕವನದಲ್ಲಿ, ಬೇಂದ್ರೆ ಇದನ್ನೇ “ ಬಿಸಿಲ್ಹಣ್ಣು ಉಂಡೀದಿ” ಎಂದು ಬಣ್ಣಿಸಿದ್ದಾರೆ. ಬೇಂದ್ರೆ ಸಹ ಬಾಳಿನಲ್ಲಿ ಸಾಕಷ್ಟು ಬಿಸಿಲ್ಹಣ್ಣು ಉಂಡು ಮಾಗಿದವರು. ಪ್ರೌಢ ಬೇಂದ್ರೆ ಬರೆದ ಕಾವ್ಯಕ್ಕೂ ’ಮಾಗಿದ’ ಬೇಂದ್ರೆ ಬರೆದ ಕಾವ್ಯಕ್ಕೂ ಇರುವ ವ್ಯತ್ಯಾಸ ಈ ಬಿಸಿಲ್ಹಣ್ಣಿನ ಫಲ. ’ಅರಳು ಮರಳು’ ಕಾವ್ಯಸಂಗ್ರಹ ಪ್ರಕಟವಾದಾಗ ಬೇಂದ್ರೆಯವರಿಗೆ ೬೦ ವರ್ಷ ವಯಸ್ಸು. ಅಲ್ಲಿಯವರೆಗಿನ ಅವರ ಕಾವ್ಯದಲ್ಲಿ ಅತ್ಯುಚ್ಚ ಮಟ್ಟದ ಕಲಾಕೌಶಲ್ಯವನ್ನು ಹಾಗು ಕುಸುರಿ ಕೆಲಸವನ್ನು ಕಾಣಬಹುದು. ಆನಂತರದ ಕಾವ್ಯದಲ್ಲಿ ಕುಸುರಿ ಕೆಲಸದ ಸ್ಥಾನವನ್ನು ’ಬಯಲ ಭವ್ಯತೆ’ ಆಕ್ರಮಿಸಿಕೊಂಡಿದೆ. ಬೇಲೂರು ಶಿಲಾಬಾಲಿಕೆಯ ಮೋಹಕ
ಚೆಲುವಿನ ಬದಲಾಗಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಭವ್ಯತೆ ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ. “ನಾಕು ತಂತಿ” ಕಾವ್ಯಸಂಗ್ರಹದಲ್ಲಂತೂ ಅವರ ಕಾವ್ಯ ಬೇರೊಂದು ರೂಪವನ್ನೇ ಪಡೆದಿದೆ. ಇದಕ್ಕೆ ಕಾರಣ ಬೇಂದ್ರೆಯವರ ವ್ಯಕ್ತಿತ್ವದ “ಸಂತ-ಈಕರಣ”. ಹೀಗಾಗಿ ಅವರ ಮುಂದಿನ ಕವನಗಳಲ್ಲಿ ಮಾತನಾಡುವನು ಕೇವಲ ಕವಿಯಲ್ಲ; ಕವಿಯ ರೂಪದ ಸಂತ.
ಕೆಲವೊಂದು ದೇವಾಲಯಗಳ ಪೂಜಾರಿಗಳು ವರ್ಷಕ್ಕೊಮ್ಮೆ ನಡೆಯುವ ’ಜಾತ್ರೆ’ಯಲ್ಲಿ ಆ ವರ್ಷದ ’ಕಾರ್ಣಿಕ’ (Oracle) ಹೇಳುತ್ತಾರೆ. ದೇವರ ಪೂಜೆ ಮುಗಿದ ಬಳಿಕ ಮೈಯಲ್ಲಿ ಆವೇಶ ತುಂಬಿದ ಪೂಜಾರಿ ಒಡನುಡಿಯುತ್ತಾನೆ.
ಅದು ಹೀಗಿರಬಹುದು: “ ಮುತ್ತು ಸುರಿಯುತಾವಲೆ!”. ಅಥವಾ ಹೀಗೂ ಇರಬಹುದು: “ಕೆಂಡ ಸುರಿಯುತಾವಲೆ!”.
ನೆರೆದ ಭಕ್ತರು ಈ ಕಾರ್ಣಿಕದ ಅರ್ಥವನ್ನು ’ಈ ವರ್ಷ ಬೆಳೆ ಚೆನ್ನಾಗಿ ಬರುತ್ತದೆ’ ಅಥವಾ ’ಬರುವದಿಲ್ಲ’ ಎಂದೆಲ್ಲ ಮಾಡಿಕೊಳ್ಳುತ್ತಾರೆ.
’ಸಂತ-ಈಕರಣ’ವಾದ ಬೇಂದ್ರೆಯವರ ’ನಾಕು ತಂತಿ’ ಕವನ ಕಾರ್ಣಿಕದ ಒಡಪಿನ ರೂಪದಲ್ಲಿದೆ. ಬೇಂದ್ರೆಮಾಸ್ತರ ಬರೆದ ಅಡಿಟಿಪ್ಪಣಿಯ ಮೂಲಕ ’ಅಂಬಿಕಾತನದತ್ತ’ನ ಒಡನುಡಿಯ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಆದರೂ ನಮಗೆ ಕಾಣುವದು ನಮ್ಮ ಕಣ್ಣಿನ ಪರಿಮಿತಿಗೊಳಪಟ್ಟು.
’ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿತsದ ಇದರ ನೆಲೆಯು’!
’ನಾಕು ತಂತಿ’ ಕವನದಲ್ಲಿ ನಾಲ್ಕು ಭಾಗಗಳಿವೆ. ಅವರೇ ಹೇಳುವಂತೆ ಇವು ಒಂದೇ ಭಾಗದ ನಾಲ್ಕು ಮಗ್ಗಲುಗಳು. ಮೊದಲನೆಯ ಭಾಗದಲ್ಲಿ ಧ್ವನಿ ಪ್ರಬಲವಾಗಿದ್ದರೆ, ಎರಡನೆಯ ಭಾಗದಲ್ಲಿ ಪ್ರತಿಮೆಗಳ ಸಾಲಿವೆ. ಮೂರನೆಯ ಭಾಗದಲ್ಲಿ ಒಂದು ’ಸವಾಲ್-ಜವಾಬ್’ ಇದೆ. ನಾಲ್ಕನೆಯ ಭಾಗ ಮೊದಲನೆಯದರ ಧ್ವನಿಯನ್ನು ಒಡದೇ ಹೇಳುತ್ತದೆ.
This article uses material from the Wikipedia ಕನ್ನಡ article ನಾಕುತಂತಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.