ಧ್ಯಾನ್ ಚಂದ್ (ಆಗಸ್ಟ್ ೨೯, ೧೯೦೫ - ಡಿಸೆಂಬರ್ ೩, ೧೯೭೯) ವಿಶ್ವ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯಯರು.
ಮೇಜರ್ ಧ್ಯಾನ್ ಚಂದ್ ಸಿಂಗ್ ಭಾರತವಷ್ಟೇ ಅಲ್ಲ, ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಪಟು. ಇಡೀ ಪ್ರಪಂಚದಲ್ಲಿಯೇ ಇಲ್ಲಿಯವರೆಗೆ ಇವರನ್ನು ಸರಿಗಟ್ಟುವ ಯಾವ ಆಟಗಾರನೂ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ. ಭಾರತ ಸರ್ಕಾರವು ಇವರಿಗೆ 'ಪದ್ಮ ವಿಭೂಷಣ' ಪ್ರಶಸ್ತಿಯನ್ನು ನೀಡಿದೆ. ದಾದಾ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ 'ಧ್ಯಾನ್' ವರನ್ನು ಅವರ ಕೋಚ್ 'ಪಂಕಜ್ ಗುಪ್ತ' ಅವರು 'ಚಾಂದ್' (ಚಂದ್ರ) ಎಂದು ಕರೆಯುತ್ತಿದ್ಧರು. ಅಲ್ಲದೇ ತಮ್ಮ ಶಿಷ್ಯ ಚಂದ್ರನಂತೆ ಬೆಳಗುತ್ತಾನೆ ಎಂದೂ ಭವಿಷ್ಯ ನುಡಿದಿದ್ದರು.
ಧ್ಯಾನ್ ಚಂದ್ | |
---|---|
Born | ಆಗಸ್ಟ್ ೨೯, ೧೯೦೫ ಉತ್ತರ ಪ್ರದೇಶದ ಪ್ರಯಾಗ |
Died | ಡಿಸೆಂಬರ್ ೩, ೧೯೭೯ |
Occupation(s) | ಸೈನಿಕ, ಮಹಾನ್ ಹಾಕಿ ಆಟಗಾರ |
Known for | ಹಾಕಿ |
ಒಲಂಪಿಕ್ ಪದಕ ಪಟ್ಟಿ | ||
Men's field hockey | ||
---|---|---|
1928 Amsterdam | Team competition | |
1932 Los Angeles | Team competition | |
1936 Berlin | Team competition |
ಉತ್ತರ ಪ್ರದೇಶ ದ ಪ್ರಯಾಗ್ ನಲ್ಲಿ ರಜಪೂತ್ ಕುಟುಂಬವೊಂದರಲ್ಲಿ ಆಗಸ್ಟ್ ೨೯ ೧೯೦೫ರಲ್ಲಿ ಧ್ಯಾನ್ ಚಂದ್ ಜನಿಸಿದರು. ಅವರ ತಂದೆ ಭಾರತೀಯ ಬ್ರಿಟೀಶ್ ಸೈನ್ಯದಲ್ಲಿ ಹವಾಲ್ದಾರ್ ಅಗಿದ್ದರು. ಪ್ರಯಾಗದಿಂದ ತದನಂತರ ಕುಟುಂಬವು 'ಝಾನ್ಸಿ' ನಗರಕ್ಕೆ ವಲಸೆ ಬಂದಿತು.
ಧ್ಯಾನ್ ಚಂದ್ ಶಾಲೆಯಲ್ಲಿ ಓದಿದ್ದು ಅತೀ ಕಡಿಮೆ. ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಕ್ರೀಡೆಯಲ್ಲೂ ಅಂತಹ ವಿಶೇಷ ಪರಿಣತಿ ಇರಲಿಲ್ಲ. ಸೈನ್ಯದಲ್ಲಿ ಸ್ನೇಹ ಪೂರ್ಣ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು. ೧೪ನೇ ಪಂಜಾಬ್ ರೆಜಿಮೆಂಟ್ ಸೇರಿದ ಧ್ಯಾನ್ ನನ್ನು ಸುಬೇದಾರ್-ಮೇಜರ್ ಭೋಲೆ ತಿವಾರಿಯವರು ಗಮನಿಸಿದರು. ಈತ ಆಡುವ ಆಟದಲ್ಲಿ ಏನೋ ವಿಶೇಷವಿದೆ ಎಂದು ಕಂಡ ಇವರು ಚಂದ್ ಅವರಿಗೆ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗೆಗೆ ಉತ್ತಮ ತರಬೇತಿ ನೀಡಿದರು. ಹೀಗೆ ಅವರು ಅಂದಿನ ಭಾರತೀಯ ಸೈನ್ಯದಲ್ಲಿ ಹಾಗೂ ವಿವಿಧ ವಲಯಗಳ ತಂಡಗಳ ಮಟ್ಟದಲ್ಲಿ ಆಡತೊಡಗಿದ ಮುಂದೆ ಅಂತರರಾಷ್ಟ್ರೀಯ ಮಟ್ಟದ ಆಟಗಾರರಾಗಿ ರೂಪುಗೊಂಡರು.
೧೯೨೮ರಲ್ಲಿ ಭಾರತೀಯ ಹಾಕೀ ತಂಡವನ್ನು ಸೇರಿದ ಧ್ಯಾನ್ ಚಂದ್ ಅವರಿಗೆ, ನೆದರ್ ಲ್ಯಾಂಡ್ ನ ಆಮ್ ಸ್ಟೆರ್ ಡ್ಯಾಮ್ ನಲ್ಲಿ ಆಯೋಜಿಸಲಾದ ೧೯೨೮ರ ಬೇಸಗೆಯ ಒಲಂಪಿಕ್ ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ೩-೦ ಗೋಲ್ ಗಳಲ್ಲಿ ೨ ನ್ನು ಗಳಿಸುವ ಮೊಲಕ ಭಾರತೀಯ ತಂಡಕ್ಕೆ ನೆದರ್ ಲ್ಯಾಂಡನ್ನು ಸೋಲಿಸಲು ಸಹಾಯ ಮಾಡಿದ ಧ್ಯಾನ್ ಚಂದರ ಆಟಕ್ಕೇ ನೆರೆದ ಜನರು ಬೆರಗಾದರು. ಈ ಸರಣಿಯಲ್ಲಿ ಭಾರತೀಯ ಹಾಕಿ ತಂಡಕ್ಕೆ ಒಲಂಪಿಕ್ ಸ್ವರ್ಣ ಪದಕವು ದೊರೆತಿತು. ಧ್ಯಾನ್ ಹಂದ್ ೧೯೩೨ ಹಾಗು ೧೯೩೬ ರಲ್ಲಿ ನೆಡದ ಒಲಂಪಿಕ್ಸ್ ಗಳಲ್ಲಿ ಸ್ವರ್ಣ ಪದಕ ಪಡೆದ ಭಾರತದ ತಂಡದ ಸದಸ್ಯರಾಗಿದ್ದರು. ಹೀಗೆ ತಾವು ಆಡಿದ ಮೂರೂ ಒಲಿಂಪಿಕ್ಸ್ ಕ್ರೀಡೆಗಳಲ್ಲೂ ಭಾರತಕ್ಕೆ ಚಿನ್ನದ ಪದಕ ದೊರಕುವಲ್ಲಿ ಅವರು ಮಹತ್ತರವಾದ ಪಾತ್ರ ವಹಿಸಿದರು. ಆಡಿದ ಮೂರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಒಟ್ಟು ಹನ್ನೆರಡು ಪಂದ್ಯಗಳಲ್ಲಿ ಧ್ಯಾನ್ ಚಂದ್ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ ೩೩.
ಧ್ಯಾನ್ ಚಂದ್ ಎಂಬ ಹೆಸರು ಒಂದು ರೀತಿಯಲ್ಲಿ ದಂತ ಕಥೆಯೇಆಗಿದೆ. ಆ ಕಾಲದಲ್ಲಿ ಫುಟ್ ಬಾಲ್ ಆಟದಲ್ಲಿ ಪೀಲೆ, ಕ್ರಿಕೆಟ್ಟಿನಲ್ಲಿ ಡೊನಾಲ್ಡ್ ಬ್ರಾಡ್ ಮನ್ ಅವರ ಸಾಧನೆಗಳು ಎಂತಿವೆಯೋ ಅಂತದ್ದೇ ಮಟ್ಟದ ಹೆಸರು ಧ್ಯಾನ್ ಚಂದ್ ಅವರದ್ದು.
ಅವರ ಬಗೆಗಿರುವ ಕೆಲವು ಕಥಾನಕಗಳು ಹೀಗಿವೆ.
ಒಮ್ಮೆ ಧ್ಯಾನ್ ಚಂದ್ ಅವರು ಆಡಿದ ಪಂದ್ಯದಲ್ಲಿ ಅವರಿಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲವಂತೆ. ಕಡೆಗೆ ಧ್ಯಾನ್ ಚಂದ್ ಅವರು ಮ್ಯಾಚ್ ರೆಫರಿ ಅವರೊಂದಿಗೆ ವಾಗ್ವಾದ ಹೂಡಿ ನೇರವಾಗಿ “ಈ ಕ್ರೀಡಾಂಗಣದಲ್ಲಿ ಇರುವ 'ಗೋಲ್ ಪೋಸ್ಟ್' ಅಳತೆ ಅಸಮರ್ಪಕವಾದುದು, ಹಾಕಿ ಆಟದ ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ವ್ಯತಿರಿಕ್ತವಾದದ್ದು” ಎಂದು ನುಡಿದರಂತೆ. ಧ್ಯಾನ್ ಚಂದ್ ಅವರ ಅಭಿಪ್ರಾಯವನ್ನು ಮನ್ನಿಸಿ ನಿಜವಾದ ಅಳತೆ ಮಾಡಿದಾಗ ಧ್ಯಾನ್ ಚಂದ್ ಅವರ ಅಭಿಪ್ರಾಯ ಅಕ್ಷರಷಃ ನಿಜವಾಗಿತ್ತು.
೧೯೩೬ರ ಒಲಿಂಪಿಕ್ಸ್ ಪಂದ್ಯದಲ್ಲಿ ಭಾರತ ತಂಡವು ಜಯಗಳಿಸಿದ ನಂತರದಲ್ಲಿ, ಎಲ್ಲೆಡೆಯಲ್ಲೂ ಧ್ಯಾನ್ ಚಂದ್ ಅವರ ಹಾಕಿ ಮಾಂತ್ರಿಕತೆಯ ಆಟ ಪ್ರಸಿದ್ಧಿ ಪಡೆದು, ಪ್ರೇಕ್ಷಕರು ಇವರ ಆಟ ನೋಡಲು ಮುಗಿಬೀಳುತ್ತಿದ್ದರು. ಒಂದು ಜರ್ಮನ್ ಪತ್ರಿಕೆ ನೀಡಿದ ವರದಿ ಹೀಗಿತ್ತು. "ಹಾಕಿ ಆಟ ಇದೀಗ ಮ್ಯಾಜಿಕ್ ಷೋ ಕೂಡಾ ಆಗಿದೆ. ಭಾರತೀಯ ಹಾಕಿ ಆಟದ ಮ್ಯಾಜಿಕ್ ವ್ಯಕ್ತಿಯಾದ ಧ್ಯಾನ್ ಚಂದ್ ಅವರ ಆಟ ನೋಡಲಿಕ್ಕೆ ಇಂದು ಹಾಕಿ ಕ್ರೀಡಾಂಗಣಕ್ಕೆ ತಪ್ಪದೆ ಬನ್ನಿ".
ಬರ್ಲಿನ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಧ್ಯಾನ್ ಚಂದ್ ಅವರ ಆಟ ಕಂಡ ಅಡೋಲ್ಫ್ ಹಿಟ್ಲರ್ ಧ್ಯಾನ್ ಚಂದ್ ಅವರಿಗೆ ಜರ್ಮನಿ ತಂಡದ ಪರವಾಗಿ ಆಡಲು ನೀಡಿದ ಪ್ರಲೋಭನೆಗಳೆಂದರೆ "ಬ್ರಿಟಿಷ್ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ, ಕೊಲೋನೆಲ್ ಗೌರವದ ಕೊಡುಗೆ. ಆದರೆ ಇದನ್ನು ಧ್ಯಾನ್ ಚಂದರು ಸ್ವೀಕರಿಸಲಿಲ್ಲ.
ಕ್ರಿಕೆಟ್ ಆಟದ ಸಾರ್ವಕಾಲಿಕ ತಾರೆ ಡಾನ್ ಬ್ರಾಡ್ ಮನ್, ಒಮ್ಮೆ ಅಡಿಲೈಡ್ ನಲ್ಲಿ ಧ್ಯಾನ್ ಚಂದ್ ಅವರನ್ನು ಮುಖಾ ಮುಖಿಯಾದಾಗ ಕೇಳಿದರಂತೆ "ಏನಪ್ಪಾ, ನಾವು ಕ್ರಿಕೆಟ್ನಲ್ಲಿ ರನ್ ಬಾರಿಸುವಂತೆ ನೀನು ಗೋಲುಗಳನ್ನು ಬಾರಿಸುತ್ತೀಯಲ್ಲ" ಎಂದು.
ಧ್ಯಾನ್ ಚಂದ್ ಅವರಿಗೆ ಭಾರತದಲ್ಲಿ ಒಂದು ಪುತ್ಥಳಿ ಇರುವುದು ಏನೂ ವಿಶೇಷವಲ್ಲ ಬಿಡಿ. ಅವರ ಪುತ್ಥಳಿಯನ್ನು ಮೊದಲು ಸ್ಥಾಪಿಸಿದ್ದು ಆಸ್ಟ್ರಿಯಾದ ವಿಯೆನ್ನಾದಲ್ಲಿ ಎಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಸಿದ್ಧಿ ಎಷ್ಟಿತ್ತೆಂಬುದನ್ನು ಊಹಿಸಬಹುದಾಗಿದೆ.
ಎರಡನೆ ವಿಶ್ವಯುದ್ದ ಮುಗಿದ ಬಳಿಕವು ಕೆಲಕಾಲ ಆಡಿದ ಧ್ಯಾನ್ ಚಂದ್ ೧೯೪೮ರಲ್ಲಿ ತಮ್ಮ ೪೨ನೆ ವಯಸ್ಸಿನಲ್ಲಿ ಹಾಕಿ ಆಟದಿಂದ ನಿವೃತ್ತರಾದರು. ಧ್ಯಾನ್ ಚಂದರ ಸಹೊದರ ರೂಪ್ ಸಿಂಗ್ ಕೂಡ ಉತ್ತಮ ಆಟಗಾರರಾಗಿದ್ದರು. ಧ್ಯಾನ್ ಚಂದರ ಪುತ್ರ ಅಶೋಕ್ ಕುಮಾರ್ ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಧ್ಯಾನ್ ಚಂದ್ ಜನ್ಮದಿನವಾದ ಆಗಸ್ಟ್ ೨೯ರ ದಿನವನ್ನು ಭಾರತದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ೧೯೭೯ರ ಡಿಸೆಂಬರ್ ೩ರಂದು ನಿಧನರಾದರು
This article uses material from the Wikipedia ಕನ್ನಡ article ಧ್ಯಾನ್ ಚಂದ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.