ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು.ಜಯಂತ್ ಅವರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.
ಇಳಿಸಂಜೆಯ ಬಿಸಿಲು, ಬಿಸಿಲುಕೋಲು, ಪಾತರಗಿತ್ತಿ, ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ, ಮೆಲುದನಿಯ ವ್ಯಕ್ತಿತ್ವ ಅವರದು.
ಜಯಂತ್ ಗೌರೀಶ ಕಾಯ್ಕಿಣಿ | |
---|---|
ಜನನ | ೨೩ ಜನವರಿ , ೧೯೫೫ ಗೋಕರ್ಣ, ಕಾರವಾರ, ಉತ್ತರ ಕನ್ನಡ, ಕರ್ನಾಟಕ |
ವೃತ್ತಿ | ಬರಹಗಾರ ಚಲನಚಿತ್ರ ಸಾಹಿತಿ |
ರಾಷ್ಟ್ರೀಯತೆ | ಭಾರತೀಯ |
ಪ್ರಮುಖ ಪ್ರಶಸ್ತಿ(ಗಳು) | ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ |
ಪ್ರಭಾವಗಳು
|
ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ, ಸಂಭಾಷಣೆಗಾರನಾಗಿ, ಅಂಕಣಕಾರನಾಗಿ, ನಾಟಕಕಾರನಾಗಿ, ಕಥೆಗಾರನಾಗಿ ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.
ಜಯಂತ್, ಗೌರೀಶ ಕಾಯ್ಕಿಣಿ 'ಶ್ರೀಮತಿ ಶಾಂತಾ ಕಾಯ್ಕಿಣಿ' ದಂಪತಿಗಳ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ೨೪ ಜನವರಿ ೧೯೫೫ ರಂದು ಜನಿಸಿದರು. ಅವರ ತಂದೆ ಹೆಸರಾಂತ ಸಾಹಿತಿ, ವೃತ್ತಿಯಲ್ಲಿ ಅಧ್ಯಾಪಕರು ಕೂಡ. ತಾಯಿಯವರು ಒಬ್ಬ ಅಧ್ಯಾಪಕಿ, ಹಾಗೂ ಸಮಾಜಸೇವಕಿ. ಜಯಂತ ಕಾಯ್ಕಿಣಿಯವರು ತಮ್ಮ ಪ್ರೈಮರಿ ಮತ್ತು ಹೈಸ್ಕೂಲ್ ಶಾಲಾ ಶಿಕ್ಷಣವನ್ನು ಗೋಕರ್ಣದ "ಭದ್ರಕಾಳಿ ವಿದ್ಯಾಸಂಸ್ಥೆ"ಯಲ್ಲಿ ಪೂರೈಸಿದರು. ಕಾಲೇಜಿನ ಬಿ.ಎಸ್ಸಿ. ತನಕದ ಪದವಿ ಶಿಕ್ಷಣವನ್ನು ಕುಮಟಾದ "ಬಾಳಿಗ ವಿದ್ಯಾಸಂಸ್ಥೆ"ಯಲ್ಲಿ ಪಡೆದುಕೊಂಡರು. ಅ ನಂತರದ ಉನ್ನತ ಶಿಕ್ಷಣವನ್ನು 'ಎಂ.ಎಸ್ಸಿ ಬಯೋಕೆಮಿಸ್ಟ್ರಿ'ಯಲ್ಲಿ, ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ, ಚಿನ್ನದ ಪದಕ ಗಳಿಸುವುದರೊಂದಿಗೆ ೧೯೭೬ರಲ್ಲಿ ಪೂರೈಸಿದರು."ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು", "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ", "ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ", "ಮಧುವನ ಕರೆದರೆ ತನು ಮನ ಸೆಳೆದರೆ", "ನಿಂತಲ್ಲೆ ಹಾಳಾದೆ ನಿನ್ನಿಂದಲೇ", ಎನ್ನುತ್ತಾ ೨೦೦೬ ರ ವರುಷದಿಂದೀಚಿಗೆ, ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟ ಕವಿಯಾಗಿ ಪ್ರಖ್ಯಾತರಾಗಿದ್ದಾರೆ.
'ಜಯಂತ್,' ತಮ್ಮ ಎಂ.ಎಸ್ಸಿ ಪದವಿಯ ನಂತರ ಮುಂಬಯಿಯಲ್ಲಿ ಫಾರ್ಮಾ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ, ಪ್ರಾಕ್ಟರ್-ಗ್ಯಾಂಬಲ್ ಮತ್ತು ಹೂಸ್ಟ್( Hoechst) ಎಂಬ ಕಂಪನಿಗಳಲ್ಲಿ ೧೯೭೭ ರಿಂದ ೧೯೯೭ರ ವರೆಗೆ ವೃತ್ತಿಕೆಲಸ ಮಾಡಿದರು. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ, ಕನ್ನಡ ಸಾಹಿತ್ಯಸೇವೆಯನ್ನಂತೂ ಅವರು ಬಿಡಲಿಲ್ಲ.
ಸ್ವತಂತ್ರ ಬರಹಗಾರನಾಗಿ (freelance copy writer) 'ಲಿಂಟಾಸ್', 'ಮುದ್ರಾ' ಮತ್ತು 'ತ್ರಿಕಾಯ' ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ೧೯೯೭ರಲ್ಲಿ ಭಾರತೀಯ ಲೇಖಕರ ಪ್ರತಿನಿಧಿಗಳನ್ನು ಚೀನಾ ದೇಶಕ್ಕೆ ಕಳುಹಿಸಿದಾಗ, ಅವರಲ್ಲೊಬ್ಬ ಪ್ರತಿನಿಧಿಯಾಗಿ, ಶ್ರೀ ಜಯಂತರವರನ್ನೂ ಆಯ್ಕೆ ಮಾಡಿ ಕಳುಹಿಸಿದ್ದರು. ಹೊರದೇಶಕ್ಕೂ ಆಗಿನ ಕಾಲದಲ್ಲಿಯೂ ಹೊಮ್ಮಿತ್ತು ನಮ್ಮ ಜಯಂತಣ್ಣನವರ ಪ್ರತಿಭೆಯ ಪ್ರಕಾಶ.
ಕಾರ್ಯಕ್ರಮ ಸಮಿತಿಯಾಗಿ ಸದಸ್ಯರಾಗಿ, ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್ ನಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ "ಬಣ್ಣದ ಕಾಲು" ಎಂಬ ಸಣ್ಣ ಕಥೆಗಳ ಸಂಕಲನವಿರುವ ಪುಸ್ತಕವನ್ನು ಪ್ರಕಟಿಸಲಾಯಿತು.
ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಬಂದು, ವಿಜಯಕರ್ನಾಟಕ ಪಬ್ಲಿಕೇಷನ್ಸ್ರವರು ನಡೆಸುತ್ತಿದ್ದ "ಭಾವನಾ" ಎಂಬ ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ೧೯೮೪ರ ನವೆಂಬರ್ ೧೭ರಂದು ಅವರ ವಿವಾಹವಾಯಿತು. ಪತ್ನಿ, 'ಶ್ರೀಮತಿ ಸ್ಮಿತ'ರವರು ಮೂಲತಃ ಮುಂಬಯಿಯವರಾದರೂ, ಕನ್ನಡ ಸಾಹಿತ್ಯದ ಬಗ್ಗೆ ಬಹಳ ಆಸಕ್ತಿ ಹೊಂದಿರುವರು. ಅವರೂ ಸಹ ವಿಶ್ಲೇಷಕ ರಸಾಯನ ಶಾಸ್ತ್ರದಲ್ಲಿ (analytical chemistry) ಚಿನ್ನದ ಪದಕ ಗಳಿಸಿದ ಬುದ್ಧಿವಂತೆ. ಆಕೆ ಮಿತಭಾಷಿ, ಸೌಮ್ಯ ಸ್ವಭಾವದವರು. ಒಟ್ಟಿನಲ್ಲಿ ಹೇಳುವುದಾದರೆ, ಸಹೃದಯಿ ಶ್ರೀಜಯಂತರವರಿಗೆ ಅನುರೂಪಳಾದ ಪತ್ನಿ. ಅವರಿಗೆ "ಸೃಜನ" ಎಂಬ ಮಗಳು ಮತ್ತು "ಋತ್ವಿಕ್" ಎಂಬ ಇಬ್ಬರು ಮಕ್ಕಳು. ಮಗಳು ಈ ವರ್ಷದಲ್ಲಿ, ಅಂತಿಮ ಹಂತದ ವಾಸ್ತುಶಿಲ್ಪಶಾಸ್ತ್ರ ಇಂಜಿನಿಯರಿಂಗ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಅವರ ಮಗ ಪ್ರಥಮ ವರುಷದ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀ ಜಯಂತರವರು "ಭಾವನಾ" ಪತ್ರಿಕೆಗಾಗಿ ೨೦೦೧ರ ತನಕ ದುಡಿದರು. ಅಷ್ಟರಲ್ಲಿ ೨೦೦೧ರಲ್ಲಿ ಅವರಿಗೆ, ತಮ್ಮ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಬರಹಗಳಿಂದ, "ಋಜುವಾತು ಫೆಲೋಶಿಪ್" ದೊರಕಿತು. ೨೦೦೧ರಲ್ಲಿ ಅವರ "ಜತೆಗಿರುವನು ಚಂದಿರ" ಎಂಬ ನಾಟಕ ಮತ್ತು "ಬೊಗಸೆಯಲ್ಲಿ ಮಳೆ" ಎಂಬ ಆಂಕಣಗಳ ಸಂಗ್ರಹ(ಅವರೇ ಬರೆದಿರುವಂಥ ಹಲವು ಅಂಕಣಗಳನ್ನು ಒಟ್ಟು ಮಾಡಿ ಅಚ್ಚು ಹಾಕಿದ ಪುಸ್ತಕ)ಗಳನ್ನು ಪ್ರಕಟಿಸಲಾಯಿತು.
೨೦೦೨ ರಿಂದ ೨೦೦೩ರ ತನಕ ಈಟಿವಿ ಕನ್ನಡವಾಹಿನಿಯಲ್ಲಿ ದಿನನಿತ್ಯ ಬೆಳಗ್ಗಿನ ಹೊತ್ತು ಪ್ರಸಾರವಾಗುತ್ತಿದ್ದ "ನಮಸ್ಕಾರ" ಎಂಬ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಿದ್ದ ಅವರ ಅಭಿಮಾನಿಗಳಿಗೆ ನೂರಕ್ಕೆ ನೂರು ಪ್ರತಿಶತ ಖಂಡಿತವಾಗಿಯೂ ಆರ್ಥ ವಾದೀತು. ಬಹಳಷ್ಟು ಪ್ರಸಿದ್ಧಿಯನ್ನು, ಅಪಾರ ಅಭಿಮಾನಿ ಬಳಗವನ್ನೂ, ಶ್ರೀ ಕಾಯ್ಕಿಣಿಯವರು ಈ ಕಾರ್ಯಕ್ರಮದಿಂದ ಗಳಿಸಿದರು. ಅವರು ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪ್ರತಿ ೩೦ ಕಂತುಗಳಲ್ಲಿ, ಶ್ರೀ ಕುವೆಂಪು, ಶ್ರೀ ಶಿವರಾಮಕಾರಂತ, ಶ್ರೀ ದ.ರಾ.ಬೇಂದ್ರೆ ಮತ್ತು ಶ್ರೀ ರಾಜ್ಕುಮಾರ್(ಇವರೆಲ್ಲರೂ ತಮ್ಮ ಅನುಪಮ ಪ್ರತಿಭೆಯಿಂದ ನಮ್ಮ ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಎಲ್ಲೆಡೆಗೂ ಪಸರಿಸಲು ಕಾರಣೀಭೂತರಾದ ಮಹನೀಯರು) ಮುಂತಾದವರ ಬಗ್ಗೆ ಸಂದರ್ಶನ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು. ಈ ಸಂದರ್ಶನಗಳು "ರಸಋಷಿಗೆ ನಮಸ್ಕಾರ", "ಕಡಲಭಾರ್ಗವನಿಗೆ ನಮಸ್ಕಾರ", "ಬೇಂದ್ರೆ ಮಾಸ್ಟರ್ ಗೆ ನಮಸ್ಕಾರ" ಮತ್ತು "ನಟಸಾರ್ವಭೌಮನಿಗೆ ನಮಸ್ಕಾರ" ಎಂದು ಪ್ರಸಾರವಾದವು. ಈ ಸಂದರ್ಶನಗಳು ಮೇಲೆ ಹೆಸರಿಸಿದ ವಿಖ್ಯಾತರ ಜೀವನ, ಅವರ ದೃಷ್ಟಿಕೋನ, ಕನ್ನಡದ ಬಗ್ಗೆ ಅವರಿಗಿದ್ದ ಭಾಷಾಭಿಮಾನ, ಕನ್ನಡವನ್ನು ಬೆಳೆಸುವಲ್ಲಿ ಅವರೆಲ್ಲರಿಗಿದ್ದ ಉತ್ಸಾಹ, ಕನ್ನಡವನ್ನು ಜನರು ಹೆಚ್ಚಿನ ರೀತಿಯಲ್ಲಿ ಉಪಯೋಗಿಸುವಂತೆ ಮಾಡುವಲ್ಲಿ ಅವರೆಲ್ಲರಿಗಿದ್ದ ಕಾಳಜಿ, ಅವರ ಅನ್ವೇಷಣೆಗಳು, ಹವ್ಯಾಸಗಳು ಮುಂತಾದ ಹಲವಾರು ವಿಷಯಗಳನ್ನು ಅವರೆಲ್ಲರ ಒಡನಾಡಿಗಳ ಮೂಲಕ ಜನರಿಗೆ ತಿಳಿಯುವಂತೆ ಮಾಡಿದವು.
ಅವರು ೨೦೦೫ - ೨೦೦೬ ರವರೆಗೆ ಝೀ ಕನ್ನಡವಾಹಿನಿಯಲ್ಲಿ ಕಾರ್ಯಕ್ರಮಗಳ ಮುಖ್ಯಸ್ಥರಾಗಿ (Programming Head) ತಮ್ಮ ವೃತ್ತಿಯನ್ನು ಮುಂದುವರಿಸಿದರು. ೨೦೦೪ರಲ್ಲಿ "ಎಡಕಲ್ಲು ಗುಡ್ದದ ಮೇಲೆ" ಎಂಬ ಪುಟ್ಟಣ್ಣನವರ ಪ್ರಖ್ಯಾತ ಕನ್ನಡ ಚಲನಚಿತ್ರದ ನಟ "ಚಂದ್ರಶೇಖರ"ರವರು ನಿರ್ದೇಶಿಸಿದ "ಪೂರ್ವಾಪರ" ಎಂಬ ಕನ್ನಡ ಭಾಷೆಯ ಚಲನಚಿತ್ರವೊಂದು ಬಿಡುಗಡೆಯಾಗಿ ತಕ್ಕಮಟ್ಟಿಗೆ ಯಶಸ್ಸನ್ನು ಗಳಿಸಿತ್ತು. ಆ ಚಿತ್ರವೇ ನಮ್ಮ ಜಯಂತಣ್ಣನವರು ಪ್ರಥಮ ಬಾರಿಗೆ ಚಲನಚಿತ್ರವೊಂದಕ್ಕೆ ಹಾಡಿನ ಸಾಹಿತ್ಯ ಮತ್ತು ಸಂಭಾಷಣೆ ಬರೆದ ಚಿತ್ರ. ಇದರ ನಡುವೆಯೂ ಅವರು ತಮ್ಮ ಸಾಹಿತ್ಯಕೃಷಿಯನ್ನಂತೂ ಕೈ ಬಿಡಲಿಲ್ಲ. ೨೦೦೪ರಲ್ಲಿ "ಆಕಾಶ ಬುಟ್ಟಿ" ಎಂಬ ನಾಟಕಕೃತಿಯು ಪ್ರಕಟವಾಯಿತು. (ಇದಕ್ಕಿಂತಲೂ ಮೊದಲು ಶ್ರೀ ಜಯಂತರವರು ಹೆಸರಾಂತ ಸಿನೆಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಬಳಿ ೧೯೭೯ರಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, " ಮೂರು ದಾರಿಗಳು" ಎಂಬ ಸಿನೆಮಾದಲ್ಲಿ ಕೆಲಸ ಮಾಡಿದ್ದರು. "ಬೆಟ್ಟದ ಜೀವ" ಎಂಬ ಶಿವರಾಂ ಕಾರಂತರ ಕಾದಂಬರಿ ಆಧಾರಿತ ಸಿನೆಮಾ ತಯಾರಿಯಲ್ಲಿ ೧೯೯೦ರಲ್ಲಿ ಭಾಗಿಯಾಗಿದ್ದರು. ಆದರೆ ಆ ಸಿನೆಮಾ ತಯಾರಿಯ ಅರ್ಧದಲ್ಲಿ ನಿಂತು ಹೋಯಿತು.) ನಿಮಗೆಲ್ಲರಿಗೂ ಬಹು ಪರಿಚಿತವಾದ "ಚಿಗುರಿದ ಕನಸು" ಸಿನೆಮಾ ೨೦೦೪ರಲ್ಲಿ ಪ್ರದರ್ಶಿತವಾಯಿತು. ಅ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಮತ್ತು ಹಾಡುಗಳ ಸಾಹಿತ್ಯ ಬರೆದದ್ದು ನಮ್ಮ ಕಾಯ್ಕಿಣಿಯವರೇ. ಈ ಚಲನಚಿತ್ರದ ಉತ್ತಮ ಸಂಭಾಷಣೆಗಾಗಿ ೨೦೦೪ರಲ್ಲಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು.
'ಜಯಂತ್ ಕಾಯ್ಕಿಣಿ, "ಮುಂಗಾರು ಮಳೆ" ಚಲನಚಿತ್ರಕ್ಕಾಗಿ ಕೆಲವು ಹಾಡುಗಳ ಸಾಹಿತ್ಯ ಬರೆದರು. ಹೀಗೆ ಈಗ ಜಯಂತ ಕಾಯ್ಕಿಣಿಯವರ ಹೆಸರು ಹೇಳಿದರೆ ಅಬಾಲವೃದ್ಧರೆಲ್ಲರೂ ಮೊದಲು ನೆನಪಿಸಿಕೊಳ್ಳುವುದು, ೨೦೦೬ರಲ್ಲಿ ಜನಮನಗಳ ಮನದಲ್ಲಿ ಅಭಿಮಾನದ ಹೊಳೆಯನ್ನು ಹರಿಸಿದ ನಿರ್ದೇಶಕ "ಯೋಗರಾಜ್ ಭಟ್" ರವರ ಸಿನೆಮಾ "ಮುಂಗಾರು ಮಳೆ"ಯ ಹಾಡುಗಳ ಸಾಹಿತ್ಯವನ್ನು. ಆ ಹಾಡುಗಳು ಇಂದಿಗೂ ಜನಪ್ರಿಯ. "ಅನಿಸುತಿದೆ ಯಾಕೋ ಇಂದು" ಎಂಬ ಹಾಡಂತೂ ಚಿತ್ರ ರಸಿಕರ ಮನಕ್ಕೆ ಈಗಲೂ ಲಗ್ಗೆ ಹಾಕಿದೆ.ಮುಂಗಾರು ಮಳೆ ಚಿತ್ರದ ಹಾಡುಗಳು ಕಾಯ್ಕಿಣಿಯವರಿಗೆ ಇನ್ನೂ ಹೆಚ್ಚಿನ ಚಲನಚಿತ್ರಗಳಿಗೆ ಹಾಡುಗಳನ್ನು ಬರೆಯುವ ಸಂದರ್ಭಗಳನ್ನು ಒದಗಿಸಿದವು. ಇವರ ಪ್ರಖ್ಯಾತಿಯ ಕಿರೀಟಕ್ಕೆ ಇನ್ನೂ ಹಲವಾರು ಪ್ರಶಸ್ತಿಯ ಗರಿಗಳು ಲಭಿಸಿದವು. ಮುಂಗಾರು ಮಳೆಯ "ಅನಿಸುತಿದೆ ಯಾಕೋ ಇಂದು" ಹಾಡಿನ ಉತ್ತಮ ಸಾಹಿತ್ಯಕ್ಕಾಗಿ ೨೦೦೬ರಲ್ಲಿ ಮತ್ತೊಮ್ಮೆ ಜಯಂತರವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯು ದೊರಕಿತು. ಹಾಗೂ ಅದೇ ಹಾಡಿಗೆ, ಅದೇ ವರ್ಷ ಪುನಃ ಈಟಿವಿ ಕನ್ನಡ ವಾಹಿನಿಯ "ಉತ್ತಮ ಸಿನೆಮಾ ಸಾಹಿತಿ (ಬೆಸ್ಟ್ ಲಿರಿಸಿಸ್ಟ್)" ಪ್ರಶಸ್ತಿಯೂ ದೊರಕಿತು. ಮೈಸೂರ್ ಅಸೋಸಿಯೇಷನ್, ಮುಂಬಯಿ ನ, ೨೦೧೬ ರ ಸಾಲಿನ ಬಂಗಾರದ ಹಬ್ಬದ ದತ್ತಿ ಉಪನ್ಯಾಸಮಾಲೆಯ ಆಹ್ವಾನಿತ ಉಪನ್ಯಾಸಕಾರರಾಗಿ ತಮ್ಮ ಕಾರ್ಯವನ್ನು ನಡೆಸಿಕೊಟ್ಟರು.
೨೦೦೩ರಲ್ಲಿ ಶ್ರೀ ಜಯಂತರವರ "ಜಯಂತ ಕಾಯ್ಕಿಣಿ ಕಥೆಗಳು" ಎಂಬ ಲಘು ಕಥೆಗಳ ಸಂಕಲನ ಪುಸ್ತಕ ಮತ್ತು "ಇತಿ ನಿನ್ನ ಅಮೃತ" ಎಂಬ ನಾಟಕವನ್ನೂ ಪ್ರಕಟಿಸಲಾಯಿತು. ೨೦೦೫ರಲ್ಲಿ ಅವರ "ತೂಫಾನ್ ಮೈಲ್" ಎಂಬ ಸಣ್ಣ ಕಥೆಗಳ ಸಂಗ್ರಹ ಪ್ರಕಟವಾಯಿತು. ೨೦೦೪ರಲ್ಲಿ "ಆಕಾಶ ಬುಟ್ಟಿ" ಎಂಬ ನಾಟಕಕೃತಿಯು ಪ್ರಕಟವಾಯಿತು.
ದಕ್ಷಿಣ ಭಾರತಿಯ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಜಯಂತ್ರವರ ಹೆಸರನ್ನು ಸೂಚಿಸಲಾಗಿತ್ತು.
This article uses material from the Wikipedia ಕನ್ನಡ article ಜಯಂತ ಕಾಯ್ಕಿಣಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.