ಎಚ್.ಗಣಪತಿಯಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರ, ರೈತ ಪರ ಹೋರಾಟಗಾರ ಹಾಗೂ ಕಾಗೋಡು ಸತ್ಯಾಗ್ರಹದ ಮುಂದಾಳು.
ಗಣಪತಿಯಪ್ಪರವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಹೊಸೂರು ಗ್ರಾಮದವರು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಅವರು ಸಿದ್ದಾಪುರ ತೊರೆದು ಸಾಗರ ತಾಲೂಕಿನ ಹಿರೇನಲ್ಲೂರಿಗೆ ಆಗಮಿಸಿ ನೆಲೆಸಿದರು. ತದನಂತರ ಸಾಗರ ಪಟ್ಟಣಕ್ಕೆ ಸಮೀಪದ ವಡ್ನಾಳ ಗ್ರಾಮದಲ್ಲಿ ವಾಸಿಸುತ್ತಿದ್ದರು. ಮಹಾತ್ಮ ಗಾಂಧೀಜಿ ತತ್ವಾದರ್ಶ, ಹೋರಾಟದಲ್ಲಿ ನಂಬಿಕೆಯಿಟ್ಟಿದ್ದ ಗಣಪತಿಯಪ್ಪರವರು ತಮ್ಮ ಜೀವನದ ಕೊನೆಯವರೆಗೂ ಅದರಂತೆ ಮುನ್ನಡೆದರು. ೧೯೪೨ರಲ್ಲಿ ನಡೆದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ’ಯಲ್ಲಿ ಇವರು ಭಾಗವಹಿಸಿದ್ದರು.
ಸಿದ್ಧಾಪುರ ತಾಲೂಕಿನ ಹೊಸೂರಿನಲ್ಲಿ ೧೯೨೪ರ ಆಗಸ್ಟ್ ೩ ರಂದು ಜನಿಸಿದರು. ಕುರುವತ್ತಿ ಕನ್ನಪ್ಪ ಮತ್ತು ಕನ್ನಮ್ಮ ದಂಪತಿಯ ಕಿರಿಯ ಪುತ್ರ. ಸಿದ್ಧಾಪುರದಲ್ಲಿಯೇ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣ ಮುಗಿಸಿದರು. ೧೯೩೮ರಲ್ಲಿ ಮುಲ್ಕಿ ಪರೀಕ್ಷೆ(ಆಗಿನ ಕಾಲದ ೭ನೆ ತರಗತಿ ಮಟ್ಟ)ಯಲ್ಲಿ ಪಾಸಾದರು. ಆ ಕಾಲದಲ್ಲಿ ದೀವರ ಜನಾಂಗದಲ್ಲಿ ಇವರೇ ಮೊದಲ ವಿದ್ಯಾವಂತ. ಸಿದ್ದಾಪುರದ ರಾಷ್ಟ್ರೀಯ ಶಾಲೆಯಲ್ಲಿ ಮೂರು ವರ್ಷ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಅಭ್ಯಾಸ ಮಾಡಿದರು.
೧೯೪೦ರಲ್ಲಿ ಸಿದ್ಧಾಪುರ ಪಂಚಾಯತಿ ಕಾರ್ಯದರ್ಶಿಯಾಗಿ ನೇಮಕವಾದರು. ಸಿದ್ಧಾಪುರ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿದರು. ೧೯೪೨ರ ಆಗಸ್ಟ್ ನಲ್ಲಿ ಮುಂಬಯಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಸರ್ಕಾರಿ ನೌಕರರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿದ್ದ ಇವರು ಅದೇ ಕಾರಣಕ್ಕಾಗಿ ಜೈಲು ವಾಸ ಮಾಡಬೇಕಾಗಿ ಬಂತು. ಕೆಲಸ ಕಳೆದುಕೊಳ್ಳಬೇಕಾಯಿತು. ಕಾಂಗ್ರೆಸ್ ಚಳುವಳಿಯಲ್ಲಿ ಸೇರಿ ಭೂಗತರಾಗಿ ಕರಪತ್ರ ಹಂಚುವಾಗ ಸಿರ್ಸಿಯಲ್ಲಿ ಸಿಕ್ಕಿಬಿದ್ದರು. ಮೂರುತಿಂಗಳ ಕಾಲ ಕಠಿಣ ಸಜೆಗೆ ಈಡು ಮಾಡಿ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಯಿತು. ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದ ನಂತರ ಮನೆಯವರ ತಿರಸ್ಕಾರಕ್ಕೆ ಗುರಿಯಾಗಿ ಆ ಊರನ್ನು ಬಿಟ್ಟು ಸಾಗರ ತಾಲೂಕಿನ ಹಿರೇನಲ್ಲೂರಿಗೆ ಬಂದರು. ಅಲ್ಲಿ ಶಾಲೆಯೊಂದನ್ನು ಪ್ರಾರಂಭಿಸಿದರು. ಸುತ್ತಮುತ್ತಲ ಮಕ್ಕಳಿಗೆ ಉಚಿತವಾಗಿ ಅಕ್ಷರ ಕಲಿಸಲು ಆರಂಭಿಸಿದರು.
ಊರಿನಲ್ಲಿ ಜಾತಿ ತಾರತಮ್ಯದ ವಿರುದ್ಧ ನಿಂತ ಇವರಿಗೆ ಭೂಮಾಲೀಕರು ಬಹಿಷ್ಕಾರ ಹಾಕಿದರು. ೧೯೪೮ರಲ್ಲಿ ಇವರು ರೈತ ಸಂಘ ಸ್ಥಾಪಿಸಿ ಕಾರ್ಯದರ್ಶಿಯಾದರು. ತಾಲೂಕಿನ ರೈತರನ್ನು ಒಗ್ಗೂಡಿಸಿದರು. 'ಉಳುವವನೆ ಹೊಲದೊಡೆಯ' ಎಂದು ರೈತರಿಗೆ ಹಕ್ಕುಗಳ ಅರಿವು ಮೂಡಿಸಿದರು. ಗೇಣಿದಾರರು ಮತ್ತು ಭೂಮಾಲೀಕರ ನಡುವೆ ನಡೆದ ವಾಗ್ವಾದಗಳು ಹೊಡೆದಾಟ ಮತ್ತು ಪ್ರತಿಭಟನೆಯ ರೂಪ ಪಡೆದಾಗ ಅಹಿಂಸಾತ್ಮಕ ಚಳುವಳಿಯಲ್ಲಿ ನಂಬಿಕೆ ಇದ್ದ ಗಣಪತಿಯಪ್ಪನವರು ರೈತರಿಗೆ ಇದನ್ನು ಉಪದೇಶಿಸಿದ್ದರಿಂದ ರೈತರು ಅದರಂತೆ ನಡೆದರು.
ನಂತರದ ದಿನಗಳಲ್ಲಿ ಗೇಣಿದಾರರು ಭೂಮಾಲಿಕರ ವಿರುದ್ಧ ಆರಂಭಿಸಿದ ಹೋರಾಟ ಕಾಗೋಡು ಚಳುವಳಿ ಎಂದೇ ಖ್ಯಾತಿ ಪಡೆಯಿತು. ಕಾಗೋಡು ಚಳವಳಿಯಲ್ಲಿ ರೈತರ ಪರವಾಗಿ ನಿಂತರು. ಅದರ ಮುಂಚೂಣಿಯಲ್ಲಿದ್ದು ಚಳವಳಿಯಲ್ಲಿ ತೊಡಗಿಕೊಂಡರು.
ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ವಿರುದ್ಧ ಸಿರ್ಸಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಅತ್ಯಲ್ಪಮತಗಳ ಅಂತರದಲ್ಲಿ ಅವರು ಪರಾಭವಗೊಂಡರು. ರೈತಸಂಘದಿಂದ ಶಿವಮೊಗ್ಗ ಲೋಕಸಭೆ ಹಾಗೂ ಸಾಗರ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡರು. ೮೮ನೇ ವಯಸ್ಸಿನಲ್ಲೂ ಶಿಕಾರಿಪುರದಲ್ಲಿ ನಡೆದ ಭೂ ಹೋರಾಟದಲ್ಲಿ ಭಾಗವಹಿಸಿದ್ದರು. ಶಿಕಾರಿಪುರ ತಾಲೂಕಿನ ಬಗರ್ ಹುಕುಂ ಸಮಸ್ಯೆ ಮತ್ತು ಸೊರಬ ತಾಲೂಕಿ ದಂಡಾವತಿ ಹೋರಾಟಗಳಲ್ಲಿ ಯು ಇವರು ನಾಯಕತ್ವ ವಹಿಸಿದ್ದರು. ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಯ ಪ್ರತಿ ಗ್ರಾಮಗಳಿಗೂ ತೆರಳಿ ಸರಕಾರದಿಂದ ಕಾನೂನು ಬದ್ಧವಾಗಿ ಬರಬೇಕಾದ ಸೌಲಭ್ಯ ಕೊಡಿಸಲು ಪ್ರಯತ್ನ ಮಾಡಿದ್ದರು.
ಹೀಗೆ ಹಲವು ಪ್ರಶಸ್ತಿ-ಗೌರವಗಳನ್ನು ಅವರು ಪಡೆದಿದ್ದಾರೆ.
ವಡ್ನಾಳ ಗ್ರಾಮದ ತಮ್ಮ ನಿವಾಸದಲ್ಲಿ ಸೆಪ್ಟೆಂಬರ್ ೩೦, ೨೦೧೪ ಮಂಗಳವಾರ ಹೃದಯಾಘಾತದಿಂದ ನಿಧನರಾದರು.
This article uses material from the Wikipedia ಕನ್ನಡ article ಗಣಪತಿಯಪ್ಪ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.