ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ.
ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಳತೂರು ಗ್ರಾಮದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ.
ಗಂಗರು ಸ್ಥಳಿಯರಾಗಿದ್ದು ಕೋಲಾರ, ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಒಳಗೊಂಡಂತೆ ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದರು. ಇವರ ಮೊದಲ ರಾಜಧಾನಿ ಕೋಲಾರ.ನಂತರ ತಲಕಾಡಿನಿಂದ ಆಳಿದರು. ಚನ್ನಪಟ್ಟಣ ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಣ್ಣೆ ಇವರ ಉಪ ರಾಜಧಾನಿಗಳಾಗಿದ್ದವು.ಇವರು ಕ್ರಿ.ಶ.೩ನೇಶತಮಾನದಿಂದ ೧೦ ನೇ ಶತಮಾನದವರೆಗೆ ಸುಮಾರು ೮೦೦ ವರ್ಷಗಳ ಕಾಲ ಸುಧೀರ್ಘ ಆಳ್ವಿಕೆ ನಡೆಸಿದರು.ಇವರು ಜೈನಧರ್ಮಕ್ಕೆ ವಿಶೇಷ ಒತ್ತು ನೀಡಿದರು. ಗಂಗರಲ್ಲಿ ಪ್ರಸಿದ್ಧನಾದ ದೊರೆ ಶ್ರೀಪುರುಷನು ರಾಷ್ಟ್ರಕೂಟರ ವಿರುದ್ಧ ಸುಧೀರ್ಘ ಕಾಲ ಹೋರಾಟ ನಡೆಸಿದನು. ಶ್ರೀಪುರುಷನು ಕುಣಿಗಲ್ಲಿನ ದೊಡ್ಡಕೆರೆಯನ್ನು ನಿರ್ಮಿಸಿದನು. ರಾಚಮಲ್ಲನ ಮಂತ್ರಿಯಾದ ಚಾವುಂಡರಾಯನುಶ್ರವಣಬೆಳಗೊಳದಲ್ಲಿ ಸು. ಕ್ರಿ.ಶ. ೯೮೦ರಲ್ಲಿ ಗೊಮ್ಮಟೇಶ್ವರನ ಏಕಶಿಲಾ ಮಹಾಮೂರ್ತಿಯನ್ನು ಕಡೆಸಿದನು. ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕರ್ನಾಟಕದಲ್ಲಿ ಕೊನೆಗೊಂಡಿತು ಹಾಗು ಇವರ ಮುಂದಿನ ಪೀಳಿಗೆಯು ಮುಂದೆ ಓಡಿಶದಲ್ಲಿ ನೆಲೆಯೂರಿ ಅಲ್ಲಿ ಸಾಮ್ರಾಜ್ಯ ಸ್ತಾಪಿಸಲು ಯಶಸ್ವಿಯಾಯಿತು ಅದನ್ನೇ ಪೂರ್ವದ ಗಂಗರು ಎಂದು ಇತಿಹಾಸಕಾರರು ಕರೆದರು. ಇವರ ವಂಶಸ್ತರಾದ ಪೂರ್ವದ ಗಂಗರು ವಿಶ್ವ ಪ್ರಸಿದ್ದ ಕೊನಾರ್ಕ್ ಸೂರ್ಯ ಮಂದಿರ ಹಾಗು ಪೂರಿ ಜಗನ್ನಾಥ ಮಂದಿರವನ್ನು ಓಡಿಶದಲ್ಲಿ ಕಟ್ಟಿದರು.
ಪ್ರಸಿದ್ಧ ರಾಜರುಗಳು
೧.ದಡಿಗ or ಕೊಂಗುಣೀವರ್ಮ, (ಕ್ರಿ.ಶ. ೩೨೫-೩೫೦)-ಇವನು ಗಂಗ ವಂಶದ ಸ್ಥಾಪಕ: ಇವನ ಬಿರುದುಗಳು-'ಧರ್ಮಮಹಾರಾಜ','ಪದ್ಮನಾಭವಸುತ' ಹಾಗೂ ಬೃಹತ್ ಬಾಣರನ್ನು ಸೋಲಿಸಿ 'ಬೃಹತ್ ಬಾಣವಂಶವನದವನಾಲ' ಎಂಬ ಬಿರುದುಗಳನ್ನು ಪಡೆದಿದ್ದನು. ೨. ಮಾಧವ, (ಕ್ರಿ.ಶ. ೩೫೦-೩೭೫) ೩. ಆರ್ಯವರ್ಮ, (ಕ್ರಿ.ಶ. ೩೭೫-೪೦೦) ೪. ಮಾಧವ-೩, (ಕ್ರಿ.ಶ. ೪೪೦-೪೬೯) ೫. ಅವಿನೀತ, (ಕ್ರಿ.ಶ. ೪೬೯-೫೨೯) ೬. ದುರ್ವಿನೀತ, (ಕ್ರಿ.ಶ. ೫೨೯-೫೭೯) ೭. ಶ್ರೀವಿಕ್ರಮ, (ಕ್ರಿ.ಶ. ೬೨೯-೬೫೪) ೮. ಭೂವಿಕ್ರಮ, (ಕ್ರಿ.ಶ. ೬೫೪-೬೭೯) ೯. ಶಿವಮಾರ-೧, (ಕ್ರಿ.ಶ. ೬೭೯-೭೨೫) ೧೦. ಶ್ರೀಪುರುಷ, (ಕ್ರಿ.ಶ. ೭೨೫-೭೮೮) ೧೧. ಸೈಗೊಟ್ಟ ಶಿವಮಾರ, (ಕ್ರಿ.ಶ. ೭೮೮-೮೧೬) ೧೨. ರಾಚಮಲ್ಲ, (ಕ್ರಿ.ಶ. ೮೧೬-೮೪೩) ೧೩. ನೀತಿಮಾರ್ಗ ಎರೆಗಂಗ (ಕ್ರಿ.ಶ. ೮೪೩-೮೭೦) ೧೪. ರಾಚಮಲ್ಲ-೨, (ಕ್ರಿ.ಶ. ೮೭೦-೯೧೯) ೧೫. ಎರೆಗಂಗ ೧೬. ಬೂತುಗ-೨, ಕ್ರಿ.ಶ. ೯೩೬-೯೬೧) ೧೭. ಮಾರಸಿಂಹ-೨, (ಕ್ರಿ.ಶ. ೯೬೩-೯೭೪) ೧೮. ರಾಚಮಲ್ಲ-೩, (ಕ್ರಿ.ಶ. ೯೭೪-೯೯೯) ೧೯. ರಾಚಮಲ್ಲ-೪,
ಇತರ ರಾಜಮನೆತನಗಳೊಂದಿಗಿನ ಸಂಬಂಧಗಳು
ಶಿರೋಲೇಖ
ಗೊಮ್ಮಟೇಶ್ವರ ಇರುವುದು - ಹಾಸನ ಜಿಲ್ಲೆಯಲ್ಲಿ ಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿ ಗಂಗರ ಮೊದಲ ರಾಜಧಾನಿ - ಕುವಲಾಲ ಗಂಗರ ಎರಡನೇ ರಾಜಧಾನಿ - ತಲಕಾಡು ಗಂಗರ ಮೂರನೇ ರಾಜಧಾನಿ - ಮಾಕುಂದ ಗಂಗರ ಕಾಲದ ಗಣ್ಯ ಕೇಂದ್ರ - ನಂದಿ ದುರ್ಗ ಅಥವಾ ನಂದಿ ಬೆಟ್ಟ ದಡಿಗನಿಗೆ ಇರುವ ಇನ್ನೋಂದು ಹೆಸರು - ಕೊಂಗುಣಿವರ್ಮ ಗೊಮ್ಮಟೇಶ್ವರನ ವಿಗ್ರಹ ನಿರ್ಮಾಣವಾದ ವರ್ಷ - ಕ್ರಿ.ಶ. 982 ಗಂಗರ ಕಾಲದ ಗ್ರಾಮದ ಮುಖ್ಯಸ್ಥ - ಪ್ರಭುಗಾವುಂಡ ಗಂಗರ ಕಾಲದಲ್ಲಿದ್ದ ಹಿರಿಯ ರೈತರ ಸಮಿತಿ - ಪ್ರಜೆಗಾಮುಂಡ ಗಂಗರ ಕಾಲದಲ್ಲಿದ ಕುಟುಂಬ ಪ್ರಮುಖರ ಕೂಟ - ಮಹಾಜನ ಗಂಗರ ಕಾಲದಲ್ಲಿದ ದೊಡ್ಡ ನೆಯ್ಗೆಯ ಕೇಂದ್ರ - ವಿಜಯ ಪುರ ಗಂಗರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು , ಅಗ್ರಹಾರ , ಹಾಗೂ ಬ್ರಹ್ಮಪುರಿ ಬ್ರಹ್ಮಪುರಿ ಎಂದರೆ - ಒಂದು ಪೇಟೆಯಲ್ಲಿನ ಬ್ರಾಹ್ಮಣರ ಬೀದಿ ಗಂಗರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ - ಶ್ರವಮಬೆಳಗೋಳ ಜೈನ ಮಠ ಬಾಣನ “ ಕಾದಂಬರಿ ” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು - ನಾಗವರ್ಮ ಗಂಗರ ಕಾಲದಲ್ಲಿ ಭತ್ತ ಕುಟ್ಟುವಾಗ ಹೇಳುವ ಗೀತೆಗಳನ್ನು ಒಳಗೊಂಡ ಕೃತಿ - ಗಜಾಷ್ಟಕ ಗಂಗರ ಕಾಲದ ಪಂಚಕೂಟ ಬಸದಿ ಇರುವ ಸ್ಥಳ - ಕದಂಬ ಹಳ್ಳಿ ಬೆಂಗಳೂರಿನ ಮ್ಯೂಸಿಯಂ ನಲ್ಲಿರುವ ಗಂಗರ ಕಾಲದ ವೀರಗಲ್ಲಿನ ಹೆಸರು - ಬೇಗೂರು ವೀರಗಲ್ಲು
ಚನ್ನಪಟ್ಟಣ್ಣದ “ ಮಾಕುಂದ ” ಹಾಗೂ ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ “ ಮನ್ನೇಯ ” ಇವರ ಿತರ ರಾಜಧಾನಿ .
ಗಂಗರನ್ನು “ ತಲಕಾಡಿನ ಗಂಗರು ” ಎಂದು ಪ್ರಸಿದ್ದರಾಗಿದ್ದರು .
ಗಂಗರ ರಾಜ ಮುದ್ರೆ ಅಥವಾ ರಾಜ ಲಾಂಛನ “ ಮದಗಜ ”
ಗಂಗರು ಆಳಿತದ ಪ್ರದೇಶವನ್ನು “ ಗಂಗವಾಡಿ ಅಥವಾ ಗಂಗನಾಡು ” ಎಂದು ಕರೆಯುತ್ತಿದ್ದರು .
ಗಂಗರು ಸ್ವತಂತ್ರರಾಗಿ ಕ್ರಿ.ಶ. 350 – 600 ರವರೆಗೆ ಆಳ್ವಿಕೆ ಮಾಡಿದ್ದಾರೆ .
ಗಂಗರು ಚಾಲುಕ್ಯರ ಸಾಮಂತರಾಗಿ ಕ್ರಿ.ಶ.600 - 758 ರವರೆಗೆ ಆಳ್ವಿಕೆ ಮಾಡಿದರು .
ಗಂಗರು ರಾಷ್ಷ್ರಕೂಟರ ಸಾಮಾಂತರಾಗಿ ಕ್ರಿ.ಶ.757 – 973 ರವರೆಗೆ ಆಳ್ವಿಕೆ ಮಾಡಿದರು .
ಗಂಗರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973 – 990 ರವರೆಗೆ ಆಳ್ವಿಕೆ ಮಾಡಿದರು .
“ತಲಕಾಡು ” ಗಂಗರ ಪ್ರಧಾನ ಆಡಳಿತ ಕೇಂದ್ರವಾಗಿತ್ತು .
ಗಂಗರ ಮೂಲ
ದೈವಿ ಸಿದ್ದಾಂತದ ಪ್ರಕಾರ ಇವರು ಇಕ್ಷ್ವಾಕು ವಂಶದವರೆಂದು
ಕಣ್ವ ಮೂಲದ ಪ್ರಕಾರ ಇವರು ಕಣ್ವ ವಂಶದವರು ಎಂದು
ತಮಿಳು ಮೂಲ - ಇವರು ಮೂಲತಃ “ ಪೆರೂರು ” ಆಗಿದ್ದು ಕೊಯಮತ್ತೂರು ಇವರು ತಮಿಳು ಮೂಲದಿಂದ ಬಂದವರೆಂದು ಹೇಳಲಾಗಿದೆ. ಚೋಳರು ಮತ್ತು ಗಂಗರು ಒಂದೇ ಮೂಲದಿಂದ ಬಂದಂತಹ (ಸೂರ್ಯವಂಶ-ಇಕ್ಷ್ವಾಕು ಕುಲ) ದಾಯಾದಿಗಳಾಗಿದ್ದು, ಮೂಲತಃ ಮೈಸೂರು, ಚಾಮರಾಜನಗರ, ಕೊಯಮತ್ತೂರು ಭಾಗಗಳಲ್ಲಿ ಕಂಡುಬರುವ ಕರ್ನಾಟಕ ಕ್ಷಾತ್ರ ಪರಂಪರೆಯ ಕ್ಷತ್ರಿಯ ಸಮುದಾಯದ ಉಪ ಪಂಗಡವಾದ ಸೂರ್ಯವಂಶಿಿ ತೊರೆಯರ್ ಸಮುದಾಯದ ಸೂರ್ಯವಂಶ ಕುಲದವರು ಎಂಬ ಅಭಿಪ್ರಾಯವಿದೆ.ಕರ್ನಾಟಕ ದಲ್ಲಿ ಇವರನ್ನ ರೈತಪಿ ವರ್ಗದವರು ಎಂದು ಕರಯುತ್ತಾರೆ. ಗಂಗಾ ಎಂಬುದು ಇವರ ಬಿರುದಾಗಿದೆ. ಕೊಂಗನಾಡಿನಿಂದ ಬಂದ ಕಾರಣ ಕೊಂಗರು ಎಂಬುದು ಗಂಗರು ಎಂದಾಗಿದೆ ಎಂಬುದಾಗಿಯೂ ಹೇಳಲಾಗುತ್ತದೆ. ಈ ಮನೆತನದ ಮೂಲಪುರುಷನ ಹೆಸರು ಕೊಂಗುಣಿವರ್ಮ ಎಂಬುದು ಗಮನಾರ್ಹ.
ಕನ್ನಡ ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು - ಗಂಗರು ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ಈ ವಂಶಕ್ಕೆ “ಗಂಗ ” ಎಂದು ಹೆಸರು ಬಂದಿದೆ .
ಗಂಗಟಿಕರು: ಗಂಗ ಸಾಮ್ರಾಜ್ಯದ ತಿರುಳು ಭಾಗದಲ್ಲಿ ವಾಸಿಸುತ್ತಿದ್ದ, ಬಹುಸಂಖ್ಯಾತ ರೈತಾಪಿ ವರ್ಗ ( ಒಕ್ಕಲಿಗರು). ಎಡ್ಗರ್ ಥರ್ಸ್ಟನ್ ರವರು ತಮ್ಮ "ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು" ಕೃತಿಯಲ್ಲಿ 'ದಕ್ಷಿಣ ಗಂಗೆ' ಎಂದು ಹೆಸರಾದ ಕಾವೇರಿ ನದಿಯ ತಟದಲ್ಲಿ ವಾಸಿಸುತ್ತಿದ್ದರಿಂದ ಇವರಿಗೆ ಗಂಗಟಕಾರ ಎಂಬ ಹೆಸರುು ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.ಆದರೆ ಒಕ್ಕಲಿಗರಿಗೂ ಗಂಗರಿಗೂ ಒಂದು ರೀತಿಯ ಸಂಬಂಧವಿದೆ
ಗಂಗ ಮನೆತನದ ರಾಜರುಗಳು
* ದಡಿಗ
* ಒಂದನೇ ಮಾಧವ
* ಎರಡನೇ ಮಾಧವ
* ಮೂರನೇ ಮಾಧವ
* ಅವನೀತ
* ದುರ್ವಿನೀತ ಯುದ್ಧಗಳು
* ಶ್ರೀಪುರುಷ
* ಎರಡನೇ ಶಿವಮಾರ
ಒಂದನೇ ರಾಚ ಮಲ್ಲ
ಗಂಗರ ರಾಜಕೀಯ ಇತಿಹಾಸ
ದಡಿಗ ಅಥವಾ ಕೊಂಗುಣಿ ವರ್ಮ
ಇವನು ಗಂಗ ವಂಶದ ಸ್ಥಾಪಕ
“ ಕುವಲಾಲ ಅಥವಾ ಕೋಲಾರ ” ಇವನ ರಾಜಧಾನಿ .
ಬಾಣರನ್ನು ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ ಹಾಕಿದ
ಧರ್ಮ ಮಹಾರಾಜ ಹಾಗೂ ಬಾಣ ವಂಶದವನ ದಾವಲನ ಎಂಬುದು ಇವನ ಬಿರುದುದಳು .
ಈತನ ಗುರುವಿನ ಹೆಸರು - ಸಿಂಹ ನಂದಿ ( ಜೈನಗುರು )
ಸಿಂಹ ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ “ ದುಂಡಲಿ ” ಎಂಬಲ್ಲಿ ಒಂದು ಚೈತ್ಯಲಾಯವನ್ನು ನಿರ್ಮಿಸಿದನು ..
ಒಂದನೇ ಮಾಧವ
ದಡಿಗನ ನಂತರ ಅಧಿಕಾರಕ್ಕೆ ಬಂದವನು
ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ ನೀಡಿದ್ದನು
ಈತ ರಚಿಸಿದ ಕೃತಿ - “ ದತ್ತ ಸೂತ್ರ ”
ಇವನ ನಂತರ ಹರಿವರ್ಮ ಹಾಗೂ 2 ನೇ ಮಾಧವ ಆಳಿದರು
ಮೂರನೇ ಮಾಧವ
ಇವನು ತಂಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ .
ಈತ ಕದಂಬ ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ
ವಿಜಯ ಕೀರ್ತಿ -ಅವನ ದೀಕ್ಷಾ ಗುರುಗಳಾಗಿದ್ದರು .
ಅವನೀತ
(500-528)
ಈತ ಮೂರನೇ ಮಾಧವನ ಮಗ
ಈತ ಶಿವನ ಆರಾಧಕನಾಗಿದ್ದನು .
ಈತ ಸರ್ವಧರ್ಮ ಸಮನ್ವಯಿಯಾಗಿದ್ದನು
ಇತನನ್ನ ಶಾಸನಗಳು “ ಹರ ಚರಣಾರ ಎಂದ ಪ್ರಣಿಪಾತ ” ಎಂದು ಉಲ್ಲೇಕಿಸಿದೆ.
ಗಂಗರ ಕಾಲದ ಪ್ರಮುಖ ಬಸದಿಗಳು - ಪಾಶ್ವನಾಥ ಬಸದಿ ಹಾಗೂ ಚಾವುಂಡರಾಯ ಬಸದಿ
ಶ್ರಣಬೆಳಗೋಳದಲ್ಲಿರುವ ಪ್ರಮುಖ ಸ್ಥಂಭಗಳು - ಮಾನಸ್ತಂಭ , ಬ್ರಹ್ಮದೇವರ ಸ್ತಂಭ ಹಾಗೂ ತ್ಯಾಗದ ಬ್ರಹ್ಮ ದೇವರ ಸ್ತಂಭ
ಗಂಗರ ಕಾಲದ ಅಭೂತ ಪೂರ್ವ ಶಿಲ್ಪ ಕಲಾ ಕೆತ್ತನೆ - ಶ್ರವಮಬೆಳಗೋಳದ ಗೊಮ್ಮಟ
ಇವರ ಕಾಲದಲ್ಲಿ ಪ್ರಸಿದ್ದ ನೃತ್ಯಗಾತಿ - ಬಾಚಲು ದೇವಿ
ಬಾಚಲು ದೇವಿಗೆ ಇದ್ದ ಬಿರುದುಗಳು - ನೃತ್ಯವಿಶಾರದೆ ಹಾಗೂ ಪಾತ್ರ ಜಗದವಳೆ
ಗಂಗರ ಆಡಳಿತದ ಹರವು
ಮೊದಲು ‘ಕುವಲಾಳ’(ಕೋಲಾರ)ದಿಂದ ಆಳುತ್ತಿದ್ದ ದಡಿಗ ಮತ್ತು ಮಾದವರು ಹಾಗು ಇನ್ನಿತರ ಗಂಗರಸರು ಹರಿವರ್ಮನ ಹೊತ್ತಿನಲ್ಲಿ ( ಕ್ರಿ.ಶ 390- 410) ಕುವಲಾಳವನ್ನುಬಿಟ್ಟು ತಲಕಾಡಿನಿಂದ ಆಳಲಾರಂಬಿಸಿದರು ಹೀಗೆ ತಲಕಾಡು ಮೇಲ್ಪಟ್ಟಣವಾಯಿತು. ಚನ್ನಪಟ್ಟಣ ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಾನ್ಯಪುರ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ಇವರ ಕಿರುಪಟ್ಟಣಗಳಾಗಿದ್ದವು, ಹಾಗು ಮಾನ್ಯಪುರದಲ್ಲಿ ಇವರ ಅರಮನೆ ಕೂಡ ಇದ್ದಿತ್ತು. ಹೀಗಾಗಿ ಕೋಲಾರ, ಬೆಂಗಳೂರು, ತುಮಕೂರು ಇವರ ಆಡಳಿತದ ಬಾಗವಾಯ್ತು. ಅವಿನೀತನು(ಕ್ರಿ.ಶ 469 – 529) ತನ್ನ ಆಡಳಿತದ ಹರವನ್ನು ಕೊಂಗುನಾಡಿನವರೆಗೆ ಹರಡಿದನು, ಹಾಗು ಸೆಂದ್ರಕ (ಚಿಕ್ಕಮಗಳೂರು ಜಿಲ್ಲೆಯ ಬಾಗಗಳು), ಪುನ್ನಾಟ ಮತ್ತು ಪನ್ನಾಡ(ಚಾಮರಾಜನಗರ ಜಿಲ್ಲೆಯ ಬಾಗಗಳು)ದವರೆಗೂ ವಿಸ್ತರಿಸಿದನು.
ಗಂಗನಾಡಿನ ತಿರುಳುಬಾಗವನ್ನು ‘ಗಂಗವಾಡಿ’ ಎಂದು ಕರೆಯಲಾಗುತ್ತಿತ್ತು. ಗಂಗವಾಡಿ ಬಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿತ್ತು. ’ಪುನ್ನಾಟ’ಕ್ಕೆ ತಲಕಾಡಿನ ಗಂಗರು ತಮ್ಮ ಆಡಳಿತವನ್ನು ವಿಸ್ತರಿಸಿದ ಸಂಗತಿಯನ್ನು ಮಡಕೆರೆ(ಕ್ರಿ.ಶ 466), ಸಾಲಿಗ್ರಾಮ (ಕ್ರಿ.ಶ 600ರ ಸುಮಾರು), ತಿರುಮೊರೆಕೋಳಿ(ಕ್ರಿ.ಶ 700ರ ಸುಮಾರು), ಕುಲಗಾಣ, ದೇಬೂರು ಮತ್ತು ಹೆಬ್ಬೂರಿನ ಕಲ್ಬರಹಗಳು ಹೇಳುತ್ತವೆ. ಹಿಂದೆ ಪುನ್ನಾಟವು ಒಂದು ಚಿಕ್ಕ ನಾಡಗಿತ್ತು ಎಂದು ಅವನೀತನ ಕಲ್ಬರಹಗಳಿಂದ ತಿಳಿದು ಬರುತ್ತದೆ ಹಾಗು ಪುನ್ನಾಟರ ಪಟ್ಟದರಸಿಯನ್ನು ಅವನೀತನು ಮದುವೆಯಾಗುತ್ತಾನೆ ಮತ್ತು ಅವನ ಮಗನೇ ದುರ್ವಿನೀತ. ಗಂಗರಸರಲ್ಲೇ ಗಟ್ಟಿಗನಾದ ‘ದುರ್ವಿನೀತ’ನು (ಕ್ರಿ.ಶ 529 – 579 ) ತಮಿಳುನಾಡಿನ ತೊಂಡಯ್ಮಂಡಲದ ಕಾಳಗದಲ್ಲಿ ಪಲ್ಲವರನ್ನು ಸೋಲಿಸಿದನು. ನಲ್ಲಾಳ ಮತ್ತು ಕಡಗತ್ತುರು ಕಲ್ಬರಹವು ಇದರ ಬಗ್ಗೆ ವಿವರಿಸುತ್ತದೆ. ಹೀಗಾಗಿ ತಮಿಳುನಾಡಿನ ಹಲವು ಬಾಗವನ್ನು ಕನ್ನಡಿಗರಾದ ಗಂಗರು ಆಳಿದರು.
ದುರ್ವಿನೀತನ ಆಡಳಿತದ ಹರವು ತೆಂಕಣದಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ಬಡಗಣದ ಬಳ್ಳಾರಿಯವರೆಗೆ ಹರಡಿತ್ತು. ದುರ್ವಿನೀತನು ತನ್ನ ಮಗಳನ್ನೇ ಕನ್ನಡಿಗರ ಕೆಚ್ಚೆದೆಯ ಚಾಲುಕ್ಯರರಸು ಇಮ್ಮಡಿ ಪುಲಿಕೇಶಿಗೆ ಮಾಡುವೆಮಾಡಿಕೊಟ್ಟಿದ್ದ, ಇದು ರಾಜ್ಯವನ್ನಾಳಲು ಇನ್ನೂ ಸಹಾಯ ಮಾಡಿತು. ದುರ್ವಿನೀತನು ಕಲೆ ಮತ್ತು ಸಾಹಿತ್ಯಕ್ಕೆ ಬೆಂಬಲ ನೀಡಿದ್ದನು, ಅವನೇ ‘ಶಬ್ದಾವತಾರ‘ ಎಂಬ ಹೊತ್ತಿಗೆಯನ್ನು ಬರೆದಿದ್ದನೆಂದು ‘ಗುಮ್ಮರೆಡ್ಡಿಪುರದ ಕಲ್ಬರಹ’ವು ತಿಳಿಸುತ್ತದೆ. ಗಂಗರರಸ ಇಮ್ಮಡಿ ಶಿವಮಾರನು (ಕ್ರಿ.ಶ) ರಾಶ್ಟ್ರಕೂಟರೊಂದಿಗೆ ಹಗೆ ಸಾದಿಸಿದ್ದನು. ಆದರೆ ಹಲ ವರುಶಗಳ ನಂತರ ರಾಶ್ಟ್ರಕೂಟರ ಒಂದನೇ ಅಮೋಗವರ್ಶನು ತನ್ನಮಗಳಾದ ಚಂದ್ರಬ್ಬಲಬ್ಬೆಯನ್ನು ಏರೆಗಂಗ ನೀತಿಮಾರ್ಗನ ಮಗ ಒಂದನೇ ಬೂತುಗನಿಗೆ ಮದುವೆಮಾಡಿಕೊಟ್ಟನು. ಅಲ್ಲಿಂದ ಈ ಎರಡು ಕನ್ನಡದ ಅರಸುಮನೆತನಗಳು ಒಡನಾಡಿಗಳಾದವು.
ರಾಶ್ಟ್ರಕೂಟರ ಮುಮ್ಮುಡಿ ಅಮೋಗವರ್ಶನು ಗಂಗರ ಇಮ್ಮಡಿ ಬೂತುಗನಿಗೆ(ಕ್ರಿ.ಶ 938 – 961) ಗದ್ದುಗೆಯೇರಲು ಸಹಾಯ ಮಾಡಿದನು. ಬಳಿಕ ಮುಮ್ಮುಡಿ ಅಮೋಗವರ್ಶನ ಮಗ ಮುಮ್ಮುಡಿ ಕ್ರಿಶ್ಣನು, ಇಮ್ಮಡಿ ಬೂತುಗನ ಜೊತೆ ಸೇರಿ ತಮಿಳುನಾಡಿನ ತಕ್ಕೊಳಂನಲ್ಲಿ ಚೋಳರನ್ನು ಸೋಲಿಸಿದರು. ಈ ಕಾಳಗದ ಮಾಹಿತಿಯನ್ನು ‘ಅತಕೂರಿನ ಕಲ್ಬರಹದಲ್ಲಿ’ ಕೆತ್ತಿಸಿಸಲಾಗಿದೆ. ಕ್ರಿ.ಶ 963 ರಲ್ಲಿ ಪಟ್ಟಕ್ಕೇರಿದ ಗಂಗರರಸ ಇಮ್ಮಡಿ ಮಾರಸಿಂಹನು ಬಡಗಣ ಬಾರತದ ಗುರ್ಜರ-ಪ್ರತಿಹಾರ ಮತ್ತು ಪರಮಾರರನ್ನು ಸೋಲಿಸಲು ರಾಶ್ಟ್ರಕೂಟರಿಗೆ ಸಹಾಯ ಮಾಡಿದನು. ಇಮ್ಮಡಿ ಮಾರಸಿಂಹ ಮತ್ತು ನಾಲ್ವಡಿ ರಾಚಮಲ್ಲರ ಹೊತ್ತಿನಲ್ಲಿ ಹೆಸರಾಂತ ಮಂತ್ರಿಯಾಗಿ, ಪಡೆಯ ಮೇಲುಗನಾಗಿ ಮತ್ತು ಕವಿಯಾಗಿ ಚಾವುಂಡರಾಯನು ಸೇವೆಸಲ್ಲಿಸಿದನು. ಹತ್ತುನೂರರ ಹೊತ್ತಿನಲ್ಲಿ ಗಂಗರ ಆಡಳಿತ ಕೊನೆಗೊಂಡಿತು.
ಗಂಗರ ಆಡಳಿತದ ಬಗೆ:
ಗಂಗರು ತಮ್ಮದೇಯಾದ ರೀತಿಯಲ್ಲಿ ನಾಡಿನ ಏಳಿಗೆಗೆ ಆಡಳಿತವನ್ನು ನೀಡಿದರು. ಕದಂಬರಂತೆ ಗಂಗರು ಕೂಡ ಆಡಳಿತದಲ್ಲಿ ಕನ್ನಡವನ್ನು ಬಳಸಿದರು, ಇವರ ಎಲ್ಲಾ ಕಲ್ಬರಹಗಳು ಕನ್ನಡದಲ್ಲಿವೆ. ಗಂಗರಿಗೆ ನಾಡಿನ ಹರವನ್ನು ಹೆಚ್ಚಿಸಿಕೊಳ್ಳುವುದು ಎಷ್ಟು ಮುಕ್ಯವಾಗಿತ್ತೋ ಹಾಗೆಯೇ ಮಂದಿಗೆ ಒಳ್ಳೆಯ ಆಡಳಿತವನ್ನು ನೀಡುವದು ಅಷ್ಟೇ ಮುಕ್ಯವಾಗಿತ್ತು ಎಂದು ಕಲ್ಬರಹಗಳಿಂದ ತಿಳಿದುಬರುತ್ತದೆ. ಗಂಗರ ಆಡಳಿತದ ನೆಲವನ್ನು ಹಲವು ಬಾಗಗಳಾಗಿ ವಿಂಗಡಿಸಲಾಗಿತ್ತು, ಅವುಗಳೆಂದರೆ ರಾಷ್ಟ್ರ(ಜಿಲ್ಲೆ) ಮತ್ತು ವಿಶಯ(ಸಾವಿರ ಹಳ್ಳಿಗಳು). ಸರಿಸುಮಾರು 800ರ ಹೊತ್ತಿನಲ್ಲಿ ‘ವಿಶಯ’ ಎಂಬ ಸಂಸ್ಕ್ರುತ ಪದದ ಬದಲಾಗಿ ‘ನಾಡು‘ ಎಂದು ಬಳಸಿಕೊಂಡರು. ಎತ್ತುಗೆಗೆ: ಸಿಂದನಾಡು, ಪುನ್ನಾಡು(ಪುನ್ನಾಟ). ನಾಡು ಎಂದರೆ ಸಾವಿರ ಹಳ್ಳಿಗಳನ್ನೊಳಗೊಂಡ ಒಂದು ಬಾಗವಾಗಿತ್ತು. ಇವುಗಳಲ್ಲಿ ದೊಡ್ಡ ನಾಡೆಂದರೆ ‘ಗಂಗವಾಡಿ’. ಗಂಗನಾಡಿನ ತಿರುಳುಬಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು, ಇದು 96000 ಹಳ್ಳಿಗಳ ಒಕ್ಕೂಟ, ಹಾಗು ಗಂಗರ ಹಲವಾರು ಕಲ್ಬರಹಗಳಲ್ಲಿ ಗಂಗವಾಡಿಯನ್ನು ‘ತೊಂಬತ್ತಾರುಸಾಸಿರ’ (ತೊಂಬತ್ತಾರು ಸಾವಿರ ಹಳ್ಳಿಗಳು = ತೊಂಬತ್ತಾರು ನಾಡುಗಳು) ಎಂದೇ ಒಕ್ಕಣಿಸಲಾಗಿದೆ.
ಗಂಗವಾಡಿಯ ಮಂದಿಯನ್ನು ‘ಗಂಗಡಿಕಾರ’ರು ಎಂದು ಕರೆಯುತ್ತಿದ್ದರು ಹಾಗು ಈ ಹೆಸರು ಇಂದಿಗೂ ಹಳೆಮೈಸೂರು ಬಾಗದಲ್ಲಿ ‘ಗಂಗಡಿಕಾರ’ ಎಂದಾಗಿ ಉಳಿದಿಕೊಂಡು ಬಂದಿದೆ. ಗಂಗರ ಹಲವಾರು ಕಲ್ಬರಹಗಳಿಂದ ಅವರ ಆಡಳಿತದಲ್ಲಿ ಬಳಸುತ್ತಿದ್ದ ಹೆಸರುಗಳನ್ನು ತಿಳಿಯಬಹುದಾಗಿದೆ. ಅರಿದಾಳುವನ್ನು ಸರ್ವಾದಿಕಾರಿ, ಹಣಕಾಸು ನೋಡಿಕೊಳ್ಳುವವರನ್ನು ಶ್ರೀಬಂಡಾರಿ, ಹೊರನಾಡಿನ ಆಳ್ವಿಕವಲಾಳುವನ್ನು (minister) ಸಂದಿವಿಗ್ರಹ, ನಾಡಾಳುವನ್ನು ಮಹಾಪ್ರದಾನ, ಪಡೆಯ ಮೇಲಾಳನ್ನು ದಂಡನಾಯಕ, ಆರಯ್ಗನನ್ನು ಮನೆಪೆರ್ಗಡೆ, ಆನೆಪಡೆಯ ಮೇಲಾಳುವನ್ನು ಗಜಸಹಾನಿ, ಕುದುರೆಪಡೆಯ ವೀಳ್ಯದೆಲೆ ನೋಡಿಕೊಳ್ಳುವವರನ್ನು ಅಡೆಪ ಎಂದು, ಅರಸರ ನೆರವಿಗನನ್ನು ರಾಜಸೂತ್ರದಾರಿ, ಗುಟ್ಟಿನ ನೆರವಿಗನನ್ನು ರಹಸ್ಯಾದಿಕ್ರುತ ಹಳೆಯ ದಾಕಲೆಗಳನ್ನು ನೋಡಿಕೊಳ್ಳುವವರನ್ನು ಶಾಸನದೊರೆ, ನೆಲದಳೆವಿಗನನ್ನು ರಜ್ಜುಕ, ಹಣಕಾಸಿನ ಲೆಕ್ಕಾಚಾರವನ್ನು ನೋಡಿಕೊಳ್ಳುವವನನ್ನು ಲೆಕ್ಕಿಗನೆಂದು ಕರೆಯುತ್ತಿದ್ದರು.
ಕ್ರಿ.ಶ. 726 ರ ತಲಕಾಡಿನ ಕಲ್ಬರಹ
TalakadInscription
ನಿಯೋಗಿಯು ಅರಮನೆಯ ಮೇಲುಸ್ತುವಾರಿ, ಅರಸುಮನೆತನದ ಬಟ್ಟೆ ಮತ್ತು ಒಡವೆಯನ್ನು ನೋಡಿಕೊಳ್ಳುತ್ತಿದ್ದನು. ಅರಸರ ಸಬೆಗಳನ್ನು ಮತ್ತು ಹೆಬ್ಬಾಗಿಲಿನ ಉಸ್ತುವಾರಿ ನೋಡಿಕೊಳ್ಳುವವರನ್ನು ಪಡಿಯಾರ ಎಂದು ಕರೆಯುತ್ತಿದ್ದರು. ಪೆರ್ಗಡೆಯು ಗಂಗರ ನಾಡಿನಲ್ಲಿ ತಮ್ಮ ಕಸುಬನ್ನು ಮಾಡುತ್ತಿದ್ದ ಅಕ್ಕಸಾಲಿಗರು, ಕಲೆಗಾರರು, ಕಮ್ಮಾರರು ಮತ್ತು ಕುಂಬಾರರ ಮೇಲ್ವಿಚಾರಣೆ ಮಾಡುತ್ತಿದ್ದನು. ಗಂಗರ ನಾಡಿನ ಸುಂಕ ಮತ್ತು ತೆರಿಗೆಯನ್ನು ನೋಡಿಕೊಳ್ಳುತ್ತಿದ್ದವನನ್ನು ಸುಂಕಪೆರ್ಗಡೆ ಎಂದು ಕರೆಯುತ್ತಿದ್ದರು. ಈ ಸುಂಕ ಪೆರ್ಗಡೆಯ ಕೆಳಗೆ ನಾಡಬೊವರು ಕೆಲಸ ಮಾಡುತ್ತಿದ್ದರು. ನೆಲದ ಮೇಲುಸ್ತುವಾರಿ ನೋಡಿಕೊಳ್ಳುವವನನ್ನು ಪ್ರಬು ಎಂಬ ಬಿರುದಿನಿಂದ ಕರೆಯುತ್ತಿದ್ದರು. ಹಳ್ಳಿಗಳ ಮೇಲುಗರನ್ನು ಗಾವುಂಡ ಎಂದು ಕರೆಯುತ್ತಿದ್ದರು.
ಉದ್ಯೋಗ- ಜನಜೀವನ
ಮಾವಳ್ಳಿ, ಕುಂಸಿ, ದೊಡ್ಡಹೊಮ್ಮ ಹಾಗು ಇನ್ನಿತರ ಕಲ್ಬರಹಗಲ್ಲಿ ಹೇಳಿರುವಂತೆ ಮಂದಿಯ ಅನುಕೂಲಕ್ಕಾಗಿ ನದಿ, ಹೊಳೆ, ಕಾಲುವೆ, ಹಳ್ಳಿಗಳ ಎಲ್ಲೆ, ಬೆಟ್ಟ ಗುಡ್ಡಗಳು, ಕೋಟೆಗಳು, ಕಾಡುಗಳು, ದೇವಸ್ತಾನಗಳು, ನೀರಿನ ತೊಟ್ಟಿಗಳ ಇರುವಿಕೆಯ ಗುರುತುಗಳನ್ನು ಮಾಡಿದ್ದರು. ಹಾಗೆಯೇ ಆಯಾ ನೆಲದ ಮಣ್ಣಿಗೆ ಸರಿಯಾಗಿ ಯಾವ ಯಾವ ಬೆಳೆಗಳನ್ನು ಬೆಳೆಯಬೇಕೆಂಬುದನ್ನು ತಿಳಿಸಿದ್ದರು. ಅದಕ್ಕಾಗಿ ನೀರಾವರಿ ಕಾಲುವೆ ಮತ್ತು ತೊಟ್ಟಿಗಳನ್ನು ಕಟ್ಟಿಸಿದ್ದರು. ಕಲ್ಬರಹಗಳಲ್ಲಿ ಹೇಳಿರುವಂತೆ ಬೇಡರಿಗಾಗಿಯೇ ಹಳ್ಳಿಗಳು ಇರುತ್ತಿದ್ದವು ಹಾಗು ಅದನ್ನು ‘ಬೇಡಪಳ್ಳಿ’ ಎಂದು ಕರೆಯುತ್ತಿದ್ದರು. ಮಯ್ಗಾವಲುಗಾರರನ್ನು ವೆಲಾವಳಿ ಎಂದು ಕರೆಯುತ್ತಿದ್ದರು.
ಗಂಗರು ತಮ್ಮ ಲಾಂಚನವಾಗಿ ಮದದಾನೆಯನ್ನು ಬಳಸಿಕೊಂಡರು, ಇದರ ಹಿನ್ನೆಲೆ ಹಳೆಮೈಸೂರು ಬಾಗದಲ್ಲಿ ಆನೆಗಳು ಹೆಚ್ಚು ಇದ್ದುದರಿಂದವಿರಬಹುದು. ಮೇಲುಕೋಟೆಯ ತಾಮ್ರದ ಬರಹ, ಮಾಂಬಳ್ಳಿ ಕಲ್ಬರಹ ಮತ್ತು ಮೇಡುತಂಬಳ್ಳಿ ಕಲ್ಬರಹಗಳಿಂದ ಗಂಗವಾಡಿ ಬಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿದ್ದರಿಂದ ಆಯಾ ಬಾಗಗಳಲ್ಲಿ ಅಡಿಕೆ, ಕಾಳು ಮೆಣಸು, ತೆಂಗು, ಬತ್ತ, ರಾಗಿ, ಎಣ್ಣೆ ಬೀಜಗಳು ಹಾಗು ಜೋಳ ಈ ಬೆಳೆಗಳಿಗೆ ಕಾವೇರಿ, ತುಂಗಬದ್ರ, ವೇದಾವತಿ ನದಿಗಳಿಗೆ ಕಟ್ಟಿದ ಅಣೆಕಟ್ಟುಗಳಿಂದ ಕಾಲುವೆಗಳಲ್ಲಿ ನೀರುಣಿಸುತ್ತಿದ್ದರು. ಗಂಗರಸು ನಾಲ್ವಡಿ ರಾಚಮಲ್ಲನ ದೊಡ್ಡಹೊಮ್ಮ ಕಲ್ಬರಹದಿಂದ ಹಲವಾರು ಮಣ್ಣು ಮತ್ತು ನೆಲದ ಬಗೆಯನ್ನು ತಿಳಿಸುವ ಕನ್ನಡದ ಪದಗಳು ಕಂಡುಬರುತ್ತದೆ. ಕರಿಮಣ್ಣಿಯ-ಕಪ್ಪುಮಣ್ಣು, ಕೆಬ್ಬಯಮಣ್ಣು- ಕೆಂಪುಮಣ್ಣು ಎಂದು, ಹಸಿನೆಲ-ಕಳನಿ, ಗಳ್ಡೆ, ಪಣ್ಯ ಎಂದು ಕರೆಯುತ್ತಿದ್ದರು. ರೈತರ ಬಗ್ಗೆ ಹೆಚ್ಚು ಒಲವಿದ್ದ ತಲಕಾಡಿನ ಗಂಗರು ಹಸುಸಾಕಣೆಗೆ ಒತ್ತು ನೀಡಿದರು. ಹಲವು ಹಸು ಸಾಕಣೆಯ ಹಟ್ಟಿಗಳನ್ನು ಅವರೇ ನಡೆಸುತ್ತಿದ್ದರು.
ಹಲವಾರು ನ್ಯಾಯ ತೀರ್ಮಾನಗಳನ್ನು ಮತ್ತು ಮಂದಿಯ ಹಣಕಾಸಿನ ಪರಿಸ್ತಿತಿ ನೋಡಿ ಸುಂಕ ರದ್ದತಿಯ ತೀರ್ಮಾನಗಳನ್ನು ಹಳ್ಳಿಯ ಮೇಲುಗಾರಾದ ಗಾವುಂಡರೆ ತೆಗೆದುಕೊಳ್ಳುತ್ತಿದ್ದರು, ಹೀಗಾಗಿ ಆಡಳಿತವನ್ನು ಕೆಳಗಿನ ಅದಿಕಾರಿಗಳಿಗೆ ಹಂಚಿದ್ದರು. ರದ್ದು ಮಾಡಿದ ಸುಂಕವನ್ನು ‘ಮಾನ್ಯ’ ಎಂದು ಕರೆಯಲಾಗುತ್ತಿತ್ತು. ಸುಂಕ ‘ಮಾನ್ಯ’ವಾದ ನೆಲವನ್ನು ಸೈನ್ಯದಲ್ಲಿ ಕಾದಾಡಿದವರಿಗೆ ಮತ್ತು ನಾಡವೀರರಿಗೆ ಕೊಡುತ್ತಿದ್ದರು, ಇದನ್ನು ಬಿಳವ್ರುತ್ತಿ(ಬಿೞವ್ರುತ್ತಿ) ಹಾಗು ಕಲ್ನಾಡ್ ಎಂದು ಕರೆಯುತ್ತಿದ್ದರು ಈ ಸಂಗತಿಯನ್ನು ನರಸಿಂಹಪುರದ ಕಲ್ಬರಹದಲ್ಲಿ ತಿಳಿಸಲಾಗಿದೆ. ಒಳಸುಂಕವನ್ನು ಅಂತಕರ ಎಂದು ಕರೆಯುತ್ತಿದ್ದರು, ರಾಜನಿಂದ ಬಂದ ಬಹುಮಾನವನ್ನು ಉತ್ಕೊಟವೆಂದು ಕರೆಯುತ್ತಿದ್ದರು. ಆಮದು ವಸ್ತುಗಳ ಸುಂಕ ಮತ್ತು ತೆರಿಗೆಗೆ ಸುಲಿಕ ಎಂದು ಕರೆಯುತ್ತಿದ್ದರು. ಕ್ರುಶಿಯ ಮೇಲಿನ ತೆರಿಗೆಯನ್ನು ‘ಸಿದ್ದಾಯ’ ಎಂದು ಮಾರಾಟದ ಮೇಲಿನ ತೆರಿಗೆಯನ್ನು ಪೊತ್ತೊಂದಿ ಎಂದು ಕರೆಯುತ್ತಿದ್ದರು. ಇವೆಲ್ಲವನ್ನೂ ನಾಡಿನ(ಸಾವಿರಹಳ್ಳಿಗಳು) ಮೇಲುಗರು ಮತ್ತು ಸುಂಕಪೆರ್ಗಡೆಯವರು ಲೆಕ್ಕಾಚಾರ ಮಾಡುತ್ತಿದ್ದರು. ಹಲವು ಕಡೆಗಳಲ್ಲಿ ‘ಪೊತ್ತೊಂದಿ’ ತೆರಿಗೆಯನ್ನು ಹತ್ತನೇ ಒಂದು ಬಾಗದ ತೆರಿಗೆ ಎಂದು, ‘ಐದಾಳ್ವಿ’ಯನ್ನು ಐದನೇ ಒಂದು ಬಾಗದ ತೆರಿಗೆ ಎಂದು, ‘ಏಳಾಳ್ವಿ’ಯನ್ನು ಏಳನೇ ಒಂದು ಬಾಗದ ತೆರಿಗೆ ಎಂದು ಕರೆಯುತ್ತಿದ್ದರು. ಮಣ್ಣದಾರೆ ಎಂಬ ಸುಂಕವನ್ನು ನೆಲಗಂದಾಯದ ಜೊತೆಗೆ ಕುರಿಂಬದೆರೆ ಎಂಬ ಕುರಿಸಾಕಣೆ ಮೇಲಿನ ಸುಂಕವನ್ನು ಕುರುಬರು ಅವರ ಮುಖಂಡನಿಗೆ ಕೊಡುತ್ತಿದ್ದರು.
ಹಲವು ಕಿರುಸುಂಕವನ್ನು ಕಿರುದೆರೆ ಎಂದು ಕರೆಯುತ್ತಿದ್ದರು. ಕಾಳಗದ ಹೊತ್ತಿನಲ್ಲಿ ಪಡೆಯ ಕಾಳಗದ ತರಬೇತಿಗಾಗಿ ಹಾಗು ಕುದುರೆ ಪಡೆಯ ಕುದುರೆಗಳು, ಆನೆಪಡೆಯ ಆನೆಗಳನ್ನು ಮೇಯಿಸಲು ಹಲವು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದರು ಹಾಗು ಇದಕ್ಕಾಗಿ ಸುಂಕ ತೆರಿಗೆಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ಮಂದಿಯ ಅನುಕೂಲಕ್ಕಾಗಿ ನೀರಿನ ತೊಟ್ಟಿಗಳನ್ನು ಕಟ್ಟಿಸುತ್ತಿದ್ದರು ಇದರ ಹಣಕಾಸಿಗೆ ಬಿಟ್ಟುವತ್ತ ಎಂಬ ತೆರಿಗೆಯನ್ನು ಹಾಕುತ್ತಿದ್ದರು. ಹೀಗೆ ಆಳ್ವಿಕೆಯಲ್ಲಿ ಗಟ್ಟಿಗರಾದ ತಲಕಾಡಿನ ಗಂಗರು ಯಾವುದೇ ಅರಸುಮನೆತನಗಳಿಗಿಂತ ಕಮ್ಮಿಯಿಲ್ಲದೆ ಕನ್ನಡ ನಾಡಿನ ಏಳಿಗೆಗಾಗಿ ಒಳ್ಳೆಯ ಆಡಳಿತ ನೀಡಿದರು.
This article uses material from the Wikipedia ಕನ್ನಡ article ಗಂಗ (ರಾಜಮನೆತನ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.