ಗಡಿನಾಡ ಗಾಂಧಿ ಎಂದೇ ಪ್ರಖ್ಯಾತರಾದ ಖಾನ್ ಅಬ್ದುಲ್ ಗಫಾರ್ ಖಾನ್ (ಜೂನ್ ೩, ೧೮೯೦ - ಜನವರಿ ೨೦, ೧೯೮೮) ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಸಿದ್ಧವಾದ ಹೆಸರು.
ಗಡಿನಾಡ ಗಾಂಧೀ, ಫಕೀರ್-ಎ ಆಫ್ಘಾನ್ ಖಾನ್ ಅಬ್ದುಲ್ ಗಫಾರ್ ಖಾನ್ ಬಚಾ ಖಾನ್ | |
---|---|
Pashto: خان عبدالغفار خان | |
ಜನನ | ೧೮೯೦ ಉತಮನಜೈ, ಪಾಕಿಸ್ತಾನ |
ಮರಣ | ಜನವರಿ ೨೦, ೧೯೮೮ ಪೇಶಾವರ, ಪಾಕಿಸ್ತಾನ |
Resting place | ಜಲಾಲಾಬಾದ್, ಆಫ್ಘಾನಿಸ್ಥಾನ |
ಚಳುವಳಿ | ಭಾರತ ಸ್ವಾತಂತ್ರ್ಯ ಹೋರಾಟ |
ಪ್ರಶಸ್ತಿಗಳು | ಆಮ್ನೆಸ್ಟಿ ಇಂಟರ್ ನ್ಯಾಷನಲ್, ಪ್ರಿಸನರ್ ಆಫ್ ಕಂಸೈನ್ಸ್,, ಭಾರತ ರತ್ನ, |
ಗಡಿನಾಡಗಾಂಧಿ ಎಂದೇ ಹೆಸರಾದ ಖಾನ್ ಅಬ್ದುಲ್ ಗಫಾರ್ ಖಾನ್ ಹುಟ್ಟಿದ್ದು ಜೂನ್ ೩, ೧೮೯೦ರಲ್ಲಿ.
ಅಂದು ನಾರ್ತ್ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್ (ಎನ್ಡಬ್ಲುಇಪಿ) ಎಂದು ಕರೆಯಲಾಗುತ್ತಿದ್ದ ಹಾಗೂ ಇಂದು ಪಾಕಿಸ್ತಾನವಾಗಿರುವ ಪ್ರಾಂತ್ಯದ ಹಸ್ಟ್ನಗರ್ ಎಂಬಲ್ಲಿ. ಬ್ರಿಟಿಷ್ ಸೈನ್ಯದ ಜಾರ್ಜ್ ಮೊಲೆಸ್ ವರ್ತ್ "ಈ ಪ್ರಾಂತ್ಯದ ಪ್ರತಿ ಕಲ್ಲುಗಳು ರಕ್ತದಲ್ಲಿ ಮಿಂದೆದ್ದಿವೆ" ಎಂದು ವರ್ಣಿಸಿದ್ದ. "ಆತನ ನಿಧನದ ದಿನ ಟಿವಿ ಪರದೆಯಲ್ಲಿ ಕಾಣಿಸಿಕೊಂಡ ಕಪ್ಪು ಬಿಳುಪು ಛಾಯೆಯ ಎತ್ತರದ, ನೀಳಕಾಯದ ಹೊಳೆಯುವ ಕಣ್ಣುಗಳ ಆ ಮಹಾನುಭಾವನ ಚಿತ್ರ ಇನ್ನೂ ನನ್ನ ಸ್ಮೃತಿಪಟಲದಲ್ಲಿದೆ. ಆತನೊಬ್ಬ ಅನಂತ ಶಾಂತಿಪ್ರಿಯ ಎಂದು ಆ ಸಂದರ್ಭದಲ್ಲಿ ಯಾರೋ ಹೇಳಿದ್ದರು. ಆದರೆ ಆತನೊಬ್ಬ ಅನಂತ ಧೈರ್ಯಶಾಲಿ ಕೂಡ ಎಂಬುದು ಈಗ ನನಗೆ ಮನವರಿಕೆಯಾಗುತ್ತಿದೆ" ಎನ್ನುತ್ತಾರೆ ಇತಿಹಾಸ ತಜ್ಞರಾದ ಪ್ರಶಾಂತೋ ಬ್ಯಾನರ್ಜಿ..
ಈ ವಾಯುವ್ಯ ಗಡಿ ಪ್ರಾಂತ್ಯವನ್ನು ಅಫ್ಘಾನಿಸ್ತಾನದೊಂದಿಗೆ ಜೋಡಿಸುವ ಬೆಟ್ಟಗುಡ್ಡಗಳ ಕಡಿದಾದ ಖೈಬರ್ ಪ್ರದೇಶ ಕೆಚ್ಚಿನ ಪಠಾಣರ ತವರು. ಈ ಕೆಚ್ಚೆದೆಯ ಸೈನಿಕರು ಯಾವಾಗಲೂ ಬ್ರಿಟಿಷರ ವಿರುದ್ಧವೋ, ರಶಿಯನ್ನರ ವಿರುದ್ಧವೋ ಅಥವಾ ಅಮೆರಿಕನ್ನರ ವಿರುದ್ಧವೋ ಹೋರಾಡುತ್ತಲೇ ಇರುತ್ತಾರೆ. ಅದರಿಂದ ಬಿಡುವು ಸಿಕ್ಕಿತೆಂದರೆ ತಮ್ಮೊಳಗೇ ಬುಡಕಟ್ಟು ಸಂಘರ್ಷದಲ್ಲಿ ಮುಳುಗಿರುತ್ತಾರೆ. ಇಲ್ಲಿ ರಕ್ತವೇ ದುಡ್ಡು, ಗೌರವ, ಪ್ರಶಸ್ತಿ. ಆದರೆ ಖಾನ್ ಅಬ್ದುಲ್ ಗಫಾರ್ ಖಾನ್ ಅಥವಾ ಬಾದಶಹ ಖಾನ್ (ನಂತರದಲ್ಲಿ ಅವರನ್ನು ಹಾಗೆ ಕರೆಯಲಾರಂಭಿಸಿದರು) ತನ್ನ ಸುತ್ತಮುತ್ತಲ ಜನರಿಗಿಂತ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದ ವ್ಯಕ್ತಿ.
ಬಾದಶಹ ಖಾನರು ಪಠಾಣರ ಕಡು ಧಾರ್ಷ್ಟ್ಯದ ಕೆಳಗೆ, ಅವರ ಆಕ್ರಮಣಕಾರಿ ರಕ್ತದಾಹಿತನದ ಒಳಗೆ ಮೌಢ್ಯದಿಂದ ಕುರುಡರಾಗಿರುವ ಹಾಗೂ ಹಿಂಸೆಯಿಂದ ಜರ್ಜರಿತವಾಗಿರುವ ಮಾನವೀಯ ಹಾಗೂ ಧೈರ್ಯಶಾಲಿ ಜೀವಗಳನ್ನು ಕಂಡರು. ೨೦ರ ಹರೆಯದಲ್ಲೇ ತನ್ನ ಸಮುದಾಯದ ಸ್ತ್ರೀ-ಪುರುಷರಿಗಾಗಿ ಶಾಲೆಗಳನ್ನು ಕಟ್ಟುವ ಮೂಲಕ ಸಮಾಜದ ಉನ್ನತಿಗಾಗಿನ ಅವರ ಪರಿಶ್ರಮ ಪ್ರಾರಂಭವಾಗಿತ್ತು. ಅಲ್ಲಿಂದ ಪ್ರಾರಂಭವಾದ ಅವರ ಸಮಾಜ ಸೇವಾ ಧೋರಣೆ ಮುಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಭಾರತವನ್ನು ಮುಕ್ತಗೊಳಸಬೇಕೆಂಬ ಅದಮ್ಯ ಆಕಾಂಕ್ಷೆಯಾಗಿ ಬೆಳೆಯಿತು.
ಖಾನ್ ಒಬ್ಬ ಧರ್ಮಬೀರು. ತಮ್ಮದೇ ಆದ ಧಾರ್ಮಿಕ ನೆಲೆಯಲ್ಲಿ ಅವರು ಅಹಿಂಸೆಯೆನ್ನುವುದು ಪ್ರವಾದಿಯ ಆಯುಧ ಎಂಬುದನ್ನು ಮನಗಂಡರು. ತನ್ನ ೧,೦೦,000 ಖುದಾಯಿ ಕಿದ್ಮತ್ಗಾರ್ಗಳನ್ನು (ದೇವರ ಸೇವಕರು) ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಶಾಂತಿಯುತ ಚಳುವಳಿಗೆ ಧುಮುಕುವುದರೊಂದಿಗೆ ಅವರ ಆಂದೋಲನ ಪ್ರಾರಂಭವಾಗಿಯಿತು. ಅವರ ಜೊತೆಗಿದ್ದವರೆಲ್ಲಾ ದೇಶಕ್ಕೆ ನಿಷ್ಠರಾಗಿದ್ದರು; ಅಹಿಂಸೆಯ ಆದರ್ಶಕ್ಕೆ ಕಟಿಬದ್ಧರಾಗಿದ್ದರು. ಈ ಅಹಿಂಸಾ ಹೋರಾಟಗಾರ ಬ್ರಿಟಿಷರಿಗೆ ವಿಧ್ವಂಸಕನಾಗಿ ಕಂಡುಬಂದಿದ್ದರಿಂದ ಆತನ ಮೇಲೆ ಪೈಶಾಚಿಕ ದಾಳಿ ಮಾಡಲಾರಂಭಿಸಿದರು. ಉದಾಹರಣೆಗೆ, ೧೯೩೦ರಲ್ಲಿ ಪೇಶಾವರದಲ್ಲಿ ಅಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡವರ ಮೇಲೆ ಬ್ರಿಟಿಷ್ ಸೈನಿಕರು ಹಾರಿಸಿದ ಗುಂಡಿಗೆ ೩೦೦ಕ್ಕಿಂತಲೂ ಹೆಚ್ಚು ದೇವರ ಸೇವಕರು ಬಲಿಯಾದರು.
ಇವತ್ತು ಯಾರನ್ನು ವಿಧ್ವಂಸಕರು ಹಾಗೂ ಭಯೋತ್ಪಾದಕರು ಎಂದು ದೂಷಿಸಲಾಗುತ್ತದೆಯೋ ಅದೇ ಪಠಾಣರು ಅಂದು ಯಾವುದೇ ಪ್ರತಿರೋಧವೊಡ್ಡದೆ ಸುರಿಯುತ್ತಿದ್ದ ಗುಂಡುಗಳಿಗೆ ಎದೆಯೊಡ್ಡಿ ಸಾಲು ಸಾಲಾಗಿ ನೆಲಕ್ಕುರುಳಿದ್ದರು. (ಅವರ ಮೇಲೆ ಗುಂಡಿನ ಮಳೆಗರೆಯುವಂತೆ ಬ್ರಿಟಿಷ್ ಸೇನಾಧಿಕಾರಿಗಳು ಆದೇಶ ಕೊಟ್ಟರೂ ಘಡ್ವಾಲಿ ರೆಜಿಮೆಂಟ್ನ ಸೈನಿಕರು ಈ ನಿಶ್ಯಸ್ತ್ರಧಾರಿ ದೇವರ ಸೇವಕರ ಮೇಲೆ ಗುಂಡುಹಾರಿಸುವುದಿಲ್ಲ ಎಂದು ಬಂದೂಕು ಕೆಳಗಿಟ್ಟಿದ್ದರು. ಇಲ್ಲದಿದ್ದಲ್ಲಿ ಇನ್ನಷ್ಟು ನಿಶ್ಯಸ್ತ್ರಧಾರಿ ಪಠಾಣರ ಹೆಣಗಳು ನೆಲಕ್ಕುರುಳುತ್ತಿದ್ದವು) ಆ ಗಡಿನಾಡಲ್ಲಿ ಚಿತ್ರಹಿಂಸೆ, ಹೊಡೆತ, ವೇದನೆಗಳ ಮೂಲಕವೇ ಈ ಮಹಾನುಭಾವ, ಅವನ ಸಿದ್ಧಾಂತ, ಅವನ ಬೆನ್ನಿಗಿದ್ದ ಲಕ್ಷಾಂತರ ಬೆಂಬಲಿಗರು ಸೇರಿ ಕಟ್ಟಿದ್ದ ಅಹಿಸ್ಮಾತ್ಮಕ ಆಂದೋಲನವು ಇತ್ತ ಭರತಖಂಡದ ಇನ್ನೊಂದು ಮೂಲೆಯಲ್ಲಿ ಮೋಹನದಾಸ ಕರಮಚಂದ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ ಅಂತಹುದೇ ಚಳವಳಿಯೊಂದರ ಪ್ರತಿಬಂಬವಾಗಿತ್ತು. ಅಹಿಂಸಾ ಪಥವು ಬಾದ್ಶಹ ಖಾನ್ಗೆ ಸಹಜ ಆಯ್ಕೆಯಾಗಿತ್ತು. ನನ್ನಂತಹ ಒಬ್ಬ ಮುಸ್ಲಿಂ ಅಹಿಂಸೆಯ ತತ್ವವನ್ನು ಅಪ್ಪಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ ಎಂದಿದ್ದರು ಖಾನ್; ಏಕೆಂದರೆ ಇದು ೧೩೦೦ ವರ್ಷಗಳಷ್ಟು ಹಿಂದೆಯೇ ಪ್ರವಾದಿಗಳೇ ಹಾಕಿಕೊಟ್ಟ ಪಥ ಎಂದವರು ನಂಬಿದ್ದರು.
ಖಾನ್ ಅವರು ಅಖಂಡ, ಜಾತ್ಯಾತೀತ ಭಾರತದ ಕನಸು ಕಂಡಿದ್ದರು; ದೇಶ ವಿಭಜನೆಯ ವಿರುದ್ಧ ವ್ಯಾಪಕವಾಗಿ ಧ್ವನಿಯೆತ್ತಿದ್ದರು. ತನ್ನದೇ ಕಾಂಗ್ರೆಸ್ ಪಕ್ಷ ದೇಶ ವಿಭಜನೆಯ ಪ್ರಸ್ತಾವವನ್ನು ಅಂಗೀಕರಿಸಿದಾಗ ಅವರಿಗೆ ದ್ರೋಹಕ್ಕೊಳಗಾದ ಭಾವವುಂಟಾಗಿತ್ತು. ಆದರೂ ಗಾಂಧಿಯವರೊಂದಿಗೆ ಅವರ ಸಖ್ಯ ಮುಂದುವರಿದಿತ್ತು. ಪಾಕಿಸ್ತಾನದ ಹೊಸ ಆಡಳಿತಾಂಗವು ಇವರ ಆಲೋಚನಾ ದೃಷ್ಟಿಯಿಂದ ಭೀತಗೊಂಡು ಇವರ ಚಳವಳಿಯನ್ನು ನಿರ್ದಯವಾಗಿ ದಮನಿಸಿತು. ರಾಷ್ಟ್ರೀಯ ನಾಯಕನೆನಿಸಿಕೊಳ್ಳಬೇಕಿದ್ದ ಖಾನರು ತಮ್ಮ ಬದುಕಿನ ಉಳಿದ ಬಹುತೇಕ ವರ್ಷಗಳನ್ನು ಗೃಹಬಂಧನದಲ್ಲೇ ಕಳೆಯಬೇಕಾಯಿತು. ಯಾರನ್ನು ನಂಬಿದರೋ ಅವರಿಂದಲೇ ತ್ಯಜಿಸಲ್ಪಟ್ಟು, ಯಾರಿಗೆ ದುಃಸ್ವಪ್ನವಾಗಿ ಕಾಡಿದರೋ ಅವರಿಂದ ಚಿತ್ರಹಿಂಸೆಗೊಳಪಟ್ಟು ಕೊನೆಗೆ ಜಲಾಲಬಾದ್ನ ಸಮಾಧಿಯಲ್ಲಿ ಚಿರನಿದ್ರೆಗೆ ಜಾರಿದರು.
ಭಾರತ ಸರ್ಕಾರದ ಜವಹರಲಾಲ್ ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು ಭಾರತ ರತ್ನ ಪ್ರಶಸ್ತಿಗಳನ್ನು ಖಾನ್ ಅಬ್ದುಲ್ ಗಫಾರ್ ಖಾನ್ ಅವರಿಗೆ ನೀಡಲಾಯಿತು. ಆಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರಶಸ್ತಿ ಸಹಾ ಅವರಿಗೆ ಸಂದಿತು.
ದಿ ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ಮೂಡಿಬಂದ ಪ್ರಶಾಂತೋ ಬ್ಯಾನರ್ಜಿ ಅವರ ಲೇಖನ
This article uses material from the Wikipedia ಕನ್ನಡ article ಖಾನ್ ಅಬ್ದುಲ್ ಗಫಾರ್ ಖಾನ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.