ಕೊಂಕಣ ವನ್ನು ಕೊಂಕಣ ಕರಾವಳಿ ಅಥವಾ ಕರಾವಳಿ ಎಂದೂ ಸಹ ಕರೆಯಲಾಗುತ್ತದೆ, ಇದು ರಾಯಗಡದಿಂದ ಮಂಗಳೂರಿನವರೆಗೂ ಇರುವ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಲ್ಲುಬಂಡೆಗಳಿಂದ ಕೂಡಿದ ಭಾಗವಾಗಿದೆ.ಭಾರತದ ಪಶ್ಚಿಮತೀರದಲ್ಲಿ, ಮಹಾರಾಷ್ಟ್ರದ ಠಾಣೆ (ಥಾನಾ) ಕೊಲಾಬಾ ಮತ್ತು ರತ್ನಾಗಿರಿ ಜಿಲ್ಲೆಗಳನ್ನೂ ಗೋವವನ್ನೂ ಒಳಗೊಂಡ ಪ್ರದೇಶವನ್ನು ಸ್ಥೂಲವಾಗಿ ಕೊಂಕಣ ಎಂದು ಕರೆಯುವುದಿದೆ.
ಪಶ್ಚಿಮಘಟ್ಟಗಳ ಪಶ್ಚಿಮಕ್ಕಿರುವ ಈ ತಗ್ಗುನೆಲವೆಲ್ಲ ಮೈದಾನವಲ್ಲ. ೩೦-೫೦ ಮೈ. ಅಗಲ ಮತ್ತು ೩೫೦ ಮೈ. ಉದ್ದ ಇರುವ ಈ ಪ್ರದೇಶದಲ್ಲಿ ನಡುನಡುವೆ ಬೆಟ್ಟಗಳು ಹಬ್ಬಿವೆ. ಉತ್ತರದಲ್ಲಿ ಕಡಲಕರೆಯ ಉದ್ದಕ್ಕೂ ಸಮತಲದ ಮೆಕ್ಕಲುಮಣ್ಣಿನ ಪಟ್ಟಿಯೊಂದುಂಟು. ಇದರ ಅಗಲ ೪-೮ ಮೈ. ಇದರ ಬದಿಯಲ್ಲಿ ಸಮಾಂತರವಾಗಿ ಹಬ್ಬಿರುವ ಅನೇಕ ಬೆಟ್ಟಗಳಿವೆ. ಇವುಗಳಲ್ಲಿ ಕೆಲವು ಶ್ರೇಣಿಗಳ ಎತ್ತರ ೧೫೦೦-೨೦೦೦. ಮುಂಬಯಿಗೆ ಉತ್ತರದಲ್ಲಿರುವ ಪ್ರದೇಶದ ನದಿಗಳಲ್ಲಿ ವೈತರಣಾ, ಉಲ್ಹಾಸ್ ಮತ್ತು ಅಂಬಾ ಮುಖ್ಯವಾದವು. ಇವು ಬೆಟ್ಟದಿಂದ ಮೈದಾನಕ್ಕೆ ಇಳಿದ ಮೇಲೆ ಸ್ವಲ್ಪ ದೂರ ಕಡಲಕರೆಗೆ ಹೆಚ್ಚುಕಡಿಮೆ ಸಮಾಂತರವಾಗಿ ಸಾಗಿ ಕೊನೆಗೆ ಓರೆಯಾಗಿ ಸಮುದ್ರ ಸೇರುತ್ತದೆ. ಉಲ್ಹಾಸ್ ಮತ್ತು ಅದರ ಉಪನದಿಗಳು ಅರ್ಧವೃತ್ತಾಕಾರವಾದ ಒಂದು ವಿಶಾಲ ಜಲರೇಖೆಯನ್ನೇ ಸೃಷ್ಟಿಸಿವೆ. ಮುಂಬಯಿಗೆ ದಕ್ಷಿಣದಲ್ಲಿರುವ ನದಿಗಳು ಸಾಮಾನ್ಯವಾಗಿ ಉತ್ತರದ ನದಿಗಳಿಗಿಂತ ಉದ್ದದಲ್ಲಿ ಕಡಿಮೆ. ಸಾವಿತ್ರಿ ಮತ್ತು ವಾಶಿಷ್ಟಿ ನದಿಗಳೂ ಉಲ್ಹಾಸ್ ನದಿಯ ಹಾಗೆ ಅರ್ಧವೃತ್ತಗಳನ್ನು ರಚಿಸಿವೆ. ಇಲ್ಲಿಯ ನದಿಗಳ ತಲೆಗಳ ಭಾಗದ ಪ್ರದೇಶ ಕ್ರಮವಾಗಿ ನಗ್ನೀಕೃತವಾಗುತ್ತಿದೆಯೆಂಬುದು ಸ್ಪಷ್ಟ. ಕೊಯ್ನಾ ನದಿಯ ಮೇಲ್ದಂಡೆಯ ಪ್ರದೇಶ ಇದಕ್ಕೆ ಒಂದು ನಿದರ್ಶನ. ದಕ್ಷಿಣ ರತ್ನಾಗಿರಿ ಪ್ರದೇಶದಲ್ಲೂ ಮೇಲ್ಮಣ್ಣಿನ ಮುಸುಕು ಕಳೆದುಕೊಂಡ ಲ್ಯಾಟೆರೈಟ್ ಶಿಲಾಟೊಪ್ಪಿಗೆಯ ಪ್ರದೇಶಗಳನ್ನು ಕಾಣಬಹುದು. ಸ್ಕಂದ ಪುರಾಣದಲ್ಲಿ ಉಲ್ಲೇಖಿತವಾದಂತೆ ಸಪ್ತ -ಕೊಂಕಣ ವು ಸ್ವಲ್ಪ ಮಟ್ಟಿಗೆ ದೊಡ್ಡ ಪ್ರದೇಶವಾಗಿದೆ. ಕೊಂಕಣ ವಿಭಾಗವು, ಮಹಾರಾಷ್ಟ್ರ ರಾಜ್ಯದ ಆರು ಆಡಳಿತಾತ್ಮಕ ಉಪವಿಭಾಗಗಳಲ್ಲಿ ಒಂದಾಗಿರುವುದರ ಜೊತೆಗೆ ಅದರ ಕರಾವಳಿ ಜಿಲ್ಲೆಗಳನ್ನು ಒಳಗೊಂಡಿದೆ. ಕೊಂಕಣದ ನಿವಾಸಿಗಳು ಹಾಗು ಅವರ ಸಂತತಿಯವರನ್ನು ಕೊಂಕಣಿಗಳು ಎಂದು ಕರೆಯಲಾಗುತ್ತದೆ. ಈ ಹೆಸರು ನಿರ್ದಿಷ್ಟವಾಗಿ ಕೊಂಕಣಿ ಜನರಿಗೂ ಸಹ ಸೂಚಿತವಾಗಬಹುದು, ಇವರು ಈ ಪ್ರದೇಶದ ಜನಾಂಗೀಯ ಗುಂಪು; ಇವರಲ್ಲಿ ಬಹುತೇಕರು ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ. ಕೊಂಕಣಿಗರಲ್ಲದೆ ಈ ಪ್ರದೇಶದಲ್ಲಿರುವ ಇತರ ಪ್ರಮುಖ ಜನಾಂಗೀಯ ಗುಂಪೆಂದರೆ ತುಳುವರು, ಇವರು ಬಹುತೇಕವಾಗಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ವಾಸಿಸುತ್ತಾರೆ.
ಕೊಂಕಣವನ್ನು ಸ್ಥೂಲವಾಗಿ ಉತ್ತರ-ದಕ್ಷಿಣ ಭಾಗಗಳಾಗಿ ವಿಂಗಡಿಸಬಹುದು. ಉತ್ತರ ಕೊಂಕಣದಲ್ಲಿರುವ ಉಪವಿಭಾಗಗಳು ಎರಡು : ಮಾಹೀಂ ಪ್ರದೇಶ ಮತ್ತು ಮುಂಬಯಿ-ಕಲ್ಯಾಣ್ ಪ್ರದೇಶ. ದಕ್ಷಿಣ ಕೊಂಕಣವನ್ನು ಮಹಾದ್, ರತ್ನಾಗಿರಿ ಮತ್ತು ಗೋವ ಎಂದು ಮರುವಿಂಗಡಿಸಬಹುದು. ನೈಸರ್ಗಿಕ ಬಂದರನ್ನೊಳಗೊಂಡ ಮುಂಬಯಿ ನಗರ ಇರುವ ಉತ್ತರ ಕೊಂಕಣ ಪ್ರದೇಶ ದಕ್ಷಿಣಕ್ಕಿಂತ ಹೆಚ್ಚು ಮುಂದುವರಿದಿದೆ. ಮುಂಬಯಿಯ ಹತ್ತಿರದಲ್ಲಿ ಕರಾವಳಿ ಅತ್ಯಂತ ಅಗಲವಾಗಿದೆ. ಸಹ್ಯಾದ್ರಿಶ್ರೇಣಿಯಲ್ಲಿರುವ ಥಾಳ್ಘಾಟ್ ಮತ್ತು ಭೋರ್ಘಾಟ್ಗಳಿಂದಾಗಿ ಉತ್ತರ ಕೊಂಕಣದೊಂದಿಗೆ ಪೂರ್ವದ ವಿಶಾಲ ಹಿನ್ನಾಡಿನ ಸಂಪರ್ಕ ಏರ್ಪಟ್ಟಿದೆ. ಮುಂಬಯಿ ಭಾರತದ ಪಶ್ಚಿಮದ ಮಹಾದ್ವಾರವಾಗಿ ಪರಿಣಮಿಸಿರುವುದು ಈ ಘಾಟುಗಳಿಂದಾಗಿ. ಕೊಂಕಣ ಪ್ರದೇಶದಲ್ಲಿ ೭೫"-೧೦೦" ಮಳೆಯಾಗುವುದರಿಂದ ಬತ್ತವೇ ಮುಖ್ಯ ಬೆಳೆ. ಉಳಿದ ಯಾವ ಬೆಳೆಯೂ ಪ್ರಾಮುಖ್ಯದಲ್ಲಿ ಇದರ ಹತ್ತಿರಕ್ಕೆ ಬರುವುದೇ ಇಲ್ಲ. ರಾಗಿ, ದ್ವಿದಳಧಾನ್ಯಗಳು ಇತರ ಬೆಳೆಗಳು. ಸೆಣಬು ಮತ್ತು ಮೆಸ್ತ ೧೯೪೭ ರಿಂದೀಚೆಗೆ ಬೆಳೆಯುತ್ತಿವೆ. ದಕ್ಷಿಣದ ಕಡೆಗೆ ಸಾಗಿದಂತೆ ತೆಂಗು ವಿಶೇಷ. ನದಿಗಳ ಅಳಿವೆಗಳಲ್ಲಿ ಬೆಳೆಯುವ ಗುಲ್ಮ ವೃಕ್ಷಗಳು ಸೌದೆಯಾಗಿ ಉಪಯೋಗಕ್ಕೆ ಬರುತ್ತವೆ. ಲ್ಯಾಟೆರೈಟ್ ಆವೃತ ಪ್ರದೇಶಗಳಲ್ಲಿ ಹಿಂದೆ ದಟ್ಟವಾಗಿ ಕಾಡು ಬೆಳೆದಿತ್ತು. ಈಗ ಅವೆಲ್ಲ ನಗ್ನವಾಗಿವೆ. ನೆಲ ಅಷ್ಟೇನೂ ಫಲವತ್ತಲ್ಲ. ಜೋಳ ಮತ್ತು ಇತರ ಕೆಲವು ಧಾನ್ಯಗಳು ಬೆಳೆಯುತ್ತವೆ. ಘಟ್ಟಗಳೂ ಅವುಗಳ ಸನಿಹದ ಬೆಟ್ಟಗಳೂ ಸದಾ ಹಸಿರೆಲೆಯ ಕಾಡುಗಳಿಂದ ಕೂಡಿವೆ.
ಕೊಂಕಣದ ನಿಖರವಾದ ಗಡಿರೇಖೆಯು ಭಿನ್ನವಾಗಿದೆ, ಆದರೆ ಇದು ಮಹಾರಾಷ್ಟ್ರದ ರಾಯಗಡ, ಮುಂಬಯಿ, ಠಾಣೆ, ರತ್ನಗಿರಿ ಹಾಗು ಸಿಂಧುದುರ್ಗ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳು, ಗೋವಾ ರಾಜ್ಯ, ಹಾಗು ಕರ್ನಾಟಕದ ಉತ್ತರ ಕನ್ನಡ, ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ.
ಸ್ಕಂದ ಪುರಾಣದಲ್ಲಿ ಉಲ್ಲೇಖಿತವಾಗಿರುವ ಸಪ್ತಕೊಂಕಣ ವು ಮಹಾರಾಷ್ಟ್ರದಿಂದ ಕರ್ನಾಟಕದವರೆಗೂ ವ್ಯಾಪಿಸಿದೆ. ಇದು ವಾಸ್ತವವಾಗಿ ತಾರ್ಕಿಕವಾಗಿದೆ ಏಕೆಂದರೆ ಇವರ ಆಹಾರ ಪದ್ಧತಿಯಲ್ಲಿ ಹೆಚ್ಚು ಸದೃಶತೆಗಳಿವೆ(ಅನ್ನ ಹಾಗು ಮೀನು), ಬೆಳೆಯಲಾಗುವ ಬೆಳೆಗಳು (ಭತ್ತ, ಮಾವಿನಹಣ್ಣು, ಗೋಡಂಬಿ ಹಾಗು ಹಲಸಿನಹಣ್ಣು) ಹಾಗು ಈ ಪ್ರದೇಶದಲ್ಲಿ ನೆಲೆಸಿರುವ ಜನರ ದೇಹರಚನೆಯಲ್ಲಿ ಸದೃಶತೆ (ಎತ್ತರ ಹಾಗು ದೃಢಕಾಯ).
ಕೊಂಕಣ ವಿಭಾಗವು ಮಹಾರಾಷ್ಟ್ರದ ಆಡಳಿತಾತ್ಮಕ ಉಪವಿಭಾಗವಾಗಿರುವುದರ ಜೊತೆಗೆ ರಾಜ್ಯದ ಎಲ್ಲ ಕರಾವಳಿ ಜಿಲ್ಲೆಗಳನ್ನು ಒಳಗೊಂಡಿರುತ್ತದೆ.
ಸಹ್ಯಾದ್ರಿ ಪರ್ವತ ಶ್ರೇಣಿಯು("ಪಶ್ಚಿಮ ಘಟ್ಟಗಳು"), ಕೊಂಕಣಕ್ಕೆ ಪೂರ್ವ ಗಡಿರೇಖೆಯನ್ನು ನಿರೂಪಿಸಿದರೆ ಅರೇಬಿಯನ್ ಸಮುದ್ರವು ಪಶ್ಚಿಮ ಗಡಿರೇಖೆಯನ್ನು ನಿರೂಪಿಸುತ್ತದೆ. ದಕ್ಷಿಣ ಗಡಿರೇಖೆಯೆಂದರೆ ಗಂಗಾವಳಿ ಸಮುದ್ರ. ಮಯೂರ ನದಿಯು ಉತ್ತರ ಗಡಿರೇಖೆಯನ್ನು ನಿರೂಪಿಸುತ್ತದೆ.
ಗಂಗಾವಳಿ ನದಿಯು ಇಂದಿನ "ಕರ್ನಾಟಕ ರಾಜ್ಯದ" ನಾರ್ತ್ ಕೆನರಾ ಜಿಲ್ಲೆಯಲ್ಲಿ ("ಉತ್ತರ ಕನ್ನಡ") ಹರಿಯುತ್ತದೆ; ಈ ಜಿಲ್ಲೆಯ ಈ ಪಕ್ಕದ ಗಂಗಾವಳಿ ಭಾಗವೇ (ಬಾಂಬೆಯಿಂದ ನೋಡಿದಲ್ಲಿ) ಕೊಂಕಣದ ದಕ್ಷಿಣತಮ ಭಾಗವಾಗಿದೆ. ಗೋಕರ್ಣ, ಗುಹಗರ್, ಹೊನ್ನಾವರ, ಹಾಗು ಕಾರವಾರ ಕೊಂಕಣ ಪ್ರದೇಶಕ್ಕೆ ಸೇರುತ್ತದೆ.
ಮಯೂರ ನದಿ, ಐತಿಹಾಸಿಕ ಕೊಂಕಣದ ಉತ್ತರ ಸೀಮೆಯ ನಿರ್ದಿಷ್ಟವಾದ ಗುರುತು ಅನಿರ್ಧಾರಿತವಾಗಿದೆ.
ಮಹಾರಾಷ್ಟ್ರ ಕೊಂಕಣದ ಗಬಿಟ್ ಬುಡಕಟ್ಟಿನವರು ("ಮಹಾರಾಷ್ಟ್ರ ಜಿಲ್ಲೆಯ" ಸಿಂಧುದುರ್ಗ, ರತ್ನಗಿರಿ, ರಾಯಗಡ ಅಥವಾ ಅಲಿಬಾಗ್ ಅಥವಾ ಕೊಲಾಬಾ, ಮುಂಬಯಿ ನಗರಪ್ರದೇಶ, ಮುಂಬಯಿ ಉಪನಗರ ಹಾಗು ಠಾಣೆ) ಈ ಪ್ರದೇಶದ ಮೂಲ ನಿವಾಸಿಗಳು[ಸಾಕ್ಷ್ಯಾಧಾರ ಬೇಕಾಗಿದೆ].
ಕೊಂಕಣದ ಬುಡಕಟ್ಟು ಸಮುದಾಯಗಳಲ್ಲಿ ಕೊಂಕಣ, ವರ್ಲಿ ಹಾಗು ದಕ್ಷಿಣ ಗುಜರಾತ್ ನ ಕೊಲ್ಚ, ದಾದ್ರ ಹಾಗು ನಾಗರ್ಹಾವೇಲಿ ಹಾಗು ಮಹಾರಾಷ್ಟ್ರದ ಠಾಣೆ ಜಿಲ್ಲೆ. ಕಟ್ಕರಿಗಳು ರಾಯಗಡದಲ್ಲಿ ಬಹುತೇಕವಾಗಿ ಹಾಗು ರತ್ನಗಿರಿ ಜಿಲ್ಲೆಯ ಕೆಲವು ಭಾಗಗಲ್ಲಿಯೂ ಸಹ ಕಂಡುಬರುತ್ತಾರೆ.
ಕೊಂಕಣದ ಕರಾವಳಿ ತೀರದುದ್ದಕ್ಕೂ ಖಾವಿ೯ಸಮುದಾಯ ಬಹುತೇಕವಾಗಿ ಕಂಡುಬರುತ್ತದೆ. ಇವರು ಮೂಲತಃ ಯೋಧರ ಕುಟುಂಬದವರಾಗಿರುತ್ತಾರೆ.
ಅಲ್ಲದೆ ತಿಲೋರಿ ಅಥವಾ ತಿಲೋರಿ ಕುಂಬಿ ರಾಯಗಡ ಹಾಗು ರತ್ನಗಿರಿ ಜಿಲ್ಲೆಗಳ ಪ್ರಮುಖ ಸಮುದಾಯವಾಗಿದೆ. ಅಗರಿಗಳು ಠಾಣೆ ಹಾಗು ರಾಯಗಡ ಜಿಲ್ಲೆಯಲ್ಲಿ ಕಂಡುಬರುತ್ತಾರೆ.
ಕೊಂಕಣದ ಪ್ರಮುಖ ಬ್ರಾಹ್ಮಣ ಸಮುದಾಯಗಳೆಂದರೆ ಚಿತ್ಪಾವನರು, ಕರ್ಹಡೆ, ಪಡ್ಯೇ, ಸಮವೇದಿ, ಹವ್ಯಕ. ಇವರನ್ನು 'ಕೊಕನಾಸ್ಥ ಬ್ರಾಹ್ಮಣ'ರೆಂದು ಕರೆಯಲಾಗುತ್ತದೆ.
This article uses material from the Wikipedia ಕನ್ನಡ article ಕೊಂಕಣ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.