ಉಮಾಬಾಯಿ ಕುಂದಾಪುರ ಒಬ್ಬ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ್ತಿ.
ಸ್ವಾತಂತ್ರ್ಯ ಹೋರಾಟಗಾರ್ತಿಯರ ಗುಂಪು ಭಗಿನೀ ಮಂಡಲದ ಸ್ಥಾಪಕಿ, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ ಹಿಂದೂಸ್ತಾನಿ ಸೇವಾದಲದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದರು. ತನಗೆ ಬರಬಹುದಾಗಿದ್ದ ಪ್ರಶಸ್ತಿ-ಪುರಸ್ಕಾರ, ಸರಕಾರದ ಉನ್ನತ ಹುದ್ದೆ- ಎಲ್ಲವನ್ನೂ ತಿರಸ್ಕರಿಸಿದ ಅಪರೂಪದ ಮಹಿಳೆ.
ಉಮಾಬಾಯಿ ಕುಂದಾಪುರ | |
---|---|
Born | ಭವಾನಿ ಗೋಳಿಕೇರಿ. ೨೫ನೇ ಮಾರ್ಚ್ ೧೮೯೨ ಕುಂದಾಪುರ |
Died | ೧೯೯೨ |
Citizenship | ಭಾರತೀಯ |
Occupation(s) | ಸಮಾಜಸೇವಕಿ, ಸ್ವಾತಂತ್ರ್ಯ ಹೋರಾಟಗಾರ್ತಿ |
Organization(s) | ಭಗಿನೀ ಮಂಡಲ, ಹಿಂದೂಸ್ತಾನಿ ಸೇವಾ ದಳ, ತಿಲಕ್ ಕನ್ಯಾ ಶಾಲೆ |
Known for | ಮಹಿಳಾ ಸಬಲೀಕರಣ |
Spouse | ಸಂಜೀವರಾವ್ ಕುಂದಾಪುರ |
Parents |
|
ಉಮಾಬಾಯಿಯವರು ಹುಟ್ಟಿದ್ದು ೨೫ನೇ ಮಾರ್ಚ್ ೧೮೯೨ನೇ ಇಸವಿಯಂದು, ಕುಂದಾಪುರದ ಬ್ರಾಹ್ಮಣ ಕುಟುಂಬದಲ್ಲಿ. ಬಾಲ್ಯದ ಹೆಸರು ಭವಾನಿ ಗೋಳಿಕೇರಿ. ತಂದೆ ಗೋಳಿಕೇರಿ ಕೃಷ್ಣರಾವ್ ತಾಯಿ ತುಂಗಾಬಾಯಿ. ಐವರು ಗಂಡುಮಕ್ಕಳೂ ಸೇರಿ ಒಟ್ಟು ಆರು ಮಂದಿ ಮಕ್ಕಳು. ೧೮೯೮ರಲ್ಲಿ ಸಹೋದರರ ಜೊತೆಗೆ ಉಮಾಬಾಯಿಯವರೂ ಸಹ ಮುಂಬಯಿ ಮಹಾನಗರವನ್ನು ಸೇರಿಕೊಂಡರು. ೧೯೦೫ರಲ್ಲಿ ೧೩ನೇ ವಯಸಿನಲ್ಲಿ ಸಂಜೀವರಾವ್ ಕುಂದಾಪುರ್ ಅವರನ್ನು ಮದುವೆಯಾದರು.
ಆಕೆಯ ಮಾವ ಆನಂದರಾವ್ ಕುಂದಾಪುರ ಸುಧಾರಣಾವಾದಿ ಮತ್ತು ಮಹಿಳಾ ಸಬಲೀಕರಣದ ಕುರಿತಾಗಿ ಅವರಿಗೆ ಹೆಚ್ಚಿನ ಒಲವಿತ್ತು. ಅವರ ಪ್ರೋತ್ಸಾಹದ ಮೇರೆಗೆ ಉಮಾಬಾಯಿ ಮದುವೆಯ ನಂತರ ಶಿಕ್ಷಣವನ್ನು ಮುಂದುವರೆಸಿದರು. ಆನಂದರಾಯರ ಒತ್ತಾಸೆಯಂತೆ ಉಮಾಬಾಯಿ, ಪೂನಾದ ಅಣ್ಣಾಸಾಹೇಬ್ ಕಾರ್ವೆ ಶಾಲೆಯಲ್ಲಿ ಸೇರಿದರು. ಸುಮಾರು ೨೫ ವರ್ಷ ವಯಸಿನ ತನಕ, ಆನಂದರಾಯರು ಸೊಸೆ ಉಮಾಬಾಯಿಗೆ ವಿದ್ಯಾಭ್ಯಾಸದ ವಿಷಯದಲ್ಲಿ ಹೆಚ್ಚಿನ ಸಹಾಯ ಮಾಡಿದರೂ ತನ್ನ ದುರ್ಬಲ ಆರೋಗ್ಯದ ಕಾರಣದಿಂದಾಗಿ, ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಹೀಗಾಗಿಯೇ ಅವರ ಕಲಿಕೆ ಆರಂಭವಾಗುವಾಗ ಹೆಚ್ಚೇ ವಯಸಾಗಿತ್ತು. ಆದರೆ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಎರಡೇ ವರ್ಷದಲ್ಲಿ, ೨೭ನೇ ವಯಸಿನಲ್ಲಿ ಮುಗಿಸಿದರು.
ಅಂದಿನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಪಡೆಯುವುದು ದೊಡ್ಡ ಸಾಧನೆಯೇ ಆಗಿತ್ತು. ಹೀಗಾಗಿ ಉಮಾಬಾಯಿಯವರನ್ನು ಮುಂಬೈನ ಸಾರಸ್ವತ ಮಹಿಳಾ ಸಮಾಜವು ಅವರನ್ನು ಕರೆದು ಗೌರವಿಸಿತು ಮಾತ್ರವಲ್ಲ ಮಹಿಳಾ ಸಮಾಜದ ಗೌರವ ಕಾರ್ಯದರ್ಶಿಯಾಗಿ ಆರಿಸಲ್ಪಟ್ಟರು ಮಹಿಳೆಯರಿಗೆ ಶಿಕ್ಷಣ ನೀಡುವಲ್ಲಿ ಮಾವನ ಜೊತೆಗೆ ಸಹಾಯ ಮಾಡಿದರು.
ಆಗಷ್ಟ್ ೧ ೧೯೨೦ರಂದು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಮೃತರಾದರು. ತಿಲಕರ ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿಯವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಪ್ರೇರಣೆಯಾಯಿತು. ಆ ದಿನಗಳಲ್ಲಿ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಾಗಿ ಕಾಲಿಡುವವರಿಗೆ ಕಾಂಗ್ರೆಸ್ ಸಂಘಟನೆ ಮತ್ತು ಅದರ ಸ್ವಯಂಪ್ರೇರಿತ ಸೇವೆ ಅನುಕರಣೀಯವಾಗಿತ್ತು. ಇವೆಲ್ಲವನ್ನು ಗಮನಿಸಿದ ಉಮಾಬಾಯಿಯವರು ಸ್ವಇಚ್ಛೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಪಾದಾರ್ಪಣೆ ಮಾಡಿದರು.
ಸೆಪ್ಟೆಂಬರ್ ೪ ೧೯೨೦ರಂದು ಮಹಾತ್ಮಾ ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಕೊಟ್ಟರು. ಉಮಾಬಾಯಿ ತನ್ನ ಸಹೋದರ ರಘುರಾಮರಾವ್, ಪತಿ ಸಂಜೀವರಾವ್ ಜತೆ ಸೇರಿ ಚಳುವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಖಾದಿಯ ಬಗ್ಗೆ ಪ್ರಚಾರ ಮಾಡಲು ಆರಂಭಿಸಿದರು. ಮನೆಮನೆಗೆ ತೆರಳಿ ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ಚಳುವಳಿಗೆ ಸಂಬಂಧಿಸಿದಂತೆ ಹಲವಾರು ನಾಟಕಗಳನ್ನು ಬರೆದು ಪ್ರದರ್ಶಿಸಿದರು.
ಉಮಾಬಾಯಿ ೩೧ ವರ್ಷದವರಿದ್ದಾಗ ೨೮ನೇ ಮಾರ್ಚ್ ೧೯೨೩ರಲ್ಲಿ ಗಂಡ ಸಂಜೀವರಾವ್ ಕುಂದಾಪುರ್ ಕ್ಷಯ ಖಾಯಿಲೆಯಿಂದ ತೀರಿಕೊಂಡರು. ಗಂಡನ ಮರಣಾನಂತರ, ಉಮಾಬಾಯಿಯವರು ಮಾವನೊಂದಿಗೆ ಹುಬ್ಬಳ್ಳಿಗೆ ಹಿಂತಿರುಗಿದರು. ಆನಂದರಾವ್ ಅವರು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರೆಸ್ ಅನ್ನು ಆರಂಭಿಸಿದರು.
ಅಮೇರಿಕಾದಲ್ಲಿ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಎಂ.ಎಸ್. ಪದವಿಯನ್ನು ಪಡೆದು ಸ್ವದೇಶಕ್ಕೆ ಹಿಂತಿರುಗಿದ ಡಾ. ನಾ. ಸು. ಹರ್ಡೀಕರ್ ಅವರು ಭಾರತೀಯ ಯುವಕರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಸಲುವಾಗಿ ೧೯೨೩ರಲ್ಲಿ ಹಿಂದೂಸ್ತಾನಿ ಸೇವಾ ದಳವನ್ನು (ಎಚ್ಎಸ್ಡಿ) ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು. ಉಮಾಬಾಯಿಯವರು ಈ ಸಂಘದಲ್ಲಿ ಸೇರಿಕೊಂಡರಲ್ಲದೆ, ಮಹಿಳಾ ವಿಭಾಗದ ಮುಖ್ಯಸ್ತೆಯಾಗಿಯೂ ಆಯ್ಕೆಯಾದರು. ಉಮಾಬಾಯಿಯವರು, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ್ದ ತಿಲಕ್ ಕನ್ಯಾ ಶಾಲೆಯ ಉಸ್ತುವಾರಿವಹಿಸಿಕೊಂಡರು.
೧೯೨೪ರ ಸುಮಾರಿಗೆ ಕಾಂಗ್ರೆಸ್ ಸಂಘಟನೆಯ ರಾಷ್ಟ್ರೀಯ ಸಮ್ಮೇಳನವು ಬೆಳಗಾವಿಯಲ್ಲಿ ಜರುಗಿತು. ಅಲ್ಲಿಯವರೆಗೆ ಜರುಗಿದ ಅಖಿಲ ಭಾರತ ಸಮ್ಮೇಳನದಲ್ಲಿ ಮಹಾತ್ಮಾ ಗಾಂಧಿಯವರು ಅಧ್ಯಕ್ಷರಾಗಿ ಭಾಗವಹಿಸಿದ ಏಕೈಕ ಸಮ್ಮೇಳನವಾಗಿತ್ತು ಅದು. ಹರ್ಡೀಕರ್ ಅವರ ಜೊತೆ ಅತ್ಯುತ್ಸಾಹದಿಂದ ಉಮಾಬಾಯಿಯವರು ಈ ಸಮ್ಮೇಳನದಲ್ಲಿ ಭಾಗವಹಿಸಿದರು. ಮಾತ್ರವಲ್ಲ, ರಾಜ್ಯದಾದ್ಯಂತ ತಿರುಗಿ ಸುಮಾರು ೧೫೦ಕ್ಕಿಂತ ಹೆಚ್ಚು ಮಂದಿ ಮಹಿಳೆಯರನ್ನು, ಅದರಲ್ಲೂ ಮನೆಯಲ್ಲಿ ಕುಳಿತ ವಿಧವೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಮಾಡಿದರು. ಆನಂದರಾಯರ ಮನೆ, ಮುದ್ರಣಾ ಘಟಕಗಳು ಸಂಘಟನೆಯ ಚಟುವಟಿಕೆಯ ಕೇಂದ್ರವಾಯಿತು. ಇದರಿಂದಾಗಿ ಬ್ರಿಟೀಶ್ ಸರಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಉಮಾದೇವಿಯವರು ಹಲವಾರು ರಾಷ್ಟ್ರೀಯ ನಾಯಕರ ಸಂಪರ್ಕಕ್ಕೆ ಬರಲು ಈ ಸಮ್ಮೇಳನವು ಸಹಾಯಕವಾಯಿತು ಮಾತ್ರವಲ್ಲ, ೧೯೨೭-೨೮ರ ಸಾಲಿಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆಯ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಲು ಸಹಕಾರಿಯಾಯಿತು.
ಕಮಲಾದೇವಿ ಚಟ್ಟೋಪಾಧ್ಯಾಯ ಅವರು ೧೯೫೨ರಲ್ಲಿ ಹೀಗೆ ಹೇಳಿದ್ದಾರೆ:
ನನ್ನ ಜೀವನದಲ್ಲಿ ಇದೊಂದು ಮುಖ್ಯ ತಿರುವು. ಉಮಾಬಾಯಿಯವರ ಜೊತೆ ನಾನು ಸ್ವಯಂಸೇವಕಿಯಾಗಿ ಸೇರಿಕೊಡೆ, ಮತ್ತು ಈಗಲೂ ಅವರ ಶಿಬಿರದ ಅನುಯಾಯಿಯಾಗಿ ಮುಂದುವರೆದಿದ್ದೇನೆ
ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ಭಾಗವಹಿಸುತ್ತಿದ್ದ ಉಮಾಬಾಯಿಯವರನ್ನು ೧೯೩೨ರಲ್ಲಿ ಬ್ರಿಟೀಷ್ ಸರ್ಕಾರವು ಬಂಧಿಸಿ, ೪ ತಿಂಗಳವರೆಗೆ ಯರವಾಡದ ಕಾರಗೃಹದಲ್ಲಿ ಇರಿಸಿತು. ಜೈಲಿನಲ್ಲಿ ಇದ್ದ ಸಮಯದಲ್ಲಿ ಮಾವ ಆನಂದರಾವ್ ತೀರಿಕೊಂಡ ಸುದ್ದಿ ಉಮಾಬಾಯಿಗೆ ತಲುಪಿತು. ತನಗೆ ಎಲ್ಲಾ ರೀತಿಯಲ್ಲಿ ಬೆಂಬಲವಾಗಿ ನಿಂತ ಮಾವ ಆನಂದರಾಯರ ನಿಧನದ ವಿಷಯ ಕೇಳಿ ಕುಸಿದುಹೋದರು. ಅದೇ ಕಾರಗೃಹದಲ್ಲಿದ್ದ ಸರೋಜಿನಿ ನಾಯ್ಡು ಉಮಾಬಾಯಿಯವರಿಗೆ ಧೈರ್ಯ ತುಂಬಿದರು. ಸಂಗ್ರಾಮಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗುಪ್ತವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು. ಜೈಲು ಶಿಕ್ಷೆ ಮುಗಿಸಿ ಅವರು ಹಿಂತಿರುಗುವ ಹೊತ್ತಿಗೆ ಬ್ರಿಟಿಷ್ ಸರ್ಕಾರವು, ಆನಂದರಾವ್ ಸ್ಥಾಪಿಸಿದ್ದ ಕರ್ನಾಟಕ ಪ್ರೆಸ್ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು ಮತ್ತು ತಿಲಕ್ ಕನ್ಯಾ ಶಾಲೆಗೆ ಬೀಗ ಜಡಿಯಲಾಗಿತ್ತು. ಅಲ್ಲದೆ ಅವರು ಪ್ರಾರಂಭಿಸಿದ ಸ್ವಯಂಸೇವಾ ಸಂಘಟನೆ ಭಗಿನಿ ಮಂಡಲವನ್ನು ಕಾನೂನುಬಾಹಿರವೆಂದು ಘೋಷಿಸಲಾಗಿತ್ತು. ಆದರೆ ಇದರಿಂದ ವಿಚಲಿತರಾಗದ ಉಮಾಬಾಯಿ ತನ್ನ ಸಣ್ಣ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ನೀಡಲು ಪ್ರಾರಂಭಿಸಿದರು.
೧೯೪೨ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯ ಸಂದರ್ಭ, ಸ್ವಾತಂತ್ರ್ಯ ಸಂಗ್ರಾಮ ಕಾವೇರುತ್ತಿದ್ದ ಸಮಯ. ಭೂಗತರಾಗಿದ್ದುಕೊಂಡು ಸಂಗ್ರಾಮದಲ್ಲಿ ಭಾಗವಹಿಸುತ್ತಿದ್ದ ಹಲವಾರು ಮಂದಿ ಹೋರಾಟಗಾರರು ಉಮಾಬಾಯಿಯವರ ಮನೆಯಲ್ಲಿ ಬಂದು ತಂಗುತ್ತಿದ್ದರು. ಬ್ರಿಟೀಷರ ಕಣ್ಣುತಪ್ಪಿಸಿ ಅವರಿಗೆ ಆಹಾರ, ವಸತಿಯ ಸೌಲಭ್ಯವನ್ನು ಒದಗಿಸುವ ಅಪಾಯಕಾರಿ ಕೆಲಸವನ್ನು ಉಮಾಬಾಯಿಯವರು ಮಾಡುತ್ತಿದ್ದರು.
ಬಿಹಾರದಲ್ಲಿ ೧೯೩೪ರಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಹರ್ಡೀಕರ್ ಅವರು ಹಿಂದೂಸ್ತಾನಿ ಸೇವಾ ದಳದ ಸದಸ್ಯರೊಂದಿಗೆ, ಉಮಾಬಾಯಿಯವರು ಮಹಿಳಾ ಸಹಚರರೊಂದಿಗೆ ಕೂಡಿ ಬಿಹಾರಕ್ಕೆ ತೆರಳಿ, ಭೂಕಂಪ ಸಂತೃಸ್ತರಿಗೆ ಸಹಾಯಹಸ್ತ ಚಾಚಿದರು. ಈ ಸಮಯದಲ್ಲಿಯೇ ಅವರು ರಾಷ್ಟ್ರೀಯ ನಾಯಕರಾದ ಬಾಬು ರಾಜೇಂದ್ರ ಪ್ರಸಾದ್, ಜೀವತ್ರಾಮ್ ಭಗವಾನ್ದಾಸ್ ಕೃಪಲಾನಿ ಮತ್ತು ಇತರರೊಂದಿಗೆ ನಿಕಟ ಸಂಪರ್ಕಕ್ಕೆ ಬಂದರು.
೧೯೩೮ರಲ್ಲಿ ಬಾಂಬೆ ಪ್ರಾಂತೀಯ ವಯಸ್ಕರ ಶಿಕ್ಷಣ ಮಂಡಳಿಯು ಉಮಾಬಾಯಿಯನ್ನು ಮಹಿಳಾ ಪ್ರತಿನಿಧಿಯಾಗಿ ಆಯ್ಕೆ ಮಾಡಿತು. ಅಲ್ಲಿ ಅವರಿಗೆ, ಪೂನಾದ ಖ್ಯಾತ ಸಮಾಜಸೇವಕ ಎಸ್ ಆರ್ ಭಾಗವತ್ ಅವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತು. ಭಾಗವತ್ ಅವರೊಂದಿಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದಾದ್ಯಂತ ಸಂಚರಿಸಿದ ಉಮಾಬಾಯಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಮಹಿಳೆಯರ ಸ್ಥಿತಿಗತಿಗಳನ್ನು ಹತ್ತಿರದಿಂದ ಅಧ್ಯಯನ ಮಾಡುವ ಅವಕಾಶಗಳನ್ನು ಪಡೆದುಕೊಡರು.
೧೯೪೫ರಲ್ಲಿ ಮಹಾತ್ಮಾ ಗಾಂಧಿಯವರು ಕಸ್ತೂರ್ಬಾ ಗಾಂಧಿ ಟ್ರಸ್ಟ್ ಸ್ಥಾಪಿಸಿದರು. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಹಿಳೆಯರ ಸಬಲೀಕರಣವೇ ಈ ಟ್ರಸ್ಟಿನ ಮುಖ್ಯ ಉದ್ದೇಶವಾಗಿತ್ತು. ಗಾಂಧೀಜಿಯವರು ಕಸ್ತೂರ್ಬಾ ಗಾಂಧಿ ಟ್ರಸ್ಟಿನ ಕರ್ನಾಟಕ ಶಾಖೆಯ ನಿರ್ವಾಹಕಿಯಾಗಿ ಉಮಾಬಾಯಿಯವರನ್ನು ೧೯೪೬ರಲ್ಲಿ ನೇಮಿಸಿದರು. ಪ್ರಾರಂಭದಲ್ಲಿ ಈ ಸಂಸ್ಥೆಗೆ ಯಾವುದೇ ರೀತಿಯ ಧನಸಹಾಯವಾಗಲಿ, ಬೆಂಬಲವಾಗಲಿ ಸರಕಾರದ ಕಡೆಯಿಂದ ದೊರೆಯಲಿಲ್ಲ. ಉಮಾಬಾಯಿಯವರು ಮನೆಮನೆಗೆ ತೆರಳಿ ಭಿಕ್ಷೆ ಬೇಡಿ, ಹಣ ಸಂಗ್ರಹಿಸಿ ಸಂಸ್ಥೆಯನ್ನು ಮುನ್ನಡೆಸಿದರು. ಅರ್ಥಿಕವಾಗಿ ದುರ್ಬಲರಾದವರು, ನಿರ್ಗತಿಕ ಮಹಿಳೆಯರು, ಬಾಲವಿಧವೆಯರು, ಅವಿವಾಹಿತ ಮಹಿಳೆಯರು- ಹೀಗೆ ಸಮಾಜದ ತೀರಾ ಕೆಳಸ್ತರದಲ್ಲಿದ್ದ ಮಹಿಳೆಯರನ್ನು ತಮ್ಮ ಸಂಘಟನೆಗೆ ಬರಮಾಡಿಕೊಂಡು ಅವರಿಗೆ ಕರಕುಶಲ ವಸ್ತುಗಳ ತಯಾರಿಕೆ, ಕಲೆ ಮತ್ತಿತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೂಕ್ತ ತರಬೇತಿಯನ್ನು ನೀಡಿದರು. ಆ ಮೂಲಕ ಅವರು, ಸಮಾಜದಲ್ಲಿ ಸ್ವತಂತ್ರವಾಗಿ ತಲೆಯೆತ್ತಿ ಬಾಳುವಂತೆ ಮಾಡಿದರು.
ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ, ಉಮಾಬಾಯಿಯವರ ಹೆಸರು ಸಾಕಷ್ಟು ಪ್ರಸಿದ್ಧಿಯಾಗಿತ್ತು. ತಾನು ಮಾಡಿದ ಕೆಲಸಕಾರ್ಯಗಳಿಂದ, ಹಲವು ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದರು ಇದನ್ನು ಬಳಸಿಕೊಂಡು ರಾಜಕೀಯ ಪ್ರವೇಶಿಸುವ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಮಾಡುವ, ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರದ ಪಿಂಚಣಿಯನ್ನು ಮತ್ತು ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ತಾಮ್ರಪತ್ರ ಪ್ರಶಸ್ತಿಯನ್ನೂ ಸ್ವೀಕರಿಸಲು ಒಪ್ಪಲಿಲ್ಲ. ಅವರು ಸಾಮಾನ್ಯ ಸ್ವಯಂಸೇವಕಿಯಾಗಿಯೇ ಇರಲು ಬಯಸಿದರು.
ದಿವಂಗತ ಡಾ.ಎನ್.ಎಸ್. ಹರ್ಡೀಕರ್ ಅವರು ಉಮಾಬಾಯಿಯವರ ಬಗ್ಗೆ ಹೀಗೆ ಹೇಳಿದ್ದಾರೆ.-
ನನಗೆ ತಿಳಿದ ಮಟ್ಟಿಗೆ, ಕರ್ನಾಟಕದ ಬೇರೆ ಯಾವ ಮಹಿಳೆಯೂ, ಉಮಾಬಾಯಿ ಮಾಡಿದಷ್ಟು ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿದಷ್ಟು ನಿರಂತರ ಕೆಲಸ ಮಾಡಿಲ್ಲ. ಸುಮಾರು ಮಂದಿ ನಾಯಕರು, ಮತ್ತು ಸ್ವಯಂಸೇವಕರು ಬರುತ್ತಿದ್ದರು, ಕೆಲಸ ಮಾಡುತ್ತಿದ್ದರು, ಸ್ವಲ್ಪಕಾಲದ ನಂತರ ಕ್ಷೇತ್ರದಿಂದ ಕಣ್ಮರೆಯಾಗುತ್ತಿದ್ದರು. ಆದರೆ ಈಕೆ ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಈಗಲೂ ಕೆಲಸ ಮಾಡುತಿದ್ದಾರೆ.
ಉಮಾಬಾಯಿ ಅವರು ೧೯೯೨ರಲ್ಲಿ ಹುಬ್ಬಳ್ಳಿಯಲ್ಲಿ ನಿಧನರಾದರು.
This article uses material from the Wikipedia ಕನ್ನಡ article ಉಮಾಬಾಯಿ ಕುಂದಾಪುರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.