ಉಪನಿಷತ್: ವೇದ

ವೇದಗಳ ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು ಉಪನಿಷತ್‌ಗಳು (ದೇವನಾಗರಿ: उपनिषद्, ಉಪನಿಷದ್ ಎಂದೂ ಬರೆಯುತ್ತಾರೆ) ಎಂದು ಕರೆಯುತ್ತಾರೆ.

ಉಳಿದ ಮೊದಲ ಮೂರು ಭಾಗಗಳೆಂದರೆ ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು. ಆದ್ದರಿಂದಲೇ ಉಪನಿಷತ್ತುಗಳಿಗೆ ವೇದಾಂತವೆಂಬ ಹೆಸರೂ ರೂಢಿಯಲ್ಲಿದೆ. ಉಪನಿಷತ್ತುಗಳು ಸಂಖ್ಯೆಯಲ್ಲಿ ಎಷ್ಟಿವೆ, ಇವುಗಳ ಕಾಲವೇನು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ವೇದಧರ್ಮದ ಅತ್ಯುನ್ನತ ಆದರ್ಶ ಮತ್ತು ಸಿದ್ಧಿಗಳನ್ನು ಪ್ರತಿಪಾದಿಸಿ ಮೋಕ್ಷ ಶಾಸ್ತ್ರಗಳೆನ್ನಿಸಿಕೊಂಡಿರುವ ಇವು ವೇದಗಳ ಸಾರಸರ್ವಸ್ವವಾಗಿ ಮಾನವನನ್ನು ಅಮೃತತ್ವಕ್ಕೆ ಒಯ್ಯುವ ಹಂತಪಂಕ್ತಿಗಳೆನ್ನಬಹುದು. ಇವುಗಳಲ್ಲಿ ವಿಚಾರದ ಅಂತ್ಯವನ್ನು ಮೀರಿ ಹೋಗಿರುವ ಮಹಾಮಹಿಮರ, ಋಷಿಗಳ, ಮಂತ್ರದ್ರಷ್ಟಾರರ, ಅಂತರ್ದೃಷ್ಟಿ ಗೋಚರವಾದ ಪರಬ್ರಹ್ಮವಸ್ತುವಿನ ಸ್ವರೂಪ ನಿರೂಪಣೆ ದಿವ್ಯಜ್ಯೋತಿಯಂತೆ ಬೆಳಗುತ್ತಿದೆ. ಇವು ಭಾರತೀಯ ದರ್ಶನಗಳೆಲ್ಲಕ್ಕೂ ಸಿದ್ಧಾಂತಗಳೆಲ್ಲಕ್ಕೂ ಮೂಲವಾದ ತತ್ತ್ವ ತರಂಗಗಳ ಪಾವನ ಬುಗ್ಗೆಗಳಂತಿವೆ. ಅಂತೆಯೇ ವಿದ್ವಾಂಸರು ಇವನ್ನು ವೇದಗಳೆಂಬ ಪರ್ವತಪಂಕ್ತಿಗಳಲ್ಲಿನ ಗಗನಸ್ಪರ್ಶಿ ಶಿಖರಗಳೆಂದು ಬಣ್ಣಿಸಿದ್ದಾರೆ. ಇವುಗಳಲ್ಲಿ ಅಡಗಿರುವ ಮಹತ್ತ್ವವನ್ನು, ಆತ್ಮ ಪರಮಾತ್ಮ ಜ್ಞಾನವನ್ನು, ಗುರುವಿನ ಪದತಲದಲ್ಲಿ ಕುಳಿತು ಭಕ್ತಿಯಿಂದ ಕೇಳಿ ತಿಳಿಯಬೇಕಾಗಿರುವುದರಿಂದ ಈ ಅರ್ಥವನ್ನೊಳಗೊಂಡ ಉಪನಿಷತ್ ಎಂಬ ಹೆಸರು ಅನ್ವರ್ಥವಾಗಿದೆ. ಇವುಗಳಲ್ಲಿ ಬಹುಭಾಗ ಗುರುಶಿಷ್ಯರ ಸಂವಾದ ರೂಪದಲ್ಲಿದೆ. ಇವುಗಳು ವೇದಾಂತದ ಮೂಲ ಉಪದೇಶಗಳನ್ನು ಹೊಂದಿರುವ ಹಿಂದು ಧರ್ಮಗ್ರಂಥಗಳಾಗಿವೆ . ಸಾಂಪ್ರದಾಯಿಕವಾಗಿ ಇವುಗಳಿಗೆ ಯಾವುದೇ ಲೇಖಕರಿಲ್ಲ. ಇವುಗಳನ್ನು ಶೃತಿ ಗಳ ವರ್ಗಕ್ಕೆ ಸೇರಿಸುತ್ತಾರೆ.ಇವು ಸಂಸ್ಕೃತ ಸಾಹಿತ್ಯದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ ಬೃಹದಾರಣ್ಯಕ ಮತ್ತು ಛಾಂದೊಗ್ಯ ಉಪನಿಷತ್‌ಗಳು, ಬ್ರಾಹ್ಮಣಗಳ ಮತ್ತು ಅರಣ್ಯಕಗಳ ಕಡೆಯ ಕಾಲಕ್ಕೆ (ಅಂದಾಜು ಕ್ರಿ.ಪೂ ಮೊದಲ ಸಹಸ್ರಮಾನ)ಸೇರುತ್ತವೆ. ಉಪನಿಷತ್ತುಗಳು ನೂರಾರು ಇದ್ದರೂ ಮುಖ್ಯ ವಾದವುಗಳು (ಅಂದರೆ ಹಳೆಯವು) ೧೧ ಮಾತ್ರ. ಮುಖ್ಯ ಉಪನಿಷತ್ತುಗಳು ಬುದ್ಧಪೂರ್ವ ಕಾಲದಲ್ಲಿ ರಚಿಸಲ್ಪಟ್ಟಿದ್ದರೆ, ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್‌ಗಳು ಹಿಂದು ತತ್ವಶಾಸ್ತ್ರದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ ಮಾರ್ಟಿನ್ ಸೇಮೋರ್-ಸ್ಮಿತ್ ಪ್ರಕಾರ ಇವುಗಳನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ೧೦೦ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ತತ್ವಶಾಸ್ತ್ರಜ್ಞ ಹಾಗೂ ಭಾಷ್ಯಕಾರರಾದ ಶಂಕರಾಚಾರ್ಯರು ಹನ್ನೊಂದು ಮುಖ್ಯ ಅಥವಾ ಪ್ರಧಾನ ಉಪನಿಷತ್‌ಗಳ ಮೇಲೆ ಅರ್ಥ ನಿರೂಪಣೆ ಮಾಡಿದ್ದಾರೆಂದು ನಂಬಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬಹು ಹಿಂದಿನ ಕಾಲದಲ್ಲಿ ಅಂದರೆ ವೇದಗಳ ನಂತರದ ಕಾಲದಿಂದ ಮೌರ್ಯರ ವರೆಗಿನ ಕಾಲಕ್ಕೆ ಸೇರಿದವುಗಳೆಂದು ಸಹ ತಿಳಿಯಲಾಗಿದೆ. ಮುಕ್ತಿಕಾ ಉಪನಿಷದ್‌ನಲ್ಲಿ (೧೬೫೬ಕ್ಕೂ ಹಿಂದಿನ) ೧೦೮ ಅಂಗೀಕೃತ ಪ್ರಮಾಣ ಉಪನಿಷದ್‌ಗಳ ಪಟ್ಟಿ ಇದ್ದು, ಆ ಪಟ್ಟಿಯೇ ಅಂತಿಮ ಪಟ್ಟಿ ಎಂದು ತಿಳಿಸಲಾಗಿದೆ. ಉಪನಿಷದ್‌ಗಳಲ್ಲಿ ನಾನಾ ರೀತಿಯ ತತ್ವಶಾಸ್ತ್ರದ ಮತಾಭಿಪ್ರಾಯಗಳನ್ನು ಪ್ರತಿಪಾದಿಸಿದ್ದರೂ ಅವುಗಳಲ್ಲಿ ಉದಾತ್ತವಾದ ಏಕಾತ್ಮವಾದವೇ ಪ್ರಮುಖವಾದದ್ದೆಂಬ ಶಂಕರಾಚಾರ್ಯರ ನಿಲುವನ್ನು ಅವರ ನಂತರದ ಭಾಷ್ಯಕಾರರು ಅನುಸರಿಸಿದರು.ಮೊಘಲ್ ಚಕ್ರವರ್ತಿ ಶಹಜಹಾನನ ಮಗ ದಾರಾ ಶಿಕೊಹ್ (ಮ. ೧೬೫೯) ಐವತ್ತು ಉಪನಿಷದ್‌ಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದನು. ಮ್ಯಾಕ್ಸ್ ಮುಲ್ಲರ್‌ಗೆ (೧೮೭೯) ೧೭೦ ಉಪನಿಷದ್‌ಗಳ ಅರಿವಿತ್ತು. ಸದಾಲೆಯು ತನ್ನ ಬೃಹತ್ ಕಾವ್ಯಗಳ ಪಟ್ಟಿಯಲ್ಲಿUpaniṣad-vākya-mahā-kośa ಉಪಲಬ್ಧವಿರುವ ಬೇರೆ ಬೇರೆ 223 ಇದೇ ಹೆಸರಿನಿಂದ ಕರೆಯಲ್ಪಡುವ ಗ್ರಂಥಗಳನ್ನು ಸೂಚಿಸಿದ್ದಾನೆ. ಇದರ ಜೊತೆಗೆ, ಉಪನಿಷದ್‌ಗಳ ಸಮಯಕ್ಕೂ ಮುಂಚೆ ರಚಿತವಾದ ಬ್ರಾಹ್ಮಣಗಳ ಮತ್ತು ವೇದಗಳ ಭಾಗಗಳನ್ನೂ ಕೆಲವು ಬಾರಿ ಉಪನಿಷದ್‌ಗಳೆಂದು ಭಾವಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಪದಮೂಲ

ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) ಎಂಬುದು ಪದದ ಮೂಲಾರ್ಥ. ಏಕಾಂತದಲ್ಲಿ ನೀಡಿದ ರಹಸ್ಯವಾದ ಉಪದೇಶ ಎಂದೂ ಅರ್ಥವಿದೆ. ಸ್ಕೇಯರ್ ವಿವರಿಸಿದಂತೆ ಉಪಾದ್ಯಾಯರಿಗೆ "ಮುತ್ತಿಗೆ ಹಾಕುವುದು". "ಸ್ಥಳೀಯ ವಿದ್ವಾಂಸರು ಹೇಳುವಂತೆ ಉಪನಿಷದ್ ಎಂದರೆ ಬ್ರಹ್ಮಜ್ಞಾನವನ್ನು ಬೋಧಿಸುವುದರಿಂದ ಅಜ್ಞಾನವನ್ನು ನಿವಾರಿಸುವುದು" ಎಂದು ಮೋನಿಯರ್-ವಿಲಿಯಮ್ಸ್‍ರ ಸಂಸ್ಕೃತ ನಿಘಂಟಿನಲ್ಲಿದೆ. ಶಂಕರರು ಕಠೋಪನಿಷತ್ ಮತ್ತು ಬೃಹದಾರಣ್ಯಕೋಪನಿಷತ್‍ಗಳ ಭಾಷ್ಯದಲ್ಲಿ, ಉಪನಿಷತ್ ಎಂದರೆ ಆತ್ಮವಿದ್ಯೆ (ಆತ್ಮದ ಬಗೆಗಿನ ಜ್ಞಾನ) ಅಥವ ಬ್ರಹ್ಮವಿದ್ಯೆ (ಪರಬ್ರಹ್ಮ ವಸ್ತುವಿನ ಜ್ಞಾನ) ಎಂದು ವಿವರಿಸಿದ್ದಾರೆ. ಇತರೆ ಪದಕೋಶಗಳು ಈ ಪದದ ಅರ್ಥವನ್ನು "ವಿಶೇಷ ಜ್ಞಾನಿಗಳಿಗಾಗಿ ಇರುವ / ಗೂಢ ತತ್ವ ಇರುವ" ಮತ್ತು "ರಹಸ್ಯವಾದ ಸಿದ್ಧಾಂತ" ಎಂದು ಕೊಟ್ಟಿವೆ.

ಕಾಲ[ಸೂಕ್ತ ಉಲ್ಲೇಖನ ಬೇಕು]

ಉಪನಿಷತ್ತುಗಳ ಕಾಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಇವು ಬೌದ್ಧ ಧರ್ಮಕ್ಕೂ ಹಿಂದಿನವು ಎಂದು ವಿದ್ವಾಂಸರಲ್ಲಿ ಒಮ್ಮತವಿದೆ. ಅಂದರೆ ಇವು ಕ್ರಿ.ಪೂ.೬೦೦ಕ್ಕೂ ಹಿಂದಿನವು. ಋಗ್ವೇದ ಸಂಹಿತೆಗಳ ಕಾಲಕ್ಕಿಂತ ಈಚಿನವು ಎಂದು ಹೇಳಬೇಕಾಗಿರುವುದರಿಂದಲೂ, ಋಗ್ವೇದದ ಕಾಲ ಸುಮಾರು ಕ್ರಿ.ಪೂ.೧೨೦೦ ಎಂದು ಪಂಡಿತರ ಅಭಿಪ್ರಾಯವಿರುವುದರಿಂದಲೂ ಉಪನಿಷತ್ತುಗಳ ಕಾಲವನ್ನು ಕ್ರಿ.ಪೂ.೧೨೦೦ ಮತ್ತು ಕ್ರಿ.ಪೂ.೬೦೦ರ ಮಧ್ಯಕಾಲವೆನ್ನಬಹುದು. ಆದರೆ ಮೈತ್ರಾಯಣೀಯ ಉಪನಿಷತ್ತಿನಲ್ಲಿ ಬಂದಿರುವ ಜ್ಯೋತಿಶ್ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಉಲ್ಲೇಖದ ಆಧಾರದ ಮೇಲೆ ಬಾಲಗಂಗಾಧರ ತಿಲಕರು ಇದರ ಕಾಲವನ್ನು ಕ್ರಿ.ಪೂ.೨೦೦೦ಕ್ಕೂ ಹಿಂದಕ್ಕೆ ಹಾಕಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಛಾಂದೋಗ್ಯ ಮತ್ತು ಬೃಹದಾರಣ್ಯಕ ಉಪನಿಷತ್‍ಗಳು ಅತ್ಯಂತ ಪ್ರಾಚೀನವಾದವು.

ತತ್ವಚಿಂತನೆ

ಉಪನಿಷದ್‌ಗಳು ಒಂದು ವಿಶ್ವವ್ಯಾಪಿ ಚೇತನ (ಬ್ರಹ್ಮ ) ಮತ್ತು ಒಂದು ವೈಯಕ್ತಿಕ ಸ್ವರೂಪದ (ಆತ್ಮ ) ಬಗ್ಗೆ ಹೇಳುತ್ತವೆ ಮತ್ತು ಕೆಲವೊಮ್ಮೆ ಇವೆರಡರ ಅನನ್ಯತೆಯನ್ನು ಪ್ರತಿಪಾದಿಸುತ್ತವೆ. ಬ್ರಹ್ಮನು ಸರ್ವಶ್ರೇಷ್ಠನೂ, ಇಂದ್ರಿಯಾತೀತನೂ ಆಗಿದ್ದು, ಸಂಪೂರ್ಣ ಹಾಗೂ ಅನಂತ ಅಸ್ತಿತ್ವ ವಿರುವ ಸರ್ವಾಂತರ್ಯಾಮಿಯಾಗಿದ್ದಾನೆ. ಅಲ್ಲದೇ, ಅವನು ಹಿಂದೆ ಇದ್ದ, ಈಗ ಇರುವ, ಮುಂದೆ ಇರಬಹುದಾದ ಎಲ್ಲದರ ಮೊತ್ತವಾಗಿದ್ದಾನೆ. ಭಗವದ್ಗೀತೆ, ಬ್ರಹ್ಮಸೂತ್ರಗಳೊಂದಿಗೆ ಉಪನಿಷದ್‍ಗಳು ಮೂರು ಮುಖ್ಯವಾದ ವೇದಾಂತ ಮತಗಳಿಗೆ ಆಕರಗಳಾಗಿವೆ. ಶಂಕರರ ಉಪನಿಷದ್ ಅರ್ಥವಿವರಣೆಯು ಬ್ರಹ್ಮನನ್ನು ಏಕದೇವತತ್ವದ ದೇವರಾಗಿ ವರ್ಣಿಸಿಲ್ಲ. ಅದ್ವೈತವು ಶಂಕರರ ತತ್ವವೆಂದು ಜನಪ್ರಿಯವಾಗಿದ್ದರೂ ಅದು ಅವರಿಗಿಂತಲೂ ಪ್ರಾಚೀನವಾದದ್ದು. ಅದ್ವೈತಕ್ಕೆ ಶಂಕರರ ಕೊಡುಗೆ ಅಮೂಲ್ಯವಾದುದು. ಇದು ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತವಾದಕ್ಕೆ ವಿರುದ್ಧವಾಗಿದೆ, ದ್ವೈತವಾದವು ಬ್ರಹ್ಮನನ್ನು ಸರ್ವಶ್ರೇಷ್ಠ ಸಾಕಾರ ದೇವನಾಗಿ, ಮಾನವನ ಆತ್ಮಕ್ಕಿಂತ ವಿಭಿನ್ನವಾಗಿ ಕಾಣುತ್ತದೆ ಮತ್ತು ಆ ದೇವನು ವಿಷ್ಣು ಅಥವಾ ಕೃಷ್ಣನಾಗಿರುವಂತೆ ಬಿಂಬಿಸುತ್ತದೆ. (ಬ್ರಹ್ಮನೋ ಹಿ ಪ್ರತಿಷ್ಠಾನಂ , ನಾನು ಬ್ರಹ್ಮನ ಮೂಲ ಸಂಸ್ಥಾಪಕ ಭಗವದ್ಗೀತೆ ೧೪.೨೭). ವೇದಾಂತದ ಮೂರನೇ ಮುಖ್ಯ ಮತವೆಂದರೆ ರಾಮಾನುಜಾಚಾರ್ಯರು ಸ್ಥಾಪಿಸಿದ ವಿಶಿಷ್ಠಾದ್ವೈತವಾಗಿದ್ದು ಮೇಲಿನೆರಡು ಮತಗಳಿಗೂ ಸಾಮಾನ್ಯವಾದ ತೋರಿಕೆಗಳನ್ನು ಹೊಂದಿದೆ ಮತ್ತು ಇವೆರಡನ್ನೂ ಸಮನ್ವಯಗೊಳಿಸಲು ಬಯಸಿದೆ[ಸೂಕ್ತ ಉಲ್ಲೇಖನ ಬೇಕು]. ತೈತ್ತರೀಯ ಉಪನಿಷದ್‌ ನ ಒಂಭತ್ತನೆಯ[ಸೂಕ್ತ ಉಲ್ಲೇಖನ ಬೇಕು] ಶ್ಲೋಕ ಹೀಗೆಂದು ಹೇಳುತ್ತದೆ::

      ಬ್ರಹ್ಮಾನಂದವನ್ನು ಹೊಂದಿದ ವ್ಯಕ್ತಿಯು" (ದೇವರ ಜ್ಞಾನ). "ನಾನೇಕೆ ಸತ್ಕಾರ್ಯಗಳನ್ನು ಮಾಡಿಲ್ಲ? ನಾನೇಕೆ ಕುಕರ್ಮಗಳನ್ನು ಮಾಡಿದೆ?" ಎಂದು ಬಳಲುವುದಿಲ್ಲ. ಇದನ್ನು (ಆನಂದ) ತಿಳಿದ ಯಾರಾದರೂ ಇವೆರಡನ್ನೂ (ಸ್ವಯಂ, ಆತ್ಮ), ಇವೆರಡನ್ನೂ ಆತ್ಮನ್ ಎಂದು ಅರಿತು ಸುಖಿಯಾಗುತ್ತಾನೆ. ಹೀಗೆ ನಿಜವಾಗಿ, ಉಪನಿಷತ್ ಬ್ರಹ್ಮನ ಗೌಪ್ಯವಾದ ಜ್ಞಾನವಾಗಿದೆ.

ಉಪನಿಷದ್‌ಗಳು ಅದ್ವೈತ ವೇದಾಂತಕ್ಕೆ ನೀಡಿದ ಮುಖ್ಯ ವಾಕ್ಯ ಭಾಗವೆಂದರೆ, तत् त्वं असि "ತತ್ ತ್ವಂ ಅಸಿ" (ಅದು ನೀನೆ ಆಗಿದ್ದೀಯಾ). ವೇದಾಂತಿಗಳು ಕೊನೆಗೆ ಸರ್ವಶ್ರೇಷ್ಠ, ನಿರಾಕಾರ, ನಿಗಮ್ಯ ಬ್ರಹ್ಮನು, ನಮ್ಮ ಆತ್ಮನೂ ಒಂದೇ ಆಗಿರುತ್ತಾರೆ. ನಾವು ನಮ್ಮ ತಾರತಮ್ಯ ಜ್ಞಾನದಿಂದ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. (ಈ ವಾಕ್ಯಭಾಗದ, ಅರ್ಥವಿವರಣೆಗಳು ಬೇರೆ ಬೇರೆ ರೀತಿಯಲ್ಲಿವೆ.)ಈಶಾವಾಸ್ಯೋಪನಿಶತ್ ೬, ೭ ಮತ್ತು ೮ನೇ ಶ್ಲೋಕಗಳು ::::

          ಯಾರು ಎಲ್ಲಾ ಜೀವಿಗಳನ್ನು ಆತ್ಮನಲ್ಲಿ ಕಾಣುತ್ತಾರೋ ಮತ್ತು ಆತ್ಮವನ್ನು ಎಲ್ಲಾ ಜೀವಿಗಳಲ್ಲಿ ಕಾಣುತ್ತಾರೋ...
          ಯಾರು ಇವೆರಡರಲ್ಲಿರುವ ಐಕ್ಯತೆಯನ್ನು ಕಾಣುತ್ತಾರೋ ಅವರಿಗೆಲ್ಲಿದೆ ದುಖಃ ಮತ್ತು ಭ್ರಾಂತಿ?
          ಅದು ಎಲ್ಲವನ್ನೂ ತುಂಬಿದೆ. ಅದು ಪ್ರಜ್ವಲ, ನಿರಾಕಾರ, ಅಮರ, ಅವಧ್ಯ...
          ಸರ್ವಜ್ಞ, ಚುರುಕು ಬುದ್ಧಿಯ, ಸರ್ವವ್ಯಾಪಿ, ಸ್ವಯಂಭುವ,
          ಇದು ಅನಂತಕಾಲದವರೆಗೆ ಸೃಷ್ಠಿಯನ್ನು ನಿಯಂತ್ರಿಸುತ್ತದೆ.
ಉಪನಿಷತ್: ಪದಮೂಲ, ಕಾಲ[ಸೂಕ್ತ ಉಲ್ಲೇಖನ ಬೇಕು], ತತ್ವಚಿಂತನೆ 
ಓಂ ಕಾರ

ಉಪನಿಷದ್‌ಗಳು ಮೊಟ್ಟ ಮೊದಲ ಹಾಗೂ ಅತ್ಯಂತ ಸ್ಪುಟವಾಗಿ ಪವಿತ್ರ ಅಕ್ಷರವಾದ ಅ‌ಉಮ್ ಅಥವಾ ಓಂಕಾರವನ್ನು ವಿವರಿಸುತ್ತವೆ. ಇದು ಎಲ್ಲಾ ಸೃಷ್ಠಿಯ ಮೂಲಾಧಾರವಾದ ವಿಶ್ವಕಂಪನ ನಾದವಾಗಿದೆ. "ಓಂ ಶಾಂತಿಃ ಶಾಂತಿಃ ಶಾಂತಿಃ " ಎನ್ನುವ ಮಂತ್ರ (ಶಬ್ದವಿಲ್ಲದ ನಾದ, ಶಾಂತಿ, ಶಾಂತಿ, ಶಾಂತಿ) ವೇದೋಪನಿಷದ್‌ಗಳಲ್ಲಿ ಪದೇ ಪದೇ ಕಂಡುಬರುತ್ತದೆ.
ಭಗವಂತನಿಗೆ ನಿಷ್ಠೆ (ಸಂಸ್ಕೃತ: ಭಕ್ತಿ): ಸರಳ ಅರ್ಥದಲ್ಲಿ ಭಕ್ತಿಯು ಉಪನಿಷತ್‌ಗಳ ಸಾಹಿತ್ಯದ ಮುಂಚೂಣಿಯಾಗಿದ್ದು ಮತ್ತು ನಂತರ ಅದನ್ನು ಭಗವದ್ಗೀತೆ ಯಂತಹ ಗ್ರಂಥಗಳು ಕಂಡುಕೊಂಡವು. ಉಪನಿಷತ್ತುಗಳನ್ನು ಪರಮ ಪ್ರಮಾಣವಾದ ಅಪೌರುಷೇಯ ಮಂತ್ರಗಳೆಂಬ ದೃಷ್ಟಿಯಿಂದ ಪರಿಶೀಲಿಸಿದಾಗ ಅವೆಲ್ಲವೂ ಒಂದೇ ತತ್ತ್ವವನ್ನು ಪ್ರತಿಪಾದಿಸುವುವು[ಸೂಕ್ತ ಉಲ್ಲೇಖನ ಬೇಕು] ಎಂದು ಒಪ್ಪಿಕೊಳ್ಳಬೇಕಾಗುತ್ತದಾದರೂ ಭಾಷ್ಯಕಾರರ ದೃಷ್ಟಿಯಲ್ಲಿ ಅವುಗಳಲ್ಲಿ ಭಿನ್ನ ಭಿನ್ನ ಸಿದ್ಧಾಂತಗಳ ನಿರೂಪಣೆ ಇದೆ. ಬಾದರಾಯಣರು ವೇದಾಂತಸೂತ್ರದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಅನೇಕ ಸಿದ್ಧಾಂತಗಳ ಉಲ್ಲೇಖವಿದ್ದರೂ ಅವುಗಳೆಲ್ಲಕ್ಕೂ ಸಮಪ್ರಾಧಾನ್ಯ ದೊರೆತಿಲ್ಲ. ಕೆಲವು ಮಿಂಚಿನಂತೆ ಕಂಡು ಮಾಯವಾಗುವುವು. ಕೆಲವು ಸಂಗ್ರಹವಾಗಿ ಬಂದರೆ ಮತ್ತೆ ಕೆಲವು ಹಳೆಯ ತತ್ತ್ವಗಳನ್ನೇ ಸಮರ್ಥಿಸುವುವು. ಆದರೆ ಈ ಎಲ್ಲ ಸಂಶಯಗಳನ್ನೂ ಬದಿಗೊತ್ತಿ ಪರಿಶೀಲಿಸಿದಲ್ಲಿ ಪ್ರಧಾನವಾಗಿ ಅಲ್ಲಿ ಘೋಷಿತವಾಗಿರುವ ತತ್ತ್ವ ವೇದಾಂತ ದರ್ಶನವೆನ್ನಿಸಿಕೊಂಡಿರುವ ಬ್ರಹ್ಮತತ್ತ್ವ ಅಥವಾ ಬ್ರಹ್ಮ ಮತ್ತು ಆತ್ಮಗಳೆಂಬ ಆಧಾರಸ್ತಂಭಗಳ ಮೇಲೆ ನಿಂತಿರುವ ಭಾರತೀಯ ದರ್ಶನಸಾರ. ಉಪನಿಷತ್ತುಗಳು ಬ್ರಾಹ್ಮಣಗಳೊಂದಿಗೆ ಸೇರಿಕೊಂಡಿದ್ದರೂ ಇವುಗಳ ವಿಚಾರಧಾರೆ ಬೇರೆಯಾಗಿವೆ. ಬ್ರಾಹ್ಮಣಗಳು ಪ್ರತಿಪಾದಿಸುವ ಯಾಗಾದಿಗಳನ್ನು ಕಾಮ್ಯ ಕರ್ಮಗಳೆಂದು ಉಪನಿಷತ್ತುಗಳು ತಿರಸ್ಕರಿಸಿ ಅವುಗಳಿಂದ ಆತ್ಮೋದ್ಧಾರವಿಲ್ಲವೆನ್ನುತ್ತವೆ; ಮತ್ತು ಬಾಹ್ಯಯಜ್ಞ ಆತ್ಮಯಜ್ಞದ ಪ್ರತೀಕವೆಂದು ಹೇಳಿವೆ. ಹೀಗೆ ಉಪನಿಷತ್ತುಗಳ ಕಾಲಕ್ಕೆ ಭಾರತೀಯ ದರ್ಶನದ ಸರಣಿಯಲ್ಲಿ ಗಮನಾರ್ಹವಾದ ಬದಲಾವಣೆಯಾಗಿತ್ತು. ಅದಲ್ಲದೆ ಉಪನಿಷತ್ ರಹಸ್ಯವಾದ ವಿದ್ಯೆ ಎಂಬ ಅರ್ಥವನ್ನೂ ಹೊಂದಿದೆ. ಇದನ್ನು ಗುರುಮುಖೇನ ಪಡೆಯುವವ ಅಸಾಧಾರಣ ಶ್ರದ್ಧಾಭಕ್ತಿಗಳಿಂದ ಕೂಡಿದವನಾಗಿದ್ದು ಜ್ಞಾನಪಿಪಾಸುವೂ ಸೌಮ್ಯಗುಣಸಂಪನ್ನನೂ ಶಮಾನ್ವಿತನೂ ಆಗಿರಬೇಕು. ಈ ಆದರ್ಶವಿದ್ಯೆಗೆ ಆದರ್ಶ ಶಿಷ್ಯನೇ ಪಾತ್ರವೆಂದು ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ. ಮೇಲೆ ಹೇಳಿದ ಉಪನಿಷತ್ತುಗಳಲ್ಲಿ ಈ ಬಗೆಯ ಗುರುಶಿಷ್ಯ ಸಂವಾದಗಳೇ ಚಿತ್ರಿತವಾಗಿವೆ. ಪ್ರವಚನದಲ್ಲೂ ಕೆಲವು ಗೂಢತತ್ತ್ವಗಳು ಸೂತ್ರರೂಪದಲ್ಲಿವೆಯೇ ಹೊರತು ಸ್ಪಷ್ಟವಾದ ವಿವರಣೆ ಇಲ್ಲ. ಈ ಕಾರಣದಿಂದಲೇ ಅರ್ಥವೃತ್ತಿಗಳಲ್ಲಿ ಭಿನ್ನತೆಗೆ ಅವಕಾಶವಾಗಿದೆ. ಸಂಹಿತೆಗಳಂತೆ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ದಾರ್ಶನಿಕರಿಂದ ಸಂಗ್ರಹವಾಗಿರುವುದು ಸಿದ್ಧಾಂತಗಳ ವ್ಯತ್ಯಾಸಕ್ಕೆ ಕಾರಣವಿರಬಹುದೆಂದು ವಿದ್ವಾಂಸರ ಅಭಿಪ್ರಾಯ. ಬ್ರಹ್ಮತತ್ವ: ಮೂಲ ಎಂಬ ಅರ್ಥವುಳ್ಳ ಬೃಃ ಶಬ್ದದಿಂದ ಬ್ರಹ್ಮಶಬ್ದ ಬಂದಿದೆ[ಸೂಕ್ತ ಉಲ್ಲೇಖನ ಬೇಕು]. ಯಾವುದು ತಾನೇ ತನ್ನ ಅಂತಃಶಕ್ತಿಯಿಂದಲೇ ನಿರಾತಂಕವಾಗಿ ಆವಿರ್ಭವಿಸುವುದೋ ಅದೇ ಬ್ರಹ್ಮ. ಇದೇ ಜಗತ್ತಿಗೆ ಏಕೈಕ ಕಾರಣ ಮತ್ತು ಏಕಮೇವಾದ್ವಿತೀಯವಾದದ್ದು. ಉಪನಿಷತ್ಕಾರರ ಮೊದಲ ತತ್ತ್ವವೇ ಬ್ರಹ್ಮನನ್ನು ಕುರಿತದ್ದು. ಬ್ರಹ್ಮ ಮತ್ತು ಆತ್ಮ ಎಂಬ ಶಬ್ದಗಳು ಮೊಟ್ಟಮೊದಲು ಅಥರ್ವವೇದದಲ್ಲಿ ಉಪಯೋಗಿಸಲ್ಪಟ್ಟಿವೆ[ಸೂಕ್ತ ಉಲ್ಲೇಖನ ಬೇಕು]. ಪರಮಾತ್ಮಪರವಾಗಿ ಬ್ರಹ್ಮಶಬ್ದದ ಅರ್ಥಪುಷ್ಟಿಯನ್ನು ಅಲ್ಲಿ ಕಾಣುತ್ತೇವೆ. ಉಪನಿಷತ್ಕಾರರ ಮೊದಲ ಪ್ರಶ್ನೆ ಜಗತ್ತು ಮತ್ತು ನಾವು ಎಲ್ಲಿಂದ ಬಂದೆವು ? ನಮ್ಮ ಮುಂದಿನ ಗತಿಗೂ ಸುಖದುಃಖಗಳಿಗೂ ಕಾರಣರಾರು ? ಎಂಬುದೇ ಆಗಿದೆ. ಉತ್ತರವಾಗಿ ಸತ್, ಆತ್ಮ, ಬ್ರಹ್ಮ, ಅಕ್ಷರ, ಆಕಾಶ ಶಬ್ದಗಳಿಂದ ಜಗತ್ಕಾರಣವಾದ ಪರವಸ್ತುವನ್ನು ಹೇಳಲಾಗಿದೆ. ಬ್ರಹ್ಮನೇ ಜಗತ್ತಿಗೆ ಉಪಾದಾನ ಕಾರಣ ಮತ್ತು ನಿಮಿತ್ತಕಾರಣ ಎರಡೂ. ಬ್ರಹ್ಮ ಹೊರತು ಮತ್ತಾವುದೂ ಮೊದಲು ಇರಲಿಲ್ಲವಾದ್ದರಿಂದ ಜಗತ್ತು ಬ್ರಹ್ಮಮಯ. ಸಂಕಲ್ಪ ಮಾತ್ರದಿಂದ ಜಗತ್ತನ್ನು ಸೃಷ್ಟಿಸಿ ಅದರಲ್ಲಿ ಬ್ರಹ್ಮ ಅಂತರ್ಯಾಮಿಯಾಗಿದೆ. ಸರ್ವಭೂತಗಳಿಗೂ ಅಂತರಾತ್ಮನಾದ ಬ್ರಹ್ಮವೊಂದೇ ಶಾಶ್ವತ, ಸರ್ವಶಕ್ತ, ಅನಂತ, ಪೂರ್ಣಕಾಮ. ಸರ್ವರಿಗೂ ಅಂತರಾತ್ಮನಾದ ಬ್ರಹ್ಮನಲ್ಲಿ ಸರ್ವ ಆತ್ಮಗಳೂ ಚಕ್ರದ ನೇಮಿ ಮತ್ತು ನಾಭಿಯಲ್ಲಿ ಅರೆಕಾಲುಗಳು ಹೇಗೋ ಹಾಗೆ ಅಡಕವಾಗಿದ್ದಾರೆ. ಲವಣ ನೀರಿನಲ್ಲಿ ಕರಗಿ ವ್ಯಾಪಿಸುವಂತೆ ಬ್ರಹ್ಮ ಸರ್ವವನ್ನೂ ವ್ಯಾಪಿಸಿದ್ದಾನೆ. ಅಗ್ನಿಯಿಂದ ಅಗ್ನಿಕಣಗಳೂ ಜೇಡರ ಹುಳುವಿನಿಂದ ಬಲೆಯ ಎಳೆಗಳೂ ವೇಣುವಿನಿಂದ ನಾದದ ಅಲೆಗಳೂ ಉದ್ಭವಿಸುವಂತೆ ಎಲ್ಲ ಭೂತಜಾತಗಳೂ ಬ್ರಹ್ಮನಿಂದಲೇ ಉದ್ಭವಿಸುತ್ತವೆ. ಎಲ್ಲ ಭೂತ ಜಾತಗಳಿಗೂ ಬ್ರಹ್ಮ ಏಕಾಯನನಾಗಿದ್ದಾನೆ. ಬ್ರಹ್ಮನಿಗೂ ಜಗತ್ತಿಗೂ ಹೇಗೆ ಸಂಬಂಧ ಎಂಬ ವಿಚಾರದಲ್ಲಿ ಉಪನಿಷತ್ತುಗಳು ಹೀಗೆಯೇ ಎಂದು ಸ್ಪಷ್ಟವಾಗಿ ಹೇಳಿಲ್ಲ. ಅಂದರೆ ಆತ ವಿಶ್ವಾಂತರ್ಯಾಮಿಯೆಂದೂ ವಿಶ್ವಾತೀತನೆಂದೂ ಎರಡು ಬಗೆಯಾಗಿ ಹೇಳಿವೆ. ಹಾಗೆಯೇ ಸಪ್ರಪಂಚ ಬ್ರಹ್ಮ, ನಿಷ್ಪ್ರಪಂಚ ಬ್ರಹ್ಮರ ವಿಚಾರವೂ ಬರುತ್ತದೆ. ಈ ಎರಡು ವಾದಗಳ ಸಮರ್ಥನೆಗೂ ಉಪನಿಷತ್ತಿನಲ್ಲಿ ಸಾಕಷ್ಟು ತತ್ತ್ವಪ್ರತಿಪಾದನೆಯನ್ನು ಕಾಣುತ್ತೇವೆ. ಮುಂಡಕೋಪನಿಷತ್ತಿನಲ್ಲಿ ಎರಡು ವಾದಗಳನ್ನೂ ಸಮನ್ವಯ ಮಾಡುವ ಅರ್ಥವುಳ್ಳ ಒಂದು ಮಂತ್ರವಿದೆ. ಬ್ರಹ್ಮನನ್ನು ಬಿಟ್ಟು ಜಗತ್ತಿಗೆ ಬೇರೆ ಅಸ್ತಿತ್ವವಿಲ್ಲ. ಆದರೆ ಬ್ರಹ್ಮ ಜಗತ್ತಿಗೆ ಪರಿಮಿತನಾಗಿಲ್ಲ. ನಾಮರೂಪಗಳಿಗೆ ಸಿಲುಕಿಲ್ಲ. ಬ್ರಹ್ಮ ಪರಿಣಾಮವಾದದ ಪ್ರಕಾರ ಬ್ರಹ್ಮನೇ ಜಗತ್ತಿನ ರೂಪವನ್ನು ತಾಳುತ್ತಾನೆ. ಇದು ಸಪ್ರಪಂಚವಾದ. ಬ್ರಹ್ಮ ಜಗತ್ತಿಗೆ ಕಾರಣನಾಗಿದ್ದು, ನಾಮರೂಪ ಜಗತ್ತು ಬ್ರಹ್ಮನಷ್ಟು ಸತ್ಯವಲ್ಲವೆಂಬುದು ನಿಷ್ಪ್ರಪಂಚವಾದ. ಇದರ ಪ್ರಕಾರ ಬ್ರಹ್ಮ ಜಗತ್ತಿನಂತೆ ಕಾಣಿಸಿಕೊಳ್ಳುತ್ತಾನೆ. ಅಂದರೆ ಬ್ರಹ್ಮವಿವರ್ತವಾದ ಸಮರ್ಥನೆ ಇದೇ. ಆದರೆ ಬ್ರಹ್ಮನೇ ಏಕಮೇವಾದ್ವಿತೀಯವಾದ ಸತ್ಯ ಎಂಬುದನ್ನು ನಿಸ್ಸಂಶಯವಾಗಿ ಸಾರಲಾಗಿದೆ. ನಿಷ್ಪ್ರಪಂಚನಾದ ಬ್ರಹ್ಮ ಸಪ್ರಪಂಚನಂತೆ ಕಾಣಿಸುತ್ತಾನೆಂದು ಹೇಳುವುದು ಮಾಯಾವಾದ. ಅದ್ವೈತವಾದ ಇದನ್ನೇ ಹೆಚ್ಚು ವಿಸ್ತಾರವಾಗಿ ವಿವರಿಸಿದೆ. ಉಪನಿಷತ್ತುಗಳಲ್ಲಿ ಮಾಯೆ ಎಂಬ ಶಬ್ದ ಅಷ್ಟು ನಿರ್ದಿಷ್ಟವಾಗಿಲ್ಲ. ಇದರ ಅರ್ಥವನ್ನೇ ಕೊಡುವ ಅವಿದ್ಯೆ ಎಂಬ ಮತ್ತೊಂದು ಪದದ ಪ್ರಯೋಗವೂ ಇದೆ. ನಾಮರೂಪ ಜಗತ್ತಿನ ಸೃಷ್ಟಿಕ್ರಮವನ್ನು ಉಪನಿಷತ್ತುಗಳು ಹೇಳುವಾಗ ಚೇತನ, ಅಚೇತನ ಎಂಬ ಭೇದವನ್ನು ಹೇಳಿವೆ. ಅಚೇತನ ಜಗತ್ತು ಚೇತನ ಜೀವಗಳಿಗೆ ಸಾಧನಸಾಮಗ್ರಿ ಮಾತ್ರ. ಅದು ಪಂಚಭೂತಗಳಿಂದ ಕೂಡಿದೆ. ಪೃಥ್ವಿ, ಅಪ್, ತೇಜಸ್, ವಾಯು, ಆಕಾಶ ಎಂಬುವೇ ಇವು. ಛಾಂದೋಗ್ಯೋಪನಿಷತ್ತಿನಲ್ಲಿ ಅಗ್ನಿ, ಜಲ, ಪೃಥ್ವಿ ಎಂಬುವು ಬ್ರಹ್ಮನಿಂದ ಕ್ರಮವಾಗಿ ಸೃಷ್ಟಿಯಾದುವೆಂದು ಹೇಳಲಾಗಿದೆ. ತೇಜಸ್ಸು, ಜಲ, ಅನ್ನಗಳೇ ಇತರ ಸಕಲ ಭೂತಜಾತಗಳಿಗೆ ಮೂಲಕಾರಣ. ಈ ಮೂರನ್ನು ಸೃಷ್ಟಿಸಿದ ಮೇಲೆ ಇದನ್ನು ಒಂದುಗೂಡಿಸಿ ಅವುಗಳೊಂದಿಗೆ ಜೀವನಸಹಿತ ಪ್ರವೇಶಿಸಿ ನಾಮರೂಪಾತ್ಮಕವಾದ ಜಗತ್ತನ್ನು ಸೃಜಿಸಲು ಬ್ರಹ್ಮ ಸಂಕಲ್ಪಿಸಿತು. ಹೀಗೆ ಜಗತ್ತಿಗೆ ಬ್ರಹ್ಮವೇ ಉಪಾದಾನಕಾರಣ, ನಿಮಿತ್ತಕಾರಣ ಎರಡೂ ಆಗಿದೆ. ಐತರೇಯ, ತೈತ್ತಿರೀಯ ಉಪನಿಷತ್ತುಗಳಲ್ಲಿಯೂ ಪರಮಾತ್ಮಸಂಕಲ್ಪದಿಂದ ಸೃಷ್ಟಿ ಯೆಂದೂ ಅದರೊಳಗೆ ಬ್ರಹ್ಮನೇ ಅಂತಃಪ್ರವೇಶ ಮಾಡಿದನೆಂದೂ ಭಾವವಿದೆ. ಕಾರಣರೂಪಿ ಯಾದ ಬ್ರಹ್ಮನನ್ನು ತಿಳಿದವ ಅದರಿಂದಾದ ಪಂಚಭೌತಿಕ ಜಗತ್ತನ್ನೂ ಅರಿಯುತ್ತಾನೆ. ಬ್ರಹ್ಮಜ್ಞಾನವನ್ನು ಪಡೆಯುವ ಕ್ರಮವನ್ನು ಕುರಿತು ಪರಾವಿದ್ಯೆ, ಅಪರಾವಿದ್ಯೆಗಳ ಭೇದವನ್ನು ಹೇಳಿದೆ. ಬ್ರಹ್ಮನನ್ನು ತಿಳಿಯುವುದು ಪರಾವಿದ್ಯೆ. ನಾಮರೂಪವಾದ ಜಗತ್ತನ್ನು ತಿಳಿಯುವುದು ಅಪರಾವಿದ್ಯೆ. ಮಣ್ಣನ್ನು ತಿಳಿಯುವುದರಿಂದ ಮಣ್ಣಿನಿಂದಾದುವೆಲ್ಲವನ್ನೂ ತಿಳಿಯುವಂತೆ, ಬ್ರಹ್ಮನನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ, ಇದಕ್ಕಿಂತ ಹೆಚ್ಚಿನ ವಿದ್ಯೆ ಯಾವುದೂ ಇಲ್ಲ. ಹೀಗೆಂದು ಮುಂಡಕೋಪನಿಷತ್ ಹೇಳುತ್ತದೆ. ಆದರೆ ಈಶೋಪನಿಷತ್ ಬ್ರಹ್ಮನನ್ನು ಅರಿಯಲು ಸಾಧ್ಯವಿಲ್ಲವೆಂದು ಬ್ರಹ್ಮಸ್ವರೂಪವನ್ನು ಹೇಳುವಾಗ ಸೂಚಿಸುತ್ತದೆ. ‘ಚಲಿಸುತ್ತದೆ, ಚಲಿಸುವುದಿಲ್ಲ, ದೂರದಲ್ಲಿದೆ, ಸಮೀಪದಲ್ಲಿದೆ, ಒಳಗೂ ಇದೆ, ಹೊರಗೂ ಇದೆ.’ ಹೀಗೆಯೇ ಬೃಹದಾರಣ್ಯಕದಲ್ಲಿ ಅಕ್ಷರರೂಪಿಯಾದ ವಿಶ್ವಾತ್ಮನನ್ನು ಕುರಿತು `ಸ್ಥೂಲನಲ್ಲ, ಅಣುವಲ್ಲ, ಹ್ರಸ್ವನಲ್ಲ, ದೀರ್ಘನಲ್ಲ, ಅಗ್ನಿಯಂತೆ ಕೆಂಪಾಗಿಲ್ಲ, ಜಲದಂತೆ ಹರಿಯುವುದಿಲ್ಲ. ನೆರಳಲ್ಲ, ಕತ್ತಲೆಯಲ್ಲ, ವಾಯುವಾಗಲೀ ಆಕಾಶವಾಗಲೀ ಅಲ್ಲ, ಸಂಸರ್ಗವುಳ್ಳದ್ದಲ್ಲ, ರಸವಲ್ಲ, ಗಂಧವಲ್ಲ. ಅದಕ್ಕೆ ಕಣ್ಣುಗಳಿಲ್ಲ, ಅದು ಅಳತೆಗೊಳಗಾದುದಲ್ಲ, ಒಳಗಿಲ್ಲ, ಹೊರಗಿಲ್ಲ’ ಎಂಬ ವಿವರಣೆ ಇದೆ. ಕೊನೆಯಲ್ಲಿ ಅರಿಯಲ್ಪಡುವವನೂ ನೋಡುವವನೂ ಮನನಮಾಡು ವವನೂ ಅರಿಯುವವನೂ ಅದಲ್ಲದೆ ಬೇರೆಯಲ್ಲ. ಈ ಅಕ್ಷರನಲ್ಲಿ ಎಲ್ಲವೂ ಓತಪ್ರೋತವಾಗಿದೆ. ಯಾವನು ಈ ಅಕ್ಷರನನ್ನು ತಿಳಿದು, ಈ ಲೋಕವನ್ನೇ ಬಿಡುವನೋ ಅವನು ಬ್ರಹ್ಮಜ್ಞನೆನಿಸುವನು ಎಂದು ಹೇಳಿದ್ದರೂ ವಾಕ್ಕಿಗೂ ಮನಸ್ಸಿಗೂ ದೂರನಾಗಿರುವನೆಂಬ ಸೂಚನೆ ಇದೆ. ಇದು ವಾಚಕ್ನವಿ ಗಾರ್ಗಿಗೆ ಯಾಜ್ಞವಲ್ಕ್ಯ ಜನಕನ ಸಭೆಯಲ್ಲಿ ಮಾಡಿದ ಉಪದೇಶ. ಧನದಲ್ಲಿ ನಿರಾಸಕ್ತಳಾಗಿ, ಅಮೃತತ್ವವನ್ನು ಪಡೆಯುವ ಅಭಿಲಾಷೆಯಿಂದ ತನ್ನ ಪತ್ನಿ ಮೈತ್ರೇಯಿ ಬ್ರಹ್ಮೋಪದೇಶ ಮಾಡಬೇಕೆಂದು ಬೇಡಿದಾಗಲೂ ಯಾಜ್ಞವಲ್ಕ್ಯ ಸರ್ವಾಂತರ್ಯಾಮಿಯಾದ ಆತ್ಮನನ್ನು (ಬ್ರಹ್ಮ) ತಿಳಿಯುವುದರಿಂದ ಮಾತ್ರವೇ ಅಮೃತತ್ವವನ್ನು ಪಡೆಯಬಹುದೆಂದೂ ಅವನೊಬ್ಬನನ್ನು ತಿಳಿದರೆ ಸರ್ವವನ್ನೂ ತಿಳಿದಂತಾಗುವುದೆಂದೂ ಹೇಳುತ್ತಾನೆ. ಆದರೆ ಬ್ರಹ್ಮತತ್ತ್ವವನ್ನು ತಿಳಿಯುವುದಾಗುವುದಿಲ್ಲ. ಬ್ರಹ್ಮನ ಹೊರತು ಮತ್ತಾವುದೂ ಇಲ್ಲ ಎಂದು ತಿಳಿಯಬೇಕಾದರೆ ಬ್ರಹ್ಮತ್ವವನ್ನು ಪಡೆಯುವುದರಿಂದ ಮಾತ್ರ ಸಾಧ್ಯ ಎಂದೂ ಅಹಂ ಬ್ರಹ್ಮಾಸ್ಮಿ, ತತ್ತ್ವಮಸಿ ಎಂಬ ಜ್ಞಾನವುಂಟಾಗಬೇಕೆಂದೂ ಇದೇ ಉಪನಿಷತ್ತಿನ ಸಾರವೆಂದೂ ಶಂಕರಾಚಾರ್ಯರು ಪ್ರತಿಪಾದಿಸುತ್ತಾರೆ. ಅವರ ವೇದಾಂತಸೂತ್ರಭಾಷ್ಯದಲ್ಲಿ ಬಾಷ್ಕಲಿ ಎಂಬ ಶಿಷ್ಯ ಬಾಧ್ವ ಎಂಬ ಗುರುವಿನಲ್ಲಿ ಬ್ರಹ್ಮಜ್ಞಾನವನ್ನು ಉಪದೇಶಿಸಬೇಕೆಂದು ಕೋರಿದ ಸಂದರ್ಭದಲ್ಲಿ ಮೂರನೆಯ ಸಲ ಕೇಳಿದಾಗಲೂ ಮೌನವಾಗಿದ್ದ ಗುರು ‘ಉಪಶಾಂತೋಯಂ ಆತ್ಮಾ’ ಎಂದು ಕೊನೆಯಲ್ಲಿ ಉಪದೇಶಿಸಿದುದನ್ನು ಉದಾಹರಿಸಿದ್ದಾರೆ. ಬ್ರಹ್ಮನನ್ನು ವರ್ಣಿಸಲು ಸಾಧ್ಯವಿಲ್ಲ, ಬ್ರಹ್ಮನನ್ನು ಅರಿತವ ಬ್ರಹ್ಮನಾಗುತ್ತಾನೆ-ಎಂಬುದೇ ಸಾರಾಂಶ. ಬೃಹದಾರಣ್ಯಕ ‘ನೇತಿ, ನೇತಿ’ ಎಂದು ಬ್ರಹ್ಮಸ್ವರೂಪವನ್ನು ತಿಳಿಸಲೆತ್ನಿಸಿದೆ. ಜ್ಞಾನಮಾರ್ಗವನ್ನಷ್ಟೇ ಅಲ್ಲದೆ, ಉಪನಿಷತ್ತುಗಳು ಭಕ್ತಿ ಮತ್ತು ಕರ್ಮಮಾರ್ಗಗಳನ್ನೂ ಅನುಮೋದಿಸಿವೆ. ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳಲ್ಲಿ ನಾಲ್ಕನೆಯದರಲ್ಲಿ ಯೋಗಶಕ್ತಿಯಿಂದ ಬ್ರಹ್ಮಜ್ಞಾನ ಉಂಟಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಆದರೂ ಈ ಜ್ಞಾನಮಾರ್ಗದಲ್ಲಿ ಕರ್ಮಕ್ಕೂ ಭಕ್ತಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ತೈತ್ತಿರೀಯೋಪನಿಷತ್ತಿನಲ್ಲಿ ಸತ್ಯನಿಷ್ಠೆ, ತಪಸ್ಸು, ವೇದಾಧ್ಯಯನಗಳಿಂದ ಅಮೃತತ್ವವುಂಟಾಗುತ್ತದೆ ಎಂದು ಹೇಳಲಾಗಿದೆ. ಅಹಂಕಾರನಿವೃತ್ತಿಯಾದಾಗಲೇ ಬ್ರಹ್ಮಜ್ಞಾನ ಪ್ರಾಪ್ತಿ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಎಂಬ ಮೂರು ಆಶ್ರಮಗಳಲ್ಲಿದ್ದು ಮಾನವ ಸರ್ವಸಂಗ ಪರಿತ್ಯಾಗ ಭಾವನೆಯಿಂದ ವೈರಾಗ್ಯವನ್ನು ಅಭ್ಯಾಸ ಮಾಡಿದರೆ ಸಂನ್ಯಾಸಾಶ್ರಮ, ಅದರೊಂದಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗುತ್ತವೆ ಎಂದು ತಿಳಿಸಲಾಗಿದೆ. ಹೀಗೆ ಮೋಕ್ಷಕ್ಕೆ ಅಂದರೆ ಬ್ರಹ್ಮಸಾಕ್ಷಾತ್ಕಾರಕ್ಕೆ ಪೂರ್ವಭಾವಿಯಾಗಿ ಸಾಧನೆಯೂ ಅಗತ್ಯ. ಬೃಹದಾರಣ್ಯಕದಲ್ಲಿ ಪ್ರಜಾಪತಿಯ ಮಕ್ಕಳನ್ನು ದೇವ, ಮನುಷ್ಯ, ಅಸುರ ಎಂದು ವರ್ಗೀಕರಿಸಿ ಅವರಿಗೆ ಪ್ರಜಾಪತಿ ಕರ್ತವ್ಯವನ್ನು ವಿಧಿಸುವಾಗ ಅಸುರರಿಗೆ ದಯಧ್ವಂ ಎಂದೂ ಮನುಷ್ಯರಿಗೆ ದತ್ತ ಎಂದೂ ದೇವತೆಗಳಿಗೆ ದಾಮ್ಯತ ಎಂದೂ ವಿಧಿಸಿರುವ ಸಂಗತಿ ಇದೆ. ಅಂದರೆ ಮಾನವರು ಸಮಾಜದಲ್ಲಿ ಪರಹಿತವನ್ನು ಆಚರಿಸತಕ್ಕದ್ದು, ಲೋಕವನ್ನು ತ್ಯಜಿಸಿ ಒಂಟಿಯಾಗಿದ್ದರೆ ಮಾತ್ರ ಮೋಕ್ಷಪ್ರಾಪ್ತಿಯಲ್ಲ ಎಂಬುದೇ ಸಾರಾಂಶ. ವೈರಾಗ್ಯ ಮಾನವನನ್ನು ಜ್ಞಾನಕ್ಕೆ ಒಯ್ಯುತ್ತದೆ. ಜ್ಞಾನಮಾರ್ಗದಲ್ಲಿ ಶ್ರವಣ, ಮನನ, ನಿಧಿಧ್ಯಾಸನ ಎಂಬ ಮೂರು ವಿಧವಾದ ಸಾಧನೆ ಇದೆ. ಮೊದಲನೆಯದಾಗಿ ಉಪನಿಷತ್ತುಗಳನ್ನು ಸರಿಯಾದ ಗುರುವಿನಲ್ಲಿ ಅಧ್ಯಯನ ಮಾಡುವುದು ಶ್ರವಣ. ಬ್ರಹ್ಮಜ್ಞಾನಿಯಾದ ಗುರುವಿನ ಸಂಗದಿಂದಲೇ ಜ್ಞಾನ ಪ್ರಾಪ್ತಿಯಾಗಬೇಕಾದರೆ. ಶ್ರವಣ ಮಾತ್ರ ಸಾಲದು. ಪದೇ ಪದೇ ಕೇಳಿದುದನ್ನು ಮನನ ಮಾಡಿ ಮಂದಟ್ಟು ಮಾಡಿಕೊಳ್ಳಬೇಕು. ಅನಂತರ ನಿಧಿಧ್ಯಾಸನದಿಂದ ಜಗತ್ತಿನ ಏಕೈಕ ಸತ್ಯವನ್ನು ಕಂಡುಕೊಳ್ಳಬೇಕು. ನಿಧಿಧ್ಯಾಸನವೆಂಬ ಸಾಧನೆಯಲ್ಲಿ ಉಪಾಸನೆ ಗಳಿವೆ. ಈ ಉಪಾಸನೆಗಳು ಬ್ರಾಹ್ಮಣಗಳಲ್ಲಿ ಹೇಳಿರುವ ಯಜ್ಞಯಾಗಾದಿಗಳಂತೆ ಪ್ರಾಧಾನ್ಯವನ್ನು ಪಡೆದಿವೆ. ಬ್ರಹ್ಮಜ್ಞಾನಿಯಾಗಲು ಸಾಮಾನ್ಯ ಮನುಷ್ಯನಿಗೆ ಸಾಧ್ಯವಿಲ್ಲವೆಂತಲೂ ಅಂಥವನು ಅತ್ಯಂತ ವಿರಳನೆಂದೂ ಕಠೋಪನಿಷತ್ತಿನಲ್ಲಿ ಹೇಳಲಾಗಿದೆ. ಸರ್ವಶಕ್ತನಾದ ಪರಬ್ರಹ್ಮ ನಿರ್ಗುಣನಂತೆ ನಿರೂಪಿತನಾಗಿದ್ದರೂ ಅವನು ದಯಾಮಯ ನೆಂದೂ ಸಂಸಾರ (ಜನ್ಮ, ಮೃತ್ಯು) ಬಂಧನದಿಂದ ನಮ್ಮನ್ನು ಬಿಡುಗಡೆ ಮಾಡುವವನೆಂದೂ ತಿಳಿಸಿ 32 ಉಪಾಸನೆಗಳನ್ನು ಹೇಳಿದೆ. ಅದರಲ್ಲಿ ಶರಣಾಗತಿ ಎಂಬುದನ್ನು ಸೇರಿಸಲಾಗಿದೆ. ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ-ಎಂಬುದನ್ನು ಶ್ವೇತಾಶ್ವತರೋಪನಿಷತ್ತಿನಲ್ಲಿ ಹೇಳಿದೆ. ಆದ್ದರಿಂದ ದಯಾಮಯನಾದ ಭಗವಂತನನ್ನು ಭಜಿಸುವ ಭಕ್ತಿಗೂ ಉಪನಿಷತ್ತುಗಳಲ್ಲಿ ಪ್ರಶಂಸೆ ಇದೆ. ಆತ್ಮ ಮತ್ತು ಜೀವಾತ್ಮ: ಉಪನಿಷತ್ತುಗಳು ಮೊದಮೊದಲು ಆತ್ಮನಿಗೂ ಬ್ರಹ್ಮನಿಗೂ ಭೇದವನ್ನು ಹೇಳುವಂತೆ ತೋರುತ್ತವೆ. ಆತ್ಮ ಎಂದರೆ ಚೇತನದಲ್ಲಿರುವ ಪರತತ್ತ್ವ, ಬ್ರಹ್ಮ ಎಂದರೆ ಜಗತ್ತಿನಲ್ಲಿರುವ ಪರತತ್ತ್ವ ಎಂಬ ಭಾವನೆ ಇದೆ. ಅವಿನಾಶಿಯಾದ ಚೇತನ ಅಥವಾ ಪ್ರಾಣವೇ ಆತ್ಮ. ಮಾನವನಲ್ಲಿ ಇರುವ ಅಂತಸ್ಸತ್ತ್ವ ಯಾವುದು ? ದೇಹ ನಾಶವಾದಾಗ ಅವನು ಏನಾಗುತ್ತಾನೆ? ಎಂಬ ಪ್ರಶ್ನೆಗಳನ್ನು ಉಪನಿಷತ್ತುಗಳು ಕೇಳಿವೆ. ಆತ್ಮ ಎಂದರೆ ಮಾನವನ ಅಂತಸ್ಸತ್ತ್ವ: ನಾಶವಾಗದೆ ಉಳಿಯುವ ಸತ್ಯ. ಅದರಂತೆ ಜಗತ್ತಿಗೆ ಅಂತಸ್ಸತ್ತ್ವ ಬ್ರಹ್ಮ. ಈ ಎರಡು ಅಂತಸ್ಸತ್ತ್ವಗಳೂ ಒಂದೇ ಎಂಬ ತತ್ತ್ವ ಕ್ರಮೇಣ ಬೆಳೆಯಿತು. ಆತ್ಮ ಮತ್ತು ಬ್ರಹ್ಮ ಶಬ್ದಗಳನ್ನು ಒಂದೇ ಅರ್ಥದಲ್ಲಿ ಪ್ರಯೋಗಿಸಲಾಗಿದೆ. ತನ್ನಲ್ಲಿರುವ ಸತ್ಯ ಯಾವುದು ? ಜಗತ್ತಿನಲ್ಲಿ ಯಾವ ಸತ್ಯವಿದೆ ? ಎಂದು ಮಾನವ ಒಳಗೂ ಹೊರಗೂ ಶೋಧನೆ ಮಾಡಲು ಯತ್ನಿಸಿ ಕೊನೆಗೆ ಏಕೈಕ ಸತ್ಯವೇ ತನಗೂ ಜಗತ್ತಿಗೂ ಕಾರಣವಾಗಿದೆ ಎಂದು ತತ್ತ್ವವನ್ನು ಕಂಡುಕೊಂಡನೆಂದು ಉಪನಿಷತ್ತುಗಳು ಹೇಳಿವೆ. ಒಳಗೂ ಹೊರಗೂ ಬ್ರಹ್ಮವೊಂದೇ ಇರುವುದು. ಉಳಿದುದೆಲ್ಲ ಅಸತ್ಯ, ಅನಿತ್ಯ-ಎಂಬುದೇ ಸಾರಾಂಶ. ದೇಹಕ್ಕೂ ಆತ್ಮಕ್ಕೂ ಯಾವ ಸಂಬಂಧವಿದೆಯೋ ಅದೇ ಜಗತ್ತಿಗೂ ಬ್ರಹ್ಮನಿಗೂ ಇರುವ ಸಂಬಂಧ ವೆಂದೂ ತಿಳಿಸಲಾಗಿದೆ. ಆತ್ಮನಿಗೂ ಬ್ರಹ್ಮನಿಗೂ ಸಮನ್ವಯ ಮಾಡಿ `ಸತ್ಯಂ ಜ್ಞಾನಂ ಅನಂತಂ’ ಆಗಿರುವ ಪರವನ್ನು ನಿರ್ದೇಶಿಸಲಾಗಿದೆ. ಜೀವಾತ್ಮನ ಸ್ವರೂಪವನ್ನು ಹೇಳುವಾಗ ಕಠೋಪನಿಷತ್ತಿನಲ್ಲಿ ಶರೀರವೆಂಬ ವೃಕ್ಷದಲ್ಲಿ ಜೀವ ಈಶ್ವರನೊಡನೆ ವಾಸಿಸುತ್ತಾನೆಂದೂ ಈಶ್ವರನನ್ನು ಕಾಣುವವರೆಗೂ ಮೋಹದಿಂದ ದೇಹವೇ ತಾನೆಂದು ಭ್ರಮಿಸಿ ತನ್ನ ಅಸಹಾಯಕತೆಗೂ ದುಃಖಸ್ಥಿತಿಗೂ ಶೋಕಿಸುತ್ತಾನೆಂದೂ ಆದರೆ ನಿತ್ಯನೂ ಜನನ ಮರಣ ರಹಿತನೂ ಆದ ಆತ್ಮನ ಸ್ವರೂಪವನ್ನು ಅರಿತಾಗ ಅವನ ಶೋಕಗಳು ಕಳೆದುಹೋಗುವುವೆಂದೂ ಹೇಳಿದೆ. ಜೀವಾತ್ಮನ ಸ್ವರೂಪವನ್ನು ಹೇಳುವಾಗ ಪ್ರಜಾಪತಿ ಛಾಂದೋಗ್ಯೋಪನಿಷತ್ತಿನಲ್ಲಿ ಉಪದೇಶಿಸಿದ್ದು ಹೀಗಿದೆ: ಇದನ್ನು ನೋಡುವೆನು, ತಿಳಿಯುವೆನು ಎಂದು ಯಾರು ತಿಳಿಯುವನೋ ಅವನೇ ಆತ್ಮ. ಅಮೃತಸ್ವರೂಪಿಯೂ ಅಶರೀರಿಯೂ ಆದ ಆತ್ಮನಿಗೆ ಅವನ ಕರ್ಮಾನುಗುಣವಾಗಿ ಈ ದೇಹ ವಾಸಸ್ಥಾನವಾಗುವುದು. ದೇಹಸಂಬಂಧದಿಂದ ಪ್ರಿಯ ಅಪ್ರಿಯಗಳಿಂದ ಆವೃತವಾಗುವ ಆತ್ಮನಿಗೆ ದೇಹವಿರುವವರೆಗೂ ಸುಖದುಃಖಗಳು ತಪ್ಪುವುದಿಲ್ಲ. ಜಗತ್ತಿನ ಚೇತನಾಚೇತನ ವಸ್ತುಗಳಲ್ಲಿ ಸೂತ್ರದಂತೆ ಒಂದಾಗಿರುವ ಬ್ರಹ್ಮವಸ್ತು ಅಸಂಖ್ಯಾತ ಜೀವರನ್ನು ಸೃಷ್ಟಿಸಿ ಜೀವಾತ್ಮನೂ ಆಗಿದೆ. ಇವರನ್ನು ಸೃಷ್ಟಿಸುವಾಗ ಅವರವರ ಕರ್ಮಾನುಸಾರವಾದ ಜನ್ಮಪ್ರಾಪ್ತಿಯಾಗುತ್ತದೆ. ಅನಾದಿಯಾದ ಅವಿದ್ಯೆಯೇ ಅವರ ಪುಣ್ಯಪಾಪರೂಪವಾದ ಕರ್ಮಕ್ಕೆ ಕಾರಣ. ಶರೀರದಲ್ಲಿ ವಾಸಿಸುವುದರಿಂದ ಜೀವಾತ್ಮನಿಗೆ ಪುರುಷ (ಪುರೀಶಯಃ) ಎಂದು ನಿರ್ದೇಶ. ಪಂಚಭೂತಗಳಿಂದ ಉತ್ಪನ್ನವಾಗಿರುವ ಶರೀರೇಂದ್ರಿಯಗಳಿಗೆ ಸಂಬಂಧಿಸಿರುವ ಸೋಪಾಧಿಕ ಬ್ರಹ್ಮನಿಗೆ ಮೂರ್ತ, ಮತರ್ಯ್‌, ಪರಿಚ್ಛಿನ್ನ, ಸರ್ತ ಎಂಬ ರೂಪವುಂಟು. ಇದಕ್ಕೆ ವಿರೋಧವಾದ ಅಜವೂ ಅಜರವೂ ಅಮೃತವೂ ಅಭಯವೂ ಆಗಿ ಅದ್ವೈತವಾಗಿರುವ ಬ್ರಹ್ಮನನ್ನು ನೇತಿ ನೇತಿ ಎಂದು ನಿರ್ದೇಶಿಸಲಾಗಿದೆ. ಆದರೆ ಶರೀರಗಳನ್ನು ಪ್ರವೇಶಿಸಿದ ಪರಮಾತ್ಮ ಜೀವಾತ್ಮನಂತೆ ಕಾಣುತ್ತಾನೆಯೇ ಹೊರತು ಬ್ರಹ್ಮ ಜೀವಾತ್ಮನಿಂದ ಭಿನ್ನವಾಗಿಲ್ಲ. ಜೀವಾತ್ಮ ಸತ್ಯ, ಬ್ರಹ್ಮ ಸತ್ಯದ ಸತ್ಯ. ಪ್ರಾಣ, ಇಂದ್ರಿಯ, ಮನಸ್ಸು ಜೀವಾತ್ಮನಿಗೋಸ್ಕರವಾಗಿಯೇ ಜೀವನಿಗೆ ಅಧೀನವಾಗಿವೆ. ಸುಷುಪ್ತಿಯಲ್ಲಿ ಆತ್ಮ ಬ್ರಾಹ್ಮೀಸ್ಥಿತಿಯಲ್ಲಿ, ತನ್ನ ಪರಮಪದದಲ್ಲಿ ಪರಮ ಸಂಪತ್ತಿನಿಂದ ಕೂಡಿ ಪರಮಾನಂದದಿಂದಿರುತ್ತಾನೆ. ಇದೇ ಅವನ ಸ್ವಾಭಾವಿಕ ಸ್ಥಿತಿ, ಇತರ ಸಂಪತ್ತುಗಳೆಲ್ಲ ಕೃತಕ. ಜಾಗ್ರದವಸ್ಥೆಯಲ್ಲಿ ಅಹಂಕಾರದಿಂದ ಆವೃತನಾಗುತ್ತಾನೆ. ಬ್ರಹ್ಮನಿಂದ ತಾನು ಭಿನ್ನವೆಂದು ಭ್ರಮಿಸುತ್ತಾನೆ. ಸರ್ವವೂ ಆತ್ಮನೆಂದು (ಬ್ರಹ್ಮನೆಂದು) ಅರಿಯದೆ ಎಲ್ಲವನ್ನೂ ಆತ್ಮನಿಗಿಂತ ಭಿನ್ನವೆಂದು ಅರಿಯುವವನನ್ನು ಎಲ್ಲವೂ ನಿರಾಕರಿಸುವುವು. ಅಸಂಗನೂ ನಿರಾಸಕ್ತನೂ ಬಂಧರಹಿತನೂ ಶೋಕರಹಿತನೂ ಆದ ಆತ್ಮನಿಗಾಗಿಯೇ ಅಂದರೆ ಆತ್ಮನ ಪ್ರಯೋಜನಕ್ಕಾಗಿಯೇ ಎಲ್ಲವೂ ಪ್ರಿಯವಾಗಿರುತ್ತದೆ. ಎಲ್ಲದರ ಪ್ರಯೋಜನ ಕ್ಕಾಗಿ ಎಲ್ಲವೂ ಪ್ರಿಯವಾಗಿರುವುದಿಲ್ಲ. ಆದ್ದರಿಂದ ಆತ್ಮನನ್ನೇ ಕೇಳಬೇಕು, ಮನನ ಮಾಡಬೇಕು. ನಿಧಿಧ್ಯಾಸನ ಮಾಡಿ ಆತ್ಮಸಾಕ್ಷಾತ್ಕಾರ-ಅಂದರೆ ಬ್ರಹ್ಮಸಾಕ್ಷಾತ್ಕಾರ ಹೊಂದಬೇಕು. ಕರ್ಮಸಿದ್ಧಾಂತವನ್ನೂ ಉಪನಿಷತ್ತುಗಳಲ್ಲಿ ನಿರೂಪಿಸಲಾಗಿದೆ. ಜನನಮರಣ ಪರಂಪರೆಗಳಿಗೆ ಜೀವಾತ್ಮನ ಕರ್ಮವೇ ಕಾರಣ. ಜೀವರುಗಳು ಅವರವರ ಪುಣ್ಯ ಪಾಪಾನುಸಾರವಾದ ಪುನರ್ಜನ್ಮಗಳನ್ನು ಪಡೆಯುತ್ತಾರೆ. ಭಗವಂತ ನಿಷ್ಪಕ್ಷಪಾತಿ. ಪುಣ್ಯಪಾಪ ಫಲಗಳ ನಿಯಾಮಕ. ಆದ್ದರಿಂದ ಕರ್ಮವನ್ನು ಮಾಡುವುದಕ್ಕೆ ಮಾತ್ರ ಜೀವ ಅಧಿಕಾರಿ, ಫಲವನ್ನು ಕೊಡುವವ ಪರಮಾತ್ಮ. ಆದ್ದರಿಂದ ಕರ್ಮವನ್ನು ನಿಷ್ಕಾಮಬುದ್ಧಿಯಿಂದ ಮಾಡಬೇಕು. ಆತ್ಮರು ಅನಾದಿಯಾದ ಅವಿದ್ಯೆಯ ಸಂಬಂಧದಿಂದ ತಮ್ಮ ನಿಜಸ್ವರೂಪವನ್ನರಿ ಯದೆ ಕರ್ಮಬಂಧನಕ್ಕೂ ಅದರಿಂದ ಸಂಸಾರಕ್ಕೂ ಸಿಕ್ಕಿ ನರಳುತ್ತಾರೆ-ಎಂದು ಉಪನಿಷತ್ ಗಳು ಹೇಳಿವೆ. ಐಹಿಕ ಸುಖಗಳು ಪ್ರೇಯವೇ ವಿನಾ ಶ್ರೇಯವಲ್ಲ. ನಿರತಿಶಯವಾದ ಆನಂದವನ್ನೂ ಪಡೆಯುವುದು ಬ್ರಹ್ಮಸಾಕ್ಷಾತ್ಕಾರದಿಂದ ಮಾತ್ರ. ಆನಂದಂ ಬ್ರಹ್ಮಣೋ ವಿದ್ವಾನ್ ನಬಿಭೇತಿ ಕದಾಚನೇತಿ. ಜನ್ಮಕಾರಣವನ್ನಷ್ಟೇ ಹೇಳದೆ ಜನಿಸುವ ಬಗೆಯನ್ನು ಬೃಹದಾರಣ್ಯಕ ಪಂಚಾಗ್ನಿ ವಿದ್ಯೆಯಲ್ಲಿ ಹೇಳಿದೆ. ಪಾಂಚಾಲ ರಾಜನಾದ ಜೈಬಲಿ ಆರುಣಿಗೂ ಅವನ ಮಗ ಶ್ವೇತಕೇತು ವಿಗೂ ಈ ವಿದ್ಯೆಯನ್ನು ಉಪದೇಶಿಸುತ್ತಾನೆ. ಮೃತರಾದ ಮೇಲೆ ಜೀವರು ಯಾವ ಯಾನದಲ್ಲಿ ಹೋಗಿ ಯಾವ ರೀತಿ ಪುನಃ ಭೂಲೋಕಕ್ಕೆ ಹಿಂತಿರುಗುತ್ತಾರೆ ಎಂದು ವಿವರಿಸಲಾಗಿದೆ. ಬ್ರಹ್ಮಜ್ಞಾನಿಗಳು ದೇವಯಾನದಲ್ಲಿ ಪ್ರಯಾಣ ಮಾಡಿ ಬ್ರಹ್ಮಲೋಕಕ್ಕೆ ಹೋಗಿ ಸೇರುವರು. ಪುನಃ ಸಂಸಾರಕ್ಕೆ ಹಿಂತಿರುಗುವುದಿಲ್ಲ. ಬ್ರಹ್ಮೋಪಾಸನೆಯನ್ನು ಮಾಡದೆ, ಯಜ್ಞದಾನಾದಿಗಳಲ್ಲಿ ನಿರತರಾಗಿ ಕರ್ಮ ಮಾಡುವವರು ಪಿತೃಯಾನವೆಂಬ ಧೂಮಮಾರ್ಗದಲ್ಲಿ ಚಲಿಸಿ ಕರ್ಮಫಲಕ್ಷಯವಾದ ಮೇಲೆ ಭೂಮಿಗೆ ಹಿಂತಿರುಗುವರು. ಇದೇ ಪುನರ್ಜನ್ಮ ಸಿದ್ಧಾಂತ. ದುಃಖಕರವಾದ ಸಂಸಾರಚಕ್ರದಿಂದ ಬಿಡುಗಡೆ ಹೊಂದುವುದೇ ಮೋಕ್ಷ. ಮೋಕ್ಷೋಪಾಯವಾಗುವುದು? ಎಂಬ ಪ್ರಶ್ನೆಯನ್ನು ಉಪನಿಷತ್ತುಗಳಲ್ಲಿ ಪುನಃ ಪುನಃ ವಿಮರ್ಶಿಸಲಾಗಿದೆ. ಪರಿಶುದ್ಧವಾದ ನಡತೆ, ಇಂದ್ರಿಯನಿಗ್ರಹ, ಆತ್ಮಶುದ್ಧಿ ಅತ್ಯಾವಶ್ಯಕವೆಂದೂ ಬ್ರಹ್ಮಸಾಕ್ಷಾತ್ಕಾರವೇ ಮಾನವನ ಗುರಿಯೆಂದೂ ಉಪನಿಷತ್ತುಗಳ ಉತ್ತರ. ನಿಜವಾದ ಯೋಗಿಯನ್ನು ಶಾಂತ, ದಾಂತ, ತಿತಿಕ್ಷು, ಉಪರತ, ಸಮಾಹಿತ ಎಂದು ವರ್ಣಿಸುತ್ತವೆ. ಮುಕ್ತರಾದವರು ನದಿಗಳು ಸಾಗರವನ್ನು ಸೇರುವಂತೆ, ನಾಮರೂಪಗಳನ್ನು ಕಳೆದುಕೊಂಡು ಸರ್ವಾತ್ಮಗಳನ್ನು ಸೇರುವರು. ಮೋಕ್ಷ ಆತ್ಮನಾಶವಲ್ಲ. ಅನಾದಿಯಾಗಿದ್ದ ಕರ್ಮಲೇಪ ಪುರ್ತಿಯಾಗಿ ತೊಳೆದು ಹೋಗಿ ಆತ್ಮ ಸ್ವರೂಪಾವಿರ್ಭಾವದಿಂದ, ಪೂರ್ಣವಿಕಾಸವಾದ ಜ್ಞಾನದಿಂದ ಪ್ರಜ್ವಲಿಸುತ್ತ ನಿರತಿಶಯವಾದ ಆನಂದವನ್ನು ಅನುಭವಿಸುವುದೇ ಮೋಕ್ಷ. ಕೆಲವು ಉಪನಿಷತ್ತುಗಳು ಮುಕ್ತರು ಪರಮಾತ್ಮನಿಗೆ ಸಮರಾಗುವರೆಂದೂ ಮತ್ತೆ ಕೆಲವು ಪರಮಾತ್ಮನೊಡನೆ ಸೇರಿಹೋಗುವವೆಂದೂ ಹೇಳಿವೆ. ಇನ್ನು ಕೆಲವು ಮಂತ್ರಗಳು ಜೀವ ಪರಮರಿಗೆ ಭೇದ ಮತ್ತು ಐಕ್ಯ ಎರಡನ್ನೂ ಹೇಳುವ ಘಟಕಶ್ರುತಿಗಳಾಗಿವೆ. ಅಭೇದ ಶ್ರುತಿಗಳು ಅದ್ವೈತ ದರ್ಶನಕ್ಕೂ ಭೇದಶ್ರುತಿಗಳು ಭೇದದರ್ಶನಕ್ಕೂ ಆಧಾರವಾಗಿವೆ. ಭೇದಾಭೇದ ದರ್ಶನಗಳು ಎರಡು ವಿಧವಾದ ಶ್ರುತಿಗಳನ್ನೂ ಸ್ವೀಕರಿಸುತ್ತವೆ. ಸಗುಣ ಬ್ರಹ್ಮನನ್ನು ಕೆಲವು ಉಪನಿಷತ್ತುಗಳೂ ನಿರ್ಗುಣ ಬ್ರಹ್ಮವನ್ನು ಮತ್ತೆ ಕೆಲವೂ ಪ್ರತಿಪಾದಿಸುತ್ತವೆ, ಸಗುಣ ಶ್ರುತಿಗಳಿಗೆ ಪ್ರಾಧಾನ್ಯ ಕೊಡುವ ದರ್ಶನಗಳು ನಿರ್ಗುಣ ಶ್ರುತಿಗಳಿಗೆ ಹೇಯಗುಣರಾಹಿತ್ಯವೆಂದು ವಿವರಣೆ ಕೊಡುತ್ತವೆ. ನಿರ್ಗುಣ ಶ್ರುತಿಗಳಿಗೇ ಪ್ರಾಧಾನ್ಯ ಕೊಡುವ ದರ್ಶನಗಳು ಸಗುಣ ಶ್ರುತಿಗಳೇ ಪರಮಾಧಾರವೆಂದೂ ಹೇಳುತ್ತವೆ. ಹೀಗೆ ಉಪನಿಷತ್ತುಗಳು ಸರ್ವ ದರ್ಶನಗಳಿಗೂ ಪರಮಾಧಾರವಾಗಿಯೂ ರಹಸ್ಯವಾದ ಜ್ಞಾನಪ್ರಚೋದಕವಾಗಿಯೂ ಮಾನವ ಕೋಟಿಯ ಉದ್ಧಾರದ ಅಮೃತಧಾರೆಯಾಗಿಯೂ ಇವೆ.

ಉಪನಿಷದ್‌ಗಳ ಪಟ್ಟಿ

ಪ್ರತಿಯೊಂದು ಉಪನಿಷತ್ತೂ ವೇದವೊಂದಕ್ಕೆ ಸಂಬಂಧಿಸಿದೆ. ಮುಖ್ಯ ಉಪನಿಷತ್ತುಗಳು ಈ ಕೆಳಗೆ ತಿಳಿಸಿದಂತೆ ವೇದಗಳಿಗೆ ಸಂಬಂಧಿಸಿವೆ:

ವೇದ - ಶಾಖೆ - ಉಪನಿಷತ್ತುಗಳ ಸಂಬಂಧ
ವೇದ ವಿಭಾಗ ಶಾಖೆ ಮುಖ್ಯ ಉಪನಿಷತ್
ಋಗ್ವೇದ ಒಂದೇ ವಿಭಾಗ ಶಕಲ ಐತರೇಯ
ಸಾಮವೇದ ಒಂದೇ ವಿಭಾಗ ಕೌತುಮ ಛಾಂದೋಗ್ಯ
ಜೈಮಿನೀಯ ಕೇನ
ರಾಣಾಯನೀಯ
ಯಜುರ್ವೇದ ಕೃಷ್ಣ ಯಜುರ್ವೇದ ಕಠ ಕಠ
ತೈತ್ತಿರೀಯ ತೈತ್ತಿರೀಯ ಮತ್ತು ಶ್ವೇತಾಶ್ವತರ
ಮೈತ್ರಾಯಣಿ ಮೈತ್ರಾಯಣೀಯ
ಹಿರಣ್ಯಕೇಶಿ (ಕಪಿಸ್ಥಲ)
ಕಾಠಕ
ಶುಕ್ಲ ಯಜುರ್ವೇದ ವಾಜಸನೇಯಿ ಮಧ್ಯಂದಿನ ಈಶ ಮತ್ತು ಬೃಹದಾರಣ್ಯಕ
ಕಾಣ್ವ ಶಾಖ
ಅಥರ್ವ ಎರಡು ವಿಭಾಗಗಳು ಶೌನಕ ಮಾಂಡೂಕ್ಯ ಮತ್ತು ಮುಂಡಕ
ಪೈಪ್ಪಲಾದ ಪ್ರಶ್ನ

ಉಪನಿಷತ್ತುಗಳ ಸಂಖ್ಯೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಮುಕ್ತಿಕೋಪನಿಷತ್ತಿನಲ್ಲಿ ಇವು ೧೦೮ ಎಂದು ತಿಳಿಸಲಾಗಿದೆ. ಬೇರೆ ಬೇರೆ ವೇದಶಾಖೆಗಳಿಗೆ ಸೇರಿದ ಅನೇಕ ಉಪನಿಷತ್ ಗಳಿದ್ದರೂ ಅತ್ಯಂತ ಪ್ರಾಚೀನವೂ ಮಹತ್ತ್ವಪೂರ್ಣವೂ ಆದವೆನ್ನಿಸಿಕೊಂಡಿರುವವು ೧೩. ಅವುಗಳಲ್ಲಿ ದಶೋಪನಿಷತ್ತುಗಳೆಂದು ಸುಪ್ರಸಿದ್ಧವಾಗಿರುವವು ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕಗಳು. ಉಳಿದವು ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ. ಈ ೧೩ ಉಪನಿಷತ್ತುಗಳಿಂದ ಭಾಷ್ಯಕಾರರು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ ಮತ್ತು ಇವನ್ನು ಕುರಿತು ಭಾಷ್ಯ ಬರೆದಿದ್ದಾರೆ.

"೧೦೮" ಉಪನಿಷತ್‌ಗಳು

  1. ಈಶಾವಾಸ್ಯೋಪನಿಷತ್ = ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್
  2. ಕೇನೋಪನಿಷತ್ = ಸಾಮವೇದಃ, ಮುಖ್ಯ ಉಪನಿಷತ್
  3. ಕಠೋಪನಿಷತ್ = ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್
  4. ಪ್ರಶ್ನೋಪನಿಷತ್ = ಅಥರ್ವವೇದಃ, ಮುಖ್ಯ ಉಪನಿಷತ್
  5. ಮುಂಡಕೋಪನಿಷತ್ = ಅಥರ್ವವೇದಃ, ಮುಖ್ಯ ಉಪನಿಷತ್
  6. ಮಾಂಡೂಕ್ಯೋಪನಿಷತ್ = ಅಥರ್ವವೇದಃ, ಮುಖ್ಯ ಉಪನಿಷತ್
  7. ತೈತ್ತಿರೀಯೋಪನಿಷತ್ = ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್
  8. ಐತರೇಯೋಪನಿಷತ್ = ಋಗ್ವೇದಃ, ಮುಖ್ಯ ಉಪನಿಷತ್
  9. ಛಾಂದೋಗ್ಯೋಪನಿಷತ್ = ಸಾಮವೇದಃ, ಮುಖ್ಯ ಉಪನಿಷತ್
  10. ಬೃಹದಾರಣ್ಯಕೋಪನಿಷತ್ = ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್
  11. ಬ್ರಹ್ಮ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
  12. ಕೈವಲ್ಯ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
  13. ಜಾಬಾಲ ಉಪನಿಷತ್ (ಯಜುರ್ವೇದ) = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
  14. ಶ್ವೇತಾಶ್ವತರೋಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
  15. ಹಂಸ ಉಪನಿಷತ್ = ಶುಕ್ಲಯಜುರ್ವೇದಃ, ಯೋಗ ಉಪನಿಷತ್
  16. ಆರುಣೇಯ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್
  17. ಗರ್ಭ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
  18. ನಾರಾಯಣ ಉಪನಿಷತ್ = ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್
  19. ಪರಮಹಂಸ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
  20. ಅಮೃತ ಬಿನ್ದೂಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
  21. ಅಮೃತ ನಾದೋಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
  22. ಅಥರ್ವ ಶಿರೋಪನಿಷತ್ = ಅಥರ್ವವೇದಃ, ಶೈವ ಉಪನಿಷತ್
  23. ಅಥರ್ವ ಶಿಖೋಪನಿಷತ್ =ಅಥರ್ವವೇದಃ, ಶೈವ ಉಪನಿಷತ್
  24. ಮೈತ್ರಾಯಣಿ ಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್
  25. ಕೌಷೀತಕಿ ಉಪನಿಷತ್ = ಋಗ್ವೇದಃ, ಸಾಮಾನ್ಯ ಉಪನಿಷತ್
  26. ಬೃಹಜ್ಜಾಬಾಲ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್
  27. ನೃಸಿಂಹತಾಪನೀ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
  28. ಕಾಲಾಗ್ನಿರುದ್ರ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
  29. ಮೈತ್ರೇಯಿ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್
  30. ಸುಬಾಲ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
  31. ಕ್ಷುರಿಕ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
  32. ಮಾನ್ತ್ರಿಕ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
  33. ಸರ್ವ ಸಾರೋಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
  34. ನಿರಾಲಮ್ಬ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
  35. ಶುಕ ರಹಸ್ಯ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
  36. ವಜ್ರಸೂಚಿ ಉಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್
  37. ತೇಜೋ ಬಿನ್ದು ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
  38. ನಾದ ಬಿನ್ದು ಉಪನಿಷತ್ = ಋಗ್ವೇದಃ, ಯೋಗ ಉಪನಿಷತ್
  39. ಧ್ಯಾನಬಿನ್ದು ಉ ಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
  40. ಬ್ರಹ್ಮವಿದ್ಯಾ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
  41. ಯೋಗತತ್ತ್ವ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
  42. ಆತ್ಮಬೋಧ ಉಪನಿಷತ್ = ಋಗ್ವೇದಃ, ಸಾಮಾನ್ಯ ಉಪನಿಷತ್
  43. ಪರಿವ್ರಾತ್ ಉಪನಿಷತ್ (ನಾರದಪರಿವ್ರಾಜಕ) = ಅಥರ್ವವೇದಃ, ಸಂನ್ಯಾಸ ಉಪನಿಷತ್
  44. ತ್ರಿಷಿಖಿ ಉಪನಿಷತ್ = ಶುಕ್ಲಯಜುರ್ವೇದಃ, ಯೋಗ ಉಪನಿಷತ್
  45. ಸೀತಾ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
  46. ಯೋಗಚೂಡಾಮಣಿ ಉಪನಿಷತ್ = ಸಾಮವೇದಃ, ಯೋಗ ಉಪನಿಷತ್
  47. ನಿರ್ವಾಣ ಉಪನಿಷತ್ = ಋಗ್ವೇದಃ, ಸಂನ್ಯಾಸ ಉಪನಿಷತ್
  48. ಮಣ್ಡಲಬ್ರಾಹ್ಮಣ ಉಪನಿಷತ್ = ಶುಕ್ಲಯಜುರ್ವೇದಃ, ಯೋಗ ಉಪನಿಷತ್
  49. ದಕ್ಷಿಣಾಮೂರ್ತಿ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
  50. ಶರಭ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್
  51. ಸ್ಕನ್ದ ಉಪನಿಷತ್ (ತ್ರಿಪಾಡ್ವಿಭೂಟಿ) = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
  52. ಮಹಾನಾರಾಯಣ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
  53. ಅದ್ವಯತಾರಕ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
  54. ರಾಮರಹಸ್ಯ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
  55. ರಾಮತಾಪಣಿ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
  56. ವಾಸುದೇವ ಉಪನಿಷತ್ = ಸಾಮವೇದಃ, ವೈಷ್ಣವ ಉಪನಿಷತ್
  57. ಮುದ್ಗಲ ಉಪನಿಷತ್ = ಋಗ್ವೇದಃ, ಸಾಮಾನ್ಯ ಉಪನಿಷತ್
  58. ಶಾಣ್ಡಿಲ್ಯ ಉಪನಿಷತ್ = ಅಥರ್ವವೇದಃ, ಯೋಗ ಉಪನಿಷತ್
  59. ಪೈಂಗಲ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
  60. ಭಿಕ್ಷುಕ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
  61. ಮಹತ್ ಉಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್
  62. ಶಾರೀರಕ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
  63. ಯೋಗಶಿಖಾ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
  64. ತುರೀಯಾತೀತ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
  65. ಸಂನ್ಯಾಸ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್
  66. ಪರಮಹಂಸ ಪರಿವ್ರಾಜಕ ಉಪನಿಷತ್ = ಅಥರ್ವವೇದಃ, ಸಂನ್ಯಾಸ ಉಪನಿಷತ್
  67. ಅಕ್ಷಮಾಲಿಕ ಉಪನಿಷತ್ = ಋಗ್ವೇದಃ, ಶೈವ ಉಪನಿಷತ್
  68. ಅವ್ಯಕ್ತ ಉಪನಿಷತ್ = ಸಾಮವೇದಃ, ವೈಷ್ಣವ ಉಪನಿಷತ್
  69. ಏಕಾಕ್ಷರ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
  70. ಅನ್ನಪೂರ್ಣ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
  71. ಸೂರ್ಯ ಉಪನಿಷತ್ = ಅಥರ್ವವೇದಃ, ಸಾಮಾನ್ಯ ಉಪನಿಷತ್
  72. ಅಕ್ಷಿ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
  73. ಅಧ್ಯಾತ್ಮಾ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
  74. ಕುಣ್ಡಿಕ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್
  75. ಸಾವಿತ್ರೀ ಉಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್
  76. ಆತ್ಮಾ ಉಪನಿಷತ್ = ಅಥರ್ವವೇದಃ, ಸಾಮಾನ್ಯ ಉಪನಿಷತ್
  77. ಪಾಶುಪತ ಉಪನಿಷತ್ = ಅಥರ್ವವೇದಃ, ಯೋಗ ಉಪನಿಷತ್
  78. ಪರಬ್ರಹ್ಮ ಉಪನಿಷತ್ = ಅಥರ್ವವೇದಃ, ಸಂನ್ಯಾಸ ಉಪನಿಷತ್
  79. ಅವಧೂತ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
  80. ತ್ರಿಪುರಾತಪನಿ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
  81. ದೇವಿ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
  82. ತ್ರಿಪುರ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್
  83. ಕಠರುದ್ರ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
  84. ಭಾವನ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್
  85. ರುದ್ರ ಹೃದಯ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
  86. ಯೋಗ ಕುಣ್ಡಲಿನಿ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್
  87. ಭಸ್ಮ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್
  88. ರುದ್ರಾಕ್ಷ ಉಪನಿಷತ್ = ಸಾಮವೇದಃ, ಶೈವ ಉಪನಿಷತ್
  89. ಗಣಪತಿ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್
  90. ದರ್ಶನ ಉಪನಿಷತ್ = ಸಾಮವೇದಃ, ಯೋಗ ಉಪನಿಷತ್
  91. ತಾರಸಾರ ಉಪನಿಷತ್ = ಶುಕ್ಲಯಜುರ್ವೇದಃ, ವೈಷ್ಣವ ಉಪನಿಷತ್
  92. ಮಹಾವಾಕ್ಯ ಉಪನಿಷತ್ = ಅಥರ್ವವೇದಃ, ಯೋಗ ಉಪನಿಷತ್
  93. ಪಞ್ಚ ಬ್ರಹ್ಮ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್
  94. ಪ್ರಾಣಾಗ್ನಿ ಹೋತ್ರ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
  95. ಗೋಪಾಲ ತಪಣಿ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
  96. ಕೃಷ್ಣ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
  97. ಯಾಜ್ಞವಲ್ಕ್ಯ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
  98. ವರಾಹ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
  99. ಶಾತ್ಯಾಯನಿ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
  100. ಹಯಗ್ರೀವ ಉಪನಿಷತ್ (೧೦೦) = ಅಥರ್ವವೇದಃ, ವೈಷ್ಣವ ಉಪನಿಷತ್
  101. ದತ್ತಾತ್ರೇಯ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
  102. ಗಾರುಡ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
  103. ಕಲಿ ಸಣ್ಟಾರಣ ಉಪನಿಷತ್ = ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್
  104. ಜಾಬಾಲ ಉಪನಿಷತ್ (ಸಾಮವೇದ) = ಸಾಮವೇದಃ, ಶೈವ ಉಪನಿಷತ್
  105. ಸೌಭಾಗ್ಯ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್
  106. ಸರಸ್ವತೀ ರಹಸ್ಯ ಉಪನಿಷತ್ = ಕೃಷ್ಣಯಜುರ್ವೇದಃ, ಶಾಕ್ತ ಉಪನಿಷತ್
  107. ಬಹ್ವೃಚ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್
  108. ಮುಕ್ತಿಕ ಉಪನಿಷತ್ (೧೦೮) = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

"ಪ್ರಧಾನ" ಉಪನಿಷತ್‌ಗಳು

ಶೃತಿ (ವೇದಗಳ ಸಮ) ಎಂದು ಬಹಳಷ್ಟು ಹಿಂದುಗಳು ಮಾನ್ಯಮಾಡಿರುವ ಮತ್ತು ಶಂಕರರು ಭಾಷ್ಯ ಬರೆದಿರುವ [೩] Archived 2007-02-03 ವೇಬ್ಯಾಕ್ ಮೆಷಿನ್ ನಲ್ಲಿ. "ಪ್ರಧಾನ" ಉಪನಿಷತ್‌ಗಳ ಒಳಗೊಂಡ ಪಟ್ಟಿ ಈ ಕೆಳಕಂಡಂತಿದೆ. ಪ್ರತಿಯೊಂದು ನಾಲ್ಕು ವೇದಗಳಿಗೆ ಸಂಬಂಧಿಸಿವೆ (ಋಗ್ವೇದ (ṚV), ಸಾಮವೇದ (SV), ಶುಕ್ಲ ಯಜುರ್ವೇದ (ŚYV), ಕೃಷ್ಣ ಯಜುರ್ವೇದ (KYV), ಅಥರ್ವವೇದ (AV));

  1. ಐತರೇಯೋಪನಿಷತ್
  2. ಬೃಹದಾರಣ್ಯಕ ಉಪನಿಷತ್
  3. ತೈತ್ತಿರೀಯೋಪನಿಷತ್
  4. ಛಾಂದೋಗ್ಯೋಪನಿಷತ್
  5. ಕೇನೋಪನಿಷತ್
  6. ಈಶಾವಾಸ್ಯೋಪನಿಷತ್
  7. ಶ್ವೇತಾಶ್ವತರೋಪನಿಷತ್
  8. ಕಠೋಪನಿಷತ್
  9. ಮುಂಡಕೋಪನಿಷತ್
  10. ಮಾಂಡೂಕ್ಯೋಪನಿಷತ್
  11. ಪ್ರಶ್ನೋಪನಿಷತ್

ಕೌಷಿಕಿ ಮತ್ತು ಮೈತ್ರಾಯಣಿ ಉಪನಿಷತ್‌ಗಳನ್ನು ಸೇರಿಸಲಾಗಿದೆ. ಇವೆಲ್ಲವೂ ಸಾಮಾನ್ಯವಾಗಿ ಕಾಲಗಣನಾ ಪದ್ಧತಿಗಿಂತಲೂ ಹಿಂದಿನವುಗಳು. ಭಾಷಾ ಶಾಸ್ತ್ರದ ಸಾಕ್ಷಿಗಳ ಆಧಾರದಲ್ಲಿ ಅವುಗಳಲ್ಲಿ ಬಹಳ ಹಿಂದಿನವು ಎಂದರೆ ಬೃಹದಾರಣ್ಯಕ ಉಪನಿಷತ್ಮತ್ತು ಛಾಂದೋಗ್ಯ ಉಪನಿಷತ್‌ಗಳು. ವೈದಿಕ ಸಂಸ್ಕೃತದ ಕಡೆಯ ಕಾಲಕ್ಕೆ ಸೇರಿದ ಜೈಮಿನೀಯ ಉಪನಿಷದ್‌ ಬ್ರಾಹ್ಮಣವನ್ನೂ ಇವುಗಳೊಡನೆ ಸೇರಿಸಬಹುದು. ಐತರೇಯ, ಕೌಷಿಟಕಿ ಮತ್ತು ತೈತ್ತಿರೀಯ ಉಪನಿಷತ್‍ಗಳು ಸರಿಸುಮಾರು ಒಂದೇ ಕಾಲಕ್ಕೆ ಸೇರಿದ್ದು ಉಳಿದವುಗಳು ವೈದಿಕ ಮತ್ತು ಶಾಸ್ತ್ರೀಯ ಸಂಸ್ಕೃತದ ಸಂಕ್ರಮಣ ಕಾಲದಲ್ಲಿ ರಚಿಸಿದವುಗಳಾಗಿವೆ. ಮುಕ್ತಿಕಾ ಉಪನಿಷತ್‌ನ ೧೦೮ ಉಪನಿಷತ್‌ಗಳ ಪೈಕಿ ಮೊದಲ ೧೦ ಮುಖ್ಯ ಅಥವ ಪ್ರಧಾನ ಉಪನಿಷದ್ಗಳೆಂದು ಪರಿಗಣಿಸಲ್ಪಟ್ಟಿವೆ. ೨೧ನ್ನು ಸಾಮಾನ್ಯ ವೇದಾಂತವೆಂದು, ೨೩ನ್ನು ಸನ್ಯಾಸ, ೯ನ್ನು ಶಾಕ್ತ, ೧೩ನ್ನು ವೈಷ್ಣವ, ೧೪ನ್ನು ಶೈವ ಮತ್ತು ೧೭ನ್ನು ಯೋಗವೆಂದೂ ಕರೆಯಲಾಗುತ್ತದೆ.

ಶಾಕ್ತ ಉಪನಿಷತ್‌ಗಳು

ನಂತರದ ಉಪನಿಷತ್‌ಗಳು ಆಗಾಗ ಹೆಚ್ಚು ಪಂಥಾಭಿಮಾನಿ (ಸಂಕುಚಿತ ಮನೋಭಾವ)ಗಳಾಗಿದ್ದು, ತಮ್ಮ ಪಂಥದ ಚಟುವಟಿಕಿಗಳಿವೆ, ತಮ್ಮ ಗ್ರಂಥಗಳಿಗೆ ಅಧಿಕೃತ ನಾಮಮಾತ್ರದ ’ಶೃತಿ ’ ಸ್ಥಾನವನ್ನು ಪಡೆಯುವ ತಂತ್ರಗಳಾಗಿವೆ." ಅಧಿಕೃತ ಶಾಕ್ತ ಉಪನಿಷತ್‌ಗಳು, ಅತಿಹೆಚ್ಚು ಭಾಗ, ತಮ್ಮ ಪಂಥೀಯ ದಾರಿಯಲ್ಲೇ ಸಾಗುತ್ತಾ, ಎರಡು ಮುಖ್ಯ ಗುಂಪಾದ ಶ್ರೀವಿದ್ಯಾ ಉಪಾಸನೆಯ (ತಾಂತ್ರಿಕ ರೂಪದ ಶಾಕ್ತಿ ಪಂಥ) ಸಿದ್ಧಾಂತಗಳು ಮತ್ತು ವಿವರಣಾತ್ಮಕ ವ್ಯತ್ಯಾಸಗಳನ್ನು ಪ್ರತಿಬಿಂಬಿಸುತ್ತವೆ. ಅದರ ಪರಿಣಾಮವಾಗಿ ಪಟ್ಟಿಯಲ್ಲಿ ಲಭ್ಯವಿರುವ "ಅಧಿಕೃತ" ಶಾಕ್ತ ಉಪನಿಷತ್‌ಗಳು ತಮ್ಮ ವಸ್ತು ವಿಷಯಗಳಲ್ಲಿ ವಿಭಿನ್ನವಾಗಿದ್ದು, ಅವುಗಳ ಸಂಕಲನಕಾರರ ಪೂರ್ವಗ್ರಹ ಪೀಡಿತ ಪಂಥಾಭಿಮಾನವನ್ನು ಬಿಂಬಿಸುತ್ತವೆ:

"ಶಾಕ್ತ ಉಪನಿಷತ್‌ಗಳನ್ನು ಪಟ್ಟಿಮಾಡುವ ಹಿಂದಿನ ಪ್ರಯತ್ನಗಳು ತಾಂತ್ರಿಕ ಪರಂಪರೆಯಲ್ಲಿ ಅವುಗಳ ಸ್ಥಾನವನ್ನು ಅರಿಯುವ ಅಥವಾ ವೈದಿಕ ಪಂಥಗಳಲ್ಲಿ ಅವುಗಳ ಸ್ಥಾನವನ್ನು ಅರಿವಿನ ಹತ್ತಿರಕ್ಕೂ ನಮ್ಮನ್ನು ಒಯ್ಯುವುದಿಲ್ಲ. [...] ತಾಂತ್ರಿಕರಿಗೆ ಪಣವಾಗಿ ಇರುವುದು ವಿವಾದವಿಲ್ಲದ ಶೃತಿಯ ಅಧಿಕೃತ ಮಾನ್ಯತೆಯಲ್ಲ, ಆದರೆ ಗ್ರಂಥಗಳ ಸರಿಯಾದ ವಿವರಣೆ ನೀಡುವುದಾಗಿದೆ .ತಾಂತ್ರಿಕೇತರ ಪಂಥದವರಿಗೆ, [ಇದು ಪಠ್ಯದ] ಆ ತಾಂತ್ರಿಕ ಗ್ರಂಥದ, ಉಪನಿಷತ್ ಗ್ರಂಥವೆಂಬ ಗುರುತು ಪ್ರಶ್ನಿಸುವ ಅದರ ವಸ್ತು ವಿಷಯಗಳು ಮುಖ್ಯವಾಗುತ್ತವೆ. ವಿಷಯದಲ್ಲಿ ಪಠ್ಯದ ವರ್ಗೀಕರಣವು ಶೃತಿ ಮತ್ತು ಅದರಿಂದ ಇದರ ಮೂಲಸ್ವರೂಪದ ಅಧಿಕಾರವು ವೇದಗಳದ್ದು."

ಮುಕ್ತಿಕಾ ಉಪನಿಷತ್ ಒಂಭತ್ತರಲ್ಲಿ ವರ್ಗೀಕರಣವಾದ ಶಾಕ್ತ ಉಪನಿಷತ್‌ಗಳು ಹೀಗಿವೆ.

  1. ಸೀತಾ (AV)
  2. ಅನ್ನಪೂರ್ಣ (AV)
  3. ದೇವಿ (AV)
  4. ತ್ರಿಪುರತಪನಿ (AV)
  5. ತ್ರಿಪುರ (RV)
  6. ಭಾವನ (AV)
  7. ಸೌಭಾಗ್ಯ (RV)
  8. ಸರಸ್ವತಿರಹಸ್ಯ (KYV)
  9. ಬಹ್ವೃಚ (RV)

ವಿಶಾಲವಾಗಿ ಬಳಸಲ್ಪಡುವ, ಪ್ರಖ್ಯಾತ ಶಾಕ್ತ ಉಪನಿಷತ್‌ಗಳು ಈ ಪಟ್ಟಿಯಲ್ಲಿ ಇಲ್ಲ, ಅವುಗಳಲ್ಲಿ Kaula Upaniṣad , Śrīvidyā Upaniṣad ಮತ್ತು Śrichakra Upaniṣad ಕೂಡಾ ಸೇರಿವೆ.

ಭಾರತದಿಂದ ಹೊರಗೆ ವಿಖ್ಯಾತಿ

ಚಕ್ರವರ್ತಿಯಾದ ಅಕ್ಬರ್ ನ ಉದಾರ ಧಾರ್ಮಿಕ ಸ್ವಭಾವದ ಪರಿಣಾಮವಾಗಿ ಸಂಸ್ಕೃತ ದಿಂದ ಮೊದಲು ಪರ್ಷಿಯನ್ ಭಾಷೆಗೆ ಉಪನಿಷತ್‌ಗಳು ಅನುವಾದದ ನಂತರ ಭಾರತದಿಂದ ಹೊರಗೆ ವೇದಗಳು ವಿಖ್ಯಾತವಾದವು. ಷಹಜಹಾನ ನು ಚಕ್ರವರ್ತಿಯಿಂದ ಪ್ರಭಾವಿತನಾಗಿದ್ದು ಅವನ ದೃಷ್ಠಿಕೋನವನ್ನು ಹಂಚಿಕೊಂಡಿದ್ದನು. ಷಹ ಜಹಾನನ ಹಿರಿಯ ಮಗ ದಾರಾ ಶಿಕೊಹ್, ಒಬ್ಬ ಉದಾರ ಮುಸ್ಲಿಮನಾಗಿದ್ದನು, ಎರಡು ಸಮುದ್ರಗಳ ಮಿಲನ ಎಂಬ ಅರ್ಥ ಬರುವ ಮಜ್ಮಾ-ಉಲ್-ಬಹ್ರೇನ್ ಪುಸ್ತಕವನ್ನು ಬರೆದಿದ್ದು ಇಸ್ಲಾಂ ಮತ್ತು ಹಿಂದೂ ಧರ್ಮಗಳ ನಡುವೆ ಸೌಹಾರ್ದತೆ ಬೆಳೆಸಲು ಪ್ರಯತ್ನಿಸಿದನು. ೧೬೪೦ರಲ್ಲಿ, ದಾರಾ ಶಿಕೊಹ್ ಕಾಶ್ಮೀರಕ್ಕೆ ತೆರಳಿದಾಗ ಕೆಲವು ಪಂಡಿತರು, ಉಪನಿಷತ್‌ಗಳ ಬಗ್ಗೆ ಅವನಿಗೆ ತಿಳಿಸಿದರು. ಅವನು, ಆಗ ಮೊಘಲರ ವಶದಲ್ಲಿದ್ದ ವಾರಣಾಸಿಯಿಂದ ಕೆಲವು ಪಂಡಿತರನ್ನು ದೆಹಲಿಗೆ, ಭಾಷಾಂತರಕ್ಕೆ ಸಹಾಯ ಮಾಡಲು ಕರೆಸಿಕೊಂಡನು. ೧೬೬೭ರಲ್ಲಿ ಭಾಷಾಂತರವು ಮುಗಿಯಿತು. ಸಿರ್-ಏ-ಅಕ್ಬರ್ (ಅತಿ ಗಹನವಾದ ರಹಸ್ಯ), ಎಂಬ ಹೆಸರಿನಿಂದ ಹೆಸರಾದ ಪುಸ್ತಕದ ಮುನ್ನುಡಿಯಲ್ಲಿ ಖುರಾನಿನ ಕಿತಾಬ್ ಅಲ್-ಮ್ಯಾಕ್ನೂನ್ ಅಥವಾ ಅಡಗಿದ ಪುಸ್ತಕವು ಉಪನಿಷತ್‌ಗಳನ್ನು ಬಿಟ್ಟು ಬೇರೆ ಅಲ್ಲ ಎಂದು ತಿಳಿಸಿದ್ದನು.

ಯೂರೋಪಿನವರ ಪಾಂಡಿತ್ಯ

೧೭೭೫ರಲ್ಲಿ, ಫ್ರೆಂಚ್ ವಿದ್ವಾಂಸ ಆಂಕ್ವೆಟಿಲ್ ಡೊಪೆರಾನ್‌ನು ಉಪನಿಷತ್‌ಗಳ ಬಗ್ಗೆ ಬಾಗಷಃ ಕೈಬರಹದ ಪುಸ್ತಕವನ್ನು ಎಮ್. ಜೆಂಟಿಲ್‌ನಿಂದ ಪಡೆದನು. ಈತ ಆಗ ಶುಲಾ ಉದ್ ದೌಲನ ದರಬಾರಿನಲ್ಲಿದ್ದನು ಡೂಪೆರಾನನು ಇನ್ನುಳಿದ ಕೈಬರಹದ ಪುಸ್ತಕವನ್ನು ಬೇಡಿ ಪಡೆದು, ಇವೆರಡನ್ನು ತಾಳೆ ನೋಡಿ ಸಂಕಲಿಸಿ ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗೆ ಅನುವಾದಿಸಿದನು. ಫ್ರೆಂಚ್ ಭಾಷೆಯ ಆವೃತ್ತಿ ಪ್ರಕಟಣೆಯಾಗಲೇ ಇಲ್ಲ, ಆದರೆ ಲ್ಯಾಟಿನ್ ಭಾಷಾಂತರವು ೧೮೦೧ ರಲ್ಲಿ ಪ್ರಕಟಣೆಯಾಯಿತು. ಇದಕ್ಕೆ ಲ್ಯಾಟಿನ್ ಶೀರ್ಷಿಕೆ Oupnek'hat ಆಗಿತ್ತು. ಜರ್ಮನ್ ತತ್ವಜ್ಞಾನಿ ಶೋಪೆನ್‌ಹಾವರ್ ಲ್ಯಾಟಿನ್ ಆವೃತ್ತಿಯನ್ನು ಓದಿ ಉದಾರವಾಗಿ "ಹೇಗೆ ಪ್ರತಿಯೊಂದು ಸಾಲು ಸಹ ದೃಢ, ಸ್ಪಷ್ಟ, ಮತ್ತು ಸಾಮರಸ್ಯ ಅರ್ಥಪೂರ್ಣತೆಯಿಂದ ತುಂಬಿದೆ! ಪ್ರತಿಯೊಂದು ಪುಟದಲ್ಲಿಯೂ ಗಹನ, ಮೂಲ, ಸರ್ವಶ್ರೇಷ್ಠ ಚಿಂತನೆಗಳನ್ನು ಕಾಣುತ್ತೇವೆ, ಉದಾತ್ತ ಮತ್ತು ಪವಿತ್ರ ಶ್ರದ್ಧೆ ಎಲ್ಲವನ್ನೂ ಆವರಿಸಿದೆ. … ಇದು ಪ್ರಪಂಚದಲ್ಲಿಯೇ ಸಾಧ್ಯವಾಗುವ ಅತ್ಯಂತ ಲಾಭಕರ, ಸರ್ವಶ್ರೇಷ್ಠವಾದ ಪುಸ್ತಕ ವಾಚನ; ಇದು ನನ್ನ ಜೀವನಕ್ಕೇ ಸಮಾಧಾನ ತಂದಿದೆ ಮತ್ತು ನನ್ನ ಸಾವಿಗೂ ಸಹ ಸಮಾಧಾನಕರವಾಗಿದೆ." ಎಂದು ಹೊಗಳಿದನು. ೧೮೧೯ ಅವನ ಮುಖ್ಯವಾದ ಪುಸ್ತಕ, ದಿ ವರ್ಲ್ಡ್ ಯಾಸ್ ವಿಲ್ ಅಂಡ್ ರೆಪ್ರೆಸೆಂಟೇಶನ್ , ಮತ್ತು (೧೮೫೧) ಪ್ರಕಟಣೆಯಾದ ಪರೆರ್ಗಾ ಅಂಡ್ ಪ್ಯಾಲಿಪೋಮಾ ಗಳಲ್ಲಿ, ಈ ಹೊಗಳಿಕೆಯನ್ನು ಓದಬಹುದು . ವ್ಯಕ್ತಿಯು ಒಂದು ಮೂಲವಸ್ತುವಿನ ಯಥಾವತ್ ತೋರ್ಪಡಿಕೆ ಎಂದು ತನ್ನದೇ ಆದ ಸಿದ್ಧಾಂತ ಭೋಧಿಸುತ್ತಾ ಬಂದಿದ್ದ ಅವನು ಉಪನಿಷತ್‌ಗಳು ಇದನ್ನು ಸಮರ್ಥಿಸುತ್ತವೆ ಎಂದು ಕಂಡುಕೊಂಡ. ಆ ಮೂಲಭೂತವಾದ ಸತ್ಯವಾದ ಏಕತೆಗೆ ಶೋಪೆನ್‌ಹಾವರ್ ನಮಗೇ ಗೊತ್ತಿರುವ ’ಮನಸ್ಸು’ ಎಂದು ತಿಳಿದಿದ್ದನು. ಜರ್ಮನ್ ತತ್ವಜ್ಞಾನಿಯಾದ ಫ್ರೆಡ್ರಿಚ್ ವಿಲ್ಹೆಮ್ ಜೋಸೆಫ್ ಶೆಲ್ಲಿಂಗ್‌ನು ಉಪನಿಷತ್‌ಗಳ ರಹಸ್ಯವಾದ ಆಧ್ಯಾತ್ಮಿಕ ಅಂಶಗಳನ್ನು ಹೊಗಳಿದನು. ಶಿಲಿಂಗ್ ಮತ್ತು ಜರ್ಮನ್ ಆದರ್ಶವಾದಿ ಸದಸ್ಯರು ಪ್ರಚಲಿತ ಕ್ರಿಸ್ತಧರ್ಮದಲ್ಲಿ ಅತೃಪ್ತರಾಗಿದ್ದರು. ಮತ್ತು ಅವರು ವೇದ ಮತ್ತು ಉಪನಿಷತ್‌ಗಳ ಬಗ್ಗೆ ಆಕರ್ಷಿತರಾದರು. ಇಂತಹದೇ ಮನಸ್ಸು ಹೊಂದಿರುವ ಜರ್ಮನ್ ಮತ್ತು ಯೂರೋಪಿನ ಬರಹಗಾರರಾದ ಥಾಮಸ್ ಕ್ಯಾರ್ಲೈಲ್, ವಿಕ್ಟರ್ ಕೌಸಿನ್, ಸ್ಯಾಮುಯೆಲ್ ಟೇಲರ್ ಕಾಲರಿಡ್ಜ್, ಮತ್ತು Mme. ಡಿ ಸ್ಟೇಲ್, ಮುಂತಾದವರು ಈ ಪಶ್ಚಿಮ ದೇಶಗಳಲ್ಲದ ಬರಹಗಳಲ್ಲಿ ಆಳವಾದ ಜ್ಞಾನವಿದೆ ಎಂದು ಸಾಧಿಸಿದರು. ಅಮೆರಿಕ ಸಂಯುಕ್ತ ಸಂಸ್ಥಾನ‌ನಲ್ಲಿ, ಅನುಭವಾತೀತ ದಾರ್ಶನಿಕರು ಎಂಬ ಹೆಸರಿನ ಗುಂಪು ಶಿಲಿಂಗ್‌ನ ಜರ್ಮನ್ ಆದರ್ಶವಾದಿಗಳಿಂದ ಪ್ರಭಾವಿತರಾಗಿದ್ದರು. ಎಮರ್ಸನ್ ಮತ್ತು ಥೋರೋರಂತಹ ಈ ಅಮೆರಿಕನ್ನರು ಸಾಂಪ್ರದಾಯಿಕ ಕ್ರೈಸ್ತ ಪುರಾಣ ಕಥಾನಕಗಳಿಂದ ತೃಪ್ತರಾಗಿರಲಿಲ್ಲ ಆದ್ದರಿಂದ ಶಿಲಿಂಗ್ ನೀಡಿದ ಕ್ಯಾಂಟ್‌ನ ಅನುಭವಾತೀತ ಆದರ್ಶವಾದದ ನಿರೂಪಣೆಗಳನ್ನು ಮತ್ತು ಜೊತೆ ಜೊತೆಗೆ ಅವನ ಉಪನಿಷತ್‌ಗಳ ರಮ್ಯ ವಿಚಿತ್ರಾಕರ್ಷಕ ಅನುಭಾವಿ ಅಂಶಗಳ ಆಚರಣೆಗಳನ್ನು ಸಹ ಒಪ್ಪಿಕೊಂಡರು. ಈ ಬರಹಗಾರರ ಪ್ರಭಾವದ ಪರಿಣಾಮವಾಗಿ ಉಪನಿಷತ್‌ಗಳು ಪಶ್ಚಿಮದ ದೇಶಗಳಲ್ಲಿ ಹೆಸರುವಾಸಿಯಾದವು. ವಿಖ್ಯಾತ ಪರಮಾಣು ಭೌತಶಾಸ್ತ್ರಜ್ಞನಾದ ಎರ್ವಿನ್ ಶ್ರೋಡಿಂಗರ್‌ರು ಹೇಳುವಂತೆ: ವಿವಿಧತೆಯು ಕೇವಲ ಕಣ್ಣಿಗೆ ಕಾಣುವಂತಹದು. ಇದು ಉಪನಿಷತ್‌ಗಳ ಸಿದ್ಧಾಂತ ಮತ್ತು ಇದು ಕೇವಲ ಉಪನಿಷತ್‌ಗಳದ್ದು ಮಾತ್ರವಲ್ಲ. ಪಶ್ಚಿಮದ ಬಲವಾದ ಪೂರ್ವಾಗ್ರಹವು ಅಡ್ಡ ಬರದಿದ್ದರೆ ಪರಮಾತ್ಮನೊಂದಿಗೆ ಸೇರುವಂತಹ ಇಂದ್ರಿಯಾತೀತ ಅನುಭವ ಸಾಮಾನ್ಯವಾಗಿ ಈ ಅಭಿಪ್ರಾಯದತ್ತ ಕೊಂಡೊಯ್ಯುವುದು. ಏಕನಾಥ ಈಶ್ವರನ್‌ರವರು ಉಪನಿಷತ್‌ಗಳನ್ನು ಅನುವಾದಿಸುವಾಗ, "ಅವು ಹೀಗೆ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ವೀಕ್ಷಕರು ಅಂತಹ ಪ್ರಜ್ಞೆಯ ಎತ್ತರವಾದ ಶಿಖರಗಳನ್ನು, ತಕ್ಷಣ ತೆಗೆದು ಅತಿಕಡಿಮೆ ವಿವರಣೆಯೊಂದಿಗೆ ರವಾನಿಸಿದ ತುಣುಕು ಛಾಯಾಚಿತ್ರಗಳಾಗಿವೆ" ಎಂದು ಹೇಳಿದ್ದಾರೆ

ಉಪನಿಷತ್‌ಗಳ ಅನುಭವಾತೀತ ಆದರ್ಶದ ಆಧುನಿಕ ವಿಮರ್ಷೆ

ಉಪನಿಷತ್ ದಾರ್ಶನಿಕರು ಬದಲಾವಣೆಯನ್ನು ಕೇವಲ ಮಾಯೆಯೆಂದು ಭಾವಿಸಿದರು, ಏಕೆಂದರೆ ಅದಕ್ಕೆ ಶಾಶ್ವತ ಮತ್ತು ಸದೃಶ ವಾಸ್ತವತೆಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ವಿವಿಧತೆಯನ್ನು ಪೂರ್ಣವಾಗಿ ನಿರಾಕರಿಸಲು ಮುಂದಾದರು. ಡೇವಿಡ್ ಕಾಲುಪಹಾನರ ಪ್ರಕಾರ, "ವಸ್ತುಗಳಲ್ಲಿ ಒಂದು ಅವಶ್ಯಕ ಐಕ್ಯತೆಗಾಗಿ ನಡೆಸಿದ ಅನ್ವೇಷಣೆಗೆ ಯಶಸ್ಸಿನ ಕಿರೀಟ ದೊರೆತರೂ, ಅತೀಂದ್ರಿಯ ಆದರ್ಶವಾದದಿಂದ ತತ್ವಶಾಸ್ತ್ರವು ಒಂದು ಭಾರಿ ಹಿನ್ನಡೆಯನ್ನು ಕಂಡಿದೆ." ಪಾಲ್ ಡ್ಯೂಸನ್‌ರು ಈ ಐಕ್ಯತೆಯ ಬಗ್ಗೆ ಹೀಗೆ ಬರೆದಿದ್ದಾರೆ: "ಈ ಐಕ್ಯತೆಯು ಎಲ್ಲಾ ವೈವಿದ್ಯತೆಗಳನ್ನು ದೂರವಿಟ್ಟಿದೆ, ಮತ್ತು ಆದ್ದರಿಂದ ಆಕಾಶದಲ್ಲಿ ಎಲ್ಲಾ ಅಂತರ, ಸಮಯದಲ್ಲಿನ ಎಲ್ಲಾ ಕಾಲಾನುಕ್ರಮತೆ, ಕಾರಣ ಮತ್ತು ಪರಿಣಾಮಗಳ ನಡುವಿನ ಎಲ್ಲಾ ಅಂತರ ಸಂಬಂಧ, ಮತ್ತು ವಿಷಯ ಮತ್ತು ವಸ್ತುವಿನ ನಡುವಿನ ಎಲ್ಲಾ ವೈರುಧ್ಯಗಳನ್ನು ಒಟ್ಟಿಗಿಂಟಂತಾಗಿದೆ." ಕಲುಪಹನಾರ ಪ್ರಕಾರ, "ಯಥಾರ್ಥತೆಯನ್ನು ಕಾಲ, ಆಕಾಶ, ಬದಲಾವಣೆಯಿಂದ ಹೊರತಾಗಿರುವುದರಿಂದ ಇದೊಂದು ಆಘಾತ. ಬದಲಾವಣೆ ಕೇವಲ ಪದಗಳ ಸಮೂಹ, ಏನೂ ಅಲ್ಲದ ಬರಿಯ ಹೆಸರು, ಮಾತಿನ ಆಡಂಬರವು ಹೆಸರನ್ನು ವಿಕಾರಗೊಳಿಸಿದೆ (ವಾಚಾರಂಭನಮ್ ವಿಕಾರೊ ನಾಮಧೇಯಮ್ ). ಇದಾದ ನಂತರ ಆಧ್ಯಾತ್ಮಕ ಊಹೆಯೇ ಮೇಲುಗೈಯನ್ನು ಪಡೆಯಿತು ಮತ್ತು ಅನುಭವಕ್ಕೆ ಬಂದ ವಸ್ತುಗಳಿಗೆ ಒಂದು ತರ್ಕಬದ್ಧ ವಿವರಣೆ ನೀಡುವ ಗಂಭೀರವಾದ ಪ್ರಯತ್ನ ಉಪನಿಷತ್‌ಗಳಲ್ಲಿ ಇಲ್ಲವೇ ಇಲ್ಲ."ದಲಿತ ಹೋರಾಟಗಾರ ಮತ್ತು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದ ಭೀಮರಾವ್ ಅಂಬೇಡ್ಕರ್‌ ಅವರು ಒತ್ತು ನೀಡಿ ಹೇಳಿದ್ದೇನೆಂದರೆ, "ಉಪನಿಷತ್‌ಗಳ ತತ್ವಶಾಸ್ತ್ರವು ತೀರ ಪರಿಣಾಮಕಾರಿಯಲ್ಲದ, ಕಾಲಕ್ಕೆ ಹೊಂದಿಕೊಳ್ಳಲಾರದ, ಊಹಾಪೋಹಗಳಿಂದ ತುಂಬಿದ, ಹಿಂದುಗಳ ನೈತಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಾರದಂತಹುದಾಗಿದೆ."

ನೋಡಿ

ಆಕರಗಳು

ಹೆಚ್ಚಿನ ಮಾಹಿತಿಗಾಗಿ

  • ಎಡ್ಮಂಡ್ಸ್, I.G. ಹಿಂದುಧರ್ಮ. ನ್ಯೂಯಾರ್ಕ್: ಫ್ರಾಂಕ್ಲಿನ್ ವ್ಯಾಟ್ಸ್, 1979.
  • ಏಕನಾಥ್ ಈಶ್ವರನ್ Upanishads, Nilgiri Press, 2007, ISBN 9781586380212
  • ಎಂಬ್ರೀ, ಐನ್‌ಸ್ಲೀ T., ed. ದಿ ಹಿಂದೂ ಟ್ರೆಡಿಷನ್ ನ್ಯೂಯಾರ್ಕ್:ರ್ಯಾಂಡಮ್ ಹೌಸ್, 1966.
  • Holdrege, Barbara A. (1995), Veda and Torah, Albany: SUNY Press, ISBN 0791416399
  • ಮೆರ್ರೆಟ್, ಫ್ರಾನ್ಸಸ್, ed. ದಿ ಹಿಂದೂ ವರ್ಲ್ಡ್ ಲಂಡನ್: ಮೆಕ್‌ಡೊನಾಲ್ಡ್ ಅಂಡ್ ಕೊ, 1985.
  • ಪಂಡಿತ್, ಬನ್ಸಿ. ದಿ ಹಿಂದು ಮೈಂಡ್. ಗ್ಲೆನ್ ಎಲ್ಲಿನ್, IL: B&V ಎಂಟರ್ಪ್ರೈಸಸ್, 1998.
  • ರಾಧಾಕೃಷ್ಣನ್, ಎಸ್. (1994). ದಿ ಪ್ರಿನ್ಸಿಪಾಲ್ ಉಪನಿಷತ್‌ಗಳು . ನವ ದೆಹಲಿ: ಹಾರ್ಪರ್‌ಕಾಲಿನ್ಸ್ ಪಬ್ಲಿಷರ್ಸ್ ಇಂಡಿಯಾ. ISBN 81-7223-124-5 (ಮೂಲ ಪಬ್ಲಿಕೇಶನ್ಸ್, 1953).
  • ಸ್ಮಿತ್, ಹಸ್ಟನ್. ದಿ ಇಲ್ಲಸ್ಟ್ರೇಟೆಡ್ ವರ್ಲ್ಡ್ಸ್ ರಿಲಿಜನ್ಸ್: ಎ ಗೈಡ್ ಟೊ ಅವರ್ ವಿಸ್ಡಮ್ ಟ್ರೆಡಿಶನ್ಸ್ ನ್ಯೂಯಾರ್ಕ್: ಲಬ್ರಿಂತ್ ಪಬ್ಲಿಷಿಂಗ್, 1995.
  • ವಾಂಗು, ಮಧು ಬಜಾಜ್ ಹಿಂದು ಧರ್ಮ: ವಿಶ್ವದ ಧರ್ಮಗಳು ನ್ಯೂಯಾರ್: ಫ್ಯಾಕ್ಟ್ಸ್ ಆನ್ ಫೈಲ್, 1991.
  • ಮ್ಯಾಕ್ಸ್ ಮುಲ್ಲರ್, ಭಾಷಾಂತರಕಾರ, The Upaniṣads , ಭಾಗ I, ನ್ಯೂಯಾರ್ಕ್: ಡೋವರ್ ಪಬ್ಲಿಕೇಶನ್ಸ್, Inc., 1962, ISBN 0-486-20992-X.
  • ಮ್ಯಾಕ್ಸ್ ಮುಲ್ಲರ್, ಭಾಷಾಂತರಕಾರ, The Upaniṣads , ಭಾಗ II, ನ್ಯೂಯಾರ್ಕ್: ಡೋವರ್ ಪಬ್ಲಿಕೇಶನ್ಸ್, Inc., 1962, ISBN 0-486-20993-8.

ಬಾಹ್ಯ ಕೊಂಡಿಗಳು

ಉಪನಿಷತ್: ಪದಮೂಲ, ಕಾಲ[ಸೂಕ್ತ ಉಲ್ಲೇಖನ ಬೇಕು], ತತ್ವಚಿಂತನೆ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಉಪನಿಷತ್]]
ಉಪನಿಷತ್: ಪದಮೂಲ, ಕಾಲ[ಸೂಕ್ತ ಉಲ್ಲೇಖನ ಬೇಕು], ತತ್ವಚಿಂತನೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಉಪನಿಷತ್ ಪದಮೂಲಉಪನಿಷತ್ ಕಾಲ[ಸೂಕ್ತ ಉಲ್ಲೇಖನ ಬೇಕು]ಉಪನಿಷತ್ ತತ್ವಚಿಂತನೆಉಪನಿಷತ್ ಉಪನಿಷದ್‌ಗಳ ಪಟ್ಟಿಉಪನಿಷತ್ ಭಾರತದಿಂದ ಹೊರಗೆ ವಿಖ್ಯಾತಿಉಪನಿಷತ್ ‌ಗಳ ಅನುಭವಾತೀತ ಆದರ್ಶದ ಆಧುನಿಕ ವಿಮರ್ಷೆಉಪನಿಷತ್ ನೋಡಿಉಪನಿಷತ್ ಆಕರಗಳುಉಪನಿಷತ್ ಹೆಚ್ಚಿನ ಮಾಹಿತಿಗಾಗಿಉಪನಿಷತ್ ಬಾಹ್ಯ ಕೊಂಡಿಗಳುಉಪನಿಷತ್ಅರಣ್ಯಕಆತ್ಮಆದಿ ಶಂಕರಆರಣ್ಯಕಋಷಿಛಾಂದೋಗ್ಯೋಪನಿಷತ್ತತ್ವಶಾಸ್ತ್ರದೇವನಾಗರಿಪರಮಾತ್ಮಬೃಹದಾರಣ್ಯಕ ಉಪನಿಷತ್ಬ್ರಾಹ್ಮಣಮೊಘಲ್ವಿಕಿಪೀಡಿಯ:Citation neededವೇದವೇದಾಂತಶಹಜಹಾನ್ಶೃತಿಸಂಸ್ಕೃತಹಿಂದು

🔥 Trending searches on Wiki ಕನ್ನಡ:

ವೃತ್ತಪತ್ರಿಕೆದರ್ಶನ್ ತೂಗುದೀಪ್ಯೋಗವಾಹಅಶ್ವತ್ಥಮರಜ್ವರಗಣೇಶಗ್ರಂಥಾಲಯಗಳುಬಾಲ ಗಂಗಾಧರ ತಿಲಕಡಾ ಬ್ರೋಸೆಸ್ (ಮೇಲ್ತೆರಿಗೆ)ಕರ್ನಾಟಕ ಐತಿಹಾಸಿಕ ಸ್ಥಳಗಳುಜೀವವೈವಿಧ್ಯರೈತವಾರಿ ಪದ್ಧತಿಸೂರ್ಯಜಿ.ಪಿ.ರಾಜರತ್ನಂನಾಟಕಕ್ರೈಸ್ತ ಧರ್ಮಪುರೂರವಸ್ನೀರುಅಂತರ್ಜಾಲ ಹುಡುಕಾಟ ಯಂತ್ರಭಾರತದ ಉಪ ರಾಷ್ಟ್ರಪತಿಗಳ ಪಟ್ಟಿವಿಶ್ವಕರ್ಮಕಾಳಿದಾಸಯಾಣರೇಣುಕಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಝಾನ್ಸಿಜಾತ್ರೆಲಾರ್ಡ್ ಕಾರ್ನ್‍ವಾಲಿಸ್ಪ್ರಚಂಡ ಕುಳ್ಳಮೈಸೂರುಪರಿಣಾಮಬಾದಾಮಿರಾಷ್ಟ್ರಕವಿಎಚ್ ೧.ಎನ್ ೧. ಜ್ವರವಿಜಯನಗರಕನ್ನಡ ಸಂಧಿಅಕ್ಬರ್ಶಿಕ್ಷಕಕನ್ನಡಕಿತ್ತೂರು ಚೆನ್ನಮ್ಮಭಾಮಿನೀ ಷಟ್ಪದಿಗವಿಸಿದ್ದೇಶ್ವರ ಮಠಪುತ್ತೂರುರಜಪೂತಕರ್ನಾಟಕ ಸ್ವಾತಂತ್ರ್ಯ ಚಳವಳಿನುಗ್ಗೆಕಾಯಿಕಾದಂಬರಿದಶರಥಮದಕರಿ ನಾಯಕಮುದ್ದಣವಿಜ್ಞಾನಆದೇಶ ಸಂಧಿಉಪ್ಪಿನ ಸತ್ಯಾಗ್ರಹರನ್ನಕಾಂತಾರ (ಚಲನಚಿತ್ರ)ಕವಿರಾಜಮಾರ್ಗಶೂದ್ರಕೇಶಿರಾಜಚಂದ್ರಗುಪ್ತ ಮೌರ್ಯರಾಶಿಮಳೆನೀರು ಕೊಯ್ಲುಕನ್ನಡದಲ್ಲಿ ಗದ್ಯ ಸಾಹಿತ್ಯನುಡಿಗಟ್ಟುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುದಲಿತಎಚ್.ಎಸ್.ಶಿವಪ್ರಕಾಶ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕವಿಗಳ ಕಾವ್ಯನಾಮಆಪ್ತಮಿತ್ರಕುಂಬಳಕಾಯಿಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಲೋಪಸಂಧಿದೇವರ ದಾಸಿಮಯ್ಯಕನ್ನಡದಲ್ಲಿ ಕಾದಂಬರಿ ಸಾಹಿತ್ಯಸೌಂದರ್ಯ (ಚಿತ್ರನಟಿ)ಶಂ.ಬಾ. ಜೋಷಿಜಯಚಾಮರಾಜ ಒಡೆಯರ್🡆 More