ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ನಿರ್ಮಿಸಿದ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಐತಿಹಾಸಿಕ ಚಿತ್ರಗಳಲ್ಲೊಂದು.
ಚಾಲುಕ್ಯರ ದೊರೆ ಇಮ್ಮಡಿ ಪುಲಿಕೇಶಿಯ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ, ಪುಲಿಕೇಶಿಯ ಪಾತ್ರವನ್ನು ರಾಜಕುಮಾರ್ ನಿರ್ವಹಿಸಿದ್ದಾರೆ. ಪುಲಿಕೇಶಿಯ ಸಹೋದರ ವಿಷ್ಣುವರ್ಧನನ ಪಾತ್ರದಲ್ಲಿ ಉದಯಕುಮಾರ್ ನಟಿಸಿದ್ದಾರೆ. ಕನ್ನಡ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಮಾಲಿಕೆಯಲ್ಲಿ ಮಯೂರ ಆಯಿತು, ಸರ್ವಜ್ಞ ಆಯಿತು ಮುಂದೆ ಚಾಲುಕ್ಯ ಸಾಮ್ರಾಟ – ಇಮ್ಮಡಿ ಪುಲಿಕೇಶಿಯನ್ನು ಪರಿಚಯಿಸುವ ಪ್ರಯತ್ನ. ದಕ್ಷಿಣ ಭಾರತದುದ್ದಕ್ಕೂ ಕನ್ನಡ ರಾಜ್ಯವನ್ನು ವಿಸ್ತರಿಸಿದ ಕೀರ್ತಿ ಈ ರಾಜನಿಗೆ ಸಲ್ಲುತ್ತದೆ – ಆದುದರಿಂದಲೇ ಆತನಿಗೆ ಸಿಕ್ಕ ಬಿರುದು “ದಕ್ಷಿಣಪತೇಶ್ವರ”. ಮತ್ತೊಮ್ಮೆ ಈ ಪಾತ್ರವನ್ನು ಅಜರಾಮರಗೊಳಿಸಿದ್ದು ನಮ್ಮ ವರನಟ ಡಾ.ರಾಜಕುಮಾರ. ಅವರ ರೋಚಕ ಅಬಿನಯ ನೋಡಿಯೇ ಸವಿಯಬೇಕು. ಇಲ್ಲಿನ ಕೆಲುವು ದೃಶ್ಯಗಳು / ಸಂಭಾಷಣೆಗಳು ಕನ್ನಡಿಗರಲ್ಲಿ ಕಿಚ್ಚು ಮೂಡಿಸುತ್ತದೆ. ಉದಾಹರಣೆ : ಧ್ವಜ ಸ್ತಂಭವನ್ನು ಎತ್ತಿ ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ ಅದು ಆಕಸ್ಮಿಕವಾಗಿ ಬೀಳುವಂತಾದಾಗ ಅದಕ್ಕೆ ತನ್ನ ಬೆನ್ನು ಕೊಟ್ಟು ಬೀಳದಂತೆ ತಡೆಯುವ ಪುಲಿಕೇಶಿ ಆಗ ಹೇಳುವ ಮಾತು “ನಾನು ಈ ಕಪ್ಪು ಮಣ್ಣಿನ ಗರ್ಭದಲ್ಲಿ ಜನಿಸಿದವನು. ನನ್ನ ತಾಯಿ ಕೌಶಿಕಿ ಕನ್ನಡ, ನನ್ನ ತಂದೆ ಮುಕುಟೇಶ್ವರ ಕನ್ನಡ, ನನ್ನ ಭಾಷೆ, ನನ್ನ ಉಸಿರು ಕನ್ನಡ. ನನ್ನ ಈ ಶಕ್ತಿ, ಧೈರ್ಯ ಕನ್ನಡ ತಾಯಿ ನೀಡಿದ ಕೊಡುಗೆ. ಕನ್ನಡದ ಈ ಹೆಮ್ಮೆಯ ಸ್ತಂಭ ಬೀಳಕೂಡದು” ಎಂದು ನುಡಿಯುತ್ತಾನೆ. ಇದು ನಾಯಕನ ಆಗಮನದ ದೃಶ್ಯ. ಬಹುಶಃ ಕನ್ನಡ ಚಿತ್ರರಂಗ ಕಂಡ ಅಪರೂಪದ ನಾಯಕನ ಆಗಮನದ ದೃಶ್ಯ. ಮತ್ತೊಮ್ಮೆ “ಪತಿವ್ರತೆಗೆ ಗಂಡ ಹೇಗೋ , ಹಾಗೆ ಕನ್ನಡಿಗರ ಪಾಲಿಗೆ ಸತ್ಯವೊಂದೆ ಧರ್ಮ”. ಹೀಗೆ ಚಿತ್ರದುದ್ದಕ್ಕೂ ಸಂಭಾಷಣೆ ಮತ್ತು ಡಾ.ರಾಜಕುಮಾರ ಅಭಿನಯ ಮನಸೆಳೆಯುತ್ತದೆ. ಪುಲಿಕೇಶಿಗೆ ಒಲಿಯಬೇಕಾದ ಸಿಂಹಾಸನವನ್ನು ಆತನ ಮಾವ ಮಂಗಲೇಶ ಅತಿಕ್ರಮಿಸಿಕೊಂಡಿರುತ್ತಾನೆ. ಈತ ಮತ್ತು ಈತನ ಮಂತ್ರಿ ರಾಹಪ್ಪ ಅನೇಕ ಕುಟಿಲೋಪಾಯಗಳನ್ನು ಹೂಡುತ್ತಾರೆ. ಪುಲಿಕೇಶಿಯ ಮೇಲೆ ಆತನ ತಮ್ಮ ಕುಬ್ಜ ವಿಷ್ಣುವರ್ಧನನ್ನು ಎತ್ತಿಕಟ್ಟುತ್ತಾರೆ. ಅನೇಕ ಷಡ್ಯಂತ್ರಗಳನ್ನು ರಚಿಸಿ ಪುಲಿಕೇಶಿ ಸಿಂಹಾಸನವನ್ನು ಏರದಂತೆ ತಡೆಯಲು ಪ್ರಯತ್ನಿಸುತ್ತಾರೆ. ಮಂಗಲೇಶ ಸತ್ತು ಆ ಅಪವಾದ ಪುಲಿಕೇಶಿಯ ಮೇಲೆ ಬಂದಾಗ ಸ್ವತಃ ಮಂಗಲೇಶನ ಮಡದಿ ಮಧ್ಯೆ ಪ್ರವೇಶಿಸಿ “ಕನ್ನಡ ತಾಯಿಯ ಮಾಂಗಲ್ಯ ಉಳಿಸಲು ನಾನೆ ಈ ಕೊಲೆ ಮಾಡಿಸಿದ್ದು” ಎಂದು ನುಡಿಯುತ್ತಾಳೆ. ರಾಹಪ್ಪ ಶತ್ರು ಪಾಳಯ ಸೇರುತ್ತಾನೆ. ಪುಲಿಕೇಶಿ ದಂಡೆತ್ತಿ ಬಂದ ಪಲ್ಲವರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸುತ್ತಾನೆ. ನರ್ಮದೆಯ ತಟದಲ್ಲಿ ಉತ್ತರದ ಪ್ರಭಾವಿ ರಾಜ ಹರ್ಷವರ್ಧನನ್ನು ಸೋಲಿಸಿ “ಚಾಳುಕ್ಯ ಪರಮೇಶ್ವರ” ಎಂಬ ಬಿರುದಾಂಕಿತನಾಗುತ್ತಾನೆ. ಈ ಮಧ್ಯೆ ಹಲವಾರು ರಾಜಕೀಯ ಪಿತೂರಿಗಳನ್ನು ನಿಷ್ಕ್ರಿಯೆಗೊಳಿಸುತ್ತಾನೆ. ಇತಿಹಾಸ ಪ್ರಸಿದ್ದ ಬಾದಾಮಿ, ಐಹೊಳೆ, ಪಟ್ಟಡಕಲ್ಲು ನಿರ್ಮಾಣವಾಗಿದ್ದು ಚಾಲುಕ್ಯರ ಕಾಲದಲ್ಲೇ. ವಯೋವೃದ್ಧ, ಅನಾರೋಗ್ಯ ಪೀಡಿತನಾದ ಪುಲಿಕೇಶಿಯ ರಾಜ್ಯವನ್ನು ಪಲ್ಲವರು ಆಕ್ರಮಿಸಿಕೊಳ್ಳುತ್ತಾರೆ. ಈ ವಿಷಯ ಪುಲಿಕೇಶಿಗೆ ತಡವಾಗಿ ತಿಳಿಯುತ್ತದೆ. ಬಂಧು-ಮಿತ್ರರೆಲ್ಲ ಯುದ್ದದಲ್ಲಿ ಮಡಿದ ವಿಷಯ ಕೇಳಿ ಆಕ್ರೋಶಗೊಂಡು ಬಿಚ್ಚುಗತ್ತಿಯನ್ನು ಹಿಡಿಡು ಯುದ್ದಕ್ಕೆ ನಿಲ್ಲುತ್ತಾನೆ. ಈ ಕೊನೆಯ ದೃಶ್ಯದಲ್ಲಿ ಡಾ.ರಾಜಕುಮಾರ ಅವರ ಅಭಿನಯ ಅಮೋಘ , ಕತ್ತಿಯನ್ನು ಹಿಡಿದು ಆ ಭಂಗಿಯಲ್ಲೆ ಸತ್ತಂತೆ ನಟಿಸಬೇಕಾದ ದೃಶ್ಯ – ಅತ್ಯಮೋಘ. ತಾರಾಗಣದಲ್ಲಿ : ತಮ್ಮನಾಗಿ ಉದಯಕುಮಾರ್ ಪಾತ್ರಪೋಷಣೆ ಉತ್ತಮವಾಗಿದೆ – ಮೊದಲು ಅಣ್ಣನ ವಿರುದ್ಧ ತಿರುಗಿ ನಿಂತು ನಂತರ ಕೊನೆಯವರೆಗೂ ಅಣ್ಣನ ನೆರಳಾಗೆ ನಿಲ್ಲುತ್ತಾನೆ, ಈತನಿಗೆ ತನ್ನ ಗೂನು ಬೆನ್ನಿನ ಬಗ್ಗೆ ಸದಾ ಬೇಸರ. ಇನ್ನು ಮಂತ್ರಿ ರಾಹಪ್ಪನಾಗಿ ಬಾಲಣ್ಣ ತಮ್ಮ ಎಂದಿನ ಅದ್ಭುತ ಅಭಿನಯವನ್ನು ತೋರಿದ್ದಾರೆ. ರಾಣಿಯಾಗಿ ಜಯಂತಿ, ಮಂಗಲೇಶರಾಗಿ ಶಕ್ತಿಪ್ರಸಾದ್, ವಿಶೇಷ ಪಾತ್ರದಲ್ಲಿ ಕಲ್ಪನ, ಹರ್ಷವರ್ಧನನ ಪಾತ್ರದಲ್ಲಿ ಅಶ್ವಥ ಮುಂತಾದವರಿದ್ದಾರೆ. ನಿರ್ದೇಶನ : ರಾಜನ್ ಚಿತ್ರಕಥೆ ಮತ್ತು ಸಂಭಾಷಣೆ : ಜಿ.ವಿ.ಅಯ್ಯರ್ ಸಂಗೀತ : ಜಿ. ಕೆ. ವೆಂಕಟೇಶ್
ಇಮ್ಮಡಿ ಪುಲಿಕೇಶಿ (ಚಲನಚಿತ್ರ) | |
---|---|
ಇಮ್ಮಡಿ ಪುಲಿಕೇಶಿ | |
ನಿರ್ದೇಶನ | ಎನ್.ಸಿ.ರಾಜನ್ |
ನಿರ್ಮಾಪಕ | ಜಿ.ಕೆ.ವೆಂಕಟೇಶ್ |
ಪಾತ್ರವರ್ಗ | ರಾಜಕುಮಾರ್ ಕಲ್ಪನಾ ಜಯಂತಿ, ಸುದರ್ಶನ್, ಅಶ್ವಥ್, ಉದಯಕುಮಾರ್, ಬಾಲಕೃಷ್ಣ, ಶಕ್ತಿಪ್ರಸಾದ್, ನರಸಿಂಹರಾಜು |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ದೊರೈರಾಜ್ |
ಬಿಡುಗಡೆಯಾಗಿದ್ದು | ೧೯೬೭ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ವೆಂಕಟೇಶ್ ಫಿಲಂಸ್ |
This article uses material from the Wikipedia ಕನ್ನಡ article ಇಮ್ಮಡಿ ಪುಲಿಕೇಶಿ (ಚಲನಚಿತ್ರ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.