ಆದಿ ಶಂಕರರ ಜೀವನದ ಇತಿಹಾಸವನ್ನು ನಿಖರವಾಗಿ ತಿಳಿಯುವುದು ಕಷ್ಟ.
ಆದಿ ಶಂಕರರ ಜೀವನ ಮತ್ತು ಅದ್ವೈತ
ಮಾಧವೀಯ ಶಂಕರ ವಿಜಯವೇ ಪ್ರಾಚೀನವಾದುದು. [ಮಾಧವ ಕವಿ ವಿರಚಿತ-೧೪ನೇ ಶ.:
ಚಿದ್ವಿಲಾಸೀಯ ಶಂಕರ ವಿಜಯಮ್-ಕವಿ ಚಿದ್ವಿಲಾಸ೧೫-೧೭ನೇಶ.;
ಕೇರಳೀಯ ಶಂಕರಶಂಕರ ವಿಜಯಮ್-೧೭ನೇಶ.]
ಶ್ರೀ ಶಂಕರರ ತಂದೆ ಕಾಯ್ಪಿಳ್ಳೆ ಶಿವಗುರು ನಂಬೂದರಿ; ತಾಯಿ ಆರ್ಯಾಂಬಾ. ಅವರು ಬಹಳ ವರ್ಷ ಮಕ್ಕಳಾಗದಿದ್ದುದರಿಂದ ತ್ರಿಶೂರಿನ ವಡಕ್ಕನಾಥನ ಪ್ರಾರ್ಥನೆ ಮಾಡಿಕೊಂಡರು. ಅದರ ಫಲವಾಗಿ ಶ್ರೀ ಶಂಕರರು ಕೇರಳದ ಕಾಲಡಿ ಎಂಬ ಊರಿನಲ್ಲಿ ಅಥವಾ ಅದರ ಹತ್ತಿರ ಕ್ರಿ. ಶ. ೭೮೮ ರಲ್ಲಿ ಶುಭ ನಕ್ಷತ್ರದಲ್ಲಿ ಜನಿಸಿದರು. (ಇತ್ತೀಚೆಗೆ ಕಾಂಬೋಡಿಯಾದಲ್ಲಿ ಶ್ರೀ ಶಂಕರರ ಶಿಷ್ಯ ಶಿವಸೋಮ ಇವರ ಕ್ರಿ.ಶ.820 ರ ಶಾಸನವೊಂದು ಪ್ರಾಪ್ತವಾಗಿದೆ. ಅದರ ಪ್ರಕಾರ ಶ್ರೀ ಶಂಕರರು ಕ್ರಿ.ಶ.820 ರಲ್ಲಿ ಕಾಲವಾದರೆಂಬ ಅಂಶ ತಿಳಿಯುತ್ತದೆ. ಅವರು ಬದುಕಿದ್ದು ಕೇವಲ 32 ವರ್ಷ ಅದ್ದರಿಂದ ಜನನ ಕ್ರಿ.ಶ. 788 ರಲ್ಲಿ ಎನ್ನುವುದು ಖಚಿತ.-ಭಾರತದ ಇತಿಹಾಸ ಫಾಲಾಕ್ಷ ಭಾಗ-1-೧೯೮೪/ಪುಟ ೨೬೬ ;ಕಾಲಡಿಯ ಜನ್ಮ ಸ್ಥಳ,- ಶ್ರೀ ಶಂಕರರ ಕೀರ್ತಿ ಸ್ಥಂಭ, ಕಾಲಡಿ)
ಅವರಿಗೆ ಚಿಕ್ಕಂದಿನಲ್ಲೇ ಸಂನ್ಯಾಸದ ಕಡೆ ಒಲವಿದ್ದರೂ ತಾಯಿ ಒಪ್ಪಿರಲಿಲ್ಲ. ಈಬಗ್ಗೆ ಒಂದು ಕಥೆ ಇದೆ. ಅವರು ಹೊಳೆಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆ ಅವರ ಕಾಲನ್ನು ಹಿಡಿಯಿತೆಂದೂ, ಆಗ ಕೊನೆಯ ಹೊತ್ತಿಗೆ ಸಂನ್ಯಾಸ ಸ್ವೀಕರಿಸಲು ಅಲ್ಲಿಯೇ ಇದ್ದ ತಾಯಿ ಒಪ್ಪಲು ಅವರು ಅಲ್ಲಿಯೇ ಸ್ವಯಂ ಸಂನ್ಯಾಸ ಸ್ವೀಕರಿಸಲು ಮೊಸಳೆ ಅವರ ಕಾಲು ಬಿಟ್ಟಿತು. ನಂತರ ಅವರು ಗುರುವನ್ನು ಅರಸತ್ತಾ ಉತ್ತರದ ಕಡೆ ಹೊರಟರು.
ಸಂನ್ಯಾಸ ಸ್ವೀಕರಿಸಿದ ಶಂಕರರು ತಮಗೆ ತಕ್ಕ ಗುರುಗಳನ್ನು ಅರಸುತ್ತಾ ಉತ್ತರದ ನರ್ಮದಾ ನದಿಯ ತಟದಲ್ಲಿದ್ದ ಗೋವಿಂದ ಭಗವತ್ಪಾದರನ್ನು ಕಂಡರು. ಅವರು ಇವರ ಪರಿಚಯ ಕೇಳಲು, ಅದ್ವೈತ ತತ್ವಾರ್ಥವಿರುವ ಶ್ಲೋಕದಲ್ಲಿ ಶಂಕರರು ಉತ್ತರಿಸಿ ನಮಸ್ಕರಿಸಿದರು. ಗೋವಿಂದ ಭಗವತ್ಪಾದರು ಮೆಚ್ಚಿ ಒಪ್ಪಲು, ಅವರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿದರು. ಗೋವಿಂದ ಭಗವತ್ಪಾದರು ಗೌಡಪಾದ ಮುನಿಗಳ ಶಿಷ್ಯರು. ಗೌಡ ಪಾದ ಮುನಿಗಳು ಮಾಂಡೂಕ್ಯ ಉಪನಿತ್ತಿಗೆ ಭಾಷ್ಯ ಬರೆದು, ಅದಕ್ಕೆ ಅದ್ವೈತ ಸಿದ್ಧಾಂತದ ಕಾರಿಕೆಯನ್ನು ೫೨ ಶ್ಲೋಕಗಳಲ್ಲಿ ಬರೆದಿದ್ದಾರೆ. ಅದನ್ನೇ ವಿಸ್ತರಿಸಿ ಬ್ರಹ್ಮ ಸೂತ್ರಕ್ಕೆ ಭಾಷ್ಯವನ್ನು ಬರೆಯಲು ಗೋವಿಂದ ಭಗವತ್ಪಾದರು ತಮ್ಮಲ್ಲಿ ಅಭ್ಯಾಸ ಮಾಡಿ ಮುಗಿದ ನಂತರ ಶಂಕರರಿಗೆ ಹೇಳಿದರು. ಶಂಕರರು ಒಪ್ಪಿ ಕಾಶಿಗೆ ಹೊರಟರು.ಅದ್ವೈತ ಸಿದ್ದಾಂತದ ಪ್ರತಿಪಾದನೆ ಇವರ ಮುಖ್ಯ ಉದ್ದೇಶವಾಗಿತ್ತು.
ಶಂಕರರು ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಹೊರಟರು. ಅಲ್ಲಿ ಸನಂದನನೆಂಬ ಚೋಳ ದೇಶದ [ತಮಿಳು] ಯುವಕ ಸಂನ್ಯಾಸಿ ಇವರ ಶ್ಯಿಷ್ಯನಾದನು; ಪದ್ಮಪಾದ. ಅವರು ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯಕ್ಕೆ ಹೋಗುವಾಗ ನಡೆದ ಒಂದು ಕಥೆ ಇದೆ. ಒಬ್ಬ ಅಸ್ಪೃಶ್ಯ [ಚಾಂಡಾಲ] ವ್ಯಕ್ತಿಯು ದಾರಿಯಲ್ಲಿ ಎದುರಿಗೆ ಬರಲು ಅವನಿಗೆ ಪಕ್ಕಕ್ಕೆ ಸರಿಯಲು ಹೇಳಿದಾಗ ಅವನು ನೀನು ಹೇಳಿದ್ದು ಯಾರಿಗೆ ? ದೇಹಕ್ಕೋ? ಆತ್ಮಕ್ಕೋ? ಎಂದು ಕೇಳಲು. ಅವನೇ ತನ್ನನ್ನು ಪರೀಕ್ಷಿಸಲು ಬಂದ ಪರಶಿವನೆಂದು ಅರಿತು ಅವನಿಗೆ ಕೈ ಮುಗಿದು ಐದು ಶ್ಲೋಕಗಳಿಂದ ಸ್ತುತಿಸಿದರು. ಅದು ಮನೀಷಿ ಪಂಚಕವೆಂದು ಪ್ರಸಿದ್ಧಿಯಾಗಿದೆ. ಅಲ್ಲಿಂದ ಬದರಿಗೆ ಹೋಗಿ ಅಲ್ಲಿ ತಮ್ಮ ಪ್ರಸಿದ್ಧವಾದ ಭಾಷ್ಯಗಳನ್ನು ಬರೆದರು. ಅವು ಪ್ರಕರಣ ಗ್ರಂಥ ಗಳೆಂದು [ತತ್ವಾರ್ಥ] ಪ್ರಸಿದ್ಧವಾಗಿವೆ. ಬ್ರಹ್ಮ ಸೂತ್ರ, ಭಗವದ್ಗೀತಾ, ಮತ್ತು ದಶ ಉಪನಿಷತ್ಗಳ ಭಾಷ್ಯ ಗಳೇ ಪ್ರಸ್ಥಾನತ್ರಯ ಭಾಷ್ಯಗಳು; ಪ್ರಕರಣ ಗ್ರಂಥಗಳು.. ಈಶ, ಕೇನ ಕಠ; ಪ್ರಶ್ನ, ಮುಂಡಕ, ಮಾಂಡೂಕ್ಯ; ಐತರೇಯ, ತೈತ್ತರೀಯ; ಬೃಹದಾರಣ್ಯಕ, ಛಾಂದೋಗ್ಯ, ಇವು ಆ ದಶ ಉಪನಿಷತ್ತುಗಳು. ನಂತರ ಅವರು ಪ್ರಯಾಗದಲ್ಲಿ ಉಮಿಹೊಟ್ಟಿನ ಬೆಂಕಿಯಲ್ಲಿ ಕುಳಿತಿದ್ದ ಪ್ರಸಿದ್ಧ ಮೀಮಾಂಸಕ ಪಂಡಿತರಾದ ಕುಮಾರಿಲ ಭಟ್ಟರನ್ನು ಬೆಟ್ಟಿಯಾದರು. ಅವರು ಬೌದ್ಧ ಗರುಗಳಿಗೆ ಸುಳ್ಳು ಹೇಳಿ ಶಿಷ್ಯರಾಗಿ ಬೌದ್ಧಧರ್ಮದ ರಹಸ್ಯವನ್ನು ಕಲಿತಿದ್ದರು. ಅದರ ಪ್ರಾಯಶ್ಚಿತ್ತವಾಗಿ ಅಗ್ನಿ ಪ್ರವೇಶ ಮಾಡಿದ್ದರು. ಅವರು ತಮ್ಮ ಶಿಷ್ಯ ಮಂಡನ ಮಿಶ್ರರನ್ನು ಕಂಡು ವಾದ ಮಾಡಲು ಹೇಳಿದರು.
ವೇದಗಳ ಅಂತಿಮ ತಾತ್ಪರ್ಯ ಅದ್ವೈತ ಸಿದ್ಧಾಂತವೆಂದು ಸಾಧಿಸಲು ಅಂದಿನಕಾಲದ ಅತ್ಯಂತ ಪ್ರಸಿದ್ಧ ಮೀಮಾಂಸ ಪಂಡಿತರಾದ, ಕರ್ಮವೇ ವೇದ ತಾತ್ಪರ್ಯವೆಂದು ಹೇಳುವ ಮಂಡನಮಿಶ್ರರನ್ನು ಕಾಣಲು ಮಾಹಿಷ್ಮತಿ ನಗರಕ್ಕೆ [ಇಂದಿನ ಬಿಹಾರದಲ್ಲಿರುವ ಮಹಿಷಿ ಬಂಗಾವನ್ ಸಹರ್ಸ] ಹೋದರು. ಅವರೊಡನೆ ಹದಿನೈದು ದಿನಗಳ ಕಾಲ ಸತತ ವಾದ ಮಾಡಿದರು. ಮಿಶ್ರರ ಪತ್ನಿ ಉಭಯ ಭಾರತಿಯೇ ನಿರ್ಣಾಯಕಿ. ಅವಳು ತನ್ನ ಪತಿ ಮಿಶ್ರರು ವಾದದಲ್ಲಿ ಸೋತಿರವುದಾಗಿ ತೀರ್ಪು ಕೊಟ್ಟಳು. ಆದರೆ ತನ್ನನ್ನೂ ಗೆಲ್ಲಬೇಕೆಂದು ಪಂಥವನ್ನು ಮಾಡಿದಳು. ಅವಳು ಕಾಮಸೂತ್ರದ ಮೇಲಿನ ಸಂಸಾರಿಕ ವಿಚಾರದಲ್ಲಿ ಪ್ರಶ್ನೆ ಗಳನ್ನು ಕೇಳಿದಳು. ಬಾಲ ಸಂನ್ಯಾಸಿಗಳಾದ ಶಂಕರರಿಗೆ ಉತ್ತರ ಗೊತ್ತಿರಲಿಲ್ಲ. ಆವರು ಆರು ತಿಂಗಳ ಸಮಯ ಕೇಳಿದರು. ಅದರಂತೆ ಅವರು ಅಕಾಲ-ಮರಣ ಹೊಂದಿದ ವಿಕ್ರಮ ರಾಜನ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿ, ಅವನ ಪತ್ನಿಯಿಂದ ಭಾರತಿ ಕೇಳಿದ ಪ್ರಶ್ನೆ ಗಳಿಗೆ ಉತ್ತರ ತಿಳಿದು, ತಮ್ಮ ವಾದ ಬರೆದರು. ಪುನಹ ತಮ್ಮ ದೇಹ ಸೇರಿ ಆ ಗ್ರಂಥವನ್ನು ಭಾರತಿ ದೇವಿಗೆ ಕೊಟ್ಟು ಉತ್ತರವನ್ನು ಕಂಡುಕೊಳ್ಳಲು ಹೇಳಿದರು . ಅವಳು ಆ ಉತ್ತರವನ್ನು ಒಪ್ಪಲು, ಮೊದಲೇ ಮಾಡಿಕೊಂಡ ನಿಯಮದಂತೆ ಮಂಡನ ಮಿಶ್ರರು ಸುರೇಶ್ವರಾಚಾರ್ಯರೆಂಬ ಹೆಸರಿನಲ್ಲಿ ಸಂನ್ಯಾಸಿಗಳಾಗಿ ಶಂಕರರ ಶಿಷ್ಯರಾದರು. ಉಭಯಭಾರತಿಯೂ ಅವರನ್ನು ಹಿಂಬಾಲಿಸಿದಳು. ಕೊನೆಗೆ ಶೃಂಗೇರಿಯ ಶಾರದಾ ಪೀಠದಲ್ಲಿ ನೆಲಸಿದಳೆಂದು ಪ್ರತೀತಿ ಇದೆ. ಮಂಡನಮಿಶ್ರರೇ ಮುಂದೆ ದಕ್ಷಿಣಾಮ್ನಾಯ ಶಂಕರ ಮಠದ ಶೃಂಗೇರಿಯ ಪೀಠಾಧಿಪತಿಗಳಾಗಿ ಶಂಕರರ ಗ್ರಂಥಗಳಿಗೆ ವಾರ್ತಿಕಗಳನ್ನು [ಟೀಕೆ] ಬರೆದು ವಾರ್ತಿಕಕಾರರೆನಿಸಿದರು.
ಶೃಂಗೇರಿಯಿಂದ ಕೇರಳಕ್ಕೆ ಬಂದು ಉತ್ತರಕ್ಕೆ ಹೊರಡುವಾಗ ಕೇರಳದ ರಾಜ ಸುಧನ್ವನು ಅವರಿಗೆ ಬೆಂಗಾವಲಾಗಿ ಬಂದನು. ಅವರು ತಮಿಳುನಾಡು ಕಂಚಿ ಯನ್ನು ದಾಟಿ ಆಂದ್ರಪ್ರದೇಶದ ಮೂಲಕ ವಿದರ್ಭಕ್ಕೆ ಬಂದರು; ಅಲ್ಲಿ ಪ್ರಯಾಣ ಮಾಡುವಾಗ ಸಶಸ್ತ್ರ ಕಾಪಾಲಿಕರು ಇವರನ್ನು ಎದುರಿಸಿದರು. ಸುಧನ್ವ ರಾಜನು ಅವರನ್ನು ನಿವಾರಿಸಿ, ಪುನಃ ಕರ್ನಾಟಕಕ್ಕೆ ಬಂದು, ಗೋಕರ್ಣಕ್ಕೆ ಸುರಕ್ಷಿತವಾಗಿ ತಲುಪಿಸಿದನು. ಅಲ್ಲಿ ಅವರು ಶೈವ ಪಂಥದವರೊಡನೆ ವಾದ ಮಾಡಿ ಜಯಿಸಿ ಶಿಷ್ಯರನ್ನಾಗಿ ಮಾಡಿಕೊಂಡರು. ಅಲ್ಲಿಂದ ಸೌರಾಷ್ಟ್ರ [ಹಳೆಯ ಕಾಂಬೋಜ] ಕ್ಕೆ ಬಂದು ಪುಣ್ಯ ಕ್ಷೇತ್ರಗಳಾದ ಗಿರಿನಾರ, ಸೋಮನಾಥ, ಪ್ರಭಾಸ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಯ ಪಂಡಿತರನ್ನು ವಾದದಲ್ಲಿ ಸೋಲಿಸಿ ಅದ್ವೈತ ತತ್ವವನ್ನು ಎತ್ತಿ ಹಿಡಿದರು. ಅಲ್ಲಿಂದ ದ್ವಾರಕೆಗೆ ಬಂದು ಅಲ್ಲಿ ಪ್ರಸಿದ್ಧರಾದ ಬೇಧಾಬೇಧ ಪಂಡಿತರಾದ ಭಟ್ಟ ಭಾಸ್ಕರರನ್ನು ವಾದದಲ್ಲಿ ಸೋಲಿಸಿದರು.. ದ್ವಾರಕೆಯ ಪಂಡಿತರೆಲ್ಲಾ ಅದ್ವೈತ ತತ್ವವನ್ನು ಒಪ್ಪಿಕೊಂಡರು. ಬಾಹ್ಲೀಕದಲ್ಲಿ ಜೈನಪಂಡಿತರನ್ನು ವಾದದಲ್ಲಿ ಹಿಮ್ಮಟ್ಟಿಸಿದರು. ಅಲ್ಲಿಂದ ಕಾಂಬೋಜಕ್ಕೆ [ಉತ್ತರಕಾಶ್ಮೀರ] ದಾರದ [ದಬೀಸ್ಥಾನ್] ಕ್ಕೆ ಬಂದು ಅಲ್ಲಿಯ ಸಂನ್ಯಾಸಿಗಳನ್ನೂ ಪಂಡಿತರನ್ನೂ ವಾದದಲ್ಲಿ ಸೋಲಿಸಿದರು ಎತ್ತರದ ಶಿಖರ ,ಕಣಿವೆಗಳನ್ನು ದಾಟಿ ಕಾಶ್ಮಿರ, ನಂತರ ಕಾಮರೂಪಕ್ಕೆ ಬಂದು ಅಲ್ಲಿ ನವಗುಪ್ತನೆಂಬ ತಾಂತ್ರಿಕನನ್ನು ಎದುರಿಸಿದರು.
ಇತ್ತೀಚಗೆ ಕಾಂಬೋಡಿಯಾದಲ್ಲಿ ಶಂಕರರ ಶಿಷ್ಯ ಶಿವಸೋಮ ರ ಕ್ರಿ. ಶ. ೮೮೦ರ ಶಾಸನ ಸಿಕ್ಕಿರುವುದಾಗಿ ತಿಳಿದು ಬಂದಿದೆ. ಆಶಾಸನದ ಪ್ರಕಾರ ಶಂಕರರು ಕ್ರಿ.ಶ. ೮೨೦ ರಲ್ಲಿ ಕಾಲವಶರಾದರೆಂದು ಹೇಳಿದೆ (ಭಾರತದ ಇತಿಹಾಸ-೧೯೮೪ -ಫಾಲಾಕ್ಷ ಪು. ೨೬೬) |
ಅವರು ವೈದಿಕ ಧರ್ಮದ ಮತ್ತು ಅದ್ವೈತದ ಪ್ರಚಾರಕ್ಕಾಗಿ ಭಾರತ ದೇಶದ ನಾಲ್ಕು ದಿಕ್ಕಿಗೆ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ. ಆವು ನಾಲ್ಕು ಬಗೆಯ ಪ್ರಚಾರ ಸಿದ್ಧಾಂತ ಹೊಂದಿದೆ.
ಈ ಮಠಗಳ ನಂತರದ ಪೀಠಾಧಿಪತಿಗಳು ತಮ್ಮ ಹೆಸರಿನ ಮುಂದೆ ಶಂಕರಾಚಾರ್ಯ ಎಂದು ಸೇರಿಸಿಕೊಳ್ಳುತ್ತಾರೆ.
ಶಿಷ್ಯರು | ಮಠ | ಮಹಾವಾಕ್ಯ | ವೇದ | ಉಪನಿತ್ | ಸಂಪ್ರದಾಯ |
---|---|---|---|---|---|
ಹಸ್ತಾಮಲಕಾಚಾರ್ಯ | ಗೋವರ್ಧನ ಮಠ [ಪೂರ್ವ] | ಪ್ರಜ್ಞಾನಂ ಬ್ರಹ್ಮ | ಋಗ್ವೇದ | ಐತರೇಯ | ಭೋಗವಾಲ |
ಸುರೇಶ್ವರಾಚಾರ್ಯ | ಶಾರದಾಪೀಠ [ದಕ್ಷಿಣ] | ಅಹಂ ಬ್ರಹ್ಮಾಸ್ಮಿ | ಯಜುರ್ವೇದ | ಬೃಹದಾರಣ್ಯಕ | ಭೂರಿವಾಲ |
ಪದ್ಮಪಾದಾಚಾರ್ಯ | ದ್ವಾರಕಾಪೀಠ [ಪಶ್ಚಿಮ] | ತತ್ವಮಸಿ | ಸಾಮವೇದ | ಛಾಂದೋಗ್ಯ | ಕೀಟವಾಲ |
ತೋಟಕಾಚಾರ್ಯ | ಜ್ಯೋತಿರ್ ಮಠ [ಉತ್ತರದ ಮಠ] | ಅಯಮಾತ್ಮಾ ಬ್ರಹ್ಮ | ಅಥರ್ವ ವೇದ | ಮಾಂಡೂಕ್ಯ | ನಂದವಾಲ |
ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು, ಮತ್ತು ಸ್ಕಂದ ಇವರ ಆರಾಧಕರು ಪರಸ್ಪರ ತಾವು ಮೇಲು, ತಾವು ಮೇಲೆಂದು ಜಗಳಾಡುತ್ತಿದ್ದದನ್ನು ನಿಲ್ಲಿಸಿ, ಅವೆಲ್ಲವೂ ಒಬ್ಬನೇ ಈಶ್ವರನ ಬೇರೆ ಬೇರೆ ರೂಪಗಳೆಂದು ಆರಾಧಕರನ್ನು ಒಪ್ಪಿಸಿ ಈ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೆ ಪೂಜಿಸಬೇಕೆಂದು ನಿಯಮ ಮಾಡಿದರು. ತಾವು ಉಪಾಸನೆ ಮಾಡುವ ದೇವತೆಯನ್ನು ಮಧ್ಯೆ ಇಟ್ಟು, ಉಳಿದ ದೇವತೆಗಳನ್ನು ಅದರ ಸುತ್ತ ಇಟ್ಟು ಅವನ್ನು ಮುಖ್ಯ ದೇವತೆಯ ಪರಿವಾರವೆಂದು ಪೂಜಿಸುವುದು . ಅದರಿಂದ ಅವರಿಗೆ ಷಣ್ಮತ ಸ್ಥಾಪಕರೆಂದು ಹೇಳುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಲ್ಲಬ್ಬೆ ಗ್ರಾಮದ ನಂದಿಕೇಶ್ವರ ದೇಸ್ಥಾನದಲ್ಲಿ ಈ ಎಲ್ಲ ಮೂರ್ತಿಗಳನ್ನು ನೋಡಬಹುದು. ಪ್ರಾಯಃ ಇಡೀ ದಕ್ಷಿಣ ಭರತದಲ್ಲಿ ಇದೊಂದೇ ದೇವಸ್ಥನದಲ್ಲಿ ಮಾತ್ರ ಷಣ್ಮತ ಸ್ಥಾಪನಾಚಾರ್ಯ ೆನ್ನುವದಕ್ಕೆ ಪುರಾವೆ ಸಿಕ್ಕುತ್ತಿದೆ.(ಪುಟ್ಟು ಕುಲಕರ್ಣಿ , ಹೆಗಡೆ-ಕುಮಟಾ-581339)
ಸಂನ್ಯಾಸದಲ್ಲಿ ಏಕದಂಡೀ [ಒಂದು ದಂಡ-ದೊಣ್ಣೆ] ಸಂಪ್ರದಾಯ ವನ್ನು ಪ್ರಾರಂಭಿಸಿದರು. ಈ ಸಂಪ್ರದಾಯದ ಸಂನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮ ಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು : ೧.ಸರಸ್ವತಿ ; ೨.ತೀರ್ಥ; ೩.ಅರಣ್ಯ, ; ೪. ಭಾರತಿ ; ೫.ಆಶ್ರಮ ; ೬. ಗಿರಿ [ಕ್ರಿಯಾಯೋಗ ಅಭ್ಯಾಸ ಮಾಡುವವರು - ಜಾತಿಮತ ಬೇಧವಿಲ್ಲ.] ; ೭.ಪರ್ವತ ; ೮. ಸಾಗರ ; ೯.ವನ ; ೧೦. ಪುರಿ .
ಆರಾಧಕರಲ್ಲಿ ಪರಸ್ಪರ ಕಾದಾಟ ಹೋಗಲಾಡಿಸಲು ಇಡೀ ಭಾರತಕ್ಕೆ ಅನ್ವಯವಾಗುವ ಸ್ಮಾರ್ತ ಸಂಪ್ರದಾಯವನ್ನು ಹುಟ್ಟುಹಾಕಿದರು. ವೇದ ಪದ್ದತಿಯಲ್ಲಿ [ಶ್ರುತಿ -ವೇದ ಮತು ಸ್ಮೃತಿಗಳು-ಮನು ಸ್ಮೃತಿ ಮೊದಲಾದವು ಮತ್ತು ಪೌರಾಣಿಕ ಪದ್ದತಿಗಳ ಸಮನ್ವಯ] ಪೂಜಾದಿ ವಿಧಿಗಳನ್ನೂ , ಹೋಮ ಹವನಗಳನ್ನೂ, ಸಂಸ್ಕಾರಗಳನ್ನೂ ಮಾಡುವ ಒಂದು ಕ್ರಮ, ಸ್ಮಾರ್ತ ಸಂಪ್ರದಾಯ. ಸ್ಮಾರ್ತರು ಪಂಚಾಯತನ ಪೂಜೆಯಲ್ಲಿ ಸೂರ್ಯ, ಗಣಪತಿ, ಅಂಬಿಕಾ, ಶಿವ ಮತ್ತು ವಿಷ್ಣು ಈ ಐದು ದೇವತೆಗಳನ್ನು ಒಟ್ಟಿಗೆ, ಪ್ರಮುಖ ದೇವತೆಯನ್ನು ಮಧ್ಯದಲ್ಲಿಟ್ಟು ಪೂಜಿಸುತ್ತಾರೆ. ಯಾವುದಾದರೂ ಒಂದು ದೇವತೆಯ ಬದಲಿಗೆ ಸ್ಕಂದನನ್ನು ಸ್ಕಂದೇವತೆಯ ಉಪಾಸಕರು ಸೇರಿಸಿಕೊಳ್ಳ ಬಹುದು.
ಸಾವಿರದ ಇನ್ನೂರು ವರ್ಷಗಳ ಹಿಂದೆ, ಕೇವಲ ಮೂವತ್ತೆರಡು ವರ್ಷ ಬದುಕಿದ್ದರೂ ಇಡೀ ಭಾರತಕ್ಕೆ ಅನ್ವಯವಾಗುವ ಸಂಪ್ರದಾಯವನ್ನು ಹುಟ್ಟು ಹಾಕಿ ಜನರು ಅದನ್ನು ಅನುಸರಿಸುವಂತೆ ಪ್ರಭಾವ ಮಾಡಿದ್ದು, ಅವರ ಅತಿದೊಡ್ಡ ಸಾಧನೆ. ಅಲ್ಲದೆ, ಅವರ ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ.
ಶೃತಿ ಸ್ಮೃತಿ ಪುರಾಣಾನಾಮಾಲಯಮ್ ಕರುಣಾಲಯಮ್ | ನಮಾಮಿ ಭಗವತ್ಪಾದ ಶಂಕರಮ್ ಲೋಕ ಶಂಕರಮ್ ||
ಆದಿ ಶಂಕರರ ಜೀವನದ ಇತಿಹಾಸವನ್ನು ನಿಖರವಾಗಿ ತಿಳಿಯುವುದು ಕಷ್ಟ.
ದರ್ಶನ-ಶಾಂಕರತ ===
ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರ ವಿತ್ | ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||
ಸತ್, ಚಿತ್, ಆನಂದ ಸ್ವರೂಪಿಯಾದುದು ಬ್ರಹ್ಮ ; ನಮ್ಮ ಕಣ್ಣಿಗೆ ಕಾಣುವ, ಜಗತ್ತು, ಅನುಭವಕ್ಕೆ ಎಟುಕುವ ಈ ಪ್ರಪಂಚವೆಲ್ಲಾ ಮಿಥ್ಯೆ - ಎಂದರೆ ಅದು ಬ್ರಹ್ಮದ ತೋರಿಕೆ ಮಾತ್ರ. ನೀರ ಮೇಲಣ ಗುಳ್ಳೆಗೆ ನೀರನ್ನು ಬಿಟ್ಟು ಸ್ವತಂತ್ರ ಅಸ್ತಿತ್ವ ವಿಲ್ಲದಂತೆ ಈ ಪ್ರಪಂಚಕ್ಕೆ ಸ್ವತಂತ್ರವಾದ ಅಸ್ತಿತ್ವ ವಿಲ್ಲ. ಅರಿವಿನ ಕಣ್ಣಿನಿಂದ ನೋಡಿದರೆ ಇರುವುದೆಲ್ಲ ಬ್ರಹ್ಮವೆಂದು ತಿಳಿಯುತ್ತದೆ. ಜಗತ್ತು, ಜೀವಿಗಳು ಮಾಯಾ ಕಲ್ಪಿತ ; ಅನಾದಿಯಾದ ಅಜ್ಞಾನವೆಂಬ ಮಾಯಾ ಪ್ರಭಾವದಿಂದ ಎಲ್ಲವೂ ಬೇರೆ ಬೇರೆಯಾಗಿ ಕಾಣುತ್ತದೆ. ಈಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು ಬೇಧವೆಲ್ಲ ಅಳಿದುಹೊಗಿ ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೇ ಮೋಕ್ಷ ; ಅದೇ ಪರಮ ಪುರುಷಾರ್ಥ. ಇದು ಶಾಂಕರ ಸಿದ್ಧಾಂತದ ಸಾರಾಂಶ.
ಅದೇ ನೋಡುವ ಶಕ್ತಿ -ಸಾಕ್ಷಿ ; ಅದೃಶ್ಯವಾಗಿದೆ ; ಇಂದ್ರಿಯಗಳ ಜ್ಞಾನ ಶಕ್ತಿಯಿಂದ ಆಚೆ ಇದೆ ; ಅದು ಪರಿಪೂರ್ಣ; ಬದಲಾವಣೆ ಇಲ್ಲದ್ದು ; ಸ್ವಯಂ ಪ್ರಕಾಶ ; ಸ್ವಯಂ ಸಿದ್ಧ ; ಜ್ಞಾನ ಸ್ವರೂಪ ; ಆನಂದ ಸ್ವರೂಪ ; ಎಲ್ಲಾ ಜ್ಞಾನದ ಮೂಲ ರೂಪ - ಸಾಕ್ಷಿ; ನೋಡುವವ ; ಅದು ನೋಡಲ್ಪಡುವ ವಸ್ತು ಆಗಲಾರದು; ಅದು ಅದ್ವಿತೀಯ - ಅದನ್ನು ಬಿಟ್ಟು ಮತ್ತೊಂದಿಲ್ಲ. ನಾಶವಿಲ್ಲದ್ದು ; [ಆನಂದ ಅಚಿಂತ್ಯ, ಅರೂಪ ಅವ್ಯಯ ಅದ್ವಯ - ಆನಂದಮದ್ವಯಮರೂಮಚಿಂತ್ಯಮವ್ಯಯಂ ]
ವೇದಗಳ ಆಧಾರ :-
** ಓಂ ತತ್ ಸತ್ **
ಚಾರ್ವಾಕ ದರ್ಶನ | ಜೈನ ದರ್ಶನ | ಬೌದ್ಧ ದರ್ಶನ | ಸಾಂಖ್ಯ ದರ್ಶನ |
ರಾಜಯೋಗ | ನ್ಯಾಯ | ವೈಶೇಷಿಕ ದರ್ಶನ | ಮೀಮಾಂಸ ದರ್ಶನ |
ಆದಿ ಶಂಕರರು ಮತ್ತು ಅದ್ವೈತ | ಅದ್ವೈತ- ಜ್ಞಾನ-ಕರ್ಮ ವಿವಾದ | ವಿಶಿಷ್ಟಾದ್ವೈತ ದರ್ಶನ | ದ್ವೈತ ದರ್ಶನ |
ಮಾಧ್ವ ಸಿದ್ಧಾಂತ | ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ | ಭಾರತೀಯ ತತ್ವಶಾಸ್ತ್ರ ಸಮೀಕ್ಷೆ | ಭಗವದ್ಗೀತಾ ತಾತ್ಪರ್ಯ |
ಕರ್ಮ ಸಿದ್ಧಾಂತ | ವೀರಶೈವ ತತ್ತ್ವ | ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು | - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು |
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ | ಮೋಕ್ಷ | ಗೀತೆ | ಬ್ರಹ್ಮಸೂತ್ರ |
ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ
This article uses material from the Wikipedia ಕನ್ನಡ article ಆದಿ ಶಂಕರರು ಮತ್ತು ಅದ್ವೈತ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.