ಅಶ್ವತ್ಥಾಮ (ಸಂಸ್ಕೃತ: अश्वत्थामा) ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರ ಮಗ.
ಇವನು ೭ ಚಿರಂಜೀವಿಗಳಲ್ಲಿ ಒಬ್ಬ. ಸುಳ್ಳು ಹೇಳಿ ಪಾಂಡವರು ತನ್ನ ತಂದೆ ದ್ರೋಣರನ್ನು ಕೊಂದರೆಂದು ತಿಳಿದು ಪಾಂಡವರನ್ನೇ ಕೊಲ್ಲುತ್ತೇನೆ ಎಂದು ಹೊರಟು ಉಪ ಪಾಂಡವರನ್ನು ಕೊಲ್ಲುತ್ತಾನೆ.ಇವನ ತಾಯಿ ಕೃಪಿ. ಹಾಲಿಗೆ ಬದಲು ಹಿಟ್ಟಿನ ನೀರನ್ನು ಕುಡಿದ. ಹುಟ್ಟಿದೊಡನೆ ಕುದುರೆಯಂತೆ ಅರಚಿದ್ದರಿಂದ ಈ ಹೆಸರಿಡುವಂತೆ ಅಶರೀರವಾಣಿಯಾಯಿತು. ಯುದ್ಧಭೂಮಿಯಲ್ಲಿ ಅರ್ಜುನನನ್ನು ಸಂಧಿಸಿದ ದ್ರೋಣನಿಗೆ ದಿಕ್ಕು ತೋಚದಂತಾದಾಗ, ಈತ ಅರ್ಜುನನನ್ನು ಎದುರಿಸಿ ದ್ರೋಣನನ್ನು ರಕ್ಷಿಸಿದ. ದ್ರೋಣನ ವಧೆಯಾದ ಮೇಲೆ ದುರ್ಯೋಧನ ಸೇನಾಧಿಪತ್ಯವನ್ನು ಇವನಿಗೆ ಕೊಡದೆ ಕರ್ಣನಿಗೆ ಕೊಟ್ಟ ಸಮಯದಲ್ಲಿ ಕೃಪ ಕರ್ಣನೊಡನೆ ನಡೆಸಿದ ವಾಗ್ವಾದದಲ್ಲಿ ಕೃಪ ಅವಮಾನಿಸಲ್ಪಟ್ಟಾಗ ಈತ ಕರ್ಣನನ್ನು ಕೊಲ್ಲಲು ಹೋದ. ಮಾಹಿಷ್ಮತಿಯ ಅರಸನಾದ ನೀಲರಾಜ, ಘಟೋತ್ಕಚ, ಭೀಮ, ಧೃಷ್ಟದ್ಯುಮ್ನ ಮುಂತಾದವ ರೊಡನೆ ಯುದ್ಧಮಾಡಿದ. ಪಾಂಡ್ಯ ರಾಜನನ್ನು ಕೊಂದ. ನಾರಾಯಣಾಸ್ತ್ರವನ್ನು ಹೊಂದಿದ್ದ. ಒಮ್ಮೆ ಯುದ್ಧವನ್ನು ಬಿಟ್ಟು ಶಸ್ತ್ರತ್ಯಾಗ ಮಾಡಿ ಓಡಿಹೋದ. ಧರ್ಮರಾಜನಿಂದ ಒಮ್ಮೆ ನಿಂದಿತನಾದ. ಪಾಂಡವರೊಡನೆ ಸಂಧಿಗಾಗಿ ದುರ್ಯೋಧನನನ್ನು ಪ್ರೇರೇಪಿಸಿದ. ದುರ್ಯೋಧನ ಇವನಿಗೆ ಸೇನಾಧಿಪತ್ಯವನ್ನು ವಹಿಸಿದಾಗ ಪಾಂಡವರನ್ನು ಸಂಹರಿಸುತ್ತೇನೆಂದು ಪ್ರತಿಜ್ಞೆ ಮಾಡಿದ. ಗೂಬೆ ಕಾಗೆಗಳನ್ನು ಕೊಂದಹಾಗೆ ಪಾಂಡವರನ್ನು ತಾನೂ ಕೊಲ್ಲಬಹುದೆಂಬ ಆಲೋಚನೆಯನ್ನು ಹೊಂದಿದ್ದ. ಆದರೆ ಅವನ ಶಿಬಿರದ ಬಾಗಿಲಿನಲ್ಲಿಯೇ ಮಹಾಭೂತದ ದರ್ಶನವಾಯಿತು. ಶಿವನನ್ನು ಮೆಚ್ಚಿಸುವುದಕ್ಕಾಗಿ ತನ್ನ ದೇಹವನ್ನು ಅಗ್ನಿಗೆ ಆಹುತಿ ಮಾಡಿ ಶೈವತೇಜಸ್ಸನ್ನು ಗಳಿಸಿದ. ಪಾಂಡವರನ್ನು ಕೊಲ್ಲಲು ಹೋಗಿ ಧೃಷ್ಟದ್ಯುಮ್ನ, ಶಿಖಂಡಿ, ಉಪಪಾಂಡವರನ್ನು ಕೊಂದ. ನಿದ್ರೆಮಾಡುತ್ತಿದ್ದ ಪಾಂಡವರ ಮಕ್ಕಳನ್ನು ಕೊಂದು ಶಿಶುಹತ್ಯೆಯ ದ್ರೋಹಕ್ಕೆ ಈಡಾದ. ದ್ರೌಪದಿಯಿಂದ ಪ್ರೇರಿತನಾದ ಭೀಮ ಇವನನ್ನು ಕೊಲ್ಲಲು ಪ್ರಯತ್ನ ನಡೆಸಿ ವಿಫಲನಾದ. ಅಪಾಂಡವೇಯಾಸ್ತ್ರ ಅಥವಾ ಐಷೀಕಾಸ್ತ್ರ ಎಂದು ಕರೆಸಿಕೊಳ್ಳುತ್ತಿದ್ದ ಬ್ರಹ್ಮಾಸ್ತ್ರವನ್ನು ಪಾಂಡವರ ವಧೆಗಾಗಿ ಬಳಸಿದ. ಕೃಷ್ಣನಿಂದ ಶಪಿಸಲ್ಪಟ್ಟ ಮೇಲೆ ಪಾಂಡವರಿಂದ ಶಿರೋರತ್ನ ನಾಶವಾಯಿತು. ಸಪ್ತಚಿರಂಜೀವಿಗಳಲ್ಲಿ ಇವನೂ ಒಬ್ಬ. ತೀರ್ಥಯಾತ್ರೆಗೆ ಹೊರಟು ನರ್ಮದಾತೀರಕ್ಕೆ ಬಂದಾಗ ಮುನಿಚಯವೊಂದರಿಂದ ಸುಪ್ತಘಾತಕ ಎಂದು ನಿಂದಿತನಾಗಿ ಬದರಿಯಲ್ಲಿ ವ್ಯಾಸನ ಸಲಹೆಯಂತೆ ಸೇತುಸ್ನಾನ ಮಾಡಿದ. ವಿ. ಸೀ. ಅವರ ಆಗ್ರಹ ಮತ್ತು ಏಜಾಕ್ಸ್ ನಾಟಕದ ಭಾವಾನುವಾದವಾದ ಬಿ.ಎಂ.ಶ್ರೀ ಅವರ ಅಶ್ವತ್ಥಾಮನ್-ಇವು ಕನ್ನಡದಲ್ಲಿ ಅಶ್ವತ್ಥಾಮನನ್ನು ಕುರಿತು ಎರಡು ಪ್ರಸಿದ್ಧ ನಾಟಕಗಳು. ಅಶ್ವತ್ಥಾಮ ಎಂಬುದು ಇಂದ್ರವರ್ಮ ಎಂಬ ಮಾಲವ ದೇಶದ ರಾಜನ ಆನೆ. ಮಹಾಭಾರತ ಯುದ್ಧದ 14ನೆಯ ದಿನ ಭೀಮ ಇದನ್ನು ಕೊಲ್ಲುತ್ತಾನೆ.
This article uses material from the Wikipedia ಕನ್ನಡ article ಅಶ್ವತ್ಥಾಮ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.